ಬುಧವಾರ, ಅಕ್ಟೋಬರ್ 17, 2018

ಕರ್ತಾರನ ಕಮ್ಮಟವಿದು

ಪ್ರಪಂಚವಿದು ಕರ್ತಾರನ ಕಮ್ಮಟವಾದೊಡೆ ನಿನದೇನು ಬಿಮ್ಮು?. ಕುಟ್ಟಿ ತಟ್ಟಿ ಕಾಯಿಸಿ ಬಡಿದು ಬೆಂಡಾಗಿಸಿ ಅವನೊಪ್ಪುವಂತೆ ಮಾಡುವವರೆಗೂ ನೀನೆ ನಿನಗೆ ಸ್ವರ್ಗ ನೀನೆ ನಿನಗೆ ನರಕ.

ಶನಿವಾರ, ಅಕ್ಟೋಬರ್ 13, 2018

ಸೈಕಲ್ ರಿಪೇರಿಯಿಂದ ಐ.ಎ.ಎಸ್ ಅಧಿಕಾರದವರೆಗೆ


"ನೀವು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತೀರೋ ಅದರಂತೆ ನೀವಾಗುತ್ತೀರಿ, ನಿಮ್ಮನ್ನು ನೀವು ಋಷಿಗಳೆಂದುಕೊಂಡರೆ ನಾಳೆ ನೀವು ನಿಜವಾಗಿಯೂ ಋಷಿಗಳೇ ಆಗುತ್ತೀರಿ" ಎಂದಿದ್ದಾರೆ ಭವ್ಯ ಭಾರತದ ಕನಸುಗಾರ ಸ್ವಾಮೀ ವಿವೇಕಾನಂದರು. ಅದರಂತೆ ಉಪ್ಪರಿಗೆಯಲ್ಲಿದ್ದವರು ಬೀದಿಗೂ, ಬೀದಿಯಲ್ಲಿದ್ದವರು ಉಪ್ಪರಿಗೆಗೂ ತಂತಮ್ಮ ಮನಸ್ಸಿನಂತೆ ಪಲ್ಲಟಗೊಂಡ ಅಸಂಖ್ಯ ಉದಾಹರಣೆಗಳು ನಮ್ಮ ನಿಮ್ಮ ನಡುವೆ ದಿನ ಬೆಳಗಾದರೆ ದೊರೆಯುತ್ತಲೇ ಇವೆ. ಅಂತಹ ಉದಾಹರಣೆಗಳ ಗೊಂಚಲಿನಿಂದ ಹೆಕ್ಕಿ ತೆಗೆದ ಸ್ಫುಟವಾದ ಉದಾಹರಣೆಯೇ ವರುಣ್ ಭರಣ್ವಾಲ್.

