ಶುಕ್ರವಾರ, ಡಿಸೆಂಬರ್ 26, 2025

ಯುದ್ಧ ಫಲ

ಸಿನೆಮಾ, ಧಾರಾವಾಹಿ, ಶಾರ್ಟ್ ಮೂವಿಗಳನ್ನೆಲ್ಲ ನಾನು ನೋಡುವುದನ್ನು ಬಿಟ್ಟು ಯಾವ ಕಾಲವಾಯಿತೋ ಗೊತ್ತಿಲ್ಲ. ಯೂಟ್ಯೂಬ್ ನಲ್ಲಿನ ದೈನಂದಿನ ವಾರ್ತೆ, ವಿಜ್ಞಾನ ರಂಗದಲ್ಲಿ ಇತ್ತೀಚಿನ ಬೆಳವಣಿಗೆ, ಟೆಕ್ ಕ್ಷೇತ್ರದಲ್ಲಿನ ಪ್ರಗತಿ, ಜಾಗತೀಕ ರಾಜಕೀಯ, ಕೇವಲ ಈ ವಿಚಾರಗಳಿಗೆ ಸಂಬಂಧಪಟ್ಟ ವಿಡಿಯೋಗಳನ್ನು ಹೆಕ್ಕಿಕೊಂಡು ನೋಡಿ ಅಲ್ಲಿಂದ ಹೊರಬೀಳುವುದು ನನಗೆ ಈಗೀಗ ಅನೂಚಾನುವಾಗಿದೆ. ಯೂಟ್ಯೂಬ್ ನಲ್ಲಾಗಲಿ, ಇನ್ಸ್ಟಾಗ್ರಾಮ್ ನಲ್ಲಾಗಲಿ ಅದು ಸೆಳೆಯುವ ರೀಲ್ಸ್ ಜಾಲಕ್ಕೆ ನಾನು ಬೀಳುವುದಿಲ್ಲ ಎನ್ನುವುದು ನನಗೆ ಕೊಂಚ ಹೆಮ್ಮೆ, ಇರಲಿ. ಇಂತಹ ನಾನು ಆಗಾಗ ಒಮ್ಮೆ ಗೀಳಿಗೆ ಬಿದ್ದು ಕೆಲವುಗಳನ್ನು ಬಹಳಷ್ಟು ಬಾರಿ ನೋಡಿದ್ದೇನೆಂದರೆ ನೀವು ನಂಬಲೇಬೇಕು. ಚಾರ್ಲಿ ಚಾಪ್ಲಿನ್ನನ್ನ ಎಲ್ಲ ಸಿನೆಮಾಗಳು, ಮಿಸ್ಟರ್ ಬೀನ್ ನ ಎಲ್ಲ ಧಾರಾವಾಹಿಗಳು, ಸಿನೆಮಾಗಳು, ನೆಟ್ ಫ್ಲಿಕ್ಸ್ ನಲ್ಲಿ ಇದೀಗ ಭಾರಿ ವೀಕ್ಷಣೆಗೊಳಪಡುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ 'ಸ್ಟ್ರೇಂಜರ್ ಥಿಂಗ್ಸ್' ನ ಎಲ್ಲ ಕಂತುಗಳನ್ನು ನಾನು ನೋಡಿರುವುದಲ್ಲದೆ ಕೆಲವೊಂದು ಸಿನೆಮಾಗಳನ್ನು ವಿಚಿತ್ರವೆನಿಸುವಷ್ಟು ಬಾರಿ ನೋಡಿದ್ದೇನೆ. ಮರಾಠಿ ಚಿತ್ರರಂಗದ ಹಿಟ್ ಸಿನೆಮಾ 'ಸೈರಾಟ್' ಅನ್ನು ನಾನು ಬಹುಷಃ ಒಂದು ಸಾವಿರ ಬಾರಿಯಾದರೂ ನೋಡಿರಬೇಕು. ಹೀಗೆ ಪದೇ ಪದೇ ನೋಡಿದ ಸಿನೆಮಾಗಳ ಪೈಕಿ ಹಿಂದಿಯ 