ಭಾನುವಾರ, ಮೇ 28, 2017

ಜ್ಞಾನ ಗಂಗೆ

ಜ್ಞಾನವೆಂಬುದು ಹರಿವ ಗಂಗೆ
ಉದಿಸಿದ್ದೆಲ್ಲಿ
ಪರ್ಯಾವಸಾನವೆಲ್ಲಿ ಯಾವೊಂದು
ತಿಳಿಯದ, ತಿಳಿಸದ
ಆದ್ಯಂತ್ಯವಿಲ್ಲದ ಹರಿವದು

ಆದ್ಯಂತ್ಯ ಕಂಡಿರುವುದು
ಹರಿವ ಗಂಗೆಯಲ್ಲ
ಮೊಗೆವ ಕೈ
ಹಿಗ್ಗುವ ಬಾಯ್
ಮೀಯುವ ಮೈ

ಗೆಲುವೇ ಗೆಲುವೇ

ಗೆಲುವೇ ಗೆಲುವೇ ಬಾ ಗೆಲುವೇ
ನಿನಗಾಗಿ ನಾಲ್ಕುಗೋಡೆಗಳ ಮಧ್ಯೆ
ದುಡಿಯುವೆ ನಾನು
ನಿನಗಾಗಿ ಶ್ರದ್ಧೆ ಭಕ್ತಿಗಳನ್ನು
ಪಣವಾಗಿಡುವೆ ನಾನು
ಜಗಮಗಿಸುವ ಬೆಳಕಿನ ಚಿತ್ತಾರದ
ವೇದಿಕೆಯೊಳಗೆ ಅಪ್ಪು ಬಾ ನನ್ನ
ಸಾವಿರಾರು ಜನರ ಹಾರೈಕೆ
ಅದಕೆ ಆಧಾರವಾಗಲಿ
ಅವರ ಚಪ್ಪಾಳೆ ಅದಕೆ ಸಾಕ್ಷಿಯಾಗಲಿ
ಅದರೊಳಗೆ ನಾನೆಂಬುದು
ಬರಿ ನೆಪವಾಗಲಿ.

ಏನು ಬೇಕು ನಿನಗೆ
ಏನ ಬಯಸುವೆ ನೀನು
ಯಾರನಪ್ಪುವೆ ನೀನು
ಯಾರನು ಇಡಾಡುವೆ ನೀನು
ಬಿಡು ಇದೊಂದು ಗುಟ್ಟನು
ನನ್ನೊಡನೆ
ನೀನೆಳೆದ ಪರಿಧಿಯೊಳಗೆ
ನೀನೆಣಿಸುವ ರೀತಿಯಲೆ ಸುತ್ತುವೆ
ನನ್ನೊಮ್ಮೆ ಅಪ್ಪು ಬಾ
ನಿನ್ನಪ್ಪುಗೆಯಲ್ಲಿ ಸಿಹಿ ಸುಖ ಕಂಡವರೆಷ್ಟು?
ಕೆಲವರಷ್ಟೇ


ಶನಿವಾರ, ಮೇ 20, 2017

ಸೋಲಿಗೆ ಸೋಲುಣಿಸುವುದೇ ನಿಜವಾದ ಯಶೋಮಾರ್ಗ

ದೇಹವನ್ನು ದಂಡಿಸದೆ
ಕಾಯವನು ಖಂಡಿಸದೆ
ಉಂಡುಂಡು ತೇಗುವರೆಲ್ಲಾ ಕೈಲಾಸಕೆ
ಪೋದೊಡೆ ಅದನೇನು ರಂಡೆಯಾಳುವಳೆ ಸರ್ವಜ್ಞ.

ಮೇಲಿನ ಸರ್ವಜ್ಞ ಮೂರ್ತಿಯ ವಚನ ಬೊಟ್ಟು ಮಾಡುತ್ತಿರುವುದು ಯಾವ ಕೈಲಾಸ ? ಎಂಬ ಯೋಚನೆ ನಿಮಗೇನಾದರೂ ಹೊಳೆದಿದ್ದರೆ ಅದು 'ಶಿವನಿದ್ದಾನೆ' ಎಂಬಂತಹ ಕೈಲಾಸವೆಂಬ ಸ್ಥಳದ ಬಗ್ಗೆಯಲ್ಲ. ಬದಲಾಗಿ ಜೀವನದ ಔನ್ನತ್ಯವೇ ಕೈಲಾಸ, ಅದು ನಿನ್ನಿಂದ ಸಾಧಿತವಾಗಬೇಕಾದರೆ ಸಾಧನೆ ಹಾದಿ ಕಠಿಣ ಮಾತ್ರವಲ್ಲದೆ ನಿನ್ನ ದೇಹವನ್ನು ನೀನು ಎಡೆ ಬಿಡದೆ ದುಡಿಸಿಕೊಂಡು ತೀರಬೇಕು. ಆಗ ಮಾತ್ರ ಔನ್ನತ್ಯ ದೊರಕಿ ನೀನು ಮನುಷ್ಯನಾಗಿ ಹುಟ್ಟಿದ್ದಕ್ಕೂ  ಸಾರ್ಥಕವಾಗುತ್ತದೆ ಎನ್ನುವ ಅರ್ಥ ಸರ್ವಜ್ಞನದು.ಜೀವನದಲ್ಲಿ ಗೆಲುವೆನ್ನುವುದು ಸಿಗಬೇಕಾದರೆ ಅದರ ದಾರಿಯಲ್ಲಿ ಎದುರಾಗುವ ಕಷ್ಟಗಳು ಸಾವಿರ. ಅದನ್ನೆಲ್ಲ ಈಜಿದರೆ ಮಾತ್ರ ಕೈಲಾಸ(ಗೆಲುವು) ಎನ್ನುವುದನ್ನು ತನ್ನ ನಿಜಜೀವನದಲ್ಲಿ ಸಾಧಿಸಿ ತೋರಿಸಿ ಭಾರತದ ಯುವಜನತೆಗೆ ಮಾದರಿಯಾಗಿ ನಿಂತಿರುವ ಮಾದರಿ ವ್ಯಕ್ತಿ ರಮೇಶ್ ಘೋಲಪ್.

ಅದು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನ ಒಂದು ಹಳ್ಳಿ. ಬೇಸಿಗೆಯ ಸುಡು ಬಿಸಿಲಲ್ಲಿ ಹೆಂಗಸೊಬ್ಬಳು ಬಳೆಯ ಮಲ್ಲಾರ  ಹೊತ್ತುಕೊಂಡು ಸುಮಾರು 7-8 ವರ್ಷದ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು 'ಬಾಂಗ್ಡ್ಯಾ ಬಾಂಗ್ಡ್ಯಾ'(ಕನ್ನಡದಲ್ಲಿ ಬಳೆಗಳು ಎಂದರ್ಥ) ಎಂದು ತನ್ನ ಮಕ್ಕಳ ಬಾಯಿಂದ ಕೂಗಿಸುತ್ತ ನಡೆಯುತ್ತಿದ್ದಳು. ಆ ಮೂವರ ದೇಹಗಳು ಬಡಕಲಾಗಿದ್ದಿದ್ದು ಹಾಗು ಅವರ ಬಳೆ ಮಾಡುವ ಪರಿ ನೋಡಿದರೆ ಬಡತನವೆನ್ನುವುದು ಅವರ ಮನೆಯ ಖಜಾನೆಯೊಳಗೆ ಸುಭದ್ರವಾಗಿಈ ಕೂತುಬಿಟ್ಟಿದೆ ಎನ್ನುವುದು ಯಾರಿಗೂ ಅರ್ಥವಾಗದ ಸಂಗತಿಯೇನೂ ಆಗಿರಲಿಲ್ಲ. ಬಳೆಗಳು ಎಂದು ಸಾರುತ್ತಿದ್ದ ಆ ಇಬ್ಬರು ಹುಡುಗರಲ್ಲಿ ಒಬ್ಬ ರಾಮು, ಹುಟ್ಟಿದ ಕೆಲವೇ ತಿಂಗಳುಗಳಿಗೆ ಪೋಲಿಯೊ ಬಂದು ಎಡಗಾಲು ಸ್ವಲ್ಪ ಊನವಾಯಿತು. ಕಾಲಿಗೆ ತೊಂದರೆಯಾಯಿತಾದರೂ ಕಾಲು ಎಳೆಕೊಂಡು ನಡೆಯಲು ಯಾವ ತೊಂದರೆಯೂ ಕಾಣಿಸಿಕೊಳ್ಳದ ಕಾರಣ ತಟ್ಟಾಡಿಕೊಂಡು, ಕಾಲು ಎಳೆಕೊಂಡು ತನ್ನ ತಮ್ಮನೊಂದಿಗೆ ಸ್ಕೂಲಿಗೆ ಹೋಗಿ ಬಂದು ಮಾಡುತ್ತಿದ್ದ ಹುಡುಗ ಅವನು. ಬೇಸಿಗೆ ಕಾಲದ ರಜೆಯಲ್ಲಿ ತಾಯಿಯೊಂದಿಗೆ ಬಳೆ ಮಾರಲು ಇಬ್ಬರು ಮಕ್ಕಳು ಹೊರಟುಬಿಡುತ್ತಿದ್ದರು. ರಾಮುವಿನ ತಂದೆ ಅದೇ ಊರಿನಲ್ಲಿ ಸಣ್ಣ ಸೈಕಲ್ ರಿಪೇರಿ ಪೆಟ್ಟಿ ಅಂಗಡಿ ಇಟ್ಟುಕೊಂಡಿದ್ದರಾದರೂ ಕುಡಿತದ ಚಟಕ್ಕೆ ಸಿಕ್ಕು ಹಣ, ಆರೋಗ್ಯಗಳನ್ನು ಅದಾಗಲೇ ಕಳೆದುಕೊಂಡಿದ್ದಾಗಿತ್ತು. ಆವತ್ತಿನ ಹೊಟ್ಟೆಗೆ ಮೂಲವಾಗುವಷ್ಟು ಕಾಸಲ್ಲಿ ಕೈಯಾಡುತ್ತಿದ್ದರೂ ನಾಳೆಗೇನು ಎನ್ನುವಂತಹ ಪರಿಸ್ಥಿತಿ ಅವರದ್ದಾಗಿತ್ತು.

