ಶನಿವಾರ, ಆಗಸ್ಟ್ 26, 2017

ನದಿಗಳಿಗಾಗಿ ಜಾಥಾ ಭಾರತದ ಈಗಿನ ಅವಶ್ಯಕತೆ

ಒಮ್ಮೆ ನೆನಪಿಸಿಕೊಳ್ಳಿ ಪ್ರಪಂಚದ ಮೊಟ್ಟಮೊದಲ ನಾಗರೀಕತೆ ಹರಪ್ಪ ನಾಗರೀಕತೆ ಇದ್ದಿದ್ದು ಸಿಂಧೂ ನದಿ ದಂಡೆಯಲ್ಲಿ. ಭಾರತದ ಅತ್ಯಂತ ಪುರಾತನ ನಗರಗಳೆಲ್ಲವೂ ಹುಟ್ಟಿದ್ದು, ಬೆಳೆದಿದ್ದು, ಲೋಕವಿಖ್ಯಾತವಾಗಿದ್ದು ನದಿ ಆಶ್ರಯದಲ್ಲಿಯೇ. ಯಾವುದೇ ದೇಶದ ಆರ್ಥಿಕತೆಗೆ ದೇಶಗಳ ನದಿಗಳು ಅಪಾರ ಕೊಡುಗೆಯಿತ್ತಿರುತ್ತವೆಆಧುನಿಕತೆಯಲ್ಲಿ ಮುನ್ನಡೆ ಸಾಧಿಸಿರುವ ಭಾರತದ ನಗರಗಳೂ ಕೂಡ ನದಿ ದಂಡೆಯಲ್ಲಿಯೇ ಇವೆ ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲವಷ್ಟೆ. ದೆಹಲಿ ಕಟ್ಟಿಸಿದ್ದು ಯಮುನಾ ನದಿ ದಂಡೆಯ ಮೇಲೆ, ಬೆಂಗಳೂರು ವೃಷಭಾವತಿ ನದಿ ದಂಡೆಯಲ್ಲಿ, ಚೆನ್ನೈ ನಗರ ಅಡ್ಯಾರ್ ನದಿ ದಂಡೆಯಲ್ಲಿ, ಮೀಠೀ ನದಿ ದಂಡೆಯಲ್ಲಿ ಮುಂಬೈ, ಹೂಗ್ಲಿ ನದಿ ದಂಡೆಯಲ್ಲಿ ಕೋಲ್ಕತ್ತಾ, ಮೂಸಿ ನದಿ ದಂಡೆಯಲ್ಲಿ ಹೈದರಾಬಾದ್, ಗಂಗಾ ನದಿ ದಂಡೆಯಲ್ಲಿ ಪಾಟ್ನಾ, ಸಬರಮತಿ ನದಿ ದಂಡೆಯಲ್ಲಿ ಅಹಮದಾಬಾದ್, ಗೋಮತಿ ನದಿ ದಂಡೆಯಲ್ಲಿ ಲಕ್ನೋ ಹೀಗೆ ಇನ್ನು ಯಾವ ಯಾವ ಊರು ನೀವು ತೆಗೆದುಕೊಂಡರೂ ಅವೆಲ್ಲ ಹುಟ್ಟಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಇವತ್ತಿನ ರೀತಿಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವುದು ನದಿ ದಂಡೆಯಲ್ಲಿಯೇ ಅನ್ನುವುದರಲ್ಲಿ ಎರಡು ಮಾತಿಲ್ಲ.

ಭೂಮಿ ಹುಟ್ಟಿ ಇಲ್ಲಿನ ಅನಿಲಗಳೆಲ್ಲವೂ ಸೇರಿ ನೈಸರ್ಗಿಕ ರಾಸಾಯನಿಕ ಕ್ರಿಯೆಗಳು ನಡೆದು ಅದರಿಂದ ಯಥೇಚ್ಛ ಪ್ರಮಾಣದಲ್ಲಿ ಮೋಡಗಳಾಗಿ ಭೂಮಿಯ ಮೇಲೆ ಕೋಟ್ಯಾಂತರ ವರ್ಷ ಮಳೆಯಾಗಿ ಸುರಿಯಿತು. ಸುರಿದ ಮಳೆ ನೀರೆಲ್ಲ ಹಳ್ಳಗಳ ಕಡೆಗೆ ಹರಿದು ಅಲ್ಲಿ ಸಮುದ್ರ ನಿರ್ಮಾಣವಾಯಿತು. ನೀರಿನ ಹರಿದ ದಾರಿ ಮಣ್ಣು ಕೊಚ್ಚಿ ಹೋಗಿ ಹಳ್ಳವಾಯಿತು, ಭೂಮಿಯ ಮೇಲೆ ಇನ್ನೆಂದು ಮಳೆಯಾದರೂ, ಅಥವಾ ಹಿಮ ಕರಗಿ ನೀರಾದರೂ ಅದು ಹರಿದು ಸಮುದ್ರ ಸೇರಲು ಅದೇ ದಾರಿ ರಾಜ ಮಾರ್ಗವಾಯಿತು. ಇವುಗಳನ್ನೇ ನದಿಗಳೆಂದು ಕರೆಯಲಾಯಿತು.