'ಇಂಗ್ಲಿಷ್ ವಿಂಗ್ಲೀಷ್', ತೆಲುಗಿನ 'ಮಿಥುನಂ', 'ಮಾಯಾ ಬಜಾರ್', ತಮಿಳಿನ 'ಕಾಂಚನ', ಕನ್ನಡದ 'ಕವಿರತ್ನ ಕಾಳಿದಾಸ', 'ಬಬ್ರುವಾಹನ', 'ಮಯೂರ' ಇವೆಲ್ಲ ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ ನೋಡಿದ್ದೇನೆ. ಅಲ್ಲಿಂದಾಚೆಗೆ ಅಷ್ಟೇನೂ ಹೊಸ ಸಿನೆಮಾಗಳ ಬಗ್ಗೆಯಾಗಲಿ, ಧಾರಾವಾಹಿಗಳ ಬಗ್ಗೆಯಾಗಲಿ ನಾನು ತಲೆಕೆಡಿಸಿಕೊಂಡವನಲ್ಲ. ಇದರ ಮೇಲೂ ನನ್ನನ್ನು ಇತ್ತೀಚಿಗೆ ಸೆಳೆದದ್ದು ಬ್ರಿಟಿಷ್ ಜನಾಂಗದಲ್ಲಿ ಸಿಚುಯೇಶನಲ್ ಕಾಮಿಡಿ ಎಂದು ಪ್ರಸಿದ್ಧವಾಗಿರುವ 'ಮೈಂಡ್ ಯುವರ್ ಲ್ಯಾಂಗ್ವೇಜ್'.

ಎಪ್ಪತ್ತರ ದಶಕದಲ್ಲಿ ಬ್ರಿಟೀಷ್ ನೆಲದಲ್ಲಿ ಅರಳಿದ, ಹಿರಿತೆರೆಗಿಂತಲೂ ಕಿರಿತೆರೆಯನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಧಾರಾವಾಹಿ ಈ 'ಮೈಂಡ್ ಯುವರ್ ಲ್ಯಾಂಗ್ವೇಜ್'. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಆಗಿನ ಖ್ಯಾತ ITV ಯಲ್ಲಿ ಮೂಡಿಬಂದ ಈ ಧಾರಾವಾಹಿಯನ್ನು ಬರೋಬ್ಬರಿ 48ವರ್ಷಗಳ ನಂತರ ಭಾರತದಲ್ಲಿ ಕುಳಿತು ನಾನು ನೋಡಿದೆ. ಭಾರತದಲ್ಲಿ ಟಿವಿ ಸಂಸ್ಕೃತಿ ಆಗ ತಾನೇ ಕಾಲೂರಿ ನಡೆಯಲು ಕಲಿಯುತ್ತಿರುವಾಗ ಇಂಗ್ಲೀಷರು ಧಾರಾವಾಹಿಗಳನ್ನು ನಿರ್ಮಿಸಿ ಜಗಜ್ಜಾಹೀರು ಗೊಳಿಸಿದ್ದರು. ಹಾಗಂತ ಬ್ರಿಟೀಷರ ಪಾಲಿಗೆ ಇದೆ ಮೊದಲಿನ ಧಾರಾವಾಹಿಯೇನು ಅಲ್ಲ, ಈ ಧಾರವಾಹಿ ಬರುವ ಹೊತ್ತಿಗೆ ಧಾರಾವಾಹಿಗಳ ನಿರ್ಮಾಣ, ಪ್ರಸಾರ, ವೀಕ್ಷಣೆಯಲ್ಲಿ ಅವರು ಬಹು ಪರಿಣತರಾಗಿದ್ದರು.

