ಶುಕ್ರವಾರ, ಆಗಸ್ಟ್ 14, 2020

ಸಾಮಾಜಿಕ ಜಾಲತಾಣಗಳು - ವರ್ಚುಯಲ್ ವರ್ಲ್ಡ್

ಮೊನ್ನೆ ಮೊನ್ನೆವರೆಗೂ ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ದಿನಕ್ಕೆ ಹತ್ತು ಸಲವಾದರೂ ಕಾಣಿಸಿಕೊಳ್ಳುತ್ತಿದ್ದ ನಾನು ಈ ಎಲ್ಲದರಿಂದಲೂ ಲಾಗ್ ಔಟ್ ಆಗಿ ಅವುಗಳ ಸಹವಾಸವೇ ಬೇಡವೆಂದು ದೂರ ಉಳಿದಿದ್ದೇನೆ. ನನ್ನ ಪ್ರಕಾರ ಇದೀಗ ಈ ತಾಣಗಳು ಬಳಕೆಯಾಗುತ್ತಿರುವುದು ಮಾಹಿತಿ ವಿನಿಮಯದ ಸೋಗಿನಲ್ಲಿ ತಮ್ಮ ಐಡಿಯಾಲಜಿಗಳನ್ನ ಅವರಿವರ ಮೇಲೆ ಹೇರುವುದಕ್ಕಾಗಿ. ಅಲ್ಲಿ ಎಲ್ಲ ತರಹದ ನಿಲುವುಗಳನ್ನು ವಿರೋಧಿಸುವ ಜನರಿದ್ದಾರೆ, ಯಾವುದೋ ವಿಚಾರ ತಮಗೆ ಗೊತ್ತಿಲ್ಲದಿದ್ದರೂ ಗೊತ್ತೆಂದು ತೋರ್ಪಡಿಸಿಕೊಳ್ಳುವರು, ಗೂಗಲ್ ಯೂನಿವರ್ಸಿಟಿಯಲ್ಲಿ ಕ್ಷಣ ಮಾತ್ರದಲ್ಲಿ ಪಾಂಡಿತ್ಯ ಸಂಪಾದನೆ ಮಾಡಿದವರು, ಗಾಳಿ ಬಂದೆಡೆಗೆ ತೂರಿಕೊಳ್ಳುವ ಸಿದ್ಧಾಂತಗಳೇ ಇಲ್ಲದವರು, ವಿಚಾರದ ಪೂರ್ವಾಪರ ತಿಳಿಯದೆ ಲೈಕ್ ಬಟನ್ ಕುಕ್ಕುವರು, ಸುಳ್ಳು ಸುದ್ದಿ ಹರಡುವರು, ಇನ್ನು ಎಂತೆಂತವರು ಬೇಕು ಹೇಳಿ?ಎಲ್ಲರೂ ಅಲ್ಲಿದ್ದಾರೆ!.  

2019ರ ಫೆಬ್ರವರಿ ತಿಂಗಳಲ್ಲಿ ಪುಲ್ವಾಮಾ ದಲ್ಲಿ ಭಾರತೀಯ ಯೋಧರ ಮೇಲೆ ದಾಳಿಯಾಗಿ ದೇಶದಾದ್ಯಂತ ಸಂಚಲನ ಸೃಷ್ಟಿಯಾಗಿದ್ದ ಸಂದರ್ಭ ಅದು. 370ನೆ ವಿಧಿಯನ್ನ ಕೈ ಬಿಟ್ಟು ಬಿಡಬೇಕೆಂಬ ದೊಡ್ಡ ಕೂಗು ದೇಶದಾದ್ಯಂತ ಎದ್ದು ಬಿಟ್ಟಿತ್ತು. ನನ್ನ ಟ್ವಿಟ್ಟರ್ ಸ್ವಘೋಷಿತ ಬುದ್ಧಿಜೀವಿ ಮಿತ್ರನೊಬ್ಬ ತಾನೂ ಅಲ್ಲಿ ದನಿಗೂಡಿಸಿದ. ವಿಧಿ 370ನ್ನ ರದ್ದು ಮಾಡಲು ಇದುವರೆಗೂ ಬಂದ ಸರ್ಕಾರಗಳು ವಿಫಲವಾಗಿರುವುದರ ಬಗ್ಗೆ ಸುಮಾರು ಒಂದು ತಿಂಗಳು ಸರಣಿ ಟ್ವೀಟುಗಳನ್ನ ಕುಟ್ಟಿದ ಅವನು. ಮುಂದೆ ಅದೇ ಆಗಸ್ಟ್ ನಲ್ಲಿ 370ನೆ ವಿಧಿ ಕೈಬಿಡಲು ಸರ್ಕಾರ ತೀರ್ಮಾನ ಮಾಡಿ ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕಾರಕ್ಕೆ ಕಳುಹಿಸಿಕೊಟ್ಟಾಗ ಮತ್ತೆ ಅದೇ ಮಿತ್ರ ಟ್ವಿಟ್ಟರ್ ನಲ್ಲಿ ಸರ್ಕಾರದ ಆ ನಿಲುವಿನ ವಿರುದ್ಧ ರೊಚ್ಚಿಗೆದ್ದ. ಅದು ಜಮ್ಮು ಕಾಶ್ಮೀರಕ್ಕೆ ಕೊಟ್ಟಿದ್ದ ಮಾತು ತಪ್ಪಿದಂತೆ ಅಂತಲೂ, ವಿಧಿ 370 ರದ್ದು ಮಾಡಿದ ಸರ್ಕಾರ ಇತರ ರಾಜ್ಯಗಳ ಹಕ್ಕುಗಳನ್ನೂ ಕಸಿದುಕೊಳ್ಳಲು ಹಿಂದೂ ಮುಂದು ನೋಡುವುದಿಲ್ಲವೆಂದು ಲೇಖನಗಳನ್ನ ಬರೆದು ಪ್ರಕಟಿಸಿದ. ಅದೇ ಫೆಬ್ರವರಿಯಲ್ಲಿ ಮಾಡಿದ್ದ ಸರಣಿ ಟ್ವೀಟುಗಳನ್ನು ಅಳಿಸಿಹಾಕಿಬಿಟ್ಟಿದ್ದ ಮಹಾಶಯ. 