ವರುಣ್ ಭರಣ್ವಾಲ್ ಹುಟ್ಟಿದ್ದು ಮಹಾರಾಷ್ಟ್ರ ರಾಜ್ಯದ ಪಾಲಘರ್ ಜಿಲ್ಲೆಯ ಬೊಯ್ಸರ್ ಎಂಬ ಚಿಕ್ಕ ಪಟ್ಟಣದಲ್ಲಿತಂದೆ ಅದೇ ಪಟ್ಟಣದಲ್ಲಿ ಚಿಕ್ಕ ಸೈಕಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದು  ಸಂಸಾರದ ಜೀವನ ನೌಕೆ ದಿನಂಪ್ರತಿ ನಡೆಯುತ್ತಿದ್ದುದೇ ಅದರಿಂದಇನ್ನು ತಾಯಿ ಗೃಹಿಣಿವರುಣ್ ಭರಣ್ವಾಲ್ ನಿಗೆ ಒಬ್ಬಳು ಅಕ್ಕತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ನಗರದೊಳಗೆ ನೌಕರಿಗೆ ಸೇರಿಸಿಬಿಡಬೇಕೆಂಬ ಅಪಾರ ಹಂಬಲ  ದಂಪತಿಗಳಿಗಿದ್ದರೂ ಅವರ ಹಣಕಾಸಿನ ಪರಿಸ್ಥಿತಿ ಅದಕ್ಕೆ ದಾರಿಯಾಗುವಷ್ಟಿರಲಿಲ್ಲ. ಇನ್ನು ವರುಣ್ ಗೆ
ಚಿಕ್ಕಂದಿನಲ್ಲೇ ಡಾಕ್ಟರ್ ಆಗಬೇಕೆಂಬ ಹೆಬ್ಬಯಕೆ ಆದರೆ ಅದಕ್ಕೆ ತಕ್ಕುದಾದ ಆರ್ಥಿಕ ಪರಿಸ್ಥಿತಿ ಮನೆಯಲ್ಲಿಲ್ಲದಿದ್ದು ಕೈ ಕಟ್ಟಿ ಹಾಕಿದ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಯಿತುಅಂದಿಗೆ ಹೊಟ್ಟೆ ತುಂಬಿದರೆ ಸಾಕೆನ್ನುವಂತಿದ್ದ ಕುಟುಂಬಕ್ಕೆ ದುಬಾರಿ ಬಾಬತ್ತಿನ ಡಾಕ್ಟರ್ ಓದಿಸುವುದು ಕನಸಿನ ಮಾತಾಗಿತ್ತು.

ಅವನ ಹತ್ತನೇ ತರಗತಿ ಪರೀಕ್ಷೆಗಳು ಮುಗಿದ ನಾಲ್ಕು ದಿನದ ಅಂತರದಲ್ಲಿಯೇ ಅವನ ತಂದೆಗೆ ಹೃದಯಾಘಾತವಾಗಿ ಮರಣ ಹೊಂದುತ್ತಾರೆಉರಿಯುವ ಗಾಯಕ್ಕೆ ಉಪ್ಪು ಸುರಿಯುವಂತೆ ಮೊದಲೇ ಬಡತನದ ಅಗ್ನಿಕುಂಡದಲ್ಲಿ ಬಿದ್ದು ಬೇಯುತ್ತಿದ್ದ ಕುಟುಂಬವನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದಂತೆ ಕಷ್ಟಗಳ ಮೇಲೆ ಕಷ್ಟ ಬಂದು ಒದ್ದಾಡುವಷ್ಟಾಗುತ್ತದೆ.