ಅನ್ಯ ದೇಶಗಳಿಂದ ಬ್ರಿಟನ್ ಗೆ ಹೋಗಿ ನೆಲೆಸುವ ಕಾರ್ಮಿಕ ವರ್ಗದವರು ಇಂಗ್ಲಿಷ್ ಭಾಷೆಯನ್ನ ಕಲಿಯುವ ಆರಂಭದಲ್ಲಿ ಮಾಡುವ ಅತಿ ಮುಖ್ಯ ಲೋಪಗಳನ್ನು ಹೆಕ್ಕಿಕೊಂಡು ಅದರ ಸುತ್ತಲೇ ಕಥೆ ಹೆಣೆದು, ಅದಕ್ಕೊಂದಿಷ್ಟು ಹಾಸ್ಯವನ್ನು, ಇತರೆ ಸಂಸ್ಕೃತಿಗಳ ಸೊಗಡನ್ನು ಸೇರಿಸಿ ಮಾಡಿರುವ ಈ ಧಾರಾವಾಹಿ ಸರಿ ಸುಮಾರು ಅರ್ಧ ಶತಮಾನಗಳನ್ನು ಕಳೆದರೂ ಯುವಜನರನ್ನು ಆಕರ್ಷಿಸುವಷ್ಟು ಕಸುವನ್ನು ತನ್ನೊಡಲಲ್ಲಿ ಉಳಿಸಿಕೊಂಡಿದೆ. ಅದಾಗಲೇ ಚಿತ್ರರಂಗದಲ್ಲಿ ಖ್ಯಾತರಾಗಿರದಿದ್ದ ನಟ-ನಟಿಯರನ್ನು ಕರೆತಂದು ನಿರ್ಮಿಸಿದ ಈ ಧಾರಾವಾಹಿ ಬ್ರಿಟಿಷ್ ಚಿತ್ರರಂಗದ ಅದ್ಭುತ ಕಲಾಕೃತಿ. ಆದರೆ ವಿಷಯ ಅದಲ್ಲ, ಈ ಲೇಖನದ ಬಹುಮುಖ್ಯ ವಿಷಯ ಆ ಧಾರಾವಾಹಿಯ ಜೆರೆಮಿ ಬ್ರೌನ್ ಪಾತ್ರ ನಿರ್ವಹಿಸುವ, ಆ ಧಾರಾವಾಹಿಯ ಮುಖ್ಯ ಪಾತ್ರಧಾರಿಯೂ ಆಗಿರುವ ಬ್ಯಾರಿ ಎವಾನ್ಸ್ ಜೀವನ.

ಎವಾನ್ಸ್ ಹುಟ್ಟಿದ್ದು ಲಂಡನ್ ನಗರದ ನೈಋತ್ಯ ದಿಕ್ಕಿಗೆ, ಲಂಡನ್ ನಗರದ ಹೊರವಲಯದ ರೀತಿ ಇದ್ದ ಗಿಲ್ಡ್ ಫೋರ್ಡ್ ಎಂಬ ನಗರದಲ್ಲಿ 1943ರಲ್ಲಿ. ಎರಡನೇ ಮಹಾ ಯುದ್ಧ ನಿರ್ಣಾಯಕ ಹಂತಕ್ಕೆ ಬಂದು ನಿಂತಿದ್ದ ದಿನಗಳವು, ಯುರೋಪ್ ಖಂಡದ ಆದ್ಯಂತ ಸೇನಾ ಜಮಾವಣೆ, ಫಿರಂಗಿಗಳ ಓಡಾಟ, ಮದ್ದು-ಗುಂಡುಗಳ ಕಾಳಗ ದಿನನಿತ್ಯ ನಡೆಯುತ್ತಲೇ ಇದ್ದ ಮಾಮೂಲಿನ ವಿಚಾರಗಳಾಗಿ ಹೋಗಿದ್ದವು. ಭಾರತವೂ ಸೇರಿದಂತೆ ಎಷ್ಟೋ ದೇಶಗಳಿಂದ ಸೈನಿಕರು ಹೋಗಿ ಯೂರೋಪಿನ ತುಂಬಾ ಬೀಡು ಬಿಟ್ಟಿದ್ದರು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಕೆನಡಾ ದೇಶದ ಸೇನೆಯಲ್ಲಿದ್ದ ಸೈನಿಕನೊಬ್ಬ ಲಂಡನ್ನಿನ ಯುವತಿಯಾದ ರೂಬಿ ಎವಾನ್ಸ್ ಳ ಜೊತೆಗೆ ಸ್ನೇಹ ಬೆಳೆಸುತ್ತಾನೆ, ಸ್ನೇಹ ಪ್ರೀತಿಗೆ ತಿರುಗುತ್ತದೆ. ಅದು ಮದುವೆಗೆ ತಿರುಗುವ ಮೊದಲೇ ಅವರ ಪ್ರೇಮದ ಕುರುಹಾಗಿ ಬ್ಯಾರಿ ಎವಾನ್ಸ್ ಜನಿಸುತ್ತಾನೆ. ಆತನ ತಂದೆಯಾಗಿದ್ದ ಕೆನಡಾ ದೇಶದ ಆ ಸೇನಾ ವ್ಯಕ್ತಿ ಬದುಕುಳಿದನೋ, ಇಲ್ಲ ಯುದ್ಧದಲ್ಲಿ ಮಡಿದನೋ ಯಾವ ಮಾಹಿತಿಯೂ ಇಲ್ಲ. ಮದುವೆಯಾಗದೆ ಮಗುವನ್ನು ಹಡೆದ ರೂಬಿ ಎವಾನ್ಸ್ ತನ್ನ ಮಗನಿಗೆ ನಾಲ್ಕು ವರ್ಷಗಳಾಗುವ ವರೆಗೆ ತನ್ನ ಬಳಿಯಲ್ಲೇ ಇಟ್ಟುಕೊಂಡು ಸಲಹುತ್ತಾಳೆ, ತದನಂತರ ಆತನನ್ನು ರೆಸಿಡೆನ್ಷಿಯಲ್ ಶಾಲೆಗೆ ಸೇರಿಸುತ್ತಾಳೆ. ಈ ಮಧ್ಯೆ ರೂಬಿಗೆ ಇನ್ನೊಬ್ಬ ವರನ ಜೊತೆ ನಿಶ್ಚಿತಾರ್ಥವಾಗುತ್ತದೆ. ಆದರೆ ಮದುವೆಗೆ ಮೊದಲೇ ರೂಬಿ ತನ್ನ ಮಗನ ಬಗ್ಗೆ ಆತನಿಗೆ ತಿಳಿಸುತ್ತಾಳೆ. ಆದರೆ ಆತ ಬೇರೊಬ್ಬನಿಂದ ಜನಸಿದ ಮಗುವಿಗೆ ತಾನು ತಂದೆಯಾಗಲಾರೆ ಎಂದು ನಿರಾಕರಿಸಿಬಿಡುತ್ತಾನೆ. ಆತ ನಿರಾಕರಿಸಿದ ಮೇಲೆ ರೂಬಿ ತನ್ನ ತಾಯಿಯ ಮೊರೆ ಹೋಗುತ್ತಾಳೆ, ಆದರೆ ವಯಸ್ಸಾಗಿದ್ದ ಆಕೆಯ ತಾಯಿ ರೂಬಿ ಇಲ್ಲದೆ ತಾನೊಬ್ಬಳೇ ಆ ಮಗುವಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸುತ್ತಾಳೆ. ಇದಾದ ತರುವಾಯೂ ಬ್ಯಾರಿ ಎವಾನ್ಸ್ ಬದುಕಿರುವವರೆಗೂ ತನ್ನ ತಾಯಿಯನ್ನು ನೋಡಲೇ ಇಲ್ಲವಂತೆ. ಬಹುಷಃ ವಯಸ್ಸಾಗಿದ್ದ ಬ್ಯಾರಿಯ ಅಜ್ಜಿಯೂ ಅಷ್ಟೊತ್ತಿಗೆ ತೀರಿಕೊಂಡಿರಬೇಕು. ರೆಸಿಡೆನ್ಷಿಯಲ್ ಶಾಲೆಯಿಂದ ಹೊರಬಿದ್ದ ಆತ ಮುಂದೆ ಸೇರಿಕೊಂಡಿದ್ದು ಅನಾಥಾಲಯಕ್ಕೆ.

