ಭಾನುವಾರ, ಜನವರಿ 29, 2017

ಆತ್ಮ ನಾನು

ತನುವಲ್ಲ ನಾನ್,
ಮನವಲ್ಲ ನಾನ್,
ದೇಹಿಯಲ್ಲ ನಾನ್,
ಮೋಹಿಯಲ್ಲ ನಾನ್,
ಆಕಾರಿಯಲ್ಲನೆಂಬರ್ ಎನ್ನ
ನಿನ್ನೊಡ ಮಿಡಿಯುವರೆಗೂ ನೀ ಜೀವಿ
ತೊರೆದ ಮರುಘಳಿಗೆ ನೀನ್ ನಿರ್ಜೀವಿ
ಬೆಲೆಯಿಹುದು ನಿನಗೋ ಎನಗೋ
ಯಾರ್ ಬಲ್ಲೆಯೆಂ  ನೀಂ?.

ಬದುಕ್ ತಾನ್ ಸಂಭವಿಪುದೆಲ್ಲಿ
ಕಾಣ್ವ ನಿನ್ನ ಕಣ್ಣೊಳ್
ಅಘ್ರಾಣಿಪ ನಿನ್ನ ನಾಸಿಕದೊಳ್
ಕೇಳ್ವ ಕರ್ಣದೊಳ್
ರುಚಿಸುವ ನಾಲಿಗೆಯೊಳೆ ಪರಂತು
ಅಲ್ಲ ನಿನ್ನಿಂದ ಪರದಲಿ

ಗುರುವಾರ, ಜನವರಿ 26, 2017

ಬದುಕು ತಾನ್ ಕಲಿಸುವ ಪರಿ

ಬದುಕು ತಾನ್ ಕಲಿಸುವ ಪರಿ ನೋಡಾ
ಬದುಕು ತಾನ್ ನಲಿಸುವ ಪರಿ ನೋಡಾ
ಕಷ್ಟದೊಳದ್ದಿ , ಇಷ್ಟದೊಳಗೆಳಹಿ
ಕಾಮಿಸಿದುದನೀಯದೆ ಮನುಜನ ಕಣ್ಣೊಳ್
ಭ್ರಷ್ಟವಾಗಿರ್ಪುದು ಒಮ್ಮೊಮ್ಮೆ
ಆದರೇನ್ ನಿನ್ನತನವ ಅಳೆಸಿ ತೂಗಿಸಿ
ತಾನ್ ಮುಂದಿನಿತು ನಿನ್ನ ತನ್ನ ಕೂಸಂತೆ ಸಲಹುವುದು
ನಿರ್ಬಿಡೆಯಿಂ ಬದುಕ ತಾನ್ ಕಲಿಸುವ ಪರಿಯಿದು.

ಕಬ್ಬಿಗರಿಂ ಬರೆಸಿ, ಪಾಠಕರಿಂ ವಾಚಿಸಿ
ಗಾಯಕರಿಂ ಹಾಡಿಸಿ, ಗಮಕಿಗಳಿಂ ಗಮನಿಸಿದೆಡೆಗೂ
ಬದುಕು ನಿಲುಕದೀ ದಿಟ್ಟಿಯೊಳ್,
ಕಣ್ಣೊಳ್ ನೋಡಿ ಕೈಲಿ ಗೆಯ್ಯಲು
ತಂತ್ರವೇನ್, ಮಂತ್ರವೇನ್, ವೇದವೇನ್, ವಿದ್ಯೆಯೇನ್
ಈ ಬದುಕು, ಅದಲ್ಲ ಕಾಣಾ
ನಿನ್ನ ದಿಟ್ಟಿಗೂ ಮೀರಿ ನಿಂತ ಹರಿಗೋಲು ತಿಳಿಯೊಲ್
ಸುಲಲಿತವೇ ಈ ಬದುಕು
ವಂತಕಾರಿಯ ಕೃಪೆಯಲ್ಲವೇ ಈ ಬದುಕು

ಏನ್ ಗಳಿಸಿಹೆ ನೀನಿಲ್ಲಿ, ಏನ್ ಬೆಳೆಸಿದೆ ನೀನಿಲ್ಲಿ
ಬದುಕು ತಾನ್ ಮುಂದಿನಿತು ಗಳಿಸಿತೋ ಎಳೆಸಿತೋ
ನೀನಾರು ಬದುಕಾರು
ನಿನ್ನಡಿಯರಿಯದೆ ಬದುಕೇ? ಬದುಕಡಿಯರಿಯದೆ ನೀನೆ?
ಗೆಲ್ಲುವಾರ್ಯಾರ್ ಈ ಮಾಯೆಯೊಳಗೆ
ಬದುಕದಕೆ ತನ್ನಿಷ್ಟದಂತೆ ಆಡಿಸುತಿರ್ಪುದು ನಿನ್ನ
ನಿನ್ನ ದಿಟ್ಟಿಯೊಳ್ ನೀನ್ ದೇವಂ
ಅದರ ದಿಟ್ಟಿಯೊಳ್ ನೀನೋರ್ವ ಆಟಕಾರ

ದೇಶ ಸೇವೆಯ ಹೂವು ಬೆಳೆಯುವುದೆಲ್ಲಿ?

