ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನಮ್ಮ ಪಠ್ಯ ಪುಸ್ತಕಗಳಲ್ಲಿ, ಸ್ವಾತಂತ್ರ್ಯೋತ್ಸವದ ಸಂಬಂಧಿ ಲೇಖನ ಮಾಲಿಕೆಗಳಲ್ಲಿ, ದಿನ ಪತ್ರಿಕೆಗಳಲ್ಲಿ ನಿಮಗೆ ಭರಪೂರ ಮಾಹಿತಿ ದೊರೆಯುತ್ತದೆ. ಆದರೆ ಸ್ವಾತಂತ್ರ್ಯ ದೊರೆಯುವ ಒಂದು ವರ್ಷ ಮೊದಲು ಅಂದರೆ 1946 ರಲ್ಲಿ 'ಡೈರೆಕ್ಟ್ ಆಕ್ಷನ್ ಡೇ' ನೆಪದಲ್ಲಿ ಶುರುವಾದ ಕೋಮು ದಳ್ಳುರಿ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲೂ ಉರಿಯುತ್ತಲೇ ಇತ್ತು. ಇದಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮಗೆ ಪಠ್ಯ ಪುಸ್ತಕಗಳಲ್ಲಿ ಸಿಗಲಾರವು, ನೀವಾಗಿ ನೀವೇ ತಡಕಿ ಹುಡುಕಿಕೊಂಡರೆ ಕೆಲವು ಪುಸ್ತಕಗಳಲ್ಲಿ ದೊರೆಯಬಹುದು, ಈಗಂತೂ ನಿಮ್ಮ ಆಪ್ತ ಮಿತ್ರರಾದ ಚಾಟ್ ಜಿಪಿಟಿ, ಡೀಪ್ ಸೀಕುಗಳಲ್ಲಿ ಹೇರಳವಾದ ಮಾಹಿತಿ ಲಭ್ಯವಾಗಬಹುದು. ಆದರೆ ಸ್ವಾತಂತ್ರ್ಯದ ಜೊತೆ ಜೊತೆಗೆ ದೇಶ ವಿಭಜನೆ ಎಂಬ ಅಚಾತುರ್ಯ ನಡೆಯಿತಲ್ಲ ಅದರ ತೀವ್ರತೆ ನಮಗೆ ಮಾತುಗಳಲ್ಲೋ, ಲೇಖನಗಳಲ್ಲೋ, ಪುಸ್ತಕಗಳಲ್ಲೋ ಓದಿಕೊಂಡರೆ ಸರಿಯಾಗಿ ಅರ್ಥವಾಗುವುದಿಲ್ಲ ಎನ್ನುವುದು ನನ್ನ ಭಾವನೆ. ದೇಶ ವಿಭಜನೆಯ ಕುರಿತಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಹೊತ್ತಿನಲ್ಲಿ ನಾನು ಆ ಕುರಿತಾಗಿ ಆಮೂಲಾಗ್ರವಾಗಿ ಓದಿಕೊಂಡಿದ್ದೆ, ತಾಂತ್ರಿಕವಾಗಿ ಅದರ ಹಿಂದಿನ ಕಾರಣ-ಕರ್ತೃಗಳನ್ನೆಲ್ಲ ತಿಳಿದುಕೊಂಡಿದ್ದೆ, ಆದರೇನು ಅದರ ಹಿಂದಿದ್ದ ನೋವು-ಭಾವನೆಗಳು ನನಗೆ ಅಷ್ಟಾಗಿ ಅರ್ಥವಾಗಿರಲಿಲ್ಲ. ನನಗೊಬ್ಬನಿಗೇ ಅಲ್ಲ, ನನ್ನಂತೆಯೇ ಪುಸ್ತಕವನ್ನೋದಿಕೊಂಡು ದೇಶ ವಿಭಜನೆಯ ಬಗ್ಗೆ ತಿಳಿದುಕೊಂಡವರ ಎಲ್ಲರ ವಿಚಾರದಲ್ಲೂ ಇದು ಹೀಗೆ ಆಗಿರಬಹುದು ಎನಿಸುತ್ತದೆ. ಇರಲಿ, ನನಗೆ ಈ ದೇಶ ವಿಭಜನೆಯ ಹಿಂದಿನ ಮಾನವೀಯ ಭಾವನೆಗಳು ಅರ್ಥವಾಗಿದ್ದು ಎರಡು ಸಂಧರ್ಭಗಳಲ್ಲಿ, ಒಂದನೆಯದು ಖ್ಯಾತ ಒಲಂಪಿಕ್ ಕ್ರೀಡಾ ಪಟು, ಪಂಜಾಬಿನ ಮಿಲ್ಕಾ ಸಿಂಗ್ ಕುರಿತಾದ ಹಿಂದಿ ಚಲನಚಿತ್ರ 'ಭಾಗ್ ಮಿಲ್ಕಾ ಭಾಗ್' ಸಿನೆಮಾದಲ್ಲಿ ಮತ್ತೊಂದು ನಾನೇ ಖುದ್ದಾಗಿ ಪಂಜಾಬಿನ ಅಮೃತಸರದ ದೇಶ ವಿಭಜನಾ ಮ್ಯೂಸಿಯಂಗೆ(Partition meuseum) ಭೇಟಿ ಇತ್ತಾಗ.
ಇವೆರಡನ್ನೂ ಹೊರತು ಪಡಿಸಿದರೆ ಇತ್ತೀಚಿಗೆ ನಾನು ಯೂಟ್ಯೂಬ್ ವೀಕ್ಷಿಸುತ್ತಿರುವಾಗ ಕಣ್ಣಿಗೆ ಬಿದ್ದ ಸಿಂಧಿಗಳ ಕುರಿತಾದ ಸಾಹಸಗಾಥೆಯ ಶಾರ್ಟ್ ವಿಡಿಯೋ ಒಂದು ನನ್ನನ್ನು ಮತ್ತೆ ದೇಶ ವಿಭಜನೆಯ ದುರಂತದತ್ತ ಹೊರಳಿಕೊಂಡು ಯೋಚಿಸುವಂತೆ ಮಾಡಿತು. ಆ ಘಟನೆ ಅವೈಜ್ಞಾನಿಕ, ಅಪ್ರಬುದ್ಧವಾಗಿತ್ತು ಎನ್ನುವುದು ದಿಟವಾದರೂ ಈಗ ಅದೊಂದು ಇತಿಹಾಸ, ಮತ್ತು ಅದರೊಡನೆ ನಾವು ಬದುಕಲೇ ಬೇಕಾದ ಅನಿವಾರ್ಯತೆಯೂ ಅಷ್ಟೇ ದಿಟವಾಗಿರುವುದರಿಂದ ಅದನ್ನೇನು ನಾವು ಬದಲಿಸಲು ಸಾಧ್ಯವಿಲ್ಲ. ಆದಾಗ್ಯೂ ವಿಭಜನೆಯಿಂದ ದಿಕ್ಕುಗೆಟ್ಟು ಉಟ್ಟಬಟ್ಟೆಯಲ್ಲಿ ಪಾಕಿಸ್ತಾನವನ್ನು ತೊರೆದು ತಮ್ಮ ಹೊಲ, ಮನೆಗಳನ್ನೆಲ್ಲ ಹೇಗಿದ್ದವೋ ಹಾಗೆ ಬಿಟ್ಟು ಭಾರತದತ್ತ, ಇನ್ನಿತರ ದೇಶಗಳತ್ತ ಓಡಿ ಬಂದ ಜನರ ಬದುಕೇನಾಯ್ತು? ಅವರ ಬವಣೆ ಏನು? ಇವನ್ನೆಲ್ಲ ಈಗ ಬೇಕಾದಷ್ಟು ಗ್ರಂಥಗಳಲ್ಲಿ ಬರೆದಿಡಲಾಗಿದೆ. ಆದರೆ ತಮ್ಮ ಹಣೆಬರಹವನ್ನು ಹಳಿಯುತ್ತಾ, ದೇಶ ವಿಭಜನೆಯನ್ನು ಬೈದುಕೊಳ್ಳುತ್ತಾ ಸುಮ್ಮನೆ ಕೂರದೆ, ಶಿಕ್ಷಣ, ವ್ಯವಹಾರ, ವ್ಯಾಪಾರ, ಆಮದು-ರಫ್ತು ಹೀಗೆ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಭರದಿಂದೆದ್ದು ಬೆಳೆದ ಸಿಂಧಿ ಜನಾಂಗ ನಮಗೆ ಅಮಾವಾಸ್ಯೆಯ ಕತ್ತಲಲ್ಲಿ ಧ್ರುವತಾರೆಯಂತೆ ಗೋಚರಿಸುತ್ತದೆ.