ಬರಿದಾಗಿ ಬತ್ತಿರುವ ಕಾವೇರಿ, ಮಹದೇಶ್ವರ ಬೆಟ್ಟದ ಹತ್ತಿರವಿರುವ ಕರ್ನಾಟಕ ತಮಿಳುನಾಡು ಗಡಿಯಲ್ಲಿನ ದೃಶ್ಯ

ಮನುಷ್ಯನ ಜೀವನಕ್ಕೆ ನೀರು ಅತೀ ಅವಶ್ಯಕವಾದ ಕಾರಣ ಮನುಷ್ಯನ ಬದುಕು ನದಿ ಸಾಮಿಪ್ಯದಲ್ಲೇ ಆರಂಭವಾಯಿತು. ದಿನಗಳು ಕಳೆದಂತೆ ಹಳ್ಳಿಗಳು ನಗರಗಳಾಗಿ ಮನುಷ್ಯನ ನಾಗರೀಕತೆಯು ಹೊಸ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಇವತ್ತಿನ ಮಟ್ಟಿಗೆ ಬಂದು ನಿಂತಿದೆ. ಆದರೆ ಮನುಷ್ಯ ತಾನು ಬೆಳೆಯುವ ಭರದಲ್ಲಿ ಕಡೆಗಣಿಸಿದ್ದು ಮಾತ್ರ ನದಿಗಳನ್ನು. ಭಾರತದ ಸಂಸ್ಕೃತಿಯಲ್ಲಂತೂ ನದಿಗಳಿಗೆ ವಿಶೇಷ ಸ್ಥಾನ, ಬೇರೆಲ್ಲೂ ನಡೆಯದ ನದಿಯ ಆರತಿ ನಡೆಯುವುದು ಭಾರತ ಉಪಖಂಡದಲ್ಲಿ ಮಾತ್ರ. ನದಿಗೆ ದೇವರ ಸ್ಥಾನ ಕೊಟ್ಟ ಕೆಲವೇ ಕೆಲವು ಸಂಸ್ಕೃತಿಗಳಲ್ಲಿ ಭಾರತದ ಸಂಸ್ಕೃತಿಗೆ ಅಗ್ರ ಸ್ಥಾನ. ಇಂತಿರುವ ಭಾರತದ ನದಿಗಳು ಇಂದು ಏನಾಗಿವೆ, ಏನಾಗುತ್ತಿವೆ ಎನ್ನುವ ಅರಿವು ಬರೀ ಸರ್ಕಾರಕ್ಕಿದ್ದರೆ ಸಾಲದು, ಜನ ಸಾಮಾನ್ಯರಲ್ಲೂ ವ್ಯಕ್ತವಾಗಬೇಕು ಎನ್ನುವ ಅಭಿಲಾಷೆಯಿಂದಲೇ 'ಈಶಾ' ಸಂಸ್ಥೆಯ ಸಂಸ್ಥಾಪಕ ಹಾಗು ದಾರ್ಶನಿಕ ಸದ್ಗುರು ಜಗ್ಗಿ ವಾಸುದೇವ್ 'ನದಿಗಳಿಗಾಗಿ ಜಾಥಾ(ರ್ಯಾಲಿ ಫಾರ್ ರಿವರ್ಸ್)' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕನ್ಯಾಕುಮಾರಿಯಿಂದ ಹಿಡಿದು ಹಿಮಾಚಲದ ವರೆವಿಗೂ ರ್ಯಾಲಿ ಹೊರಡಲಿದೆ. ಮಾರ್ಗದಲ್ಲಿನ ಹದಿನಾರೂ ರಾಜ್ಯಗಳು ರ್ಯಾಲಿಗೆ ಕೈಜೋಡಿಸಿದ್ದು ಅಸಂಖ್ಯಾತ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಹೊಸದೊಂದು ಯೋಜನೆ ಸಿದ್ಧಪಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಸಲುವಾಗಿ  ಜಾಥಾ ನಡೆಯುತ್ತಿದ್ದು ನೀರು ಬಳಸುವ ಸರ್ವರೂ ಜಾಥಾ ದಲ್ಲಿ ಪಾಲ್ಗೊಳ್ಳುವಂತೆ ಘೋಷಣೆ ಹೊರಡಿಸಲಾಗಿದೆ.