ಗಂಡನ ಕುಡಿತದ ಚಟವನ್ನು ಬಿಡಿಸಲಾಗದೆ ಸಂಸಾರ ನೊಗ ಹೇಗಾದರೂ ಎಳೆಯಲು ಆ ಮಹಾತಾಯಿ ಬಳೆಯ ಮಲ್ಲಾರವನ್ನು ಹೊತ್ತುಕೊಂಡು ಊರೂರು ಅಲೆದು ಬಳೆ ಮಾರಿ ತನ್ನ ಮಕ್ಕಳಿಗೆ ಹೊಟ್ಟೆಗೂ ಬಟ್ಟೆಗೂ ಸರಿಯಾದ ದಾರಿಯಾಗುವಂತೆ ನೋಡಿಕೊಂಡಿದ್ದಳು.  ರಾಮುವಿನ ಊರಿನಲ್ಲಿ ಇದ್ದಿದ್ದೇ ಒಂದು ಸರ್ಕಾರಿ ಪ್ರಾಥಮಿಕ ಶಾಲೆ. ಮಾಧ್ಯಮಿಕ ಶಾಲೆಗೆ ಬೇರೆ ಊರಿಗೆ ನಡೆದುಕೊಂಡು ಅಥವಾ ಸೈಕಲ್ ನಲ್ಲಿ ಹುಡುಗರು ಹೋಗಬೇಕಾಗಿದ್ದರಿಂದ ರಾಮು ಮಾಧ್ಯಮಿಕ ಶಾಲೆಗೆ ತನ್ನೂರಿನ ತಾಲೂಕೇ ಆಗಿದ್ದ ಬಾರ್ಶಿಯಲ್ಲಿನ ಚಿಕ್ಕಪ್ಪನ ಮನೆಯಲ್ಲಿ ಓದುವ ಸಲುವಾಗಿ ತಂಗಿದ. ಅಂತೂ ಇಂತೂ ಏಗುತ್ತಾ ನೀಗುತ್ತಾ ಅವನ ವಿದ್ಯಾಭ್ಯಾಸ ಚಿಕ್ಕಪ್ಪನ ಆಶ್ರಯದಲ್ಲಿ ಚೆನ್ನಾಗಿ ನಡೆಯುತ್ತಿತ್ತು. ಅದು 2005 ನೇ ಇಸವಿ. ರಾಮು ದ್ವಿತೀಯ ಪಿ ಯು ಸಿ ಯಲ್ಲಿ ಓದುತ್ತಿದ್ದ. ಆಗಷ್ಟೇ ಆತನಿಗೆ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದವು. ಮುಖ್ಯ ಪರೀಕ್ಷೆಗೆ ದಿನಗಳನ್ನೆಣಿಸುತ್ತ ಹುಡುಗರು ಕೂತಿದ್ದರು. ಇದೆ ಸಮಯದಲ್ಲಿ ಕುಡಿದು ಕುಡಿದು ಅನಾರೋಗ್ಯಕ್ಕೆ ತುತ್ತಾದ ರಾಮುವಿನ ತಂದೆ ತೀರಿಕೊಂಡರು.

ಸಾವಿನ ಸುದ್ದಿ ಕೇಳಿದ ತಕ್ಷಣವೇ ಹೊರಟು ನಿಂತ. ಆದರೇನು ಬಾರ್ಶಿಯಿಂದ ತನ್ನೂರಿಗೆ ಬಸ್ ಚಾರ್ಜು ಬರಿ ಏಳು ರೂಪಾಯಿ, ಅದರಲ್ಲೂ ರಾಮುವಿಗೆ ಅಂಗವಿಕಲರ ಐ ಡಿ ಕಾರ್ಡ್ ಇದ್ದಿದ್ದಿರಿಂದ ಚಾರ್ಜು ಬರೀ 2 ರೂಪಾಯಿ. ಸಂಕಷ್ಟಗಳ ಕೂಪದೊಳಗೆ ಬಿದ್ದುಹೋದ ರಾಮುವಿಗೆ ಆ ಎರಡು ರೂಪಾಯಿ ಕೂಡ ಸಿಗಲಿಲ್ಲ. ತನ್ನ ಸ್ನೇಹಿತರು ಇತರರನ್ನು ಕಾಡಿಬೇಡಿ ಹೇಗೋ ಎರಡು ರೂಪಾಯಿಗಳನ್ನು ಹೊಂದಿಸಿಕೊಂಡ ಹುಡುಗ ಊರಿಗೆ ಹೋಗಿ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ. ಇತ್ತ ಕಾಲೇಜಿನಲ್ಲಿ ಆತ ಬರೆದಿದ್ದ ಪ್ರಿಪರೇಟರಿ ಪರೀಕ್ಷೆಗಳಲ್ಲೆಲ್ಲ ಆತನೇ ಮಂಚೂಣಿಯಲ್ಲಿದ್ದ. ರಸಾಯನ ಶಾಸ್ತ್ರದ ಪರೀಕ್ಷೆಯಲ್ಲಿ 40 ಅಂಕಗಳಿಗೆ 35 ಗಳಿಸುವ ಮೂಲಕ ತನ್ನ ತರಗತಿಯಲ್ಲಿಯೇ ಮೊದಲ ಸ್ಥಾನದಲ್ಲಿ ನಿಂತಿದ್ದ. ತನ್ನ ತಂದೆಯ ಅಂತ್ಯ ಕ್ರಿಯೆ ಮುಗಿದ ಮೇಲೆ ನಾಲ್ಕಾರು ದಿನ ಊರಿನಲ್ಲಿಯೇ ಉಳಿದು ತಾಯಿಗೂ, ತನ್ನ ತಮ್ಮನಿಗೂ ಸಮಾಧಾನದ ಮಾತುಗಳನ್ನಾಡಿದರೂ ಈತನ ದ್ವಿತೀಯ ಪಿ ಯು ಸಿ ಮುಖ್ಯ ಪರೀಕ್ಷೆ ಒಂದು ತಿಂಗಳಿಗೂ ಕಡಿಮೆಯಿರುವುದು ಅರಿಕೆಯಾಗಿ ಆತನ ತಾಯಿ ಹಾಗು ತಮ್ಮನೇ ಮುಂದೆ ನಿಂತು ಬಾರ್ಶಿಗೆ ಹಿಂದಿರುಗಿ ಪರೀಕ್ಷೆಗೆ ಸಿದ್ಧವಾಗುವಂತೆ  ನೋಡಿಕೊಂಡರು. ತನ್ನ ತಂದೆಯ ಸಾವಿನ ಸೂತಕದ ಛಾಯೆಯೊಳಗೆ ಪರೀಕ್ಷೆ ಬರೆದು ಮುಗಿಸಿದ ರಾಮು ಇಡೀ ತನ್ನ ಗ್ರಾಮ ಹೆಮ್ಮೆ ಪಡುವಂತೆ ಪಿ ಯು ಸಿ ಯಲ್ಲಿ 88.5 ಶೇಕಡಾ ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಪಾಸಾಗಿಬಿಟ್ಟ.

ರಾಮು ವಿಜ್ಞಾನ ವಿಭಾಗದಲ್ಲಿ ಪಾಸಾದರೂ ವೈದ್ಯಕೀಯ/ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಸೇರಲು ಅವಶ್ಯವಾದ ಹಣವಿಲ್ಲದಿರುವ ಕಾರಣವನ್ನು ಚಿಂತಿಸಿ ಸುಲಭವಾಗಿ ಕೈಗೆಟುಕುವ ಕೋರ್ಸ್ ಡಿ.ಎಡ್ (ಡಿಪ್ಲೋಮ ಇನ್ ಎಜುಕೇಷನ್) ಸೇರಿಕೊಂಡು ಮೊದಲು ದುಡಿಯುವ ಕೆಲಸ ಗಿಟ್ಟಿಸಿ ತನ್ನ ತಾಯಿ ತಮ್ಮನಿಗೆ ಆರ್ಥಿಕವಾಗಿ ಬೆಂಗಾವಲಾಗಬೇಕೆಂದು ತೀರ್ಮಾನಿಸಿದ.ಡಿ.ಎಡ್ ಮಾಡುತ್ತಿರುವಾಗಲೇ ಮುಕ್ತ ವಿಶ್ವ ವಿದ್ಯಾಲಯವೊಂದರಲ್ಲಿ ಕಲಾ ವಿಭಾಗದ ಪದವಿಯನ್ನು ಪಡೆದುಕೊಂಡ. ಪದವಿ ಹಾಗು ಡಿ.ಎಡ್ ಎರಡೂ ಕೈ ಸೇರುವಷ್ಟರಲ್ಲಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುವ ಅವಕಾಶವೂ ಕೂಡಿಬಂದು ಕಾಸು ಕಾಸಿಗೂ ಪರದಾಡುವ ಪರಿಸ್ಥಿತಿಯಿಂದ ದೂರಾದರೆ ಸಾಕು ಎನ್ನುವಂತಾಗಿದ್ದ ರಾಮು ಶಿಕ್ಷನಾಗಿ ಮಕ್ಕಳಿಗೆ ಪಾಠ ಹೇಳಲು ಪ್ರಾರಂಭಿಸಿದ್ದ. ಆದರೆ ಅವನ ಅಂತರಂಗದಾಸೆಯೇ ಬೇರೆಯಾಗಿತ್ತು, ಆಗಾಗ ಅದು ಅವನ ನೆನಪಿಗೆ ಬಂದು ಒಳಗೊಳಗೇ ಇರಿಯುತ್ತಿತ್ತಾದರೂ ಮನೆಯ ಪರಿಸ್ಥಿತಿ ಅವನ ಕೈಗಳನ್ನು ಕಟ್ಟಿಹಾಕಿಬಿಟ್ಟಿತ್ತು. ಮುಂದೆ ತಾನೇ ದುಡಿಯುವಂತಾದ ಮೇಲೆ ತನ್ನ ತಮ್ಮ ಹಾಗು ತಾಯಿಯನ್ನು ಬಾರ್ಶಿಯಲ್ಲಿನ ಆತನ ಚಿಕ್ಕಮ್ಮ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಕಟ್ಟಿಕೊಂಡಿದ್ದ ಎರಡು ಕೋಣೆಗಳಿರುವ ಮನೆಯ ಪೈಕಿ ಒಂದು ಕೋಣೆಗೆ ಸ್ಥಳಾಂತರಿಸಿದ್ದ. ಹೊಟ್ಟೆಗೂ ಬಟ್ಟೆಗೂ ನೇರ ಮಾಡಿಕೊಂಡು, ನಡೆಯುವಾಗ  ಎಡವಿಕೊಂಡು ಬಿದ್ದಾಗ ಕೊಡವಿಕೊಂಡು ಅಂತೂ ಜೀವನವನ್ನು ಸಾಗಿಸುತ್ತಿದ್ದ.