ಮೇಲ್ನೋಟಕ್ಕೆ ಯಾವುದೋ ಒಂದು ಸರ್ಕಾರವನ್ನ ಟಾರ್ಗೆಟ್ ಮಾಡಿರುವ ಇಂತಹವರ ವರಾತ ಬಯಲಾಗುತ್ತದೆ. ಇವುಗಳ ಹಿಂದೆ ಅನೇಕ ರಾಜಕೀಯ ಕಾರಣಗಳು ಇರುತ್ತವೆ ಅನ್ನುವುದು ಈಗ ಗುಟ್ಟೇನಲ್ಲ.

ಅದರ ಜೊತೆಗೆ ಇನ್ನೊಂದು ಉದಾಹರಣೆ,  ಕರ್ನಾಟಕದಲ್ಲಿ ರಾಜಕೀಯವಾಗಿ ತುಂಬಾ ಸಕ್ರಿಯವಾಗಿರುವ ಜಿಲ್ಲೆಯೊಂದರ  ಯಾವುದೋ ಒಂದು ಊರಿನಿಂದ  ಬೆಂಗಳೂರಿಗೆ ಕೆಲಸ ಮಾಡಲು ಬಂದ ಬುದ್ಧಿಜೀವಿಯೊಬ್ಬ 23ರ ಹೊಸ್ತಿಲಲ್ಲಿದ್ದ. ಒಂದು ವರ್ಷ ಪರ್ಯಂತ ಪ್ರತೀ ಹತ್ತು ಹದಿನೈದು ನಿಮಿಷಗಳಿಗೊಂದು ಟ್ವೀಟ್ ಆತನಿಂದ ಬರುತ್ತಿತ್ತು. ಆತ ಬೆಂಗಳೂರಿಗೆ ಕೆಲಸಕ್ಕೂ ಬರುವ ಮೊದಲೇ ಭರ್ಜರಿ ಫೋನ್ ಒಂದನ್ನು ತನ್ನ ತಂದೆಯಿಂದ ಪಡೆದುಕೊಂಡು ಬಂದಿದ್ದ. ಟ್ವಿಟ್ಟರ್ ನಲ್ಲಿ ಆ ಪಾಟಿ ಬ್ಯುಸಿ ಆಗಿದ್ದ ಅವನು ಒಂದು ದಿನ ಇಲ್ಲಿ ಕೆಲಸ ಕಷ್ಟ ಅಂತ ಸಬೂಬು ಹೇಳಿ ಬೆಂಗಳೂರಿನಿಂದ ಕಾಲ್ಕಿತ್ತು ತನ್ನೂರಿಗೆ ಹೊರಟು ಹೋದ. ತನ್ನ ತಂದೆಯಿಂದಲೇ ಕೆಲಸಕ್ಕೆ ಬಾರದವನೆಂದು ಬೈಸಿಕೊಂಡರೂ ತಲೆ ಕೆಡಿಸಿಕೊಳ್ಳದ ಅವನು ಅನಂತರ  24 ಘಂಟೆಯೂ ಟ್ವಿಟರ್ ನಲ್ಲಿ ಬ್ಯುಸಿ ಆದ. ಗೂಗಲ್ ಯೂನಿವರ್ಸಿಟಿಯಿಂದ ಗಂಟೆ ಮುಗಿಯುವುದರೊಳಗಾಗಿ ಸ್ವಘೋಷಿತ ಅರ್ಥಶಾಸ್ತ್ರಜ್ಞನಾದ ಆತ ದೇಶದ ಆರ್ಥಿಕತೆ ಹಳ್ಳ ಹಿಡಿದು ಹೋದ ಬಗ್ಗೆ ಪುಂಖಾನುಪುಂಖವಾಗಿ ಟ್ವೀಟುಗಳನ್ನು ಬರೆದ. ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲದವರು ಸರ್ಕಾರ ನಡೆಸುತ್ತಿದ್ದಾರೆಂದು ಬೊಂಬಡಾ ಬಜಾಯಿಸಿದ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿಯವರನ್ನು ಏಕವಚನದಲ್ಲಿ ಸಂಭೋದಿಸಿ ಟ್ವೀಟುಗಳನ್ನು ಬರೆದ. ವ್ಯವಸ್ಥೆಯೊಂದನ್ನು ವಿರೋಧ ಮಾಡುವ ಹಕ್ಕು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಮಾನ್ಯ, ಆದರೆ ದೇಶದ ಬಹು ಸಂಖ್ಯಾತರು ಆರಿಸಿದ ಪ್ರಧಾನಿಯವರನ್ನು ಏಕವಚನದಲ್ಲಿ ಸಂಭೋದಿಸುವುದು ಆತ ಬೆಳೆದುಬಂದ ಹಿನ್ನೆಲೆಯನ್ನು, ಆಚಾರವನ್ನೇ ಎತ್ತಿ ತೋರಿಸುತ್ತದೆ. ತನ್ನ ಅರ್ಥ ವ್ಯವಸ್ಥೆಯನ್ನೇ ಸರಿದೂಗಿಸಲಾರದ ಮಹಾಶಯ ದೇಶದ ಅರ್ಥ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಂಡಿದ್ದ. ಎಷ್ಟೋ ದಿನಗಳಾದ ಮೇಲೆ ಅವರ ಊರಿನವನೇ ಒಬ್ಬ ಹುಡುಗ ಆತನ ವರ್ತನೆಗಳನ್ನೆಲ್ಲ ಟ್ವಿಟ್ಟರಿನಲ್ಲಿ ಜಗಜ್ಜಾಹೀರು ಮಾಡಿದ್ದ.

