ಗುರುವಾರ, ಅಕ್ಟೋಬರ್ 27, 2016

ದಾರು ದೈವ-ಜೀವಿ ?

ಜ್ಞಾನವಿದ್ದವಂಗೆ, ಸ್ಥಿತಿಗತಿ ಅರಿತವಂಗೆ, ವಿಡಂಬನೆ ಇಲ್ಲದವಂಗೆ, ಪರರನ್ನು ಕಂಡರೆ ಕನಿಕರ, ಅಸಹ್ಯ, ಆವೇಶ, ಯಾವೊಂದು ಪದದವಂಗೆ, ಪರರಿಗೆ ಕೇಡು ಬಗೆಯದವಂಗೆ, ತನ್ನತನದೊಳೆ ತಾನಿದ್ದು ತನಗಾಗಿ ತಾ ಬದುಕಿ, ಬದುಕಿನುದ್ದುದ್ದಕ್ಕೂ ಎಷ್ಟೆಷ್ಟೋ ಗೋಜಲು ಕಂಡರೂ ತನ್ನ ದಾರಿಯಿದು ಎಂದು ತಾ ಗುರುತಿಸಿ ಅದರೊಳಗೆ ವ್ರತನಿಷ್ಠನಂತೆ ನಡೆದವಂಗೆ ದೇವರೇ ನೆರವು, ಜಗವೇ ದೇವರು, ಅದೇ ಜಗದೊಳಗವನೂ ಲೀನ.

ಎಡೆಯೂರು ಸಿದ್ಧಲಿಂಗೇಶ್ವರರ ವಚನ

ಮುಂದಳ ಮುಖ ಸಾಲೆಯೊಳಗೆ
ಉದ್ದಂಡ ಮೂರ್ತಿಯ ಕಂಡೆನಯ್ಯಾ
ಲಂಡರ ಪುಂಡರ ಭಂಡರ ದಂಡಿಸುತ್ತಿದ್ದಾನೆ ನೋಡ
ಮುಂದಣ ಮುಖಸಾಲೆಯ ಮುರಿದು
ಉದ್ದಂಡಮೂರ್ತಿ ಉಳಿದ ಪ್ರಚಂಡೆತೆಯನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ


ಭಾನುವಾರ, ಅಕ್ಟೋಬರ್ 16, 2016

ತೆನಾಲಿ ರಾಮಕೃಷ್ಣ ಮತ್ತು ಬದನೆಕಾಯಿ ಗೊಜ್ಜು

ವಿಜಯನಗರದ ಅರಸು ಶ್ರೀಕೃಷ್ಣದೇವರಾಯರಿಗೆ ಬದನೇಕಾಯಿ ಪಲ್ಯವೆಂದರೆ ಬಲು ಪ್ರೀತಿ, ಅದರಲ್ಲೂ ವಿಶೇಷವಾದ ಬದನೇಕಾಯಿ ತಳಿಯೊಂದನ್ನು ಎಲ್ಲಿಂದಲೋ ತರಿಸಿ ತಮ್ಮ ಅಂತಃಪುರದ ಹಿತ್ತಲಲ್ಲಿ ಬೆಳೆಸಿದ್ದರು. ಅಂತಹ ಬದನೇಕಾಯಿ ತಳಿ ವಿಜಯನಗರ ಸಾಮ್ರಾಜ್ಯದಾದ್ಯಂತ ಎಲ್ಲೂ ಸಿಗುತ್ತಿರಲಿಲ್ಲವಂತೆ, ಅಂತಹ ಅದ್ಭುತ ಬದನೇಕಾಯಿ ತಳಿ ಅದು. ಅದರಿಂದ ಪಲ್ಯ/ಗೊಜ್ಜು ತಯಾರಿಸಿ ಅನ್ನದೊಂದಿಗೆ ಬಡಿಸಿದರೆ ಕೃಷ್ಣದೇವರಾಯರಿಗೆ ಬಹಳ ಅಚ್ಚುಮೆಚ್ಚು. ಹೀಗಿದ್ದ ವಿಶೇಷ ಬದನೇಕಾಯಿ ಪಲ್ಯವನ್ನು 'ನಾನೊಬ್ಬನೇ ತಿಂದು ಸವಿದರೆ ಸಾಲದು, ತನ್ನ ಅತ್ಯಾತ್ಮೀಯ ಸ್ನೇಹಿತನೂ ಹಾಗು ಮಂತ್ರಿಯು ಆದ ತೆನಾಲಿ ರಾಮಕೃಷ್ಣನಿಗೂ ಅದರ ರುಚಿ ತೋರಿಸಬೇಕು' ಎಂದುಕೊಂಡರು ಕೃಷ್ಣದೇವರಾಯರು. ಕೂಡಲೇ ಭೋಜನ ಕೂಟವೊಂದನ್ನು ಏರ್ಪಡಿಸಿ ತಮ್ಮ ಆತ್ಮೀಯ ಗೆಳೆಯನಾದ ತೆನಾಲಿ ರಾಮನನ್ನು ಆಹ್ವಾನಿಸಿದರು. ಹಾಜರಾದ ಆತನಿಗೆ ತಮ್ಮ ಅಂತಃಪುರದ ಹಿತ್ತಲಿನ ಬದನೆಕಾಯಿಂದ ತಯಾರಿಸಿದ ಗೊಜ್ಜನ್ನು ಬಡಿಸಲಾಯಿತು. ತೆನಾಲಿ ರಾಮನಂತೂ  ಆ ಬದನೇಕಾಯಿ ಗೊಜ್ಜನ್ನು ಮೆಚ್ಚಿಕೊಂಡದ್ದೇ ಮೆಚ್ಚಿಕೊಂಡದ್ದು. ಆತನು   ಇದನ್ನು ತಯಾರಿಸದವರು ಯಾರು? , ಇಂತಹ ವಿಶೇಷ ಬದನೇಕಾಯಿ ದೊರೆಯುವುದಾದರೂ ಎಲ್ಲಿ? ಎಂದು ಯೋಚನೆ ಮಾಡಹತ್ತಿದನು. ಕೊನೆಗೆ ರಾಜ ನಳ ತಜ್ಞರಿಂದ ಒಂದು ವಿಷಯ ತಿಳಿಯಿತು, ಇಂತಹ ಗೊಜ್ಜು ತಯಾರಿಸುವಲ್ಲಿ ವಿಶೇಷ ಬುದ್ಧಿ ಖರ್ಚು ಮಾಡುವ ಅವಶ್ಯಕೆತೆ ಏನಿಲ್ಲ. ಅದೆಲ್ಲ ಬದನೇಕಾಯಿ ಪ್ರಭಾವ ಎಂದು. ಇನ್ನೂ ಮುಂದುವರೆದು ಬಹು ಅಪರೂಪವಾದ ಆ ಬದನೇಕಾಯಿ ತಳಿಯನ್ನು ಕೃಷ್ಣದೇವರಾಯರು ಎಲ್ಲಿಂದಲೋ ತರಿಸಿ ಸುರಕ್ಷಿತವಾಗಿ ತಮ್ಮ ಹಿತ್ತಲಲ್ಲಿ ಬೆಳೆಸಿದ್ದಾರೆ ಹಾಗು   ಅರಸರ ಅಪ್ಪಣೆಯಿಲ್ಲದೆ ಹಿತ್ತಲಿಗೆ ಯಾರಿಗೂ ಪ್ರವೇಶವಿಲ್ಲ. ಬದನೆ ಗಿಡಕ್ಕೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿರುವ ಎಲ್ಲ ವಿಚಾರಗಳನ್ನು ನಳ ತಜ್ಞರು ಬಾಯ್ಬಿಡುತ್ತಾರೆ. ಈ ವಿಚಾರಗಳನ್ನೆಲ್ಲ ಕೇಳಿದ ಕೊಡಲೇ ತೆನಾಲಿ ರಾಮ ಇದು ನನಗೆ ದಕ್ಕದ ವಿಚಾರವೆಂದುಕೊಂಡು ರಾಜರಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾನೆ. ಮನೆಯಲ್ಲಿ ವಿಶ್ರಾಂತಿಸುವ ಸಮಯದಲ್ಲಿ ಹೆಂಡತಿಯ ಜೊತೆ ಮಾತನಾಡುತ್ತಾ ಅರಮನೆಯಲ್ಲಿ ಇಂದು ಏರ್ಪಾಡಾಗಿದ್ದ ಭೋಜನದ ಬಗ್ಗೆ ಹಾಗು ಅಲ್ಲಿ ಬಡಿಸಲಾಗಿದ್ದ ಬದನೇಕಾಯಿ ಗೊಜ್ಜಿನ ಬಗ್ಗೆ ಹೇಳುತ್ತಾನೆ.

ಬದನೇಕಾಯಿ ಗೊಜ್ಜಿನ ಬಗ್ಗೆ ಕೇಳುತ್ತಿದ್ದಂತೆಯೇ ತೆನಾಲಿ ರಾಮನ ಹೆಂಡತಿಯ ಬಾಯಲ್ಲಿ ನೀರೂರಲು ಶುರುವಾಗುತ್ತದೆ.  ಕಾರಣವೆಂದರೆ ಆಕೆಗೂ ಬದನೇಕಾಯಿ ಗೊಜ್ಜು ಎಂದರೆ ಪಂಚ ಪ್ರಾಣ. ತನಗೂ ಆ ಬದನೇಕಾಯಿ ತಂದು ಕೊಡುವಂತೆ ಗಂಡನನ್ನು ಪೀಡಿಸಲು ಶುರು ಮಾಡುತ್ತಾಳೆ. ತೆನಾಲಿ ರಾಮ ಅಲ್ಲಿರುವ ಭದ್ರತೆ ಮತ್ತಿತರ ವಿಚಾರಗಳನ್ನು ತಿಳಿಸಿದರೂ ಆಕೆ ಕೇಳುವುದಿಲ್ಲ. ಆ ಬದನೇಕಾಯಿ ಪಲ್ಯಕ್ಕಾಗಿ ಹಠ ಹಿಡಿದು ಕುಳಿತು ಬಿಡುತ್ತಾಳೆ. ತೆನಾಲಿ ರಾಮ ಈಗ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅತ್ತ ರಾಜರನ್ನು ಹೋಗಿ ನೇರವಾಗಿ ಬದನೇಕಾಯಿ ಕೊಡಿ ಅಂದು ಕೇಳಲೂ ಸಾಧ್ಯವಿಲ್ಲ, ಕೇಳಿದರೂ ಅವರು ಕೊಡುವುದಿಲ್ಲವೆಂದು ಗೊತ್ತು ಇತ್ತ ಹೆಂಡತಿ ಒಂದೇ ಸಮ ಹಠ ಹಿಡಿದು ಕುಳಿತಿರುತ್ತಾಳೆ. ಅಳೆದೂ ತೂಗಿ ಯೋಚನೆ ಮಾಡಿದ ತೆನಾಲಿ ರಾಮ ರಾತ್ರಿಯ ಸಮಯದಲ್ಲಿ ರಾಜರ ಹಿತ್ತಲಿಗೆ ಹೋಗಿ ಬದನೆಕಾಯಿಗಳನ್ನು ಕದಿಯುವ ಯೋಜನೆ ಹಾಕಿಕೊಳ್ಳುತ್ತಾನೆ. ಹೆಂಡತಿಯೂ ಇದಕ್ಕೆ ಒಪ್ಪುತ್ತಾಳೆ.ಮರುದಿನದ ರಾತ್ರಿಯೇ ರಾಜರ ಹಿತ್ತಲಿಗೆ ನುಗ್ಗಿದ ತೆನಾಲಿ ರಾಮ ಕೆಲವಾರು ಬದನೆಕಾಯಿಗಳನ್ನು ಕದ್ದು ಮನೆಗೆ ತಂದು ಬಿಡುತ್ತಾನೆ.

ಆ ದಿನ ರಾತ್ರಿಯೇ ಬದನೇಕಾಯಿ ಗೊಜ್ಜು ತಯಾರಾಗುತ್ತದೆ. ಈಗ ಮತ್ತೊಮ್ಮೆ ತೆನಾಲಿ ರಾಮನಿಗೂ ಅವನ ಹೆಂಡತಿಗೂ ಜಗಳ ಶುರುವಾಗುತ್ತದೆ. ಮಾಡಿದ ಬದನೇಕಾಯಿ ಪಲ್ಯವನ್ನು ಮಗನಿಗೂ ಬಡಿಸಬೇಕೆನ್ನುವುದು ರಾಮಕೃಷ್ಣನ ಹೆಂಡತಿಯ ಆಸೆ, ಆದರೆ ಮುಂದೆಂದಾರೂ ರಾಜರು ತನಿಖೆಗೆ ಆದೇಶಿಸಿದರೆ ಮಗನೆಲ್ಲಿ ಬಾಯಿ ಬಿಟ್ಟುಬಿಡುವನೋ ಎಂಬ ಆತಂಕದಿಂದ ಅವನಿಗೆ ಬದನೇಕಾಯಿ ಗೊಜ್ಜನ್ನು ಬಡಿಸಬಾರದೆನ್ನುವುದು ತೆನಾಲಿ ರಾಮನ ವಾದ. ಮಗನಿಗೆ ಬಡಿಸದ ಹೊರತು ನಾನೂ ತಿನ್ನುವುದಿಲ್ಲವೆಂದು ಹೆಂಡತಿ ಹಠ ಹಿಡಿದು ಕುಳಿತುಬಿಡುತ್ತಾಳೆ.ಹೆಂಡತಿಯ ಮಾತಿಗೆ ಕಟ್ಟುಬಿದ್ದು ಮಗನಿಗೂ ಬದನೇಕಾಯಿ ಗೊಜ್ಜು ಬಡಿಸಲು ಒಪ್ಪಿಕೊಳ್ಳುತ್ತಾನೆ, ಆದರೆ ಅದಕ್ಕೂ ಮುನ್ನ ಬುದ್ಧಿವಂತಿಕೆಯಿಂದ ತನ್ನ ಮಗನ ತಲೆಕೆಡಿಸಿಬಿಡುತ್ತಾನೆ. ಅದು ಹೇಗೆ ಎಂದರೆ, ಬದನೇಕಾಯಿ ಗೊಜ್ಜು ಮಗನಿಗೂ ಬಡಿಸಲು ಒಪ್ಪಿಕೊಂಡ ತೆನಾಲಿ ರಾಮ ಕೂಡಲೇ ಮಗ ಏನು ಮಾಡುತ್ತಿದ್ದಾನೆ ಎಂದು ನೋಡುತ್ತಾನೆ. ಮಗ ಶಾಲೆಯಿಂದ ಬಂದು ಒಂದು ಸುತ್ತು ಆಟವಾಡಿ, ತನಗೆ ಶಾಲೆಯಲ್ಲಿ ಕೊಟ್ಟಿದ್ದ ಮನೆಗೆಲಸಗಳನ್ನೆಲ್ಲ ಮುಗಿಸಿ ಉಪ್ಪರಿಗೆಯ ಮೇಲೆ ಹಾಗೆ ನಿದ್ರೆಗೆ ಜಾರಿರುತ್ತಾನೆ. ಪರಿಸ್ಥಿತಿ ಅವಲೋಕಿಸಿದ ತೆನಾಲಿ ರಾಮ ಅಲ್ಲೇ ಪಕ್ಕದಲ್ಲಿದ್ದ ನೀರು ತುಂಬಿದ ಮಡಕೆಯನ್ನು ತೆಗೆದು ಅದರಲ್ಲಿದ್ದ ನೀರನ್ನೆಲ್ಲ ಮಗನ ಮೇಲೆ ಸುರಿದು ಬಿಡುತ್ತಾನೆ. ನಿದ್ರೆಯಲ್ಲಿದ್ದ ಮಗ ಕೊಡಲೇ ಚೀರುತ್ತಾ ಅಲ್ಲಿಂದ ಎದ್ದುಬಿಡುತ್ತಾನೆ. ಕೂಡಲೇ ತೆನಾಲಿ ರಾಮ ತನ್ನ ಹೆಂಡತಿಯನ್ನು ಜೋರಾಗಿ ಕೂಗಿ ಹೇಳುತ್ತಾನೆ. 'ಹೊರಗಡೆ ಮಳೆ ಬರುತ್ತಿದೆ, ಮಗನನ್ನು ಉಪ್ಪರಿಗೆಯಿಂದ ಒಳಗೆ ಕರೆಯಬಾರದೇ'.
ನಿದ್ದೆಗಣ್ಣಿನಲ್ಲಿದ್ದ ತೆನಾಲಿರಾಮನ ಮಗ ಹೊರಗೆ ಮಳೆ ಬರುತ್ತಿದೆ ಎಂದು ಕೊಂಡು ಒಳಗೆ ಬರುತ್ತಾನೆ. ಆಗ ಅವನಿಗೆ ಬದನೇಕಾಯಿ ಗೊಜ್ಜಿನ ಪಲ್ಯ ಬಡಿಸಿ ಊಟ ಮಾಡಿಸಿ ಮಲಗಿಸುತ್ತಾರೆ. ಅನಂತರ ತಾವು ಊಟ ಮಾಡುತ್ತಾರೆ. ಇದಾಗಿ ಮಾರನೇ ದಿನ ಅರಮನೆಯಲ್ಲಿ ಎಲ್ಲರ ಬಾಯಲ್ಲೂ ಬದನೇಕಾಯಿ ಕಳ್ಳತನವಾದ ವಿಷಯವೇ ಆಗಿಹೋಗುತ್ತದೆ.

ಕೃಷ್ಣದೇವರಾಯರು ಚೋರರ ಪತ್ತೆಗೆ ಆದೇಶಿಸುತ್ತಾರೆ.  ಆದರೆ ವಿಜಯನಗರದ ಪ್ರಧಾನಮಂತ್ರಿಗಳಿಗೆ ತೆನಾಲಿ ರಾಮನ ಬಗ್ಗೆ ಸಣ್ಣ ಅನುಮಾನ ಶುರುವಾಗುತ್ತದೆ. ಕಾರಣವಿಷ್ಟೇ, ಹಿತ್ತಲಲ್ಲಿದ್ದ ಅಪರೂಪದ ತಳಿಯ ಬದನೇಕಾಯಿ ಗಿಡ ಗೊತ್ತಿದ್ದು ಕೆಲವೇ ಕೆಲವರಿಗೆ. ಅದರಲ್ಲಿ ತೆನಾಲಿ ರಾಮನೂ ಒಬ್ಬನು. ಹಾಗು ಆ ಬದನೇಕಾಯಿ ರುಚಿ ನೋಡಿದ್ದವನಂತೂ ತೆನಾಲಿ ರಾಮನೊಬ್ಬನೇ. ಪ್ರಧಾನ ಮಂತ್ರಿಗಳು ಮಹಾರಾಜರಲ್ಲಿಗೆ ಹೋಗಿ ಈ ವಿಚಾರವನ್ನು ಭಿನ್ನವಿಸಿಕೊಳ್ಳುತ್ತಾರೆ. ಕೂಡಲೇ ತೆನಾಲಿ ರಾಮನನ್ನು ಅರಮನೆಗೆ ಕರೆತರುವಂತೆ ಕೃಷ್ಣದೇವರಾಯರು ಆದೇಶಿಸುತ್ತಾರೆ. ತೆನಾಲಿ ರಾಮ ಅರಮನೆಗೆ ಆಗಮಿಸುತ್ತಾನೆ, ವಿಚಾರಣೆ ಆರಂಭವಾಗುತ್ತದೆ. ತೆನಾಲಿ ರಾಮ ತಾನು ಕದ್ದಿಲ್ಲವೆಂದು ವಾದಿಸುತ್ತಾನೆ.

ಪ್ರಧಾನ ಮಂತ್ರಿಗಳಿಗೆ ತೆನಾಲಿ ರಾಮ ಸುಳ್ಳು ಹೇಳುತ್ತಿದ್ದಾನೆ ಎಂಬುದು ಅರಿವಿಗೆ ಬರುತ್ತದೆ.  ಅವರು ಕೂಡಲೇ ತೆನಾಲಿ ರಾಮನ ಮುಗ್ದ ಮಗನನ್ನು ಕೇಳಿದರೆ ಸತ್ಯ ಅರಿಕೆಯಾಗಬಹುದೆಂದು ಭಾವಿಸಿ ತೆನಾಲಿ ರಾಮನ ಮಗನನ್ನು ಅರಮನೆಗೆ ಕರೆತರುವಂತೆ ಭಟರನ್ನು ಕಳುಹಿಸುತ್ತಾನೆ. ಈಗ ಇಬ್ಬರೂ ರಾಜರ ಮುಂದೆ ಕೈಕಟ್ಟಿಕೊಂಡು ನಿಲ್ಲುತ್ತಾರೆ. ಅಲ್ಲಿ ಕಣ್ಣು ಮಿಸುಕುವುದಕ್ಕೂ ಅವಕಾಶವಿಲ್ಲ. ಈಗ ಅರಸರು ನೇರವಾಗಿ ತೆನಾಲಿ ರಾಮನ ಮಗನನ್ನು ಪ್ರಶ್ನಿಸುತ್ತಾರೆ.'ಮಗು ನೀನು ರಾತ್ರಿ ಏನು ಊಟ ಮಾಡಿದೆ ಎಂಬ ನೆನಪಿದೆಯೇ?'. ಹುಡುಗ ಹೇಳುತ್ತಾನೆ 'ಹಾಂ..ನೆನಪಿದೆ. ಅನ್ನ ಅದಕ್ಕೆ ಬದನೇಕಾಯಿ ಗೊಜ್ಜು. ಬದನೇಕಾಯಿ ಗೊಜ್ಜು ಬಹಳ ಅದ್ಭುತವಾಗಿತ್ತು, ಅಂತಹ ಗೊಜ್ಜನ್ನು ಹಿಂದೆಲ್ಲೂ ನಾನೂ ತಿಂದದ್ದೇ ಇಲ್ಲ'. ಕೃಷ್ಣದೇವರಾಯರ ಕಣ್ಣು ಕೆಂಪಗಾಗುತ್ತದೆ. ತೆನಾಲಿ ರಾಮನ ಕಡೆ ತಿರುಗಿ 'ಸುಳ್ಳು ಬೊಗಳುವ ನಿನಗೆ...' ಎಂದು ಮಾತು ಮುಂದುವರಿಸುವ ಮೊದಲೇ ತೆನಾಲಿ ರಾಮ 'ಪ್ರಭುಗಳು ಮನ್ನಿಸಬೇಕು, ನಾನು ನೆನ್ನೆ ತಮ್ಮ ಭೋಜನ ಕೂಟದಲ್ಲಿ ತಿಂದ ಬದನೆಕಾಯಿ ಗೊಜ್ಜಿನ ಬಗ್ಗೆ ಮನೆಯಲ್ಲಿ ವಿವರಿಸುತ್ತಿದ್ದೆ. ಹಾಗಾಗಿ ಎಲ್ಲೋ ಅದೇ ಇವನಿಗೆ ಕನಸಿನಲ್ಲಿ ಬಂದಿರಬೇಕು. ಅರಮನೆಯಲ್ಲಿ ಬೆಳೆದ ಬದನೆಕಾಯಿಯೆಂದರೇನು? ಅದನ್ನು ಮುಟ್ಟುವ ಯೋಗ್ಯತೆ ನನಗೆಲ್ಲಿಂದ ಬರಬೇಕು' ಎಂದು ನಾಟಕವಾಡಿಬಿಟ್ಟನು. 'ಅದೂ ಸಾಲದೇ ಇವನಿಗೆ ವಿಪರೀತ ಸ್ವಪ್ನ ಬಾಧೆಯಿದೆ, ಕನಸಿನಲ್ಲಿ ನಡೆದಿದ್ದೆಲ್ಲ ನಿಜವೆಂದುಕೊಂಡು ನಮಗೆ ಎಷ್ಟೋ ಬಾರಿ ತಲೆಕೆಡಿಸಿದ್ದಾನೆ' ಎಂದು ಬಿಟ್ಟ. ಈ ಮಾತು ಕೇಳಿದ ಮೇಲೆ ರಾಜರಿಗೆ ಹುಡುಗನ ಮಾತಿನ ಮೇಲೆ ಮತ್ತೆ ಅನುಮಾನವುಂಟಾಯಿತು.

ಆಗ ಹುಡುಗನನ್ನು ಹತ್ತಿರಕ್ಕೆ ಕರೆದ ಮಹಾರಾಜರು 'ಮಗೂ ನೆನ್ನೆ ರಾತ್ರಿ ನೀನು ಏನೇನು ಮಾಡಿದೆ ಹೇಳುವೆಯಾ?' ಎನ್ನುತ್ತಾರೆ. ಹುಡುಗ ಎಲ್ಲವನ್ನೂ ವಿವರಿಸಲು ಮುಂದಾಗುತ್ತಾನೆ, 'ನೆನ್ನೆ ಶಾಲೆಯಿಂದ ಬಂದ ತಕ್ಷಣ ಆಟವಾಡಿ ನಂತರ ಮನೆಗೆಲಸಗಳೆನ್ನೆಲ್ಲಾ ಮುಗಿಸಿ ಉಪ್ಪರಿಗೆಯ ಮೇಲೆ ವಿಶ್ರಾಂತಿಗೆಂದು ಮಲಗಿದ್ದೆ ಹಾಗೇ ನಿದ್ರೆ ಹತ್ತಿಬಿಟ್ಟಿತ್ತು. ಅನಂತರ ನನಗೆ ಎಚ್ಚರವಾಗಿದ್ದು ಮಳೆ ಬಂದ ನಂತರವೇ. ಮಳೆಯಿಂದ ನೆನೆದು ಒದ್ದೆಯಾದ ನನ್ನನ್ನು ನನ್ನ ತಾಯಿ ಒಳಗೆ ಕರೆದು ಊಟ ಮಾಡಿಸಿ ಮಲಗಿಸಿದಳು' ಎಂದ. ಆದರೆ ನಿಜದಲ್ಲಿ ತಿಂಗಳಾನುಗಟ್ಟಲೆಯಿಂದ ವಿಜಯನಗರದಲ್ಲಿ ಮಳೆಯೇ ಬಂದಿರಲಿಲ್ಲ. ಇದನ್ನು ಕೇಳಿಸಿಕೊಂಡ ಕೃಷ್ಣದೇವರಾಯನು ಹುಡುಗನು ನಿಜವಾಗಿಯೂ ಕನಸು ಕಂಡಿರಬಹುದೆಂದೂ, ಸುಮ್ಮನೆ ತೆನಾಲಿ ರಾಮನ ಮೇಲೆ ಅನುಮಾನ ಪಡುವುದು ತಪ್ಪೆಂದು  ತೆನಾಲಿ ರಾಮಕೃಷ್ಣನ ಶಿಕ್ಷೆಯಿಂದ ತಪ್ಪಿಸಿ ಬಿಟ್ಟು ಬಿಟ್ಟರು. ಹೀಗೆ ತೆನಾಲಿ ರಾಮಕೃಷ್ಣನು ತನಗೆ ಒಲಿದಿದ್ದ ಆಪತ್ತೊಂದನ್ನು ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ನಿವಾರಿಸಿಕೊಂಡನು.

ಸೋಮವಾರ, ಅಕ್ಟೋಬರ್ 10, 2016

ಕಾಲಗರ್ಭದಲ್ಲಿ ಕಲಾವತಿ ನಗರ

ಕೆಲವು ದಿನಗಳ ಹಿಂದೆ ವಿಕಿಪೀಡಿಯದಲ್ಲಿ 'ಮಾಗಡಿ' ಕನ್ನಡ ಪುಟವನ್ನು ಬರೆಯುತ್ತಿದ್ದೆ. ಮಾಗಡಿಯ ಸುತ್ತ ಮುತ್ತಲಿದ್ದ ಕೋಟೆ,ಕೊತ್ತಲ,ದೇಗುಲ,ಇತಿಹಾಸ ಪ್ರಸಿದ್ಧ ಸ್ಥಳಗಳನ್ನೆಲ್ಲ ಒಳಗೂಡಿಸಿ ಮಾಗಡಿ ಪುಟವನ್ನು ಚೊಕ್ಕಗೊಳಿಸುವ ಸನ್ನಾಹದಲ್ಲಿ ಗೂಗಲ್ ನಲ್ಲಿ ಮಾಗಡಿಯ ಸುತ್ತಲ ಸ್ಥಳಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದೆ. ನಾನು ಮೂಲತಃ ಅಲ್ಲಿನವನೇ ಆದ್ದರಿಂದ ಅಲ್ಲಿನ ಬಹುತೇಕ ಸ್ಥಳಗಳ ಬಗ್ಗೆ ನನಗಾಗಲೇ ತಿಳಿದಿದೆ, ಆದರೆ ಕೆಲವು ತಿಳಿದಿಲ್ಲದವುಗಳ ಬಗ್ಗೆ ಕಣ್ಣಾಡಿಸುತ್ತಿದ್ದೆ. ಆಗ ಕಣ್ಣಿಗೆ ಬಿದ್ದ ಮತ್ತೊಂದು ಐತಿಹಾಸಿಕ ಸ್ಥಳ 'ಕಲ್ಯ'. ಹಿಂದೊಂದು ದಿನ 'ಕಲಾವತಿ ನಗರ'ವೆಂದು ಕರೆಸಿಕೊಳ್ಳುತ್ತಿದ್ದ, ಗಂಗರು ಆಳುತ್ತಿದ್ದ ಕಾಲಕ್ಕೆ ಜೈನ, ಭೌದ್ಧ, ವೈಷ್ಣವ ಹಾಗು ಶೈವ ಧರ್ಮಗಳನ್ನು  ಒಳಗೊಂಡು ಸರ್ವ ಧರ್ಮ ಸಮನ್ವಯ ಮೆರೆದಿದ್ದ ಕಲ್ಯ ಗ್ರಾಮ ಇದೀಗ ಅದ್ಯಾವುದರ ಪರಿವೆಯೂ ಇಲ್ಲದಂತೆ ಎಲ್ಲವನ್ನು ಕಾಲದ ತೆಕ್ಕೆಗೆ ಸೇರಿಸಿ ಸುಮ್ಮನಾಗಿಹೋಗಿದೆ. ಅಲ್ಲಿರುವ ಎಷ್ಟೋ ಇಂದಿನ ಪೀಳಿಗೆಯವರಿಗೆ ಅಲ್ಲೇನು ಇತಿಹಾಸವಿದೆ ಎಂಬ ಅರಿವಿಲ್ಲ. ಇನ್ನುಳಿದ ಕೆಲವು ಹಳೆ ತಲೆಗಳಿಗೆ ಅಲ್ಲಿನ ಇತಿಹಾಸದ ಕೊಂಚ ಮಾಹಿತಿಯಿದ್ದರೂ ಅದು ತಮ್ಮ ಹಿರೀಕರಿಂದ ಬಾಯಿಂದ ಬಾಯಿಗೆ ಹರಿದು ಬಂದ ಜಾನಪದ ಇತಿಹಾಸದಂತಿರುವುದರಿಂದ ಸತ್ಯವೇನು ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲದಂತಾಗಿದೆಹೀಗಿರುವ ಕಲ್ಯ ಗ್ರಾಮವನ್ನು ಶಾಸನಗಳಲ್ಲಿ ಕಾವ್ಯಗಳಲ್ಲಿ ಕಲ್ಯ, ಕಲ್ಲೆಹ, ಕಲಾವತಿ ನಗರ, ಕಲಾವತಿ ಪಟ್ಟಣವೆಂದು ನಾನಾ ಹೆಸರುಗಳಿಂದ ಕರೆಯಲಾಗಿದೆ.