ಅಲ್ಲಿ ಬ್ರಿಟನ್ನಿನ ಖ್ಯಾತ ಶಾಫ್ಟ್ಸ್ ಬರಿ ಹೋಮ್ಸ್ ಸಂಸ್ಥೆಯವರು ನಡೆಸುತ್ತಿದ್ದ ಅನಾಥ ಮಕ್ಕಳ ಶಾಲೆಯಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಿದ ಬ್ಯಾರಿಯಲ್ಲಿ ಇರುವ ನಟನಾ ಕಲೆಯನ್ನು ಎಳೆಯ ವಯಸ್ಸಿನಲ್ಲಿಯೇ ಆತನ ಶಿಕ್ಷಕರು ಪತ್ತೆ ಹಚ್ಚಿದರು. ಶಾಲೆಯಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಲಘುಬಗೆಯಿಂದಲೇ ಪಾಲ್ಗೊಳ್ಳುತ್ತಿದ್ದ ಬ್ಯಾರಿ ಎವಾನ್ಸ್ ಇತರೆ ಮಕ್ಕಳಿಗಿಂತ ಮನೋಜ್ಞವಾಗಿ ಅಭಿನಯಿಸಿಬಿಡುತ್ತಿದ್ದನಂತೆ. ತನ್ನ ನಾಟಕದ ಪಾತ್ರಗಳಿಂದಲೇ ಶಾಲೆಯಲ್ಲಿ ಖ್ಯಾತನಾದ ಬ್ಯಾರಿಗೆ ಮುಂದೆ ನಾಟಕ ರಂಗದಲ್ಲಿಯೇ ಜೀವನ ಕಂಡುಕೊಳ್ಳುವ ಹಂಬಲ ಹೇಗೆ ಮೊಳಕೆಯೊಡೆಯಿತೋ ಗೊತ್ತಿಲ್ಲ. ಅಂತೂ ಬ್ರಿಟನ್ನಿನ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾ ದಲ್ಲಿ ನಾಟಕದ ಬಗ್ಗೆ ಕಲಿಯಲು ಸೀಟು ಸಿಕ್ಕಿತು, ಅದರ ಖರ್ಚಿಗಾಗಿ ಬ್ರಿಟನ್ನಿನ ಖ್ಯಾತ ನಾಟಕಕಾರ 'ಜಾನ್ ಜೀಲ್ ಗುಡ್' ಹೆಸರಿನಲ್ಲಿ ಕೊಡಮಾಡುವ ಸ್ಕಾಲರ್ಷಿಪ್ ಪಡೆದುಕೊಳ್ಳುವಲ್ಲೂ ಬ್ಯಾರಿ ಸಫಲನಾದ. ತನ್ನ ಜೀವನದಲ್ಲಿ ಹೆತ್ತ ತಾಯಿ, ತನ್ನ ಅಜ್ಜಿಯೇ ತನ್ನನ್ನು ತೊರೆದರೂ ಅವನೊಳಗಿದ್ದ ಕಲೆ ಅವನ ಬೆನ್ನಿಗೆ ನಿಂತುಕೊಂಡಿತು, ಜೀವನದೊಳಗೆ ಹೊಸ ದಾರಿಯೊಂದನ್ನು ತೆರೆದಿಟ್ಟಿತು.