ನದಿಯ ಇಕ್ಕೆಲಗಳಲ್ಲಿ ಒಂದು ಕಿಲೋಮೀಟರ್ ವರೆವಿಗೂ ಕಾಡು ಬೆಳೆಸುವ ಮಾದರಿ ಪ್ರಾತ್ಯಕ್ಷಿಕೆ

ದೇಶ ಸುಭೀಕ್ಷವಾಗಿರಬೇಕಾದರೆ ನದಿಗಳು ಯಥೇಚ್ಛ ನೀರಿನೊಂದಿಗೆ ಹರಿಯುತ್ತಿರಬೇಕು ಎನ್ನುವುದು ಸತ್ಯ. ಭಾರತದಲ್ಲಿ ಜನಸಂಖ್ಯೆಗೇನು ತೊಂದರೆಯಿಲ್ಲವಾದ್ದರಿಂದ ನದಿಗಳು ತುಂಬಿ ಹರಿದಷ್ಟು ಕೃಷಿ ಉಚ್ಚ ಸ್ಥಾನದಲ್ಲಿರುವ ವೃತ್ತಿಯಾಗುತ್ತದೆ ಅಷ್ಟೇ ಅಲ್ಲದೆ ದೇಶದ ಅಗ್ರ ಪಾಲಿನ ಜನಕ್ಕೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಇದಕ್ಕಾಗಿ ದೇಶದೊಳಗೆ ಹೆಚ್ಚಿನ ಮಳೆಯ ಅವಶ್ಯಕತೆ ಇದೆ, ಮಳೆಗಾಗಿ ಕಾಡು ಬೆಳೆಸುವುದೊಂದೇ ಅನಿವಾರ್ಯ. ಹೀಗಾಗಿ ನದಿಯ ಎರಡೂ ದಂಡೆಗಳಲ್ಲಿ ಕಾಡುಗಳನ್ನು ಬೆಳೆಸುವಂತೆ ಸರ್ಕಾರಕ್ಕೆ ಆಗ್ರಹಿಸುವುದು ರ್ಯಾಲಿಯ ಉದ್ದೇಶ.ಒಂದು ಅಂದಾಜಿನ ಪ್ರಕಾರ ದೇಶದ ನದಿಗಳ ಪಾತ್ರದಲ್ಲಿರುವ ಶೇ.25 ರಷ್ಟು ಭೂಮಿಯ ಒಡೆತನವನ್ನು ಸರ್ಕಾರಗಳೇ ಹೊಂದಿವೆ, ಹೀಗಿರುವಾಗ ಕಾಡು ಬೆಳೆಸಲು ಅದು ಕಷ್ಟವಾಗಲಾರದು. ಇನ್ನುಳಿದ ಶೇ.75ರಷ್ಟು ಭೂಮಿ ಖಾಸಗಿ ಭೂಮಿಯಾಗಿದ್ದು ರೈತರಿಗೆ ಸೇರಿದ್ದಾಗಿದೆ. ಈ ಭೂಮಿಯನ್ನು ಭೂ ಸ್ವಾಧೀನ ಮುಂತಾದ ಪ್ರಕ್ರಿಯೆಗಳನ್ನು ಬಳಸಿ ರೈತರಿಂದ ಕಸಿದುಕೊಳ್ಳುವುದು ಸಾಧುವಾಗಿಲ್ಲ, ಆ ಕಾರಣದಿಂದ ನದಿಯ ಒಂದು ಕಿಲೋಮೀಟರು ಸುತ್ತಲ ಭೂಮಿಯಲ್ಲಿ ಹಣ್ಣುಗಳನ್ನು ಬೆಳೆಯುವ ಮರಗಳನ್ನು ಮಾತ್ರ ನೆಡುವಂತೆ ಅಂದರೆ ನದಿ ಸುತ್ತಲೂ ಬರೀ ನೆಡುತೋಪುಗಳಿರುವಂತೆ ಕೇಂದ್ರ ಸರ್ಕಾರ ಕಾಯ್ದೆ ತರುವಂತೆ ಒತ್ತಾಯಿಸುವುದು ಜಾಥಾದ ಉದ್ದೇಶ.ಹಣ್ಣು ನೀಡುವ ಸಸಿಗಳನ್ನು ನೆಟ್ಟು ನೆಡು ತೋಪು ಬೆಳೆಸುವುದರಿಂದ ರೈತರ ಆದಾಯ ಕೂಡ 2-3 ಪಟ್ಟು  ಹೆಚ್ಚಾಗಲಿದ್ದು ರೈತರು ನಷ್ಟದಿಂದ ತೊಳಲಾಡಬೇಕಿಲ್ಲ. ನೆರಳಿನಲ್ಲಿಯೂ ಬೆಳೆಯುವ ಕೆಲವು ವಿಶೇಷ ಬೆಳೆಗಳಿದ್ದು ಅವುಗಳನ್ನು ನೆಡು ತೋಪಿನ ಒಳಗೂ ಬೆಳೆಸುವ ಮೂಲಕ ರೈತರು ಮತ್ತಷ್ಟು ಆದಾಯವನ್ನು ಪಡೆಯಬಹುದು. 