ರಾಮು ತನ್ನ ಸುತ್ತಲಿನ ಸಾಮಾಜಿಕ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ. ತನ್ನ ಚಿಕ್ಕಮ್ಮನಂತೆ ತನ್ನತಾಯಿಗೂ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆ ದೊರಕುವಂತಾಗಲು ಅರ್ಜಿ ಹಾಕಿಸಿದ್ದ. ಆತನ ತಾಯಿ ಸರ್ಕಾರಿ ಕಛೇರಿಗಳನ್ನೆಲ್ಲಾ ಎಡತಾಕಿ ಕೊನೆಗೆ ತನ್ನ ಬಿ ಪಿ ಎಲ್ ರೇಷನ್ ಕಾರ್ಡ್ ಈ ಯೋಜನೆಗೆ ಅರ್ಹವಲ್ಲವಂತೆ ಎನ್ನುವ ಕಾರಣವನ್ನು ಮೇಲಧಿಕಾರಿಗಳಿಂದ ಪಡೆದುಕೊಂಡು ನಿರಾಸೆಯಿಂದ ಮನೆಗೆ ಮರಳಿದ್ದು ಕಂಡು ರಾಮು ಕೆಂಡಾಮಂಡಲವಾಗಿದ್ದ. ನ್ಯಾಯಬೆಲೆ ಅಂಗಡಿಯವನು ಕೂಡಾ ತಮ್ಮ ಕಾರ್ಡ್ ಗೆ ದೊರೆಯಬೇಕಿದ್ದ ಸೀಮೆ ಎಣ್ಣೆಯನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಹೆಚ್ಚು ಹಣಕ್ಕೆ ಬೇರೆಯವರಿಗೆ ಮಾರುತ್ತಿದ್ದು ಬಿ ಪಿ ಎಲ್ ಕಾರ್ಡ್ ಗಳಿಗೆ ಸೀಮೆ ಎಣ್ಣೆ ಕೊಡುವಾಗ ಇಲ್ಲದ ಸಬೂಬುಗಳನ್ನು ಹೇಳಿ ಸಾಗ ಹಾಕುತ್ತಿದ್ದ. ಇದನ್ನೆಲ್ಲಾ ಅನುಭವಿಸುತ್ತಿದ್ದ ಇನ್ನು ಕೆಲವರು ಯಾರಿಗೆ ದೂರು ಕೊಡುವುದು ಎಂದೂ ತಿಳಿಯದ ಮುಗ್ದರು ಹಾಗು ಅವಿದ್ಯಾವಂತರಾಗಿದ್ದ ಕಾರಣ ನ್ಯಾಯಬೆಲೆ ಅಂಗಡಿಯವನ ದರ್ಪಕ್ಕೆ ಕೊನೆಯೆಂಬುದೇ ಇಲ್ಲವಾಗಿ ಹೋಗಿತ್ತು.

ಇಷ್ಟು ಸಾಲದೇ ಧನದಾಹಿ ಸರ್ಕಾರಿ ಅಧಿಕಾರಿಯೊಬ್ಬ ಸುಮಾರು ಜನ ವಿಧವೆಯರನ್ನು ಒಟ್ಟುಗೂಡಿಸಿ ಅವರಿಗೆ ವಿಧವಾ ವೇತನವನ್ನು ಸುಲಭವಾಗಿ ದಕ್ಕಿಸಿಕೊಡುವ ಮಾತು ಕೊಟ್ಟು ಅವರಿಂದ ಹಣ ಪಡೆದುಕೊಂಡು ಪರಾರಿಯಾಗಿದ್ದ. ರಾಮುವಿನ ಮನೆಯಲ್ಲಿ ರೂಪಾಯಿ ರೂಪಾಯಿಗೂ ಹೆಣಗುವ ಪರಿಸ್ಥಿತಿಯಲ್ಲಿ ಅಧಿಕಾರಿ ಹಣ ಪೀಕಿದ್ದು ಇನ್ನೂ ಸಂಕಷ್ಟಕ್ಕೀಡುಮಾಡಿಬಿಟ್ಟಿತು. ಇವಕ್ಕೆಲ್ಲ ರಾಮುವಿನ ಮನಸ್ಸು ಜರ್ಜರಿತವಾಗಿಹೋಯಿತು. ನಮ್ಮ ಸರ್ಕಾರದ ವ್ಯವಸ್ಥೆಯೊಳಗಿನ ಲೋಪಗಳು ಢಾಳಾಗಿ ಕಂಡು ರಾಕ್ಷಸೀಯ ರೂಪ ಪಡೆದು ಬಡವರ, ಅಸಹಾಯಕರ ಮೇಲೆ ಅಧಿಕಾರಿಗಳ ರೂಪದಲ್ಲಿ ದಾಳಿಯೆಸಗುತ್ತಿದ್ದು ಕಂಡು ರಾಮು ಮಮ್ಮಲ ಮರುಗಿ ಹೋದ.ರಾಮು ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಕಾಲೇಜು ವಿದ್ಯಾರ್ಥಿ ಸಂಘದ ಪ್ರಮುಖ ಸದಸ್ಯನಾಗಿದ್ದನು. ಕಾರ್ಯಕ್ರಮಗಳ ಅಥವಾ ಇತರ ಕಾಲೇಜಿಗೆ ಸಂಬಂಧಪಟ್ಟ ವಿಚಾರಗಳ ಸಂಬಂಧ ಆಗಾಗ ಬಾರ್ಶಿಯಲ್ಲಿರುವ ತಾಲೂಕು ಕಚೇರಿಗೆ ಹೋಗಿ ಅಲ್ಲಿ ತಹಶೀಲ್ದಾರ್ ರನ್ನು ಭೇಟಿಯಾಗಿವುದು ಸಾಮಾನ್ಯವಾಗಿತ್ತು.  ರಾಮು ತಹಶೀಲ್ದಾರರ ಕಾರ್ಯ ವೈಖರಿ ಕಂಡು ಅವರಿಗೆ ಸಮಾಜದಲ್ಲಿ ಇರುವ ಗೌರವ, ಸ್ಥಾನ ಮಾನಗಳನ್ನು ಕಂಡು ಅಚ್ಚರಿಯ ನೋಟ ಬೀರಿದ್ದ. ತಾನು ಹೀಗೆಯೇ ಆದರೆ ಸದ್ಯ ಈಗಿನ ಪರಿಸ್ಥಿಗಳು ಸುಧಾರಿಸಬಹುದು ಎನ್ನುವ ಕನಸು ರಾಮುವಿನ ಕಣ್ಣಲ್ಲಿ ಆಗ ಮೂಡಿರಲಿಕ್ಕೆ ಸಾಕು.

                                   Image result for ramesh gholap

ಇಷ್ಟೆಲ್ಲಾ ಕಷ್ಟಗಳು ರಾಮುವಿನ ಹೆಗಲಿಗೆ ಏರಿಕೊಂಡಿದ್ದೆ ತಡ ರಾಮು ಜಾಗೃತನಾಗಿಬಿಟ್ಟ. ತಹಸೀಲದಾರರನ್ನು ಕಂಡು ತಾನು ಹಾಗೆಯೇ ಆಗಬೇಕು ಎಂದು ಆಸೆ ಪಡುತ್ತಿದ್ದ ರಾಮು ತಾನೇಕೆ ಹಾಗಾಗಲು ಸಾಧ್ಯವಿಲ್ಲವೆಂದು ತನಗೆ ತಾನೇ ಪ್ರಶ್ನೆ ಹಾಕಿಕೊಂಡ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ವೃತ್ತಿ ಪವಿತ್ರವಾದರೂ ತನ್ನ ಸುತ್ತಲಿನ ಸಮಾಜದಲ್ಲಿನ ಢಾಳು ವ್ಯವಸ್ಥೆಗಳನ್ನು ಹೆಡೆ ಮುರಿಕಟ್ಟಲು ತಾನೇ ಟೊಂಕ ಕಟ್ಟಿ ನಿಲ್ಲಬೇಕೆಂದು ತೀರ್ಮಾನ ಮಾಡಿಕೊಂಡ. 2009ರ ಸೆಪ್ಟೆಂಬರ್ ನ ಒಂದು ದಿನ ಎಲ್ಲ ಪೂರ್ವಾಪರ ಗಳನ್ನೂ ಯೋಚಿಸಿ ತನ್ನ ತಾಯಿಯ ಮೂಲಕ ಸ್ವ-ಸಹಾಯ ಸಂಘವೊಂದರಿಂದ ಸ್ವಲ್ಪ ಹಣವನ್ನು ಸಾಲವನ್ನಾಗಿ ಪಡೆದು ಭಾರತದ ಅಗ್ರ ಪರೀಕ್ಷೆ ಯು ಪಿ ಎಸ್ ಸಿ ಗೆ ಸಿದ್ಧತೆ ಮಾಡಿಕೊಳ್ಳಲು ಪುಣೆಗೆ ಹೊರಟುಬಿಟ್ಟ.ಆರು ತಿಂಗಳ ಮಟ್ಟಿಗೆ ತನ್ನ ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ತನ್ನ ಕಣ್ಣರಿವಿಗೆ ಕಂಡಿದ್ದ ಸ್ನೇಹಿತರ ಮೂಲಕ ಮಾಹಿತಿ ಸಂಗ್ರಹಿಸಿ ಗಟ್ಟಿ ಮನಸ್ಸು ಮಾಡಿ ರಾಮು ಈ ನಿರ್ಧಾರ ಕೈಗೊಂಡಿದ್ದ.