ಇತ್ತೀಚಿಗೆ ಸ್ನೇಹಿತರೊಬ್ಬರೊಂದಿಗೆ ಹರಟುತ್ತಾ ಇಂತಹುದೇ ಒಂದು ವಿಷಯ ಬಂತು. ಕರ್ನಾಟಕದ ಬಹು ಮುಖ್ಯವಾದ ವಿಷಯವೊಂದರ ಬಗ್ಗೆ ಟ್ವೀಟ್ ಮಾಡಿದ್ದರಂತೆ ಅವರು. ಒಂದೇ ದಿನದ ಅವಧಿಯಲ್ಲಿ 400ಕ್ಕೂ ಮೀರಿ ಶೇರ್ ಗಳನ್ನೂ 2300ಕ್ಕೂ ಮೀರಿ ಲೈಕ್ ಗಳನ್ನೂ ಪಡೆದುಕೊಂಡಿತಂತೆ ಆ ಟ್ವೀಟ್. ಯಾವತ್ತೂ ಅಷ್ಟೊಂದು ಪ್ರತಿಕ್ರಿಯೆ ಕಾಣದ ಆತ ಮರು ದಿನ ಅದಕ್ಕಾಗಿ ಬೆಂಗಳೂರಿನ ಯಾವುದೋ ಒಂದು ಕಡೆ ಸೇರಿ ಸಭೆ ನಡೆಸಿ ಏನಾದರೂ ನಿಲುವು ತೆಗೆದುಕೊಳ್ಳಲು ಮತ್ತೊಂದು ಟ್ವೀಟ್ ಮಾಡಿದನಂತೆ.ಅದನ್ನು ಅನುಸರಿಸಿ ಬಂದ ಜನರನ್ನು ಬಿಡಿ,  ಅದಕ್ಕೆ ಬಂದ ಲೈಕ್ ಗಳ ಸಂಖ್ಯೆ 2 ದಿನವಾದರೂ 30 ದಾಟಿರಲಿಲ್ಲವಂತೆ. ಲೈಕು ಬೇಕಾದರೆ ಒತ್ತುವ ಆದರೆ ನಿಜವಾದ ಕಾರ್ಯಕ್ಕೆ ತಲೆ  ಕೊಡದ ಸಾಮಾಜಿಕ ಜಾಲತಾಣಗಳು ವರ್ಚುಯಲ್ ವರ್ಲ್ಡ್ ಗಳಾಗಿ  ಬದಲಾಗುತ್ತಿರುವುದಕ್ಕೆ ಹಸಿ ಹಸಿ ಸಾಕ್ಷಿ ಇದು.

ಆ ವರ್ಚುಯಲ್ ವರ್ಲ್ಡ್ ನಲ್ಲಿ ಬಾರಿ ಬ್ಯುಸಿ ಆಗಿರುವವರಿಗೆ ನಿಜವಾದ ಪ್ರಪಂಚದ ವಸ್ತು ಸ್ಥಿತಿಯೂ ಗೊತ್ತಿರುವುದಿಲ್ಲ, ಅದನ್ನು ತಿಳಿದುಕೊಳ್ಳಲು ನಿಜವಾದ ಪ್ರಪಂಚಕ್ಕಿಳಿಯುವ ಕೆಲಸವನ್ನೂ ಅವರು ಮಾಡುವುದಿಲ್ಲ. ಹಣ ಬಲದಿಂದಾಗಿ ದೇಶ ಸುತ್ತಲು ಹೊರಡುವ ಅದೇ ಮಂದಿ ದೇಶದ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಫೇಸ್ ಬುಕ್ಕಿಗೆ ಫೋಟೋಗಳಿಗಾಗಿ ಫೋಸು ಕೊಡುತ್ತಾ ಸೆಲ್ಫಿ ತೆಗೆಯುವದರಲ್ಲಿ ನಿರತರಾಗಿರುತ್ತಾರೆ. ಅವರಿಗೆ ರಸಾಸ್ವಾದನೆಯಾಗಲಿ, ಸಮಸ್ಯೆಯಾಗಲಿ ನೇರವಾಗಿ ಅನುಭವಿಸಲು ಸಾಧ್ಯವಿಲ್ಲ, ವರ್ಚುಯಲ್ ವರ್ಲ್ಡ್ ಮುಖಾಂತರವೇ ಅನುಭವಿಸುತ್ತಾರೆ. 

ಬೇರೆ ಸಮಸ್ಯೆ,  ರಸಾನುಭೂತಿ ಬಗ್ಗೆ ಬಿಡಿ, ತಮ್ಮ ಜೀವನವನ್ನೇ ವೈಭವೀಕರಿಸಿ ಸಾಮಾಜಿಕ ತಾಣಗಳಲ್ಲಿ ಪ್ರದರ್ಶನಕ್ಕಿಡುವುದು ಆಧುನಿಕ ಜೀವನದ ಭಾಗವೇ ಆಗಿ ಹೋಗಿದೆ. ಎಷ್ಟೋ ಜನರ ಜೀವನವೇ ಕಿತ್ತು ಲಬ್ಬಂಡೆದ್ದು ಹೋಗಿರುತ್ತದೆ, ಆದರೆ ಅವರ ಫೇಸ್ ಬುಕ್ಕಿನ ಫೋಟೋಗಳು ಮಾತ್ರ ವಿಲಾಸಿ ಜೀವನ ನಡೆಸುವ ಆಗರ್ಭ ಶ್ರೀಮಂತರಂತೆ ತೋರುವುದು ಫ್ಯಾಷನ್ ಹುಚ್ಚು, ಧನಾತ್ಮಕ ಮನಸ್ಥಿತಿ ಎಂದುಕೊಂಡರೆ ನಾವೇ ಮೂರ್ಖರು. 

ಸಾಮಾಜಿಕ ಜಾಲತಾಣದಲ್ಲಿ ಕಾಣುವ ಎಲ್ಲರ ಜೀವನ ಕೇವಲ ಅವರ ಚೆಂದದ ತಳುಕಿನ ಭಾಗ ಮಾತ್ರ, ಮತ್ತೊಂದು ಭಾಗ ಪ್ರದರ್ಶನಕ್ಕೆ ಲಭ್ಯವಾಗುವುದಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಕಾಣುವ ಎಲ್ಲರ ಜೀವನ ಕೇವಲ ಅವರ ಚೆಂದದ ತಳುಕಿನ ಭಾಗ ಮಾತ್ರ, ಮತ್ತೊಂದು ಭಾಗ ಪ್ರದರ್ಶನಕ್ಕೆ ಲಭ್ಯವಾಗುವುದಿಲ್ಲ.


