ಶುಕ್ರವಾರ, ಸೆಪ್ಟೆಂಬರ್ 30, 2016

ಮುತ್ತೊಂದು ರಾಜನಾದ ಬಗೆ


1951ರ ಒಂದು ದಿನ......ಡಾ||ರಾಜ್ ಕುಮಾರ್ ಆಗಿನ್ನೂ ಮುತ್ತುರಾಜರಾಗಿದ್ದ ಕಾಲ, ಬೇಸಿಗೆ ಮುಗಿದು ಮಳೆಗಾಲಕ್ಕೆ ಕಾಲಿಟ್ಟುಬಿಡುವ ಸಂಧಿ ಕಾಲ, ಮುತ್ತುರಾಜರಿನ್ನು ಗುಬ್ಬಿ ಕಂಪನಿಯಲ್ಲಿ ನಾಟಕ ಮಾಡುತ್ತಿದ್ದರು. ಆಗ್ಗೆ ಗುಬ್ಬಿ ಕಂಪನಿಯಾದರೂ ಒಂದೂರಲ್ಲಿ ನಿಲ್ಲದ ಸಂಚಾರಿ ಕಂಪನಿಯಾಗಿತ್ತು. ಆಗೆಲ್ಲ ನಾಟಕವೆಂದರೆ ತಮ್ಮನ್ನು ತಾವು ಮರೆತುಬಿಟ್ಟು ನಾಟಕ ಮಾಡುತ್ತಿದ್ದ ಜನಗಳೇ ಹೆಚ್ಚು, ಅದರಲ್ಲಿ ಅಮೋಘವಾದ ಮತ್ತು ಅಗಾಧವಾದ ತಲ್ಲೀನತೆಯಿರುತ್ತಿತ್ತು. ನಾಟಕಗಳ ಡೈಲಾಗುಗಳೆಲ್ಲ ನಾಟಕದ ಮಂದಿಗೆ ಕಂಠ ಪಾಠವಾಗಿಬಿಟ್ಟಿದ್ದವು ಅದು ಎಷ್ಟರ ಮಟ್ಟಿಗೆ ಎಂದರೆ ಯಾರು ಯಾವ ನಾಟಕದ ಯಾವ ಪಾತ್ರ ಕೇಳಿದರೂ ಆಗಲೇ ಹೇಳಿಬಿಡುವಷ್ಟು. 

ಸರಿ ಇಷ್ಟೆಲ್ಲಾ ಆದಮೇಲೆ ಗುಬ್ಬಿ ವೀರಣ್ಣನವರ ಆಶೀರ್ವಾದದಿಂದ ಮತ್ತು ಅವರದೇ ಬಂಡವಾಳದಿಂದ ಅದೇ ಇಸವಿಯ ಒಂದು ದಿನ ಗುಬ್ಬಿ ಕಂಪನಿಯ ವತಿಯಿಂದ ಹಾಸನದಲ್ಲಿ ನಾಟಕ ನಡೆಯಬೇಕೆಂದು ತೀರ್ಮಾನಿಸಿ ಸೆಟ್ಟು ಹಾಕಿಸಲಾಯಿತು. ಮಳೆ ಗಾಳಿ ಮುನ್ಸೂಚನೆ ನೋಡಿಕೊಂಡು ಜಾಣ್ಮೆಯಿಂದಲೇ ರಂಗ ಮಂಚವೂ ತಯಾರಾಯಿತು. ನಾಟಕವಾಡುವ ಸಮಯವೂ ಹತ್ತಿರಾಯಿತು ನೋಡ ನೋಡುತ್ತಲೇ ಇತ್ತ ಜನಗಳು ಸೇರಹತ್ತಿದರು, ಆಗೆಲ್ಲ ವೇದಿಕೆಗೆ ಮಾತ್ರ ಹೊದಿಕೆಇರುತ್ತಿತ್ತು ಅದು ಬಿಟ್ಟರೆ ಜನ ಕೂರುವ ಜಾಗವೆಲ್ಲಾ ಆಕಾಶಕ್ಕೆ ತೆರೆದ ಪ್ರದೇಶವೇ ಆಗಿರುತಿತ್ತು . ಪಾತ್ರಧಾರಿಗಳೆಲ್ಲರು ತಮ್ಮ ತಮ್ಮ ಉಡುಗೆ ತೊಡುಗೆಗಳೊಂದಿಗೆ ವೇದಿಕೆಯ ತೆರೆಯ ಹಿಂದುಗಡೆ ಬಂದು ಸೇರಿಕೊಂಡಿದ್ದು ಆಯಿತು. ಕಲಾವಿದರಿಗೆಲ್ಲ ನಾವು ಹೇಗೆ ಕಾಣಿಸುತ್ತೆವೆಯೋ, ನಮ್ಮ ನಮ್ಮ ಸರದಿಗೆ ನಾವು ಸರಿಯಾಗಿ ಬರುತ್ತೆವೆಯೋ ಹೇಗೋ, ನಮ್ಮ ಡೈಲಾಗುಗಳು ಮರೆತು ಹೋಗದಿದ್ದರೆ ಸಾಕು ಎಂದು ತಮಗೆ ತೋಚಿದ್ದ, ತಾವು ಜೀವಮಾನ ಪರ್ಯಂತ ಕಂಡು ಕೇಳಿದ್ದ ದೇವರುಗಳಿಗೆಲ್ಲ ಅಲ್ಲಿಂದಲೇ ತಮ್ಮ ಅಹವಾಲು ಸಲ್ಲಿಸುತ್ತಿದ್ದರು. ಇತ್ತ ಇವಕ್ಕೆಲ್ಲ ಏರ್ಪಾಟು ಮಾಡಿದ್ದ ನಿರ್ಮಾಪಕರಿಗೂ ಕೊಂಚ ಭಯ, ಏನೂ ಅವಗಡಗಳಾಗದಂತೆ ತಾವಂದುಕೊಂಡ ಹಾಗೆ ನಾಟಕ ಯಶಸ್ವಿಯಾಗಿ ಪ್ರದರ್ಶನವಾದರೆ ಸಾಕು ಎಂದು ಅವರು ಕನವರಿಸುತ್ತಿದ್ದರು. ಆದರೆ ಇನ್ನೇನು ನಾಟಕ ಆರಂಭವಾಗಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದ ಸಂಘಟಕರಲ್ಲಿ ದುಗುಡ ಹೆಚ್ಚಾಗಿ ಹೋಯಿತು. ತಾವಂದುಕೊಂಡಿದ್ದ ಹಾಗೆ ನಾಟಕ ನಡೆಯುವುದಿಲ್ಲ ಎಂಬುವುದು ಅವರಿಗೆ ಖಾತ್ರಿಯಾಗಿ ಹೋಯಿತು. ಏಕೆಂದರೆ ಬೆಳಗಿನಿಂದಲೂ ಮರೆಯಾಗಿದ್ದ ಮಳೆ ಮೋಡಗಳು ಒಮ್ಮೆಲೇ ಅಲ್ಲಿಗೆ ನುಗ್ಗಿ ದಾಳಿ ಮಾಡುವರಂತೆ ಸುರಿಯಲು ಶುರು ಮಾಡಿಕೊಂಡುಬಿಟ್ಟಿದ್ದವು. ನೋಡ ನೋಡುತ್ತಿದ್ದಂತೆಯೇ ಸೇರಿದ್ದ ಜನಸ್ತೋಮ ಬೆಂಕಿಗೆ ಮಂಜು ಕರಗುವಂತೆ ಕ್ಷಣಾರ್ಧದಲ್ಲಿ ಕರಗಿ ಹೋಯಿತು.