ಅದು 2009ನೇ ಇಸವಿ ಸೆಪ್ಟೆಂಬರ್ 8ನೆ ತಾರೀಕು, ನಾನು ಡಿಗ್ರಿ ಕಾಲೇಜ್ ನ ತರಗತಿಗಳಿಗೆ ಹಾಜರಾದ ಎರಡನೇ ದಿನ ಅದು. ಮುನ್ನೆಲೆಗೆ ಕಪ್ಪನೆ ಮಿಂಚುವ ಫೈಬರ್ ಹೊದಿಕೆ ಹೊದ್ದುಕೊಂಡು ನಿಂತಿದ್ದ, ಇನ್ಫ್ರಾಸ್ಟ್ರಕ್ಚರ್ ವಿಚಾರದಲ್ಲಿ ಕರ್ನಾಟಕದಲ್ಲೇ ಹೆಸರು ಮಾಡಿದ್ದ ಕಾಲೇಜು ಅದು. ಮೊದಲೇ ತಾಂತ್ರಿಕ ಶಿಕ್ಷಣ, ಅಲ್ಲೆಲ್ಲ ಇಂಗ್ಲೀಷ್ ಭಾಷೆಯದ್ದೇ ಕಾರು ಬಾರೆನೋ ಎನ್ನುವುದೇ ನನ್ನ ಯೋಚನೆಯಾಗಿತ್ತು. ಪಾಠ ಪ್ರವಚನಗಳನ್ನೆಲ್ಲ ಇಂಗ್ಲಿಷ್ನಲ್ಲೇ ಕೇಳಿ ಬರೆದು ಕಲಿತಿದ್ದ ನಾನು ನೀರು ಕುಡಿದಂತೆ ಇಂಗ್ಲಿಷ್ ಮಾತನಾಡುವುದಕ್ಕೆ ತಡವರಿಸುತ್ತಿದ್ದ ಕಾಲವದು, ಅಂತೂ ಇಂತೂ ಯಾರಾದರೂ ಎದುರು ಬಂದು ಇಂಗ್ಲಿಷ್ನಲ್ಲಿ ಮಾತಾಡಿದರೆ 'ಬಟ್ಲರ್' ಇಂಗ್ಲಿಷ್ ಎಂದು ಕರೆಸಿಕೊಳ್ಳುವ ಇಂಗ್ಲಿಷ್ ಭಾಷೆಯೊಳಗಿನ ದಲಿತ ಭಾಷೆಯನ್ನು ಉಪಯೋಗಿಸಿ ನಾಲ್ಕಾರು ಮಾತಾಡಿ ಬಂದವರನ್ನು ಗೌರವಾದರದಿಂದ ಸಾಗಹಾಕುವುದೇ ನಡೆದಿತ್ತು.

ಮೊದಲೇ ಹೇಳಿದಂತೆ ಆ ಎಂಟನೇ ತಾರೀಕು ಮಂಗಳವಾರ ಬೆಳ್ಳಂಬೆಳಿಗ್ಗೆ ಎದ್ದು ಹೊಸ ಕಾಲೇಜು ಅನ್ನುವ ಭರಾಟೆಯಲ್ಲಿ ಅಣಿಯಾಗಿ ಊರಿಗೆ ಮುಂಚಿತವಾಗಿ ಹೋಗಿ ಕ್ಲಾಸಿನಲ್ಲಿ ಕೂತುಕೊಂಡಿದ್ದೆ. ಸಮಯ ಸರಿದಂತೆಲ್ಲಾ ಹುಡುಗರು ಬಂದು ತರಗತಿ ಅನ್ನಿಸಿಕೊಂಡಿತಾದರೂ ಅದರೊಳಗಿಷ್ಟು ಹೊಸಬರು ಬಂದು ಸೇರಿಕೊಳ್ಳುತ್ತಿದ್ದರು. ತರಗತಿ ಎಂದ ಮೇಲೆ ಅಲ್ಲೊಂದಿಷ್ಟು ಹರಟೆ, ಗೊತ್ತಿಲ್ಲದವರ ಪರಿಚಯ ಮತ್ತು ಮುಂತಾಗಿ ಏನೇನೆಲ್ಲವೋ ತೆರೆದುಕೊಂಡು ಎಲ್ಲರ ದನಿಗಳೂ ಸೇರಿಕೊಂಡು ಗಲಾಟೆ ಜೋರಾಗಿ ಕೇಳುವಂತೆ ಆಯಿತು. ಈ ಗಲಾಟೆ ಗದ್ದಲಗಳೂ ಸ್ಕೂಲು ಜೀವನದಿಂದ ಕಂಡಿದ್ದು ಹಾಗು ನಾವೂ ಅದನ್ನು ಅನೂಚಾನುವಾಗಿ ನಡೆಸಿಕೊಂಡು ಬಂದಿದ್ದರ ಪರಿಯಿಂದ ನಮಗೆ ಅದೇನು ಕಿರಿಕಿರಿ ಎನ್ನಿಸುತ್ತಿರಲಿಲ್ಲ, ಆದರೆ ನಮ್ಮ ತರಗತಿಗಳ ಮುಂದೆ ಹಾದು ಹೋಗುವ ಯಾರ ಕಿವಿಯಾದರು ಒಮ್ಮೆ ಕಂಪಿಸಿ ತಣ್ಣಗಾಗುತ್ತಿತ್ತು.

