ಮಂಗಳವಾರ, ಜನವರಿ 22, 2019

ನಮ್ಮನೂ ನಿಮ್ಮತ್ತ ಹರಸಿ



ನಡೆದಾಡಿದ ದೇವರೇ
ನಾವು ನಿಮ್ಮಂತೆ ದೈವವಾಗಲು
ಸಾಧ್ಯವಿಲ್ಲವೇನೋ,
ನಿಮ್ಮಾ ಮಹೋನ್ನತ
ಮನುಕುಲದ ಸೇವೆ
ನಮಗೊಲಿಯದೇನೋ!

ನಾವು ನಿಮ್ಮಂತೆ ಯೋಗಿಯಾಗಲು
ಆಗದೇನೋ,
ಭಾವ ಯೋಗಗಗಳ ಮೀರಿ
ಬದುಕುವ ಒಳ ಬೆಂಬಲ
ನಮಗಿರಲಾರದೇನೋ!

ನಾವು ನಿಮ್ಮಂತೆ ಸನ್ಯಾಸವನಪ್ಪಲು
ವಿಧಿ ಹಾಯಿಗೊಡದೇನೋ,
ನಮ್ಮ ಪಾಲಿನ
ವಿಧಿ ಬರಹ
ಬೇರೆಯದೇನೋ ಇರಬಹುದೇನೋ!

ನಾವು ನಿಮ್ಮಂತೆ ಜನಾನುರಾಗಿಯಾಗಲು
ಮನ ಬಿಡದೇನೋ,
ನಾನು ನನ್ನದೆಂಬ ಅಹಮಿಕೆ
ಉಕ್ಕಿ ಹರಿದು ಇಲ್ಲೊಂದು
ಸ್ವಾರ್ಥ ಸಮ್ಮಿಳಿಸಬಹುದೇನೋ!

ಇಲ್ಲಿ ನಿಮ್ಮ ದಾರಿಯಲರಿದು
ನೀವೇರಿದ ಕಡಲನೇರಿ
ಹೋಗಿಬಿಡಬಹುದೇನೋ,
ಆದರೆ ನಾವು ನೀವಾಗಲು
ಇಹವೊಪ್ಪದೇನೋ !

ನಮ್ಮ ಬೇಡುವ ಕೈಯದು
ಭಿಕ್ಷಾಪಾತ್ರೆಯಾಗಬಹುದೇನೋ,
ಆದರೆ ನಿಮ್ಮಂತೆ
ಲಕ್ಷ ಜನಗಳ ಪೊರೆವ
ಅಕ್ಷಯ ಜೋಳಿಗೆಯಾಗದೇನೋ!

ನೀವಾಗಿದ್ದು ನಾವಾಗೇವೇನೋ,
ನಿಮ್ಮ ಗೌರವ, ನಿಮ್ಮ
ಭಾವ, ನಿಮ್ಮ ಭಕ್ತಿಯರಿವು
ನಮ್ಮ ಹೃದಯವರಿತು
ನಿಮ್ಮ ಪಾದಕೆ ಅಡ್ಡಬೀಳಬಹುದೇನೋ!

ನೀವಣಿದ ದಾರಿಯಲಿ
ಕೆಲ ದೂರವನಾಯ್ವ
ಬಲವ ಕರುಣಿಸಿ
ನಮ್ಮನೂ ಶ್ರೀ ಶ್ರೀಯಾಗಿಸಿ
ಪೂಜ್ಯ ಶ್ರೀ ಗುರುದೇವ.

ಅಂದು ನೀವಿರಿಸಿದ ಹೆಜ್ಜೆ
ಇಂದು ಭೋದಿಯ
ವೃಕ್ಷವಾಗಿದೆ.
ನಿಮ್ಮ ಕರುಣೆಯ ದೃಷ್ಟಿಯಿತ್ತ
ಬೀರಿ ನಮ್ಮನೂ
ನಿಮ್ಮತ್ತ ಹರಸಿ.