ಸೈಕಲ್ ರಿಪೇರಿ ಅಂಗಡಿ ಹೇಳಿಕೊಳ್ಳುವಷ್ಟಲ್ಲದಿದ್ದರೂ ಅಂದಿನ ಹಿಟ್ಟು ಬಟ್ಟೆಗೆ ನೆರವಾಗುವಷ್ಟಾಗಿ ಬರುತ್ತಿದ್ದರೂಆತನ ತಂದೆಗೆ ಆಸ್ಪತ್ರೆಗೆ ಕಟ್ಟಿದ್ದ ಹಣಕ್ಕಾಗಿ ಮಾಡಿದ ಸಾಲ ಹೊರಲಾಗದ ಹೊರೆಯಾಗುತ್ತದೆಆತನ ಅಕ್ಕ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರೂ ಆಕೆಗೆ ಬರುವ ಸಂಬಳದಲ್ಲಿ ಮನೆಯನ್ನೂ ಸಲಹಿ ಸಾಲವನ್ನು ತೀರಿಸುವುದು ದುಸ್ಸಾಹಸದ ಮಾತಾಗಿತ್ತು.  ಅಲ್ಲಿಗೆ ವರುಣ್ ತನ್ನ ವಿದ್ಯಾಭ್ಯಾಸಕ್ಕೆ ತಿಲ ತರ್ಪಣ ಕೊಟ್ಟುಬಿಡುವುದೆಂದು ತೀರ್ಮಾನ ಮಾಡಿಕೊಂಡಮನುಷ್ಯನೆಂದು ಹುಟ್ಟಿದ ಮೇಲೆ ನೂರಾರುಸಾವಿರಾರು ಆಸೆಗಳಿರುವುದು ನಿಜ ಆದರೆ ಎಲ್ಲರಿಗೂ ಎಲ್ಲ ಆಸೆಗಳೂ ಈಡೇರಲೇಬೇಕೆಂಬ ವಿಧಿತ ಕಟ್ಟುಪಾಡುಗಳೇನು ಇಲ್ಲವಲ್ಲ!ಇರುವ ಸಿರಿವಂತರಿಗೆ ಅಂದುಕೊಂಡಿದ್ದೆಲ್ಲವನ್ನು ಮಾಡುವ ಧೈರ್ಯವಾದರೂ ಇದ್ದಿರಬಹುದೇನೋ,  ಆದರೆ ಇಲ್ಲದವರು ಇಂದು ನಾಳೆಯ ಹಿಟ್ಟಿನಬಟ್ಟೆಯ ನೆಲೆಯ ಮಾತ್ರ ನೋಡಕೊಳ್ಳಲಷ್ಟೇ ಶಕ್ತವಾದವರು ಅಂದುಕೊಳ್ಳುವುದೇನು?.. ಅಂದುಕೊಂಡಿದ್ದನ್ನು ಸಾಧಿಸಲು ಬೇಡುವುದೆಲ್ಲಿ?.

ಮುಂದಣ ದಾರಿ ಅರಿಯದೆ ಕಂಗಾಲಾದ ವರುಣ್ ಓದುವುದನ್ನು ಅಲ್ಲಿಗೆ ನಿಲ್ಲಿಸಿ ತಂದೆಯು ಬಿಟ್ಟು ಹೋಗಿದ್ದ ಸೈಕಲ್ ಅಂಗಡಿಯ ಉತ್ತರಾಧಿಕಾರಿಯಾಗಿ ಗಲ್ಲಾ ಪೆಟ್ಟಿಗೆಯ ಮೇಲೆ ಕೂರುತ್ತಾನೆ. ಸೈಕಲ್ ರಿಪೇರಿ ಅಂಗಡಿಯ ಮಾಲೀಕತ್ವ ವಹಿಸಿಕೊಂಡ ಕೆಲವೇ ದಿನಗಳಲ್ಲಿ ವರುಣ್ ನ ಹತ್ತನೇ ತರಗತಿ ಫಲಿತಾಂಶಗಳು ಪ್ರಕಟವಾಗಿ ವರುಣ್ ತನ್ನ ಇಡೀ ತಾಲೂಕಿಗೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾನೆ. ಹುಡುಗನಲ್ಲಿದ್ದ ಚುರುಕುತನ, ಬುದ್ಧಿಮತ್ತತೆಯನ್ನು ಮೊದಲೇ ಅರಿತಿದ್ದ ತಾಯಿ ತನ್ನ ಮಗನನ್ನು ಸೈಕಲ್ ರಿಪೇರಿಗೆ ತಳ್ಳಿ ಭವಿಷ್ಯಕ್ಕೆ ತಣ್ಣೀರೆರಚುವುದನ್ನು ತಪ್ಪಿಸಲೆಂದೇ ಸೈಕಲ್ ರಿಪೇರಿ ಅಂಗಡಿಯನ್ನು ತಾನೇ ವಹಿಸಿಕೊಳ್ಳುವುದಾಗಿ ಹಾಗೂ ವರುಣ್ ತನ್ನ ವಿದ್ಯಾಭ್ಯಾಸ ಮುಂದುವರೆಸುವಂತೆಯೂ ಆಕಾಂಕ್ಷೆ ವ್ಯಕ್ತಪಡಿಸುತ್ತಾಳೆ. ಆಕಾಂಕ್ಷೆಯಿದ್ದರೇನು? ಅದಕ್ಕಾಗುವಷ್ಟು ಹಣ ಅವರಲ್ಲಿರಲಿಲ್ಲ. ಅವರ ಸಮೀಪದಲ್ಲಿದ್ದ ಕಾಲೇಜಿನಲ್ಲಿ ವಿಚಾರಿಸಿದ್ದಾಗ ಹನ್ನೊಂದನೇ ತರಗತಿಯ ಶುಲ್ಕವೇ ಹತ್ತು ಸಾವಿರ ರೂಪಾಯಿಗಳು ಎಂದಾಗ  'ಇದು ನಮ್ಮ ಕೈಲಾಗುವ ಮಾತಲ್ಲ' ಎಂದುಕೊಳ್ಳುತ್ತಾ, ತಮ್ಮ ಅದೃಷ್ಟವನ್ನು ಅದಲ್ಲಿಗೆ ಹಳಿಯುತ್ತಾ ಮನೆಯ ದಾರಿ ಹಿಡಿಯುತ್ತಾರೆ. ಜೀವನದ ವಿಧಿಯ ವಿಚಿತ್ರ ಆಟಕ್ಕೆ ಸಿಲುಕಿ ವರುಣ್ ಮತ್ತೊಮ್ಮೆ ಸೈಕಲ್ ರಿಪೇರಿ ಅಂಗಡಿಯ ಗಲ್ಲಾ ಪೆಟ್ಟಿಗೆ ಹತ್ತುತ್ತಾನೆ. ವರುಣ್ ನ ಜೀವನದ ಪ್ರಮುಖ ಘಟ್ಟವೊಂದು ಅಲ್ಲಿಗೆ ಮುಗಿಯಿತೂ ಎಂದರೂ ತಪ್ಪಿಲ್ಲ. 