ಇಂತಹ ಗದ್ದಲಕ್ಕೆ ಇತಿಶ್ರೀ ಹಾಡುವರು ಯಾರೆಂಬುದನ್ನು ವಿಶೇಷವಾಗಿ ಹೇಳಬೇಕೆನಿಲ್ಲ ಅಲ್ಲವೇ, ಹಾಗೆ ಆಯಿತು. ತರಗತಿಯಲ್ಲಿ ಗಲಾಟೆಯೆಂದರೆ ಲೆಕ್ಚರರ್ ನೀರೀಕ್ಷೆಯಲ್ಲಿದ್ದೇವೆ ಎಂದು ಇಡೀ ಕಾಲೇಜಿಗೆ ನಮ್ಮ ಗಲಾಟೆಯಿಂದಲೇ ಸಂದೇಶ ಪ್ರವಹಿಸುತ್ತಿದ್ದ ಮಾಮೂಲಿ ಮಕ್ಕಳು ನಾವು. ಅದು ಹಂಗೆ ಆಯಿತು. ನೀರಿಕ್ಷಿಸಿದಂತೆ ಒಬ್ಬ ಲೆಕ್ಚರರ್ ಬಂದರು , ಆದರೆ ಅವರನ್ನು ಲೆಕ್ಚರರ್ ಎಂದು ಒಪ್ಪಲು ನಾವು ಮಾನಸಿಕವಾಗಿ ಸಿದ್ಧರೇ ಇರಲಿಲ್ಲ. ಅದಕ್ಕೆ ಕಾರಣವಿಷ್ಟೇ, ಲೆಕ್ಚರರ್ ಎನಿಸಿಕೊಂಡು ಬಂದವರ ವಯಸ್ಸು ನಮಗಿಂತ ಹೆಚ್ಚೆಚ್ಚು ಎಂದರೂ ಸುಮಾರು 3-4 ವರ್ಷ ಹೆಚ್ಚಿರಬಹುದು. ಆಗಷ್ಟೇ ಪದವಿ ಮುಗಿಸಿ ನೇರ ಲೆಕ್ಚರರ್ ವೃತ್ತಿ ನಂಬಿ ಬಂದಂತೆ ತೋರುತ್ತಿತ್ತು. ಸಾಲದ್ದಕ್ಕೆ ದಪ್ಪ ಕನ್ನಡಕವೊಂದು ಅವರು ಭಾರಿ ಓದುವ ಕುಳವೆಂದು ಎತ್ತಿ ಹೇಳುತ್ತಿತ್ತು. ಕೆಲವರಿಗೆ ಕನ್ನಡಕ ಹಾಸ್ಯದ ವಸ್ತುವೂ ಆಯಿತು. ಆರಂಭದಲ್ಲಿ ಅವರು ನಮ್ಮ ತರಗತಿಯೊಳಗೆ ಬಂದಾಗ ‘ಇವನೂ ನಮ್ಮಂತೆ ಯಾರೋ ವಿದ್ಯಾರ್ಥಿ’ ಎಂದುಕೊಳ್ಳುತ್ತಿದ್ದ ನಾವೆಲ್ಲಾ ಕ್ಲಾಸಿನ ಒಳಗೆ ಬಂದ ಅವರು ಬೆಂಚಿಗೆ ಸುಳಿಯದೆ ಡಯಾಸ್ ಹತ್ತಿದ್ದು ನೋಡಿಯಷ್ಟೇ ಅರ್ಥವಾಯಿತು ಇವರೂ ಲೆಕ್ಚರರ್ ಎಂದು. ಅವರು ಬಂದದ್ದೇ ಬಂದದ್ದು ನಡೆಯುತ್ತಿದ್ದ ಗಲಾಟೆ ಎಳ್ಳಷ್ಟೂ ಕಡಿಮೆಯಾಗಲಿಲ್ಲ, ಬದಲಾಗಿ ಇನ್ನು ಸುಮಾರಾಗಿ ಜಾಸ್ತಿಯಾಯಿತು ಅಂತಲೇ ಅನ್ನಬಹುದು.

ಬೇರೆಯವರು ಯಾಕೆ ನಾನೇ ನನ್ನ ಪಕ್ಕದಲ್ಲಿದ್ದವನನ್ನು ಚುಚ್ಚಿ ಹಾಗಂದೆಬಿಟ್ಟೆ. 'ಏನಪ್ಪಾ ಸಮಾಚಾರ ಇದು, ಈ ಹುಡುಗ  ನಮಗಿಂತ ಒಂಡೆರಡೊ ಮೂರೋ ವರ್ಷ ದೊಡ್ಡವನು. ಇವರನ್ನೆಲ್ಲ ಲೆಕ್ಚರ್ ಅಂದರೆ ಏನ್ ಕಥೆ'. ಎಲ್ಲರ ಬಾಯಲ್ಲೂ ಏನೇನೋ ಮಾತು ಬರುತ್ತಿದ್ದರು ಅದೆಕ್ಕೆಲ್ಲ ಸೊಪ್ಪು ಹಾಕದಂತೆ ನಮ್ಮ ಕಡೆಗೆ ತಿರುಗಿ 'Hi' ಎಂದರು.
ನಾವು ಅವರ ಪ್ರತೀ ಮಾತುಗಳಿಗೂ ಎಷ್ಟೆಷ್ಟೋ ಪ್ರತಿರೋಧ ತೋರುತ್ತಾ, ಅವರ ಪ್ರತಿ ಮಾತಿಗೂ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಅವರನ್ನು ರೇಜಿಗೆ ಸಿಲುಕಿಸಲು ಯತ್ನಿಸುತ್ತಿದ್ದರು, ಅವರು ಅಷ್ಟೇ ಸಾವಧಾನವಾಗಿ ತಮ್ಮ ಮಾತು ಮುಂದುವರಿಸುತ್ತಾ
“Hi Everybody, I am here to handle your EC classes”
ಎಂದಾಗ 'ಮೈ ಕಟ್ಟು ಹೋದರೆ ಹೋಗಲಿ ಧ್ವನಿಯಾದರೂ ಗಟ್ಟಿಯಾಗಿ ಜೋರಾಗಿರಬಾರದಿತ್ತೇ' ಅಂತ ನಮಗೆಲ್ಲ ಅನಿಸಿತು. ತಮ್ಮ ಸುಮಾರು ಮಧ್ಯಮ ದನಿಯಲ್ಲೇ ಮಾತು ಮುಂದುವರೆಸಿ ಹೇಳುತ್ತಿದ್ದರು,ಅವತ್ತು ಅವರು ಅಲ್ಲಿ ಆಡಿದ
 ಎಲ್ಲ ಮಾತುಗಳೂ ಜ್ಞಾಪಕಕಿಲ್ಲ ಆದರೂ ಅವರ ಪೂರ್ಣ ಮಾತುಕತೆಯಲ್ಲಿ ಹೈಲೈಟ್ ಎನ್ನಬಹುದಾದಂತಹ ವಿಷಯಗಳಷ್ಟೇ ತಲೆಯಲ್ಲಿವೆ.

ಅವರು ಓದಿದ್ದು ಬೆಂಗಳೂರಿನ ಪಿ ಇ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಚೆನ್ನಾಗಿ ಓದುವ ಪೈಕಿ ಗುರುತಿಸಿಕೊಂಡಿದ್ದವರು ಅವರು. ಅವರ ತಂದೆ ಸರ್ಕಾರಿ ಅಧಿಕಾರಿ. ಅವರೂ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆ ಬರೆದು ಅಧಿಕಾರಿಯಾಗಿದ್ದವರು.ಇವರು ತಾಂತ್ರಿಕ ಶಿಕ್ಷಣದಲ್ಲಿದ್ದರೂ ತಂದೆಯಂತೆ ತಾನೂ ಸರ್ಕಾರಿ ಅಧಿಕಾರಿಯಾಗಬೇಕು, ದೇಶದ ಬದಲಾವಣೆಯಲ್ಲಿ ತನ್ನ ಪಾತ್ರವೂ ಮಹತ್ತರವಾಗಿರಬೇಕು ಎಂದು ಕಣ್ಣಲ್ಲಿ ಕನಸು ಕಟ್ಟಿಕೊಂಡಿದ್ದ ಯುವಕ.