ಪಾಕಿಸ್ತಾನದಲ್ಲಿ ಪಂಜಾಬಿ ಮತ್ತು ಫಶ್ತೂನಿ ಜನಾಂಗಗಳನ್ನು ಹೊರತು ಪಡಿಸಿದರೆ ಅತ್ಯಂತ ಹೆಚ್ಚಿನ ಜನಸಂಖ್ಯೆಯು ಸಿಂಧಿಯರದ್ದೇ. ಆದರೆ ಇಲ್ಲಿ ನಾನು ಈಗ ಮಾತನಾಡುತ್ತಿರುವುದು ಸಿಂಧ್ ಪ್ರಾಂತದಲ್ಲಿ ಹುಟ್ಟಿದ ಒಂದೇ ಕಾರಣದಿಂದ ಸಿಂಧಿಗಳು ಎಂದುಕೊಂಡು ಓಡಾಡುತ್ತಿರುವ ಇಂದಿನ ಪಾಕಿಸ್ತಾನದ ಮುಸ್ಲಿಮರ ಕುರಿತಾಗಿ ಅಲ್ಲ. ಸಿಂಧ್ ಪ್ರಾಂತದಲ್ಲಿ ಸಹಸ್ತ್ರಮಾನಗಳಿಂದ ಇದ್ದು ಬಾಳಿ ವ್ಯವಹರಿಸಿ ದೇಶ ವಿಭಜನೆಯಾದಾಗ ಕೋಮು ದ್ವೇಷಕ್ಕೆ ಹೆದರಿ ಒಕ್ಕಲೆದ್ದು ಊರು ಬಿಟ್ಟ ಹಿಂದೂ ಸಿಂಧಿಗಳ ಬಗ್ಗೆ. ಈ 'ಹಿಂದೂ' ಎಂಬ ಪದದ ಹುಟ್ಟಿನ ಜಾಡನ್ನು ಹಿಡಿದುಕೊಂಡು ಕೊಂಚ ದೂರ ಹೋಗಿ ನೋಡಿದರು ಅಲ್ಲಿ ಸಿಂಧ್-ಸಿಂಧೂ ಎಂಬ ಪದ ಮೂಲವಾಗಿ ಗೋಚರಿಸುತ್ತದೆ. ಸಿಂಧೂ ನದಿಯ ದಂಡೆಯಲ್ಲಿ ಹುಟ್ಟಿದ ನಾಗರೀಕತೆಯ ಕಾರಣದಿಂದ ಸಿಂಧೂ ಆಗಿ ಅನಂತರ ಹಿಂದೂ ಜನಾಂಗ ಎಂದು ಗುರುತಿಸಿಕೊಂಡಿತು ಎಂದು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಭಾರತ ವಿಭಜನೆಗೂ ಮೊದಲು 1948ರಲ್ಲಿ ನಡೆದಿದ್ದ ಜನಗಣತಿಯ ಅಂಕಿ-ಸಂಖ್ಯೆಗಳನ್ನು ನೋಡಿದರೆ ಈಗಿನ ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ 27% ಹಿಂದೂ ಜನಾಂಗವಿದ್ದುದಾಗಿ ತಿಳಿದುಬರುತ್ತದೆ. ವಿಭಜನೆಯ ಕಾಲದಲ್ಲಿ ಬಹುತೇಕ ಸಿಂಧಿ ಹಿಂದೂಗಳು ಗಡಿದಾಟಿ ಭಾರತದೊಳಕ್ಕೆ ಬಂದರು. ಈಗ ಸಿಂಧ್ ಪ್ರಾಂತದ ಹಿಂದೂಗಳು ಕೇವಲ 9%.