ಇತಿಹಾಸ:
ಕರ್ನಾಟಕ ದಕ್ಷಿಣ ಭಾಗದಲ್ಲಿ ಆಡಳಿತ ನಡೆಸುತ್ತಿದ್ದ ಗಂಗರು ಜೈನ ಧರ್ಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಗಂಗರ ಕಾಲದಲ್ಲಿ ಅವರ ಆಳ್ವಿಕೆಗಳ ಪ್ರದೇಶಗಳಲ್ಲಿ ಅನೇಕ ಜೈನ ಮಂದಿರಗಳುಬಸದಿಗಳು ರೂಪುಗೊಂಡವು. ಇದಾಗಿ ಕಾಲಾನಂತರದಲ್ಲಿ ಗಂಗರ ಆಡಳಿತ ಕೊನೆಯಾಗಿ ಹಿಂದೂ ಸಾಮ್ರಾಜ್ಯ ಪುನಶ್ಚೇತನಕ್ಕಾಗಿಯೇ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ರೂಪುಗೊಂಡಿತ್ತು. ಶೃಂಗೇರಿ  ಜಗದ್ಗುರುಗಳಾದ ವಿದ್ಯಾರಣ್ಯರ ಆಜ್ಞೆಯ ಮೇರೆಗೆ ವಿಜಯನಗರ ಸಾಮ್ರಾಜ್ಯ ತಲೆಯೆತ್ತಿ ನಿಂತಿತ್ತು. ಸರ್ವ ಧರ್ಮಗಳನ್ನು ಸಮಾನ ದೃಷ್ಟಿಯಲ್ಲಿ ಕಾಣುತ್ತಿದ್ದ ವಿಜಯನಗರದ ಅರಸು ಬುಕ್ಕರಾಯರಿಗೆ ಮುಂದೆ ತಲೆನೋವಾಗಿ ಪರಿಣಮಿಸಿದ್ದು ಆಗಾಗ್ಗೆ ಭುಗಿಲೇಳುತ್ತಿದ್ದ ಜೈನ-ವೈಷ್ಣವ ಕಲಹಗಳು. 

ಮುಸ್ಲಿಂ ದೊರೆಗಳು ನಿಧಾನಕ್ಕೆ ಭಾರತದ ಒಂದೊಂದೇ ಸಾಮ್ರಾಜ್ಯವನ್ನು ನುಂಗಿ ನೊಣವಿಕೊಂಡು ಸಾರ್ವಭೌಮರಾಗುತ್ತಿದ್ದ ಕಾಲವದು, ಇಂತಹ ಪರಿಸ್ಥಿತಿಯಲ್ಲಿ ವಿಜಯನಗರದಲ್ಲಿ ಮತೀಯ ಆಂತರಿಕ ಕಲಹಗಳು ನಡೆದು ಆಂತರಿಕ ಭದ್ರತೆಗೆ ಧಕ್ಕೆಯಾದರೆ ವಿಜಯನಗರದ ವೈರಿಗಳಿಗೆ ಇನ್ನೂ ಸುಲಭವಾಗುವುದೆನ್ನುವ ವಿಚಾರ ಮಕ್ಕಳಿಗೂ ತಿಳಿಯುವಂತಹುದು. ಕೂಡಲೇ ಎಚ್ಚೆತ್ತ ಬುಕ್ಕರಾಯರು ಕನ್ನಡ ದಕ್ಷಿಣ ಪ್ರಾಂತದ ವೈಷ್ಣವ-ಜೈನ ನಾಯಕರನ್ನು ಕರೆಯಿಸಿ ಒಬ್ಬರ ಕೈ ಒಬ್ಬರು ಹಿಡಿದುಕೊಳ್ಳುವಂತೆ ಮಾಡಿ ಸಂಧಾನ ಏರ್ಪಡಿಸಿದ್ದರು. ವಿಜಯನಗರ ಇತಿಹಾಸದಲ್ಲಿ ಉಂಟಾದ ಮಹಾ ಸಂಧಾನ ದಾಖಲಾಗಿರುವುದು ಎರಡೇ ಶಾಸನಗಳಲ್ಲಿ ಮೊದಲನೆಯದು ಮಾಗಡಿ ತಾಲೂಕಿನ ಕಲ್ಯ ಗ್ರಾಮದ ಶಾಸನದಲ್ಲಿ, ಎರಡನೆಯದು ಜಗತ್ಪ್ರಸಿದ್ಧ ಶ್ರವಣಬೆಳಗೊಳದ ಶಾಸನದಲ್ಲಿ. ಭಾರತದ ದೇಶದ ಧೀಮಂತ ಹಿಂದೂ ಸಾಮ್ರಾಜ್ಯ ವಿಜಯನಗರದಲ್ಲಿ ಸರ್ವಧರ್ಮ ಸಮನ್ವಯತೆಗೆ ಕೈಗೊಂಡ ಮಹತ್ಕಾರ್ಯಗಳಲ್ಲಿ ಇದೂ ಒಂದಾಗಿರುವುದರಿಂದ ವಿಜಯನಗರದ ಅಧ್ಯಯನಕಾರರಿಗೆ ಶಾಸನಗಳ ಅಧ್ಯಯನವೂ ಬಹು ಮುಖ್ಯವಾಗುತ್ತದೆ.

ಜೈನ- ವೈಷ್ಣವ ಮತೀಯ ಕಲಹ ಸಂಬಂಧಿ ಶಾಸನವನ್ನು ಕ್ರಿ. 1290 ಶ್ರಾವಣದ ಎರಡನೇ ಸೋಮವಾರ ಕಲ್ಯ ಗ್ರಾಮದಲ್ಲಿ ಹಾಕಿಸಲಾಗಿದೆ. ಅದಾಗಿ ಐದು ವಾರಗಳ ನಂತರ ಕಲ್ಯ ಶಾಸನದ ಸುಲಭ ರೂಪದ ಶಾಸನವೊಂದನ್ನು ಶ್ರವಣಬೆಳಗೋಳದಲ್ಲಿ ಹಾಕಿಸಲಾಗಿದೆ

ಶಾಸನಗಳು ಒಳಗೊಂಡ ವಿಚಾರವಿಷ್ಟೇ, ವೈಷ್ಣವರು ಅಧಿಕವಾಗಿ ಪ್ರಾಬಲ್ಯ ಮೆರೆದಿದ್ದ ಕಾಲದಲ್ಲಿ ಅವರ ಉಪಟಳಕ್ಕೆ ಈಡಾದ ಜೈನರು ವಿಜಯನಗರದ ಅರಸು ಬುಕ್ಕರಾಯರ ಬಳಿ ಹೋಗಿ ವೈಷ್ಣವರಿಂದ ತಮಗಾಗುತ್ತಿದ್ದ ಅನ್ಯಾಯವನ್ನು ವಿವರಿಸುತ್ತಾರೆ. ಶ್ರವಣಬೆಳಗೊಳದ ಶಾಸನ ಬರಿ ವೈಷ್ಣವರಿಂದ ಜೈನರಿಗೆ ಅನ್ಯಾಯವಾಯಿತೆಂದು ಬಣ್ಣಿಸಿದ್ದರೆ, ಕಲ್ಯ ಶಾಸನವು ಮುಂದುವರೆದು ವೈಷ್ಣವರು ಜೈನರನ್ನು ನಿಷ್ಕಾರುಣವಾಗಿ ಕೊಂದರು ಎಂದೇ ನೇರವಾಗಿ ಹೇಳಿದೆ. ಶಾಸನವನ್ನು ಕಲ್ಯದಲ್ಲಿ ಹಾಕಿಸಲು ಕಾರಣವೂ ಇಲ್ಲದಿಲ್ಲಬುಕ್ಕರಾಯನಲ್ಲಿಗೆ ದೂರು ಕೊಡಲು ಹೋದ ಜೈನ ಪ್ರಮುಖ ಮುಖಂಡರಲ್ಲಿ ಬೆಳಗೊಳ, ಆನೆಗೊಂದಿ, ಕಲ್ಯ , ಪೆನುಕೊಂಡ, ಹೊಸ ಪಟ್ಟಣ ಮುಂತಾದ ಊರುಗಳ ಜೈನ ಮುಖಂಡರಿದ್ದರು. ಜೈನ ನಿಯೋಗಕ್ಕೆಲ್ಲ ಕಲ್ಯದ 'ಬುಸುವಿ ಸೆಟ್ಟಿ' ಎಂಬಾತನೇ ನಾಯಕನಾಗಿದ್ದನು. ಕಾರಣದಿಂದಲೇ ತನ್ನ ಊರಿನಲ್ಲಿ ಶಾಸನ ಹಾಕಿಸಿದ್ದಾನೆ ಎಂಬ ಅನಿಸಿಕೆ ಇದೆ.

