ಶನಿವಾರ, ಡಿಸೆಂಬರ್ 31, 2016

ಮಿನುಗು ತಾರೆಯ ಮರಣ ಪತ್ರ

ಕನ್ನಡ ನಾಡಿನಲ್ಲಿ  ಈವತ್ತು ಮಿನುಗು ತಾರೆ ಎಂದರೂ ನೆನಪಾಗುವುದು ನಟಿ ಕಲ್ಪನಾ ಮಾತ್ರ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಕಲ್ಪನಾ ಹೆಸರಿಗೆ ತಕ್ಕಂತೆ ಕನ್ನಡ ಚಿತ್ರ ಜಗತ್ತಿನಲ್ಲಿ ಕೆಲವೇ ಕೆಲವು ಕಾಲ ಮಿನುಗಿ ಮರೆಯಾಗಿ ಹೋದವರು.  ಕಲ್ಪನಾ ನಮ್ಮಿಂದ ಮರೆಯಾಗಿ ಇನ್ನೆರಡು-ಮೂರು ವರ್ಷಗಳಲ್ಲಿ ನಾಲ್ಕು ದಶಕ ಸಂದುಬಿಡಲಿದೆ. ಚಿತ್ರಗಳಲ್ಲಿ ಜನರೆಲ್ಲರೂ ತೆರೆಯ ಮೇಲೆ ಕಾಣುವಂತೆ ನಟಿಯ ನಿಜ ಜೀವನದಲ್ಲಿಯೂ ಹಲವು ಸಿನಿಮೀಯ ಘಟನೆಗಳು ನಡೆದು ಆಕೆಯನ್ನು ಮಾನಸಿಕವಾಗಿ ಝರ್ಜರಿತಳನ್ನಾಗಿ ಮಾಡಿ ಕೊನೆಗೊಂದು ದಿನ ಸಾವಿನ ಮನೆಯ ಅತಿಥಿಯಾಗಿದ್ದು ಇದೀಗ ದುರಂತ ಇತಿಹಾಸ. 

ಸಿನಿಮಾ ಹಾಗು ನಾಟಕ ರಂಗ ಎರಡನ್ನು ತೀರಾ ಹತ್ತಿರದಿಂದ ಬಲ್ಲ ಕಲ್ಪನಾರಿಗೆ ಮೇಲ್ನೋಟಕ್ಕೆ ಆರ್ಥಿಕ ತೊಂದರೆಗಳು ಭಾದಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನಿತರ ವಯಕ್ತಿಕ ತೊಂದರೆಗಳಿದ್ದರೂ ಅವುಗಳೆಲ್ಲವನ್ನೂ ನಿಭಾಯಿಸಿ ಅಭಿಮಾನಿಗಳೆದುರಲ್ಲಿ ಗಟ್ಟಿಗಿತ್ತಿ ಎನ್ನಿಸಿಕೊಳ್ಳಬಹುದಿತ್ತು. ಆ ಮೂಲಕ ತಮ್ಮ ಎಷ್ಟೋ ಅಭಿಮಾನಿಗಳ ಜೀವನದಲ್ಲೂ ಒಂದು ಮಾದರಿಯಾಗಿ ನಿಲ್ಲಬಹುದಿತ್ತು. ಆದರೆ ನಡೆದಿದ್ದು ಒಂದೂ ಹೀಗಿಲ್ಲವಲ್ಲ!!. ಬೆಳಗಾವಿಯ ಸಂಕೇಶ್ವರದ ಬಳಿಯ ಗೋಟೂರು ಪ್ರವಾಸಿ ಮಂದಿರದಲ್ಲಿ ನಾಟಕ ಪ್ರದರ್ಶನಗಳ ನಿಮಿತ್ತ ಉಳಿದುಕೊಂಡಿದ್ದ ಕಲ್ಪನಾ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ನಿಜ ಜೀವನದಲ್ಲಿಯೂ ದುರಂತ ನಾಯಕಿಯಾಗಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಲ್ಪನಾ ತಮ್ಮ ಕೈಲಿದ್ದ ವಜ್ರದ ಉಂಗುರ ವನ್ನು ಸುತ್ತಿಗೆಯಿಂದ ಕುಟ್ಟಿ ಪುಡಿ ಮಾಡಿ ಸೇವಿಸಿದ್ದು ಸಾವಿಗೆ ಕಾರಣ ಎಂದು ಉಲ್ಲೇಖಿತವಾಗಿದೆ. ಮರಣೋತ್ತರ ಪರೀಕ್ಷೆಯಲ್ಲೂ ಅದೇ ದೃಢ ಪಟ್ಟಿದೆ. ಆದರೆ ಕಲ್ಪನಾ ಚಿಕ್ಕಮ್ಮ ಪ್ರಕಾರ ಕಲ್ಪನಾ ರು ಸೇವಿಸಿದ್ದರೆನ್ನಲಾದ ವಜ್ರದುಂಗುರ ಅವರದೇ ಅಲ್ಲವಂತೆ.  ಮುಖದ ಮೇಲೆ ಆಗಿದ್ದ ಗಾಯವೂ ಅನುಮಾನಾಸ್ಪದವಾಗಿದ್ದು ಆ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕು ಎನ್ನುವುದು ಕುಟುಂಬ ಸದಸ್ಯರ ಆಗ್ಗಿನ ಬೇಡಿಕೆಯಾಗಿತ್ತಂತೆ. 

ಬೇಡಿಕೆಗಳು, ಹೇಳಿಕೆಗಳು, ಕೇಳಿಕೆಗಳು, ಮನವಿಗಳೂ ಏನೇ ಆದರೂ ಒಳ್ಳೆಯ ಹೆಂಡತಿಯಾಗಿ, ಪ್ರೀತಿಯ ಪತ್ನಿಯಾಗಿ, ಮಾನಸಿಕ ಅಸ್ವಸ್ಥೆಯಾಗಿ, ದೇವರೇ ಕೊಟ್ಟಂತಹ ತಂಗಿಯಾಗಿ, ಪೌರಾಣಿಕ ಪಾತ್ರಗಳಲ್ಲಿ ಐತಿಹಾಸಿಕ ಪಾತ್ರಗಳಲ್ಲಿ ಗತ ಕಾಲದ ಹೆಣ್ಣಾಗಿ ನಟಿಸಿ ಕನ್ನಡಿಗರ ಮನಸಿನೊಳಗೆ ಇಳಿದು ಆಯಾ ಪಾತ್ರಗಳ ಮೂಲಕವೇ ಜ್ಞಾಪಕದಲ್ಲಿದ್ದ ಕಲ್ಪನಾ ಅದಾಗಲೇ ಜೀವನ ರಂಗದಿಂದಲೂ ತೆರೆ ಮರೆಗೆ ಸರಿದು ಹೋಗಿಯಾಗಿತ್ತು. ಅಲ್ಲಿಗೆ ಕನ್ನಡಿಗರ ಕಲಾ ಪ್ರಚಾರಕಿಯೊಬ್ಬಳು ಕಲಾ ಪ್ರಪಂಚದಿಂದ ಬಹು ದೂರ ಪಯಣಿಸಿಬಿಟ್ಟಿದ್ದಳು. ಅಂದು ಕಲ್ಪನಾ ಜೀವನದಲ್ಲಿ ನಡೆದ ದುರಂತ ಬರೀ ಆಕೆಯ ಪಾಲಿಗೆ ದುರಂತವಾಗದೆ ಕನ್ನಡ ಚಿತ್ರರಂಗದ ಪಾಲಿಗೆ ದುರಂತವಾಗಿ ಹೋಗಿದ್ದು ಸುಳ್ಳಲ್ಲ.  

ಇಂತಹ ಮಿನುಗು  ತಾರೆ ತಮ್ಮ ಇಹಲೋಕ ಯಾತ್ರೆ ಮುಗಿಸುವ ಮೊದಲು ತಮ್ಮ ಕುಟುಂಬ ಸದಸ್ಯರಿಗೂ, ಪೊಲೀಸ್ ಅಧಿಕಾರಿಗಳಿಗೂ ಬರೆದ ಪತ್ರ ಎಲ್ಲೋ ಸಿಕ್ಕಿತು. ಅದನ್ನೇ ಯಥಾವತ್ತಾಗಿ ಸಾದರಿಸಿದ್ದೇನೆ.
                                                              ***  
ಅಮ್ಮ,
ನಿನ್ನೆನಿಮಗೆ 1,200 ರೂಪಾಯಿಗಳನ್ನು ಮನಿಯಾರ್ಡರ್ ಕಳುಹಿಸಿದ್ದೇನೆ.ಈವತ್ತು  300 ರೂಪಾಯಿಗಳ ಡ್ರಾಫ್ಟ್ ಅನ್ನು ಕಳುಹಿಸುತ್ತಿದ್ದೇನೆ. ನನ್ನ ಗಂಟಲು ನೋವಿನಿಂದ ಆಗಾಗ ನಾಟಕಗಳು ನಿಲ್ಲುತ್ತಾ ಇವೆ. ದೇವರೇ ನನ್ನ ಕಾಪಾಡಬೇಕು. ಬಾಬನಿಗೂ ಈವತ್ತು  400 ರೂಪಾಯಿಗಳನ್ನು ಕಳುಹಿಸುತ್ತಿದ್ದೇನೆ. ಮಿಕ್ಕ ಹಣವನ್ನು ಅವನಿಗೆ ಇನ್ನೆರಡುದಿನಗಳಲ್ಲಿ ಕಳುಹಿಸುತ್ತೇನೆ.

ನೀವೂ ಚಿಕ್ಕಮ್ಮ ಆರೋಗ್ಯವೆಂದು ನಂಬಿದ್ದೇನೆ. ಗಂಟಲಿನ ತೊಂದರೆ ಇಲ್ಲದಿದ್ದರೆ ಬೇರೆ ಎಲ್ಲ ವಿಚಾರಗಳಲ್ಲೂ ನಾನೂ ಆರೋಗ್ಯವಾಗಿದ್ದೇನೆ. ತಿಂಗಳ ಕೊನೆಯಲ್ಲಿ ಊರಿಗೆ ಬರುತ್ತೇನೆ. ಇಲ್ಲಿಂದ ಮುಂದೆ ಬಿಜಾಪುರ ಅಥವಾ ಜಮಖಂಡಿಗೆ ಹೋಗುತ್ತಿದ್ದೇವೆ. ಊರು ಸೇರಿದ ಮೇಲೆ ಪತ್ರ ಬರೆಯುತ್ತೇನೆ. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ.

                                                                                                     ಇಂತಿ ನಿಮ್ಮ ಮಗಳಾದ
                                                                                                                  ಕಲ್ಪನಾ.

                                                              ***
ಮಾನ್ಯ ಪೊಲೀಸ್ ಅಧಿಕಾರಿಗಳಿಗೆ,
ನಿಮಗೆ ನನ್ನ ಕೊನೆಯ ನಮಸ್ಕಾರಗಳು. ನನಗೆ ಹೋದಲ್ಲಿ ಬಂದಲ್ಲಿ ತಕ್ಕ ಕಾವಲು ಕೊಟ್ಟು ನನ್ನ ಗೌರವಕ್ಕೆ ತುಸು ಧಕ್ಕೆ ಬಾರದಂತೆ ಕಾಪಾಡಿದ ನಿಮಗೆ ಇದೋ ನನ್ನ ಅನಂತ ಕೃತಜ್ಞತೆಗಳು.

ನನ್ನ ಮುಖದ ಮೇಲಿರುವ ಗಾಯಗಳನ್ನು ನೋಡಿ ನೀವು ಆಶ್ಚರ್ಯ ಪಡಬಹುದು ಅಲ್ಲವೇ?. ನಿನ್ನೆ ನಾಟಕಕ್ಕೆ ಹೋಗುವಾಗ ಆಕಸ್ಮಿಕವಾಗಿ ಕಾರಿಗೆ ಅಡ್ಡ ಬಂದ ಹಸು ಕಾಪಾಡುವುದಕ್ಕಾಗಿ ಹಾಕಿದ ಸಡನ್ ಬ್ರೇಕ್ ನಿಂದಾಗಿ ನನ್ನ ಮುಖ ಎದುರಿನ ಸೀಟಿಗೆ ಬಡಿದು ಮುಖದಲ್ಲಿ ಗಾಯಗಳಾಗಿವೆ.

ಸಾವು, ನಿಜ. ಇದು ನಾನು ಸಂತೋಷದಿಂದ ಬರಮಾಡಿಕೊಂಡ ಸಾವು. ಇದಕ್ಕೆ ಯಾರೂ ಕಾರಣರಲ್ಲ.ಬದುಕು ಸಾಕೆನಿಸಿತು. ತೀರದ ನಿದ್ರೆಯಲ್ಲಿ ಮುಳುಗಿರಬೇಕೆನಿಸಿತು. ಇದು ನನ್ನ ಮನಸ್ಸಿಗೆ ಎಷ್ಟೋ ಆನಂದ, ನೆಮ್ಮದಿ, ಸುಖ ಸಂತೋಷಗಳನ್ನು ತಂದಿದೆ. ನಾನಿಂದು ಪರಮ ಸುಖಿ.

ನನ್ನ ಅಭಿಮಾನಿಗಳೆಲ್ಲರಿಗೂ, ಅಭಿಮಾನಿಗಳಲ್ಲದವರಿಗೂ ಇದೋ ನನ್ನ ಕೊನೆಯ ನಮಸ್ಕಾರ. ಜೀವನದಲ್ಲಿ ಏನೇನು ಮಾಡಿ ಮುಗಿಸಬೇಕೆಂದಿದ್ದೇನೋ ಅದನ್ನೆಲ್ಲ ದೇವರ ದಯದಿಂದ ಮಾಡಿ ಮುಗಿಸಿದ್ದೇನೆ. ಒಳ್ಳೆಯ ಉತ್ತಮವಾದ ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡುವ ಆಸೆ ಈವತ್ತು ನನ್ನ ಜೊತೆಯಲ್ಲಿಯೇ ಸಾಯುತ್ತಿದೆ. ದೈವೇಚ್ಛೆ !!!

ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಮದುವೆಗೋ ಮಸಣಕೋ
ಹೋಗೆಂದ ಕಡೆ ಹೋಗು
ಮಂಕುತಿಮ್ಮ.

                                                                                                                             -ಇತಿ

                                                                                                                                  ಕಲ್ಪನಾ

ಭಾನುವಾರ, ಡಿಸೆಂಬರ್ 18, 2016

ಅವರೂ ನಮ್ಮೊಳಗೊಬ್ಬರಾದರು

ಹತ್ತನೇ ಶತಮಾನದ ಆಸುಪಾಸಿಗೆ ಈಗಿನ ಇರಾನ್ ತನ್ನನ್ನು ಪರ್ಷಿಯಾ ಎಂದು ಕರೆಸಿಕೊಳ್ಳುತ್ತಿತ್ತು. ಝೋರೆಸ್ಟ್ರಿಯನ್ ಗಳು ಅಲ್ಲಿನ ಮುಖ್ಯ ಜನಾಂಗವಾಗಿ ಗುರುತಿಸಿಕೊಂಡಿದ್ದರು. ಮುಸ್ಲಿಂ ದೊರೆಗಳು ಕ್ರಮೇಣ ಪರ್ಷಿಯಾ ದೇಶವನ್ನು ಆಕ್ರಮಿಸಿಕೊಳ್ಳತೊಡಗಿದಾಗ, ಝೋರೆಸ್ಟ್ರಿಯನ್ನರು ಅವರ ಆಟಾಟೋಪಗಳನ್ನು ತಡೆಯದಾದರು. ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿ ಮುಸ್ಲಿಂ ಧರ್ಮವೊಂದೇ ಅತಿ ಶ್ರೇಷ್ಠ, ಕಂಡ ಕಂಡವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವುದು ಯಾರಾದರೂ ಅದಕ್ಕೆ ನಿರಾಕರಿಸಿದರೆ ಅವರನ್ನು ಮುಗಿಸಿಬಿಡುವಂತಹ ಪಕ್ಕಾ ಸಂಪ್ರದಾಯವಾದಿ ಮುಸ್ಲಿಂ ಜನಾಂಗ(ಎಲ್ಲ ಮುಸ್ಲಿಂ ಜನಾಂಗ ಹೀಗಿಲ್ಲ, ಈ ಹೇಳಿಕೆ ಕೇವಲ ಧರ್ಮಾಂದ ದೊರೆಗಳು ಹಾಗು ಅವರ ಅನುಯಾಯಿಗಳಿಗೆ  ಮಾತ್ರ ಅನ್ವಯಿಸುತ್ತದೆ.) ನಿಧಾನಕ್ಕೆ ಪರ್ಷಿಯಾ ದೇಶದಲ್ಲಿ ಬೀಡು ಬಿಡಲು ಆರಂಭಿಸಿತು.
ಅರಬ್ ದೊರೆಗಳ ಹಲವಾರು ದಾಳಿಗೆ ಮೂಲ ಪರ್ಷಿಯನ್ನರು ಪ್ರತಿರೋಧ ಒಡ್ಡಿದರೂ ಅದು ಮುಗಿಯದ ಕಥೆಯಾಗಿ ಹೋಯಿತು. ಈಗಿನಂತೆ ಆಗ ವಿಶ್ವಸಂಸ್ಥೆಯಿಲ್ಲ. ಸಹಾಯಕ್ಕಾಗಿ ಕೂಗಿದರೆ ಬಂದವರು ಮುಂದೊಂದು ದಿನ ಅವರೇ ವೈರಿಗಳಾಗಿ ಆ ದೇಶವನ್ನು ನುಂಗಿ ನೀರು ಕುಡಿಯುವ ಭಯವಂತೂ ಇದ್ದೇ ಇತ್ತು. ತಮ್ಮ ಗಡಿ ಉಲ್ಲಂಘಿಸಿ ಒಳನುಗ್ಗಲು ಯತ್ನಿಸುತ್ತಿದ್ದ ಅರಬ್ ದೊರೆಗಳನ್ನು ಝೋರೆಸ್ಟ್ರಿಯನ್ನರು ತಡೆದಿದ್ದು ಬರೋಬ್ಬರಿ 200 ವರ್ಷಗಳ ಕಾಲ.  ಈ ಸಮಯವನ್ನು 'ಪರ್ಷಿಯನ್ ಸಾಮ್ರಾಜ್ಯದ ಎರಡು ಶತಮಾನಗಳ ನಿಶ್ಯಬ್ದತೆ' ಎಂದೇ ವರ್ಣಿಸಲಾಗಿದೆ.
                                           ಕ್ರಿ.ಪೂ ೫೦೦ ರಲ್ಲಿ ಪರ್ಷಿಯಾ ಸಾಮ್ರಾಜ್ಯ