 ರಂಗ ಗೀತೆಗಳಿಂದ ತುಂಬಿ ಪ್ರೇಕ್ಷಕರಿಂದ ಚಪ್ಪಾಳೆಗಳನ್ನು, ಭಾರಿ ಹಾರ ತುರಾಯಿಗಳನ್ನು ಸಮರ್ಪಿಸಿಕೊಳ್ಳಬೇಕಾಗಿದ್ದ ಆ ರಂಗ ಮಂಚವು ಸೇರಿ ಇಡೀ ರಂಗ ಮಂದಿರ ಮಳೆಯ ನೀರಲ್ಲಿ ನೆಂದು ತೊಯ್ದು ತೊಪ್ಪೆಯಂತಾಗಿ ಹೋಯಿತು. ಕಲಾವಿದರೆಲ್ಲರೂ ಇದೇನಾಗಿಹೊಯಿತು ಅನ್ನುವಷ್ಟರಲ್ಲಿ ತಾವು ನೆನೆಯದಿದ್ದರೆ ಸಾಕು ಎಂದು ಎಲ್ಲರು ಮಳೆಗೆ ಮರೆಯಾಗುವಂತೆ ಓಡಿಹೋದರು. ಕೆಲವು ನಿಮಿಷಗಳಲ್ಲಿಯೇ ಮಳೆ ತನ್ನ ಆರ್ಭಟವನ್ನು ಕಡಿಮೆ ಮಾಡಿಕೊಂಡಿತಾದರೂ ನೆನೆದು ಹೋದ ರಂಗ ಮಂಟಪದಲ್ಲಿ ರಾತ್ರಿಯಿಡೀ ಕುಳಿತು ನಾಟಕ ನೋಡಲು ಸಾಧ್ಯವೇ?, ಹಾಗಾಗಿ ಅಂದಿಗೆ ಮುಂದೂಡಲ್ಪಟ್ಟ ನಾಟಕ ಮರುದಿನವೇ ಪ್ರಸಾರ ಎಂದು ಮತ್ತೆ ಘೋಷಿಸಬೇಕಾಯಿತು. ಮರುದಿನ ನಾಟಕವಾಡಬೇಕಾದರೆ ರಂಗಮಂಟಪ ಒಣಗಿ ಅಚ್ಚುಕಟ್ಟಾಗಿ ಇರಬೇಕು. ಆದರೆ ಆಗಿನ ಸನ್ನಿವೇಶ ನೋಡಿದರೆ ರಂಗಮಂಟಪದ ತುಂಬಾ ಮಳೆ ನೀರು ತುಂಬಿ ತುಳುಕುತ್ತಿದೆ. ಇತ್ತ ಕಲಾವಿದರೆಲ್ಲರೂ ನಾಟಕದ ಉಡಿಗೆ ತೊಡಿಗೆ ಗಳನ್ನೂ ಕಳಚಿ ಅಲ್ಲಿಂದ ಮೆಲ್ಲಗೆ ಕಾಲ್ಕಿತ್ತರೆ ಅತ್ತ ಇಬ್ಬರು ಕಲಾವಿದರು ತಮ್ಮ ಉಡಿಗೆ ಬದಲಿಸಿ ತಮಗೆ ಊಟಕ್ಕೆ ಕೊಟ್ಟಿದ್ದ ಇಂಡಾಲಿಯಮ್  ತಟ್ಟೆಯನ್ನೇ ಬಳಸಿ ಆ ರಂಗಮಂಟಪದ ನೀರನೆಲ್ಲ ಎತ್ತಿ ಆಚೆಗೆ ಸುರಿಯಲು ಶುರುವಿಟ್ಟುಕೊಂಡರು, ಆ ಇಬ್ಬರು ಕಲಾವಿದರು ಸಂಜೀವಣ್ಣ ಎಂಬ ಒಬ್ಬರು ಮತ್ತು ಮುತ್ತುರಾಜರು!!, ಸಂಜೀವಣ್ಣ ನಾದರೂ ಆಗಾಗ್ಗೆ ಸುಧಾರಿಸಿಕೊಂಡು ಕೆಲಸ ಮಾಡಿದರು, ಮುತ್ತುರಾಜರು ಒಂದು ಕ್ಷಣವೂ ಕೈ ಕಾಲುಗಳಿಗೆ ಬಿಡುವು ಕೊಡದೆ ಇಡೀ ರಾತ್ರಿ ಆ ನೀರನೆಲ್ಲ ತೆಗೆದು ಹೊರಕ್ಕೆ ಎರಚಿ ಬೆಳಗಾಗುವುದರೊಳಗೆ ರಂಗ ಮಂದಿರದ ಬಯಲು ಒಣಗಲು ಅವಕಾಶ ಮಾಡಿದ್ದರು!!. ಬೆಳಗ್ಗೆದ್ದು ಅವರ ಸ್ನೇಹಿತರು " ಯಾಕೋ ಮುತ್ತು ರಾತ್ರಿಯೆಲ್ಲ ಇಷ್ಟು ಕಷ್ಟ ಪಟ್ಟಿದ್ದಿಯ" ಎಂದು ಕೇಳಿದಾಗ ಅವರು  "ಇದು ನಮಗೆ ಅನ್ನ ಕೊಡುವ ಭೂಮಿಯಪ್ಪಾ, ಇದು ಚೆನ್ನಾಗಿದ್ದರೆ ನಾವು ನಮ್ಮ ಮನೆ ಎಲ್ಲ ಚೆನ್ನಾಗಿರುತ್ತೆ" ಅಂತ ಹೇಳಿದರಂತೆ!!!!. ರಾಜ್ ಕುಮಾರ್ ಸುಮ್ಮ ಸುಮ್ಮನೆ ಮೇರು ವ್ಯಕ್ತಿತ್ವದವರಾಗಲಿಲ್ಲ. ಜೀವನದ ಪ್ರತೀ ಘಟ್ಟದಲ್ಲೂ ಅವರು ಕಲಿತರು. ಇಂತಹ ಘಟನೆಗಳಂತೂ ಅವರಿಗೆ ಮಹತ್ತರವಾದ್ದನ್ನೇ ಕಲಿಸಿದವು.ಅವರಲ್ಲಿ ಅಷ್ಟರ ಮಟ್ಟಿಗೆ ಶ್ರದ್ಧೆ ಇದ್ದಿದ್ದರಿಂದಲೇ ಅವರು ಚಿತ್ರ ರಂಗದ ಮೇರು ಶಿಖರವಾದರು, ಕನ್ನಡಕ್ಕೆ ಹೊನ್ನ ಕಳಶವಾದರು ಎಲ್ಲದಕ್ಕೂ ಹೆಚ್ಚಾಗಿ ಕಷ್ಟಗಳಿಗೆ ತುಡಿಯುವ, ಕಷ್ಟಗಳನ್ನು ನೋಡುತ್ತಲೇ ಬೆಳೆದ, ತಾವಿರುವವರೆಗೂ ಅನ್ನಕ್ಕೆ ಇನ್ನಿಲ್ಲದ ಗೌರವ ಕೊಡುತ್ತಿದ್ದ ಮಹಾ ಮಾನವಾತಾವಾದಿಯಾದರು ಮತ್ತು ಮೇರು ನಟರಾದರು.  