ಹೀಗಿರುವಾಗ ಒಂದು ದಿನ ಅಚಾನಕ್ ಆದ ಘಟನೆಯೊಂದು ನಡೆಯುತ್ತದೆ. ವರುಣ್ ತಂದೆ ಸಾಯುವ ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಡಾ.ಕಂಪ್ಲಿ ಆಕಸ್ಮಿಕವಾಗಿ ವರುಣ್ ನನ್ನು ಭೇಟಿಯಾಗಿ ಅವನ ಗುರುತು ಹಿಡಿಯುತ್ತಾರೆ. ವರುಣ್ ನ ವರುಣ್ ನೊಂದಿಗೆ ಮಾತು ಕಥೆಯಾಡುತ್ತಿದ್ದಾಗಲೇ ಅವನು ವಿದ್ಯಾಭ್ಯಾಸವನ್ನು ಅಲ್ಲಿಗೆ ಮೊಟಕುಗೊಳಿಸಿರುವುದು ಅವರಿಗೆ ತಿಳಿಯುತ್ತದೆ. ಕೂಡಲೇ ಹತ್ತು ಸಾವಿರ ರುಪಾಯಿಯ ಕಂತೆಯೊಂದನ್ನು ತಮ್ಮ ಜೇಬಿನಿಂದ ಹೊರತೆಗೆದ ಡಾ.ಕಂಪ್ಲಿ ಅದನ್ನು ವರುಣ್ ಗೆ ಕೊಡುತ್ತಾ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸದಂತೆ ತಾಕೀತು ಮಾಡುತ್ತಾರೆ. ಮಗ್ಗುಲ ಬದಲಿಸಿದ ತನ್ನ ಅದೃಷ್ಟದ ಆಟ ವರುಣ್ ಗೂ ಅರ್ಥವಾಗುವುದಿಲ್ಲ. ಹಣ ಪಡೆದು ಕಾಲೇಜಿಗೆ ದಾಖಲಾದ ವರುಣ್ ತನ್ನ ಕನಸು ಈಡೇರಿರುವ ಕಾರಣಕ್ಕೆ ಬಹಳವೇ ಖುಷಿಯಾಗಿದ್ದ. ಆದರೂ ಹಿಟ್ಟಿನ, ಬಟ್ಟೆಯ ಗುಲಾಮಗಿರಿಗೆ ಬಿದ್ದಿರುವ ದೇಹ ಬಿಡಬೇಕಲ್ಲ. ಕುಟುಂಬದ ನೊಗ ಹೆಗಲಿಗೆಳೆದುಕೊಂಡ ವರುಣ್ ನ ತಾಯಿ ಹಗಲೆಲ್ಲ ಸೈಕಲ್ ರೆಪೇರಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ ಅತ್ತ ವರುಣ್ ಕಾಲೇಜಿಗೆ ಹಾಜರಾಗಿ ಕಾಲೇಜು ಮುಗಿದೊಡನೆ ನಾಲ್ಕಾರು ಮಕ್ಕಳಿಗೆ ಮನೆ ಪಾಠ ಹೇಳಿ ತನ್ನ ಕಾಲೇಜಿನ ತಿಂಗಳ ಫೀಸಿಗೆ ದಾರಿ ಮಾಡಿಕೊಂಡು ಸಾಯಂಕಾಲವಾದೊಡನೆ ತಾಯಿಯೊಡನೆ ಸೇರಿ ತಾನು ಸೈಕಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬೆಳಗ್ಗಿನಿಂದ ದುಡಿಸಿದ ಮೈ ಹಾಸಿಗೆಗೆ ತಾಗುತ್ತಲೇ ನಿದ್ರೆ ಸುಲಭವಾಗಿ ಆವರಿಸಿಬಿಡುತ್ತಿತ್ತು. ಪ್ರತಿ ತಿಂಗಳೂ ಕಾಲೇಜಿಗೆ ಕಟ್ಟಬೇಕಾಗಿದ್ದ 650 ರೂಪಾಯಿಗಳನ್ನು ಕಟ್ಟಲು ಹೆಣಗುತ್ತಿದ್ದ ವರುಣ್ ನ ಸ್ಥಿತಿ ನೋಡಿ ಎಷ್ಟೋ ಬಾರಿ ಕಾಲೇಜಿನ ಶಿಕ್ಷಕರುಗಳೇ ಶುಲ್ಕ ಕಟ್ಟಿರುವುದೂ ಉಂಟಂತೆ!!.