ಕೆಲವು ವರ್ಷಗಳ ಹಿಂದೆ ಭಾನುವಾರದ ದಿನಪತ್ರಿಕೆ ಅಂಕಣಗಳಲ್ಲಿ ಪೊಲೀಸ್ ಕಥಾನಕಗಳನ್ನು ಓದುವಾಗ ಒಂದು ನಿಜವಾಗಿ  ನಡೆದ ಘಟನೆ ಸಿಕ್ಕಿತ್ತು. ಕರ್ನಾಟಕದ ಉದ್ಯಮಿಯೊಬ್ಬರ ಮಗಳು ತನ್ನ ಪ್ರಿಯತಮನೊಡನೆ ಸೇರಿ ಬಚ್ಚಲಿನಲ್ಲಿ ಸ್ನಾನ ಮಾಡುತ್ತಿದ್ದ ತನ್ನ ತಂದೆಯನ್ನೇ ಉಸಿರುಗಟ್ಟಿಸಿ ಸಾಯಿಸಿಬಿಟ್ಟಿದ್ದಳಂತೆ. ಅದೇ ಹುಡುಗಿ ಆ ಘಟನೆಗೂ ವರ್ಷ ಮುಂಚೆ ಫೇಸ್ ಬುಕ್ಕಿನಲ್ಲಿ ಫಾದರ್ಸ್ ಡೇ ಶುಭ ಸಂದೇಶಗಳನ್ನ ಬರೆದುಕೊಂಡಿದ್ದಳಂತೆ. 

ಈ  ಸಾಮಾಜಿಕ ಜಾಲತಾಣಗಳನ್ನೇ ಮನಸ್ಸಿಗೆ ಹಚ್ಚಿಕೊಂಡು ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿ ನೋಡಿಕೊಳ್ಳುವರು, ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವರೂ ನಮ್ಮ ದೇಶದಲ್ಲಿ ಕಡಿಮೆಯೇನಿಲ್ಲ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು 'ಏನಕೇನ ಪ್ರಕಾರೇಣಾ.....' ಅನ್ನುವಂತೆ ರಾತ್ರೋ ರಾತ್ರಿ ಹೆಸರು ಮಾಡಿಬಿಡಲು ತುದಿಗಾಲಲ್ಲಿ ನಿಂತಿರುವವರೂ ಕಡಿಮೆಯೇನಿಲ್ಲ. ಇದಿಷ್ಟೇ ಅಲ್ಲದೆ ಆಗಾಗ ಕೋಮು ಗಲಭೆ ಸೃಷ್ಟಿಸುವ, ಶಾಂತಿ ಕದಡುವ,  ಬೆದರಿಕೆ ಹಾಕುವ, ಹೀಯಾಳಿಸುವ ಇನ್ನೂ ಮುಂತಾದ ಋಣಾತ್ಮಕ ಕಾರ್ಯಗಳಿಗೆ ನಮ್ಮ ದೇಶದಲ್ಲಿ ಈ ತಾಣಗಳು ಅನೇಕ ರೀತಿ ಸಹಕಾರಿಯಾಗಿ ಪರಿಣಮಿಸಿವೆ. ಒಳ್ಳೆಯ ಉದ್ದೇಶವೊಂದಕ್ಕೆ ಕಂಡು ಹಿಡಿದ ತಂತ್ರಜ್ಞಾನ ಬಳಕೆಯಾಗುತ್ತಿರುವುದು ಹೀಗೆ!!. ಇದು ನಮ್ಮ ದುರಾದೃಷ್ಟವಲ್ಲದೆ ಮತ್ತೇನು?.

ಅವಿದ್ಯಾವಂತರು ಈ ನಿಟ್ಟಿನಲ್ಲಿ ಎಡವಿದ್ದರೆ ತಡೆದುಕೊಳ್ಳಬಹುದಿತ್ತೇನೋ ಅಥವಾ ತಿದ್ದಿ ಹೇಳಬಹುದ್ದಿತ್ತೇನೋ, ಆದರೆ ವಿದ್ಯಾವಂತರೇ ಹೀಗೆ ಮಾಡಿಬಿಟ್ಟರೆ ಮಾಡುವುದೇನನ್ನು?. ಧರೆಯೆ ಹೊತ್ತಿ ಉರಿಯುವಾಗ ಓಡುವುದೆಲ್ಲಿಗೆ ಬದುಕಲಿಕ್ಕೆ??

-o-

ಗುರುವಾರ, ಜುಲೈ 23, 2020

ಶೂನ್ಯದಿಂದೇಳಲು ಇರುವ ಮಾರ್ಗವೊಂದೇ

2009ರ ಜನವರಿಯಲ್ಲಿ ಇದ್ದಕಿದ್ದಂತೆ ಭಾರತದ ಹೃದ್ರೋಗ ತಜ್ಞರೊಬ್ಬರು ಭಾರತದ ದಿನ ಪತ್ರಿಕೆಗಳಲ್ಲಿ ಮಿಂಚಲಾರಂಭಿಸಿದರು. ಎಲ್ಲ ಸುದ್ದಿ ವಾಹಿನಿಗಳ ಕೆಲವು ದಿನಗಳ ಕೇಂದ್ರ ಬಿಂದು ಅವರಾಗಿದ್ದರು. ಅವರು ಮತ್ತಿನ್ಯಾರು ಅಲ್ಲ ಒಡಿಶಾದ ಡಾ.ರಮಾಕಾಂತ ಪಾಂಡೆಯವರು. ಅವರು ಅಷ್ಟೊಂದು ಪ್ರಸಿದ್ಧಿಗೆ ಬರಲು ಕಾರಣ ಅವರು ಅಂದಿನ ಭಾರತದ ಪ್ರಧಾನ ಮಂತ್ರಿ ಡಾ.ಮನ್ ಮೋಹನ್ ಸಿಂಗ್ ಅವರ ಹೃದಯ ಶಸ್ತ್ರ ಚಿಕಿತ್ಸೆಯ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದು. 