ಜೈನರ ಅಹವಾಲನ್ನೆಲ್ಲ ಕೇಳಿಸಿಕೊಂಡ ಬುಕ್ಕರಾಯನು ಹದಿನೆಂಟು ವೈಷ್ಣವ ಮಠಾಧಿಪತಿಗಳನ್ನು ವಿಜಯನಗರಕ್ಕೆ ಕರೆಯಿಸಿ ಅವರಿಂದಲೂ ಕೆಲ ವಿಚಾರಗಳನ್ನು ಗ್ರಹಿಸಿ ಕೊನೆಗೆ ತೀರ್ಪು ಕೊಡುತ್ತಾನೆ. ಮೂಲತಃ ಜೈನ ಹಾಗು ವೈಷ್ಣವ ಧರ್ಮದ ಬುನಾದಿಗಳು ಒಂದೇ ಆಗಿದ್ದು ಇನ್ನು ಮುಂದೆ ಕಲಹ ಕೂಡದು ಎಂದು ಕಟ್ಟಾಜ್ಞೆ ಹೊರಡಿಸುತ್ತಾನೆ. ಹಾಗು ಇನ್ನು ಮುಂದೆ ಜೈನರ ಬಸದಿಗಳ ರಕ್ಷಣೆಯ ಹೊಣೆಯನ್ನು ವೈಷ್ಣವರಿಗೆ ವಹಿಸುತ್ತಾನೆ. ಜೈನ ಬಸದಿಗಳಲ್ಲಿ ಪೂರ್ವಕಾಲದಿಂದಲೂ ಚಾಲ್ತಿಯಲ್ಲಿದ್ದ ಪಂಚ ಮಹಾವಾದ್ಯಗಳಿಗೂ ಹಾಗು ಕಲಶಗಳ ಗೌರವಕ್ಕೆ ಅಡ್ಡಿಪಡಿಸಬಾರದೆಂದು ಆಜ್ಞಾಪಿಸುತ್ತಾನೆ. ಆಜ್ಞೆಗೆ ಕಟ್ಟು ಬಿದ್ದ ಉಭಯ ಬಣದವರೂ ಬುಕ್ಕರಾಯನ ಷರತ್ತುಗಳಿಗೆ ತಲೆಯಾಡಿಸಿ ಹಿಂದಿರುಗುತ್ತಾರೆ. ಅದೇ ಸಂಬಂಧ ವೈಷ್ಣವರು ಜೈನರಲ್ಲಿ 'ವರ್ಷಕ್ಕಿಷ್ಟು' ಎಂಬ ಮಾದರಿಯಲ್ಲಿ ಹಣ ಸಂಗ್ರಹ ಮಾಡಿ ಅದರಿಂದ ಜೈನ ಬಸದಿಗಳಿಗೆ ಕಾವಲುಗಾರರನ್ನು ನೇಮಿಸುತ್ತಾರೆ. ರಕ್ಷಣೆಗೆ ನೇಮಕಾವಾದವರು ವೈಷ್ಣವರ  ಕಡೆಯವರೇ ಆದರೆ ಹಣ ಕೊಡುವುದು ಮಾತ್ರ ಜೈನರು ಎಂಬಂತಾಯಿತು. ವಿಧಿಯಿಲ್ಲದೆ ಎಲ್ಲ ಜೈನರು ಇದನ್ನು ಒಪ್ಪಿಕೊಳ್ಳಲೇ ಬೇಕಾಯಿತು.ಮುಂದೆ ಕಲ್ಯದ ಬುಸುವಿ ಸೆಟ್ಟಿ ವಹಿಸಿದ್ದ ಪಾತ್ರದ ಕುರಿತು ಸಂತೋಷ ಭರಿತರಾದ ಉಭಯ ಮತದ ನಾಯಕರು ಬುಸುವಿ ಸೆಟ್ಟಿಗೆ 'ಸಂಘ ನಾಯಕ' ಎಂಬ ಬಿರುದು ಪ್ರಧಾನ ಮಾಡಿದರು ಎಂದು ಉಲ್ಲೇಖವಾಗಿದೆ.

ಕಲ್ಯದಲ್ಲಿ ಸದ್ಯ ಲಭ್ಯವಿರುವ ಶಾಸನದಲ್ಲಿ ತೆಂಗಿನ ಕಾಯಿ ಮಾವಿನ ಎಲೆಗಳಿಂದ ಅಲಂಕೃತವಾದ ಕಲಶವನ್ನು ಮಾತ್ರ ಕೆತ್ತಲಾಗಿದ್ದು, ಇದೇ ಶಾಸನದ ಶ್ರವಣಬೆಳಗೊಳ ಆವೃತ್ತಿಯಲ್ಲಿ ಶಾಸನದಲ್ಲಿ ಕಳಶದೊಂದಿಗೆ ವೈಷ್ಣವರ ಶಂಖ ಚಕ್ರ ತಿರುನಾಮಗಳನ್ನು ಕಾಣಬಹುದಾಗಿದೆ. ಜೈನ-ವೈಷ್ಣವ ಕಲಹಗಳು ತಣ್ಣಗಾಗಲು ಬುಕ್ಕರಾಯ ನಾಂದಿ ಹಾಡಿದ್ದರೂ ಅದು ಹೆಚ್ಚು ಕಾಲ ಬಾಳಲಿಲ್ಲ. ಮತೀಯ ಕಲಹ ಮೇರೇ ಮೀರಿದಾಗ ಜೈನ ಬಸದಿಗಳ ಮೇಲೂ, ವೈಷ್ಣವರ ಮಂದಿರಗಳ ಮೇಲೂ ದಾಳಿಗಳಾದವೂ. ಹಲವಾರು ದೇವಾಲಯಗಳು, ಬಸದಿಗಳು ಭಗ್ನವಾದವು. ಅದಕ್ಕೆ ಸಾಕ್ಷಿಯಾಗಿ ಭಗ್ನಾವಶೇಷಗಳು ಇಂದಿಗೂ ಶ್ರವಣಬೆಳಗೊಳ ಹಾಗು ಕಲ್ಯ ದಲ್ಲಿ ಕಾಣ ಸಿಗುತ್ತವೆ.

ಕಲ್ಯದಲ್ಲಿ ಹದಿಮೂರನೇ ಶತಮಾನದ ಶಾಸನವಿರುವ ಪಾರ್ಶ್ವನಾಥ ವಿಗ್ರಹವಿದೆ. ಕಲ್ಯದ ನಿಸಿದಿ ಕಲ್ಲು, ಜೈನ ವಿಗ್ರಹ, ಬಸದಿ ಗುಂಡಿ ಎಂದು ಕರೆಯುವ ಜಾಗ, ಮುಕ್ಕೊಡೆ ಶಿಲ್ಪಗಳು, ಮಾನಗಂಬ ಇವೆ ಮೊದಲಾದ ಕುರುಹುಗಳು ಕಲ್ಯ ಹಿಂದೊಮ್ಮೆ ಬಹು ದೊಡ್ಡ ಜೈನ ಕೇಂದ್ರವಾಗಿತ್ತು ಎಂಬುದನ್ನು ಎತ್ತಿ ತೋರಿಸುತ್ತಿವೆಕಲ್ಯದ ಬಸದಿಗುಂಡಿ ಎಂಬ ಜಾಗ ಇದೀಗ ಬರೀ ತಿಪ್ಪೆಗಳಿಂದ ಕೂಡಿದ ಜಾಗವಾಗಿದ್ದು ಹಿಂದೊಮ್ಮೆ ಅಲ್ಲಿ ಐದು ಜೈನರ ಬಸದಿಗಳಿದ್ದವು ಎಂದು ತಿಳಿದು ಬಂದಿದೆ. ಕಲ್ಯದ ಸಮೀಪವಿರುವ ಹೂಜಿಗಲ್ಲು ಎಂಬ ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ಜೈನ ಶಿಲ್ಪಗಳಿರುವ ಬಂಡೆಯೊಂದಿದೆ. ಎಲ್ಲ ಪುರಾವೆಗಳೂ ಕಲ್ಯದಲ್ಲಿ ಜೈನ ಮಂದಿರಗಳ ಭಾರಿ ವಿನಾಶ ನಡೆದಿದೆ ಎಂಬುದನ್ನು ಪುಷ್ಟೀಕರಿಸುತ್ತವೆ. ತತ್ಸಮಯದಲ್ಲಿಯೇ ಜೈನರಿಂದ ವೈಷ್ಣವರ ದೇವಾಲಯಗಳ ಮೇಲೂ ಪ್ರತೀಕಾರಾರ್ಥವಾಗಿ ದಾಳಿಗಳು ನಡೆದಿವೆ ಎಂದು ಅಂದಾಜಿಸಲಾಗಿದ್ದು ಮಾಗಡಿಯ ರಂಗನಾಥ ಸ್ವಾಮಿ ಕಲ್ಯದಲ್ಲಿತ್ತೆಂದು ಹೇಳಲಾಗುತ್ತಿದೆ. ಆದ ಕಾರಣದಿಂದಲೇ ಇಂದಿಗೂ ದೇವರ ಜಾತ್ರೆಯಂದು ನಡೆಯುವ ರಥೋತ್ಸವದಲ್ಲಿ ಕಲ್ಯ ಗ್ರಾಮಕ್ಕೆ ಮೊದಲ ಪ್ರಸಾದ ರವಾನೆಯಾಗುತ್ತದೆ

ಕಲ್ಯದ ಬೆಟ್ಟದ ಬಳಿ ಈಗ ಒಂದು ಗರುಡಗಂಬ ಮಾತ್ರ ಕಾಣಸಿಗುತ್ತದೆ. ಹಿಂದೆ ಅದು ವರದರಾಜ ಸ್ವಾಮಿ ದೇವಸ್ಥಾನವಾಗಿದ್ದು ವೈಷ್ಣವರ ಆರಾಧನಾ ಕೇಂದ್ರವಾಗಿತ್ತು. ಇದು ಮತೀಯ ಕಲಹದ ವೈಷ್ಣವರ ವಿನಾಶವಾದರೆ, ಈಗಲೂ ಕಲ್ಯ ಗ್ರಾಮದಲ್ಲಿ 'ಉಷ್ಟಮರು' ಎಂಬ ವೈಷ್ಣವ ಮತದ ಶೂದ್ರ ಅನುಯಾಯಾಯಿಗಳು ವಾಸಿಸುತ್ತಿದ್ದಾರೆ. ಆದರೆ ಸದ್ಯ ಜೈನರು ಯಾರು ಅಲ್ಲಿ ವಾಸವಿಲ್ಲ. ಮತೀಯ ಕಲಹವಾಗಿ ಜೈನರು ಕಲ್ಯದಿಂದ ಕಾಲ್ಕಿತ್ತು ಸಮೀಪದ ಸಂಕಿಘಟ್ಟಕ್ಕೆ ಹೋಗಿ ನೆಲೆಸಿರಬಹುದೆಂದು ನಂಬಲಾಗಿದೆ. ಸಂಕಿಘಟ್ಟದಲ್ಲಿ ಈಗಲೂ ಜೈನರಿದ್ದಾರೆ. ಜೈನ-ವೈಷ್ಣವರ ಕಣ್ಗಾವಲಿಗೆಂದೇ ಬುಕ್ಕರಾಯ ಅಧಿಕಾರಿಯೊಬ್ಬನನ್ನು ಕಲ್ಯದಲ್ಲಿ ನೇಮಿಸಿದ್ದನೆಂದು 1386 ಶಾಸನವೊಂದು ತಿಳಿಸುತ್ತದೆ.