ವಿ.ಸೂ : ಕನ್ನಡ ಟಿವಿ9 ವಾಹಿನಿಯ 'ಒಂದು ಸತ್ಯ ಕಥೆ' ಸಂಚಿಕೆಯ ಕಂತಿನಿಂದ ಆರಿಸಿಕೊಂಡಿದ್ದು.

ಗುರುವಾರ, ಸೆಪ್ಟೆಂಬರ್ 22, 2016

ವಿದಾಯ ಪದ

ಕೊನೆಯ ದಿನ ಎಂದೋ ನಾ ಕಾಣೆ
ಅದೀಗಲೇ ಬಂದರು ನಾ ಮರೆಯೆ
ತಿಳಿಸುವುದ ಗೌರವನದಕೆ
ಇಷ್ಟು ದಿನ ಸಾಕಿ ಸಲುಹಿದ ಗುಡಿಗೆ
ಸತ್ಯಕ್ಕೆ ಗುರುವಾಗಿ, ಅನ್ನಕ್ಕೆ ಧಣಿಯಾಗಿ,
ನಮ್ಮ ಕಣ್ಣೊಳ್ ಧರಣಿಯಾಗಿ ಬಾಳಿದ ಬಾಳ್ಮೆಗೆ

ಕೊನೆಯ ದಿನವಿದು, ಉಳಿಯುವುದೆಂತು ,
ಬೆಳೆಯುವುದೆಂತು, ಆಗುವುದೆಂತು ಎಂಬ
ಧಾವಂತಗಳೆಲ್ಲ ನಿಶ್ಯೇಷವಾಗಿ ಹೋಗಲೇಬೇಕೆಂಬ
ಆಣತಿಯಿಲ್ಲಿ ಸಾಕಾರವಾಗುತಿದೆ.
ಮುಂದೇನಿದೆಯೋ ಕಾಣಲಿದು ಸಕಾಲ
ಕೊನೆಯಲ್ಲೂ ಕಲಿಯಬೇಕೆಂಬ ಹಂಬಲ
ಇದಲ್ಲವೇ ಬದುಕು ಕಲಿಸಿದ ಬಲ,
ಸತ್ಯವಿದು, ಅನುಭವಕ್ಕೊಂದು ಸತ್ಯ ದರ್ಶನ.