ಅದಾದ ತರುವಾಯು ಭಾರತದ ಹೈ ಪ್ರೊಫೈಲ್ ಮಂದಿಗೆಲ್ಲ ಹೃದ್ರೋಗ ವಿಚಾರದಲ್ಲಿ ಖಾಯಂ ವೈದ್ಯರಂತಾಗಿ ಹೋದರು ಅವರು. ಆ ಸಮಯಕ್ಕೆ ಭಾರತದ ಎಷ್ಟೋ ವೃತ್ತ ಪತ್ರಿಕೆಗಳು ಅವರ ಕುರಿತಾಗಿ ಲೇಖನಗಳನ್ನ ಬರೆದು ಪ್ರಕಟಿಸಿದ್ದವು. 

ಡಾ.ಮನ್ ಮೋಹನ್ ಸಿಂಗ್ ಅವರೊಂದಿಗೆ ಡಾ.ರಮಾಕಾಂತ್ ಪಾಂಡಾ
ಡಾ.ಮನ್ ಮೋಹನ್ ಸಿಂಗ್ ಅವರೊಂದಿಗೆ ಡಾ.ರಮಾಕಾಂತ್ ಪಾಂಡಾ

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ, ಮಿತವಾದ ಹಣಕಾಸು ವ್ಯವಸ್ಥೆಯ ಮಧ್ಯಮ ಕುಟುಂಬದ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ರಮಾಕಾಂತರು ತಮ್ಮೂರಿನಲ್ಲಿ ಶಾಲೆಯಿಲ್ಲದೆ ಎರಡು ಮೈಲಿ ದೂರದ ಶಾಲೆಗೆ ನಡೆದುಕೊಂಡೇ ಹೋಗಿ ಬರುತ್ತಾ ಇಡೀ ಭಾರತವೇ ಮೆಚ್ಚುವಂತಹ, ಪ್ರಧಾನಿಗಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡುವಂತಹ ಎತ್ತರಕ್ಕೆ ಬೆಳೆದಿದ್ದು ಅನೇಕ ಕಷ್ಟ ಕೋಟಲೆಗಳನ್ನು ಎದುರಿಸಿದ ನಂತರವೇ.  ಅವರ ಅನೇಕ ಕಷ್ಟ ಕೋಟಲೆಗಳ ಬಗ್ಗೆ ತಿಂಗಳಾನುಗಟ್ಟಲೆ ಪತ್ರಿಕೆಯಲ್ಲಿ ಬರುತ್ತಲೇ ಇತ್ತು. ಯಾವುದೋ ಮಾಧ್ಯಮದವರು ಅವರ ಮುಂದೆ ಮೈಕು ಹಿಡಿದು ಅವರ ಕಷ್ಟದ ಹಿನ್ನೆಲೆಯ ಬಗ್ಗೆ ವಿಚಾರಿಸಿದಾಗ 'ಎಲ್ಲರೂ ಕಷ್ಟ ಪಟ್ಟೇ ಮೇಲೇರಬೇಕು, ಇಲ್ಲದಿದ್ದರೆ ಅವರು ಏರಿದ ಸ್ಥಾನಕ್ಕೆ ಬೆಲೆಯೇ ಇರುವುದಿಲ್ಲ' ಎಂದುಬಿಟ್ಟರು. ತಾವು ಪಟ್ಟ ಕಷ್ಟವನ್ನು ಧಾರಾವಾಹಿಗಳಂತೆ ಮಸಾಲೆ ಬೆರೆಸಿ ಪ್ರದರ್ಶನಕ್ಕಿಟ್ಟು ಜನರ ಅನುಕಂಪ ಗಿಟ್ಟಿಸಿಕೊಂಡು ಟೋಪಿ ಹಾಕುತ್ತಿರುವರೇ ಹೆಚ್ಚಿರುವ ಈ ಯುಗಮಾನದಲ್ಲಿ ಡಾ.ಪಾಂಡಾ ಹೇಳಿದ ಈ ಮಾತು ಅತ್ಯಂತ ಮೌಲ್ಯ ಪಡೆದುಕೊಳ್ಳುತ್ತದೆ.

ಈ ವಿಚಾರವನ್ನಿಲ್ಲಿ ಪ್ರಸ್ತಾವನೆ ಮಾಡಲು ಕಾರಣವಿಷ್ಟೇ, ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಕೋವಿಡ್ ಗಲಾಟೆಗಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದದ್ದು ಡ್ರೋನ್ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಸ್ವಘೋಷಿತ ಯುವ ವಿಜ್ಞಾನಿ ಪ್ರತಾಪ್ ಅಲಿಯಾಸ್ ಡ್ರೋನ್ ಪ್ರತಾಪ್.

ಜರ್ಮನಿಯ ಹ್ಯಾನೋವರ್ ನಲ್ಲಿ ಅನ್ಯರ ಡ್ರೋನ್ ಜೊತೆಗೆ ಸ್ವಘೋಷಿತ ಯುವ ವಿಜ್ಞಾನಿ ಪ್ರತಾಪ್

ಜಪಾನು, ಜರ್ಮನಿಯಂತಹ ತಾಂತ್ರಿಕವಾಗಿ ಹೆಚ್ಚಿನ ತಾಂತ್ರಿಕ ನಿಷ್ಣಾತರಿರುವ ದೇಶಗಳಲ್ಲಿ ನಡೆಯುವ ವಿಜ್ಞಾನ, ತಂತ್ರಜ್ಞಾನ ಕೂಟಗಳಲ್ಲಿ ಪಾಲ್ಗೊಂಡು ಸ್ವರ್ಣ ಪದಕ ಗೆದ್ದಿರುವುದಾಗಿ, ಹಾಗು ಫ್ರಾನ್ಸ್ ನಂತಹ ದೇಶವೇ ಪೌರತ್ವ ಕೊಡಲು ಮುಂದಾಗಿಬಿಟ್ಟಿದೆ ಎನ್ನುವಂತಹ ಹಸಿ ಸುಳ್ಳುಗಳನ್ನು ಹೇಳುತ್ತಾ, ರಾಜ್ಯ ಹಾಗು ಕೇಂದ್ರ ಸರ್ಕಾರದ ಮಂತ್ರಿಗಳಾದಿಯಾಗಿ ಎಲ್ಲರಿಗೂ ಟೋಪಿ ಹಾಕಿದ್ದ ಪ್ರತಾಪನ ನಿಜವಾದ ಬಣ್ಣ ಬಟಾ ಬಯಲಾಗಿದೆ. ಈತನ ಬಣ್ಣ ಬಯಲಾದುದಕ್ಕೆ ಸಂತೋಷ ಪಡುವ ಅಗತ್ಯವೇನಿಲ್ಲ, ಆದರೆ ಅದೆಷ್ಟೋ ನವೋದಯ ಲೇಖಕರಿಗೂ, ವಿಜ್ಞಾನಿಗಳಿಗೂ, ಉದ್ಯಮಿಗಳಿಗೂ ಈತನ ಈ ಹಗರಣದಿಂದ ಅನುಮಾನ ಮೂಡುವ ಹಾಗಾಗಿದೆ. ಯಾರೇ ಸಹಾಯ ಯಾಚಿಸಿ ಬಂದರು ಅವರು ಒಂದು ಹೆಜ್ಜೆ ಹಿಂದೆ ಇಡಬೇಕಾದದಂತಹ ಪರಿಸ್ಥಿತಿ ಬಂದೊದಗಿದೆ. ನಂಬಿಸಿ ಟೋಪಿ ಹಾಕುವ ಪ್ರತಾಪನಂತಹವರ ಉದಾಹರಣೆ ಕಣ್ಣ ಮುಂದೆಯೇ ಇರುವಾಗ ಕೊಡುಗೈ ದಾನಿಗಳೂ ಹಿಂದೇಟು ಹಾಕುವುದು ಸಹಜ.