ಹದಿಮೂರನೇ ಶತಮಾನದ ಆಸುಪಾಸಿಗೆ ಕಲ್ಯದಲ್ಲಿ ಜೈನ-ವೈಷ್ಣವ ಕಲಹ ಭುಗಿಲೆದ್ದು ಗ್ರಾಮ ಸರ್ವನಾಶವಾಗುತಿರಲು ಅತ್ತ ಕಲ್ಯಾಣದಲ್ಲಿ ಬಸವೇಶ್ವರರ ನಿರ್ಗಮನವಾಗಿತ್ತು. ವೀರಶೈವ ಪಂಥದವರನ್ನು ನಾನಾ ಹಿಂಸೆಗೆ ಗುರಿ ಮಾಡುತ್ತಿದ್ದ ಕ್ರಾಂತಿ ಸಮಯದಲ್ಲಿ ಕಲ್ಯಾಣದ ಶರಣರೆಲ್ಲ ಅಲ್ಲಿಂದ ಹೊರಟು ಕನ್ನಡ ಭಾಷಾ ಪ್ರಾಂತ್ಯಗಳಲ್ಲಿ ವಿವಿಧ ಭಾಗಗಳಲ್ಲಿ ಚದುರಿಹೋದರು. ಅದೇ ಸಮಯದಲ್ಲಿ ಕಲ್ಯದ ಬೆಟ್ಟದಲ್ಲಿ 'ಸರ್ವಶೀಲೆ ಚೆನ್ನಮ್ಮ' ಎಂಬ ವೀರಶೈವ ಧರ್ಮದ ಸಾಧ್ವಿ ಶರಣೆ ಬದುಕಿದ್ದಳು ಎನ್ನುವುದು ಪಾಲ್ಕುರಿಕೆ ಸೋಮೇಶ್ವರ ಪುರಾಣದಿಂದ ತಿಳಿದು ಬರುತ್ತದೆ. ಈಗಲೂ ಕಲ್ಯದ ಬೆಟ್ಟದಲ್ಲಿ ಚೆನ್ನಮ್ಮನ ಗದ್ದುಗೆ ಎಂದು ಕರೆಸಿಕೊಳ್ಳುವ ಚೆನ್ನಮ್ಮನ ಸಮಾಧಿ ಇದೆ. ಕಲ್ಯದ ಬೆಟ್ಟ ವೀರಶೈವ ಧರ್ಮದ ಶರಣರಿಗೆ ಆಶ್ರಯ ನೀಡಿತ್ತು ಎಂಬುದು ಇಲ್ಲಿನ ಶರಣ ಸಂಕುಲದ ಬಗ್ಗೆ ಗಮನ ಹರಿಸಿದಾಗ ತಿಳಿಯುತ್ತದೆ. ಇದೀಗ ಕಲ್ಯ ಬೆಟ್ಟದಲ್ಲಿ ವೀರಶೈವ ಧರ್ಮದವರು ಯಾರು ಇಲ್ಲದಿದ್ದರೂ ಸಮೀಪದಲ್ಲಿರುವ ಕಲ್ಯ ಗ್ರಾಮ, ಉಪ್ಪಾರ್ತಿ ಹಾಗು ಹೂಜಿಗಲ್ಲುಗಳಲ್ಲಿ ವೀರಶೈವರು ನೆಲೆಸಿದ್ದಾರೆ.

ಕಲ್ಯದಲ್ಲಿ ಆಗಿ ಹೋದ ಶರಣ ಪ್ರಮುಖರಲ್ಲಿ ಅತೀ ಮುಖ್ಯವಾದವರೆಂದರೆ ಪಾಲ್ಕುರಿಕೆ ಸೋಮನಾಥರು. ಹನ್ನೆರಡನೇ ಶತಮಾನಕ್ಕೆ ಸೇರಿದ  ಪಾಲ್ಕುರಿಕೆ ಸೋಮನಾಥರ ಮಾತೃ ಭಾಷೆ ತೆಲುಗು. ಕಲ್ಯಾಣದಲ್ಲಿ ನಡೆಯುತ್ತಿದ್ದ ಶರಣ ಕ್ರಾಂತಿಗೆ ಮನಸೋತು ಬಸವ ತತ್ವ ಪಾಲನೆಯಲ್ಲಿ ತೊಡಗಿಕೊಂಡ ಸೋಮನಾಥರು ಬಸವಣ್ಣನವರ ಕನ್ನಡದ್ಲಲಿದ್ದ ವಚನಗಳನ್ನು ತೆಲುಗು ಭಾಷೆಗೆ ಅನುವಾದಿಸಿ ಆಂಧ್ರ ಸೀಮೆಯಲ್ಲೂ ಬಸವ ತತ್ವ ಪಸರಿಸಲು ನೆರವಾಗಿದ್ದರು. ಪಾಲ್ಕುರಿಕೆ ಸೋಮನಾಥರು ಬಸವಣ್ಣನವರ ಸಮಕಾಲೀನರೇ ಎಂದು ಅಂದಾಜಿಸಲಾಗಿದೆ. ಈಗಿನ ತೆಲಂಗಾಣದ ವಾರಂಗಲ್ ಬಳಿಯ ಪಾಲ್ಕುರಿಕೆ ಎಂಬ ಊರಿನಲ್ಲಿ ಜನಿಸಿದ ಪಾಲ್ಕುರಿಕೆ ಸೋಮನಾಥ ಬಸವ ತತ್ವ ಪ್ರಚಾರ ಮಾಡುತ್ತಾ ಕಲ್ಯಕ್ಕೆ ಬಂದಿದ್ದಿರಬಹುದೆಂದು ಹಾಗು ಕಲ್ಯಾಣದಲ್ಲಿ ಶರಣರಿಗೆ ಒಲಿದ ಆಪತ್ತನ್ನು ಕಂಡು ಕಲ್ಯದಲ್ಲಿಯೇ ನೆಲೆ ನಿಂತರೆಂದು ನಂಬಲಾಗಿದೆ

ಕನ್ನಡದ ಬಸವ ಪುರಾಣವನ್ನು ತೆಲುಗಿಗೆ ಅನುವಾದಿಸಿರುವ ಪಾಲ್ಕುರಿಕೆ ಸೋಮನಾಥರು ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ತಾವೂ ವಚನಗಳನ್ನು ರಚಿಸಿದ್ದಾರೆ. ಇವರು ಸಂಸ್ಕೃತ ಭಾಷೆಯ ಮೇಲೂ ಉತ್ತಮ ಹಿಡಿತ ಹೊಂದಿದ್ದರೆಂದು ಹಾಗು ಭಾಷೆಯಲ್ಲಿಯೂ ಬಸವ ತತ್ವಕ್ಕೆ ಸಂಬಂಧಿಸಿದ ಹಲವು ಗ್ರಂಥಗಳನ್ನು ಬರೆದಿದ್ದಾರೆಂದು ತಿಳಿದುಬಂದಿದೆ. ಕಲ್ಯದ ಬೆಟ್ಟದಲ್ಲಿ ಈಗ ವೀರಶೈವ ಮಠವೊಂದಿದ್ದು ಅದರ ಹೊರಗೆ ನಾಲ್ಕು ಗದ್ದುಗೆಗಳಿವೆ, ಅದರ ಪೈಕಿ ಒಂದು ಗದ್ದುಗೆಯ ಮೇಲೆ ಬಸವನ ವಿಗ್ರಹವಿರಿಸಲಾಗಿದೆ. ಇದನ್ನೇ ಪಾಲ್ಕುರಿಕೆ ಸೋಮನಾಥರ ಸಮಾಧಿಯೆಂದು ನಂಬಲಾಗಿದೆ. ಚೆನ್ನ ಬಸವ ಪುರಾಣದ ಪ್ರಕಾರವೂ ಪಾಲ್ಕುರಿಕೆ ಸೋಮನಾಥರು ಸತ್ತಿದ್ದು ಇದೆ ಕಲ್ಯದಲ್ಲಿ ಎನ್ನುವುದು ಸೋಮನಾಥರ ಸಮಾಧಿ ಎಂದು ನಂಬಲಾದ ಸ್ಥಳಕ್ಕೆ ಮತ್ತಷ್ಟು ಬಲ ಕೊಡುತ್ತದೆ. ಈಗಲೂ ವೀರಶೈವರು ಇಲ್ಲಿ ವರ್ಷಕ್ಕೊಮ್ಮೆ ಸೋಮನಾಥ ಆರಾಧನೆಯನ್ನು ಆಚರಿಸುತ್ತಾರೆ.

ಕಲ್ಯದಲ್ಲಿ ಕಲ್ಲೇಶ್ವರ ಗುಡಿಯೊಂದಿದ್ದು ಊರಿಗೆ ಕಲ್ಲೆಹ/ಕಲ್ಯ ಎಂಬ ಹೆಸರು ಬರಲು ದೇವೆರೆ ಕಾರಣವಿರಬಹುದೆಂದು ಇತಿಹಾಸ ತಜ್ಞರು ಊಹಿಸಿದ್ದಾರೆ. ಕಲ್ಲೇಶ್ವರ ಗುಡಿಯ ಒಂದು ಕಂಬದ ಮೇಲೆ 'ಕುಂಬಳಕಾಯಜ್ಜಿಯದು' ಎಂದು ಕೆತ್ತಿರುವ ಸ್ತ್ರೀ ರುಂಡದ ಶಿಲ್ಪವೊಂದು ಕಾಣಸಿಗುತ್ತದೆ. ಕಲಾವತಿ ಎಂಬ ಒಬ್ಬಳು ಊರಿಗೆ ಕುಂಬಳಕಾಯಿ ಮಾರಲು ಬಂದಾಗ ಕುಂಬಳಕಾಯಿ ಕೊಳ್ಳುವ ವಿಚಾರದಲ್ಲಿ ಊರಿನ ಜೈನರಿಗೂ-ವೈಷ್ಣವರಿಗೂ ಜಗಳವಾಗಿ ಕೊನೆಗೆ ಊರು ಹಾಳಾಯಿತೆಂದು ಒಂದು ಪ್ರತೀತಿ(ಕುಂಬಳಕಾಯಿ ಮಾರಲು ಬಂದ ಹೆಂಗಸು ವೈಷ್ಣವ ಮತದ ಅನುಯಾಯಿಯಾಗಿದ್ದವಳು ಎಂಬ ಕಾರಣಕ್ಕೆ ಜೈನರು ಯಾರೂ ಕುಂಬಳ ಕಾಯಿ ಕೊಳ್ಳಲಿಲ್ಲವಂತೆ, ಆಕೆ ಬೆಳಿಗ್ಗೆಯಿಂದ ಸಂಜೆವರೆಗೂ ಜೈನ ಬೀದಿಗಳಲ್ಲಿ ಅಲೆದರೂ ಕುಂಬಳಕಾಯಿ ಬಿಕರಿಯಾಗದಿದ್ದಾಗ ಬೇಸತ್ತು ಜೈನ ಬೀದಿಯ ಮುಂದೆ ಕುಂಬಳಕಾಯಿಗಳನ್ನೆಲ್ಲ ಎತ್ತಿಹಾಕಿ ಜೈನರನ್ನು ಶಪಿಸಿದಳು ಎನ್ನುವುದು ಒಂದು ಜಾನಪದ ಕಥೆ).