ಭಾನುವಾರ, ಸೆಪ್ಟೆಂಬರ್ 11, 2016

ನಿಜವಾದ ನಾಯಕ

ಅಂದು 1979 ಆಗಸ್ಟ್ 10, ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಮೈ ಮನಸುಗಳೆಲ್ಲಾ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸುತ್ತಲೇ ಸುತ್ತುತ್ತಿದ್ದವು. ಕಾರಣವಿಷ್ಟೇ, ಅಂದು ಭಾರತದ ವೈಜ್ಞಾನಿಕ ರಂಗದಲ್ಲಿ ಮಹತ್ವದ ದಿನ. ವಿಶ್ವದ ಅತೀ ದೊಡ್ಡ ಪ್ರಜಾತಂತ್ರ ದೇಶ ರಾಕೆಟ್ ಅನ್ನು ಪರೀಕ್ಷಾರ್ಥವಾಗಿ ಉಡಾಯಿಸಿ ವೈಜ್ಞಾನಿಕ ರಂಗದಲ್ಲಿ ತನ್ನದೂ ಪಾಲು ದಾಖಲಿಸುವ ಉತ್ಕಟ ಬಯಕೆಯಿಂದ ತುದಿಗಾಲಲ್ಲಿ ನಿಂತಿತ್ತು. ಅಷ್ಟರಲ್ಲಾಗಲೇ ಭಾರತವೂ ರಾಕೆಟ್ ತಂತ್ರಜ್ಞಾನ ಹೊಂದಿದ ದೇಶವಾಗಬೇಕೆಂದು ಕನಸು ಕಾಣುತ್ತಲೇ ವಿಜ್ಞಾನಿ ವಿಕ್ರಂ ಸಾರಾಭಾಯ್ ವಿಧಿವಶರಾಗಿದ್ದರು. ಇತ್ತ ಸತೀಶ್ ಧವನ್ ಅಧ್ಯಕ್ಷತೆಯಲ್ಲಿ ಇಸ್ರೋ 'ಉಪಗ್ರಹ ಉಡ್ಡಯನ ವಾಹಕ'(Satellite Launching Vehicle-SLV) ವನ್ನು ತಯಾರು ಮಾಡಿಕೊಂಡು ಪರೀಕ್ಷೆಗೆ ಕಾದು ನಿಂತಿತ್ತು.

 ಉಡಾವಣೆಗೆ ಸಮಯ ನಿಗದಿಯಾಗಿ ಅದಾಗಲೇ ಕ್ಷಣಗಣನೆ ಆರಂಭವಾಗಿತ್ತು. ದೇಶ ವಿದೇಶದ ಬುದ್ಧಿ ಜೀವಿಗಳ ಕಣ್ಣು ಆ ಕ್ಷಣಕ್ಕೆ ಶ್ರೀಹರಿಕೋಟಾದ ಮೇಲೆ ನೆಟ್ಟಿತ್ತು. ದೇಶದ ಮಹೋನ್ನತ ವಿಜ್ಞಾನಿಗಳ ತಂಡ ಶ್ರೀಹರಿಕೋಟಾದ ನಿಯಂತ್ರಣ ಕೊಠಡಿಯಲ್ಲಿ ಉಸಿರು ಬಿಗಿ ಹಿಡಿದು ಉಡಾವಣೆಗೆ ತಯಾರಿ ಮಾಡಿಕೊಂಡಿದ್ದರು. ಸಮಯ ಸಮೀಪಿಸಿತು, ಇನ್ನು ಉಡಾವಣೆಗೆ ಕೆಲವೇ ಕೆಲವು ಸೆಕೆಂಡುಗಳಷ್ಟೇ ಬಾಕಿ ಎನ್ನುವಾಗ ಎಸ್ ಎಲ್ ವಿ ಯ ಆಂತರಿಕ ಕಂಟ್ರೋಲ್ ಸಿಸ್ಟಮ್ ನಲ್ಲಿ ಸೋರಿಕೆಯಾಗುತ್ತಿರುವುದನ್ನು ಕಂಪ್ಯೂಟರ್ ಪತ್ತೆ ಹಚ್ಚಿ ಎಚ್ಚರಿಕೆ ಗಂಟೆ ಬಾರಿಸಿತು. ಗಡಿಬಿಡಿಗೊಳಗಾದ ವಿಜ್ಞಾನಿಗಳ ತಂಡ ಆ ಯೋಜನೆಯ ಮಿಷನ್ ಡೈರೆಕ್ಟರ್  ಆಗಿದ್ದ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಳಿಗೆ ದೌಡು ಕಿತ್ತರು. ಅಂತಿಮ ತೀರ್ಮಾನ ಮಿಷನ್ ಡೈರೆಕ್ಟರ್  ಅವರದೇ ಆಗಿರುವ ಕಾರಣ, ಎದುರಾಗಿರುವ ಸಮಸ್ಯೆಯನ್ನು ಅವರಲ್ಲಿ ಒಪ್ಪಿಸಿ ಅವರ ತೀರ್ಮಾನಕ್ಕೆ ಕಾದು ನಿಂತರು. ಕೇವಲ ಬೆರಳೆಣಿಕೆಯಷ್ಟು ಸೆಕೆಂಡುಗಳಷ್ಟೇ ಆಲೋಚಿಸಿದ ಕಲಾಮರು ಆಗಿದ್ದು ಆಗಲಿ ಇಂದು ಉಡಾಯಿಸಿಯೇ ತೀರೋಣವೆಂದುಬಿಟ್ಟರು. ವಿಜ್ಞಾನಿಗಳ ತಂಡ ಕಲಾಮರ ನಿರ್ದೇಶನದಂತೆ ರಾಕೆಟ್ ಉಡಾಯಿಸಿಯೂ ಬಿಟ್ಟಿತು. ಮುಂದೆ !!.......ಒಂದು ಹಂತ ಸರಿಯಾಗಿಯೇ ಕ್ರಮಿಸಿದ ರಾಕೆಟ್ ಎರಡನೇ ಹಂತಕ್ಕೆ ಜಿಗಿಯುವಾಗ ಸೋತು ಶಕ್ತಿಹೀನವಾಗಿ ಬಂಗಾಳ ಕೊಲ್ಲಿಯಲ್ಲಿ ಪತನವಾಯಿತು.