ಧರ್ಮಬದ್ಧರಾದ ಅಲ್ಲಿನ ಮುಸ್ಲಿಮರಿಂದ ವಿಪರೀತ ಹಾನಿಗೊಳಗಾದ ಝೋರೆಸ್ಟ್ರಿಯನ್ನರು ಕೆಲವಾರು ಜನ ಪ್ರಾಣಕ್ಕೆ ಹೆದರಿ ಮತಾಂತರವಾದರೂ, ಕೆಲವರು ದೇಶ ತೊರೆದು ಪೂರ್ವ ದೇಶಗಳತ್ತ ವಲಸೆ ಹೊರಟು ಹೋದರು. ಬರಗಾಲ, ದಾಳಿ, ಅಂಟುರೋಗಗಳಿಗೆ ಹೆದರಿ ಊರು ಬಿಡುತ್ತಿದ್ದ ಪ್ರಕರಣಗಳನ್ನು ಕೇಳಿದ್ದೇವೆ, ಆದರೆ ಧರ್ಮವೊಂದರ ಕಟ್ಟುಬದ್ಧತೆಗೆ ಬಲಿಯಾಗಿ ದೇಶ ಬಿಡುವ ಧೌರ್ಬಾಗ್ಯ ಝೋರೆಸ್ಟ್ರಿಯನ್ನರದ್ದಾಯಿತು. ಹಾಗಲ್ಲದಿದ್ದರೆ ಧರ್ಮಾಂತರವಾಗುವುದು, ಅದೂ ಇಲ್ಲದಿದ್ದರೆ ಪ್ರಾಣ ಬಿಡುವುದೊಂದೇ ಝೋರೆಸ್ಟ್ರಿಯನ್ ಸಮುದಾಯಕ್ಕೆ ಉಳಿದುಕೊಂಡ ಆಯ್ಕೆಗಳಾದವು. ಪರ್ಷಿಯಾ ದಿಂದ ಕಾಲ್ಕಿತ್ತು ಪೂರ್ವಕ್ಕೆ ಗುಳೇ ಹೊರಟ ಝೋರೆಸ್ಟ್ರಿಯನ್ನರಿಗೆ ಕಂಡಿದ್ದು ಸಿಂಧೂ  ನದಿಯಿಂದಾಚೆಗೆ ಹಿಂದೂ ಮಹಾ ಸಾಗರದ ವರೆವಿಗೂ ವಿಸ್ತಾರವಾಗಿ ಹರಡಿಕೊಂಡಿದ್ದ ಭಾರತ, ಕ್ಷಮಿಸಿ ಬರೀ ಭಾರತವಲ್ಲ 'ಅಖಂಡ ಭಾರತ'.

ಎಲ್ಲೆಲ್ಲೂ ಹಿಂದೂ ಮಹಾ ಸಂಸ್ಥಾನಗಳು, ರಾಜ್ಯಗಳು, ಪ್ರಜೆಗಳನ್ನು ಮಕ್ಕಳೆಂದುಕೊಂಡು ರಾಜೋಚಿತ ಜವಾಬ್ದಾರಿ ಮೆರೆದಿದ್ದ ಸಂಸ್ಥಾನಿಕ ರಾಜರು. ಎಲ್ಲೆಲ್ಲೂ ಸುಭೀಕ್ಷ ಆಡಳಿತ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಿಂದೂ ಧರ್ಮದ ಹೆಮ್ಮೆಯ ಸ್ಥಳಗಳು, ನೀರು ಕೇಳಿದರೆ ಮಜ್ಜಿಗೆಯನ್ನೇ ಕುಡಿದು ಊಟ ಮಾಡಿಕೊಂಡು ಹೋಗಿ ಎನ್ನುವಷ್ಟು ಸುಶಿಕ್ಷಿತ ಅತಿಥಿ ಸತ್ಕಾರ, ಅತಿಥಿಗಳೆಂದರೆ ಇನ್ನಿಲ್ಲದ ಭಕ್ತಿ. ತಮಗೆ ತೊಂದರೆ ಮಾಡಿಕೊಂಡು ಅತಿಥಿಗಳನ್ನು ಪೊರೆದ ಅದೆಷ್ಟೋ ಕಥೆಗಳು, ಶರಣು ಬಂದವರನ್ನು ರಕ್ಷಿಸದಿರುವುದು ಹೇಡಿತನದ ಸಂಕೇತವೆನ್ನುವುದು ರಾಮಾಯಣ ಕಾಲದಿಂದಲೇ ಎಲ್ಲಾ ಭಾರತೀಯ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಹೇಳಿಕೊಟ್ಟಿದ್ದ ಬುದ್ಧಿ. ಇಂತಹವೆಲ್ಲ ಇನ್ನು ಎಷ್ಟೆಷ್ಟೋ ಭಾರತೀಯತೆಯ ಆಂತರ್ಯದಲ್ಲಿ ಅಡಗಿಕೊಂಡು ಕುಳಿತುಬಿಟ್ಟಿವೆ. ಅಂತೂ ಅವನ್ನೆಲ್ಲ ಕಂಡು ಝೋರೆಸ್ಟ್ರಿಯನ್ನರು ಹಿಗ್ಗಿ ಹೋದರು. ಕಷ್ಟ ಕಾಲದಲ್ಲಿ ಭಾರತೀಯರು ಆಗಬಹುದೇನೋ ಎಂದು ಬಗೆದು ಬಂದಿದ್ದ ಅವರ ಅನಿಸಿಕೆ ಸುಳ್ಳಾಗಲಿಲ್ಲ. ಸಿಂಧೂ ನದಿ ದಾಟಿದ ಝೋರೆಸ್ಟ್ರಿಯನ್ನರು ಸಿಂಧೂ ಗೆ ಹೊಂದಿಕೊಂಡಂತೆಯೇ ಇದ್ದ ಈಗಿನ ಪಾಕಿಸ್ತಾನದ ಸಿಂಧ್ ಹಾಗು ಭಾರತದ ಗುಜರಾತ್ ಪ್ರಾಂತ್ಯಗಳಲ್ಲಿ ಬೀಡು ಬಿಡಲು ಆರಂಭಿಸಿದರು.

ಪರ್ಷಿಯಾ ದೇಶದಿಂದ ಬಂದಿದ್ದರಿಂದ ಇವರನ್ನು ಪರ್ಷಿಯನ್ನರು / ಪಾರ್ಸಿಗಳು ಎಂದು ಕರೆಯಲಾಯಿತು. ಅಂದಿನಿಂದ ಝೋರೆಸ್ಟ್ರಿಯನ್ ಎಂಬ ಹೆಸರಿಗೆ ಬದಲಾಗಿ ಪಾರಸೀ ಎಂಬ ಹೆಸರೇ ಈ ಜನಾಂಗಕ್ಕೆ ಅಂಟಿ ಹೋಯಿತು.

ಗುಜರಾತ್ ಪ್ರಾಂತದ ಆಗಿನ ಅರಸ ಜಾದಿ ರಾಣಾ ಪಾರ್ಸಿಗಳನ್ನು ಬರಮಾಡಿಕೊಂಡ ರೀತಿಯೇ ವಿಭಿನ್ನ. ರಾಣಾ ತನ್ನ ರಾಯಭಾರಿಯನ್ನು ಕರೆದು ಅವನಲ್ಲಿ ಒಂದು ಹಂಡೆಗೆ ಕಂಠ ಪೂರ್ತಿ ಹಾಲು ತುಂಬಿಸಿ ಅದನ್ನು ಆಗಷ್ಟೇ ಪ್ರಾಂತಕ್ಕೆ ಬಂದು ಬೀಡು ಬಿಡುತ್ತಿದ್ದ ಪಾರ್ಸಿಗಳಿಗೆ ಕಳುಹಿಸುತ್ತಾನೆ. ಸಾಂಕೇತಿಕವಾಗಿ ಅದರ ಅರ್ಥ ಇಲ್ಲಿ ನಮಗೆ ಜಾಗವಿಲ್ಲ ತುಂಬಿಕೊಂಡಿದ್ದೇವೆ ಇನ್ನು ನಿಮ್ಮನ್ನೆಲ್ಲಿ ಪೋಷಿಸಲು ಸಾಧ್ಯ ಎಂದು. ಆದರೆ ಬುದ್ಧಿವಂತಿಕೆಯಲ್ಲಿ ತೀಕ್ಷ್ಣಮತಿಗಳಾಗಿರುವ ಪಾರ್ಸಿಗಳು ತುಂಬಿದ ಹಂಡೆ ಹಾಲಿಗೆ ಮಣಗಟ್ಟಲೆ ಸಕ್ಕರೆ ಸುರಿದು 'ನಾವೂ ನಿಮ್ಮ ನಡುವೆ ಹೀಗೆ ಅಂದರೆ ಹಾಲಿನಲ್ಲಿ ಸಕ್ಕರೆ ಬೆರೆತಂತೆ ಬೆರೆಯುತ್ತೇವೆ' ಎಂಬ ಸಂದೇಶವನ್ನು ಕೊಟ್ಟು ಕಳುಹಿಸಿದರು. ನಡೆಯಿಂದ ಸಂತೋಷಭರಿತನಾದ ರಾಣಾ ಕೂಡಲೇ ತ್ವರೆ ಮಾಡಿ ಪಾರಸೀ ಪ್ರಮುಖರನ್ನು ಭೇಟಿಯಾಗಿ ಆತನ ಪ್ರಾಂತದಲ್ಲಿ ಇರಲು ಕೆಲವು ಷರತ್ತುಗಳನ್ನು ಹಾಕಿದನು. ಪಾರ್ಸಿಗಳು ಹಿಂದೂ ಮುಂದೂ ನೋಡದೆ  ಅವುಗಳನ್ನು ಒಪ್ಪಿಕೊಂಡರೂ ಕೂಡ
ಷರತ್ತುಗಳೆಂದರೆ,
1. ಅವರ ಧರಿಸಿನ ಶೈಲಿ ಮೂಲ ಪಾರಸೀ ಶೈಲಿಯನ್ನು ಹೋಲದೆ ಸ್ಥಳೀಯ ಶೈಲಿಯಿಂದ ಕೂಡಿರಬೇಕು.
2. ವ್ಯಾಪಾರವೇ ಪಾರಸೀಗಳ ಮುಖ್ಯ ಕಸುಬಾದ್ದರಿಂದ ಸ್ಥಳೀಯ ಭಾಷೆಯಾದ ಗುಜರಾತಿಯನ್ನು ಖಡ್ಡಾಯವಾಗಿ ಕಲಿತು ಅದರಲ್ಲೇ ವ್ಯವಹರಿಸಬೇಕು.
3.ಆಹಾರ ಪದ್ಧತಿ ಸ್ಥಳೀಯರಂತೆಯೇ ಇರಬೇಕು, ಗೋಮಾಂಸ ಮತ್ತಿರ ಆಹಾರ ವಿಧಗಳನ್ನು ವರ್ಜಿಸಬೇಕು.

ಅವನು ಹಾಕಿದ ಷರತ್ತುಗಳಿಗೆಲ್ಲ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡ ಪಾರ್ಸಿಗಳು ಇಂದಿಗೂ ದನದ ಮಾಂಸ ಮುಟ್ಟುವುದಿಲ್ಲ. ಕೆಲವಾರು ಜನರು ಅಭ್ಯಾಸ ರೂಢಿಸಿಕೊಂಡಿದ್ದರು ಧರ್ಮಬದ್ಧರಾದ ಗುಜರಾತ್ ಪ್ರಾಂತದ ಪಾರ್ಸಿಗಳು ದನದ ಮಾಂಸ ವರ್ಜಿಸಿದ್ದಾರೆ. ಅವರ ಉಡುಗೆ ಶೈಲಿ ಈಗಲೂ ಭಾರತೀಯರಂತೆ ಇದ್ದು ಹೊರಗಿನಿಂದ ಬಂದರೂ ನಮ್ಮೊಳಗೆ ಸೇರಿಕೊಂಡು ನಮ್ಮವರೇ ಆಗಿ ಹೋದ ಪಾರಸೀ ಜನಾಂಗದ ಒಂದು ಉತ್ತಮ ಅತ್ಯುತ್ತಮ ನಡೆ.

ಬಿ ಜೆ ಪಿ ವರಿಷ್ಠ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭಾರತೀಯರ ಸಹಿಷ್ಣುತಾ ವಿಚಾರವಾಗಿ ಪದೇ ಪದೇ ಇಸ್ರೇಲ್ ದೇಶದ ನಡೆಯೊಂದನ್ನು ಪುನರುಚ್ಚರಿಸುತ್ತಿರುತ್ತಾರೆ. ಇಸ್ರೇಲ್ ದೇಶವು ತನ್ನ ಸಾಂವಿಧಾನಿಕ ಮೊದಲ ಅಧಿವೇಶನದಲ್ಲೇ ತನ್ನ ನೆಲದಿಂದ ಗುಳೆ ಹೊರಟ ಜನರನ್ನು ಅತ್ಯಾದರದಿಂದ ಬರ ಮಾಡಿಕೊಂಡು ಸಹಬಾಳ್ವೆಗೆ ಮಾದರಿಯಾಗಿ ನಿಂತ ಭಾರತೀಯರನ್ನು ಅಭಿನಂದಿಸಿದ ವಿಷಯ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆಧಾರ್ಮಿಕ ಹಿನ್ನೆಲೆಯಲ್ಲಿ ಒಂದು ಧರ್ಮದ ಹೊಡೆತವನ್ನು ತಾಳಲಾಗದೆ ಅಲ್ಲಿಂದ ಕಾಲ್ಕಿತ್ತ ಜ್ಯುಯೂ ಜನಾಂಗವನ್ನು ಎಲ್ಲರೂ ತಿರಸ್ಕಾರ ಮನೋಭಾವದಿಂದಲೇ ಕಾಣುತ್ತ ಹೋದರು, ಆದರೆ ಬಿಗಿದಪ್ಪಿಕೊಂಡಿದ್ದು ಭಾರತ ಮಾತ್ರ. ಅದಕ್ಕೆ ಕಾರಣ ನಮ್ಮ ಉಪನಿಷತ್ತು, ಧರ್ಮಗ್ರಂಥ ಗಳಿಂದ ನಾವು ಕಲಿತ 'ಅತಿಥಿ ದೇವೋಭವ' ಎನ್ನುವ ಸಾಲು.

ಮಾತನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿಷ್ಟೇ, ಮಧ್ಯ ಪ್ರಾಚ್ಯ ರಾಷ್ಟ್ರಗಳ ಮುಖಾಂತರ ಕೈಬರ್ ಕಣಿವೆ ದಾಟಿ ಭಾರತಕ್ಕೆ ಲಗ್ಗೆ ಇಟ್ಟ ಮುಸ್ಲಿಂ ದೊರೆಗಳು ಬಲವಂತದಿಂದ ಇಲ್ಲಿನ ರಾಜರುಗಳ ಮೇಲೆ ಅಧಿಕಾರ ಚಲಾಯಿಸಿ ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸಿದರೂ ಇಲ್ಲಿನ ಜನರಿಗೆ ಅಂದರೆ ಮೂಲ ಭಾರತೀಯರಿಗೆ ಅವರೂ ನಮ್ಮಂತೆಯೇ ಅನ್ನಿಸಲಿಲ್ಲ, ಅನ್ನಿಸುವಂತೆ ಅವರು ನಡೆದುಕೊಳ್ಳಲೂ ಇಲ್ಲ. ಹೆಜ್ಜೆ ಹೆಜ್ಜೆಗೂ  ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳ ದಮನವಾಯಿತು. ಕೆಲವರು ಅವುಗಳನ್ನು ದಮನ ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡರೂ ಕೂಡ. ಇಲ್ಲಿನ ಸಂಸ್ಕೃತಿಯ ಸಮಾಧಿಯ ಮೇಲೆ ತಮ್ಮ ಬೇಳೆ ಬೇಯಿಸಿಕೊಂಡು ಬಿಡುವ ಚಪಲವೂ ಕೆಲವರಿಗೆ ಉಂಟಾಗಿ ಅವುಗಳ ಪ್ರಯೋಗಕ್ಕೂ ಭಾರತದ ನೆಲ ವೇದಿಕೆಯಾಗಿ ಹೋಯಿತು.