ನಮ್ಮ ರೈತರು ಬೆಳೆದ ಹಣ್ಣುಗಳಿಗೆ ಭಾರತದಲ್ಲಷ್ಟೇ ಅಲ್ಲದೆ ಅರಬ್ ದೇಶಗಳಲ್ಲೂ ಉತ್ತಮ ಬೆಲೆಯಿದೆ. ಹಣ್ಣುಗಳಲ್ಲದೆ ಮಸಾಲೆ ಪದಾರ್ಥಗಳನ್ನು ಬೆಳೆದರೆ ಅವುಗಳಿಗೆ ಅರಬ್ ದೇಶಗಳು, ಅಮೇರಿಕಾ ಹಾಗು ಯೂರೋಪ್ ದೇಶಗಳಲ್ಲಿ ಉತ್ತಮ ಬೆಲೆಯಿದ್ದು ದೇಶದ ರಫ್ತು ಉತ್ತಮವಾಗಲಿದ್ದು ದೇಶದ ಆದಾಯವೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ದೇಶದೊಳಗೆ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗಲು ಅವಕಾಶವಾದರೆ ಜನರು ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಅನುವಾಗಿ ಜನಗಳ ಸರಾಸರಿ ಅರೋಗ್ಯ ಅಂಶ ಉತ್ತಮವಾಗುತ್ತದೆ.ನಮ್ಮ ಸುತ್ತಲಿನ ಪ್ರಕೃತಿಯನ್ನು ಮತ್ತಷ್ಟು ಉತ್ತಮವಾಗಿಸುತ್ತಾ ಆರ್ಥಿಕತೆಗೂ ಕುಂದು ಉಂಟಾಗದಂತೆ ರಚನಾತ್ಮಕವಾಗಿ ಸಿದ್ಧಪಡಿಸಿರುವ ಈ ಯೋಜನೆ ನವ ಭಾರತದ ಅವಶ್ಯಕತೆಯಾಗಿದೆ. ದೇಶದ ಆರ್ಥಿಕತೆ, ಜನ ಸಂಖ್ಯೆ ಬೆಳೆದಂತೆಲ್ಲ ದೇಶದ ಹಳೆಬೇರುಗಳು ಕಿತ್ತು ಬರುತ್ತಿದ್ದರೆ ಆ ದೇಶ ಅಭಿವೃದ್ಧಿ ಪಥದಲ್ಲಿದೆ ಎಂದು ಯಾವ ಅಂಶಗಳಿಂದಲೂ ಹೇಳಲು ಸಾಧ್ಯವಿಲ್ಲ. ಆದ ಕಾರಣ ಸಾವಿರಾರು ವರ್ಷಗಳಿಂದ ಹರಿದು ನಮ್ಮಹಿರಿಯರಿಗೆಲ್ಲ ಜೀವನಾಡಿಯಾಗಿದ್ದ ನಮ್ಮ ನದಿಗಳನ್ನು ನಾವು ಒಂದೆರಡು ದಶಕಗಳಲ್ಲೇ ಇನ್ನಿಲ್ಲವಾಗಿಸುವುದು ನಾವು ಈ ದೇಶಕ್ಕೆ ಮಾಡುವ ಅತ್ತ್ಯುನ್ನತ ಅಪಕಾರ. ದೇಶದ ಉಳಿವಿಗಾಗಿ ಆರಂಭವಾಗಿರುವ ಈ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸುವುದು ಶ್ರದ್ಧಾ ಭಕ್ತಿಯಿಂದ ತಾಯಿ ಭಾರತಿಯನ್ನು ಆರಾಧಿಸುವುದಕ್ಕೆ ಸಮಾನ ಎನ್ನಲಡ್ಡಿಯಿಲ್ಲ.

ಅಭಿಯಾನವನ್ನು ನೀವೂ ಬೆಂಬಲಿಸಲು 80009 80009 ನಂಬರ್ ಗೆ ಮಿಸ್ ಕಾಲ್ ಕೊಡಿ. ಈ ಮೂಲಕ ಹೊಸ ನೆಡುತೋಪು ಯೋಜನೆಯನ್ನು ಕೇಂದ್ರಕ್ಕೆ ಆಗ್ರಹಿಸಲು ನೀವೂ ಕೈ ಜೋಡಿಸಿ.


ಮಂಗಳವಾರ, ಆಗಸ್ಟ್ 22, 2017

ಎಡವಿದವರು - ಕೆಡವಿದವರು

ಭುವಿಯೂರಲ್ಲಿ ಎಡವದವರಿಲ್ಲ
ದಾಳಿ ದಾರ್ಷ್ಟ್ರ್ಯಗಳೊಳಗೆ ಕೆಡವದವರಿಲ್ಲ
ಎಡವಿದವರೇಳಲು ಎದ್ದವರೆಡವಲು
ಬಾಳೊಂದು ಬೀಳ್ಗಲ್ಲು ಬಿದ್ದೇಳಿ ಮಾಮೂಲು
ಬಿದ್ದವರೊಡನಾಡಿ ಪಾರುಗಾರ ಪರಮಾತ್ಮ

ಕಟ್ಟಿದುದ ಕೆಡವಲು ಕೆಡವಿದುದ ಕಟ್ಟಿ
ನಿಲುಹಲು ಇರುವ ಗೊಡವೆಯೇ ಬೇಡದೆ
ಯಾವನೋ ಕಟ್ಟಿಗಾಣಿಸಿದ ಪಂಜಿನರಮನೆಯೊಳಾಡುವನು
ಒಲೆ ಮುಂದಲ ಶೂರ ಅರಸೊತ್ತಿಗೆ ಭಿತ್ತಿಗಳ
ಮುಂದಲ ಮಹಾರಾಜಾ

ಆರಾರು ಕಟ್ಟಿ ಆರಾರು ಕೆಡವುದೀ ಬಾಳೊಂದು
ಕಟ್ಟಿ ಕಡಿದುರುಳಿಸುವ ಬೀಳ್ಗಲ್ಲು ಕಡೆಗಲ್ಲು
ಅರಿಮೆಯಿಕ್ಕಳ ಗುರಿಯಿಕ್ಕಿ ತಾ ತಗೆದಿದುದೇನು
ತಡಕದರೊಳಗೆ ಬಾಳ್ಗೇನು ಹಿರಿಮೆ
ಅರಿತರೆ ನೀ ಜ್ಞಾನಿ ತಪ್ಪಿತೋ ಜ್ಞಾನ ದಾರಿಗ ನೀ 