ರಾಮು ಸಣ್ಣಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ಆತನಿಗೆ ಯು ಪಿ ಎಸ್ ಸಿ(ಕೇಂದ್ರ ಲೋಕ ಸೇವಾ ಆಯೋಗ) ಹಾಗು ಎಂ ಪಿ ಎಸ್ ಪಿ (ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ) ಬಗ್ಗೆ ಏನೊಂದು ಗೊತ್ತಿರಲಿಲ್ಲ. ಪುಣೆಗೆ ಬಂದು ಅಲ್ಲಿನ ಕೋಚಿಂಗ್ ಸೆಂಟರ್ ಒಂದರಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗೆ ತಯಾರಾಗಲು ನಿಂತು 2010ರಲ್ಲಿ ಆ ಪರೀಕ್ಷೆಗೆ ಹಾಜರಾದ. ಆದರೆ ಆ ಪ್ರಯತ್ನದಲ್ಲಿ ಅದೇಕೋ ಅವನಿಗೆ ಯಶಸ್ಸು ಸಿಗಲಿಲ್ಲ. ಪ್ರಿಲಿಮಿನರಿ ಪರೀಕ್ಷೆಯಲ್ಲೇ ನಿಗದಿತ ಅಂಕಗಳನ್ನು ಗಳಿಸದ ಕಾರಣ ಅವನ ಪ್ರಯತ್ನ ವಿಫಲವಾಗಿತ್ತು. ಆದರೂ ಸಾಧನೆಯ ಕಿಡಿಯನ್ನು ತಲೆಯಲ್ಲಿ ಅದಾಗಲೇ ಹೊತ್ತಿಸಿಕೊಂಡಿದ್ದ ರಾಮು ಅಷ್ಟಕ್ಕೇ ಸುಮ್ಮನಾಗಲಿಲ್ಲ, ಧೃತಿಗೆಡಲೂ ಇಲ್ಲ.

ಈ ಮಧ್ಯದಲ್ಲಿ ರಾಮು ತನ್ನೂರಿನ ಜನರೊಂದಿಗೆ ಚೆನ್ನಾಗಿ ಒಡನಾಡುತ್ತಾ ಇದ್ದ ಕಾರಣ ತನ್ನ ತಾಯಿಯನ್ನು 2010ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದ. ಅವರ ಚುನಾವಣಾ ಅಜೆಂಡಾ ಸರವಾಳವಾಗಿತ್ತಾದರೂ ಹಿಂದುಳಿದವರಿಗೆ, ಅಸಹಾಯಕರಿಗೆ ಸಹಾಯಕ್ಕೊದಗುವ ಅಂಶಗಳನ್ನು ಒಳಗೊಂಡಿದ್ದಾಗಿತ್ತು. ಏನಾದರೂ ಈಗಿನ ಚುನಾವಣೆಗಳು ಹೇಗೆ ನಡೆಯುತ್ತವೆ, ಅಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ಕೊಡಲಾಗುತ್ತದೆ ಎನ್ನುವುದನ್ನು ವಿಶೇಷವಾಗಿ ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ. ಇಲ್ಲೂ ಅದೇ ನಡೆದು ರಾಮುವಿನ ತಾಯಿಗೆ ಸೋಲಾಯಿತು. ಈ ಘಟನೆ ರಾಮುವಿಗೆ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತಾಯಿತು. ನನ್ನ ಸಾಹಸ ಇಲ್ಲಿಗೆ ನಿಲ್ಲಲಿಲ್ಲ ಎಂದು ತನ್ನೂರಿನ ಜನರ ಮುಂದೆಯೇ ಘೋಷಿಸಿದ ರಾಮು ಮತ್ತೆ ತಾನು ಈ ಊರಿಗೆ ಬರುವುದು ಒಬ್ಬ ಅಧಿಕಾರಿಯಾಗಿಯೇ ಎಂದು ಹೇಳಿ ಊರು ತೊರೆದು ಪುಣೆಗೆ ಬಂದು ಮುಂದಿನ ಯು ಪಿ ಎಸ್ ಸಿ ಪರೀಕ್ಷೆಗೆ ತಯಾರಿಗೆ ನಿಂತ.

ಇದಾದ ಮೇಲೆ ರಾಮು ತನ್ನ ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ರಾಜ್ಯ ಆಡಳಿತಾತ್ಮಕ ಸೇವೆಗಳ ಸಂಸ್ಥೆಯ ಪರೀಕ್ಷೆ ತೆಗೆದುಕೊಂಡು ಪಾಸು ಮಾಡಿದ. ಇದರಿಂದಾಗಿ ರಾಮುವಿಗೆ ಪುಣೆಯಲ್ಲಿ ಉಳಿಯಲು ಸರ್ಕಾರಿ ಹಾಸ್ಟೆಲ್ ಹಾಗು ತಿಂಗಳ ಖರ್ಚಿಗೆ ಸ್ಕಾಲರ್ಷಿಪ್ ಬರಲು ಅವಕಾಶವಾಗಿ ಚಿಂತೆಯ ಹೊರೆ ಸ್ವಲ್ಪ ಕರಗಿತು ಆದರೂ ಅವನ ಮನಸ್ಸು ಮಾತ್ರ ಗುರಿ ಸೇರಲು ತವಕಿಸುತ್ತಾ ಎಡೆಬಿಡದೆ ದುಡಿಯುತ್ತಲೇ ಇತ್ತು. ಬರುತ್ತಿದ್ದ ಸ್ಕಾಲರ್ಷಿಪ್ ಸಾಲದಿದ್ದ ಕಾರಣ ರಾಮು ಆಗಾಗ ಪೋಸ್ಟರ್ ಗಳನ್ನೂ ಹಚ್ಚುವ ಕೆಲಸ ಮಾಡುತ್ತಾ ತನ್ನ ಖರ್ಚನ್ನು ತಾನೇ ಸರಿದೂಗಿಸುತ್ತಿದ್ದ. ದಿನಗಳು ಕಳೆದು ವರ್ಷಗಳಾಗುವಷ್ಟರಲ್ಲಿ ರಾಮು 2011 ಸಾಲಿನ ಯು ಪಿ ಎಸ್ ಸಿ ಪರೀಕ್ಷೆ ಬರೆದಿದ್ದ. 2012 ರಲ್ಲಿ ಫಲಿತಾಂಶ ಪ್ರಕಟವಾಯಿತು. ಅದು ರಾಮುವಿನ ಜೀವನದ ಅತ್ಯಂತ ಮಹತ್ವದ ದಿನ. ತನ್ನೆಲ್ಲ ಕಷ್ಟಗಳಿಗೆ ರಾಮು ತರ್ಪಣ ಕೊಟ್ಟ ಮಹಾ ಸುದಿನ. ಅಂದು ರಾಮು ಇಡೀ ಭಾರತದಲ್ಲಿ 287 ನೇ ರ್ಯಾಂಕ್ ಪಡೆದು ಐ ಎ ಎಸ್ ಪರೀಕ್ಷೆಯಲ್ಲಿ ಪಾಸಾಗಿದ್ದ.

ಊರೂರಿಗೆ ಬಳೆಗಳನ್ನು ಹೊತ್ತು ತಿರುಗಿ ಮಾರಿ, ಜಿಲ್ಲಾ ಪರಿಷತ್ ಸ್ಕೂಲುಗಳಲ್ಲಿ ಓದುತ್ತ ಕಷ್ಟದ ದಿನ ದೂಡಿದ್ದ ಬಾರ್ಶಿಯ ಮಹಾಗಾವ್ ನ ಹುಡುಗ ತನ್ನ ಹೆಸರಿನ ಮುಂದೆ ಐ ಎ ಎಸ್ ಎಂದು ಪೇರಿಸಿಕೊಂಡಿದ್ದು ಆ ಊರಿಗೆ ಮಾತ್ರವಲ್ಲದೆ ಇಡೀ ಭಾರತದ ಯುವ ಜನತೆಗೆ ಮಾದರಿಯಾದ ಜೀವಂತ ದಂತ ಕಥೆಯಾಯಿತು. ಅಂತೂ ಮೇ 12, 2012 ರಂದು ತನ್ನ ಕಷ್ಟದ ಸುಧೀರ್ಘ ಪಯಣ ಮುಗಿಸಿದ್ದ ರಾಮು ತನ್ನೂರಿಗೆ ಹಿಂತಿರುಗಿ ಬಂದಿದ್ದ, ನೆನಪಿರಲಿ ಬಂದಿದ್ದು ರಾಮುವಾಗಿ ಅಲ್ಲ. ರಮೇಶ್ ಘೋರಕ್ ಘೋಲಪ್ (ಐ ಎ ಎಸ್) ಆಗಿ.

ಇದಾಗಿ ಎರಡೇ ತಿಂಗಳುಗಳಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ ಇನ್ನೊಂದು ದಾಖಲೆಯನ್ನು ರಾಮು ಬರೆದಿದ್ದ. 1800 ಅಂಕಗಳ ಪೈಕಿ 1244 ಅಂಕಗಳನ್ನು ಪಡೆದು ರಾಮು ಮಹರಾಷ್ಟ್ರದ ಇತಿಹಾಸದಲ್ಲಿಯೇ ಯಾರು ಮಾಡಿರದಿದ್ದ ಸಾಧನೆಗೆ ಸಾಕ್ಷಿಯಾಗಿದ್ದ.