ಸರ್ಕಾರಿ ಅಧಿಕಾರಿಗಳ ಮಕ್ಕಳು ತಮ್ಮ ತಂದೆ ತಾಯಿ ಮಾಡಿದ್ದೆಲ್ಲವನ್ನೂ ಜೀವನವಿರುವವರೆಗೂ ಕೂತು ತಿಂದು ಮಜಾ ಉಡಾಯಿಸಿ ಜೀವನ ಸವೆಸುತ್ತಾರೆ ಎಂಬ ನನ್ನ ಭಾವನೆಗೆ ವಿರುದ್ಧವಾಗಿ ಆ ಸಮಯಕ್ಕೆ ನನಗೆ ಅರಿವು ಮೂಡಿಸಲೆಂದೇ ಎದುರಾದವರೇ ಇರಬೇಕು ಇವರು ನಮ್ಮ ಲೆಕ್ಚರರ್.

ನಮ್ಮೊಡನೆ ಮಾತನಾಡುತ್ತ ತಾನೂ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ ತೆಗೆದುಕೊಳ್ಳುವ ಯೋಚನೆ ಮಾಡಿರುವುದಾಗಿ ಹೇಳಿದರೂ ನಮಗ್ಯಾರಿಗೂ ಆಗ ಆ ವಿಚಾರ ಬೇಡವಾಗಿದ್ದರಿಂದ ಅದನ್ನು ಏನೋ ಕೇಳಬೇಕಲ್ಲ ಎಂದು ಕೇಳಿದ್ದೆವೆ ಹೊರತು, ಸೀರಿಯಸ್ ಆಗಿ  ಕೇಳಿಸಿಕೊಂಡಿರಲಿಲ್ಲ. ಇವರೂ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಬಲ್ಲರೇ ? ಎನ್ನುವ ಪ್ರಶ್ನೆಯೊಂದು ನನ್ನಲ್ಲಿ ಬಂದಿತ್ತು. ಯಾವ ಅದೃಷ್ಟವೋ ಏನೋ ತಂದೆ ಅಂತಹ ಕಠಿಣ ಪರೀಕ್ಷೆ ಬರೆದು ಪಾಸಾಗಿದ್ದಾರೆ ಎಂದರೆ ಮಗನೂ ಹಾಗಾಗಲು ಸಾಧ್ಯವೇ ಎಂದು ಕೊಳ್ಳುತ್ತಾ ಆ ಮಾತುಗಳನ್ನು ಅಷ್ಟಕ್ಕಷ್ಟೇ ಮಾಡಿಕೊಂಡು ಕ್ಲಾಸು ಮುಗಿಸಿ ಹೊರಗೆ ಬಂದಿದ್ದೆ.  ಅದಾದ ಮೇಲೆ ಸುಮಾರು ಒಂದೋ ಎರಡು ಕ್ಲಾಸುಗಳನ್ನು ಅವರು ತೆಗೆದುಕೊಂಡರೂ ಅದು ನಮ್ಮ ಯಾರ ಮನಸ್ಸಿನಲ್ಲಿಯೂ ಚಿರಸ್ಥಾಯಿಯಾಗಿ ಉಳಿಯಲಿಲ್ಲ. ಸರಿ ಸುಮಾರು ನಾವು ಆ ಕಾಲೇಜಿಗೆ ಹೋಗಲು ಶುರು ಮಾಡಿದ ಒಂದು ವಾರದ ನಂತರ ಅವರು ಕಾಲೇಜಿಗೆ ಬರುವುದನ್ನು ಬಿಟ್ಟಿರಬಹುದೇನೋ, ಅವರು ಇನ್ನೆಂದೂ ಆ ಕ್ಯಾಂಪಸ್ ನಲ್ಲಿ ನಮಗೆ ಕಾಣ ಸಿಗಲೇ ಇಲ್ಲ.