ಹೀಗೆ ಒಕ್ಕಲೆದ್ದ ಸಿಂಧಿಗಳ ಬಗ್ಗೆ ನಿಮಗೆ ಹೀಗೆ ಹೇಳಿದರೆ ಅಷ್ಟೇನೂ ಅರ್ಥವಾಗುವುದಿಲ್ಲವೇನೋ, ಅವರು ಮಾಡಿದ ಸಾಹಸಗಾಥೆಗಳನ್ನೋ, ಅಥವಾ ಲೋಕ ವಿಖ್ಯಾತವಾಗಿರುವ ಅವರ ಹೆಸರುಗಳನ್ನೂ, ಅಥವಾ ಅವರು ಹುಟ್ಟು ಹಾಕಿದ ಸಂಸ್ಥೆಗಳನ್ನೂ ಹೆಸರಿಸಿದರೆ ನಿಮಗೆ ಈ ಜನಾಂಗದ ಬಗ್ಗೆ ಸರಿಯಾಗಿ ಅರ್ಥವಾಗಬಹುದು. ರಾಜಕೀಯ ವಲಯದಲ್ಲಿ ಸುಮ್ಮನೆ ಒಂದು ಹೆಸರೆತ್ತಿಕೊಳ್ಳುವುದಾದರೆ ನಮ್ಮ ಮಾಜಿ ಉಪಪ್ರಧಾನಿ, ಮಾಜಿ ಗೃಹಮಂತ್ರಿ, ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಒಬ್ಬ ಸಿಂಧಿ ಹಿಂದೂ.
ಲಾಲ್ ಕೃಷ್ಣ ಅಡ್ವಾಣಿ : ದೇಶ ವಿಭಜನಾ ನಂತರ ಭಾರತಕ್ಕೆ ಬಂದ ಅವರ ಕುಟುಂಬದವರು ಮುಂಬೈ ನಗರದಲ್ಲಿ ನೆಲೆಸಿದರು. ದೆಹಲಿಯಿಂದ ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ ನಂತರ ಮುಂದಿನ ಸರದಿಯಲ್ಲಿ ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾದರು. 1977ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿ ಜನತಾ ಪಕ್ಷವು ಅಧಿಕಾರ ಹಿಡಿದಾಗ ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾದರು, ಅಡ್ವಾಣಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದರು. 1990ರ ದಶಕದ ಆರಂಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಪಟ್ಟು ಹಿಡಿದು ರಾಮ ರಥಯಾತ್ರೆಗೆ ಚಾಲನೆ ನೀಡಿದರು. ಇದು ಒಂದು ದಶಕದಷ್ಟು ವಯಸ್ಸಾಗಿದ್ದ ಎಳೆಯ ಪಕ್ಷ ಬಿಜೆಪಿಗೆ ಅಪಾರ ಜನಬೆಂಬಲ ದೊರಕಿಸಿಕೊಟ್ಟಿತು. ಮುಖ್ಯವಾಗಿ ಹಿಂದೂ ಜನಾಂಗದ ಮತಗಳು ಬಿಜೆಪಿಯ ಕಡೆಗೆ ವಾಲಿಕೊಂಡವು. ಅದಾದ ಮೇಲೆ ದೇಶದಾದ್ಯಂತ ಬಿಜೆಪಿಗೆ ಜನಬೆಂಬಲ ಹೆಚ್ಚುತ್ತಾ ಹೋಯಿತು. ಮುಂದೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ, ಉಪಪ್ರಧಾನಿ, ಗೃಹ ಮಂತ್ರಿ ಪದವಿಗಳನ್ನು ಅಲಂಕರಿಸಿದ ಅವರ ಮುಂದಾಳತ್ವದಲ್ಲೇ 2004 ಮತ್ತು 2009 ರ ಲೋಕಸಭಾ ಚುನಾವಣೆಗಳನ್ನು ಬಿಜೆಪಿ ಎದುರಿಸಿತು. ಜಾಗತೀಕರಣಕ್ಕೆ ಜಗತ್ತು ತೆರೆದುಕೊಂಡು, ತಂತ್ರಜ್ಞಾನದ ಓಘದಲ್ಲಿ ಓಡುತ್ತಿದ್ದ ಭಾರತಕ್ಕೆ ಇನ್ನು ಡೈನಾಮಿಕ್ ವ್ಯಕ್ತಿಯೊಬ್ಬ ಪ್ರಧಾನಿ ಪಟ್ಟವನ್ನು ಅಲಂಕರಿಸಿದರೆ ಸೂಕ್ತ ಎನಿಸಿತ್ತು, ಆದ ಕಾರಣ ಬಿಜೆಪಿಗೆ ಗೆಲುವಾಗಲಿಲ್ಲ. ಅಡ್ವಾಣಿ ತಮ್ಮ ಜೀವನದ ಇಳಿಸಂಜೆಯಲ್ಲಿ ನಿಧಾನಕ್ಕೆ ರಾಜಕೀಯದಿಂದ ಮರೆಯಾದರು.
ಗೋಪಿಚಂದ್ ಹಿಂದೂಜಾ : ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿರುವ ಅಶೋಕ್ ಲೇಲ್ಯಾಂಡ್ ನ ಹಿಂದಿದ್ದ ದೂರದರ್ಶಿತ್ವ ಇವರದ್ದೇ. ಯುನೈಟೆಡ್ ಕಿಂಗ್ಡಮ್ ನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಹೆಸರು ಇವರದ್ದೇ. ಸ್ವಾತಂತ್ರ್ಯ ಪೂರ್ವದಲ್ಲಿ ಈವತ್ತಿನ ಇರಾನಿನಲ್ಲಿ ಹುಟ್ಟಿದ ಇವರು ಓದಿದ್ದು ಮಾತ್ರ ಮುಂಬೈನಲ್ಲಿ. ಮುಂಬೈ ಮತ್ತು ಇರಾನಿನ ಟೆಹ್ರಾನ್ ನಲ್ಲಿ ಅಷ್ಟರಲ್ಲಾಗಲೇ ಟೆಕ್ಸ್ಟೈಲ್ ಮತ್ತು ಇನ್ನಿತರ ಉದ್ಯಮಗಳನ್ನು ಹೊಂದಿದ್ದ ಇವರು ಅನ್ಯದೇಶದ ಕೆಲವು ಕಂಪನಿಗಳನ್ನು ಖರೀದಿ ಮಾಡಿ ಭಾರತಕ್ಕೆ ದೇಸಿ ಎನಿಸುವಂತೆ ಮಾಡಿ ಇಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದ್ದು ವಿಶೇಷ. ಅಶೋಕ್ ಲೇಲ್ಯಾಂಡ್, ಗಲ್ಫ್ ಆಯಿಲ್ ಮತ್ತಿತರ ಕಂಪನಿಗಳು ಇವರದ್ದೇ ಮಾಲೀಕತ್ವದವು.
ಸುಚೇತಾ ಕೃಪಲಾನಿ : ಇಡೀ ಭಾರತದಲ್ಲಿಯೇ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿ ಈ ಸುಚೇತಾ ಕೃಪಲಾನಿ. ಇವರ ನಿಜವಾದ ಹೆಸರು ಸುಚೇತಾ ಮಜುಂದಾರ್. ಪ್ರಸಿದ್ಧ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಆಚಾರ್ಯ ಕೃಪಲಾನಿಯವರನ್ನು ವರಿಸಿದ ಮೇಲೆ ಇವರ ಹೆಸರಿನಲ್ಲಿ ಕೃಪಲಾನಿ ಸೇರಿಕೊಂಡಿತು.