ಆರು ಎಂತೆಣಿಸಿದರಂತೇ ಈ ಬಾಳು
ಬಾಳ್ಕಟ್ಟಲು ವಾಡಗೆಯ ಭೋಗವೀ ದೇಹ
ಬಾಳ್ಕೆಡವಲು ವೀರನೆಂಬ ಅಂಕಿತವೇಕೆ
ಅರಿಮೆಯ ಗುರು ಹೃದಯದೊಳಿದ್ದು
ಕೆಡಲ್ಗೊಡುವುದೇ

ಆ ಅರಿಮೆಯೇ ಗುರು...ಆ ಗುರುವೇ
ಭುವಿಯೂರ ದೈವ
ಮೆಚ್ಚಿದನು ಪೆಚ್ಚದೆ ಕಡು ಸತ್ಯ
ಕೊನೆಯೊಳಗೆ ಪೆಚ್ಚುಗಾರ ನೀನಲ್ಲ
ಬೆಳಗಿಸೊಮ್ಮೆ ಅರಿಮೆಯ ಅಂತರಾತ್ಮವ
ಬಟಾ ಬಯಲು ನಿನ್ನೀ ಹೃದಯದಲಿ  

ಮಂಗಳವಾರ, ಆಗಸ್ಟ್ 15, 2017

ಸ್ವತಂತ್ರ ಭಾರತಕ್ಕೆ ತುಂಬಿತು ಎಪ್ಪತ್ತು




ಅದು ಇಪ್ಪತ್ತನೇ ಶತಮಾನದ ಆದಿಭಾಗ. ದಕ್ಷಿಣ ಏಷ್ಯಾ ಬ್ರಿಟಿಷರ ಆಡಳಿತಕ್ಕೆ ಸಿಕ್ಕು ಅಕ್ಷರಶಃ ನಲುಗಿತ್ತು. ಈ ನೆಲದ್ದಲ್ಲದ ಸಂಸ್ಕೃತಿ, ಭಾಷೆ, ಆಚಾರ, ಆಡಳಿತಗಳನ್ನು ಯುರೋಪ್ ಖಂಡದಿಂದ ಈ ನೆಲಕ್ಕೆ ಸರಬರಾಜು ಮಾಡಿದ್ದೂ ಅಲ್ಲದೆ ಇಲ್ಲಿನ ಜನಗಳ ತಲೆಗೆ ಬಲವಂತವಾಗಿ ತುಂಬಿದ್ದರು ಬ್ರಿಟೀಷರು. ಇಲ್ಲಿನ ಮೂಲ ತತ್ವಗಳನ್ನು, ಮೂಲಭೂತ ಅಂಶಗಳನ್ನೆಲ್ಲ ದಿಕ್ಕರಿಸಿ ಪರಕೀಯರ ಆಡಳಿತೆಯೊಳಗೆ ಬಲವಂತವಾಗಿ ದೂಡಿದರೆ ಯಾರಿಗೆ ತಾನೇ ಸ್ವಾಭಿಮಾನ ಕುಂದುವುದಿಲ್ಲ. ಭಾರತದೊಳಗೂ ಅದೇ ಆಯಿತು, ಪರಕೀಯರ ಆಡಳಿತದ ವಿರುದ್ಧ ದನಿಗಳು ಒಂದೊಂದೇ ಬಲಗೊಳ್ಳತೊಡಗಿದಾಗ ಅವುಗಳನ್ನು ದಮನ ಮಾಡಲು ಅಷ್ಟೇ ಲಘುಬಗೆಯಿಂದ ಆಡಳಿತ ಪಾಳಯದಲ್ಲಿ ತಯಾರಿಗಳು ಸದ್ದಿಲ್ಲದೇ ನಡೆಯುತ್ತಲೇ ಇದ್ದವು. ವಿರುದ್ಧ ದನಿಯೆತ್ತಿದವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳುವುದು ಇಲ್ಲವೇ ಗುಂಡಿಟ್ಟು ಕೊಲ್ಲುವುದು ಅವ್ಯಾಹತವಾಗಿ ಮುಂದುವರೆದಿರುತ್ತಿದ್ದಾಗ ದೇಶದ ಎಷ್ಟೋ ಜನ ತಬ್ಬಲಿಗಳಾಗಿಹೋದರು.ಅಸಂಖ್ಯಾತ ತಾಯಿಯರು ತಮ್ಮ ಮಕ್ಕಳನ್ನು ಕಳೆದುಕೊಂಡರು, ಎಷ್ಟೋ ವೃದ್ಧರು ಆಸರೆಯಿಲ್ಲದೆ ಬೀದಿ ಹೆಣಗಳಾದರು, ಎಷ್ಟೋ ಮಕ್ಕಳು ದಿಕ್ಕಿಲ್ಲದೆ ಬೀದಿಯಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ ಭಿಕ್ಷೆ ಬೇಡುತ್ತಾ ತಮ್ಮ ಭವಿಷ್ಯವನ್ನೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಆಹುತಿಯಾಗಿಸಿಬಿಟ್ಟರು. ಇವೆಲ್ಲಾ ಈ ದೇಶದ ಜನಗಳು ಸವೆಸಿದ ಅಹಿತಕರ ದಿನಗಳು, ಅದಕ್ಕೆ ಕಾರಣ "ನಾವು ಚೆನ್ನಾಗಿದ್ದರೆ ಸಾಕು"ಎಂಬ ಸ್ವಾರ್ಥವಲ್ಲ ಬದಲಾಗಿ ನಮ್ಮ ಮುಂದಿನ ಪೀಳಿಗೆಗೆ ಸ್ವತಂತ್ರ್ಯ ಲೋಕದಲ್ಲಿ ವಿಹರಿಸುವ ಭಾಗ್ಯವನ್ನು ಕರುಣಿಸುವ ಸಲುವಾಗಿಯೇ ಎಂಬುದನ್ನು ಈ ಕಾಲದ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕಾಗಿದೆ.