ರಮೇಶ್ ಘೋಲಪ್ ರನ್ನು ಇಂದು ಮಾತಿಗೆಳಸಿದರೆ ಹೇಳುತ್ತಾರೆ "ಇಂದು ನಾನು ಯಾವುದೇ ನ್ಯಾಯಬೆಲೆ ಅಂಗಡಿಯ ಬಗ್ಗೆ ಕಾಳ ಸಂತೆಯಲ್ಲಿ ಸರ್ಕಾರದ ದಿನಸಿ ಪದಾರ್ಥಗಳನ್ನು ಮಾರಿಕೊಳ್ಳುವ ಬಗ್ಗೆ ದೂರುಗಳು ಬಂದರೆ ಅಂದು ನನ್ನ ಕುಟುಂಬ ಸೀಮೆ ಎಣ್ಣೆಗಾಗಿ ಪರದಾಡುತ್ತಿದ್ದುದೇ ಕಣ್ಣ ಮುಂದೆ ಸುಳಿಯುತ್ತದೆ, ಇಂದು ನಾನು ಯಾವೊಬ್ಬ ವಿಧವೆಗೆ ಸಹಾಯ ಮಾಡಿದರೂ, ಅಂದು ನನ್ನ ತಾಯಿ ಸರ್ಕಾರಿ ಅಧಿಕಾರಿಗಳ ಬಳಿ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆಗಾಗಿ ಗೋಗರೆಯುತ್ತಿದ್ದು ಜ್ಞಾಪಕಕ್ಕೆ ಬರುತ್ತದೆ, ಇಂದು ನಾನು ಯಾವುದೇ ಸರ್ಕಾರಿ ಆಸ್ಪತ್ರೆಗೆ ಭೇಟಿಕೊಟ್ಟಾಗ, ಒಂದಿಲ್ಲೊಂದು ದಿನ ತನ್ನ ತಂದೆ ತೀವ್ರ ಅನಾರೋಗ್ಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದ ದೃಶ್ಯ ಕಣ್ಣ ಮುಂದೆ ಸುಳಿಯುತ್ತದೆ" ಎಂದು ಭಾವುಕರಾಗುತ್ತಾರೆ. ಆ ಭಾವುಕತೆಯ ಹಿಂದಿನ ನಿರ್ಭಾವುಕ ಮನಸ್ಸುಗಳು ಸೃಷ್ಟಿ ಮಾಡಿದ ಸನ್ನಿವೇಶಗಳು ಖೇದಕರ, ಅದರೊಳಗೆ ರಾಮುವಿನ ಕುಟುಂಬ ಬಿದ್ದು ನರಳಿದ ಹಾಗು ಅದನ್ನು ರಾಮು ಎದುರಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ಭಾರತದ ಯುವ ಜನತೆಗೆ ಮಾದರಿಯಾಗಿ ನಿಂತ ರಾಮುವಿಗೆ ಅವರೇ ಸಾಟಿ.ಇದೊಂದು ಬರಿಯ ಕಥಾನಕವಲ್ಲ, ಬದಲಾಗಿ ನಮ್ಮ ನಡುವೆಯೇ ಇದ್ದು ಬೆಳೆದ ಮುಗ್ದ ಹುಡುಗನೊಬ್ಬನ ಸಾಹಸಗಾಥೆ.

ಕೃಪೆ : Source (ರಮೇಶ್ ಘೋಲಪ್ ಕುರಿತ ಮೂಲ ಲೇಖನ ಐ ಎ ಎಸ್ ಸಾಧಕರ ಅತೀ ಸ್ಪೂರ್ತಿದಾಯಕವಾದ ಸಾಧನೆಯ ಕಥಾನಕಗಳೇನು? ಎನ್ನುವ 'ಕೋರಾ(quora.com)' ದಲ್ಲಿನ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಬಂದಿದ್ದು. )

ರಮೇಶ್ ಘೋಲಪ್ ಗೆ ಸಂಬಂಧಿಸಿದ ಇತರ ಮೂಲಗಳು 
* ರಮೇಶ್ ಘೋಲಪ್ ಮರಾಠಿ ಭಾಷಣ ವಿಡಿಯೋ ತುಣುಕು.
ಬಳೆ ಮಾರಾಟದಿಂದ ಹಿಡಿದು ಝಾರ್ಖಂಡ್ ನ ಜಂಟಿ ಕಾರ್ಯದರ್ಶಿವರೆಗೆ, ದಿ ಬೆಟರ್ ಇಂಡಿಯಾ ಲೇಖನ
ಹಿಂದಿ ದೈನಿಕ 'ಪತ್ರಿಕಾ' ದಲ್ಲಿ ಪ್ರಕಟವಾದ ರಮೇಶ್ ಘೋಲಪ್ ನ ಸಾಹಸಗಾಥೆ.


ಶನಿವಾರ, ಮೇ 13, 2017

ಧರ್ಮ ದುರಸ್ತಿ

ಹೆಸರೇನು ನಿನಗೆ
ಕುಲವೇನು ನಿನಗೆ
ಕಾರ್ಯವಾವುದು ನಿನಗೆ
ಕಪಟ ಭಟ್ಟಂಗಿಗಳ ಆಸರೆಯ
ತೆರೆ ಮರೆಯೊಳಗೆ ಮಲಗಿರುವೆಯಾ!?
ಬಾ ಇಲ್ಲಿ ಒಮ್ಮೆ ನೋಡು
ನಿನ್ನಹೆಸರೊಳಗೆ ನೆತ್ತರ ನದಿಯಿಹುದಿಲ್ಲಿ
ನಿನ್ನಕೃಪೆಯ ರುಂಡ ರಾಶಿಯಿಹುದಿಲ್ಲಿ
ನಿನಗಾಗಿ ನೆತ್ತರಬಸಿವ ಮಕ್ಕಳ ನೋವು ನಿನಗೆ ಆಹಾರವೇ ?
ಅವರ ಚೀತ್ಕಾರ ನರಳಾಟಗಳು ನಿನಗೆ ವೇದ ಘೋಷವೇ ?
ಅವರ ಶಾಪ  ನಿನ್ನ ಪಾಲಿಗೆ ವರವೇ?

ಜಗದೊಳಗುದಿಸಿದ ನರ  ಮಾತ್ರರು
ತಮ್ಮ ವಿನಯವಂತಿಕೆ ಸಂಸ್ಕಾರ ಸಂಸ್ಕೃತಿಗಳನ್ನೆಲ್ಲ
ಪೇರಿಸಿ ಕಟ್ಟು ಬಿಗಿದು
ಅದಕೆ ನಿನ್ನಹೆಸರಿನ್ನಿಟ್ಟು
ಗುಡಿ ಗುಂಡಾರಗಳೊಳಗೆ ಕೊಳೆ ಹಾಕಿ
ನಿರಂಕುಶ ಜಗದೊಳಗೆ
ಬೀದಿಗಿಳಿವ ಬಿಡಾಡಿಗಳಾಗಿ
ನಿನ್ನಹೆಸರೊಳಗೆ ನಿತ್ಯ ಸುಲಿಗೆಯುತ್ಸವ
ನಡೆಯುತಿಹುದಿಲ್ಲಿ,
ಮುರಿ ನಿನ್ನ ನಿದ್ರಾ ವ್ರತವ, ಬಾ ಇಲ್ಲಿ ಬೆರೆ ಇಲ್ಲಿ.
ನಿನ್ನಿಂದ ನಡೆದಿಹುದೇನು ನೀನೂ ಅವಗಾಹಿಸು


ನ್ಯಾಯದ ಕಣ್ಣಿಗೆ ಕಪ್ಪನೆಯ ಅರಿವೆ ಸುತ್ತಿದೆ
ದೇವರು ದಿಂಡರುಗಳನೆಲ್ಲ ಗುಡಿಯೊಳಗೆ ಕೂಡಿಸಿ
ದುಡಿವ ಸರಕು ಮಾಡಿದೆ
ಪ್ರಕೃತಿ ತಾನು ನಿಂತು ಕೊಡದ ಭಿನ್ನತೆ ಕೊಟ್ಟೆ
ನೀನು ಹುಟ್ಟಿದ್ದೇ ಸತ್ಯ ಸಂಧತೆಯನ್ನು ಮಾನವನ
ಹೃದಯದೊಳಗೆ ಬೆಳಗಲು
ಆದರೂ ಒಮ್ಮೊಮ್ಮೆ ನನ್ನ ಉಳಿಸಲು ಸುಳ್ಳು
ಹೇಳಿರೆಂದು ನೀನೆ ನುಡಿಸಿದೆ


ಭಾನುವಾರ, ಮೇ 7, 2017

ಯಾರು ನಾವು?


ನಂಬಿಕೆಗೆ ಹತ್ತು ಹಲವು 
ಹೆಸರ ಹೊಸೆದ ಕೀರ್ತಿ ನಮ್ಮದು, 
ಆ ನಂಬಿಕೆಗೆ ಅಪನಂಬಿಕಸ್ಥರಾಗಿ 
ದಿನ ದೂಡುತ್ತಿರುವರು ನಾವು. 

ಜ್ಞಾನ ವಿಜ್ಞಾನಕೆ 
ತಿರುವು ಕೊಟ್ಟ ಛಾತಿ ನಮ್ಮದು,
ಜ್ಞಾನ ವಿಜ್ಞಾನ ಪುಟಿದ 
ಮೂಲಕ್ಕೆ ಕತ್ತರಿಯಿತ್ತು ಬೀಗಿದವರು ನಾವು.  

ಸತ್ಯ ಮಗ್ಗುಲಾಗಿಸಿ 
ಅಹಂಕಾರದಿಂದ ಮೆರೆದ ಭ್ರಾಂತಿ ನಮ್ಮದು,
ಅಂತ್ಯದಲ್ಲಿ  ಸತ್ಯಕ್ಕೆ ಹೋರಾಡಿ 
ಮಡಿಯುವರು ನಾವು. 