ಇನ್ನು ಯೂರೋಪಿಯನ್ನರ ಭಾರತದ ದಾಳಿ ವಿಚಾರವು ಸರಿ ಸುಮಾರು ಅದೇ ಮುಳ್ಳಿಗೆ ತಗುಲಿಕೊಳ್ಳುವಂತದ್ದೇ. ಅವರು ಭಾರತದೆಡೆಗೆ ದೃಷ್ಟಿ ನೆಡುವುದಕ್ಕೆ ಮುಖ್ಯ ಕಾರಣ ಇಲ್ಲಿನ ಸಿರಿ ಸಂಪತ್ತು ಬಿಟ್ಟರೆ ಮತ್ತೇನೂ ಅಲ್ಲ. ಇಲ್ಲಿನ ಐಶ್ವರ್ಯದ ಮೇಲೆ ಮಾತ್ತ್ರ ಕಣ್ಣಿಟ್ಟು ದೇಶದ ಒಳ ಹೊಕ್ಕ ಐರೋಪ್ಯರು ಇಲ್ಲಿನ ಮತ್ತಷ್ಟು ಕೆಡುಕುಗಳನ್ನು ತಮ್ಮ ಅನುಕೂಲಕ್ಕೆ ಬಳಸಿ ಕೊಂಡರು. ವಿಚಾರದಲ್ಲಿ ನಮ್ಮದೂ ತಪ್ಪಿದೆ, ಆದರೂ ಸಮಯಕ್ಕೆ ತಕ್ಕಂತೆ ಎಲ್ಲವನ್ನು ಉಪಯೋಗಿಸಿಕೊಂಡ ಅವರು ಭಾರತದೊಳಗೆ ಭದ್ರ ಬುನಾದಿಯೊಂದನ್ನು ಕಟ್ಟಿಕೊಂಡರು ಹಾಗು ತಾವು  ಬೆಳೆದರು. ಇಷ್ಟಾದರೂ ಭಾರತದ ಜನಗಳಿಗೆ ಅವರು ನಮ್ಮವರು ಎನಿಸಲಿಲ್ಲ.


ಅಷ್ಟೇ ಏಕೆ ಸ್ವಾತಂತ್ರ್ಯ ದಕ್ಕಿ ಪ್ರಜೆಗಳೇ ಪ್ರಭುಗಳನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪಿಸುವಂತಾದರೂ ಪ್ರಭುಗಳು ನಮ್ಮ ಪ್ರಜೆಗಳಿಗೆ ನಮ್ಮವರೆನಿಸುತ್ತಿಲ್ಲ. ಕಾರಣ ಸಿಂಹಾಸನಾಧೀಶ್ವರರಾದವರೆಲ್ಲ ತಮ್ಮ ಮನೆ ಮನವನ್ನು ಭ್ರಷ್ಟಾಚಾರದ ಮೂಲಕ ಬೆಳಗಿಕೊಳ್ಳುತ್ತಿದ್ದಾರೆ. ನನಗೆ ಒಮ್ಮೊಮ್ಮೆ ಅನಿಸುತ್ತಿರುತ್ತದೆ ಭಾರತೀಯರದು ಅದೆಂತಹ ದೌರ್ಭಾಗ್ಯ. ಎಂದು ಭಾರತೀಯರಿಗೆ ನಮ್ಮವರು, ನಮ್ಮ ಮಣ್ಣಿನವರು ಎನಿಸುವ ಆಡಳಿತ ಸಿಗುವುದು. ಅದಕ್ಕೆ ಇವರೆಲ್ಲರನ್ನು ನೋಡಿ ನನಗನ್ನಿಸಿತು ನಮ್ಮ ಇಷ್ಟಕ್ಕೆ ಒಗ್ಗಿಕೊಂಡು ಬಾಳು ಕಟ್ಟಿಕೊಂಡ ಏಕೈಕ ಭಾರತೀಯೇತರ ಜನಾಂಗ ಪಾರಸೀ ಜನಾಂಗ, ಅದಕ್ಕೆ ತಲೆ ಬರಹ ಕೊಟ್ಟಿದ್ದು 'ಅವರೂ ನಮ್ಮೊಳಗೊಬ್ಬರಾದರು'.

ಶನಿವಾರ, ಡಿಸೆಂಬರ್ 17, 2016

ಬಂದು ಬಿಡು ಚಿನ್ನಾ

ಮಾತೆಲ್ಲ ಮರೆತು, ದೃಷ್ಟಿ ಮಸುಕಾಗಿ
ಬೆನ್ನು ಬಾಗಿ, ಕಣ್ಣು ಮಂಜಾಗಿ
ಮಾತು ತೊದಲಿ ಕೈ ನಡುಗಿ ನಾ
ಹೊರಟು ಹೋಗುವ  ಮುನ್ನ
ಒಮ್ಮೆ ನೋಡಲೇಬೇಕು ನಿನ್ನ
ಯಾರಿಗೂ ಕಾಯದೆ ಬಂದುಬಿಡು ಚಿನ್ನಾ.

ಮನಸು ಎಂಬ ಮಂಟಪ ಬೆಳಗಿ
ಕನಸು ಎಂಬ ಕೂಸಿಗೆ ಮರುಗಿ
ಬಿಟ್ಟು ಹೋಗಲೇ ಬೇಡ ನನ್ನ
ನಿನಗಾಗಿಯೇ ಕಾಯುತಿರುವೆ ನೀ ಬಂದುಬಿಡು ಚಿನ್ನಾ.

ವಾಟ್ಸಾಪ್ ಫೇಸ್ ಬುಕ್ಕು ಗಳಿಗಿಂತ
ನಿನ್ನೊಡನಾಟವೇ ಚೆನ್ನ
ನಿರ್ಜೀವ ತಂತ್ರಗಳವು ಇಂದಿಗೂ ಬೇಡ ಇನ್ನಾ
ಬೇಸರಿಸದೆ ನೀ ಮತ್ತೆ ನನ್ನೊಡನೆ ಬಂದು ಬಿಡು ಚಿನ್ನಾ.

ಒಮ್ಮೊಮ್ಮೆ ಮರುಗಿ
ಒಮ್ಮೊಮ್ಮೆ ಸೊರಗಿ
ಒಮ್ಮೊಮ್ಮೆ ಕೊರಗಿ
ಏನೇನೋ ನಡೆಯುತ್ತಿದೆ ಇನ್ನಾ
ನನ್ನ ಪರಿಸ್ಥಿತಿ ಇನ್ನೂ ಭಿನ್ನ
ಅದನ್ನೆಲ್ಲ ಕೇಳಲಾದರೂ ನೀ ಬರುವೆಯಾ ಚಿನ್ನಾ
ನಿನ್ನ ದಾರಿಯನ್ನೇ ಕಾಯುತಿರುವೆ ಇನ್ನಾ.

ಗುರುವಾರ, ಡಿಸೆಂಬರ್ 15, 2016

ಐಟಿ ಬಿಟಿ ಪ್ರೀತಿ

ಫೇಸ್ಬುಕ್ ನಲ್ಲಿ ಹುಟ್ಟಿ 
ವಾಟ್ಸಾಪ್ ನಲ್ಲಿ ಬೆಳೆದು 
ಸಲ್ಲದ ಕಾರಣಕ್ಕೆ ಮುರಿದು 
ಬೀಳುವುದು ಪ್ರೀತಿಯೇನೆ? 

ದುಡ್ಡು, ಧರ್ಮ, ಜಾತಿ 
ಎಲ್ಲಕ್ಕೂ ತಿಲ ತರ್ಪಣವಿಟ್ಟು
ನೀನಿಲ್ಲದೆ ನಾನಿಲ್ಲ 
ನಾನಿಲ್ಲದೇ ನೀನಿಲ್ಲ 
ನಿನ್ನಬಿಟ್ಟರೆ ಬದುಕೇ ಇಲ್ಲ 
ಎಂದುಕೊಳ್ಳುವುದು ನಿಜವಾದ 
ಪ್ರೀತಿ, ಚಿರ ಪ್ರೀತಿ ಎಂದಷ್ಟೇ ತಿಳಿದಿದ್ದೆ 
ಕಾಲ ಬದಲಾದಂತೆ ಪ್ರೀತಿಯೂ
ಬದಲಾಗಲಿದೆ, ಆಗುತ್ತಲೂ ಇದೆಯಲ್ಲ! 

ಪ್ರೀತಿಗೆ ರಾಯಭಾರಿ ನಾನೀಗ 
ಪ್ರೀತಿ ಬಯಸಿ ಹಿಂದೆ ಮುಂದೆ ಸುಳಿದು
ಕಾಡಿ ಬೇಡಿ ಮಾಡುವ ಪ್ರೀತಿ ಶೂನ್ಯ 
ಕಾಡುವ ಬೇಡುವ ಪ್ರಮೇಯ ನಿಜ ಪ್ರೀತಿಯ 
ಪಾಲಲ್ಲ. ಇನ್ಯಾರಿಂದಲೂ 
ಪ್ರೀತಿ ಬಯಸಲಾರೆ, ಆದರೆ ಬಳಿ ಸುಳಿದವರಿಗೆ 
ಪ್ರೀತಿ ಮೊಗೆ ಮೊಗೆದು ಕೊಡಲು ಮರೆಯಲಾರೆ 

                                           ಇಂತಿ ನೊಂದ ಪ್ರೇಮಿ :( 


ಶನಿವಾರ, ಡಿಸೆಂಬರ್ 3, 2016

ಬಿದ್ದರೇನು

ಬಿದ್ದರಿಲ್ಲಿ ಮುಗಿಯಿತು, ಎತ್ತುವರು ಎಳೆಸುವರ್ಯಾರು ಇಲ್ಲ 
ಬಿದ್ದರೇಳುವ ಛಾತಿಯೊಂದೇ ಅವರವರ ಬೆನ್ನಿಗೆ 
ಬಿದ್ದರೆತ್ತುವ ಜನರ ಕಾಣುತಿದ್ದರೆ ಮುಗಿಯಿತಲ್ಲಿಗೆ 
ಇದೇ ದೇವರು ಕೊಟ್ಟ ಭವ ಸಮುದ್ರದ ಬಾಳ್

ಬುದ್ಧನೆದ್ದ

ಭಗವಾನ್ ಬುದ್ಧ ಒಮ್ಮೆ ತನ್ನ ಶಿಷ್ಯರ ಒಡಗೂಡಿ ಲೋಕ ಸಂಚಾರ ಮಾಡುತ್ತಾ ಹಳ್ಳಿಯೊಂದಕ್ಕೆ ಬಂದ. ಆ ಹಳ್ಳಿಯಲ್ಲಿ ಇದ್ದ ಶ್ರೀಮಂತನೊಬ್ಬನಿಗೆ ಬುದ್ಧನ ಯಾವ ಭೋಧನೆಗಳಲ್ಲೂ ನಂಬಿಕೆಯಿರಲಿಲ್ಲ. ಹೀಗಾಗಿ ಬುದ್ಧನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತೀರ್ಮಾನ ಮಾಡಿಕೊಂಡು ರೋಷಾವೇಶದಿಂದ ಕುದಿಯುತ್ತಾ ಬುದ್ಧನ ಬಳಿಗೆ ಬಂದು ಕಿರುಚಾಡಲು ಶುರು ಮಾಡಿದ. "ನೀನೇನು ಮಹಾ ದೇವ ಮಾನವನೋ?.....ನೀನು ಹೇಳುವ ಮಾತುಗಳೆಲ್ಲಾ ತಲೆ ಬುಡವಿಲ್ಲದೆ ನಿರಾಧಾರ ವಾಗಿರುವಂತಹವು, ಇಷ್ಟಕ್ಕೂ ಇನ್ನೊಬ್ಬರಿಗೆ ಭೋಧನೆ  ಮಾಡಲು ನಿನಗೆ ಅಧಿಕಾರ ಕೊಟ್ಟವರ್ಯಾರು" ಎಂದೆಲ್ಲಾ ಆವೇಶದ ಮಾತುಗಳನ್ನಾಡುತ್ತಾನೆ.

ಎಲ್ಲವನ್ನೂ ಸಮಾಧಾನದಿಂದಲೇ ಕೇಳಿಸಿಕೊಂಡ ಬುದ್ಧ  ಶ್ರೀಮಂತನಿಗೆ ಪ್ರಶ್ನೆಯೊಂದನ್ನು ಕೇಳುತ್ತಾನೆ "ಮಗೂ ನಾನು ಯಾರಿಗೋ ಕೊಡಲೆಂದು ಉಡುಗೊರೆಯೊಂದನ್ನು ತಂದಿದ್ದೇನೆ, ಆದರೆ ನಾನು ಕೊಟ್ಟ ಉಡುಗೊರೆಯನ್ನು ಯಾರು ಸ್ವೀಕರಿಸಲಿಲ್ಲವೆಂದಾಗ ಆ ಉಡುಗೊರೆ ಯಾರ ಪಾಲಾಗುತ್ತದೆ?".

ಅನಿರೀಕ್ಷಿತ ಪ್ರಶ್ನೆಯಿಂದ ಶ್ರೀಮಂತ ಅಚ್ಚರಿಗೊಳಗಾದರೂ ಉತ್ತರಿಸುತ್ತಾನೆ. "ಆ ಉಡುಗೊರೆ ಕೊಂಡು ತಂದವರದ್ದೇ ಆಗುತ್ತದೆ".

ಬುದ್ಧ ಅದಕ್ಕೆ ಪ್ರತಿಕ್ರಿಯಿಸುತ್ತಾನೆ , "ಅಂತೆಯೇ ನೀನು ನನ್ನ ಮೇಲೆ ವಿನಾ ಕಾರಣ ಕೋಪಗೊಂಡರೆ ನಾನು ಅದನ್ನು ಸ್ವೀಕರಿಸುವುದಿಲ್ಲ, ಹಾಗೆಂದ ಮೇಲೆ ನಿನ್ನ ಕೋಪ ನಿನಗೆ ಹಿಂದಿರುಗಿ ಬಂತು ಎಂದಲ್ಲವೇ".ಶ್ರೀಮಂತನು ಹೌದು ಎನ್ನುತ್ತಾನೆ.

ನೀನು ಪರರನ್ನು ದ್ವೇಷಿಸಿದರೆ ಆ ದ್ವೇಷವನ್ನು ಯಾರು ಸ್ವೀಕರಿಸುವುದಿಲ್ಲ, ಅಂದ ಮೇಲೆ ಆ ದ್ವೇಷ ನಿನಗೆ ಹಿಂತಿರುಗಿ ಬರುತ್ತದೆ. ದ್ವೇಷವೇ ಹಿಂದಿರುಗಿ ಬಂದಾಗ ಸಂತೋಷ, ನೆಮ್ಮದಿಗಳು ಕನಸಾಗಿಯೇ ಉಳಿಯುತ್ತವೆ. ಹಾಗಾಗಿ ದ್ವೇಷ, ಅಸೂಯೆಗಳನ್ನು ಶಮನ ಮಾಡಿ ಪ್ರೀತಿಯನ್ನು ಕೊಟ್ಟಾಗ ಮಾತ್ರ ಜೀವನ ಸುಖಮಯವಾಗುತ್ತದೆಂದು ಬುದ್ಧ ತನ್ನ ಮಾತು ಮುಗಿಸುತ್ತಾನೆ.