ಹೆಸರಿಗೆ ಈ ಮೂವರ ಬಗ್ಗೆ ವಿವರವಾಗಿ ಬರೆದಿದ್ದೇನೆ, ಆದರೆ ಇನ್ನು ಎಷ್ಟೋ ಖ್ಯಾತ ಸಿಂಧಿ ಹಿಂದುಗಳನ್ನು ನಾನು ಈ ಚುಟುಕು ಲೇಖನದಲ್ಲಿ ಸವಿಸ್ತಾರವಾಗಿ ತಿಳಿಸುವುದಕ್ಕೆ ಸಾಧ್ಯವಾಗದಿದ್ದರೂ ಚುಟುಕಾಗಿ ಅಂತೂ ಹೇಳಿ ಮುಗಿಸಿಬಿಡುವುದಕ್ಕೆ ಪ್ರಯತ್ನ ಪಡುತ್ತೇನೆ.
ಬಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡಿರುವ ರಣವೀರ್ ಸಿಂಗ್, ಕರೀನಾ ಕಪೂರ್, ರಾಜ್ ಕುಮಾರ್ ಹಿರಾನಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರತದಾದ್ಯಂತ ವಿಖ್ಯಾತರಾಗಿರುವ ರಹೇಜಾ ಕುಟುಂಬ, ಖ್ಯಾತ ಲಾಯರ್ ರಾಮ್ ಜೇತ್ಮಲಾನಿ ಹೀಗೆ ಸಿಂಧಿ ಜನಾಂಗ ಕಾಲಿಡದಿರುವ ಕ್ಷೇತ್ರಗಳನ್ನು ಹುಡುಕುವುದು ಕಷ್ಟವೇ. ಮಾರವಾಡಿ ಸಮುದಾಯದಂತೆ ವ್ಯಾಪಾರ, ವ್ಯವಹಾರಗಳಲ್ಲಿ ಸದಾ ಮುಂದಿರುವ ಈ ಜನಾಂಗ ಅವರಂತೆಯೇ ಒಗ್ಗಟ್ಟಿನಲ್ಲಿಯೂ ಹೆಸರು ವಾಸಿ.
ಕಠಿಣ ಪರಿಶ್ರಮ, ಅತ್ಯುತ್ತಮ ಎನಿಸುವಷ್ಟು ಆ ಸಮುದಾಯದ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವ ಗುಣ, ತಮ್ಮ ತಮ್ಮಲ್ಲೇ ಹಿಂದುಳಿದವರನ್ನು ಮುಂದೆ ತರುವ ಗುಣ, ಹಣ ಹೂಡಿಕೆ, ಲಾಭಂಶವನ್ನು ಶೋಕಿಗೆ ಬಳಸದೆ ಮತ್ತೆ ಹೂಡಿ ತಮ್ಮ ವ್ಯವಹಾರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಚಾಣಾಕ್ಷತನ, ಹೆಚ್ಚಿನ ಜನ ಸಂಪರ್ಕ, ತಮ್ಮ ವಂಶದ ಕುಡಿ ಕೊನರುಗಳಿಗೆಲ್ಲ ಹಣಕಾಸಿನ ವಿಚಾರದಲ್ಲಿ, ವ್ಯವಹಾರದ ವಿಚಾರದಲ್ಲಿ ಶಿಸ್ತು ಬೆಳೆಸುವುದು, ಸಂಯಮದ ಆಹಾರ ಕ್ರಮ, ಹೊಸದು ಯಾವುದಾದರೂ ಅದಕ್ಕೆ ಅತ್ಯಂತ ಬೇಗ ಹೊಂದಿಕೊಳ್ಳುವುದು, ಇವೆಲ್ಲ ಗುಣಗಳು ಆ ಸಮುದಾಯದಲ್ಲಿ ಇರುವುದರಿಂದಲೇ ಆ ಸಮುದಾಯ ಎಲ್ಲಿ ಕಾಲಿಟ್ಟರೂ ಅಲ್ಲೆಲ್ಲ ಪ್ರಗತಿಯೇ ಕಂಡುಬರುತ್ತದೆ.