ಭಾರತ ಸೀಮೆಯೊಳಗೆ ಆಡಳಿತದಲ್ಲಿ ಸ್ವತಂತ್ರ ಕೋರಿ ಎದ್ದ ದಂಗೆ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿದ ಪರಿ ಎಂತಹುದೆಂದರೆ ಎರಡನೇ ಮಹಾಯುದ್ಧದಲ್ಲಿ ಕೈ ಸುಟ್ಟುಕೊಂಡ ಸಂಧರ್ಭದಲ್ಲಿಯೇ ಭಾರತವನ್ನು ಬಿಟ್ಟು ಹೊರಡಬೇಕಾದ ಸಂದಿಗ್ದತೆಗೆ ಸಿಲುಕಿಕೊಂಡ ಸೂರ್ಯ ಮುಳುಗದ ದೇಶದ ದೊರೆಗಳು ಅದನ್ನೊಂದು ನುಂಗಲಾರದ ತುತ್ತಾಗಿಯೇ ಪರಿಗಣಿಸಿದರು. ಇದಾದ ನಂತರದಲ್ಲಿ ಆ ದೇಶ ಸೋಲುಗಳ ಸರಮಾಲೆಯನ್ನು ತನ್ನ ಕೊರಳಿಗೆ ಸುತ್ತಿಕೊಳ್ಳುತ್ತಲೇ ಹೋಯಿತು ಅಥವಾ ಅಲ್ಲಿ ಹೇಳಿಕೊಳ್ಳುವಂತಹ ಯಾವ ಬೆಳವಣಿಗೆಗಳು ಕಾಣಲಿಲ್ಲ.

ನಮ್ಮ ನಿಜವಾದ ಆಧುನಿಕ ತಾಪತ್ರಯಗಳು ಶುರುವಾಗಿದ್ದೇ ಅಲ್ಲಿಂದ, ಸ್ವತಂತ್ರ್ಯ ಭಾರತದಲ್ಲೇ ನಾವು ನಿಂತು ಕಟ್ಟಿದ ಸರ್ಕಾರವೇ ಇರುತ್ತದೆ ಹಾಗಾಗಿ ಬದುಕು ಮತ್ತಷ್ಟು ಸುಲಾಭವಾಗಲಿಕ್ಕೆ ಸಾಕು ಎನ್ನುವ ಆಗಿನ ಹಿರಿಯರ ಯೋಚನೆ/ಯೋಜನೆಗಳಿಗೆ ಮೂಲಾಧಾರವಾಗಿದ್ದ ಗತ ವೈಭವದ ಭಾರತ ಇನ್ನಿಲ್ಲವಾಗಿತ್ತು. ಕಣ್ಮುಂದೆ ತೊಂದರೆಗಳ ಪರ್ವತವೊಂದು ಧುತ್ತನೆ ಎದುರಾಗಿ 'ಏರು ನನ್ನನ್ನು' ಎಂದು ಸವಾಲೆಸೆದು ನಿಂತಂತೆಯೇ ಇತ್ತು. ಪುರಾತನ ಭಾರತ ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಕಾಯ್ದುಕೊಂಡಿದ್ದ ವ್ಯಾಪಾರ, ಶಿಕ್ಷಣ, ವಿಜ್ಞಾನದ ಗಾಢವಾದ ಸಂಬಂಧಗಳನ್ನು ಕಡಿದುಕೊಂಡು ನಡುಮಧ್ಯದಲ್ಲಿ ಕಡುವೈರಿ ಪಾಕಿಸ್ತಾನವೆಂಬ ದೇಶವೊಂದನ್ನು ಕಟ್ಟಿದ್ದು ನಮ್ಮ ದೇಶದ ಸಾಂಪ್ರದಾಯಿಕ ವ್ಯಾಪಾರ ಶೈಲಿಗೆ ಧಕ್ಕೆಯಾಗಿ ಈ ದೇಶದ ಪೂರ್ವಕಾಲದ ಆರ್ಥಿಕ ಶೈಲಿಗೆ ಆಘಾತವಾಗಿತ್ತು. ಆಧುನಿಕ ವ್ಯಾಪಾರ ಮಾರ್ಗಗಳನ್ನು ಹುಡುಕಲೇ ಬೇಕಾದ ಅನಿವಾರ್ಯತೆಗೆ ಒಗ್ಗಿಕೊಂಡ ಭಾರತ ಅದನ್ನು ಸುಲಲಿತವಾಗಿ  ನಿಭಾಯಿಸುವಲ್ಲೂ ಯಶಸ್ವಿಯಾಯಿತು. ಭೂಮಾರ್ಗವಲ್ಲದೆ ಜಲಮಾರ್ಗವನ್ನು ಅವಲಂಬಿಸಿ ಆ ಮೂಲಕ ಯಥೇಚ್ಛ ವ್ಯಾಪಾರಗಳಿಗೆ ಒಗ್ಗುವುದು ಅದರ ಜೊತೆ ಜೊತೆಗೆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಆಧುನಿಕವಾಗಿ ಶೋಧಿಸಿದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂಲಕವೂ ಆಗಷ್ಟೇ ಶುರುವಾಗಿದ್ದ ಕೈಗಾರಿಕಾ ಕ್ರಾಂತಿಯಲ್ಲೂ ತನ್ನ ಪಾಲು ದಾಖಲಿಸುವ ಉತ್ಕಟ ಬಯಕೆಯಿಂದ ಭಾರತ ಸರ್ವ ರಂಗಗಳಲ್ಲೂ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಹೋಯಿತು.