ಸೋಮವಾರ, ನವೆಂಬರ್ 21, 2016

ಮೋದಿ - ಮಂತ್ರವಾದಿ

ಪಿಶಾಚಿ ಮೆಟ್ಟಿ ಕುಣಿಯುವರ ಬಾಯ್ಬಿಡಿಸಬಹುದು
ಗರ ಬಡಿದವರ ಬಾಯ್ಬಿಡಿಸಬಹುದು
ಸಿರಿಗರ ಬಡಿದವರ ಬಾಯ್ಬಿಡಿಸಲು ಬಡವನೆಂಬ ಮಂತ್ರವಾದಿಯೊಬ್ಬನಿಗೆ
ಸುಲಭ ಸಾಧ್ಯ ಅಂದೊಪ್ಪಿದರು ವಚನ ಮಾರ್ಗದವರು.
ಶತಮಾನದ ಸಾಲು ಸಾಲುಗಳು ಕಳೆದರು ಸಿರಿಗರ ಬಿಡಿಸುವರ
ಮಂತ್ರವಾದಿಯ ಪಟ್ಟವ ಬಡತನ ತನ್ನದಾಗಿಸಿಕೊಂಡಿತ್ತು.
ನೋಡೀಗ ಇಲ್ಲಿ, ನಮ್ಮದೇ ಭಾರತದೊಳಗೆ ಮೋದಿಯೆಂಬ
ಮಂತ್ರವಾದಿ ಬೇವಿನ ಸೊಪ್ಪು, ಮೆಣಸಿನ ಘಾಟು ಏನೇನೂ ಇಲ್ಲದೆ ಸಿರಿಗರ
ಬಡಿದವರ ಬಾಯ್ಬಿಡಿಸಿದ್ದಾರೆ, ಮನೆಯಿಂದ ಓಡೋಡಿ ಬ್ಯಾಂಕಿನ ಸರದಿಯಲ್ಲಿರುವಂತೆ
ಮಾಡಿದ್ದಾರೆ, ಬ್ಯಾಂಕಿನ ಮಿತಿಯನ್ನೂ ಮೀರಿಸಿ ಹಣದ ಹೊಳೆಗೆ ಒಡ್ಡುಗಟ್ಟಿ
ತಮ್ಮ ಮನೆಯೊಳಗೆ ತಿರುವಿಕೊಂಡವೆರೆಲ್ಲಾ ಇದೀಗ ಮೋದಿಯೆಂಬ ಮಂತ್ರವಾದಿಗೆ
ಶಾಪ ಹಾಕುತ್ತ ತಮ್ಮ ಮನೆಯ ಮಹಾಲಕ್ಷ್ಮಿಯನ್ನು ಗೌರವಾದರದಿಂದ ಕಳುಹಿಸಿಕೊಡುತ್ತಿದ್ದಾರೆ.
ದೇಶದೊಳಗಣ ದೊಡ್ಡ ಲಕ್ಷ್ಮಿಯರು ತಮ್ಮ ಬೆಲೆ ಕಳೆದುಕೊಂಡು ಬ್ಯಾಂಕಿಗೆ ಸೇರುವ
ಬದಲು ಗಂಗೆಗೂ, ಸಮುದ್ರಕ್ಕೂ, ರೋಡಿಗೂ, ಕಾಡಿಗೂ ಸೇರಿಕೊಂಡು ಇಲ್ಲದವರ
ಪಾಲಾಗಿ ಮತ್ತೆ ಮೋದಿಯೆಡೆಗೆ ದಾರಿ ಹಿಡಿದಿದ್ದಾರೆ.
ಅಂತೂ ಇಂತೂ ಮೋದಿಯಣ್ಣ ಸಿರಿಗರ ಬಡಿದವರ ನುಡಿಸಿದರು, ಏನೆಂದು ಗೊತ್ತೇ
'ಮುಂದಿನ ಲೋಕಸಭೆಯೊಳಗೆ ನಾವು ಕೇಸರಿಗೆ ವಿರೋಧ'ವೆಂದು.




ಗುರುವಾರ, ನವೆಂಬರ್ 10, 2016

ಭಾವ-ತೀವ್ರತೆ

ದುಃಖದೊರತೆಯೊಡೆದು ಭೂಮಿಗಿಳಿಯುತಿಹುದು ತನು ಮನ
ದೂಡುಗೋಲಿಗೆ, ಆಸರೆ ಕೈಯಿಗೆ ಯಾರ ಬೇಡಲಿ ನಾ,
ಎಲ್ಲಿಗಲೆಯಲಿ ನಾ,ಎಲ್ಲಕ್ಕೂ ಮುಂಚಾಗಿ ಏನೀ ಜಗದ ನಿಲುವು, ದ್ವಂದ್ವ 

ಬುಧವಾರ, ನವೆಂಬರ್ 2, 2016

ನಾನು ನನ್ನ ಸುತ್ತ

(ಅದು 2014ರ ಭಾರತದ ಲೋಕಸಭಾ ಚುನಾವಣೆ ಸಮಯ. ದೇಶದ ಸರ್ವ ಪಕ್ಷಗಳೂ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಬಿಡಾರ ಹೂಡಿ ತಮ್ಮ ತಮ್ಮ ಪಕ್ಷಗಳ ಪರ ಪ್ರಚಾರ ಮಾಡಿಕೊಂಡು ತಿರುಗುತ್ತಿದ್ದ ಬಿರು ಬೇಸಿಗೆಯ ನಡು ಮಧ್ಯ ಕಾಲ. ಬಿಸಿಲೆಂದರೆ ಸಾಮಾನ್ಯವಲ್ಲ, ಹೊರಗಡಿಯಿಟ್ಟರೆ ಮೈಯೆಲ್ಲಾ ಗಂಧೆ ಏಳುವಷ್ಟು. ಪುಣೆಯ ಶಿವಾಜಿನಗರದ ಎಲ್ ಅಂಡ್ ಟಿ ಕಛೇರಿಯೇ ಆಗ್ಗೆ ನನ್ನ ಕಾರ್ಯಸ್ಥಾನ. ಅದೊಂದು ಶುಕ್ರವಾರ ಮಧ್ಯಾಹ್ನದ ಊಟವಾಗಿಹೋಗಿತ್ತು. ಅದೇಕೋ ಏನೋ ಇದ್ದಕಿದ್ದಂತೆ ಇಡೀ ಆಫೀಸ್ ಖಾಲಿಯಾಗಿಹೋದಂತೆ ಕಂಡಿತು. ಸುತ್ತಲೂ ಒಮ್ಮೆ ನೋಡಿದೆ ಆಗ ನನ್ನ ಕಣ್ಣಿಗೇನೇನೂ ಕಂಡಿತೋ ಅದನ್ನೆಲ್ಲ ಹಾಗೆ ಗೀಚಿದ್ದೇನೆ).

ದೇಶವೆಲ್ಲ ಬಿಸಿಲಿನಲ್ಲಿ ಬೇಯುತ್ತಿದೆ..........ದೇಶದ ರಾಜಕಾರಣದಲ್ಲಿ ಮಹಾಯಜ್ಞ ಕುಂಡವೇ ತಯಾರಾಗುತ್ತಿದೆ…… ರಾಜಕಾರಣಿಗಳು ಎದುರಾಳಿಗಳ ಪಕ್ಷದ ತಪ್ಪು ಕಂಡು ಹಿಡಿಯುವುದರಲ್ಲಿ ನಿರತರಾಗಿದ್ದಾರೆ ….. ಸುತ್ತಲೂ "ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನಾವು ಅಳುಕಾಲಾರೆವು" ಅಂತ ಪಣ ತೊಟ್ಟು ಬೇಯುವ ಬಿಸಿಲಿನಲ್ಲೂ ಮರಗಳು ಹಾಗೆ ನಿಂತಿವೆ.........ಇವನ್ನೆಲ್ಲ ನೋಡುತ್ತಿರುವ ಸೂರ್ಯದೇವನು ತನ್ನ ಪ್ರಖರತೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದ್ದಾನೆ.......ಭೂಮಿಯೆಲ್ಲ ಕಾದೂ ಕಾದು ಆಮ್ಲೆಟ್ಟು, ದೋಸೆ, ಚಪಾತಿಗಳಿಗೆ ಬೇರೆ ಹೆಂಚುಗಳ ಅವಶ್ಯಕತೆಯನ್ನು ಕಡಿಮೆ ಮಾಡಲು ಉತ್ಸುಕವಾದಂತಿದೆ...........… ಎಲ್ ಅಂಡ್ ಟಿ ಯ ಅರ್ಧದಷ್ಟು ಜನಗಳು ಡಾರ್ಮಿಟರಿ ಯಲ್ಲಿ ಈ ಲೋಕ ಮರೆತಿದ್ದಾರೆ, ರೈಲ್ವೆ ಸ್ಟೇಷನ್ ಮುಂದಿನ ರಸ್ತೆಯಲ್ಲಿ ಆಡುತ್ತಿರುವ ಮಕ್ಕಳು ಕ್ರಿಕೆಟ್ ಬ್ಯಾಟನ್ನಿಡಿದು ಅಬ್ಬರಿಸುತ್ತಿದ್ದಾರೆ, ಶಿವಾಜಿನಗರದ ರೈಲುಗಳು ಇವಕ್ಕೆಲ್ಲ ಸಂಬಂಧವೇ ಇಲ್ಲದಂತೆ ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತಿವೆ, ಇನ್ನು ನನ್ನ ಸುತ್ತಲು ಲಾಲ್ ಬಾಗ್, ಕಬ್ಬನ್ ಪಾರ್ಕುಗಳೇ ತಯಾರಾಗಿವೆ..........ಅಲ್ಲಿ ನೋಡಬೇಕಾದ ದೃಶ್ಯಾವಳಿಗಳು ಇಲ್ಲಿಯೇ ಸಿಗುತ್ತಿವೆ ಆದರೂ ನಾನತ್ತ ಗಮನ ಕೊಡುತ್ತಿಲ್ಲ..... ಇಲ್ಲಿನ ಹುಡುಗಿಯರು ತಮ್ಮಷ್ಟಕ್ಕೆ ತಾವು ಗುಂಪು ಕಟ್ಟಿಕೊಂಡು ಹರಟುತ್ತಿದ್ದಾರೆ, ಹೊರಗಿನ ಹುಡುಗಿಯರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಈ ಲೋಕದಿಂದ ತಮ್ಮ ಅಮೋಘ ಸೌಂದರ್ಯವನ್ನು ಮರೆ ಮಾಚುವ ಪ್ರಯತ್ನದಲ್ಲಿದ್ದಾರೆ, ವಾಹನ ಸವಾರರು ದರಿದ್ರ ಟ್ರಾಫಿಕ್ ಜಾಮ್ ಗೆ ರೋಸಿ ಹೋಗಿ ರಸ್ತೆ ಮಗ್ಗುಲಲ್ಲೇ ಇರುವ ರಸವಂತಿ ಗೃಹಗಳಿಗೆ ಲಗ್ಗೆ ಇಟ್ಟಿದ್ದಾರೆ.......ಸಿ ಓ ಇ ಪಿ ಮುಂದೆ ನಿಂತ ಹುಡುಗರು ಕೆಲವರು ತಮ್ಮ ಇಂಟರ್ನಲ್ ಗಳ ಅಂಕಗಳನ್ನು ಲೆಕ್ಕ ಹಾಕುತ್ತಿದ್ದರೆ ಮತ್ತೆ ಕೆಲವರು ಸೊಗಸಾದ ಯಾವುದಾದರು ಸಿಕ್ಕ ಸೌಂದರ್ಯ ರಾಶಿಯನ್ನು ಸೆರೆ ಹಿಡಿಯುವ ಧಾವಂತದಲ್ಲಿದ್ದಾರೆ....... ರಸ್ತೆಗೆ ಕಣ್ಣಾಡಿಸಿದರೆ ಕೆಲವರು ಬಸ್ ಸ್ಟಾಪಿನಲ್ಲಿ ನಿಂತು ಬಸ್ ಹಿಡಿಯುವ ಆತುರದಲ್ಲಿದ್ದಾರೆ............ಅತ್ತ ರೈಲಿಗಾಗಿ ಕಾದ ಜನಗಳು ನಿಲ್ದಾಣದಲ್ಲಿ ಸಣ್ಣಗೆ ತೂಕಡಿಸುತ್ತಿದ್ದಾರೆ.............ಇತ್ತ ಕೆಲವು ಹುಡುಗರು ಕಬ್ಬು ಅರೆಯುವುದರಲ್ಲಿಯೂ, ಹಣ್ಣುಗಳ ರುಬ್ಬುವುದರಲ್ಲಿಯೂ ತೊಡಗಿಕೊಂಡು ತಮ್ಮನ್ನು ತಾವು ಮರೆತಿದ್ದಾರೆ...... ಶಾಪರ್ ಸ್ಟಾಪ್ ನಲ್ಲಿ ಕೆಲಸ ಮಾಡುವ ಹುಡುಗರು ಗಿರಾಕಿಗಳಿಲ್ಲದೆ ಬಾಗಿಲಲ್ಲಿ ಕುಂತು ಕಾಡು ಹರಟೆಯಲ್ಲಿ ನಿರತರಾಗಿದ್ದಾರೆ.............ಇನ್ನು ಕೆಲವರು ಭಾರಿ ಸುಸ್ತಾದವರಂತೆ ಹೋಗಿ ಬಿರು ಬಿಸಿಲಿನಲ್ಲಿಯೂ ಸಿಗರೇಟು ಸೇದುತ್ತಿದ್ದಾರೆ ಸಾಲದ್ದಕ್ಕೆ ಉಳಿದ ಇನ್ನೊಂದು ಕೈಯಲ್ಲಿ ಚಹಾ ಲೋಟ ಹಿಡಿದು ಅದನ್ನು ಆಗಿಂದಾಗ್ಗೆ ಹೀರುತ್ತಿದ್ದಾರೆ, ಇತ್ತ ಕಂಪನಿಯ ಒಳಗೆ  ಸೆಕ್ಯೂರಿಟಿ ಗಾರ್ಡ್ ಗಳು ತಮ್ಮ ಬದಲಾದ ಶಿಫ್ಟ್ ನ ಲೆಕ್ಕಾಚಾರದಲ್ಲಿದ್ದಾರೆ........ಕ್ಯಾಂಟೀನ್ ಜನಗಳು ಈಗಾಗಲೇ ಮುಗಿದ ಊಟದ ಪದಾರ್ಥಗಳನೆಲ್ಲ ಖಾಲಿ ಮಾಡಿ ಸಾಯಂಕಾಲದ ಸ್ನಾಕ್ಕ್ಸ್ ಟೈಮಿಗೆ ಸನ್ನದ್ಧರಾಗುತ್ತಿದ್ದಾರೆ........... ಈತ್ತ ಕೆಲವರು ಕಂಪ್ಯೂಟರ್ ಮುಂದೆ ಕೂತು ಕೂತು ಸಾಕಾಗಿ ತಲೆ ಓಡದೆ ಬ್ರೇಕ್ ಔಟ್ ಏರಿಯ ದಲ್ಲಿ ಕಾಫಿ ಹೀರಲು ಸಜ್ಜಾಗಿ ನಿಂತಿದ್ದಾರೆ....ಇನ್ನು ಕೆಲವರು ಹೊರಗಿನ ಜಗತ್ತನ್ನು ಮರೆತು ತಮ್ಮ ಕೆಲಸದಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ......ಬೆಂಚಿನಲ್ಲಿರುವ ಹುಡುಗರು ಈಗ ಹೇಗೆ ಸಮಯ ಕಳೆಯುವುದು ಅನ್ನುವ ಲೆಕ್ಕಾಚಾರದಲ್ಲಿದ್ದಾರೆ.....ಮತ್ತೆ ಕೆಲವರು ಜ್ಞಾನ ಸಂಪಾದನೆಗಾಗಿ ಓದುತ್ತಿದ್ದಾರೆ ....ಅಲ್ಲೆಲ್ಲೋ ದೂರದಲ್ಲಿರುವ ಕ್ಯಾಬಿನ್ ಒಳಗಿನ ಮ್ಯಾನೇಜರ್ ಸಾಹೇಬರು ಯಾರಿಗೆ ಏನು ಕೆಲಸ ಕೊಡಲಿ......ಯಾರ ರಜೆ ಗಳನ್ನೂ ಅಪ್ರೂವ್  ಮಾಡಲಿ ಅಂತ ತಲೆ ಕೆಡಿಸಿ ಕೊಂಡಿದ್ದಾರೆ.....ಈ ಕಡೆ 7ನೆ ಫ್ಲೋರ್ ಇಂದ ಈ ಫ್ಲೋರ್ ಗೆ ಲಗ್ಗೆಯಿಟ್ಟ ಹುಡುಗರು ಇಲ್ಲಿ ಇರೋವ್ರನ್ನೆಲ್ಲ ಮಾತಾಡಿಸ ಹತ್ತಿದ್ದಾರೆ.......ಕೆಲವರು ಮೌನವಾಗಿಯು, ಕೆಲವರು ವಿಷಣ್ಣ ವದನದವರಾಗಿಯು, ಕೆಲವರು ಮಾತನಾಡುತ್ತಾಲೂ, ಕೆಲವರು ಗಲಾಟೆ ಮಾಡುತ್ತಲೂ ಮತ್ತೆ ಕೆಲವರು ಜೋರಾಗಿ ನಗುತ್ತಲೂ  ಇರುವ ಈ ಪರಿಸರದಲ್ಲಿ ನನ್ನ ಕಿವಿಯಲ್ಲಿ ಮಾತ್ರ ಡಾ||ರಾಜ್ ಕುಮಾರರು ಇಂಪಾಗಿ ಹಾಡುತ್ತಿದ್ದಾರೆ.....ಅದನ್ನು ಕೇಳುತ್ತಾ ನನ್ನನ್ನು ನಾನು ಮರೆಯುತ್ತೇನೆಯೋ ಅನಿಸುತ್ತಿದೆ .............ನಾನೋಬ್ಬನೀಗ ಅದರಲ್ಲೇ ಲೀನ......

ಗುರುವಾರ, ಅಕ್ಟೋಬರ್ 27, 2016

ದಾರು ದೈವ-ಜೀವಿ ?