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಈ ಪ್ರತಾಪನ ಮೋಡಿಗಳನ್ನು ಬಯಲಿಗೆಳೆದಾಗಲೂ ಆತ ತಪ್ಪೊಪ್ಪಿಕೊಳ್ಳಲಿಲ್ಲ. ಬದಲಾಗಿ ಸುಳ್ಳುಗಳನ್ನು ಮುಚ್ಚಿಹಾಕಲು ಮತ್ತಷ್ಟು  ಸುಳ್ಳುಗಳನ್ನು ಒಂದಕ್ಕೊಂದು ಸೇರಿಸಿ ಹೆಣೆದ. ತಪ್ಪಾಗಿದ್ದೆ ಅಲ್ಲಿ. ಈ ಡಿಜಿಟಲ್ ಯುಗಮಾನದಲ್ಲಿ ಸುಳ್ಳುಹೇಳಬೇಕಾದರೆ ಭಾರಿ ಜ್ಞಾಪಕ ಶಕ್ತಿಯಿರಬೇಕು, ಇಲ್ಲದಿದ್ದರೆ ಜಗತ್ತಿನ ಎದುರು ಮಾನ ಹರಾಜಾಗುತ್ತದೆ ಎನ್ನುವುದಕ್ಕೆ ನಕಲಿ ವಿಜ್ಞಾನಿ ಪ್ರತಾಪನೇ ಬಿಸಿ ಬಿಸಿ ಉದಾಹರಣೆ.

ನಕಲಿ ಪ್ರಶಸ್ತಿಪತ್ರಗಳನ್ನು ಹಿಡಿದುಕೊಂಡೆ ಟಿ.ವಿ ಚಾನೆಲ್ ಒಂದಕ್ಕೆ ದೌಡಾಯಿಸಿದ ಆತ ಜೆರ್ಮನಿಯ ಯಾವುದೋ ಕಂಪನಿಯ ಡ್ರೋನ್ ಒಂದನ್ನು ತೋರಿಸಿ ಅದನ್ನು ತಾನೇ ಮಾಡಿದ್ದಾಗಿ ಘಂಟಾ ಘೋಷವಾಗಿ ಸಾರಿಬಿಟ್ಟ. ತನ್ನ ಸುಳ್ಳುಗಳೆಲ್ಲವೂ ಸತ್ಯವೆಂದು ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳಿದ. ನಡುನಡುವೆ ತಾನು ಉತ್ಪ್ರೇಕ್ಷೆಯಿಂದ ಕೆಲವು ಸಂಖ್ಯೆಗಳನ್ನು ತಪ್ಪಾಗಿ ಹೇಳಿರುವುದಾಗಿ ಒಪ್ಪಿಕೊಂಡ. 

ನಾಟಕದಲ್ಲಿ ಅಭಿನಯಮಾಡಿ ರೂಢಿಯಿರುವರಿಗೆ ಮೈಕು ಸಿಕ್ಕಿದ ತಕ್ಷಣ ಡೈಲಾಗುಗಳು ತನ್ನಿಂತಾನೇ ಜ್ಞಾಪಕ ಬಂದುಬಿಡುತ್ತವಂತೆ, ಪ್ರೇಕ್ಷಕರು ಕೇಳಲಿ ಬಿಡಲಿ ಅವರ ಡೈಲಾಗುಗಳಲ್ಲಿ ಅವರು ತಲ್ಲೀನರಾಗಿಬಿಡುತ್ತಾರೆ. ಈ ಪ್ರತಾಪನೂ ಅಂತಹುದೇ ಒಂದು ಮಿಕವಲ್ಲದೇ ಮತ್ತಿನ್ನೇನು ಅಲ್ಲ. ಮೈಕು ಸಿಕ್ಕ ತಕ್ಷಣ ತಾನು ಪಡದ ಕಷ್ಟಗಳೆನ್ನೆಲ್ಲ ಪಟ್ಟೇ ಎಂದು ಬಿಂಬಿಸಿಕೊಂಡ. ಜನರ ಚಪ್ಪಾಳೆಗಳಿಗೆ ಮಾರುಹೋದ ಅವನು ಭಾರಿ ಸುಳ್ಳುಗಳನ್ನೇ ಹೇಳಿ ಮುಗಿಸಿದ. ಪೂರ್ವಾಪರ ಯೋಚಿಸದ, ತನಿಖೆ ಮಾಡದ ನಮ್ಮ ಜನ ಅವನನ್ನ ಬಿಗಿದಪ್ಪಿಕೊಂಡರು. ಎಷ್ಟೋ ಜನ ತಮ್ಮ ಮಕ್ಕಳಿಗೆ ಅವನ ಉದಾಹರಣೆ ಕೊಟ್ಟು ಬೈದದ್ದೂ ಉಂಟು. ಅಂದು ಪ್ರತಾಪನ ಉದಾಹರಣೆ ಕೊಟ್ಟು ಬೈದಿದ್ದವರೇ ಇಂದು ಅವನಂತಹ ಮಗ ಹುಟ್ಟದಿರುವುದು ನಮ್ಮ ಪುಣ್ಯ ಎಂದು ನಿಟ್ಟುಸಿರು ಬಿಡುತ್ತಿರುವುದೂ ಸುಳ್ಳಲ್ಲ.