ಇಷ್ಟೇ ಸಾಕಾಗಿತ್ತು, ಅಷ್ಟರಲ್ಲಾಗಲೇ ಅಲ್ಲಿ ಜಮಾಯಿಸಿದ್ದ ಪತ್ರಕರ್ತರ ಗುಂಪು ವಿಜ್ಞಾನಿಗಳನ್ನು ಸುತ್ತುವರಿಯಿತು, ಪ್ರಶ್ನೆಗಳ ಸುರಿಮಳೆಯನ್ನೇ ಕರೆಯಿತು. ಮೊದಲೇ ಆರ್ಥಿಕ ಮುಗ್ಗಟ್ಟಿನಲ್ಲಿ ತೊಳಲಾಡುತ್ತಿರುವ ದೇಶದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಬಂಗಾಳ ಕೊಲ್ಲಿಗೆ ಸುರಿದಿದ್ದು ಯಾವ ಪುರುಷಾರ್ಥ?...ಎಂಬಂತಹ ಪ್ರಶ್ನೆಗಳಿಗೆ ವಿಜ್ಞಾನಿಗಳ ತಂಡ ಉತ್ತರಿಸದಾಯಿತು. ಇದೀಗ ಸತೀಶ ಧವನ್ ಸ್ವಪ್ರೇರಿತರಾಗಿ ಮುಂದೆ ಬಂದು ವಿಜ್ಞಾನಿಗಳ ಪರ ವಹಿಸಿಕೊಂಡರು. ಪತ್ರಕರ್ತರ ತೀಕ್ಷ್ಣವಾದ ಪ್ರಶ್ನೆಗಳಿಗೆ ತಾವೊಬ್ಬರೇ ಏಕಾಂಗಿಯಾಗಿ ಉತ್ತರಿಸಿದರು. "ಹೌದು ...ಈ ಬಾರಿ ನಾವು ಸೋತಿರುವುದು ನಿಜ. ಆದರೆ ಇದೆ ಕೊನೆಯಲ್ಲ, ನಮ್ಮ ತಂಡ ಅತ್ಯುತ್ತಮ ವಿಜ್ಞಾನಿಗಳಿಂದ ಕೂಡಿದ್ದು ಮತ್ತೆ ಸಂಶೋಧನೆಗಳನ್ನು ಕೈಗೊಳ್ಳುತ್ತೇವೆ. ಆಗಿಹೋಗಿರುವ ಸೋಲನ್ನು ನೆನಪಿಸಿಕೊಂಡು ಚರ್ಚೆ ಮಾಡುವು ವ್ಯರ್ಥ ಕಾಲಹರಣ, ಹಾಗಾಗಿ ಮುಂದಿನ ಬಾರಿ ಇಂತಹ ತಪ್ಪುಗಳಾಗದಂತೆ ಎಚ್ಚರ ವಹಿಸುತ್ತೇವೆ" ಎಂದು ಹೇಳಿ ಆವತ್ತಿನ ಪ್ರೆಸ್ ಕಾನ್ಫರೆನ್ಸ್ ಮುಗಿಸಿ ಹೊರ ಬಂದಿದ್ದರು.

ಇದಾಗಿ ಕೆಲವೇ ಕೆಲವು ತಿಂಗಳುಗಳಲ್ಲಿ ಅಂದರೆ ಜುಲೈ18, 1980 ರಲ್ಲಿ ಎಸ್ ಎಲ್ ವಿಯಿಂದ ಪರೀಕ್ಷಾರ್ಥ ಉಡಾವಣೆ ಮಾಡಲಾಗಿ ಅದು ಯಶಸ್ವಿಯಾಯಿತು. ಆ ಮೂಲಕ ಭಾರತವು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ದಾಪುಗಾಲೊಂದನ್ನು ಇಟ್ಟಿತು. ಶ್ರೀಹರಿಕೋಟಾದಲ್ಲಿ ಉಪಗ್ರಹ ಉಡಾಯಿಸಿದ ಕೆಲವು ಗಂಟೆಗಳಲ್ಲಿ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಕೂರಿಸುವ ಮೂಲಕ ಇಸ್ರೋ ಮಹತ್ವದ ಮೈಲಿಗಲ್ಲೊಂದನ್ನು ಮುಟ್ಟಿತು. ಕೂಡಲೇ ಪತ್ರಕರ್ತರು ವಿಜ್ಞಾನಿಗಳನ್ನು ಸುತ್ತುವರಿದರು,ಈ ಬಾರಿ ಪ್ರಶ್ನೆ ಕೇಳಲೆಂದಲ್ಲ ಬದಲಾಗಿ ಸಂತೋಷ ಹಂಚಿಕೊಳ್ಳಲೆಂದು. ಸತೀಶ್ ಧವನ್ ಈ ಬಾರಿ ಕಲಾಮರು ಹಾಗು ಇನ್ನಿತರ ವಿಜ್ಞಾನಿಗಳ ತಂಡಕ್ಕೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಕೊಟ್ಟು ತಾವು ದೂರವೇ ಉಳಿದರು.