ಜ್ಞಾನವಿದ್ದವಂಗೆ, ಸ್ಥಿತಿಗತಿ ಅರಿತವಂಗೆ, ವಿಡಂಬನೆ ಇಲ್ಲದವಂಗೆ, ಪರರನ್ನು ಕಂಡರೆ ಕನಿಕರ, ಅಸಹ್ಯ, ಆವೇಶ, ಯಾವೊಂದು ಪದದವಂಗೆ, ಪರರಿಗೆ ಕೇಡು ಬಗೆಯದವಂಗೆ, ತನ್ನತನದೊಳೆ ತಾನಿದ್ದು ತನಗಾಗಿ ತಾ ಬದುಕಿ, ಬದುಕಿನುದ್ದುದ್ದಕ್ಕೂ ಎಷ್ಟೆಷ್ಟೋ ಗೋಜಲು ಕಂಡರೂ ತನ್ನ ದಾರಿಯಿದು ಎಂದು ತಾ ಗುರುತಿಸಿ ಅದರೊಳಗೆ ವ್ರತನಿಷ್ಠನಂತೆ ನಡೆದವಂಗೆ ದೇವರೇ ನೆರವು, ಜಗವೇ ದೇವರು, ಅದೇ ಜಗದೊಳಗವನೂ ಲೀನ.

ಎಡೆಯೂರು ಸಿದ್ಧಲಿಂಗೇಶ್ವರರ ವಚನ

ಮುಂದಳ ಮುಖ ಸಾಲೆಯೊಳಗೆ
ಉದ್ದಂಡ ಮೂರ್ತಿಯ ಕಂಡೆನಯ್ಯಾ
ಲಂಡರ ಪುಂಡರ ಭಂಡರ ದಂಡಿಸುತ್ತಿದ್ದಾನೆ ನೋಡ
ಮುಂದಣ ಮುಖಸಾಲೆಯ ಮುರಿದು
ಉದ್ದಂಡಮೂರ್ತಿ ಉಳಿದ ಪ್ರಚಂಡೆತೆಯನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ


ಭಾನುವಾರ, ಅಕ್ಟೋಬರ್ 16, 2016

ತೆನಾಲಿ ರಾಮಕೃಷ್ಣ ಮತ್ತು ಬದನೆಕಾಯಿ ಗೊಜ್ಜು

ವಿಜಯನಗರದ ಅರಸು ಶ್ರೀಕೃಷ್ಣದೇವರಾಯರಿಗೆ ಬದನೇಕಾಯಿ ಪಲ್ಯವೆಂದರೆ ಬಲು ಪ್ರೀತಿ, ಅದರಲ್ಲೂ ವಿಶೇಷವಾದ ಬದನೇಕಾಯಿ ತಳಿಯೊಂದನ್ನು ಎಲ್ಲಿಂದಲೋ ತರಿಸಿ ತಮ್ಮ ಅಂತಃಪುರದ ಹಿತ್ತಲಲ್ಲಿ ಬೆಳೆಸಿದ್ದರು. ಅಂತಹ ಬದನೇಕಾಯಿ ತಳಿ ವಿಜಯನಗರ ಸಾಮ್ರಾಜ್ಯದಾದ್ಯಂತ ಎಲ್ಲೂ ಸಿಗುತ್ತಿರಲಿಲ್ಲವಂತೆ, ಅಂತಹ ಅದ್ಭುತ ಬದನೇಕಾಯಿ ತಳಿ ಅದು. ಅದರಿಂದ ಪಲ್ಯ/ಗೊಜ್ಜು ತಯಾರಿಸಿ ಅನ್ನದೊಂದಿಗೆ ಬಡಿಸಿದರೆ ಕೃಷ್ಣದೇವರಾಯರಿಗೆ ಬಹಳ ಅಚ್ಚುಮೆಚ್ಚು. ಹೀಗಿದ್ದ ವಿಶೇಷ ಬದನೇಕಾಯಿ ಪಲ್ಯವನ್ನು 'ನಾನೊಬ್ಬನೇ ತಿಂದು ಸವಿದರೆ ಸಾಲದು, ತನ್ನ ಅತ್ಯಾತ್ಮೀಯ ಸ್ನೇಹಿತನೂ ಹಾಗು ಮಂತ್ರಿಯು ಆದ ತೆನಾಲಿ ರಾಮಕೃಷ್ಣನಿಗೂ ಅದರ ರುಚಿ ತೋರಿಸಬೇಕು' ಎಂದುಕೊಂಡರು ಕೃಷ್ಣದೇವರಾಯರು. ಕೂಡಲೇ ಭೋಜನ ಕೂಟವೊಂದನ್ನು ಏರ್ಪಡಿಸಿ ತಮ್ಮ ಆತ್ಮೀಯ ಗೆಳೆಯನಾದ ತೆನಾಲಿ ರಾಮನನ್ನು ಆಹ್ವಾನಿಸಿದರು. ಹಾಜರಾದ ಆತನಿಗೆ ತಮ್ಮ ಅಂತಃಪುರದ ಹಿತ್ತಲಿನ ಬದನೆಕಾಯಿಂದ ತಯಾರಿಸಿದ ಗೊಜ್ಜನ್ನು ಬಡಿಸಲಾಯಿತು. ತೆನಾಲಿ ರಾಮನಂತೂ  ಆ ಬದನೇಕಾಯಿ ಗೊಜ್ಜನ್ನು ಮೆಚ್ಚಿಕೊಂಡದ್ದೇ ಮೆಚ್ಚಿಕೊಂಡದ್ದು. ಆತನು   ಇದನ್ನು ತಯಾರಿಸದವರು ಯಾರು? , ಇಂತಹ ವಿಶೇಷ ಬದನೇಕಾಯಿ ದೊರೆಯುವುದಾದರೂ ಎಲ್ಲಿ? ಎಂದು ಯೋಚನೆ ಮಾಡಹತ್ತಿದನು. ಕೊನೆಗೆ ರಾಜ ನಳ ತಜ್ಞರಿಂದ ಒಂದು ವಿಷಯ ತಿಳಿಯಿತು, ಇಂತಹ ಗೊಜ್ಜು ತಯಾರಿಸುವಲ್ಲಿ ವಿಶೇಷ ಬುದ್ಧಿ ಖರ್ಚು ಮಾಡುವ ಅವಶ್ಯಕೆತೆ ಏನಿಲ್ಲ. ಅದೆಲ್ಲ ಬದನೇಕಾಯಿ ಪ್ರಭಾವ ಎಂದು. ಇನ್ನೂ ಮುಂದುವರೆದು ಬಹು ಅಪರೂಪವಾದ ಆ ಬದನೇಕಾಯಿ ತಳಿಯನ್ನು ಕೃಷ್ಣದೇವರಾಯರು ಎಲ್ಲಿಂದಲೋ ತರಿಸಿ ಸುರಕ್ಷಿತವಾಗಿ ತಮ್ಮ ಹಿತ್ತಲಲ್ಲಿ ಬೆಳೆಸಿದ್ದಾರೆ ಹಾಗು   ಅರಸರ ಅಪ್ಪಣೆಯಿಲ್ಲದೆ ಹಿತ್ತಲಿಗೆ ಯಾರಿಗೂ ಪ್ರವೇಶವಿಲ್ಲ. ಬದನೆ ಗಿಡಕ್ಕೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿರುವ ಎಲ್ಲ ವಿಚಾರಗಳನ್ನು ನಳ ತಜ್ಞರು ಬಾಯ್ಬಿಡುತ್ತಾರೆ. ಈ ವಿಚಾರಗಳನ್ನೆಲ್ಲ ಕೇಳಿದ ಕೊಡಲೇ ತೆನಾಲಿ ರಾಮ ಇದು ನನಗೆ ದಕ್ಕದ ವಿಚಾರವೆಂದುಕೊಂಡು ರಾಜರಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾನೆ. ಮನೆಯಲ್ಲಿ ವಿಶ್ರಾಂತಿಸುವ ಸಮಯದಲ್ಲಿ ಹೆಂಡತಿಯ ಜೊತೆ ಮಾತನಾಡುತ್ತಾ ಅರಮನೆಯಲ್ಲಿ ಇಂದು ಏರ್ಪಾಡಾಗಿದ್ದ ಭೋಜನದ ಬಗ್ಗೆ ಹಾಗು ಅಲ್ಲಿ ಬಡಿಸಲಾಗಿದ್ದ ಬದನೇಕಾಯಿ ಗೊಜ್ಜಿನ ಬಗ್ಗೆ ಹೇಳುತ್ತಾನೆ.

ಬದನೇಕಾಯಿ ಗೊಜ್ಜಿನ ಬಗ್ಗೆ ಕೇಳುತ್ತಿದ್ದಂತೆಯೇ ತೆನಾಲಿ ರಾಮನ ಹೆಂಡತಿಯ ಬಾಯಲ್ಲಿ ನೀರೂರಲು ಶುರುವಾಗುತ್ತದೆ.  ಕಾರಣವೆಂದರೆ ಆಕೆಗೂ ಬದನೇಕಾಯಿ ಗೊಜ್ಜು ಎಂದರೆ ಪಂಚ ಪ್ರಾಣ. ತನಗೂ ಆ ಬದನೇಕಾಯಿ ತಂದು ಕೊಡುವಂತೆ ಗಂಡನನ್ನು ಪೀಡಿಸಲು ಶುರು ಮಾಡುತ್ತಾಳೆ. ತೆನಾಲಿ ರಾಮ ಅಲ್ಲಿರುವ ಭದ್ರತೆ ಮತ್ತಿತರ ವಿಚಾರಗಳನ್ನು ತಿಳಿಸಿದರೂ ಆಕೆ ಕೇಳುವುದಿಲ್ಲ. ಆ ಬದನೇಕಾಯಿ ಪಲ್ಯಕ್ಕಾಗಿ ಹಠ ಹಿಡಿದು ಕುಳಿತು ಬಿಡುತ್ತಾಳೆ. ತೆನಾಲಿ ರಾಮ ಈಗ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅತ್ತ ರಾಜರನ್ನು ಹೋಗಿ ನೇರವಾಗಿ ಬದನೇಕಾಯಿ ಕೊಡಿ ಅಂದು ಕೇಳಲೂ ಸಾಧ್ಯವಿಲ್ಲ, ಕೇಳಿದರೂ ಅವರು ಕೊಡುವುದಿಲ್ಲವೆಂದು ಗೊತ್ತು ಇತ್ತ ಹೆಂಡತಿ ಒಂದೇ ಸಮ ಹಠ ಹಿಡಿದು ಕುಳಿತಿರುತ್ತಾಳೆ. ಅಳೆದೂ ತೂಗಿ ಯೋಚನೆ ಮಾಡಿದ ತೆನಾಲಿ ರಾಮ ರಾತ್ರಿಯ ಸಮಯದಲ್ಲಿ ರಾಜರ ಹಿತ್ತಲಿಗೆ ಹೋಗಿ ಬದನೆಕಾಯಿಗಳನ್ನು ಕದಿಯುವ ಯೋಜನೆ ಹಾಕಿಕೊಳ್ಳುತ್ತಾನೆ. ಹೆಂಡತಿಯೂ ಇದಕ್ಕೆ ಒಪ್ಪುತ್ತಾಳೆ.ಮರುದಿನದ ರಾತ್ರಿಯೇ ರಾಜರ ಹಿತ್ತಲಿಗೆ ನುಗ್ಗಿದ ತೆನಾಲಿ ರಾಮ ಕೆಲವಾರು ಬದನೆಕಾಯಿಗಳನ್ನು ಕದ್ದು ಮನೆಗೆ ತಂದು ಬಿಡುತ್ತಾನೆ.

ಆ ದಿನ ರಾತ್ರಿಯೇ ಬದನೇಕಾಯಿ ಗೊಜ್ಜು ತಯಾರಾಗುತ್ತದೆ. ಈಗ ಮತ್ತೊಮ್ಮೆ ತೆನಾಲಿ ರಾಮನಿಗೂ ಅವನ ಹೆಂಡತಿಗೂ ಜಗಳ ಶುರುವಾಗುತ್ತದೆ. ಮಾಡಿದ ಬದನೇಕಾಯಿ ಪಲ್ಯವನ್ನು ಮಗನಿಗೂ ಬಡಿಸಬೇಕೆನ್ನುವುದು ರಾಮಕೃಷ್ಣನ ಹೆಂಡತಿಯ ಆಸೆ, ಆದರೆ ಮುಂದೆಂದಾರೂ ರಾಜರು ತನಿಖೆಗೆ ಆದೇಶಿಸಿದರೆ ಮಗನೆಲ್ಲಿ ಬಾಯಿ ಬಿಟ್ಟುಬಿಡುವನೋ ಎಂಬ ಆತಂಕದಿಂದ ಅವನಿಗೆ ಬದನೇಕಾಯಿ ಗೊಜ್ಜನ್ನು ಬಡಿಸಬಾರದೆನ್ನುವುದು ತೆನಾಲಿ ರಾಮನ ವಾದ. ಮಗನಿಗೆ ಬಡಿಸದ ಹೊರತು ನಾನೂ ತಿನ್ನುವುದಿಲ್ಲವೆಂದು ಹೆಂಡತಿ ಹಠ ಹಿಡಿದು ಕುಳಿತುಬಿಡುತ್ತಾಳೆ.ಹೆಂಡತಿಯ ಮಾತಿಗೆ ಕಟ್ಟುಬಿದ್ದು ಮಗನಿಗೂ ಬದನೇಕಾಯಿ ಗೊಜ್ಜು ಬಡಿಸಲು ಒಪ್ಪಿಕೊಳ್ಳುತ್ತಾನೆ, ಆದರೆ ಅದಕ್ಕೂ ಮುನ್ನ ಬುದ್ಧಿವಂತಿಕೆಯಿಂದ ತನ್ನ ಮಗನ ತಲೆಕೆಡಿಸಿಬಿಡುತ್ತಾನೆ. ಅದು ಹೇಗೆ ಎಂದರೆ, ಬದನೇಕಾಯಿ ಗೊಜ್ಜು ಮಗನಿಗೂ ಬಡಿಸಲು ಒಪ್ಪಿಕೊಂಡ ತೆನಾಲಿ ರಾಮ ಕೂಡಲೇ ಮಗ ಏನು ಮಾಡುತ್ತಿದ್ದಾನೆ ಎಂದು ನೋಡುತ್ತಾನೆ. ಮಗ ಶಾಲೆಯಿಂದ ಬಂದು ಒಂದು ಸುತ್ತು ಆಟವಾಡಿ, ತನಗೆ ಶಾಲೆಯಲ್ಲಿ ಕೊಟ್ಟಿದ್ದ ಮನೆಗೆಲಸಗಳನ್ನೆಲ್ಲ ಮುಗಿಸಿ ಉಪ್ಪರಿಗೆಯ ಮೇಲೆ ಹಾಗೆ ನಿದ್ರೆಗೆ ಜಾರಿರುತ್ತಾನೆ. ಪರಿಸ್ಥಿತಿ ಅವಲೋಕಿಸಿದ ತೆನಾಲಿ ರಾಮ ಅಲ್ಲೇ ಪಕ್ಕದಲ್ಲಿದ್ದ ನೀರು ತುಂಬಿದ ಮಡಕೆಯನ್ನು ತೆಗೆದು ಅದರಲ್ಲಿದ್ದ ನೀರನ್ನೆಲ್ಲ ಮಗನ ಮೇಲೆ ಸುರಿದು ಬಿಡುತ್ತಾನೆ. ನಿದ್ರೆಯಲ್ಲಿದ್ದ ಮಗ ಕೊಡಲೇ ಚೀರುತ್ತಾ ಅಲ್ಲಿಂದ ಎದ್ದುಬಿಡುತ್ತಾನೆ. ಕೂಡಲೇ ತೆನಾಲಿ ರಾಮ ತನ್ನ ಹೆಂಡತಿಯನ್ನು ಜೋರಾಗಿ ಕೂಗಿ ಹೇಳುತ್ತಾನೆ. 'ಹೊರಗಡೆ ಮಳೆ ಬರುತ್ತಿದೆ, ಮಗನನ್ನು ಉಪ್ಪರಿಗೆಯಿಂದ ಒಳಗೆ ಕರೆಯಬಾರದೇ'.
ನಿದ್ದೆಗಣ್ಣಿನಲ್ಲಿದ್ದ ತೆನಾಲಿರಾಮನ ಮಗ ಹೊರಗೆ ಮಳೆ ಬರುತ್ತಿದೆ ಎಂದು ಕೊಂಡು ಒಳಗೆ ಬರುತ್ತಾನೆ. ಆಗ ಅವನಿಗೆ ಬದನೇಕಾಯಿ ಗೊಜ್ಜಿನ ಪಲ್ಯ ಬಡಿಸಿ ಊಟ ಮಾಡಿಸಿ ಮಲಗಿಸುತ್ತಾರೆ. ಅನಂತರ ತಾವು ಊಟ ಮಾಡುತ್ತಾರೆ. ಇದಾಗಿ ಮಾರನೇ ದಿನ ಅರಮನೆಯಲ್ಲಿ ಎಲ್ಲರ ಬಾಯಲ್ಲೂ ಬದನೇಕಾಯಿ ಕಳ್ಳತನವಾದ ವಿಷಯವೇ ಆಗಿಹೋಗುತ್ತದೆ.