ವರುಣ್ ನ ಹನ್ನೆರಡನೇ ತರಗತಿ ಫಲಿತಾಂಶಗಳು ಪ್ರಕಟವಾಗಿ ಮುಂದಣ ಕನಸಿನಂತೆ ವರುಣ್ ಮೆಡಿಕಲ್ ಮಾಡುವ ಇರಾದೆ ವ್ಯಕ್ತಪಡಿಸುತ್ತಾನೆ. ಆಗ್ಗೆ ಅವರ ಹಣಕಾಸಿನ ಪರಿಸ್ಥಿತಿ ಅದಕ್ಕೆ ಅವಕಾಶ ಕೊಟ್ಟಿಲ್ಲವಾದ ಕಾರಣ ಇರುವ ಸ್ವಲ್ಪವೇ ಪಿತ್ರಾರ್ಜಿತ ಆಸ್ತಿಯನ್ನು ಮಾರಿ ಪುಣೆಯ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಎಂಜಿನೀರಿಂಗ್ ಪದವಿಗಾಗಿ ದಾಖಲಾಗುತ್ತಾನೆ. ಬುದ್ಧಿಯಲ್ಲಿ ತೀಕ್ಷಮತಿಯಾಗಿದ್ದ ವರುಣ್ ಪ್ರತೀ ಬಾರಿ ತನ್ನ ಕಾಲೇಜಿಗೆ ಮೊದಲನೇ ಸ್ಥಾನ ಗಳಿಸುವ ಮೂಲಕ ಪ್ರತೀ ವರ್ಷವೂ ಸ್ಕಾಲರ್ ಶಿಪ್ ಗೆ ಅರ್ಹನಾಗುತ್ತಿದ್ದ. ಸ್ಕಾಲರ್ಶಿಪ್ ಹಣ ಕಾಲೇಜಿನ ಫೀಸಿಗೆ ದಾರಿಯಾಗಿದ್ದು ವರುಣ್ ಗೆ ವರದಾನವಾಯಿತು. ಇಂದೇನು? ನಾಳೆಯೇನು? ಎಂದು ಹಣಕ್ಕಾಗಿಯೇ ಹೆಣಗುತ್ತಿದ್ದ ವರುಣ್ ಗೆ ಹಣದ ಕೊರತೆಯೊಂದು ಕಡಿಮೆಯಾಯಿತು. ಅದೇ ಸಮಯದಲ್ಲಿ ಜನ ಲೋಕಪಾಲ್ ಮಸೂದೆ ಜಾರಿ ಮಾಡುವಂತೆ ಸಾಮಜಿಕ ಹೋರಾಟಗಾರ ಅಣ್ಣ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ ತೀವ್ರವಾಗಿತ್ತು. ಪುಣೆಯಲ್ಲಿ ನಡೆಯುತ್ತಿದ್ದ ಭಾರಿ ರ್ಯಾಲಿಯಲ್ಲಿ ಪಾಲ್ಗೊಂಡ ವರುಣ್ ಗೆ ಸಮಾಜದಲ್ಲಿನ ಘನ ಘೋರ ಭ್ರಷ್ಟಾಚಾರಗಳ ಮುಖಗಳ ಅರಿವಾಗತೊಡಗಿತು. ತಾಯಿ ಭಾರತಿ ಭ್ರಷ್ಟರ ಕುಣಿಕೆಯೊಳಗೆ ಸಿಕ್ಕಿ ನಲುಗುತ್ತಿರುವ ಚಿತ್ರಪಟವೊಂದು ವರುಣ್ ನ ಮನಸ್ಸಿನಲ್ಲಿ ಮೂಡಿತ್ತು. ಅಂದೇ ವರುಣ್ ತೀರ್ಮಾನ ಮಾಡಿಕೊಂಡ ನನಗಾಗಿ ನನ್ನ ಕುಟುಂಬಕ್ಕಾಗಿ ಬದುಕುವುದು ಏನೇನು ಪ್ರಯೋಜನವಿಲ್ಲ, ಬದುಕಿದರೆ ದೇಶಕ್ಕಾಗಿ ಬದುಕಬೇಕು ಅಲ್ಲಿರುವ ಭ್ರಷ್ಟಾಚಾರದಂತಹ ಕಳೆ ಕಿತ್ತು ನಿರ್ಮೂಲ ಮಾಡಬೇಕೆಂದು. ಅಲ್ಲೇ ಅವನ ತಲೆಯಲ್ಲಿ ಹೊಳೆದಿದ್ದು ನಾಗರೀಕ ಸೇವಾ ವಲಯ.


ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆಯವರೊಂದಿಗೆ ವರುಣ್.

ಜೂನ್ 2012 ರಲ್ಲಿ ವರುಣ್ ನ ಇಂಜಿನಿಯರಿಂಗ್ ಪದವಿ ಮುಗಿದು ಮುಂದೆ ಐ.ಟಿ ಕಂಪನಿ ಡೆಲ್ಲಾಯ್ಟ್ ನಲ್ಲಿ ಉದ್ಯೋಗ ದೊರೆಯುತ್ತದೆ. ಕಾಲೇಜು ಮುಗಿದಂದಿನಿಂದ ಆರು ತಿಂಗಳು ಸಮಯಾವಕಾಶ ವರುಣ್ ಗೆ ಇರುತ್ತದೆ. ಅದನ್ನೇ ಸದ್ಬಳಕೆ ಮಾಡಿಕೊಳ್ಳುವ ಯೋಚನೆ ಮಾಡಿದ ವರುಣ್ ಯು.ಪಿ.ಎಸ್.ಸಿ ಪರೀಕ್ಷೆಗೆ ತಯಾರಾಗಲು ನಿಲ್ಲುತ್ತಾನೆ. ಪುಣೆಯಲ್ಲಿನ ತನ್ನ ರೂಮ್ ಮೆಟ್ ವರುಣ್ ನನ್ನು ಒಂದು ತರಬೇತಿ ಕೇಂದ್ರಕ್ಕೆ ಪರಿಚಯಿಸುತ್ತಾನೆ. 