ಇಹದ ಪರದ ದಾರಿ 
ಹುಡುಕ ಹೊರಟವರು ನಾವು, 
ಎದುರುಬಂದ ನೋವುಂಡ ಮನದ 
ದಾರಿಯಾರಿಯದೇಹೋದವರು ನಾವು. 

ಮುಕ್ತಿ ಮೋಕ್ಷಕೆಂದು 
ಬಲಿಯ ಕೊಟ್ಟು ಧರ್ಮ ಕಡೆದವರು ನಾವು, 
ಧರ್ಮ ಧರ್ಮಾಂತರದ ಸುಳಿಯೊಳಗೆ ಸಿಕ್ಕು
ಹಲುಬುವರು ನಾವು. 

ಇರುವ ಪ್ರಕೃತಿಯ 
ನುಂಗಿ ನೀರ್ಕುಡಿದವರು ನಾವು, 
ಪ್ರಕೃತಿಯ ಸಾವಿಗೆ ಹಗಲಿರುಳು 
ಮರುಗುವರು ನಾವು.

ಇರುವುದೆಲ್ಲವ ಕೆಡಿಸಿ 
ಖಜಾನೆಯೊಳಗೆ ಪೇರಿಸಿದವರು ನಾವು,
ಕೆಡುಕಿಗೆ ಕಾರಣಹುಡುಕಿ ಪೇರಿಸಿದ 
ಧನ ವ್ಯವಯಿಸುವರು ನಾವು. 

ಹರಿವ ನೀರಿಗೆ ಒಡ್ಡು
ಕಟ್ಟಿದವರು ನಾವು,
ಕುಡಿವ ನೀರ ಹಣ ಸುರಿದು
ಕೊಳ್ಳುವರು ನಾವು.

ಇಲ್ಲದ ಬೆಂಕಿಯನ್ನು ಬೇಕೆಂದು
ನಿಂತು ಹೊತ್ತಿಸಿದವರು ನಾವು,
ಭೂಮಿ ತನ್ನಿಚ್ಛೆಗೆ ಬೆಂಕಿಯುಗುಳಿದರೆ
ದೂರಗಾಮಿಗಳು ನಾವು.

ಪ್ರಕೃತಿ ವ್ಯವಸ್ಥೆಯನ್ನೆಲ್ಲ
ಕೆಡಿಸಿದವರು ನಾವು,
ಅದನ್ನು ಸರಿಪಡಿಸಲು ಟೊಂಕ ಕಟ್ಟಿ
ನಿಂತವರು ನಾವೇ ನಾವು!!
ಈ ಭುವಿಯ ಮಕ್ಕಳು.

ಸೋಮವಾರ, ಮೇ 1, 2017

ಕಾರ್ಗಿಲ್ ಯುದ್ಧಕ್ಕೆ ದೇಣಿಗೆ

ಮೊನ್ನೆ ದೇಶಕ್ಕೆ ಬಲಿದಾನಗೈದ ಸೈನಿಕರ ಕುರಿತು ಚಕ್ರವರ್ತಿ ಸೂಲಿಬೆಲೆ ಮಾಡುತ್ತಿದ್ದ ಭಾಷಣದ ವಿಡಿಯೋ ಒಂದನ್ನು ಯೂಟ್ಯೂಬ್ ನಲ್ಲಿ ನೋಡುತ್ತಿದ್ದೆ. ಅದು ಬರೀ ಮಾತಲ್ಲ, ಭಾಷಣವಂತೂ ಅಲ್ಲವೇ ಅಲ್ಲ. ದೇಶ ಭಕ್ತಿಯ ಸುಧಾಮೃತ, ಅವರ ಮಾತು ಮುಂದುವರಿದಂತೆಲ್ಲ ನಾನು ಅಮೃತ ಸುಧೆಯಲ್ಲಿ ಮಿಂದೇಳುತ್ತಿದ್ದೆ. ದೇಶವೊಂದು ತಾನು ಸಧೃಡವಾಗಿ ನಿಂತು ಬೀಗಬೇಕಾದರೆ ನೂರಾರು ಜನರ ನೆತ್ತರ ಹನಿ ಬಸಿಯಬೇಕು, ಲಕ್ಷಾಂತರ ಜನರ ಬೆವರ ಹನಿ ಭುವಿ ಮುಟ್ಟಬೇಕು, ಕೋಟ್ಯಂತರ ಜನರ ಹಾರೈಕೆ ಫಲಿಸಬೇಕು ನಿಟ್ಟಿನಲ್ಲಿ ದೇಶದ ಸರ್ವ ಕ್ಷೇತ್ರಗಳೂ ಕಾರ್ಯ ಪ್ರವೃತ್ತವೇ ಆದರೂ ಅದರಲ್ಲಿ ಎಲ್ಲರಿಗಿಂತ ಯೋಧರ ಪಾತ್ರ ಬಹು ಮುಖ್ಯವಾದುದು. ದೇಶದೊಳಗಿನ ಪರಿಸ್ಥಿತಿಗಳನ್ನು ನಿಭಾಯಿಸಲು ಸಂವಿಧಾನವೆಂಬ ಚೌಕಟ್ಟು ಇದ್ದು ಅದರೊಳಗೆ   ದೈನಂದಿನ ಕಾರ್ಯ ಕಲಾಪಗಳಾದರೆ ಆಗಿ  ಹೋಯಿತು. ಆದರೆ ಗಡಿಯಲ್ಲಿ ನೆರೆದೇಶಗಳು ತೆಗೆಯುವ ತಗಾದೆಗೆ ಯಾವ ಚೌಕಟ್ಟು?, ಎಲ್ಲಿಯ ಮಿತಿ?,  ಯಾರು ದಿಕ್ಕು?.ಅವುಗಳೆಲ್ಲದರ ಪರಿಣಾಮಗಳ ಗುಂಡುಗಳಿಗೆ ಎದೆಯೊಡ್ಡುವರು ಮಾತ್ರ ನಮ್ಮ ಸೈನಿಕರು.

1999
ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಘಟನೆ ಘಟಿಸಿದ ವರ್ಷ. ದೇಶದ ಪ್ರಧಾನಿಯಾಗಿದ್ದ ವಾಜಪೇಯಿ ಶಾಂತಿ ಸೌಹಾರ್ದತೆಯನ್ನೇ ಮುಂದು ಮಾಡಿಕೊಂಡು ಭಾರತ-ಪಾಕಿಸ್ತಾನ ಬಸ್ ಸೇವೆಯನ್ನು 1999 ಫೆಬ್ರವರಿಯಲ್ಲಿ ಆರಂಭಿಸಿದ್ದರು. ಇದು ಉಭಯ ದೇಶಗಳಿಗೂ ಆನಂದದಾಯಕವಾಗಿರುವುದೇ ಆಗಿದ್ದು ಇದನ್ನು ಕಂಡು ಇನ್ನೆಷ್ಟು ದೇಶಗಳು ಹೊಟ್ಟೆ ಉರಿದುಕೊಂಡಿದ್ದವೋ ಗೊತ್ತಿಲ್ಲ. ಆದರೆ ಪಾಕಿಸ್ತಾನ-ಭಾರತಗಳು ಒಟ್ಟುಗೂಡಿದರೆ ದಕ್ಷಿಣ ಏಷ್ಯಾದ ದೇಶಗಳು ನಮ್ಮ ಬಳಿ ಯಾವುದಕ್ಕೂ ಕೈ ಒಡ್ಡುವ ಪ್ರಸಂಗ ಬರುವುದಿಲ್ಲವೆನ್ನುವುದು ಕೆಲವು ದೇಶಗಳಿಗೆ ಒಳಗೊಳಗೇ ಚುಚ್ಚಲಾರಂಭಿಸಿತ್ತು. ಯಾರ ಹೇಳಿಕೆಯ ಮಾತೋ?  ಇಲ್ಲ ಪಾಕಿಸ್ತಾನ ತನ್ನ ಭವಿಷ್ಯದ ಬಗ್ಗೆ ತಪ್ಪುಗ್ರಹಿಕೆ ಮಾಡಿಕೊಂಡು ಯುದ್ಧಕ್ಕೆ  ಸನ್ನದ್ಧವಾಯಿತೋ? ದೇವರೇ ಬಲ್ಲ.  

ಸ್ವಾತಂತ್ರ್ಯ ದಕ್ಕಿದಂದಿನಿಂದ ಕಾಶ್ಮೀರ ಕಣಿವೆಗಳತ್ತಲೇ ಚಿತ್ತ ನೆಟ್ಟಿರುವ ಪಾಕಿಸ್ತಾನಕ್ಕೆ ಯುದ್ಧ ಮಾಡಲು ಅದ್ಯಾವ ಸುಸಮಯ ಅನ್ನುವ ಭಾವನೆ ಬಂದಿತೋ ಅಥವಾ ಸರಿಯಾಗಿ ಅಲ್ಲಿಗೆ ಒಂದು ವರ್ಷದ ಹಿಂದೆ ತಾನೇ ಸಿದ್ಧಪಡಿಸಿದೆ ಎಂದು ಹೇಳಿಕೊಂಡಿದ್ದ ಅಣು ಬಾಂಬ್ ಅನ್ನು  ಪರೀಕ್ಷಾರ್ಥ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದ ಹೆಮ್ಮೆಯಲ್ಲಿ ಬೀಗುತ್ತಿದ್ದ ಕಾರಣವಿದ್ದರೂ ಇರಬಹುದು. ಭಾರತದೊಳಗೆ ಬಿರು ಬೇಸಿಗೆಯಿತ್ತು, ಅತ್ತ ಪಾಕಿಸ್ತಾನ ಅದೇ ವರ್ಷದ ಮೇ ಆರಂಭದಲ್ಲಿ ತನ್ನ ಸೈನಿಕರನ್ನು ಭಾರತದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿಸಿತ್ತು. ಕುತಂತ್ರಕ್ಕೆ ಪ್ರಖ್ಯಾತವಾಗಿರುವ ಪಾಕಿಸ್ತಾನ ಭಾರತ ದೇಶದೊಳಗೆ ವಾಮ ಮಾರ್ಗದ ಮೂಲಕ ಪ್ರಾಂತವೊಂದರ ಮೇಲೆ ಹಿಡಿತ ಸಾಧಿಸಲು ಶತಾಯ ಗತಾಯ ಪ್ರಯತ್ನ ನಡೆಸಿತ್ತು. ಯಥಾ ಪ್ರಕಾರ ತನ್ನ ಕಳ್ಳ ಮಾರ್ಗದ ಮೂಲಕವೇ ತನ್ನ ಸೈನಿಕರನ್ನು ನುಗ್ಗಿಸುತ್ತಿತ್ತು. ಅಪ್ಪಿ ತಪ್ಪಿ ಪಾಕ್ ಸೈನಿಕರು ಭಾರತದ ಗಡಿಯೊಳಗೆ ಗುಂಡಿಗೆ ಬಲಿಯಾದರೆ ಅವರು ನಮ್ಮ ಸೈನಿಕರಲ್ಲ, ನಮ್ಮ ಸೈನಿಕರಂತೆ ವೇಷ ಮರೆಸಿಕೊಂಡಿದ್ದ ಭಯೋತ್ಪಾದಕರು ಎನ್ನುವುದು ಇಂತಹವೆಲ್ಲ ಸ್ವಾತಂತ್ರ್ಯಾನಂತರ ರಾಷ್ಟ್ರಕ್ಕೆ ಮಾಮೂಲಿ ದಿನ ನಿತ್ಯದ ಕಾರ್ಯವಾಗಿದ್ದು ಇದೀಗ ಯಾರಿಗೂ ತಿಳಿಯದ ವಿಚಾರವಲ್ಲ.   