ಕೃಷ್ಣದೇವರಾಯರು ಚೋರರ ಪತ್ತೆಗೆ ಆದೇಶಿಸುತ್ತಾರೆ.  ಆದರೆ ವಿಜಯನಗರದ ಪ್ರಧಾನಮಂತ್ರಿಗಳಿಗೆ ತೆನಾಲಿ ರಾಮನ ಬಗ್ಗೆ ಸಣ್ಣ ಅನುಮಾನ ಶುರುವಾಗುತ್ತದೆ. ಕಾರಣವಿಷ್ಟೇ, ಹಿತ್ತಲಲ್ಲಿದ್ದ ಅಪರೂಪದ ತಳಿಯ ಬದನೇಕಾಯಿ ಗಿಡ ಗೊತ್ತಿದ್ದು ಕೆಲವೇ ಕೆಲವರಿಗೆ. ಅದರಲ್ಲಿ ತೆನಾಲಿ ರಾಮನೂ ಒಬ್ಬನು. ಹಾಗು ಆ ಬದನೇಕಾಯಿ ರುಚಿ ನೋಡಿದ್ದವನಂತೂ ತೆನಾಲಿ ರಾಮನೊಬ್ಬನೇ. ಪ್ರಧಾನ ಮಂತ್ರಿಗಳು ಮಹಾರಾಜರಲ್ಲಿಗೆ ಹೋಗಿ ಈ ವಿಚಾರವನ್ನು ಭಿನ್ನವಿಸಿಕೊಳ್ಳುತ್ತಾರೆ. ಕೂಡಲೇ ತೆನಾಲಿ ರಾಮನನ್ನು ಅರಮನೆಗೆ ಕರೆತರುವಂತೆ ಕೃಷ್ಣದೇವರಾಯರು ಆದೇಶಿಸುತ್ತಾರೆ. ತೆನಾಲಿ ರಾಮ ಅರಮನೆಗೆ ಆಗಮಿಸುತ್ತಾನೆ, ವಿಚಾರಣೆ ಆರಂಭವಾಗುತ್ತದೆ. ತೆನಾಲಿ ರಾಮ ತಾನು ಕದ್ದಿಲ್ಲವೆಂದು ವಾದಿಸುತ್ತಾನೆ.

ಪ್ರಧಾನ ಮಂತ್ರಿಗಳಿಗೆ ತೆನಾಲಿ ರಾಮ ಸುಳ್ಳು ಹೇಳುತ್ತಿದ್ದಾನೆ ಎಂಬುದು ಅರಿವಿಗೆ ಬರುತ್ತದೆ.  ಅವರು ಕೂಡಲೇ ತೆನಾಲಿ ರಾಮನ ಮುಗ್ದ ಮಗನನ್ನು ಕೇಳಿದರೆ ಸತ್ಯ ಅರಿಕೆಯಾಗಬಹುದೆಂದು ಭಾವಿಸಿ ತೆನಾಲಿ ರಾಮನ ಮಗನನ್ನು ಅರಮನೆಗೆ ಕರೆತರುವಂತೆ ಭಟರನ್ನು ಕಳುಹಿಸುತ್ತಾನೆ. ಈಗ ಇಬ್ಬರೂ ರಾಜರ ಮುಂದೆ ಕೈಕಟ್ಟಿಕೊಂಡು ನಿಲ್ಲುತ್ತಾರೆ. ಅಲ್ಲಿ ಕಣ್ಣು ಮಿಸುಕುವುದಕ್ಕೂ ಅವಕಾಶವಿಲ್ಲ. ಈಗ ಅರಸರು ನೇರವಾಗಿ ತೆನಾಲಿ ರಾಮನ ಮಗನನ್ನು ಪ್ರಶ್ನಿಸುತ್ತಾರೆ.'ಮಗು ನೀನು ರಾತ್ರಿ ಏನು ಊಟ ಮಾಡಿದೆ ಎಂಬ ನೆನಪಿದೆಯೇ?'. ಹುಡುಗ ಹೇಳುತ್ತಾನೆ 'ಹಾಂ..ನೆನಪಿದೆ. ಅನ್ನ ಅದಕ್ಕೆ ಬದನೇಕಾಯಿ ಗೊಜ್ಜು. ಬದನೇಕಾಯಿ ಗೊಜ್ಜು ಬಹಳ ಅದ್ಭುತವಾಗಿತ್ತು, ಅಂತಹ ಗೊಜ್ಜನ್ನು ಹಿಂದೆಲ್ಲೂ ನಾನೂ ತಿಂದದ್ದೇ ಇಲ್ಲ'. ಕೃಷ್ಣದೇವರಾಯರ ಕಣ್ಣು ಕೆಂಪಗಾಗುತ್ತದೆ. ತೆನಾಲಿ ರಾಮನ ಕಡೆ ತಿರುಗಿ 'ಸುಳ್ಳು ಬೊಗಳುವ ನಿನಗೆ...' ಎಂದು ಮಾತು ಮುಂದುವರಿಸುವ ಮೊದಲೇ ತೆನಾಲಿ ರಾಮ 'ಪ್ರಭುಗಳು ಮನ್ನಿಸಬೇಕು, ನಾನು ನೆನ್ನೆ ತಮ್ಮ ಭೋಜನ ಕೂಟದಲ್ಲಿ ತಿಂದ ಬದನೆಕಾಯಿ ಗೊಜ್ಜಿನ ಬಗ್ಗೆ ಮನೆಯಲ್ಲಿ ವಿವರಿಸುತ್ತಿದ್ದೆ. ಹಾಗಾಗಿ ಎಲ್ಲೋ ಅದೇ ಇವನಿಗೆ ಕನಸಿನಲ್ಲಿ ಬಂದಿರಬೇಕು. ಅರಮನೆಯಲ್ಲಿ ಬೆಳೆದ ಬದನೆಕಾಯಿಯೆಂದರೇನು? ಅದನ್ನು ಮುಟ್ಟುವ ಯೋಗ್ಯತೆ ನನಗೆಲ್ಲಿಂದ ಬರಬೇಕು' ಎಂದು ನಾಟಕವಾಡಿಬಿಟ್ಟನು. 'ಅದೂ ಸಾಲದೇ ಇವನಿಗೆ ವಿಪರೀತ ಸ್ವಪ್ನ ಬಾಧೆಯಿದೆ, ಕನಸಿನಲ್ಲಿ ನಡೆದಿದ್ದೆಲ್ಲ ನಿಜವೆಂದುಕೊಂಡು ನಮಗೆ ಎಷ್ಟೋ ಬಾರಿ ತಲೆಕೆಡಿಸಿದ್ದಾನೆ' ಎಂದು ಬಿಟ್ಟ. ಈ ಮಾತು ಕೇಳಿದ ಮೇಲೆ ರಾಜರಿಗೆ ಹುಡುಗನ ಮಾತಿನ ಮೇಲೆ ಮತ್ತೆ ಅನುಮಾನವುಂಟಾಯಿತು.

ಆಗ ಹುಡುಗನನ್ನು ಹತ್ತಿರಕ್ಕೆ ಕರೆದ ಮಹಾರಾಜರು 'ಮಗೂ ನೆನ್ನೆ ರಾತ್ರಿ ನೀನು ಏನೇನು ಮಾಡಿದೆ ಹೇಳುವೆಯಾ?' ಎನ್ನುತ್ತಾರೆ. ಹುಡುಗ ಎಲ್ಲವನ್ನೂ ವಿವರಿಸಲು ಮುಂದಾಗುತ್ತಾನೆ, 'ನೆನ್ನೆ ಶಾಲೆಯಿಂದ ಬಂದ ತಕ್ಷಣ ಆಟವಾಡಿ ನಂತರ ಮನೆಗೆಲಸಗಳೆನ್ನೆಲ್ಲಾ ಮುಗಿಸಿ ಉಪ್ಪರಿಗೆಯ ಮೇಲೆ ವಿಶ್ರಾಂತಿಗೆಂದು ಮಲಗಿದ್ದೆ ಹಾಗೇ ನಿದ್ರೆ ಹತ್ತಿಬಿಟ್ಟಿತ್ತು. ಅನಂತರ ನನಗೆ ಎಚ್ಚರವಾಗಿದ್ದು ಮಳೆ ಬಂದ ನಂತರವೇ. ಮಳೆಯಿಂದ ನೆನೆದು ಒದ್ದೆಯಾದ ನನ್ನನ್ನು ನನ್ನ ತಾಯಿ ಒಳಗೆ ಕರೆದು ಊಟ ಮಾಡಿಸಿ ಮಲಗಿಸಿದಳು' ಎಂದ. ಆದರೆ ನಿಜದಲ್ಲಿ ತಿಂಗಳಾನುಗಟ್ಟಲೆಯಿಂದ ವಿಜಯನಗರದಲ್ಲಿ ಮಳೆಯೇ ಬಂದಿರಲಿಲ್ಲ. ಇದನ್ನು ಕೇಳಿಸಿಕೊಂಡ ಕೃಷ್ಣದೇವರಾಯನು ಹುಡುಗನು ನಿಜವಾಗಿಯೂ ಕನಸು ಕಂಡಿರಬಹುದೆಂದೂ, ಸುಮ್ಮನೆ ತೆನಾಲಿ ರಾಮನ ಮೇಲೆ ಅನುಮಾನ ಪಡುವುದು ತಪ್ಪೆಂದು  ತೆನಾಲಿ ರಾಮಕೃಷ್ಣನ ಶಿಕ್ಷೆಯಿಂದ ತಪ್ಪಿಸಿ ಬಿಟ್ಟು ಬಿಟ್ಟರು. ಹೀಗೆ ತೆನಾಲಿ ರಾಮಕೃಷ್ಣನು ತನಗೆ ಒಲಿದಿದ್ದ ಆಪತ್ತೊಂದನ್ನು ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ನಿವಾರಿಸಿಕೊಂಡನು.

ಸೋಮವಾರ, ಅಕ್ಟೋಬರ್ 10, 2016

ಕಾಲಗರ್ಭದಲ್ಲಿ ಕಲಾವತಿ ನಗರ

ಕೆಲವು ದಿನಗಳ ಹಿಂದೆ ವಿಕಿಪೀಡಿಯದಲ್ಲಿ 'ಮಾಗಡಿ' ಕನ್ನಡ ಪುಟವನ್ನು ಬರೆಯುತ್ತಿದ್ದೆ. ಮಾಗಡಿಯ ಸುತ್ತ ಮುತ್ತಲಿದ್ದ ಕೋಟೆ,ಕೊತ್ತಲ,ದೇಗುಲ,ಇತಿಹಾಸ ಪ್ರಸಿದ್ಧ ಸ್ಥಳಗಳನ್ನೆಲ್ಲ ಒಳಗೂಡಿಸಿ ಮಾಗಡಿ ಪುಟವನ್ನು ಚೊಕ್ಕಗೊಳಿಸುವ ಸನ್ನಾಹದಲ್ಲಿ ಗೂಗಲ್ ನಲ್ಲಿ ಮಾಗಡಿಯ ಸುತ್ತಲ ಸ್ಥಳಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದೆ. ನಾನು ಮೂಲತಃ ಅಲ್ಲಿನವನೇ ಆದ್ದರಿಂದ ಅಲ್ಲಿನ ಬಹುತೇಕ ಸ್ಥಳಗಳ ಬಗ್ಗೆ ನನಗಾಗಲೇ ತಿಳಿದಿದೆ, ಆದರೆ ಕೆಲವು ತಿಳಿದಿಲ್ಲದವುಗಳ ಬಗ್ಗೆ ಕಣ್ಣಾಡಿಸುತ್ತಿದ್ದೆ. ಆಗ ಕಣ್ಣಿಗೆ ಬಿದ್ದ ಮತ್ತೊಂದು ಐತಿಹಾಸಿಕ ಸ್ಥಳ 'ಕಲ್ಯ'. ಹಿಂದೊಂದು ದಿನ 'ಕಲಾವತಿ ನಗರ'ವೆಂದು ಕರೆಸಿಕೊಳ್ಳುತ್ತಿದ್ದ, ಗಂಗರು ಆಳುತ್ತಿದ್ದ ಕಾಲಕ್ಕೆ ಜೈನ, ಭೌದ್ಧ, ವೈಷ್ಣವ ಹಾಗು ಶೈವ ಧರ್ಮಗಳನ್ನು  ಒಳಗೊಂಡು ಸರ್ವ ಧರ್ಮ ಸಮನ್ವಯ ಮೆರೆದಿದ್ದ ಕಲ್ಯ ಗ್ರಾಮ ಇದೀಗ ಅದ್ಯಾವುದರ ಪರಿವೆಯೂ ಇಲ್ಲದಂತೆ ಎಲ್ಲವನ್ನು ಕಾಲದ ತೆಕ್ಕೆಗೆ ಸೇರಿಸಿ ಸುಮ್ಮನಾಗಿಹೋಗಿದೆ. ಅಲ್ಲಿರುವ ಎಷ್ಟೋ ಇಂದಿನ ಪೀಳಿಗೆಯವರಿಗೆ ಅಲ್ಲೇನು ಇತಿಹಾಸವಿದೆ ಎಂಬ ಅರಿವಿಲ್ಲ. ಇನ್ನುಳಿದ ಕೆಲವು ಹಳೆ ತಲೆಗಳಿಗೆ ಅಲ್ಲಿನ ಇತಿಹಾಸದ ಕೊಂಚ ಮಾಹಿತಿಯಿದ್ದರೂ ಅದು ತಮ್ಮ ಹಿರೀಕರಿಂದ ಬಾಯಿಂದ ಬಾಯಿಗೆ ಹರಿದು ಬಂದ ಜಾನಪದ ಇತಿಹಾಸದಂತಿರುವುದರಿಂದ ಸತ್ಯವೇನು ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲದಂತಾಗಿದೆಹೀಗಿರುವ ಕಲ್ಯ ಗ್ರಾಮವನ್ನು ಶಾಸನಗಳಲ್ಲಿ ಕಾವ್ಯಗಳಲ್ಲಿ ಕಲ್ಯ, ಕಲ್ಲೆಹ, ಕಲಾವತಿ ನಗರ, ಕಲಾವತಿ ಪಟ್ಟಣವೆಂದು ನಾನಾ ಹೆಸರುಗಳಿಂದ ಕರೆಯಲಾಗಿದೆ.

ಇತಿಹಾಸ:
ಕರ್ನಾಟಕ ದಕ್ಷಿಣ ಭಾಗದಲ್ಲಿ ಆಡಳಿತ ನಡೆಸುತ್ತಿದ್ದ ಗಂಗರು ಜೈನ ಧರ್ಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಗಂಗರ ಕಾಲದಲ್ಲಿ ಅವರ ಆಳ್ವಿಕೆಗಳ ಪ್ರದೇಶಗಳಲ್ಲಿ ಅನೇಕ ಜೈನ ಮಂದಿರಗಳುಬಸದಿಗಳು ರೂಪುಗೊಂಡವು. ಇದಾಗಿ ಕಾಲಾನಂತರದಲ್ಲಿ ಗಂಗರ ಆಡಳಿತ ಕೊನೆಯಾಗಿ ಹಿಂದೂ ಸಾಮ್ರಾಜ್ಯ ಪುನಶ್ಚೇತನಕ್ಕಾಗಿಯೇ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ರೂಪುಗೊಂಡಿತ್ತು. ಶೃಂಗೇರಿ  ಜಗದ್ಗುರುಗಳಾದ ವಿದ್ಯಾರಣ್ಯರ ಆಜ್ಞೆಯ ಮೇರೆಗೆ ವಿಜಯನಗರ ಸಾಮ್ರಾಜ್ಯ ತಲೆಯೆತ್ತಿ ನಿಂತಿತ್ತು. ಸರ್ವ ಧರ್ಮಗಳನ್ನು ಸಮಾನ ದೃಷ್ಟಿಯಲ್ಲಿ ಕಾಣುತ್ತಿದ್ದ ವಿಜಯನಗರದ ಅರಸು ಬುಕ್ಕರಾಯರಿಗೆ ಮುಂದೆ ತಲೆನೋವಾಗಿ ಪರಿಣಮಿಸಿದ್ದು ಆಗಾಗ್ಗೆ ಭುಗಿಲೇಳುತ್ತಿದ್ದ ಜೈನ-ವೈಷ್ಣವ ಕಲಹಗಳು. 