ಈತ ಈಗ ಸಮಾಜಕ್ಕೆ ದಾಟಿಸುವ ಒಂದು ಕೆಟ್ಟ ಪರಿಪಾಠ ಮುಂದೆ ಯಾರು ಯಾರನ್ನೂ ನಂಬಲಾರದಂತಹ ಪರಿಸ್ಥಿತಿ ಸೃಷ್ಟಿ ಮಾಡಬಲ್ಲುದು. ತಮ್ಮ ಕಷ್ಟವನ್ನು ಪ್ರದರ್ಶನಕ್ಕಿಟ್ಟರೆ ನಮ್ಮನ್ನು ನಂಬುವ ಬಹಳ ಮಂದಿ ನಮ್ಮ ಸುತ್ತ ಮುತ್ತ ಇದ್ದಾರೆ ಎನ್ನುವುದು ಹಲವರ ಗಮನಕ್ಕೆ ಬಂದಿದೆ. ಅದರ ಜೊತೆಗೆ ಕಷ್ಟವೆಂದು ಹೇಳಿಕೊಂಡು ಬಂದವರನ್ನು ಪೂರ್ವಾಪರ ವಿಚಾರಣೆಗಳಿಲ್ಲದೆ ನಂಬಬಾರದೂ ಎನ್ನುವ ಅರಿವೂ ಬಂದಾಗಿದೆ. ಇದರ ಜೊತೆಗೆ ಡಾ.ರಮಾಕಾಂತ ಪಾಂಡಾ ಅವರು ಹೇಳಿದಂತೆ ಶೂನ್ಯದಿಂದೇಳಲು ಕಷ್ಟಪಡುವುದೊಂದೇ ಇರುವ ಮಾರ್ಗ. ಅದನ್ನು ಬಿಟ್ಟು ಬೇರೆ ಯಾವ ಮಾರ್ಗವೂ ಇಲ್ಲ. ಹಾಗೇನಾದರೂ ಅನ್ಯ ಮಾರ್ಗವೊಂದು ಯಾರಿಗಾದರೂ ಸಿಕ್ಕಿದ್ದೇ ಆದರೆ ಅದು ಬಹು ಕಾಲ ನಿಲ್ಲಬಲ್ಲ ಮಾರ್ಗವಾಗಿರುವುದಿಲ್ಲ. ಅದರಲ್ಲಿ ನಮ್ಮ ನಕಲಿ ವಿಜ್ಞಾನಿ ಪ್ರತಾಪ್ ಆಯ್ದುಕೊಂಡದ್ದು ಮಾತಿನ ಮೋಡಿಯ ಮಾರ್ಗ, ಆ ಮಾರ್ಗಕ್ಕೆ ಸಿಕ್ಕ ಬಹುಮಾನವನ್ನು ನೀವೀಗಾಗಲೇ ನೋಡಿದ್ದೀರಲ್ಲ! 

-o-

ಶುಕ್ರವಾರ, ಜೂನ್ 26, 2020

ಹಿಮ ಸ್ಮಶಾನ

ಇತ್ತೀಚಿಗೆ ಬ್ರಿಗೇಡಿಯರ್ ಜಾನ್ ಪಿ. ದಳವಿಯವರು ಬರೆದಿರುವ 'ದಿ ಹಿಮಾಲಯನ್ ಬ್ಲಂಡರ್'' ಓದುತ್ತಿದ್ದೆ. ನಾನು ಮಿಲಿಟರಿ ಇತಿಹಾಸವನ್ನಾಗಲಿ, ಕ್ರೀಡಾ ಇತಿಹಾಸವನ್ನಾಗಲಿ ಓದದ ವ್ಯಕ್ತಿ. ಸಾಂಪ್ರದಾಯಿಕ ಇತಿಹಾಸವನ್ನಷ್ಟೇ ಓದುತ್ತಿದ್ದ ನನಗೆ ಹಿಮಾಲಯನ್ ಬ್ಲಂಡರ್ ಓದುವಂತೆ ಅನೇಕ ರಾಷ್ಟ್ರಾಸಕ್ತ, ಸೈನ್ಯಾಸಕ್ತ ಮಿತ್ರರು ಹೇಳಿದ್ದರು. ಅದು ಮಹಾಯೋಧನೊಬ್ಬನು ಯುದ್ಧ ಭೂಮಿಯಲ್ಲಿ ತಾನು ಅನುಭವಿಸಿದ ನೋವನ್ನು ಜನರಿಗೆ ತಲುಪಿಸುವ, ಆಡಳಿತಗಾರರ ಭಯ, ಹಂಗು ಯಾವುದೂ ಇಲ್ಲದೆ ಬರೆದ ಪುಸ್ತಿಕೆ ಅಂತ ಕೇಳಿದ್ದೆನಾದ್ದರಿಂದ ಅದನ್ನು ಓದುವ ಮನಸ್ಸಾಯಿತು, ಓದಿಕೊಂಡೆ. ಮಹಾ ಸೇನಾನಿಯೊಬ್ಬ ಮೆಲ್ಲಗೆ ಕೈ ಹಿಡಿದುಕೊಂಡು ನಮ್ಮನ್ನು ಅರುಣಾಚಲದ ಹಿಮ ಪರ್ವತಗಳ ಮೇಲೆ ಹತ್ತಿಸಿ ಇಳಿಸಿದ ಅನುಭವವಾಯ್ತು. ಅದೇ ಸಮಯಕ್ಕೆ ನನ್ನ ಕೆಲವು ಗೆಳೆಯರಿಗೆ ನಾನು ಕಾಂಗ್ರೆಸ್ ಪಕ್ಷ ವಿರೋಧಿಯಂತೆ ಗೋಚರಿಸಿದೆ. ನಾನು ಈ ಪುಸ್ತಕ ಓದುತ್ತಿದ್ದುದು ತಿಳಿದುಕೊಂಡೆ ಕೆಂಡಾಮಂಡಲರಾಗಿದ್ದರು ಕೆಲವರು. ಇರಲಿ, ಪುಸ್ತಕವೊಂದು ಮನುಷ್ಯನ ಭಾವನೆಗಳಿಗೆ ಕೈ ಹಾಕಿದರೆ ಅದಕ್ಕಿಂತ ಖುಷಿ ಪಡುವ ಮತ್ತೊಂದು ವಿಚಾರ ಇಲ್ಲ ಅಲ್ಲವೇ. ಲೇಖಕ ಖುಷಿಯಾಗಿಬಿಡುತ್ತಾನೆ, ಆದರೆ ಇಂದು ದಳವಿ ಬದುಕುಳಿದಿಲ್ಲ, ಅವರ ಧ್ಯೇಯ ಖುಷಿ ಪಡುವುದು ಆಗಿಯೂ ಇರಲಿಲ್ಲ. ಭಾರತದ ರಾಜಕೀಯಕ್ಕೂ- ಸೈನ್ಯಕ್ಕೂ ತಾಳ ಮೇಳವಿಲ್ಲದ ಸಂಬಂಧವಿತ್ತು, ಅದರಿಂದಲೇ 1962ರ ಚೀನಾ ಅತಿಕ್ರಮಣದಲ್ಲಿ ಭಾರತಕೆ ಹಿನ್ನಡೆಯಾಯ್ತು ಎನ್ನುವುದನ್ನು ಯಾರಾದರೂ ಹೇಳಬೇಕಾಗಿತ್ತು, ಸಾಕ್ಷಾತ್ ಯುದ್ಧ ಭೂಮಿಯಲ್ಲಿ ನಿಂತು ನೋಡಿದ ದಳವಿ ಅದನ್ನು ಯಾವುದೇ ಅಳುಕಿಲ್ಲದೆ ಹೇಳಿ ಮುಗಿಸಿದರು. ಅಷ್ಟೇ.