ಮೇಲಿನ ಘಟನೆಯನ್ನು ಕಲಾಂರು ಹಲವಾರು ವೇದಿಕೆಗಳಲ್ಲಿ, ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಒಂದು ಟೀಮ್ ಗೆ ನಿಜವಾದ ನಾಯಕ ಹೇಗಿರಬೇಕು ಎಂದು ಸತೀಶ್ ಧವನ್ ಹೇಳಿ ಕಳಿಸಿದವರಲ್ಲ, ಬದಲಾಗಿ ಇದ್ದು ಆಚರಿಸಿ ಕಲಿಸಿದವರು. ತಾನು ಮುನ್ನಡೆಸುವ ತಂಡ ಸೋತಾಗ ಅದಕ್ಕೆ ಬಂದ ಟೀಕೆಗಳನ್ನು, ಪ್ರಶ್ನೆಗಳನ್ನು ನಿಜವಾದ ನಾಯಕನಾಗಿ ಸತೀಶ್ ಧವನ್ ತಾವೊಬ್ಬರೇ ಏಕಾಂಗಿಯಾಗಿ ಎದುರಿಸಿದರು. ಆದರೆ ಅದೇ ತಂಡ  ಗೆಲುವಿನ ನಗೆ ಬೀರಿದಾಗ ಸಂತೋಷವನ್ನು ಹಂಚಿಕೊಳ್ಳಲು ಅವರಿಗೆ ಬಿಟ್ಟು ತಮ್ಮ ಪಾಡಿಗೆ ತಾವು ಸುಮ್ಮನಿದ್ದರು.

ಜೀವನದ ಯಾವುದೇ ರಂಗದಲ್ಲಿ ಗೆಲುವನ್ನು ಹಂಚಿಕೊಳ್ಳುವುದು ಬಹಳ ಸುಲಭ. ಎಂತಹವರೂ ಆ ಕೆಲಸವನ್ನು ನಿರಾಯಾಸವಾಗಿ ಮಾಡಬಲ್ಲರು. ಆದರೆ ಸೋಲನ್ನು ಹಂಚಿಕೊಳ್ಳುವುದೇ ನಿಜವಾದ ಗುಂಡಿಗೆಯ ಪರೀಕ್ಷೆ. ಗೆಲ್ಲಲು ಬೇಕಾದ ದಾರಿಗಳು ಕಾಣುವುದೇ ಸೋಲನ್ನು ಹಂಚಿಕೊಂಡಾಗ. ಸೋಲನ್ನು ಹಂಚಿಕೊಳ್ಳಲು ಅಥವಾ ಎದುರಿಸಲು ಹಿಂದೇಟು ಹಾಕುವರಿಗೆ ಗೆಲ್ಲಲು ಬೇಕಾದ ದಾರಿಗಳು ಮಸುಕಾಗುತ್ತವೆ, ಅಲ್ಲಿಂದ ಅವರ ಸೋಲಿನ ಸರಮಾಲೆ ಪ್ರಾರಂಭವೇ ಸರಿ.

ಶುಕ್ರವಾರ, ಸೆಪ್ಟೆಂಬರ್ 9, 2016

ಕನ್ನಡ ನಾಡಿನ ಜೀವನದಿ

ಏಳು ಜೀವನದಿಗಳಲ್ಲಿ ಒಂದಾದ ಕಾವೇರಿ ತನ್ನ ಹರಿವಿನೊಂದಿಗೆ ಹಲವಾರು ಕಾಲಘಟ್ಟಗಳಲ್ಲಿ ಹತ್ತು ಹಲವು ಸಂಸ್ಕೃತಿಗಳನ್ನೂ, ಜೀವನ ಶೈಲಿಗಳನ್ನು, ಆಡಳಿತಗಳನ್ನು, ಆಕ್ರಮಣಗಳನ್ನು, ವಿವಾದಗಳನ್ನು ಕಂಡಿದ್ದಾಳೆ ಹಾಗು ಇನ್ನು ಕಾಣುತ್ತಿದ್ದಾಳೆ. ವಸಾಹತೋತ್ತರದಲ್ಲಿ ಆಕೆಯ ಹೆಸರು ಹೆಚ್ಚಿನ ಪ್ರಮಾಣದಲ್ಲಿ ಕೇಳಿಬರುವುದು ಹಾಗು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುವುದು ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತ್ರ. ಇನ್ನುಳಿದಂತೆ ಜನ ಸಾಮಾನ್ಯರೊಂದಿಗೆ ಬೆರೆತು ಸಾಮಾನ್ಯಳೇ ಆಗಿಹೋಗಿದ್ದಾಳೆ ಆ ಮಹಾ ತಾಯಿ.

ಕಾವೇರಿ ಸೀಮೆಯ ಮಳೆ, ನೀರು ಸಂಗ್ರಹ ವಿಚಾರಗಳನ್ನು ಗಮನಿಸುವಾಗ ನೋಡಬೇಕಾದ ಮುಖ್ಯವಾದ ಸಂಗತಿಯೆಂದರೆ ಬೆಂಗಳೂರು, ತುಮಕೂರು, ಅರ್ಧ ಮೈಸೂರು, ಅರ್ಧ ಮಂಡ್ಯ ಜಿಲ್ಲೆಯಲ್ಲಿ ಸುರಿದ ಮಳೆ ನೀರು ಕೆ ಆರ್ ಎಸ್ ಜಲಾಶಯಕ್ಕೆ ಸೇರದು. ಬದಲಾಗಿ ಜಲಾಶಯದ ನಂತರ ಬರುವ ನದಿ ಭಾಗಕ್ಕೆ ಸೇರುವುದರಿಂದ ಕರ್ನಾಟಕದಿಂದ ಆ ನೀರು ನೈಸರ್ಗಿಕವಾಗಿಯೇ ಹರಿದು ತಮಿಳುನಾಡಿನ ಮೆಟ್ಟೂರು ಜಲಾಶಯ ಸೇರುತ್ತಿದೆ. ಕರ್ನಾಟಕದ 34,273 ಚದರ ಕಿಲೋಮೀಟರು ಪ್ರದೇಶವಷ್ಟೇ ಕಾವೇರಿ ನದಿಗೆ ಮಳೆ ನೀರು ಸಂಗ್ರಹಿಸಿ ಸೇರಿಸುತ್ತಿದೆ. ಅದರಲ್ಲೂ ಕೆ ಆರ್ ಎಸ್ ಗೆ ಸೇರುವ ನೀರು ಬರೀ ಕರ್ನಾಟಕ ಹಾಗು ಕೇರಳದ ಕೆಲವು ಜಿಲ್ಲೆಗಳ ನೀರು ಮಾತ್ರ.ಕಾವೇರಿ ಕೊಳ್ಳದ ಬಹುಪಾಲು ಜಿಲ್ಲೆಗಳ ಮಳೆ ನೀರು ತಮಿಳುನಾಡಿಗೆ ಸೇರುತ್ತಿದ್ದು ಇದೀಗ ಕೆ ಆರ್ ಎಸ್ ನಲ್ಲಿ ಸಂಗ್ರಹವಿರುವ ಕೆಲವೇ ಕೆಲವು ಜಿಲ್ಲೆಗಳ ಮೂಲಕ ಸಂಗ್ರಹವಾದ ನೀರಿಗೆ ತಮಿಳುನಾಡು ಸರ್ಕಾರ ಕೊಕ್ಕೆ ಹಾಕಿರುವುದು ಕರ್ನಾಟಕದಲ್ಲಿ ವಿಷಮ ಸ್ಥಿತಿಗೆ ಕಾರಣವಾಗಿದೆ. ನದಿ ನೀರು ಹಂಚಿಕೆ ವಿಚಾರವಾಗಿ ಜಗಳ ಆರಂಭವಾಗಿ ಎಷ್ಟೋ ಬಾರಿ ಭಾಷೆ ಭಾಷೆಗಳ ವಿಚಾರಕ್ಕೆ ತಿರುಗಿ ಪರ್ಯಾವಸಾನಗೊಂಡಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ.

ಇಂತಹ ಸಂಧರ್ಭದಲ್ಲಿ ಅನ್ಯಾಯವಾದ ರಾಜ್ಯಗಳ ರಕ್ಷಣಾ ವೇದಿಕೆಗಳು ಬೀದಿಗಿಳಿದು ಹೋರಾಡುವುದು, ಅವುಗಳ ಫಲವಾಗಿ ಒಂದಿಷ್ಟು ಜನ ಸಾಯುವುದು ಅಥವಾ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುವುದು ಮಾಮೂಲಾಗಿ ಹೋಗಿದೆ. ಇನ್ನುಳಿದಂತೆ ಬರಗಾಲ ಎದುರಾದ ಸಂಧರ್ಭದಲ್ಲಿ ಉಭಯ ರಾಜ್ಯಗಳ ಆಡಳಿತ ವರ್ಗ ದೆಹಲಿಗೆ ದೌಡು ಕಿತ್ತು,  ಅಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಬ್ಯುಸಿ ಆಗಿಬಿಡುತ್ತಾರೆ. ಅದರಲ್ಲೂ ತಮಿಳುನಾಡಿಗೆ ಹೆಚ್ಚು ಅನುದಾನವೋ ಕರ್ನಾಟಕಕ್ಕೇ ಹೆಚ್ಚು ಅನುದಾನವೋ ಎಂದು ಹೋಲಿಸಿ ನೋಡುವರಿಗೂ ಕಡಿಮೆಯಿಲ್ಲ.

ಆದರೆ ದಕ್ಷಿಣ ಭಾರತದ ಈ ಮೇರು ಸಮಸ್ಯೆಗೆ ಶಾಶ್ವತ ಪರಿಹಾರವೇನು ಎಂದು ಯೋಚನೆ ಮಾಡುವರು ಬೆರಳೆಣಿಕೆಯಷ್ಟು ಮಾತ್ರ ಅಥವಾ ಇಲ್ಲವೇ ಇಲ್ಲವೇನೋ. ನಾವು ಕನ್ನಡಿಗರೊ ರಾಷ್ಟ್ರೀಯ ಪಕ್ಷಗಳನ್ನು ನಂಬಿ ವೋಟಿನ ಬಟನ್ನುಗಳನ್ನೊತ್ತಿ ಆಗಿಹೋಗಿದೆ, ಇದೀಗ ಆ ಪಕ್ಷಗಳ ನಾಯಕರ ಹೈಕಮಾಂಡುಗಳು ಎಸೆಯುವ ಬಿಸ್ಕೇಟುಗಳಿಗೆ ಬಾಯೊಡ್ಡಿಕೊಂಡು ನಿಂತಿದ್ದಾರೆ. ಅವರಿಗೆ ಎದುರಾಡಿದರೆ ಇವರಿಗೆ ಬರುವ ಸ್ಥಾನಗಳು ಮುಂದಿನ ಬಾರಿ ಕೈ ತಪ್ಪಬಾರದಲ್ಲ ಆ ಉದ್ದೇಶದಿಂದಲೋ ಏನೋ. ಮೋಸಹೋದವರು ಮಾತ್ರ ನಾವು.