ಮುಸ್ಲಿಂ ದೊರೆಗಳು ನಿಧಾನಕ್ಕೆ ಭಾರತದ ಒಂದೊಂದೇ ಸಾಮ್ರಾಜ್ಯವನ್ನು ನುಂಗಿ ನೊಣವಿಕೊಂಡು ಸಾರ್ವಭೌಮರಾಗುತ್ತಿದ್ದ ಕಾಲವದು, ಇಂತಹ ಪರಿಸ್ಥಿತಿಯಲ್ಲಿ ವಿಜಯನಗರದಲ್ಲಿ ಮತೀಯ ಆಂತರಿಕ ಕಲಹಗಳು ನಡೆದು ಆಂತರಿಕ ಭದ್ರತೆಗೆ ಧಕ್ಕೆಯಾದರೆ ವಿಜಯನಗರದ ವೈರಿಗಳಿಗೆ ಇನ್ನೂ ಸುಲಭವಾಗುವುದೆನ್ನುವ ವಿಚಾರ ಮಕ್ಕಳಿಗೂ ತಿಳಿಯುವಂತಹುದು. ಕೂಡಲೇ ಎಚ್ಚೆತ್ತ ಬುಕ್ಕರಾಯರು ಕನ್ನಡ ದಕ್ಷಿಣ ಪ್ರಾಂತದ ವೈಷ್ಣವ-ಜೈನ ನಾಯಕರನ್ನು ಕರೆಯಿಸಿ ಒಬ್ಬರ ಕೈ ಒಬ್ಬರು ಹಿಡಿದುಕೊಳ್ಳುವಂತೆ ಮಾಡಿ ಸಂಧಾನ ಏರ್ಪಡಿಸಿದ್ದರು. ವಿಜಯನಗರ ಇತಿಹಾಸದಲ್ಲಿ ಉಂಟಾದ ಮಹಾ ಸಂಧಾನ ದಾಖಲಾಗಿರುವುದು ಎರಡೇ ಶಾಸನಗಳಲ್ಲಿ ಮೊದಲನೆಯದು ಮಾಗಡಿ ತಾಲೂಕಿನ ಕಲ್ಯ ಗ್ರಾಮದ ಶಾಸನದಲ್ಲಿ, ಎರಡನೆಯದು ಜಗತ್ಪ್ರಸಿದ್ಧ ಶ್ರವಣಬೆಳಗೊಳದ ಶಾಸನದಲ್ಲಿ. ಭಾರತದ ದೇಶದ ಧೀಮಂತ ಹಿಂದೂ ಸಾಮ್ರಾಜ್ಯ ವಿಜಯನಗರದಲ್ಲಿ ಸರ್ವಧರ್ಮ ಸಮನ್ವಯತೆಗೆ ಕೈಗೊಂಡ ಮಹತ್ಕಾರ್ಯಗಳಲ್ಲಿ ಇದೂ ಒಂದಾಗಿರುವುದರಿಂದ ವಿಜಯನಗರದ ಅಧ್ಯಯನಕಾರರಿಗೆ ಶಾಸನಗಳ ಅಧ್ಯಯನವೂ ಬಹು ಮುಖ್ಯವಾಗುತ್ತದೆ.

ಜೈನ- ವೈಷ್ಣವ ಮತೀಯ ಕಲಹ ಸಂಬಂಧಿ ಶಾಸನವನ್ನು ಕ್ರಿ. 1290 ಶ್ರಾವಣದ ಎರಡನೇ ಸೋಮವಾರ ಕಲ್ಯ ಗ್ರಾಮದಲ್ಲಿ ಹಾಕಿಸಲಾಗಿದೆ. ಅದಾಗಿ ಐದು ವಾರಗಳ ನಂತರ ಕಲ್ಯ ಶಾಸನದ ಸುಲಭ ರೂಪದ ಶಾಸನವೊಂದನ್ನು ಶ್ರವಣಬೆಳಗೋಳದಲ್ಲಿ ಹಾಕಿಸಲಾಗಿದೆ

ಶಾಸನಗಳು ಒಳಗೊಂಡ ವಿಚಾರವಿಷ್ಟೇ, ವೈಷ್ಣವರು ಅಧಿಕವಾಗಿ ಪ್ರಾಬಲ್ಯ ಮೆರೆದಿದ್ದ ಕಾಲದಲ್ಲಿ ಅವರ ಉಪಟಳಕ್ಕೆ ಈಡಾದ ಜೈನರು ವಿಜಯನಗರದ ಅರಸು ಬುಕ್ಕರಾಯರ ಬಳಿ ಹೋಗಿ ವೈಷ್ಣವರಿಂದ ತಮಗಾಗುತ್ತಿದ್ದ ಅನ್ಯಾಯವನ್ನು ವಿವರಿಸುತ್ತಾರೆ. ಶ್ರವಣಬೆಳಗೊಳದ ಶಾಸನ ಬರಿ ವೈಷ್ಣವರಿಂದ ಜೈನರಿಗೆ ಅನ್ಯಾಯವಾಯಿತೆಂದು ಬಣ್ಣಿಸಿದ್ದರೆ, ಕಲ್ಯ ಶಾಸನವು ಮುಂದುವರೆದು ವೈಷ್ಣವರು ಜೈನರನ್ನು ನಿಷ್ಕಾರುಣವಾಗಿ ಕೊಂದರು ಎಂದೇ ನೇರವಾಗಿ ಹೇಳಿದೆ. ಶಾಸನವನ್ನು ಕಲ್ಯದಲ್ಲಿ ಹಾಕಿಸಲು ಕಾರಣವೂ ಇಲ್ಲದಿಲ್ಲಬುಕ್ಕರಾಯನಲ್ಲಿಗೆ ದೂರು ಕೊಡಲು ಹೋದ ಜೈನ ಪ್ರಮುಖ ಮುಖಂಡರಲ್ಲಿ ಬೆಳಗೊಳ, ಆನೆಗೊಂದಿ, ಕಲ್ಯ , ಪೆನುಕೊಂಡ, ಹೊಸ ಪಟ್ಟಣ ಮುಂತಾದ ಊರುಗಳ ಜೈನ ಮುಖಂಡರಿದ್ದರು. ಜೈನ ನಿಯೋಗಕ್ಕೆಲ್ಲ ಕಲ್ಯದ 'ಬುಸುವಿ ಸೆಟ್ಟಿ' ಎಂಬಾತನೇ ನಾಯಕನಾಗಿದ್ದನು. ಕಾರಣದಿಂದಲೇ ತನ್ನ ಊರಿನಲ್ಲಿ ಶಾಸನ ಹಾಕಿಸಿದ್ದಾನೆ ಎಂಬ ಅನಿಸಿಕೆ ಇದೆ.

ಜೈನರ ಅಹವಾಲನ್ನೆಲ್ಲ ಕೇಳಿಸಿಕೊಂಡ ಬುಕ್ಕರಾಯನು ಹದಿನೆಂಟು ವೈಷ್ಣವ ಮಠಾಧಿಪತಿಗಳನ್ನು ವಿಜಯನಗರಕ್ಕೆ ಕರೆಯಿಸಿ ಅವರಿಂದಲೂ ಕೆಲ ವಿಚಾರಗಳನ್ನು ಗ್ರಹಿಸಿ ಕೊನೆಗೆ ತೀರ್ಪು ಕೊಡುತ್ತಾನೆ. ಮೂಲತಃ ಜೈನ ಹಾಗು ವೈಷ್ಣವ ಧರ್ಮದ ಬುನಾದಿಗಳು ಒಂದೇ ಆಗಿದ್ದು ಇನ್ನು ಮುಂದೆ ಕಲಹ ಕೂಡದು ಎಂದು ಕಟ್ಟಾಜ್ಞೆ ಹೊರಡಿಸುತ್ತಾನೆ. ಹಾಗು ಇನ್ನು ಮುಂದೆ ಜೈನರ ಬಸದಿಗಳ ರಕ್ಷಣೆಯ ಹೊಣೆಯನ್ನು ವೈಷ್ಣವರಿಗೆ ವಹಿಸುತ್ತಾನೆ. ಜೈನ ಬಸದಿಗಳಲ್ಲಿ ಪೂರ್ವಕಾಲದಿಂದಲೂ ಚಾಲ್ತಿಯಲ್ಲಿದ್ದ ಪಂಚ ಮಹಾವಾದ್ಯಗಳಿಗೂ ಹಾಗು ಕಲಶಗಳ ಗೌರವಕ್ಕೆ ಅಡ್ಡಿಪಡಿಸಬಾರದೆಂದು ಆಜ್ಞಾಪಿಸುತ್ತಾನೆ. ಆಜ್ಞೆಗೆ ಕಟ್ಟು ಬಿದ್ದ ಉಭಯ ಬಣದವರೂ ಬುಕ್ಕರಾಯನ ಷರತ್ತುಗಳಿಗೆ ತಲೆಯಾಡಿಸಿ ಹಿಂದಿರುಗುತ್ತಾರೆ. ಅದೇ ಸಂಬಂಧ ವೈಷ್ಣವರು ಜೈನರಲ್ಲಿ 'ವರ್ಷಕ್ಕಿಷ್ಟು' ಎಂಬ ಮಾದರಿಯಲ್ಲಿ ಹಣ ಸಂಗ್ರಹ ಮಾಡಿ ಅದರಿಂದ ಜೈನ ಬಸದಿಗಳಿಗೆ ಕಾವಲುಗಾರರನ್ನು ನೇಮಿಸುತ್ತಾರೆ. ರಕ್ಷಣೆಗೆ ನೇಮಕಾವಾದವರು ವೈಷ್ಣವರ  ಕಡೆಯವರೇ ಆದರೆ ಹಣ ಕೊಡುವುದು ಮಾತ್ರ ಜೈನರು ಎಂಬಂತಾಯಿತು. ವಿಧಿಯಿಲ್ಲದೆ ಎಲ್ಲ ಜೈನರು ಇದನ್ನು ಒಪ್ಪಿಕೊಳ್ಳಲೇ ಬೇಕಾಯಿತು.ಮುಂದೆ ಕಲ್ಯದ ಬುಸುವಿ ಸೆಟ್ಟಿ ವಹಿಸಿದ್ದ ಪಾತ್ರದ ಕುರಿತು ಸಂತೋಷ ಭರಿತರಾದ ಉಭಯ ಮತದ ನಾಯಕರು ಬುಸುವಿ ಸೆಟ್ಟಿಗೆ 'ಸಂಘ ನಾಯಕ' ಎಂಬ ಬಿರುದು ಪ್ರಧಾನ ಮಾಡಿದರು ಎಂದು ಉಲ್ಲೇಖವಾಗಿದೆ.

ಕಲ್ಯದಲ್ಲಿ ಸದ್ಯ ಲಭ್ಯವಿರುವ ಶಾಸನದಲ್ಲಿ ತೆಂಗಿನ ಕಾಯಿ ಮಾವಿನ ಎಲೆಗಳಿಂದ ಅಲಂಕೃತವಾದ ಕಲಶವನ್ನು ಮಾತ್ರ ಕೆತ್ತಲಾಗಿದ್ದು, ಇದೇ ಶಾಸನದ ಶ್ರವಣಬೆಳಗೊಳ ಆವೃತ್ತಿಯಲ್ಲಿ ಶಾಸನದಲ್ಲಿ ಕಳಶದೊಂದಿಗೆ ವೈಷ್ಣವರ ಶಂಖ ಚಕ್ರ ತಿರುನಾಮಗಳನ್ನು ಕಾಣಬಹುದಾಗಿದೆ. ಜೈನ-ವೈಷ್ಣವ ಕಲಹಗಳು ತಣ್ಣಗಾಗಲು ಬುಕ್ಕರಾಯ ನಾಂದಿ ಹಾಡಿದ್ದರೂ ಅದು ಹೆಚ್ಚು ಕಾಲ ಬಾಳಲಿಲ್ಲ. ಮತೀಯ ಕಲಹ ಮೇರೇ ಮೀರಿದಾಗ ಜೈನ ಬಸದಿಗಳ ಮೇಲೂ, ವೈಷ್ಣವರ ಮಂದಿರಗಳ ಮೇಲೂ ದಾಳಿಗಳಾದವೂ. ಹಲವಾರು ದೇವಾಲಯಗಳು, ಬಸದಿಗಳು ಭಗ್ನವಾದವು. ಅದಕ್ಕೆ ಸಾಕ್ಷಿಯಾಗಿ ಭಗ್ನಾವಶೇಷಗಳು ಇಂದಿಗೂ ಶ್ರವಣಬೆಳಗೊಳ ಹಾಗು ಕಲ್ಯ ದಲ್ಲಿ ಕಾಣ ಸಿಗುತ್ತವೆ.

ಕಲ್ಯದಲ್ಲಿ ಹದಿಮೂರನೇ ಶತಮಾನದ ಶಾಸನವಿರುವ ಪಾರ್ಶ್ವನಾಥ ವಿಗ್ರಹವಿದೆ. ಕಲ್ಯದ ನಿಸಿದಿ ಕಲ್ಲು, ಜೈನ ವಿಗ್ರಹ, ಬಸದಿ ಗುಂಡಿ ಎಂದು ಕರೆಯುವ ಜಾಗ, ಮುಕ್ಕೊಡೆ ಶಿಲ್ಪಗಳು, ಮಾನಗಂಬ ಇವೆ ಮೊದಲಾದ ಕುರುಹುಗಳು ಕಲ್ಯ ಹಿಂದೊಮ್ಮೆ ಬಹು ದೊಡ್ಡ ಜೈನ ಕೇಂದ್ರವಾಗಿತ್ತು ಎಂಬುದನ್ನು ಎತ್ತಿ ತೋರಿಸುತ್ತಿವೆಕಲ್ಯದ ಬಸದಿಗುಂಡಿ ಎಂಬ ಜಾಗ ಇದೀಗ ಬರೀ ತಿಪ್ಪೆಗಳಿಂದ ಕೂಡಿದ ಜಾಗವಾಗಿದ್ದು ಹಿಂದೊಮ್ಮೆ ಅಲ್ಲಿ ಐದು ಜೈನರ ಬಸದಿಗಳಿದ್ದವು ಎಂದು ತಿಳಿದು ಬಂದಿದೆ. ಕಲ್ಯದ ಸಮೀಪವಿರುವ ಹೂಜಿಗಲ್ಲು ಎಂಬ ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ಜೈನ ಶಿಲ್ಪಗಳಿರುವ ಬಂಡೆಯೊಂದಿದೆ. ಎಲ್ಲ ಪುರಾವೆಗಳೂ ಕಲ್ಯದಲ್ಲಿ ಜೈನ ಮಂದಿರಗಳ ಭಾರಿ ವಿನಾಶ ನಡೆದಿದೆ ಎಂಬುದನ್ನು ಪುಷ್ಟೀಕರಿಸುತ್ತವೆ. ತತ್ಸಮಯದಲ್ಲಿಯೇ ಜೈನರಿಂದ ವೈಷ್ಣವರ ದೇವಾಲಯಗಳ ಮೇಲೂ ಪ್ರತೀಕಾರಾರ್ಥವಾಗಿ ದಾಳಿಗಳು ನಡೆದಿವೆ ಎಂದು ಅಂದಾಜಿಸಲಾಗಿದ್ದು ಮಾಗಡಿಯ ರಂಗನಾಥ ಸ್ವಾಮಿ ಕಲ್ಯದಲ್ಲಿತ್ತೆಂದು ಹೇಳಲಾಗುತ್ತಿದೆ. ಆದ ಕಾರಣದಿಂದಲೇ ಇಂದಿಗೂ ದೇವರ ಜಾತ್ರೆಯಂದು ನಡೆಯುವ ರಥೋತ್ಸವದಲ್ಲಿ ಕಲ್ಯ ಗ್ರಾಮಕ್ಕೆ ಮೊದಲ ಪ್ರಸಾದ ರವಾನೆಯಾಗುತ್ತದೆ

ಕಲ್ಯದ ಬೆಟ್ಟದ ಬಳಿ ಈಗ ಒಂದು ಗರುಡಗಂಬ ಮಾತ್ರ ಕಾಣಸಿಗುತ್ತದೆ. ಹಿಂದೆ ಅದು ವರದರಾಜ ಸ್ವಾಮಿ ದೇವಸ್ಥಾನವಾಗಿದ್ದು ವೈಷ್ಣವರ ಆರಾಧನಾ ಕೇಂದ್ರವಾಗಿತ್ತು. ಇದು ಮತೀಯ ಕಲಹದ ವೈಷ್ಣವರ ವಿನಾಶವಾದರೆ, ಈಗಲೂ ಕಲ್ಯ ಗ್ರಾಮದಲ್ಲಿ 'ಉಷ್ಟಮರು' ಎಂಬ ವೈಷ್ಣವ ಮತದ ಶೂದ್ರ ಅನುಯಾಯಾಯಿಗಳು ವಾಸಿಸುತ್ತಿದ್ದಾರೆ. ಆದರೆ ಸದ್ಯ ಜೈನರು ಯಾರು ಅಲ್ಲಿ ವಾಸವಿಲ್ಲ. ಮತೀಯ ಕಲಹವಾಗಿ ಜೈನರು ಕಲ್ಯದಿಂದ ಕಾಲ್ಕಿತ್ತು ಸಮೀಪದ ಸಂಕಿಘಟ್ಟಕ್ಕೆ ಹೋಗಿ ನೆಲೆಸಿರಬಹುದೆಂದು ನಂಬಲಾಗಿದೆ. ಸಂಕಿಘಟ್ಟದಲ್ಲಿ ಈಗಲೂ ಜೈನರಿದ್ದಾರೆ. ಜೈನ-ವೈಷ್ಣವರ ಕಣ್ಗಾವಲಿಗೆಂದೇ ಬುಕ್ಕರಾಯ ಅಧಿಕಾರಿಯೊಬ್ಬನನ್ನು ಕಲ್ಯದಲ್ಲಿ ನೇಮಿಸಿದ್ದನೆಂದು 1386 ಶಾಸನವೊಂದು ತಿಳಿಸುತ್ತದೆ.