ದಿನಗಳು ಉರುಳಿದಂತೆ ಕಾಲ ಕ್ರಮೇಣ ಅವರನ್ನು ಎಲ್ಲರೂ ಮರೆತು ಬಿಟ್ಟರು, ನಮಗೆ ಪಾಠ ಮಾಡುತ್ತಿದ್ದ ಲೆಕ್ಚರ್ ಗಳೂ ಕೂಡ.  ನೋಡ ನೋಡುತ್ತಿದ್ದಂತೆ ದಿನಗಳುರುಳಿ ವರ್ಷಗಳಾಗಿ ನಮ್ಮೆಲ್ಲರ ಸ್ಥಿತಿ ಗತಿಗಳು ಬದಲಾದವು. ಗತಿಯಿಲ್ಲದವರೆಲ್ಲ ಸ್ಥಿತಿವಂತರಾದರು, ಕಾಲೇಜಿನ ಚೆಲ್ಲಾಟದಲ್ಲಿದ್ದವರೆಲ್ಲ ತಮ್ಮ ಹೆಸರಿನ ಮುಂದೆ ತಮ್ಮ ತಮ್ಮ ಪದವಿಗಳನ್ನು ಕೂಡಿಸಿಕೊಂಡರು, ತಮಗಿಷ್ಟ ಬಂದಾಗ ಕಾಲೇಜಿನ ಕಡೆಗೆ ತಲೆಯಿಡುತ್ತಿದ್ದ ಮಂದಿ ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಹಿಡಿದು ಅಲ್ಲಿ ತಮ್ಮ ಶ್ರದ್ಧೆಯನ್ನು ಪಣಕ್ಕಿಟ್ಟು ಹೋರಾಟಕ್ಕಿಳಿದರು, ಕೆಲವರು ವೇಗದ ಜೀವನಕ್ಕೆ ಹೊಂದಿಕೊಂಡವರಂತೆ ಪದವಿ ಮುಗಿದೊಡನೆ ಗೃಹಸ್ಥಾಶ್ರಮ ಸ್ವೀಕರಿಸಿದರು, ಇನ್ನು ಕೆಲವರು ಮುಖ್ಯವಾಗಿ ಹೆಣ್ಣು ಮಕ್ಕಳು ವಯಸ್ಸಿನ ಓಟಕ್ಕೆ ಹೆದರಿ ಮದುವೆಯಾಗಿ ಗಂಡನ ಮನೆ ಪಾಲಾದರು ಹೀಗೆ ಒಬ್ಬೊಬ್ಬರೂ ಒಂದೊಂದು ಬಗೆಯಾಗಿ ನಾವೆಲ್ಲಾ ಸೇರಿಕೊಂಡಿದ್ದ ತರಗತಿ ಹರಿದು ಹಂಚಿಹೋಗಿ ನಾವು ಕಂಡು ಕೇಳರಿಯದ ಕ್ಷೇತ್ರಗಳಲ್ಲೆಲ್ಲಾ ತನ್ನ ಶಿಷ್ಯ ಬಳಗದ ಮೂಲಕ ತನ್ನ ತಾ ತೊಡಗಿಸಿಕೊಂಡಿತು. ಕಾಲದ ಹೊಡೆತಕ್ಕೆ ಸಿಕ್ಕಿ ನಾನೂ ಬಹುರಾಷ್ಟ್ರೀಯ ಕಂಪನಿಯೊಂದರ ಪಾಲಾಗಬೇಕಾಯಿತು. ಸರಿ ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿತ್ತು, ನಾನು ಅದಾಗಲೇ ವೃತ್ತಿಪರನಾಗಿ ಸುಮಾರು ಒಂದುವರ್ಷವಷ್ಟೇ ಆಗ. ನಮ್ಮ ಐ ಟಿ ಸಂಸ್ಥೆಗಳಲ್ಲಿ ಬೆಂಚಿನ ಮಹಿಮೆ ತಿಳಿಯದವರ್ಯಾರು?. ನಾನು ಆಗೊಮ್ಮೆ ಈಗೊಮ್ಮೆ ಬೆಂಚಿಗೆ ಬಂದು ತಿಂಗಳಾನುಗಟ್ಟಲೆಯನ್ನು ಬೆಂಚಿನಲ್ಲಿ ಕಳೆದು ಮತ್ತೆ ಪ್ರಾಜೆಕ್ಟುಗಳಿಗೆ ತಗುಲಿಕೊಂಡು ಕರೆದರೂ ತಿರುಗದಷ್ಟು ಬ್ಯುಸಿ ಆಗಿಹೋಗುತ್ತಿದ್ದು ಸೋಜಿಗವೇನಲ್ಲ. ಹೀಗೆ ಒಮ್ಮೆ ಬೆಂಚಿನಲ್ಲಿದ್ದೆ. ಆಗೆಲ್ಲ ಬೆಂಚು ಮಾಡಲು ಕೆಲಸವೇನಿಲ್ಲ, ನಮ್ಮ ವಿಚಾರಿಸಿಕೊಳ್ಳುವರಂತೂ ಇಲ್ಲವೇ ಇಲ್ಲ. ನಾಮಕಾವಸ್ಥೆಗೆ ರಿಸೋರ್ಸ್ ಮ್ಯಾನೇಜರ್ ಅಂತ ಇದ್ದರೂ ನೂರಾರು ಜನ ಅವರ ಕೈಕೆಳಗಿರುತ್ತಿದ್ದರಿಂದ ಒಬ್ಬೊಬ್ಬರನ್ನೇ ಕೂಲಂಕುಷವಾಗಿ ಪರೀಕ್ಷಿಸಲು ಅವರಿಗೆ ಸಾಧ್ಯವೇ ಇರಲಿಲ್ಲ. ಅಂತಹ ಸಮಯದಲ್ಲಿ ನಮ್ಮ ಬೇಕು ಬೇಡಗಳನ್ನೆಲ್ಲ ಗೂಗಲ್ ನಲ್ಲಿ ಕುಕ್ಕಿದರೆ ಅತಳ ವಿತಳ ಪಾತಾಳಗಳನ್ನೂ ಹುಡುಕಿ ನಮಗೆ ಸಹಾಯಿಸುತ್ತಿದ್ದ ಗೂಗಲ್ ನಮ್ಮ ಅಚ್ಚುಮೆಚ್ಚಿನ ಮಿತ್ರನೇ ಆಗಿಹೋಗುತ್ತಿತ್ತು.

 ಹೀಗೆ ಒಂದು ಶುಕ್ರವಾರ ಮಧ್ಯಾಹ್ನ ಊಟವಾಗಿತ್ತು, ಸುತ್ತ ಮುತ್ತ ನೋಡಿದರೆ ನಮ್ಮ ಆಫೀಸಿನಲ್ಲಿ ಎಲ್ಲರೂ ಮಂಗ ಮಾಯವಾಗಿದ್ದರು, ಕೆಲವರು ಡಾರ್ಮಿಟರಿಗಳಲ್ಲಿ ಸವಿನಿದ್ದೆಯಲ್ಲಿದ್ದರು. ನಾನು ನಿದ್ದೆ ತಡೆಯುವುದು ಹೆಂಗೆ ಅಂತ ಯೋಚಿಸುತ್ತಲೇ ನನ್ನ ಪ್ರಿಯ ಮಿತ್ರನಾಗಿದ್ದ ಗೂಗಲ್ ಗೆ ಎದುರಾದೆ. ಇದೀಗ ಜ್ಞಾಪಕಕ್ಕೆ ಬಂದರು ನಮ್ಮ ಹಳೆಯ ಎರಡು ದಿನಗಳ ಲೆಕ್ಚರ್. ತಡ ಮಾಡದೆ ಅವರ ಹೆಸರನ್ನೇ ಗೂಗಲ್ ನಲ್ಲಿ ಟೈಪಿಸಿ ಉತ್ತರಕ್ಕಾಗಿ ಕಾಯುತ್ತ ಕುಂತೆ.  ಮನಸ್ಸಿನ ಹಳೆಯ ಪುಟಗಳ ಮೇಲೆ ಎಲ್ಲ ಚಿತ್ರಗಳೂ ಕೆಲವು ಕಾಲ ಮೂಡಿ ಮಾಯವಾಗುತ್ತಿದ್ದವು. ನಾನು ಯೋಚನೆ ಮಾಡುತ್ತಲೇ ಕೂತೆ ಏನಾಗಿರಬಹುದು ಈ ಮನುಷ್ಯ? ಎಲ್ಲರಂತೆ ಕನಸು ಹೊತ್ತು ಬಂದು ಸಾಧಿಸುವ ಮಾರ್ಗ ಮಧ್ಯದಲ್ಲೇ ಸೋಲೊಪ್ಪಿಕೊಂಡಿರಬಹುದೇ?, ಇಲ್ಲ ನಿಜವಾಗಿಯೂ ತಾನಂದು ಕೊಂಡಂತೆ ಬದುಕಿ ಬಾಳುತ್ತಿರಬಹುದೇ? ಇಲ್ಲ ಹೇಗೂ ಓದುವ ಕುಳ ಅದೇ ಮರೆಯಲ್ಲಿ ಬೇರೆಲ್ಲಾದರೂ ದೊಡ್ಡ ಮೊತ್ತದ ಸಂಬಳ ಗಿಟ್ಟುವ ಕೆಲಸ ಹಿಡಿರಬಹುದೇ? ಹೀಗೆ ಇನ್ನು ಏನೇನೋ ಮನಸ್ಸಿಗೆ ಬಂದು ಮುದ್ರೆಯೊತ್ತಿ ಹೋಗುತ್ತಿರುವಷ್ಟರಲ್ಲಿ ಗೂಗಲ್ ತನ್ನ ಉತ್ತರದೊಂದಿಗೆ ಸರ್ವ ಸನ್ನದ್ಧವಾಗೇ ನಿಂತುಬಿಟ್ಟಿತ್ತು.