ಇದು ಜಾತಿಯ ಪ್ರಶ್ನೆಯಲ್ಲ, ಸಮುದಾಯದ ಹೊಗಳುವಿಕೆಯೂ ಅಲ್ಲ. ಭಾರತದೊಳಗಿನ ಪ್ರತೀ ಸಮುದಾಯವು ಒಂದೊಂದು ಸ್ವಾಮೀಜಿಗಳನ್ನು, ರಾಜಕೀಯ ಪುಢಾರಿಗಳನ್ನು ನಾಯಕರನ್ನಾಗಿ ಮಾಡಿಕೊಂಡು ಮೀಸಲಾತಿಗೂ, ರಾಜಕೀಯ ಬೆಂಬಲಕ್ಕೂ ಹೋರಾಟ ನಡೆಸುತ್ತಾ ದೊಂಬಿ ಸೃಷ್ಟಿಸುತ್ತಿರುವ ಈ ಹೊತ್ತಿನಲ್ಲಿ ಸಿಂಧಿ ಜನಾಂಗ ನಮಗೆ ಮಾದರಿಯಾಗಿ ನಿಲ್ಲುತ್ತದೆ. ತನ್ನ ಸಮುದಾಯವನ್ನು ಸರ್ವ ರೀತಿಯಿಂದಲೂ ಸಬಲಗೊಳಿಸುತ್ತಾ, ದೇಶವಿಭಜನೆಯ ಕಾವಿಗೆ ನೇರವಾಗಿ ಸಿಲುಕಿ ದೇಶವೊಂದರಿಂದ ಹೊರಬಿದ್ದರೂ ಛಲ ಬಿಡದೆ ಮೇಲೆದ್ದು ನಿಂತ ಈ ಸಿಂಧಿ ಜನಾಂಗ ಅಧ್ಯಯನ ಯೋಗ್ಯವಾದದ್ದು. ಬರೀ ಅಧ್ಯಯನವಷ್ಟೇ ಅಲ್ಲೇ ಪಾಲಿಸುವುದಕ್ಕೂ ಯೋಗ್ಯವಾದದ್ದು. ಹಾಗಂತ ಅಲ್ಲಿ ಲೋಪಗಳು ಇಲ್ಲವೇ ಇಲ್ಲವೆಂದು ಅರ್ಥವಲ್ಲ, ಲೋಪಗಳು ಇದ್ದಾಗ್ಯೂ, ಹೊರ ಜಗತ್ತಿನ ದಾಳಿಗಳನ್ನು ತಡವಿಕೊಂಡು ತಮ್ಮತನವನ್ನು ಬಿಡದೆ ಸರ್ವ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿದ ಅವರ ಕಥೆ ಈ ದೇಶದ ಸರ್ವ ಸಮುದಾಯಕ್ಕೂ ತಲುಪಬೇಕು. ಆ ಮೂಲಕ ಪ್ರತೀ ಸಮುದಾಯ ಜಾಗೃತಗೊಂಡು ತಮ್ಮ ತಮ್ಮ ಸಮುದಾಯದ ಏಳ್ಗೆಯನ್ನು ಕಾಣುತ್ತಾ ಮುನ್ನಡೆದರೂ ಸಾಕು ಈ ದೇಶ ಇನ್ನಷ್ಟು ಅಭಿವೃದ್ಧಿಯೆಡೆಗೆ ತೆರೆದುಕೊಂಡು ನಿಲ್ಲುತ್ತದೆ.
ಸಿಂಧಿಗಳ ಕುರಿತಾದ ನಾಸ್ ಡೈಲಿ ಯೂಟ್ಯೂಬ್ ಚಾನೆಲ್ಲಿನ ಶಾರ್ಟ್ ವಿಡಿಯೋ
-o-


