ಹದಿಮೂರನೇ ಶತಮಾನದ ಆಸುಪಾಸಿಗೆ ಕಲ್ಯದಲ್ಲಿ ಜೈನ-ವೈಷ್ಣವ ಕಲಹ ಭುಗಿಲೆದ್ದು ಗ್ರಾಮ ಸರ್ವನಾಶವಾಗುತಿರಲು ಅತ್ತ ಕಲ್ಯಾಣದಲ್ಲಿ ಬಸವೇಶ್ವರರ ನಿರ್ಗಮನವಾಗಿತ್ತು. ವೀರಶೈವ ಪಂಥದವರನ್ನು ನಾನಾ ಹಿಂಸೆಗೆ ಗುರಿ ಮಾಡುತ್ತಿದ್ದ ಕ್ರಾಂತಿ ಸಮಯದಲ್ಲಿ ಕಲ್ಯಾಣದ ಶರಣರೆಲ್ಲ ಅಲ್ಲಿಂದ ಹೊರಟು ಕನ್ನಡ ಭಾಷಾ ಪ್ರಾಂತ್ಯಗಳಲ್ಲಿ ವಿವಿಧ ಭಾಗಗಳಲ್ಲಿ ಚದುರಿಹೋದರು. ಅದೇ ಸಮಯದಲ್ಲಿ ಕಲ್ಯದ ಬೆಟ್ಟದಲ್ಲಿ 'ಸರ್ವಶೀಲೆ ಚೆನ್ನಮ್ಮ' ಎಂಬ ವೀರಶೈವ ಧರ್ಮದ ಸಾಧ್ವಿ ಶರಣೆ ಬದುಕಿದ್ದಳು ಎನ್ನುವುದು ಪಾಲ್ಕುರಿಕೆ ಸೋಮೇಶ್ವರ ಪುರಾಣದಿಂದ ತಿಳಿದು ಬರುತ್ತದೆ. ಈಗಲೂ ಕಲ್ಯದ ಬೆಟ್ಟದಲ್ಲಿ ಚೆನ್ನಮ್ಮನ ಗದ್ದುಗೆ ಎಂದು ಕರೆಸಿಕೊಳ್ಳುವ ಚೆನ್ನಮ್ಮನ ಸಮಾಧಿ ಇದೆ. ಕಲ್ಯದ ಬೆಟ್ಟ ವೀರಶೈವ ಧರ್ಮದ ಶರಣರಿಗೆ ಆಶ್ರಯ ನೀಡಿತ್ತು ಎಂಬುದು ಇಲ್ಲಿನ ಶರಣ ಸಂಕುಲದ ಬಗ್ಗೆ ಗಮನ ಹರಿಸಿದಾಗ ತಿಳಿಯುತ್ತದೆ. ಇದೀಗ ಕಲ್ಯ ಬೆಟ್ಟದಲ್ಲಿ ವೀರಶೈವ ಧರ್ಮದವರು ಯಾರು ಇಲ್ಲದಿದ್ದರೂ ಸಮೀಪದಲ್ಲಿರುವ ಕಲ್ಯ ಗ್ರಾಮ, ಉಪ್ಪಾರ್ತಿ ಹಾಗು ಹೂಜಿಗಲ್ಲುಗಳಲ್ಲಿ ವೀರಶೈವರು ನೆಲೆಸಿದ್ದಾರೆ.

ಕಲ್ಯದಲ್ಲಿ ಆಗಿ ಹೋದ ಶರಣ ಪ್ರಮುಖರಲ್ಲಿ ಅತೀ ಮುಖ್ಯವಾದವರೆಂದರೆ ಪಾಲ್ಕುರಿಕೆ ಸೋಮನಾಥರು. ಹನ್ನೆರಡನೇ ಶತಮಾನಕ್ಕೆ ಸೇರಿದ  ಪಾಲ್ಕುರಿಕೆ ಸೋಮನಾಥರ ಮಾತೃ ಭಾಷೆ ತೆಲುಗು. ಕಲ್ಯಾಣದಲ್ಲಿ ನಡೆಯುತ್ತಿದ್ದ ಶರಣ ಕ್ರಾಂತಿಗೆ ಮನಸೋತು ಬಸವ ತತ್ವ ಪಾಲನೆಯಲ್ಲಿ ತೊಡಗಿಕೊಂಡ ಸೋಮನಾಥರು ಬಸವಣ್ಣನವರ ಕನ್ನಡದ್ಲಲಿದ್ದ ವಚನಗಳನ್ನು ತೆಲುಗು ಭಾಷೆಗೆ ಅನುವಾದಿಸಿ ಆಂಧ್ರ ಸೀಮೆಯಲ್ಲೂ ಬಸವ ತತ್ವ ಪಸರಿಸಲು ನೆರವಾಗಿದ್ದರು. ಪಾಲ್ಕುರಿಕೆ ಸೋಮನಾಥರು ಬಸವಣ್ಣನವರ ಸಮಕಾಲೀನರೇ ಎಂದು ಅಂದಾಜಿಸಲಾಗಿದೆ. ಈಗಿನ ತೆಲಂಗಾಣದ ವಾರಂಗಲ್ ಬಳಿಯ ಪಾಲ್ಕುರಿಕೆ ಎಂಬ ಊರಿನಲ್ಲಿ ಜನಿಸಿದ ಪಾಲ್ಕುರಿಕೆ ಸೋಮನಾಥ ಬಸವ ತತ್ವ ಪ್ರಚಾರ ಮಾಡುತ್ತಾ ಕಲ್ಯಕ್ಕೆ ಬಂದಿದ್ದಿರಬಹುದೆಂದು ಹಾಗು ಕಲ್ಯಾಣದಲ್ಲಿ ಶರಣರಿಗೆ ಒಲಿದ ಆಪತ್ತನ್ನು ಕಂಡು ಕಲ್ಯದಲ್ಲಿಯೇ ನೆಲೆ ನಿಂತರೆಂದು ನಂಬಲಾಗಿದೆ

ಕನ್ನಡದ ಬಸವ ಪುರಾಣವನ್ನು ತೆಲುಗಿಗೆ ಅನುವಾದಿಸಿರುವ ಪಾಲ್ಕುರಿಕೆ ಸೋಮನಾಥರು ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ತಾವೂ ವಚನಗಳನ್ನು ರಚಿಸಿದ್ದಾರೆ. ಇವರು ಸಂಸ್ಕೃತ ಭಾಷೆಯ ಮೇಲೂ ಉತ್ತಮ ಹಿಡಿತ ಹೊಂದಿದ್ದರೆಂದು ಹಾಗು ಭಾಷೆಯಲ್ಲಿಯೂ ಬಸವ ತತ್ವಕ್ಕೆ ಸಂಬಂಧಿಸಿದ ಹಲವು ಗ್ರಂಥಗಳನ್ನು ಬರೆದಿದ್ದಾರೆಂದು ತಿಳಿದುಬಂದಿದೆ. ಕಲ್ಯದ ಬೆಟ್ಟದಲ್ಲಿ ಈಗ ವೀರಶೈವ ಮಠವೊಂದಿದ್ದು ಅದರ ಹೊರಗೆ ನಾಲ್ಕು ಗದ್ದುಗೆಗಳಿವೆ, ಅದರ ಪೈಕಿ ಒಂದು ಗದ್ದುಗೆಯ ಮೇಲೆ ಬಸವನ ವಿಗ್ರಹವಿರಿಸಲಾಗಿದೆ. ಇದನ್ನೇ ಪಾಲ್ಕುರಿಕೆ ಸೋಮನಾಥರ ಸಮಾಧಿಯೆಂದು ನಂಬಲಾಗಿದೆ. ಚೆನ್ನ ಬಸವ ಪುರಾಣದ ಪ್ರಕಾರವೂ ಪಾಲ್ಕುರಿಕೆ ಸೋಮನಾಥರು ಸತ್ತಿದ್ದು ಇದೆ ಕಲ್ಯದಲ್ಲಿ ಎನ್ನುವುದು ಸೋಮನಾಥರ ಸಮಾಧಿ ಎಂದು ನಂಬಲಾದ ಸ್ಥಳಕ್ಕೆ ಮತ್ತಷ್ಟು ಬಲ ಕೊಡುತ್ತದೆ. ಈಗಲೂ ವೀರಶೈವರು ಇಲ್ಲಿ ವರ್ಷಕ್ಕೊಮ್ಮೆ ಸೋಮನಾಥ ಆರಾಧನೆಯನ್ನು ಆಚರಿಸುತ್ತಾರೆ.

ಕಲ್ಯದಲ್ಲಿ ಕಲ್ಲೇಶ್ವರ ಗುಡಿಯೊಂದಿದ್ದು ಊರಿಗೆ ಕಲ್ಲೆಹ/ಕಲ್ಯ ಎಂಬ ಹೆಸರು ಬರಲು ದೇವೆರೆ ಕಾರಣವಿರಬಹುದೆಂದು ಇತಿಹಾಸ ತಜ್ಞರು ಊಹಿಸಿದ್ದಾರೆ. ಕಲ್ಲೇಶ್ವರ ಗುಡಿಯ ಒಂದು ಕಂಬದ ಮೇಲೆ 'ಕುಂಬಳಕಾಯಜ್ಜಿಯದು' ಎಂದು ಕೆತ್ತಿರುವ ಸ್ತ್ರೀ ರುಂಡದ ಶಿಲ್ಪವೊಂದು ಕಾಣಸಿಗುತ್ತದೆ. ಕಲಾವತಿ ಎಂಬ ಒಬ್ಬಳು ಊರಿಗೆ ಕುಂಬಳಕಾಯಿ ಮಾರಲು ಬಂದಾಗ ಕುಂಬಳಕಾಯಿ ಕೊಳ್ಳುವ ವಿಚಾರದಲ್ಲಿ ಊರಿನ ಜೈನರಿಗೂ-ವೈಷ್ಣವರಿಗೂ ಜಗಳವಾಗಿ ಕೊನೆಗೆ ಊರು ಹಾಳಾಯಿತೆಂದು ಒಂದು ಪ್ರತೀತಿ(ಕುಂಬಳಕಾಯಿ ಮಾರಲು ಬಂದ ಹೆಂಗಸು ವೈಷ್ಣವ ಮತದ ಅನುಯಾಯಿಯಾಗಿದ್ದವಳು ಎಂಬ ಕಾರಣಕ್ಕೆ ಜೈನರು ಯಾರೂ ಕುಂಬಳ ಕಾಯಿ ಕೊಳ್ಳಲಿಲ್ಲವಂತೆ, ಆಕೆ ಬೆಳಿಗ್ಗೆಯಿಂದ ಸಂಜೆವರೆಗೂ ಜೈನ ಬೀದಿಗಳಲ್ಲಿ ಅಲೆದರೂ ಕುಂಬಳಕಾಯಿ ಬಿಕರಿಯಾಗದಿದ್ದಾಗ ಬೇಸತ್ತು ಜೈನ ಬೀದಿಯ ಮುಂದೆ ಕುಂಬಳಕಾಯಿಗಳನ್ನೆಲ್ಲ ಎತ್ತಿಹಾಕಿ ಜೈನರನ್ನು ಶಪಿಸಿದಳು ಎನ್ನುವುದು ಒಂದು ಜಾನಪದ ಕಥೆ).

ಇವಿಷ್ಟೇ ಅಲ್ಲದೆ ಕಲ್ಯದ ಸುತ್ತ ಮುತ್ತಲ ಊರುಗಳಲ್ಲಿ ಅನೇಕ ವೀರಗಲ್ಲುಗಳು, ಶಾಸನಗಳು ಪತ್ತೆಯಾಗಿವೆ. ಆದರೆ ಅವುಗಳ ಬಗ್ಗೆ ಸ್ಥಳೀಯರಿಗೆ ಅಷ್ಟಾಗಿ ಮಾಹಿತಿಯಿರುವುದಿಲ್ಲ. ಶಾಸನಗಳು ಹೊರಜಗತ್ತಿಗೂ ತಿಳಿಯದೆ ಕಾಲ ಗರ್ಭದಲ್ಲಿ ಹುದುಗಿ ಹೋಗುತ್ತಿವೆ. ಅವುಗಳ ಅಧ್ಯಯನದಿಂದ ವಿಜಯನಗರ ಸಾಮ್ರಾಜ್ಯದಂತಹ ಎಷ್ಟೋ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಅವಕಾಶವಾಗಲಿದೆ.

ಕಲ್ಯ ಶಾಸನದಲ್ಲಿರುವ ಕನ್ನಡ ಲಿಪಿಯ ಪಾಠ

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಪಾಷಂಡ ಸಾಗರ ಮಹಾವಡಬಾ ಮು ಖಾಗ್ನಿ ಶ್ರೀ ರಂಗರಾಜ ಚರಣಾಂಬ ಜ ಮೂ ಲದಾಸಃ ಶ್ರೀ ವಿಷ್ಣು ಲೋಕ ಮಣಿ ಮಂಡಪ ಮಾರ್ಗದಾಯಿ ರಾಮಾನು ಜೋ ವಿಜಯತೇ ಯತಿರಾಜರಾಜ

ಶಕವರುಷ ೧೨೯೦ ನೆಯ ಕೀಲಕ ಸಂವತ್ಸರದ ಭಾದ್ರಪದ ಶು ೧೦ ಬೃಹಸ್ಪತಿವಾರ ಸ್ವಸ್ತಿ ಶ್ರೀಮನ್ಮಹಾಮಂಡಳೇಸ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ ರಾಯರ ಗಂಡ ಶ್ರೀ ವೀರಬು
ಕ್ಕರಾಯಂ ಪೃಥ್ವೀರಾಜ್ಯಮಂ ಮಾಡು ತ್ತಾ ಇರು ವಲ್ಲಿ ಜೈನರಿಗೂ ಭಕ್ತರಿಗೂ ಸಂವಾದಮಾದಲ್ಲಿ ಆನೆಗೊಂದಿ ಹೊಸಪಟ್ಟಣ ಪೆನುಗೊಂಡೆ ಕಲ್ಲೇಹದ ಪಟ್ಟಣದೊಳಗಾದ ಸಮಸ್ತ ಭವ್ಯಜನಂಗಳ್ ಬು ಕ್ಕರಾಯಂಗೆ ಭಕ್ತರ್ ಮಾಡುವ ಅನ್ಯಾಯಂಗಳನ್ನು ಬಿನ್ನಹಂ ಮಾಡಲಾಗಿ ಕೋವಿಲ್ ತಿರು ಮಲೆ ಪೆರು ಗೋಯಿಲ್ ತಿರುನಾರಾಯಣಪುರಂ ಮುಖ್ಯವಾದ ಸಕಳಾಚಾರ್ಯರು ಸಕಳ ಸಮಯಿಗಳ್ ಸಕಳ ಸಾತ್ವಿಕರ್ ವೇಷ್ಟಿಕರ್ ತಿರು ಮಣಿ ತಿರು ವಡಿ ತಣ್ಣಿರು ನಾಲ್ವತ್ತೆಂಟು ತಾತಯ್ಯಗಳು ಸಾವಂತ ಬೋವಕ್ಕಳು ತಿರು ಕು ಲ ಜಾಂಬವ ಕು ಲ ದೊಳಾದ ದಿನ್ನೆರಡರೊಳಾದ ಒಳೆಗಾದ ಹದಿನೆಂಟು ನಾಡ ರಾಯನು ಶ್ರೀ ವೈಷ್ಣವರ ಕೈಯೊಳು ಜೈನರ ಕೈವಿಡಿದು ಕೊಟ್ಟು ಈ ಜೈನ ದರ್ಶನಕ್ಕೆ ಪೂ ರ್ವಮರ್ಯಾದೆಯಿಟ್ಟು ಪಂಚಮಹಾವಾದ್ಯಂಗಳುಂ ಕಳಸ ಕನ್ನಡಿ ಶ್ವೇತ ಚ್ಛತ್ರ ಚಾಮರೆಂಗಳ್ ಮೊದಲಾದ ಬಿರು ದು ಗಳು ಸಲು ವವು. ಜೈನ ದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದೊಡಂ ವೈಷ್ಣವ ಹಾನಿವೃದ್ಧಿಯೆಂದು ಪಾಲಿಸಬೇಕು . ಈ ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನಮಂ ಕೊಟ್ಟು ಪಾಲಿಸುವರು . ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯದವರು , ಶ್ರೀಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡು ಬಹೆವು . ವೈಷ್ಣವ ರೂ ಜೈನರು ಒಂದು ಭೆದವಾಗಿ ಕಾಣಲಾಗದು . ಶ್ರೀ ತಿರು ಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನಮತಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಗಳೊಳಗು ಳ್ಳಂಥ ವೈಷ್ಣವರು ಜೈನರು ಬಾಗಿಲು ಗಟ್ಟಲೆಯಾಗಿ ಮನೆಗೆ ವರುಷ ಒಂದಕ್ಕೆ ಒಂದು ಹಣವಂ ಕೊಟ್ಟು ಆ ಯೆತ್ತಿ ಬಂದ ಹೊನ್ನಿಂಗೆ ದೇವರ ಅಂಗ ರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನ ಚೈತ್ಯಾಲಯೋದ್ಧರಣಕ್ಕೆ ಸೊದೆಯನಿಕ್ಕುವುದು . 

ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು . ಈ ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು . ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂ ಡಿ ಸಂಘನಾಯಕ ಪಟ್ಟಮಂ ಕಟ್ಟಿದರು .ಈ ಶಾಸನಂ ಬೆಳು ಗು ಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳು ತ್ತರಾಭಿಮು ಖವಾಗಿ ಸ್ಥಾಪಿಸಿದೆ.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...