ಇವಿಷ್ಟೇ ಅಲ್ಲದೆ ಕಲ್ಯದ ಸುತ್ತ ಮುತ್ತಲ ಊರುಗಳಲ್ಲಿ ಅನೇಕ ವೀರಗಲ್ಲುಗಳು, ಶಾಸನಗಳು ಪತ್ತೆಯಾಗಿವೆ. ಆದರೆ ಅವುಗಳ ಬಗ್ಗೆ ಸ್ಥಳೀಯರಿಗೆ ಅಷ್ಟಾಗಿ ಮಾಹಿತಿಯಿರುವುದಿಲ್ಲ. ಶಾಸನಗಳು ಹೊರಜಗತ್ತಿಗೂ ತಿಳಿಯದೆ ಕಾಲ ಗರ್ಭದಲ್ಲಿ ಹುದುಗಿ ಹೋಗುತ್ತಿವೆ. ಅವುಗಳ ಅಧ್ಯಯನದಿಂದ ವಿಜಯನಗರ ಸಾಮ್ರಾಜ್ಯದಂತಹ ಎಷ್ಟೋ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಅವಕಾಶವಾಗಲಿದೆ.

ಕಲ್ಯ ಶಾಸನದಲ್ಲಿರುವ ಕನ್ನಡ ಲಿಪಿಯ ಪಾಠ

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಪಾಷಂಡ ಸಾಗರ ಮಹಾವಡಬಾ ಮು ಖಾಗ್ನಿ ಶ್ರೀ ರಂಗರಾಜ ಚರಣಾಂಬ ಜ ಮೂ ಲದಾಸಃ ಶ್ರೀ ವಿಷ್ಣು ಲೋಕ ಮಣಿ ಮಂಡಪ ಮಾರ್ಗದಾಯಿ ರಾಮಾನು ಜೋ ವಿಜಯತೇ ಯತಿರಾಜರಾಜ

ಶಕವರುಷ ೧೨೯೦ ನೆಯ ಕೀಲಕ ಸಂವತ್ಸರದ ಭಾದ್ರಪದ ಶು ೧೦ ಬೃಹಸ್ಪತಿವಾರ ಸ್ವಸ್ತಿ ಶ್ರೀಮನ್ಮಹಾಮಂಡಳೇಸ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ ರಾಯರ ಗಂಡ ಶ್ರೀ ವೀರಬು
ಕ್ಕರಾಯಂ ಪೃಥ್ವೀರಾಜ್ಯಮಂ ಮಾಡು ತ್ತಾ ಇರು ವಲ್ಲಿ ಜೈನರಿಗೂ ಭಕ್ತರಿಗೂ ಸಂವಾದಮಾದಲ್ಲಿ ಆನೆಗೊಂದಿ ಹೊಸಪಟ್ಟಣ ಪೆನುಗೊಂಡೆ ಕಲ್ಲೇಹದ ಪಟ್ಟಣದೊಳಗಾದ ಸಮಸ್ತ ಭವ್ಯಜನಂಗಳ್ ಬು ಕ್ಕರಾಯಂಗೆ ಭಕ್ತರ್ ಮಾಡುವ ಅನ್ಯಾಯಂಗಳನ್ನು ಬಿನ್ನಹಂ ಮಾಡಲಾಗಿ ಕೋವಿಲ್ ತಿರು ಮಲೆ ಪೆರು ಗೋಯಿಲ್ ತಿರುನಾರಾಯಣಪುರಂ ಮುಖ್ಯವಾದ ಸಕಳಾಚಾರ್ಯರು ಸಕಳ ಸಮಯಿಗಳ್ ಸಕಳ ಸಾತ್ವಿಕರ್ ವೇಷ್ಟಿಕರ್ ತಿರು ಮಣಿ ತಿರು ವಡಿ ತಣ್ಣಿರು ನಾಲ್ವತ್ತೆಂಟು ತಾತಯ್ಯಗಳು ಸಾವಂತ ಬೋವಕ್ಕಳು ತಿರು ಕು ಲ ಜಾಂಬವ ಕು ಲ ದೊಳಾದ ದಿನ್ನೆರಡರೊಳಾದ ಒಳೆಗಾದ ಹದಿನೆಂಟು ನಾಡ ರಾಯನು ಶ್ರೀ ವೈಷ್ಣವರ ಕೈಯೊಳು ಜೈನರ ಕೈವಿಡಿದು ಕೊಟ್ಟು ಈ ಜೈನ ದರ್ಶನಕ್ಕೆ ಪೂ ರ್ವಮರ್ಯಾದೆಯಿಟ್ಟು ಪಂಚಮಹಾವಾದ್ಯಂಗಳುಂ ಕಳಸ ಕನ್ನಡಿ ಶ್ವೇತ ಚ್ಛತ್ರ ಚಾಮರೆಂಗಳ್ ಮೊದಲಾದ ಬಿರು ದು ಗಳು ಸಲು ವವು. ಜೈನ ದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದೊಡಂ ವೈಷ್ಣವ ಹಾನಿವೃದ್ಧಿಯೆಂದು ಪಾಲಿಸಬೇಕು . ಈ ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನಮಂ ಕೊಟ್ಟು ಪಾಲಿಸುವರು . ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯದವರು , ಶ್ರೀಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡು ಬಹೆವು . ವೈಷ್ಣವ ರೂ ಜೈನರು ಒಂದು ಭೆದವಾಗಿ ಕಾಣಲಾಗದು . ಶ್ರೀ ತಿರು ಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನಮತಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಗಳೊಳಗು ಳ್ಳಂಥ ವೈಷ್ಣವರು ಜೈನರು ಬಾಗಿಲು ಗಟ್ಟಲೆಯಾಗಿ ಮನೆಗೆ ವರುಷ ಒಂದಕ್ಕೆ ಒಂದು ಹಣವಂ ಕೊಟ್ಟು ಆ ಯೆತ್ತಿ ಬಂದ ಹೊನ್ನಿಂಗೆ ದೇವರ ಅಂಗ ರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನ ಚೈತ್ಯಾಲಯೋದ್ಧರಣಕ್ಕೆ ಸೊದೆಯನಿಕ್ಕುವುದು . 

ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು . ಈ ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು . ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂ ಡಿ ಸಂಘನಾಯಕ ಪಟ್ಟಮಂ ಕಟ್ಟಿದರು .ಈ ಶಾಸನಂ ಬೆಳು ಗು ಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳು ತ್ತರಾಭಿಮು ಖವಾಗಿ ಸ್ಥಾಪಿಸಿದೆ.

ಶನಿವಾರ, ಅಕ್ಟೋಬರ್ 8, 2016

ಗಾಂಧೀಜಿಯ ನಕಲಿ ಫೋಟೋಗಳು

ಕಲಾವಿದನಾದವನು, ತಂತ್ರಜ್ಞನಾದವನು ಅಥವಾ ಯಾರೇ ಆಗಿರಲಿ ತನಗೆ ಗೊತ್ತಿರುವ ಕಾರ್ಯವನ್ನು ರಚನಾತ್ಮಕ ಕ್ರಿಯೆಗಳಲ್ಲಿ ಬಳಸಿಕೊಳ್ಳುವ ಬಗ್ಗೆ ಹೆಚ್ಚಾಗಿ ಯೋಚಿಸಬೇಕು. ಆಗಲೇ ಅವನು ಕಲಿತ ವಿದ್ಯೆಗೆ, ಒಲಿಸಿಕೊಂಡ ಸರಸ್ವತಿಗೆ ಒಂದು ಬೆಲೆ. ಆದರೆ ಜಗತ್ತು ಬೆಳೆದಂತೆಲ್ಲಾ ತಾವು ಕಲಿತ ವಿಚಾರಗಳನ್ನು ವಿಕೃತಗಳಿಗೂ ಬಳಸುವಲ್ಲಿ ಮಗ್ನರಾಗುತ್ತಿರುವ ವಿದ್ಯಾವಂತರು ನಿಜಕ್ಕೂ ದೇಶದ ದುರಂತವೇ ಸರಿ. ಅಂತಹ 'ವಿಕೃತ ಜ್ಞಾನಿಗಳ' ಕೈಚಳಕದಿಂದ ಏನಾಗಿದೆ? ಇತ್ತ ನೋಡಿ.