ನಾಟಕ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಂತೆಯೇ ನ್ಯಾಷನಲ್ ಥೇಟರ್ ನವರು ನಿರ್ಮಿಸಿದ ಕೆಲವು ಚಿತ್ರಗಳಲ್ಲಿ ಚಿಕ್ಕ ಅವಕಾಶಗಳು ದೊರೆತವು. 1968ರ ಹೊತ್ತಿಗೆ 'ಹಿಯರ್ ವೀ ಗೋ ರೌಂಡ್ ದಿ ಮಲ್ಬೆರಿ ಬುಷ್' ಎಂಬ ಸಿನೆಮಾದಲ್ಲಿ ನಾಯಕನ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲನಾದ. ಅಲ್ಲಿಯವರೆಗೂ ಇತರೆ ಸಿನೆಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಾ, ನಾಟಕ ರಂಗದಲ್ಲಿ ಸಕ್ರಿಯವಾಗಿದ್ದುಕೊಂಡು ಜೀವನದ ನೊಗ ಎಳೆದ ಬ್ಯಾರಿಗೆ ತನ್ನ ಮೊದಲ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ ಚಿತ್ರ ಒಳ್ಳೆಯ ತಿರುವನ್ನೇ ಕೊಟ್ಟಿತು. ಅದರ ಮುಂದಿನ ವರ್ಷವೇ 'ದಿ ಜರ್ನಿ ಟು ದಿ ಅನ್ನೋನ್' ಎಂಬ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ತನ್ನ ನಟನಾ ಚಾತುರ್ಯವನ್ನು ಪ್ರದರ್ಶಿಸಿದ ಬ್ಯಾರಿ ಇಂಗ್ಲಿಷ್ ಚಿತ್ರ ರಸಿಕರ ಮನಸ್ಸಿನಲ್ಲಿ ತನ್ನ ಮುದ್ರೆಯೊಂದನ್ನು ಒತ್ತಿ ಆಗಿತ್ತು. ಮುಂದೆ ಬ್ಯಾರಿ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಡಾಕ್ಟರ್ ಇನ್ ದಿ ಹೌಸ್' ಎನ್ನುವ ಸಿಚುಯೇಶನಲ್ ಕಾಮಿಡಿ ಧಾರಾವಾಹಿಗೆ ಬ್ರಿಟಿಷ್ ಚಿತ್ರ ರಸಿಕರು ಎಷ್ಟು ಮನಸೋತರೆಂದರೆ, ಆ ಧಾರಾವಾಹಿಯ ಸರಣಿಯನ್ನು ಈಗಲೂ ಡೌನ್ಲೋಡ್ ಮಾಡಿಕೊಂಡು ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ. ಅದೇ ಸಾಲಿಗೆ 'ಮೈಂಡ್ ಯುವರ್ ಲ್ಯಾಂಗ್ವೇಜ್' ಕೂಡ ಸೇರಿಕೊಂಡಿದ್ದು ಬ್ಯಾರಿಯ ಜೀವನದ ಅತ್ಯಂತ ದೊಡ್ಡ ಸಾಧನೆ ಇರಬೇಕು.

ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ, ಅಚ್ಚಳಿಯದೆ ಉಳಿಯುವಂತಹ ಟಿವಿಯ ಧಾರಾವಾಹಿಗಳಲ್ಲಿ ನಟಿಸಿ ಚಿತ್ರರಸಿಕರ ಮನಸ್ಸಿನಲ್ಲಿ ನಿಂತ ಈ ಮುದ್ದು ಮುಖದ ನಟ ತನ್ನ ಜೀವಮಾನ ಪರ್ಯಂತ ಒಬ್ಬಂಟಿಯಾಗಿಯೇ ಕಳೆದದ್ದು ವಿಪರ್ಯಾಸ. ಮದುವೆ ಆಗದೇ ಹಾಗೆಯೇ ಉಳಿದಿದ್ದ ಬ್ಯಾರಿ ಪೋರ್ಚುಗಲ್ ದೇಶದಲ್ಲಿ ಭೇಟಿಯಾದ ಒಬ್ಬ ಮಹಿಳೆಯ ಜೊತೆ ಅತ್ಯಂತ ಸಲುಗೆಯಿಂದ ಇದ್ದನಂತೆ. ಆ ಮಹಿಳೆಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದು ಆಕೆಯ ಗಂಡ ಯಾವುದೋ ಕ್ರಿಮಿನಲ್ ಅಪರಾಧದ ಮೇಲೆ ಜೈಲು ಸೇರಿದ್ದನಂತೆ. ಈ ಕಾರಣದಿಂದ ಆಕೆಗೆ ಸಹಾಯ ಮಾಡುವ ಉದ್ದೇಶದಿಂದ ಹಿಂಕ್ಲೆ ಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದ. 90ರ ದಶಕದ ನಡುಮಧ್ಯ ಭಾಗದಲ್ಲಿ ನಟನಾರಂಗದಲ್ಲಿ ಕೆಲಸವಿಲ್ಲದೇ ಬ್ಯಾರಿ ಕ್ಯಾಬ್ ಓಡಿಸಿ ಜೀವನ ಸಾಗಿಸಿದ್ದು ಉಂಟಂತೆ!. ಮುಂದೆ 1997ರ ಫೆಬ್ರವರಿಯ ಒಂದು ದಿನ ಲಂಡನ್ನಿನ ತನ್ನ ಮನೆಯಲ್ಲಿ ಬ್ಯಾರಿ ನಿಗೂಢವಾಗಿ ಸಾವಿಗೀಡಾದ. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಬಲವಾಗಿ ಪೆಟ್ಟುಬಿದ್ದಿರುವುದು ಹಾಗು ದೇಹದಲ್ಲಿ ಮಿತಿಮೀರಿದ ಮಧ್ಯ ಪತ್ತೆಯಾಯ್ತಂತೆ. ಅದೊಂದು ಕೊಲೆಯೋ, ಆತ್ಮಹತ್ಯೆಯೋ ಇಲ್ಲ ಆಕಸ್ಮಿಕ ಸಾವೋ ಇಂದಿಗೂ ತಿಳಿದುಬಂದಿಲ್ಲ. ಯಾವೊಂದಕ್ಕೂ ಪ್ರಬಲ ಪುರಾವೆಗಳು ಸಿಗಲಿಲ್ಲ. ತೆರೆಯ ಮೇಲೆ ನಗು ನಗುತ್ತಾ, ತಮಾಷೆಯ ನೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬ್ಯಾರಿ ಎವಾನ್ಸ್ ಸದ್ದಿಲ್ಲದೇ ತನ್ನ ಪಯಣ ಮುಗಿಸಿದ್ದ.

ಈ ಬ್ಯಾರಿ ಎವಾನ್ಸ್ ನ ಕಥೆಯನ್ನ ಇಲ್ಲಿ ಸವಿಸ್ತಾರವಾಗಿ ಹೇಳುವುದಕ್ಕೆ ಕಾರಣವಿಷ್ಟೇ, ನಮ್ಮಲ್ಲೂ ದೇವದಾಸಿ ತರಹದ ಅನಿಷ್ಟ ಪದ್ಧತಿಗಳು ಚಾಲ್ತಿಯಲ್ಲಿದ್ದವು, ಆ ಅನಿಷ್ಟ ಆಚರಣೆಗಳ ಫಲವಾಗಿ ಅನೇಕ ಮಕ್ಕಳು ಹುಟ್ಟಿವೆ, ಆದರೆ ತಂದೆ ಯಾರೆಂಬುದೇ ಗೊತ್ತಿಲ್ಲದ ಆ ಮಕ್ಕಳು ನಮ್ಮ ಸಮಾಜದಲ್ಲಿ ತುಳಿತಕ್ಕೊಳಪಟ್ಟಿವೆ. ದೇವದಾಸಿ ಪದ್ಧತಿಯೊಂದೇ ಅಲ್ಲ, ಯಾವ ಯಾವುದೋ ಕಾರಣಕ್ಕೆ ತನ್ನ ಹುಟ್ಟಿನ ಬಗ್ಗೆ ಅರಿವಿಲ್ಲದವರನ್ನು ಈ ಯುಗಮಾನದಲ್ಲಿ ಕೂಡ ನಮ್ಮ ಸಮಾಜದಲ್ಲಿ ಅತ್ಯಂತ ಹೀನಾಯವಾಗಿ ಕಾಣಲಾಗುತ್ತಿದೆ. ಸಮಾಜದಿಂದ ಅನಧಿಕೃತ ಬಹಿಷ್ಕಾರಕ್ಕೊಳಪಟ್ಟ ಆ ಜೀವಗಳು ಪಡುವ ಪಡಿಪಾಟಲುಗಳು ಹೃದಯ ವಿದ್ರಾವಕವಾದವು. ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರ ಅನೇಕ ಕಥಾನಕಗಳಲ್ಲೂ, ಅವರ ದೇವದಾಸಿ ಪದ್ಧತಿ ನಿರ್ಮೂಲನದ ಕಾರ್ಯಕ್ರಮಗಳಲ್ಲಿಯೂ ಇಂತಹ ಅನೇಕ ಖೇದಕರ ಘಟನೆಗಳನ್ನು ಕಥಾನಕಗಳನ್ನು ನಾವು ಕಂಡಿದ್ದೇವೆ. ಯಾರೋ ಮಾಡಿದ ತಪ್ಪಿನಿಂದ ಹುಟ್ಟಿದ ಮಕ್ಕಳನ್ನು ಶಿಕ್ಷಿಸುವುದಾಗಲಿ, ಮಡಿವಂತಿಕೆ ಪ್ರದರ್ಶಿಸುವುದಾಗಲಿ ನಾಗರೀಕ ಮಾನವ ಸಮಾಜಕ್ಕೆ ತರವಲ್ಲವೆಂದು ನನ್ನ ಭಾವನೆ. ಅಂತಹ ಸಮುದಾಯದ ಮಕ್ಕಳಿಗೆ ಬ್ಯಾರಿ ಎವಾನ್ಸ್ ನ ಜೀವನ ಒಂದು ಮಾದರಿಯಾಗಬಹುದು. ತಂದೆ ಯಾರೆಂದೇ ಗೊತ್ತಿಲ್ಲದೇ, ನಾಲ್ಕೈದು ವರ್ಷಕ್ಕೆ ತಾಯಿಯಿಂದಲೂ ತಿರಸ್ಕಾರಕ್ಕೊಳಪಟ್ಟು ಬೀದಿಗೆ ಬಿದ್ದ ಬ್ಯಾರಿ ಎವಾನ್ಸ್ ಸಾಹಸಗಾಥೆಗೆ ಕೊಟ್ಟಷ್ಟೇ ಬೆಲೆಯನ್ನು ನಾವು ಆ ಅನಾಥ ಮಗುವನ್ನೆತ್ತಿ ಮುದ್ದಾಡಿ ಬೆಳೆಸಿದ ಆ ಸಮಾಜಕ್ಕೂ ಕೊಡಬೇಕು. ಇಷ್ಟೆಲ್ಲಾ ಹೇಳುವಾಗ ಕನ್ನಡದ ತ್ರಿಪದಿ ಚಕ್ರವರ್ತಿ ಸರ್ವಜ್ಞನ ಜೀವನ ಕೂಡ ಒಮ್ಮೆ ನನ್ನ ಕಣ್ಣ ಮುಂದೆ ಬರುತ್ತದೆ. ಕಾಶಿಗೆ ಹೋಗುತ್ತಿದ್ದ ಯಾತ್ರಿಕನೊಬ್ಬನಿಗೆ ಕುಂಬಾರ ಮನೆತನದ ಹೆಣ್ಣು ಮಗಳಿಗೆ ಜನಿಸಿದ ಕೂಸು ನಮ್ಮ ಸರ್ವಜ್ಞ ಕವಿ. ಆತನೂ ತನ್ನ ತಂದೆಯನ್ನು ಕಂಡಿಲ್ಲದವನು, ಆದರೆ ಆಗಿನ ನಮ್ಮ ಸಮಾಜ ಆತನ ಕೌಟುಂಬಿಕ ಹಿನ್ನೆಲೆಗಲ್ಲದೆ ಆತನ ಕಾರ್ಯಕ್ಕೆ ಬೆಲೆಕೊಟ್ಟದ್ದು, ಆತನನ್ನು ಕನ್ನಡ ಸಾಹಿತ್ಯ ಕ್ಷೇತ್ರ ಎತ್ತಿ ಮುದ್ದಾಡಿ ಬೆಳೆಸಿದ್ದು ಈಗ ಇತಿಹಾಸ. ಈಗಿನ ನಾಗರೀಕ ಸಮಾಜವೂ ಈ ರೀತಿಯ ಮನೋಧೋರಣೆಯನ್ನು ಬೆಳೆಸಿಕೊಂಡರೆ ಬ್ಯಾರಿ ಎವಾನ್ಸ್ ನಂತಹ ಯುಧ್ಧಫಲಗಳೂ ಕೂಡ ಈ ಜಗತ್ತಿಗೆ ಏನಾದರೂ ಈಯಬಲ್ಲವು, ತಮ್ಮಂತಹ ಇತರರಿಗೆ ಮಾರ್ಗದರ್ಶಿಯಾಗಬಲ್ಲರು.

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...