ಅದು ಸರಿಯಾಗಿ 1999 ಮೇ 2ನೆ ತಾರೀಖು ಕಾಶ್ಮೀರ ಪ್ರಾಂತದ ಕಾರ್ಗಿಲ್ ಜಿಲ್ಲೆಯ ಗಾರ್ಕೌನ್ ಗ್ರಾಮದ ದನ ಕಾಯುವ ಹುಡುಗರು ಪಾಕಿಸ್ತಾನದ ಸೈನ್ಯ ಮೆಲ್ಲಗೆ ಕದನ ವಿರಾಮ ಉಲ್ಲಂಘಿಸಿ ಗಡಿಯೊಳಗೆ ವಿಪರೀತ ಚಟುವಟಿಕೆಗಳನ್ನು ಮಾಡುತ್ತಿದ್ದನ್ನು ಸದ್ದಿಲ್ಲದೇ ಸರ್ಕಾರದ ಕಿವಿಗೆ ತಲುಪಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತವಾದ ಕೇಂದ್ರ ಸರ್ಕಾರ ಇದರ ಮೇಲ್ವಿಚಾರಣೆಗೆ ಐದು ಜನ ಕಮಾಂಡೋ ಗಳನ್ನು ಕಾರ್ಗಿಲ್ ಗಡಿಗೆ ಕಳುಹಿಸಿಕೊಟ್ಟಿತು. ಪಾಕಿಸ್ತಾನ ತನ್ನನ್ನು ತಾನು ಪಾಪಿಸ್ತಾನವೆಂದು ತೋರ್ಪಡಿಸಿಕೊಳ್ಳಲೋ ಎಂಬಂತೆ ಐವರನ್ನು ಚಿತ್ರ ಹಿಂಸೆ ನೀಡಿ ಕೊಂದಿತು. ಅದೇ ಸಮಯಕ್ಕೆ ಸರಿಯಾಗಿ ಪಾಕಿಸ್ತಾನ ಸೈನ್ಯದ ಮುಖ್ಯಸ್ಥರ ಹೇಳಿಕೆಗಳು, ಪಾಕಿಸ್ತಾನದ ಅಧ್ಯಕ್ಷರ ಹೇಳಿಕೆಗಳು ತಾವು ಯುದ್ಧ ಬಯಸಿದ್ದೇವೆ ಎನ್ನುವುದನ್ನು ಪರೋಕ್ಷವಾಗಿ ಭಾರತಕ್ಕೆ ರವಾನೆ ಮಾಡಿದ್ದರಿಂದ ಯುದ್ಧ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರವಾದವು.  


ದ್ವೀತೀಯ ಮಹಾಯುದ್ಧದ ನಂತರ ಭೀಕರವೆನಿಸುವ ಯುದ್ಧಗಳು ಪ್ರಪಂಚದಲ್ಲಿ ನಡೆದವಾದರೂ ಅಣು ಶಕ್ತಿಪೂರಿತವಾದ ಎರಡು ರಾಷ್ಟ್ರಗಳು ಎದುರಾಗಿ ಯುದ್ಧ ಮಾಡಿದ್ದು ಕಾರ್ಗಿಲ್ ಯುದ್ಧದಲ್ಲಿಯೇ. ಬೆಚ್ಚಿದ ಜಗತ್ತಿನ ಇತರ ರಾಷ್ಟ್ರಗಳು ಭಾರತ /ಪಾಕ್ ನಲ್ಲಿರುವ ತಮ್ಮ ನಾಗರೀಕರಿಗೆ ತುರ್ತಾಗಿ ದೇಶಗಳನ್ನು ಬಿಟ್ಟು ಹೊರಟುಬಿಡಬೇಕೆಂದು ಸುಗ್ರೀವಾಜ್ಞೆ ಹೊರಡಿಸಿಬಿಟ್ಟವು. ನಾಗರೀಕರು ಹಾಗೆ ನಡೆದುಕೊಂಡರೂ ಕೂಡ. ಇರಲಿ ಅವೆಲ್ಲ ಒತ್ತಟ್ಟಿಗಿದ್ದರೂ ದೇಶದೊಳಗಿನ ಹಲವಾರು ವಿಷಯಗಳು ದಿಕ್ಕು ತಪ್ಪಿದ್ದಂತೂ ನಿಜ. ಕೇಂದ್ರದಲ್ಲಿ ವಾಜಪೇಯಿಯವರ ಮೇಲೆ ತುರ್ತು ಪರಿಸ್ಥಿತಿ ಹೇರಲು ಇನ್ನಿಲ್ಲದ ಒತ್ತಡ ತರಲು ಪ್ರಯತ್ನ ಮಾಡಿ ಸೋತ ಕೆಲವರು ದೇಶದ ಮೇಲೆ ಯುದ್ಧವಾಗುತ್ತಿದ್ದರು ತಮ್ಮದೊಂದಿಷ್ಟು ರಾಜಕೀಯ ಬೆಳೆಯನ್ನು ಅದೇ ಉರಿಯಲ್ಲಿ ಬೇಯಿಸಿಕೊಂಡು ಬಿಡಲು ತವಕಿಸುತ್ತಾ ಕೂತಿದ್ದರು.

1974-75 ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ವಿಧಿಸಿದ್ದ ತುರ್ತು ಪರಿಸ್ಥಿತಿಗೆ ವಿರೋಧವೊಡ್ಡಿದವರಲ್ಲಿ ಪ್ರಮುಖರು ವಾಜಪೇಯಿ ಆದ ಕಾರಣ 99 ಕಾರ್ಗಿಲ್ ಯುದ್ಧ ಘೋಷಣೆಯಾದಾಗ ಯುದ್ಧ ಘೋಷಣೆಯೊಂದಿಗೆ ತುರ್ತು ಪರಿಸ್ಥಿತಿ ಘೋಷಿಸದೆ ಪಾಕಿಸ್ತಾನದ ಪೊಳ್ಳು ಬೆದರಿಕೆಗೆ ದೇಶದ ಕಾನೂನು ಸುವ್ಯವಸ್ಥೆಗೆ ಕೊಂಚವೂ ಕುಂದು ಉಂಟಾಗದಂತೆ ದೇಶ ಕಾಯುವುದರಲ್ಲಿ ಚಾಣಾಕ್ಷತನ ಮೆರೆದರು. ಸಾರ್ವಜನಿಕ ರಂಗದಲ್ಲಿಯೂ ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಯಿತು. ಜನ ತಾವೇ ಮುಂದೆ ನಿಂತು ಕಾರ್ಗಿಲ್ ಯುದ್ಧಕ್ಕೆ ದೇಣಿಗೆ ಸಂಗ್ರಹ ಮಾಡಿ ಕೊಟ್ಟರು. ಅದರಲ್ಲೂ ಹೇಳಬೇಕೆನಿಸುವ ಪ್ರಮುಖ ಸಂಸ್ಥೆ ಆರ್ ಎಸ್ ಎಸ್

