ಶುಕ್ರವಾರ, ಫೆಬ್ರವರಿ 23, 2018

ವಿಧಿಗೆ ಬಿದಿಗೆಯಿದು

ಜನರಿಲ್ಲ ನಿನಗೆ, ಬಾದ್ಯನಾಗು
ಅನುರಾಗಕೆ ಕೊರತೆಯಿಲ್ಲಿ
ಅನುರಾಗಿಯಾಗು,
ಸಾಧನಗೆ ಹಿನ್ನಡೆಯಿಲ್ಲಿ
ಸಾಧಿಸು,
ಕುಹಕ ಮನಸುಗಳ ಹಜಾರವಿದು
ಸುಮನಸ್ಕನಾಗು

ಕುಟಿಲ ಕರ್ಮಿಗಳ ಕಾರಸ್ಥಾನವಿದು
ಕುಗ್ಗದಿರು
ಉಪಮೆ ಮಹೋಪಮೆಗಳ ಮಜಲಿದು
ಉಪಾಸಿಸು
ಸುಶ್ರಾವ್ಯ ಗೀತೆಯಿದು
ಬಜಾಯಿಸು
ಗರ್ವ ಪರ್ವಗಳ ಸಡಗರವಿದು
ಪ್ರವರ್ತಿಸು

ಬಡಾಯಿಗಳ ಬಜಾರಿದು
ಸದ್ದು ಗದ್ದಲವಿರದೆ ಸುಮ್ಮನಿರು
ಶ್ರೇಷ್ಟಿಗಳ ಸಮೂಹವಿದು
ಶ್ರೇಷ್ಟನಾಗು
ಬದುಕೊಂದು ಪಯಣ
ಪಯಣಿಸು
ವಿಧಿಗೆ ತದಿಗೆಯಿದು
ಕಥೆ ಮುಗಿಸು.


ಭಾನುವಾರ, ಫೆಬ್ರವರಿ 11, 2018

ನಮ್ಮ ನಿಮ್ಮ ಜೀವನವೂ ಗುಲಾಬಿ ಟಾಕೀಸು ತಾನೇ?

ಸದಾ ಕಡಲ್ಮೊರೆತ, ಅಲ್ಲೆಲ್ಲ ಮೀನ ವಾಸನೆ, ಕಡಲೆ ಅವರಿಗೆಲ್ಲ ಹಿಟ್ಟು ಬಟ್ಟೆಯ ಮೂಲ, ಕಡಲು ಶಾಂತಿ ಧೋತ್ರ ಹೊದ್ದುಕೊಂಡು ಶಾಂತವಾಗಿದ್ದರೆ ಅವರ ಮನೆಯ ಒಲೆ ಬೆಂಕಿಯಾಡಿಸುತ್ತದೆ, ತಟ್ಟೆ ಲೋಟಗಳು ದಿನವೂ ನೀರ ಕಾಣುತ್ತವೆ. ಕಡಲೇನಾದರೂ ಅಬ್ಬರಿಸಿ ಬೊಬ್ಬಿರಿದುಬಿಟ್ಟರೆ ಅವರ ಬದುಕು ಮೂರಾ ಬಟ್ಟೆ, ಅಯ್ಯಯ್ಯಪ್ಪ ಅದನ್ನು ನೆನೆಸಿಕೊಳ್ಳುವುದು ಅತಿ ಭಾರ. ಕಡಲ ಮೀನುಗಳೇ ಅನ್ನವಾದ್ದು ನೆಪವಾಗಿ ಕಡಲೊಂದಿಗಿನ ಸಂಬಂಧದಷ್ಟೇ ಗಟ್ಟಿಯಾದ್ದೂ ಪೇಟೆಯ ಬಂಧ, ಅದು ಕಡಲ ಮೀನುಗಳ ಬಿಕರಿಗೆ ಯೋಗ್ಯ ಸ್ಥಾನ ತಾನೇ ಅದಕ್ಕೆ ಮಾತ್ರ. ಪೇಟೆಯೆಂದ ಮೇಲೆ ಪೇಟೆಯ ರಾಜ ಬೀದಿಗಳು ಮಾತ್ರವಲ್ಲ, ಪೇಟೆಯೊಳಗಿನ ಚಿತ್ರ ಮಂದಿರ ಅಲ್ಲಿನ ಡಾನ್ಸು, ಫೈಟು ಚಿತ್ರ ಮಂದಿರದ ತೆರೆ ದಾಟಿ ಬಂದು ಕಡಲ ತಡಿಯವರ ಮನಸ್ಸಿನ ಮೇಲೆ ಅಚ್ಚಾಗಿ ಹಾಗೆ ಕೂತು ತಾವು ಕಡಲ ತಡಿ ಸೇರಿಬಿಡುತ್ತಿದ್ದವು. 