ಏನಾಶ್ಚರ್ಯ!!.... ನಾನು ಬಯಸಿದ್ದಕ್ಕಿಂತ ಹೆಚ್ಚಿನದೇ ಅಲ್ಲಿ ಸಿಕ್ಕಿತ್ತು. ಕೇರಳದ ಪ್ರಮುಖ ಜಿಲ್ಲೆಯೊಂದಕ್ಕೆ ಸಬ್-ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಅದಾಗಲೇ ವೈದ್ಯೆ ಯಾಗಿರುವ ಒಬ್ಬ ಗೆಳತಿ ಇರುವುದಾಗಿಯೂ , ಅವರ ವಿವಾಹಕ್ಕೆ ಉಭಯ ಮನೆಯವರೂ ಒಪ್ಪಿರುವುದಾಗಿಯೂ ವರದಿ ಪ್ರಕಟವಾಗಿದ್ದ ದಿನ ಪತ್ರಿಕೆಯ ತುಣುಕೊಂದು ಅಲ್ಲಿ ಸಿಕ್ಕಿತು. ಅದರೊಳಗೆ ಹಸನ್ಮುಖಿಗಳಾಗಿ ಭಾವಿ ದಂಪತಿಗಳು ಒಟ್ಟಾಗಿ ನಿಂತಿರುವ ಚಿತ್ರವೂ ಕಾಣಸಿಕ್ಕಿತು. ಅಂತೂ ಇಂತೂ ಹಿಡಿದ ಕೆಲಸವನ್ನು ಸಾಧಿಸುವ ಛಲದಂಕನೊಬ್ಬನನ್ನು ಕಂಡೆ!!. ಅವರು ಸಾಧನೆಯ ದಾರಿಯಲ್ಲಿ ಎದುರಿಸಿದ ಪ್ರಸಂಗಗಳೇನು ಕಷ್ಟಗಳೇನು ಎಂದು ತಿಳಿದುಕೊಳ್ಳುವ ಅವಕಾಶ ಸಂಪೂರ್ಣವಾಗಿ ಇದ್ದರೂ ಅದನ್ನೇನು ಅಷ್ಟಾಗಿ ನಾನು ಬಳಸಿಕೊಳ್ಳಲಿಲ್ಲವೇನೋ. ಇದೀಗ ನಮ್ಮ ಸುತ್ತಲೇ ಓಡಾಡಿಕೊಂಡಿದ್ದವರು ಇಂದು ಉನ್ನತ ಅಧಿಕಾರಿಗಳಾಗಿ ಆಡಳಿತ ಯಂತ್ರ ನಡೆಸುವಲ್ಲಿ ಮಾರ್ಗದರ್ಶಕರಾಗಿ ನಿಂತುಕೊಂಡಿದ್ದರೆಂದರೆ ಅದಕ್ಕಿಂತ ಹೆಮ್ಮೆ ಪಡುವ ವಿಚಾರ ಇನ್ನೇನೂ ಇಲ್ಲ.