ಶನಿವಾರ, ಜನವರಿ 5, 2019

ನಿನ್ನ ಗೌರವಕೆ ಭಾಜನರಲ್ಲವೋ ಅಣ್ಣ


ಕಳಬೇಡವೆಂದೆ, ಕಳವಿಗಿಳಿದೆವು.
ಕೊಲಬೇಡವೆಂದೆ, ಅನ್ಯಕೆ ಮನಸೋತು
ಬದುಕಿದ್ದು ಸತ್ತಂತಿರುವದು ನಮ್ಮ ಕೊಲೆಯಾಗಿದೆ.
ಹುಸಿಯನಾಡದಿರೆಂದೆ,
ಹುಸಿಯೆ ಬದುಕ ಸಾರ ಸರ್ವಸ್ವವಾಗಿಸಿದ್ದೇವೆ.
ಮುನಿಯಬೇಡಿರೆಂದೆ,
ಅದೇಕೋ ಅಪಥ್ಯವಾಗಿಹೋಯ್ತು
ಮುನಿಸು ನವರಸಗಳಿಗೊಂದಧಿಕವಾಗಿ ಆಧುನಿಕ
ರಸವತ್ತತೆಯಲ್ಲಿ ಮೇಳೈಸಿದ್ದೇವೆ.
ಅನ್ಯರ ಕೂಡ ಅಸಹ್ಯವಂತೂ ಅನೂಚಾನವಾಗಿ
ನೀನಿದ್ದ ಕಾಲದಿಂದಲೂ ಬಿಡದೆ ಬಂದಿದೆ.
ತನ್ನ ಬಣ್ಣಿಸುವುದು, ಇದಿರ ಹಳಿಯುವುದು
ಈ ದಿನಮಾನದ ದೈನಿಕ ವ್ಯವಹಾರ ಚತುರತೆಗಳಲ್ಲೊಂದಾಗಿದೆ.
ಇನ್ನುಳಿದಂತೆ ಚರಿತ್ರೆ ಶುದ್ಧಿಗಾಗಿ
ಅಂತರಂಗ ಬಹಿರಂಗಗಳೇ ಇಲ್ಲವೆಂದು ಪ್ರವರ್ತಿಸುವ ಕೆಲವು ಪ್ರವರ್ತಕರು
ಗುಟ್ಟಾಗಿ ಅಂತರಂಗಗಳ ಮೇಲಾಟದ ಗುಲಾಮರಾಗಿದ್ದಾರೆ.

ನೀನಿತ್ತ ಧರ್ಮರಾಜ್ಯವಿಂದು
ತಪ್ಪಿನ ಗ್ರಹಿಕೆಗಳೊಳಗೆ ನಲುಗಿದೆ.
ಜ್ಞಾನಿಗಳ ಚಾವಡಿಯೆಂದೆಂಬ ಹರಟುಗಾರರ
ಕೂಟಗಳು ನಿನ್ನ ಬರಸೆಳೆದು ಸಿದ್ಧಾಂತವೊಂದಕೆ
ಬಿಗಿಯುವ ಸನ್ನಾಹದಲ್ಲಿದ್ದರೆ,
ಅಂದು ನಿನ್ನ ನಿಲುವೇನು
ನಿನ್ನ ಬಿಗುವೇನು? ಎಲ್ಲವನು
ಇಂದಿಲ್ಲಿ ಕೆದಕಲು ಹೊರಟಿದ್ದಾರೆ.

ಹಾಗೆಂದೇನು ನಿನ್ನ ಮರೆತಿಲ್ಲ.
ಜಾತಿ ಗೊಡವೆಯನೆರೆಯುವ ಮನಸ್ಸಿದ್ದವರು
ನಿನ್ನ ಭಾವಿಸಿಕೊಂಬಿದ್ದಾರೆ.
ಆಡಳಿತೆಯ ಮೇಲಾಟಕ್ಕೆ ನೀನಾಹಾರವಾಗಿದ್ದೀಯೆ,
ಧರ್ಮ ಕ್ರಾಂತಿಯನೆಬ್ಬಿಸ
ಹೊರಟವರಿಗೆ ನೀನಾಯುಧವಾಗಿದ್ದೀಯೆ.
ಮಡಿ ಮೈಲಿಗೆಗಳಿಗೆ ನೀ ನಾಂದಿಗಾರನಾಗಿದ್ದೀಯೆ
ನಿನ್ನ ನಿಲುವೇನೇನಲ್ಲವೋ ಅವೆಲ್ಲವೂ ನೀನಾಗಿದ್ದೀಯೆ.

ನಿನ್ನವರು ನಿನ್ನ ಮೆರೆಸಿದ ರೀತಿಯಿದು
ನಿನ್ನವರು ಬಾಳುತ್ತಿರುವ ನೀತಿಯಿದು
ಆ ರೀತಿ ನೀತಿಯ ಕಂಡರೆ
ಶಾಂತಿ ಮೂರ್ತಿ ನೀನು ಕ್ರುದ್ಧನಾಗುವಿಯೇನೋ
ನೀನು ಅರೆಕ್ಷಣ ಅರೆಗಾವಿಲನಾಗುವಿಯೇನೋ
ಜನರೊಳಗೆ ಬೆರೆತು ಅಲ್ಲೇ ಅವರ ಅಜ್ಞಾನ
ಅರುಹಿದವನು ನೀನು, ಅವರಿಗಾಗಿ ಗಡಿಪಾರು,
ನಿಂದೆ, ಧರ್ಮ ದ್ರೋಹಿ ಎಂಬೆಲ್ಲ ಪಟ್ಟಗಳನ್ನು
ಹೊತ್ತುಕೊಂಡವನು ನೀನು.
ಅಣ್ಣ, ನಿನ್ನನ್ನು ದೇವರಾಗಿಸಿದ್ದಾರೆ ಇಲ್ಲಿ
ಆದರೂ ಅವರ ಮನದೊಳಗೆ ನಿನ್ನನೊಂದು
ಜಾತಿಗೆಸೆದು ವಿಂಗಡಿಸಿದ್ದಾರೆ, ಅದೇನೇ ಆಗಲಿ
ನಿನ್ನ ಗೌರವಕೆ ನಾವು ಭಾಜನರಲ್ಲವೋ ಅಣ್ಣ.
ಕ್ಷಮಿಸಿ ಬಿಡು ಅಣ್ಣ ಬಸವಣ್ಣ.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...