ಮತ್ತೊಮ್ಮೆ ವರುಣ್ ಗೆ ಹಣದ ಸಮಸ್ಯೆ ತಲೆದೋರುತ್ತದೆ. ಯು.ಪಿ.ಎಸ್.ಸಿ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ಕೊಳ್ಳಲು ಹಣವಿಲ್ಲದ ವರುಣ್ ಕೈಚೆಲ್ಲುತ್ತಾನೆ. ಆದರೆ ವಿಧಿಯಾಗಲೇ ತೀರ್ಮಾನ ಮಾಡಿದ್ದಿತು ಭವಿಷ್ಯದ ಐ.ಎ.ಎಸ್ ಅಧಿಕಾರಿ ಇವನೆಂದು. ತಪ್ಪಿಸಲು ಯಾರಿಂದ ಸಾಧ್ಯ?. ವರುಣ್  ಹಿಂದೆ ಎಂದೋ ಭೇಟಿ ಮಾಡಿದ್ದ ಹಿರಿಯರೊಬ್ಬರು ಎನ್.ಜಿ.ಓ ಒಂದರ ಸಂಪರ್ಕದಲ್ಲಿದ್ದರು. ಅವರಿಗೆ ಈ ವಿಚಾರ ತಿಳಿದಿದ್ದೆ ತಡ ಎನ್.ಜಿ.ಓ ವತಿಯಿಂದ ವರುಣ್ ನ ಪುಸ್ತಕಗಳಿಗೆ ಸಹಾಯ ಧನ ಕೊಡಿಸಿಕೊಟ್ಟರು.  ಆ ಹಣದಲ್ಲೇ ವರುಣ್ ಪುಸ್ತಕ ಕೊಂಡುಕೊಂಡನು.

ಎಡೆ ಬಿಡದೆ ಕಠಿಣ ಪರಿಶ್ರಮ ಹೂಡಿದ ವರುಣ್ 2014 ರ ಸಾಲಿನ ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ 32ನೆ ರ್ಯಾಂಕ್ ಪಡೆದು ಪಾಸಾಗಿದ್ದ. ಎಂಟು ವರ್ಷದ ಧೀರ್ಘ ಕಷ್ಟ ಕೋಟಲೆಗಳ ನಂತರ ಗೆಲುವೊಂದು ವರುಣ್ ನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಹಿಂದೊಮ್ಮೆ ಇಂದು ನಾಳೆಯ ತುತ್ತಿನ ಚೀಲಕ್ಕೂ, ಕಾಸಿಗೂ ಪರದಾಡುತ್ತಿದ್ದ ಹುಡುಗನೊಬ್ಬ ಐ.ಎ.ಎಸ್ ಕೀರೀಟವನ್ನು ಮುಡಿಗೇರಿಸಿಕೊಂಡಿದ್ದ. ಇದು ಪವಾಡವಲ್ಲ, ಸಿನಿಮೀಯ ಕಥಾನಕವಲ್ಲ ಬದಲಾಗಿ ನಮ್ಮ ನಿಮ್ಮ ನಡುವಿನ ಅಚಲ ಮನಸ್ಸೊಂದು ಸಾಧಿಸಿದ ಬಗೆ!. 


ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...