ಸುಪ್ರೀಂ ಕೋರ್ಟ್ ತಾನು ಬಂದು ಮುಂದೆ ನಿಂತು ಕಾವೇರಿ ಕೊಳ್ಳದ ಜನಗಳ ಸಮಸ್ಯೆಯೇನು ಎಂದು ಆಲಿಸಿಲ್ಲ. ಬದಲಾಗಿ ಅಧ್ಯಯನ ತಂಡಗಳನ್ನು ರಚಿಸಿ ಆ ಮೂಲಕ ಸಲ್ಲಿಕೆಯಾದ ವರದಿಗಳನ್ನೇ ನಂಬಿ ನೀರಿನ ಹಂಚಿಕೆಯ ತೀರ್ಪು ಪ್ರಕಟಿಸಿದೆ. ಅಧ್ಯಯನ ತಂಡದ ಯಾವುದೋ ಒಂದು ಸಮಯದ ಭೇಟಿ ಸೂಕ್ತವೆನಿಸುವುದಿಲ್ಲ. ಕಾರಣ ಪ್ರತೀ ವರ್ಷವೂ ಮಳೆ ಪ್ರಮಾಣ ಹಾಗು ನೀರಿನ ಲಭ್ಯತೆಯ ಪ್ರಮಾಣ ಒಂದೇ ಆಗಿರುವುದಿಲ್ಲ.ವರದಿಗಳೇನೇನೇ ಇದ್ದರೂ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರವೇನು ಎಂಬುದನ್ನು ಎದುರು ನೋಡುವುದೇ ಸೂಕ್ತ. ಒಂದೇ ನದಿಯನ್ನು ಎರಡೂ  ರಾಜ್ಯಗಳು ಹಂಚಿಕೊಳ್ಳುತ್ತಿರುವುದರಿಂದ  ಇಂದಲ್ಲ ನಾಳೆ ಮತ್ತೆ ಕಾವೇರಿ ವಿವಾದ ಭುಗಿಲೇಳುವ ಸಾಧ್ಯತೆ ಇದ್ದೆ ಇದೆ.

ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತದಲ್ಲಿ ಕೆಲವು ಮುಖ್ಯ ನದಿಗಳ ಜೋಡಣೆ ಕಾರ್ಯದ ಬಗ್ಗೆ ಅಧ್ಯಯನಗಳು ನಡೆದಿದ್ದವು. ಅದರಲ್ಲಿ ಗಂಗಾ-ಕಾವೇರಿ ನದಿ ಜೋಡಣೆ ಪ್ರಮುಖವಾದದ್ದು.  ಗಂಗಾ-ಕಾವೇರಿ ನದಿ ಜೋಡಣೆಯಿಂದ ಬರೀ ಕಾವೇರಿ ಕೊಳ್ಳದ ಜನಗಳಿಗೆ ಮಾತ್ರವಲ್ಲದೆ ಗೋದಾವರಿ, ಕೃಷ್ಣಾ, ಮಹಾನದಿ ಪಾತ್ರದ ಜನಗಳಿಗೂ ಬಾರೀ ಅನುಕೂಲವಾಗಲಿದ್ದು  ಆ ಭಾಗದಲ್ಲಿ ಶೇ 40 ರಷ್ಟು ಹೆಚ್ಚು ಕೃಷಿಭೂಮಿ ನೀರಾವರಿ ವ್ಯವಸ್ಥೆ ಪಡೆಯಲಿದೆ. ಇದಿಷ್ಟೇ ಅಲ್ಲದೆ ಆ ಭಾಗದ ಪ್ರಮುಖ ಪಟ್ಟಣಗಳಿಗೂ ಕುಡಿಯುವ  ನೀರು ಪೂರೈಕೆಯಾಗಲಿದೆ. ಇಷ್ಟೆಲ್ಲ ಅನುಕೂಲಗಳಿರುವ ನದಿ ಜೋಡಣೆಗೆ ಪರಿಸರ ಸಂರಕ್ಷಣಾ ದೃಷ್ಟಿಕೋನದಲ್ಲಿ ಮಾತ್ರ ಕೆಲವು ಅಡಚಣೆಗಳಿವೆ. ಸೃಜನಾತ್ಮಕ ಯೋಚನೆಗಳಿಂದ, ನವೀನ ತಂತ್ರಜ್ಞಾನಗಳಿಂದ ಆ ಅಡಚಣೆಗಳನ್ನು ದೂರ ಮಾಡಿಕೊಳ್ಳುವುದು ಕಷ್ಟವೇನಿಲ್ಲ. ಇಷ್ಟಾದರೆ ಕಾವೇರಿಯ ಮಕ್ಕಳ ಹೊಡೆದಾಟ ಬಡಿದಾಟಗಳು ಮೂಲೆಪಾಲಾಗಿ ಸಹಬಾಳ್ವೆಗೆ ದಾರಿಯಾಗಲಿದೆ, ಹಾಗು ನಮ್ಮ ಕಾವೇರಿ ತಾಯಿ ಸುಪ್ರೀಂ ಕೋರ್ಟ್ ನ ಕಟಕಟೆ ಯಿಂದ ಕೆಳಗಿಳಿದು ಆಗಲಾದರೂ ನೆಮ್ಮದಿಯಿಂದ ಗಂಗೆಯೊಡಗೂಡಿ ಹರಿಯುತ್ತಾಳೆ. ಹಾಗೆಂದು ನಾವೆಲ್ಲರೂ ಬಯಸೋಣವೇ?

ಬುಧವಾರ, ಸೆಪ್ಟೆಂಬರ್ 7, 2016

ವಕ್ರಬುದ್ಧಿಯ ನೀನ್ ಚೆಲ್ಲಿದೊಡೆ ....!!??

ಬಾಳ್ ಬಯಸಿದುದೇನ್
ನೀನ್ ಕೊಟ್ಟಿದುದೇನ್
ಭತ್ತ ಚೆಲ್ಲಿದೊಡೆ ಭತ್ತ
ರಾಗಿ ಚೆಲ್ಲಿದೊಡೆ ರಾಗಿ
ಬೆಳೆದು ಪ್ರಕೃತಿ ತಾನುಪಕರಿಸುತಿರೆ
ವಕ್ರಬುದ್ಧಿಯ ನೀನ್ ಚೆಲ್ಲಿದಡೆ
ತಿರುಗಿ ವಕ್ರವೇ ನಿನ್ನನುಭಾವಕ್ಕೆ ಪಾಲು
ಚೆಲ್ಲುದುದನ್ ಬೆಳೆವ ಪ್ರಕೃತಿಯ ಪಾಠವಿದು.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...