ಅವರ ಪೂರ್ವಾಪರ ತಿಳಿಸುವ ಇನ್ನೊಂದೆರಡು ಪತ್ರಿಕೆಯ ಲೇಖನಗಳು ಹಾಗು ಅವರೇ ನಡೆಸುತ್ತಿರುವ ಬ್ಲಾಗ್ ಒಂದರ ವಿಳಾಸ ದೊರೆತಿದ್ದು ನನ್ನ ಪಾಲಿಗೆ ಖುಷಿಯೇ ಖುಷಿ. ಅವರ ಬ್ಲಾಗ್ ಮೇಲೆ ಕಣ್ಣಾಡಿಸುತ್ತಿದ್ದೆ. ತಾನು ಆಡಳಿತ ನಡೆಸುವ ಜಿಲ್ಲೆಯ ವ್ಯಾಪ್ತಿಯ ಇತಿಹಾಸ, ಅರಣ್ಯ ಸಂಪತ್ತು, ಪ್ರವಾಸಿ ತಾಣಗಳ ಬಗ್ಗೆ ಸ್ಥಳ ಭೇಟಿಯ ಅನುಭವದ ಜೊತೆಗೆ ಇತರ ಆಡಳಿತಾತ್ಮಕ ವಿಚಾರಗಳನ್ನು ಗಮನಿಸಿ ವಿಸ್ಮೃತವಾಗಿ ಲೇಖನ ಬರೆದಿದ್ದರು.ಅದನ್ನೆಲ್ಲ ಓದುವಾಗ ಜನರ ಕಣ್ಣಿಗೆ ಮಣ್ಣೆರಚಿ ಹಣ ಪೀಕುವ ಅಧಿಕಾರಿಗಳಲ್ಲ ನನ್ನ ಕಣ್ಣ ಮುಂದೆ ಸುಳಿದಿದ್ದು, ಬದಲಾಗಿ ನಿದ್ರೆಯಲ್ಲೂ ತನ್ನ ಕ್ಷೇತ್ರದ ಬಗ್ಗೆಯೇ ಚಿಂತಿಸುವ ಒಬ್ಬ ಜವಾಬ್ದಾರಿಯುತ ಅಧಿಕಾರಿ. ಅಂದು  ಅವರು ನಮ್ಮ ಬಳಿ ಮಾತಾಡುವಾಗ ಹೇಳಿದ ಮಾತು ಜ್ಞಾಪಕವಾಗುತ್ತದೆ. "ನಿಮಗೆ ಬದಲಾವಣೆ ಬೇಕೆಂದರೆ ಬೇರೆಯವರು ಯಾರೋ ಬದಲಾವಣೆ ಮಾಡಲಿ ಆಮೇಲೆ ನಾವು ಶುರು ಮಾಡೋಣ ಎಂದು ಕಾಯಬೇಡಿ, ಮುನ್ನಡೆಯಿರಿ ನಿಮ್ಮಿಂದಲೇ ಅದು ಆರಂಭವಾಗಲಿ" . ನುಡಿದ ಮಾತಿನನಂತೆ ಇಂದು ಅವರೇ ಬದಲಾವಣೆಯ ಆರಂಭ ಬಿಂದುವಾಗಿ ಬಿಗಿಯಾಯಾಗಿ ನಿಂತುಬಿಟ್ಟಿದ್ದಾರೆ ಎನಿಸಿತು.

ಒಬ್ಬ ವ್ಯಕ್ತಿ ಐ ಎ ಎಸ್ ಅಧಿಕಾರಿಯಾಗಿದ್ದಕ್ಕೆ ಇವನದು ಈ ಲೆವೆಲ್ ಗೆ ಬಿಲ್ಡ್ ಅಪ್ ಹಾ? ಅಂದುಕೊಳ್ಳಬೇಡಿ. ಅದಕ್ಕೆ ಕಾರಣವಿಷ್ಟೇ ಕರ್ನಾಟಕದ ಐ  ಎ ಎಸ್ ಅಧಿಕಾರಿ ಡಿ ಕೆ ರವಿಯವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮೇಲೆ ಅವರ ಕುರಿತಾಗಿ ಟಿ ವಿ ವಾಹಿನಿಗಳಲ್ಲಿ ವಿಶೇಷ ವರದಿಗಳು ಪ್ರಸಾರವಾಗುತ್ತಿದ್ದವು. ಅವರ ಹಿನ್ನೆಲೆಯ ಮೇಲೆ ವಿಶೇಷವಾಗಿ ಬೆಳಕು ಚೆಲ್ಲಲಾಗಿತ್ತು. ಅದಕ್ಕೆ ಕಾರಣ ಬಡತನದಲ್ಲಿಯೂ ಛಲದಿಂದ ಓದಿ ಸರ್ಕಾರಿ ಅಧಿಕಾರಿಯಾದ ಅವರ ದಾರಿ ಸುಲಭದ್ದಾಗಿರಲಿಲ್ಲ. ಕೇಂದ್ರ ಲೋಕ  ಸೇವಾ ಆಯೋಗದ ಪರೀಕ್ಷೆಯ ದೃಷ್ಟಿಯಿಂದ ಅಭ್ಯರ್ಥಿಯ ಹಿನ್ನೆಲೆ ಯಾವುದೇ ಆಗಿದ್ದರೂ ಪರೀಕ್ಷೆಯ ತಯಾರಿ ಸಾಮಾನ್ಯವಾದುದಂತೂ ಅಲ್ಲ. ಇಡೀ ಪ್ರಪಂಚದಲ್ಲಿಯೇ ಇರುವ ಕೆಲವು ಕಠಿಣ ಪರೀಕ್ಷೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳು ದೇಶದ ಎಲ್ಲಾ ಪ್ರತಿಭೆಗಳನ್ನು ಸಮಾನವಾಗಿ ಪಣಕ್ಕಿಟ್ಟು ಅಳೆಯುವ ಮಾರ್ಗವಾಗಿವೆ. ಡಿ ಕೆ ರವಿಯವರ ಬಗ್ಗೆ ತಿಳಿದುಕೊಂಡಂತೆಲ್ಲಾ ಅವರ ಮೇಲಿನ ಹಾಗು ಆ ಹುದ್ದೆಯ ಮೇಲಿನ ಗೌರವ ನೂರು ಪಾಲು ಹೆಚ್ಚಾಯಿತು. ಅದಕ್ಕೆಂತಲೇ ತಯಾರಿ ಮಾಡುತ್ತಿರುವ  ದೇಶದ ಲಕ್ಷಾಂತರ ಯುವ ಜನರ ಮೇಲಿನ ಗೌರವವೂ ಹೆಚ್ಚಾಗಿದೆ. ನೊಂದವರ ರಕ್ತ ಹೀರಿ ಬಾರೀ ಕುಳಗಳಾಗಿ ಮೆರೆಯುವ ಅಧಿಕಾರಿ ವರ್ಗದವರ ನಡುವೆ ದೇಶ ಸೇವೆಗೆ ಮುಂದಾಗುವ ಬಡ ಜನರ ಮಕ್ಕಳೂ ಸಾಧನೆಗೈದು ಅಧಿಕಾರ ಪಡೆದುಕೊಂಡಾಗ ದೇಶದ ಬುಡಮಟ್ಟದಿಂದ  ಬೆಳವಣಿಗೆ ಸಾಧ್ಯವಿದೆ .

ಅಂದು ನನಗೆತಿಳಿಯಿತು ದೇಶ ಸೇವೆಗೆ ಸಮರ್ಪಣೆಯಾಗುವ ಹೂವುಗಳು ನಮ್ಮ ನಡುವೆಯೇ ಬೆಳೆಯುತ್ತವೆ ಹೊರತು ಆಕಾಶದಿಂದ ಧುಮುಕುವುದಿಲ್ಲವೆಂದು!.