 
ಇಂತಿರುವ ಕನ್ನಡ ನಾಡ ಕಡಲ್ಬದಿಯ ಕುಂದಗನ್ನಡ ಸೀಮೆಯೊಳಗಿದ್ದವಳು ನಮ್ಮ ಗುಲ್ ನಭಿ ತಾನು ಮುಸಲ್ಮಾನಳಾದರೂ ಸೂಲಗಿತ್ತಿ ವೃತ್ತಿಯಿಂದ ಜಾತಿ ಧರ್ಮವೆಂಬ ಅಭೇದ್ಯ ಕೋಟೆಯೊಂದಕ್ಕೆ ಸೆಡ್ಡು ಹೊಡೆದು ನಿಂತುಬಿಟ್ಟಿದ್ದಳು, ಅವಳೇ ಸೆಡ್ಡು ಹೊಡೆದಿದ್ದಳು ಎನ್ನುವುದಕ್ಕಿಂತ ಮಾನವೀಯತೆಯ ಅನಿವಾರ್ಯ ಸಮಯಗಳನ್ನು ಆಕೆಯನ್ನು ಹಂಗಾಗಿಸಿದ್ದವು ಎನ್ನಲೇನು ಅಡ್ಡಿಯಿಲ್ಲವೇ ಇಲ್ಲ. ಅವಳೊಡನಾಡುವ ಹೆಂಗಳೆಯರ ಗುಂಪಿನೊಳಗೆ ಗುಲ್ ನಭೀ ಗುಲಾಬಿಯಾಗಿ ಮಾರ್ಪಾಡುಗೊಂಡಿದ್ದಳು, ಎಷ್ಟರ ಮಟ್ಟಿಗೆಂದರೆ ತನ್ನ ನಿಜ ಹೆಸರನ್ನು ತಾನೇ ಮರೆವಷ್ಟು. ದೇಶದ ಮೇಲೆ ಧರ್ಮಾಧಾರಿತ ನೆರೆ ದೇಶವೊಂದು ಕಾಲ್ಕೆರೆದು ಯುದ್ಧಕ್ಕೆ ನಿಂತು ರಾಷ್ಟ್ರದೊಳಗೆ ಬಿಸಿ ವಾತಾವರಣ ಸೃಷ್ಟಿಸಿದ್ದು ನೇರವಾಗಿ ಗುಲಾಬಿಗೂ ತಟ್ಟಿ ಆ ಜಾತಿಯವರೆಲ್ಲ ಗುಳೆ ಹೊರಟು ಒಂದೂರಲ್ಲಿ ಒಟ್ಟಿಗೆ ನಿಲ್ಲಬೇಕೆಂಬ ಒತ್ತಾಯ ಬಲವಾದರೂ ಗುಲಾಬಿ ಗಟ್ಟಿ ಮನಸ್ಸು  ಮಾಡುತ್ತಾಳೆ  ತನ್ನ ತಪ್ಪಿಲ್ಲದ ಮೇಲೆ ಹುಟ್ಟಿದೂರ ಬಿಡುವುದು ಹುಂಬತನವಲ್ಲದೆ ಮತ್ತೇನು ಎಂದುಕೊಳ್ಳುತ್ತಾಳೆ.