ನಾವೆಲ್ಲಾ ಆಗ ಸುಮಾರು ಮೂರನೇ ಕ್ಲಾಸು ಓದುತ್ತಿದ್ದ ಹುಡುಗರು. ಆಗಷ್ಟೇ ಶಾಲೆ ಶುರುವಾಗಿತ್ತು. ನಾನು ಅಧೀಕೃತವಾಗಿ ಆರ್ ಎಸ್ ಎಸ್ ಸೇರಿಲ್ಲವಾದರೂ ಪ್ರತೀ ದಿನ ಸಾಯಂಕಾಲ ನಡೆಯುತ್ತಿದ್ದ ಶಾಖೆಯಲ್ಲಿ ಹೇಳುವ ಕಥೆಗೆ ಆಸೆ ಪಟ್ಟು ಅಲ್ಲಿಗೆ ಹೋಗಿಬಿಡುತ್ತಿದ್ದೆ.ದೇಶಕ್ಕೆ ಬಲಿದಾನಗೈದವರ ಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆ, ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿ ನಡೆದ ಆಂದೋಲನಗಳ ಸಂಕ್ಷಿಪ್ತ ನೋಟವೇ ಮೊದಲಾಗಿ ಮತ್ತಿತರ ರಾಷ್ಟ್ರೀಯ ಐತಿಹಾಸಿಕ ವಿಚಾರಗಳನ್ನು ಸವಿಸ್ತಾರವಾಗಿ ಅಲ್ಲಿ ಬಿಚ್ಚಿಡುತ್ತಿದ್ದ ಕಾರಣ ಅಲ್ಲಿಗೆ ಹೋಗುವುದು ಒಂದು ಚಟವಾಯಿತು. ಇಂತಿಪ್ಪ 1999 ಒಂದು ದಿನ ಅಂದಿನ ಶಾಖೆಯಾನಂತರ ಅಲ್ಲಿನ ಸಂಘಟಕರು ಸೇರಿದ್ದ ಹುಡುಗರನ್ನೆಲ್ಲ ಕರೆದು ಕಥೆ ಹೇಳಲು ನಿಂತರು. ಇಂದಿನ ಕಥೆ ಏನಿರಬಹುದು ಅನ್ನುವ ಧಾವಂತದಲ್ಲಿ ನಮ್ಮ ಕಿವಿಯಾಳಿಗಳು ಅತ್ತಲೇ ಹೊರಳಿದಾಗ ಅಲ್ಲಿ ಕೇಳಿಸಿದ್ದು 'ಭಾರತದ ಮೇಲೆ ಯುದ್ಧ ಘೋಷಣೆಯಾಗಿದೆ' ಎನ್ನುವ ವಾಕ್ಯ!!. ಸರಿ ಮುಂದೇನು? ಅನ್ನುವ ಪ್ರಶ್ನೆ ನಮ್ಮೊಳಗೇ ಹುಟ್ಟುವ ಮೊದಲೇ ಪ್ರಧಾನಿ ವಾಜಪೇಯಿ ತುರ್ತುಪರಿಸ್ಥಿತಿ ಘೋಷಿಸಿಲ್ಲ, ಯುದ್ಧಕ್ಕೆ ಬೇಕಾದ ನಿಧಿಗೆ ದೇಶದ ಸಮಸ್ತರೂ ತಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವುದನ್ನು ಕೇಳಿ ಮುಂದಿನ ನಡೆ ನನ್ನ ಗ್ರಹಿಕೆ ಅಳತೆಯಿದ್ದಷ್ಟು ಗೋಚರವಾಯಿತಾದರೂ ನಾವೇ ನಮ್ಮ ಮನೆಗಳಿಗೆ ಬಂದು ಮನೆಯ ಮೂಲೆಯಲ್ಲಿದ್ದ ಹಳೆ ಡಬ್ಬಗಳನ್ನು ಮತ್ತಿತರ ಬಳಕೆಯಾಗದ ವಸ್ತುಗಳನ್ನು ಸೇರಿಸಿ ಹುಂಡಿಯಂತಹ ಡಬ್ಬಗಳನ್ನು ತಯಾರು ಮಾಡಿಕೊಂಡು ಮೂರು ಮೂರು ಜನ ಗುಂಪಿನಂತೆ ಆರ್ ಎಸ್ ಎಸ್ ವತಿಯಿಂದ ಯುದ್ಧಕ್ಕಾಗಿ ದೇಣಿಗೆ ಸಂಗ್ರಹ ಮಾಡಲು ನಿಂತೆವು.

ಅಂದಿನ ನಮ್ಮ ಶಾಖೆಯ ಸಂಘಟಕರು ಹೇಳಿದ ಮಾತುಗಳು ನಾನು ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ಕೇಳಿದಾಗಲೂ ನನ್ನಲ್ಲಿ ಮತ್ತೆ ಮತ್ತೆ ಅನುರಣಿಸುತ್ತಲೇ ಇರುತ್ತವೆ. ಮಹಾನ ದೇಶ ಭಕ್ತರಾಗಿದ್ದ ನಮ್ಮ ಶಾಖಾ ಸಂಘಟಕ ಮಂಜುನಾಥ್(ಅವರ ಬಿಡುವಿನ ಸಮಯದಲ್ಲಿ ನಮ್ಮ ತರಗತಿಗಳಿಗೆ ಬಂದು ಸಂಸ್ಕೃತವನ್ನು ಹೇಳಿಕೊಡುತ್ತಿದ್ದವರು ಅವರೇ) ಅವರು ದೇಣಿಗೆ ಸಂಗ್ರಹಕ್ಕೆ ಹೊರಡುತ್ತಿರುವ ಹುಡುಗರಿಗೆ ನಿರ್ದೇಶನ ನೀಡುವಾಗ  ಹೇಳಿದರು 'ಮತ್ತೊಬ್ಬರಿಂದ ದೇಣಿಗೆ ಸಂಗ್ರಹ ಮಾಡುವ ಮೊದಲು ನಿಮ್ಮ ಕೈಲಾದಷ್ಟು ಹಣ ನೀವು ನಿಮ್ಮ ಕೈಲೇ ಹಿಡಿರುವ ಹುಂಡಿಯೊಳಗೆ ಹಾಕಿಬಿಡಿ, ಅದು ನೇರವಾಗಿ ಯುದ್ಧದ ನಿಧಿಗೆ ತಲುಪುತ್ತದೆ' ಎಂದು. ಅಂದಿಗೆ ಏನೂ ಯೋಚನೆ ಮಾಡದೆ ನನ್ನಲ್ಲಿದ್ದ 3-4 ರೂಪಾಯಿಗಳನ್ನು ಹುಂಡಿಯೊಳಗೆ ಹಾಕಿ ಮಾಗಡಿ ಪೇಟೆಯ ಗಲ್ಲಿ ಬೀದಿಗಳಲ್ಲಿ ದೇಣಿಗೆ ಸಂಗ್ರಹ ಮಾಡಿ ಹಿಂತಿರುಗಿದ್ದೆ. ಅಂದಿಗೆ ನಾನೇನು ಮಾಡಿದೆ ಎನ್ನುವ ಅರಿವು ನನಗಿರಲಿಲ್ಲ, ತಿಳಿದುಕೊಳ್ಳುವ ವಯಸ್ಸು ಅದಲ್ಲವೇನೋ ನಾನರಿಯೆ.

ಮೊನ್ನೆ ಚಕ್ರವರ್ತಿಯವರ ಭಾಷಣದ ವಿಡಿಯೋ ತುಣಿಕಿನಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ನಾಗರೀಕರ ಸಮಯ ಪ್ರಜ್ಞೆಯನ್ನು ಕೊಂಡಾಡುತ್ತಿದ್ದುದನ್ನು ಗಮನಿಸಿದೆ. ಮುಂಬೈ ನಗರದ ವೇಶ್ಯೆಯರ ಸಂಘಟನೆಯೊಂದು ನಿರ್ದಿಷ್ಟ ದಿನವೊಂದರ ವೇಶ್ಯಾವಾಟಿಕೆಯಿಂದ ಗಳಿಸಿದ ಹಣವನ್ನು ಕಾರ್ಗಿಲ್ ಯುದ್ಧಕ್ಕೆ ನೀಡಿದ್ದು, ಅದೇ ನಗರದಲ್ಲಿ ಸರ್ಕಾರಿ ಶಾಲೆಯ ಬಾಲಕಿಯೊಬ್ಬಳು ಲೋಕಲ್ ರೈಲುಗಳಲ್ಲಿ ಭಿಕ್ಷೆ ಬೇಡಿ ಸುಮಾರು ನೂರು ರೂಪಾಯಿಗಳನ್ನು ಸಂಪಾದಿಸಿ ಅವರ ತಂದೆಗೆ ಕೊಟ್ಟು ಯುದ್ಧ ನಿಧಿಗೆ ಹಣ ತಲುಪಿಸುವಂತೆ ಬೇಡಿಕೊಂಡಿದ್ದು ಇನ್ನು ಎಷ್ಟೆಷ್ಟೋ ಇಂತಹ ಉದಾಹರಣೆಗಳನ್ನು ಅವರು ತೆರೆದಿಡುತ್ತಾ ಹೋದಂತೆ ನನ್ನ ಮನಸ್ಸು ನಾನೇನು ಮಾಡಿದೆ? ಎನ್ನುವತ್ತ ಹೊರಳಿತು.ವಯಸ್ಸು ಚಿಕ್ಕದು, ಕೊಡುವ ಕೈಯಂತೂ ಇನ್ನು ಚಿಕ್ಕದು ಆದರೂ ನಾನು 3-4  ರೂಪಾಯಿ ಕೊಟ್ಟಿದ್ದೆ. ಅದರೊಳಗೆ ಸಾರ್ಥಕತೆ ಎದ್ದು ಕಾಣಿಸುತ್ತಿದೆ. ಇಂದು ಸಾವಿರಾರು ರೂಪಾಯಿಗಳನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಖರ್ಚು ಮಾಡಿ ಉಡಾಯಿಸಬಹುದು. ಆದರೆ ಅಂದು ನಾನು ಕೊಟ್ಟ ಮೂರು ರೂಪಾಯಿಗಳು ಇಂದು ಸಾಸಿರದಷ್ಟಾಗಿ ನನ್ನ ಕಣ್ಣಿಗೆ ಗೋಚರಿಸುತ್ತಿವೆ. ನಾನು ಎಷ್ಟು ಬಾರಿ ಎಲ್ಲೆಲ್ಲಿ ದುಡ್ಡು ಕೊಟ್ಟಿದ್ದೇನೋ ಅದೆಲ್ಲಕ್ಕಿಂತ ಹೆಚ್ಚು ಸಾರ್ಥಕತೆ ಹಾಗು ಅಪ್ಯಾಯಮಾನವಾಗಿರುವುದು ಕಾರ್ಗಿಲ್ ಯುದ್ಧಕ್ಕೆ ನಾ ಕೊಟ್ಟ ಸೂಕ್ಷಮಾತಿ ಸೂಕ್ಷ್ಮ ದೇಣಿಗೆಯಲ್ಲಿ.ನನ್ನಿಂದ ಸೂಕ್ಷ್ಮ ಸೇವೆಯಾಗಲು ಕಾರಣೀಭೂತವಾದ ಆರ್ ಎಸ್ ಎಸ್ ಗೆ ನಾನು ಎಂದೆಂದಿಗೂ ಅಭಾರಿ.



ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...