Image result for partition of india
ಕೋಟಿ ಕೋಟಿ ಭಾರತೀಯರ ಕನಸು ನನಸಾದ ದಿನದ ಪತ್ರಿಕೆಯಿದು, ವಿಷಾದವೆಂದರೆ ಈ ಸುದ್ದಿ ಇಲ್ಲಿ ಅಚ್ಚಾಗಲು ಲಕ್ಷಾಂತರ ಭಾರತೀಯರ ನೆತ್ತರು ಹರಿದಿದೆ

Image result for britishers before independence
ಬ್ರಿಟಿಷ್ ರಾಣಿಯನ್ನು ಎಳೆಯಬೇಕಾಗಿದ್ದು ಕುದುರೆಗಳು, ಆದರೂ ಇದನ್ನೊಮ್ಮೆ ನೋಡಿ

ಭರತ ಖಂಡದಿಂದ ತುಂಡರಿಸಿಕೊಂಡು ಬೇರೆ ದೇಶಗಳೆಂಬ ಪಟ್ಟ ಕಟ್ಟಿಕೊಂಡ ಹಲವು ದೇಶಗಳು ಭಯೋತ್ಪಾದನೆ, ಬಡತನ ಮತ್ತಿತರ ಬಿರುದುಗಳನ್ನು ತನ್ನೊಳಗೆ ಸೇರಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಸುಕಾಗುತ್ತಿವೆ. ಆದರೆ ಭಾರತ ಮಾತ್ರ ತನ್ನನ್ನು ತೊರೆದು ಹೋದ ಬ್ರಿಟಿಷ್ ಸಾಮ್ರಾಜ್ಯವೇ ಬಾಯಿಯ ಮೇಲೆ ಬೆರಳಿಟ್ಟು ನೋಡುವಂತೆ ಬೆಳೆದು ನಿಲ್ಲುತ್ತಿದೆ. ೧೯೪೭ರ ಆಗಸ್ಟ್ ೧೫ರೆಂದು ಭಾರತದಿಂದ ಹೊರಡುವ ಮೊದಲು ದೆಹಲಿಯ ಬ್ರಿಟಿಷ್ ಅಧಿಕಾರಿಯೊಬ್ಬ ಹೇಳಿದನಂತೆ "ಇದಾಗಿ ಮುಂದೆ ಅಸ್ತಿತ್ವಕ್ಕೆ ಬರಲಿರುವ ಪಾಕಿಸ್ತಾನ ಹಾಗು ಹಿಂದುಸ್ತಾನ ಗಳೆರಡರಲ್ಲಿಯೂ ಪಾಕಿಸ್ತಾನವೇ ಬಹುಬೇಗ ಅಭಿವೃದ್ಧಿ ದಾಖಲಿಸಲಿದೆ, ಕಾರಣ ಪಾಕಿಸ್ತಾನದಲ್ಲಿರುವುದು ಒಂದೇ ಧರ್ಮ ಅದನ್ನು ಬಿಟ್ಟು ಅವರಿಗೆ ಬೇರೆ ಜಾತಿ ಪಂಥಗಳಿಲ್ಲ. ಹೀಗಿರುವ ದೇಶ ಐಕ್ಯತೆ ಸಾಧಿಸುವುದು ಬಹಳ ಸುಲಭ ಆದ ಕಾರಣ ಆ ದೇಶ ಬಹು ಬೇಗ ಪ್ರಗತಿ ಸಾಧಿಸಲಿದೆ". ಒಂದು ದೃಷ್ಟಿ ಕೋನದಲ್ಲಿ ಬ್ರಿಟಿಷ್ ಅಧಿಕಾರಿ ಹೇಳಿದ್ದು ಸರಿಯಿರಬಹುದು. ಆದರೂ ಪ್ರಪಂಚದಲ್ಲೆಲ್ಲೂ ಇರದಷ್ಟು ವಿವಿಧತೆಯನ್ನು ತನ್ನೊಡಲೊಳಗೆ ತುಂಬಿಕೊಂಡು ಜಗತ್ತಿಗೆ ಗುರುವಾಗಿ ಬೆಳೆದು ನಿಂತಿರುವ ಭಾರತ ಇಂದು ನಿಜಕ್ಕೂ ಆ ಬ್ರಿಟಿಷ್ ಅಧಿಕಾರಿಯ ಮಾತು ಸುಳ್ಳು ಮಾಡಿಬಿಟ್ಟಿದೆ. ಭಾರತ ಧೃಡವಾಗಿ ಬೆಳೆದು ನಿಂತ ಶೈಲಿ ನೋಡಿ ಬ್ರಿಟಿಷರೇ ಇಂದು ನಾಚಿಕೆ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸ್ವಾತಂತ್ರ್ಯ ಭಾರತದ ಮುಂದಿನ ಹಾದಿಯೂ ಹೂವಿನ ಹಾಸಿಗೆಯಾಗಿರಲಿಲ್ಲ. ಕಬ್ಬಿನ ರಸವನ್ನೆಲ್ಲ ತೆಗೆದು ಬರಿಯ ಸಿಪ್ಪೆಯನ್ನು ಬಿಸಾಡಿದಂತೆ  ಬ್ರಿಟಿಷರು ಇಲ್ಲಿನ ಸಂಪತ್ತು, ಸಿರಿವಂತಿಕೆಗಳನ್ನೆಲ್ಲ ದೋಚಿ ಪಶ್ಚಿಮದ ಖಜಾನೆಯೊಳಗೆ ಪೇರಿಸಿಕೊಂಡು ಬಿಟ್ಟರು.