ಎದೆಗೆರಡಕ್ಷರವಿಳಿಯದಿದ್ದರೂ ಕಡಲ ತಡಿಯ ಹೆಣ್ಮಗಳ ಧೈರ್ಯ ಮನಸೂರೆಗೊಳ್ಳುತ್ತದೆ. ಮತ್ತೂಬ್ಬ ಮಗದೊಬ್ಬರ ಕೊಳ್ಳೆಹೊಡೆದು ಬದುಕಿಬಿಡೋಣ ವೆನ್ನುವ ಸಮಾಜದೊಳಗೆ ಗುಲಾಬಿ  ತನ್ನ ಬಲದಿಂದಲೇ ತಾನು ಬದುಕುವ ಕೆಚ್ಚನ್ನು ತನ್ನ ತಲೆಯೊಳಗೆ ತುಂಬಿಕೊಂಡೆ ಹುಟ್ಟಿದ್ದಳೇನೋ?. ಆದ್ದರಿಂದಲೇ ಅವಳ ಜಾತಿಯ ಹಟ್ಟಿ ದಾರದಂಗಳೆಲ್ಲಾ ಕದ ಕವುಚಿಕೊಂಡು ಊರು ಬಿಟ್ಟರೂ ಗುಲಾಬಿ  ಮನೆಯ ಟಿ ವಿ ಸೂಜಿಗಲ್ಲಂತೆ ತನ್ನತ್ತ ಜನರನ್ನು ಸೆಳೆಯುತ್ತದೆ. ಗುಲಾಬಿ ಮನೆಯೇ ಚಿತ್ರಮಂದಿರವಾಗಿ  ಮಗ್ಗುಲು ಬಗಲಿನ ಜನಗಳಿಂದ ಟಾಕೀಸು ಎಂದು ಕರೆಸಿಕೊಳ್ಳುತ್ತದೆ. ಸಾಲದ್ದಕ್ಕೆ ಎಲ್ಲೋ ಸಿಕ್ಕ ಸಿನೆಮಾ ಪೋಸ್ಟರ್ ಒಂದನ್ನು ತಂದು ತನ್ನ ಸಿನೆಮಾ ನೋಡುವ ಹುಚ್ಚಿಗೆ ಒಂದಿಷ್ಟು  ರಸಗೊಬ್ಬರ ಸಿಂಪಡಿಸಿಬಿಟ್ಟಿರುತ್ತಾಳೆ. ಗುಲಾಬಿಯೊಳಗೊಂದು ಹಾರುವ ಹಕ್ಕಿಯಿರುತ್ತದೆ. ಸದ್ದಿಲ್ಲದೇ ಅದಕ್ಕೆ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ  ಮೂಲೆಯಲ್ಲಿ  ಬಿದ್ದಿರುವಂತೆ ನೋಡಿಕೊಳ್ಳುತ್ತಾಳೆ ಗುಲಾಬಿ.ಊರವರ ಗೊಂದಾರಗಳಿಗೆಲ್ಲ ಹೋಗಿ ಸೂಲಗಿತ್ತಿಯಾಗಿ ಅದೆಷ್ಟೋ ಜೀವಗಳನ್ನು ಉಳಿಸಿ, ಇನ್ನೆಷ್ಟೋ ಜೀವಗಳನ್ನು ಸುಸೂತ್ರವಾಗಿಸಿ ಹಿಂತಿರುಗಿ ಬರುತ್ತಿದ್ದ ಗುಲಾಬಿಗೆ ಮಗ್ಗುಲ ಮನೆಯ ಹುಡುಗಿಯ ನಾಪತ್ತೆ ಅರಿಯದ ಲೆಕ್ಕದಂತಾಗುತ್ತದೆ. ಕಳೆದು ಹೋದ ಹುಡುಗಿ ಸಿಕ್ಕಿ ಮರವೊಂದರ ಮರೆಯಲ್ಲಿ ಗುಲಾಬಿಯೊಡನೆ ಮಾತಾಡಿದ್ದು ಊರವರಿಗೆ ವಕ್ರವಾಗಿ ಕಾಣುತ್ತದೆ. ಅನಿಷ್ಟಕೆಲ್ಲ ಶನೇಶ್ವರನೇ ಕಾರಣ ಅನ್ನುವಂತೆ  ಗುಂಪೊಂದು ಗುಲಾಬಿ  ಮನೆಗೆ ಲಗ್ಗೆಯಿಕ್ಕುತ್ತದೆ. ಗುಲಾಬಿಯ ಸಾಮಾನು ಸರಂಜಾಮು ಸಮೇತ ಆಕೆಯನ್ನೇ ಹೊತ್ತುಕೊಂಡು ಹಡಗಿನಲ್ಲಿರಿಸಿ ಮತ್ತೊಂದೂರಿಗೆ ಸಾಗಹಾಕಿಬಿಡುತ್ತದೆ. ಪರವೂರಿಗೆ ಸಾಗುತ್ತಿರುವ ಗುಲಾಬಿ ಮುಂದೊಮ್ಮೆ ಇಲ್ಲಿ  ಸೂಲಗಿತ್ತಿಯರ ಅನಿವಾರ್ಯತೆಯಾದಾಗ ಇದೆ ಊರು ತನ್ನನ್ನೇ ಹುಡುಕಿ ಹಿಂದೆ ಬರುತ್ತದೆಂದು, ಬಿಸಿರಕ್ತದ ಕೆಲವು ಹುಡುಗರಿಗೆ ಆ ಸಮಯದ ಅರಿವೆಯಿಲ್ಲದೆ ಇಂದು ಹೀಗಾಡುತ್ತಿರುವುದು ಎಂದು ವರ್ತಮಾನ, ಭವಿಷ್ಯಗಳನ್ನು ಅರ್ಥ ಮಾಡಿಕೊಂಡ ಋಷಿಯಂತೆ ದೋಣಿಯೊಂದರಲ್ಲಿ ಕುಳಿತು ಹಿಂದಿರುಗಿ ನೋಡದೆ ಹೊರಟು ಹೋಗುತ್ತಾಳೆ. ಅಲ್ಲಿಗೆ ಗುಲಾಬಿ ಕಥೆ ಮುಗಿಯುತ್ತದೆ.