ಶನಿವಾರ, ಜನವರಿ 21, 2017

ಕರ್ನಾಟಕ ರಾಜ್ಯ ಬಿ ಜೆ ಪಿ ಅವಸಾನದ ಹಾದಿಯಲ್ಲಿ

ಕರ್ನಾಟಕದಲ್ಲಿ ಹಿಂದಿನ ಸರ್ಕಾರ ಬಿ ಜೆ ಪಿ ಕೈಯಲ್ಲಿದ್ದಾಗ ರೆಸಾರ್ಟ್ ರಾಜಕೀಯ ದಿಂದ ಆರಂಭವಾಗಿ ಸಾಲು ಸಾಲು ಮಂತ್ರಿಗಳು ಜೈಲು ಕಂಡು ಹಿಂದಿರುಗಿ ಬರುವಾಗ ಕರ್ನಾಟಕ ರಾಜ್ಯ ಕಾಂಗ್ರೆಸ್ ಮೌನ ತಳೆದಿತ್ತು. ಕಾರಣ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅದಕ್ಕೆಲ್ಲ ತಕ್ಕ ಪಾಠ ಎನ್ನುವಂತೆ ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬಿ ಜೆ ಪಿ ಯಿಂದ ಸರ್ಕಾರ ಕಾಂಗ್ರೆಸ್ ಪಾಲಾಯಿತು. ಇದೀಗ ರಾಜ್ಯ ಕಾಂಗ್ರೆಸ್  ಸರ್ಕಾರದಲ್ಲಿ ಹಲವಾರು ಋಣಾತ್ಮಕ ವಿದ್ಯಮಾನಗಳು ಜರುಗುತ್ತಿದ್ದರೂ(ವಯಕ್ತಿಕವಾಗಿ ನನಗೆ ಆಘಾತ ಉಂಟು ಮಾಡಿದ್ದು ಲೋಕಾಯುಕ್ತವನ್ನು ಇಲ್ಲದಂತೆ ಮಾಡಿದ್ದು) ಬಿ ಜೆ ಪಿ ಮೌನ ತಳೆದಿದೆ. ಕಳೆದ ಚುನಾವಣೆಯಂತೆ ಕರ್ನಾಟಕದ ಜನ ಮೌನವಾಗಿರುವ ಪಕ್ಷದ ಜನರಿಗೆ ವೋಟಿನ ಬಟ್ಟನ್ನೊತ್ತಿ ತಮ್ಮನ್ನೇ ಚುನಾಯಿಸಿ ಬಿಡುತ್ತಾರೆ ಎಂಬ ಭ್ರಮಾ ಲೋಕ ಸೃಷ್ಟಿಸಿಕೊಂಡು ಕೂತಿದ್ದಾರೆ ಕರ್ನಾಟಕ ರಾಜ್ಯ ಬಿ ಜೆ ಪಿ ವರಿಷ್ಠರು. ಅತ್ತ ಕೇಂದ್ರದಲ್ಲಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದ ಒಳಗೂ ಹೊರಗೂ ಸುತ್ತಿ ದೇಶಕ್ಕಾಗಿ ದಿನಕ್ಕೆ ೧೮ ಗಂಟೆ ದುಡಿಯುತ್ತಿದ್ದಾರೆ, ಇತ್ತ ರಾಜ್ಯದಲ್ಲಿ ಕಾವೇರಿ ವಿವಾದ ಭುಗಿಲೆದ್ದಾಗ ಮುಖ್ಯಮಂತ್ರಿಗಳು ಕರೆದ ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸಿ ಬಿ ಜೆ ಪಿ ಜಾಣ ಮೌನ ಪ್ರದರ್ಶಿಸಿತು. ಅಂತಹ ಸಮಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಡೆದುಕೊಂಡ ರೀತಿ ಸ್ತುತ್ಯಾರ್ಹ. ಅದು ಬರೀ ನಡೆಯಲ್ಲಿ ಮುತ್ಸದ್ದಿತನ, ನಿಜವಾದ ರೈತ ಕಾಳಜಿ. ಅದಕ್ಕೆ ಧನಾತ್ಮಕವಾಗಿ ಪತಿಕ್ರಿಯಿಸಿದ ನರೇಂದ್ರ ಮೋದಿಯವರ ನಡೆಯು ಕನ್ನಡ ನಾಡಿನ ಪಾಲಿಗೆ ಆಶಾದಾಯಕ. ಕರ್ನಾಟಕದ ರೈತರ ದೃಷ್ಟಿಯಿಂದ ದೇವೇಗೌಡರಿಗೆ ಇನ್ನಿಲ್ಲದ ಗೌರವ ಸಲ್ಲಬೇಕು, ಅಂತೆಯೇ ದೇಶದ ಸರ್ವಾಂಗೀಣ ಬೆಳವಣಿಗೆಗೆ ಪಣ ತೊಟ್ಟಿರುವ ನರೇಂದ್ರ ಮೋದಿಯವರಿಗೂ ಕನ್ನಡಿಗರ ಬಲ ಗೌರವ ಸಂದಬೇಕು. ಆದರೆ ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಈಗಲೂ ಬಡಿದಾಡುತ್ತಿರುವ ರಾಜ್ಯ ಬಿ ಜೆ ಪಿ ಯನ್ನು ದಾರಿಗೆ ತರುವರ್ಯಾರು?......ಇಂತಹ ಸನ್ನಿವೇಶದಲ್ಲಿ ಕನ್ನಡ ನಾಡಿಗೆ   ವರವಾಗಿ ನಿಲ್ಲಬಲ್ಲ ರಾಜಕೀಯ ಪಕ್ಷವಾವುದು?....ಎಲ್ಲ ನಿಮ್ಮಿಚ್ಛೆಗೆ ಬಿಟ್ಟಿದ್ದು. ಈಗ ಮುಂದಿನ ಚುನಾವಣೆಯಲ್ಲಿ ಬುದ್ಧಿವಂತರಾಗುವ ಸರದಿ ನಿಮ್ಮದು.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...