ಗಾಂಧೀಜಿ ದೇಶ ಕಂಡ ಅಪ್ರತಿಮ ಅಹಿಂಸಾ ನಾಯಕ. ದೇಶಕ್ಕೆ ಸ್ವಾತಂತ್ರ್ಯ ಪಡೆಯುವಲ್ಲಿ ಮಂದಗಾಮಿಗಳ ಕೈ ಮುಂದೋ? ಅಥವಾ  ತೀವ್ರಗಾಮಿಗಳ ಕೈ ಮುಂದೋ ? ಎಂದು ತರ್ಕಕ್ಕಿಳಿಯುವ ಬದಲು, ತಮಗೆ ತೋಚಿದ ಮಾರ್ಗದಲ್ಲಿ ನಮ್ಮ ಪೂರ್ವಜರೆಲ್ಲರೂ ಸೇರಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟು ಹೊರಟು ಹೋಗಿದ್ದಾರೆ.ಶಾಂತಿಮಾರ್ಗ, ಕ್ರಾಂತಿ ಮಾರ್ಗ, ವಾಮ ಮಾರ್ಗ ಹೀಗೆ ಯಾವ್ಯಾವ ಬಗೆಯ ಹೋರಾಟಗಳಿವೆಯೋ ಎಲ್ಲವೂ ಸ್ವಾತಂತ್ರ್ಯಕ್ಕಾಗಿ ಆಗಿ ಹೋಗಿದ್ದು ಈ ದೇಶ ಕಂಡ ಅವರ್ಣನೀಯ ಕ್ರಾಂತಿ. ಇಂತಿಪ್ಪ ಕ್ರಾಂತಿಯೊಳಗೆ ಮಹಾತ್ಮ ಗಾಂಧೀಜಿ ಆಯ್ದುಕೊಂಡಿದ್ದು ಶಾಂತಿ ಮಾರ್ಗ, ಅಹಿಂಸಾ ಮಾರ್ಗ.    ಇಷ್ಟಕ್ಕೂ ಅಹಿಂಸಾ ಮಾರ್ಗ ಭಾರತಕ್ಕೆ ಹೊಸದೇನೂ ಆಗಿರಲಿಲ್ಲ. ಇತಿಹಾಸ ಪುಟಗಳನ್ನೊಮ್ಮೆ ತಿರುವಿ ಅವಗಾಹಿಸಿದರೆ ಕ್ರಾಂತಿಗಳ ನಡುವೆ ಶಾಂತಿ ಹೊದ್ದುಕೊಂಡು ಬಂದು ಅದ್ಭುತಗಳನ್ನೇ  ಸೃಷ್ಟಿಸಿದ ಬೇಕಾದಷ್ಟು ಜನರಿದ್ದಾರೆ. ಅದಕ್ಕೆ ಮಾದರಿ ಉದಾಹರಣೆಯೆಂದರೆ ಕದಂಬರ ದೊರೆ 'ಮಯೂರ ವರ್ಮ'. ಕುತಂತ್ರ ಕುಯುಕ್ತಿಗಳಿಂದ ಪಲ್ಲವರ ಪಾಲಾದ ತನ್ನ ತಂದೆಯ ರಾಜ್ಯವನ್ನು ರಕ್ತಪಾತವಿಲ್ಲದೆ ಪಡೆದುಕೊಳ್ಳುತ್ತಾನೆ, ಅದೂ ತಾನು ಅಪ್ರತಿಮ ವೀರನಾಗಿದ್ದುಕೊಂಡು. ಮಯೂರ ವರ್ಮ ಶಾಂತಿ ಶಾಂತಿಎಂದು ಎಲ್ಲೆಡೆ ಹೇಳಿಕೊಂಡು ತಿರುಗದೆ ಮಾಡಿ ತೋರಿಸಿದ್ದಾನೆ. ಕ್ಷುಲ್ಲಕ ಕಾರಣಗಳಿಗೆ ರಕ್ತ ಚೆಲ್ಲಿ, ಒಂದಷ್ಟು ಜೀವಗಳನ್ನು ಕೈಲಾಸಕ್ಕೆ ಕಳುಹಿಸಿ ಕಟ್ಟುವ ರಾಜ್ಯವಾಗಲಿ, ದೇಶವಾಗಲಿ ಅದು ಮಡಿದವರ ಸಮಾಧಿಯ ಮೇಲೆ ಕಟ್ಟುವ ಅರಮನೆಯಂತಿರುತ್ತದೆ ಹೊರತು ನಂದನವನವಾಗಲು ಸಾಧ್ಯವೇ?.

ಗಾಂಧೀಜಿಯ ಅಹಿಂಸಾ ವಾದ ಅದೇಕೋ ಕೆಲವಷ್ಟು ಜನರಿಗೆ ರುಚಿಸಲಿಲ್ಲ. ಇದು ಆಗಿನ ಕ್ರಾಂತಿಕಾರಿಗಳಿಗೆ ಮಾತ್ರವಲ್ಲ, ಈಗಿನ ಬುದ್ಧಿಜೀವಿಗಳಲ್ಲಿ ಕೆಲವರಿಗೂ ಅದು ರುಚಿಸುತ್ತಿಲ್ಲ. ಹೀಗಾಗಿ ಗಾಂಧೀಜಿ ದೇಶಕ್ಕೆ ಕೊಟ್ಟ ಕೊಡುಗೆ ಕೆಲವರಿಗೆ ನಗಣ್ಯವಾಗಿ ಕಾಣುತ್ತಿದೆ. ಇತರ ವಿಚಾರಧಾರೆಗಳಿಂದ ಪ್ರಭಾವಿತರಾದ ಕೆಲವು ಬುದ್ಧಿವಂತರು ಗಾಂಧೀಜಿಯ ಕೆಲವು ಚಿತ್ರಗಳನ್ನು ಬಳಸಿಕೊಂಡು ಆತ್ಮ ವಧೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಮೂಲಕ ಗಾಂಧೀಜಿ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ನಾಳಿನ ಪ್ರಜೆಗಳ ಮನಸಿನಲ್ಲಿ ಬಿತ್ತುವ ಕೆಲಸವನ್ನು ವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದಾರೆ. ಆ ಕೆಲವು ಫೋಟೋಗಳು ಇಲ್ಲಿವೆ.

ಯುವತಿಯೊಂದಿಗೆ ಗಾಂಧೀಜಿ 



ಗಾಂಧೀಜಿ ನೆಹರು ಜೊತೆ ಸಂಭಾಷಣೆಯಲ್ಲಿ ನಿರತರಾಗಿದ್ದಾಗ ತೆಗೆದಿರುವ ಚಿತ್ರವನ್ನೇ ಬಳಸಿಕೊಂಡು ಹುಡುಗಿಯೊಬ್ಬಳು ಗಾಂಧೀಜಿಯೊಂದಿಗೆ ಮೂಗಿಗೆ ಮುಗು ತಾಗಿಸಿ ನಗುತ್ತಿರುವಂತೆ ಮಾಡಲಾಗಿದೆ. ಎರಡೂ ಚಿತ್ರಗಳಲ್ಲಿ ಗಾಂಧೀಜಿ ಹಿಡಿರುವ ಕಾಗದದ ಕಂತೆ, ಹಿಂದಿನ ಗೋಡೆ ಎಲ್ಲವೂ ಹೋಲುತ್ತಿದ್ದು ನೆಹರು ಬದಲಿಗೆ ಹುಡುಗಿಯೊಬ್ಬಳು ಇರುವಂತೆ ಎಡಿಟ್ ಮಾಡಲಾಗಿದೆ.

ನೃತ್ಯ ನಿರತ ಗಾಂಧೀಜಿ


ಸದಾ ಕಾಲ ಉಪವಾಸ, ಸಂಪೂರ್ಣ ಮೈ ಮುಚ್ಚಿಕೊಳ್ಳದೆ ತಿರುಗುವ ವಯಸ್ಸಾದ ದೇಹಕ್ಕೆ ಸದೃಢ ಮೈಕಟ್ಟು ಬರುವುದೆಂದರೇನು? ..ಹಾಗೆ ಬರಲು ಸಾಧ್ಯವೇ?..ಹುಡುಗಿಯೊಂದಿಗೆ ನೃತ್ಯ ನಿರತರಾಗಿರುವ ಗಾಂಧೀಜಿ ತೋಳುಗಳನ್ನೊಮ್ಮೆ ಗಮನಿಸಿ. ಗಾಂಧೀಜಿಯ ಮೈಕಟ್ಟು ಅದಲ್ಲ ಎನ್ನುವ ಪುರಾವೆ ಪಕ್ಕದಲ್ಲೇ ಇದೆ.  ಹಾಗೇ ಭಾರತದಲ್ಲಿ ಎಷ್ಟೋ ಕಡೆ ಗಾಂಧೀಜಿ ಬಳಸಿದ ಸಾಮಗ್ರಿಗಳನ್ನು ವಸ್ತು ಸಂಗ್ರಹಾಲಯದಲ್ಲಿ ಕಾಣ ಬಹುದಾಗಿದೆ. ಭಾರತದಲ್ಲಷ್ಟೇ ಅಲ್ಲದೆ ಹೊರದೇಶಗಳೂ ಕೂಡ ಆಗೊಮ್ಮೆ ಈಗೊಮ್ಮೆ ಗಾಂಧೀಜಿ ಬಳಸಿದ ವಸ್ತುಗಳನ್ನು ಹರಾಜು ಮಾಡುತ್ತಿರುತ್ತವೆ. ಅಲ್ಲೆಲ್ಲೂ ಕಾಣಸಿಗದ ಗಾಂಧೀಜಿ ಪಾದರಕ್ಷೆಗಳ ಶೈಲಿ ಈ ಚಿತ್ರದಲ್ಲಿ ಮಾತ್ರ ಸಿಕ್ಕಿದ್ದು ಹೇಗೆ?. ಅವು ಗಾಂಧೀಜಿಯ ಪದರಕ್ಷೆಗಳಲ್ಲ ಎನ್ನುವುದು ಅಲ್ಲಿಗೆ ಖಾತ್ರಿಯಾಯಿತು.
ಇನ್ನು ಮುಂತಾಗಿ ಹೀಗೆ ಇನ್ನು ಎಷ್ಟು ವಿಕೃತಗೊಳಿಸಿದ ಚಿತ್ರಗಳಿವೆಯೋ ಗೊತ್ತಿಲ್ಲ. ಸದ್ಯಕ್ಕೆ ಗೂಗಲ್ ನಲ್ಲಿ ಈ ಎರಡೂ ಚಿತ್ರಗಳು ಲಭ್ಯವಿದ್ದು, ಒಮ್ಮೊಮ್ಮೆ ಕೆಲವರು ಸಾಮಾಜಿಕ  ಜಾಲ ತಾಣಗಳಲ್ಲಿ ಇಂತಹ ನಕಲಿ ಚಿತ್ರಗಳನ್ನು ಹರಿಯಬಿಡುತ್ತಿದ್ದಾರೆ. 

ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಸಂವಿಧಾನದ ಆಶಯಕ್ಕೆ ಬದ್ಧರಾಗಿ ಬದುಕುತ್ತಾ ಇಂತಹ ವಿಕೃತಿಗಳನ್ನು ನಿರಾಕರಿಸಿ ಸತ್ಪ್ರಜೆಗಳಾಗುವ ಕಡೆಗೆ ನಮ್ಮೆಲ್ಲರ ಮನಸ್ಸನ್ನು ಹರಿಸೋಣ.




ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...