ಮನುಷ್ಯನೊಬ್ಬನ ಬದುಕುವ ಛಲ, ಆ ಛಲಕ್ಕೆ ತಕ್ಕಂತೆ ಅವನ ಸುತ್ತಲಿನ ವಾತಾವರಣ ಅವನ ಮೇಲೆಸೆಯುವ ಸವಾಲುಗಳು ಹಾಗು ಆ ಸವಾಲುಗಳನ್ನು ಆ ಮನುಷ್ಯ ಮೆಟ್ಟಿ ನಿಲ್ಲುವ ರೀತಿ, ವರ್ಚಸ್ಸು ಇವುಗಳನ್ನೆಲ್ಲ ಕಂತೆ ಮಾಡಿ ಚಿತ್ರಿಸಿರುವ ಅಪೂರ್ವ ಕಲಾಕೃತಿ 'ಗುಲಾಬಿ ಟಾಕೀಸು'.ನಾವೇನೋ ಬಯಸಿದಾಗ ಸಿಗದಿರುವುದು, ಬಯಸದಿದ್ದ ಕಾಲದಲ್ಲಿ ಕಾಲಿಗೆ ತೊಡರಿಕೊಳ್ಳುವಂತೆ ಪ್ರಾಪ್ತವಾಗುತ್ತದೆ. ಬದುಕಬೇಕೆನ್ನುವ ಛಲ ಬಿಗಿಯಾದಾಗ ಬದುಕು ಎಲ್ಲರಿಗೂ ಮತ್ತೊಂದು ಹೊಸದೇನನ್ನೋ ತೋರಿಸಿರುತ್ತದೆ. ಬಯಸದಿರುವ ಹಾದಿಗಳಿಗೆ ನಮ್ಮನ್ನು ತಳ್ಳಿ ತಮಾಷೆ ನೋಡುತ್ತದೆ. ಕೆಲವೊಮ್ಮೆ ಬದುಕು ತಳ್ಳುವ ದಾರಿಗಳು ಸುಲಲಿತವಾದರೆ, ಕೆಲವೊಮ್ಮೆ ದುರ್ಭರವಾಗಿಯೂ ಇದ್ದು ವ್ಯಕ್ತಿಯನ್ನು ಸಾಣೆ ಹಿಡಿದು ಅವನ ಬಿಗಿತನ ಅಳೆಯಲು ಮುಂದಾಗಿಬಿಡುತ್ತದೆ. ಆ ದೃಷ್ಟಿಯಲ್ಲಿ ಗುಲಾಬಿ ಟಾಕೀಸು ನಮಗೊಂದು ಪಾಠವೇ ಸರಿ .... ಅಲ್ಲಲ್ಲ ನಮ್ಮ ಬದುಕೂ ಗುಲಾಬಿ ಟಾಕೀಸು ತಾನೇ?.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...