ಶನಿವಾರ, ಆಗಸ್ಟ್ 5, 2017

ಜಗ - ಹುಡುಕು ತಾಣ

ಹುಡುಗಾಟದೊಳಗೆ ಹುಡುಕುಗಾರರೆಲ್ಲ
ಹುಡುಕಿ ತಡಕಿ
ಹುಡುಕುತ್ತಿರುವುದೇನು
ಎನುವುದನೆ ಮರೆತು
ನಡುವೆ ಕಂಡ ಅಡ್ಡ ದಾರಿಯೊಳಗೆ ಸುಳಿದು
ಅಲ್ಲೆಲ್ಲೋ ಹರಿವ ಝರಿ
ಇಲ್ಲೆಲ್ಲೋ ಧುಮುಕುವ ಜಲಾದಿ
ಅಲ್ಲೆಲ್ಲೋ ಸುಯ್ಯುವ ತಂಗಾಳಿ
ನಡು ನಡುವೆ ಬಾಯ್ಬಿಚ್ಚಿಸುವ
ದಿಬ್ಬ ಪರ್ವತ ಸಾಲು
ಇವೆಲ್ಲದರೊಳಗೆ ಸುಳಿವ ಮನಸ್ಸು
ಎಲ್ಲವನು ಅಳೆದು ತೂಗಿ
ಅದಕೆ ಗುರುವೊಬ್ಬನನು
ಬಯಸಿ, ಮನದೊಳಗೆ ತಿದ್ದಿ
ಅವನ ದೇವರೆಂದು ಕರೆದು
ಭಕ್ತಿ ಭಾವಗಳನುಕ್ಕಿಸಿ
ಅಲ್ಲೊಮ್ಮೆ ಅಭಿಷೇಕ ಗೈದು 
ಇನ್ನೊಮ್ಮೆ ಮಂತ್ರಪುಷ್ಪಗಳನರ್ಪಿಸಿ
ಮನದೊಳಗೆ ಏನೇನೋ ಎಣಿಸಿ
ಹೊರಗೆ ಇನ್ನೊಂದನ್ನು ತೋರಿಸಿ 
ಒಳಗೇನು ?
ಹೊರಗೇನು? 
ಎಲ್ಲವ ಬೆರೆಸಿ 
ಅವನೇನೆಂದು ದೇವರಿಗೂ ಕಸಿವಿಸಿಯಾಗಿ 
ಏನು ಕೊಡಬೇಕು ಏನು ಬಿಡಬೇಕು 
ಎನ್ನುವ ಚಿಂತೆಯ  ಕೂಪಕೆ ಬಿದ್ದ ಕೊಡುಗೈ ದಾನಿಯೂ 
ಚಿಂತಿಸಿ, ಅನುಮಾನಿಸಿ 
ತಿರುಗಿ ಅಲೆಯುವುದೇ ಅವನಿಗೆ ತರವೆಂದು
ಬಗೆದು ಅಲೆಸುತ್ತಿರುವನೇ?

ನಂಬು ನಿನ್ನ ಶಕ್ತಿಯನ್ನು ನೀನು
ನಂಬು  ನಿನ್ನ ಯುಕ್ತಿಯನು ನೀನು 
ನಿನಗೆ ನೀನೆ ನೆರವಾಗದವನು
ಪರರ ನೆರವಿಗೆ ಕಾಯಲರ್ಹನೇ?
ದೇವರ ನೆರವಿಗೆ ಕಾಯುವ ನಿನಗೂ ಅವನಿಗೂ 
ಸಂಬಂಧವೇನು? ಅದನುಳಿಸುವ ಯುಕ್ತಿಯುಂಟೆ
ನಿನಗೆ ?
ಯುಕ್ತಿಯೇನು? ಶಕ್ತಿಯೇನು? ಈ ಬಾಳಿನ ತರವೇನು 
ಗುರಿಯೇನು ? ಎಲ್ಲಕ್ಕೂ ಮೂಲ ಮನಸ್ಸು
ಅದನೆ ಗುರುವಾಗಿಸು 
ಅದಕೆ ಗುರಿ ತಿಳಿಸು 
ಅದನೆ ಮೂಲವಾಗಿಸು 
ಅದಕೆ ಗೆಲುವರ್ಪಿಸು
ಜೀವಮಾನದ ಒಡನಾಡಿ ನಿನ್ನೀ ಮನಸು.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...