ಯಾವಾಗಲೂ ಭಾರತದ ವಿರುದ್ಧ ಕತ್ತಿ ಮಸೆಯುವ ಪ್ರಮುಖ ರಾಷ್ಟ್ರಗಳೇ ಎರಡು. ಅದರಲ್ಲಿ ಪಾಕಿಸ್ತಾನದ ಅಧ್ಯಾಯವಂತೂ ತಿಳಿದದ್ದೇ, ಆದರೆ ಚೀನಾದ ಬಗ್ಗೆ ಈಗಲೂ ಭಾರತೀಯರು ಅನೇಕರಿಗೆ ಅರಿವಿಲ್ಲ. ನಮ್ಮ ಸಾಲು ಸಾಲು ಸರ್ಕಾರಗಳು ಇದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಸೋತಿವೆ. ಹಾಗೆಂದೇನು ಅನ್ಯ ದೇಶದ ಮೇಲೆ ಸರ್ಕಾರ ತನ್ನ ಪ್ರಜೆಗಳನ್ನು ಎತ್ತಿಕಟ್ಟಬೇಕಿಲ್ಲ, ಸತ್ಯವನ್ನು ಅರುಹಿದ್ದರೆ ಸಾಕಾಗಿತ್ತು, ಅದನ್ನೂ ಮಾಡಿಲ್ಲವೆನ್ನುವುದು ಖೇದಕರ. ಭಾರತ ಈವತ್ತಿಗೂ ತನ್ನ ಪ್ರಜೆಗಳಿಗೆ ಗಡಿಯ ವಿಚಾರದಲ್ಲಿ ಅನೇಕ ವಿಚಾರಗಳನನ್ನು ಮುಚ್ಚಿಟ್ಟಿದೆ. ಅದರಲ್ಲೂ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿಯ ವಿಚಾರದಲ್ಲಿ ಇನ್ನೂ ಅನೇಕ ಗೊಂದಲಗಳಿವೆ. ಈ ಗೊಂದಲಗಳಿಂದಾಗಿಯೇ ನಮ್ಮ ಸೈನಿಕರು ಚೀನಾ ಸೈನಿಕರೊಂದಿಗೆ ಹಲವಾರು ಬಾರಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ವಿಸ್ತರಣಾವಾದದ ಭೂತ ಹತ್ತಿಸಿಕೊಂಡಿರುವ ಚೀನಾ ಯಾವುದಕ್ಕೂ ಯಾರಿಗೂ ಬಗ್ಗದೆ ತನ್ನ ಸುತ್ತಲಿನ ಎಲ್ಲಾ ದೇಶಗಳ ಜೊತೆಗೂ ಗಡಿ ಸಂಘರ್ಷ ಹೊಂದೇ ಇದೆ.

ನಮ್ಮ ನೆರೆಯ ದೇಶಗಳ ವಿಷಯವೇನೇ ಇದ್ದರೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ರಕ್ತಪಾತವಿಲ್ಲದೆ ಬಂದಿದ್ದು ಸಂತೋಷಪಡುವ ವಿಚಾರ, ಆದರೆ ಅದೇ ಗುಂಗಿನಲ್ಲಿ ನಮ್ಮ ನೇತಾರರು ಸ್ವಾತಂತ್ರ್ಯದ ಬೆಲೆಯನ್ನೇ ಅರ್ಥ ಮಾಡಿಕೊಳ್ಳದಾದರು. ರಕ್ತಪಾತಗಳಾಗುವ ಸಾಧ್ಯಾಸಾಧ್ಯತೆ ನಮ್ಮ ನಾಯಕರಿಗೆ ಅರಿವಿಗೆ ಬರಲೇ ಇಲ್ಲ. ಶಾಂತಿಮಂತ್ರ, ತಟಸ್ಥ ಧೋರಣೆ, ಅಲಿಪ್ತ ನೀತಿಗಳೊಂದಿಗೆ ಇದ್ದರೆ ನಮ್ಮ ತಂಟೆಗೆ ಯಾರು ಬರಲಾರರು ಎಂಬ ಭ್ರಮಾ ಲೋಕ ಸೃಷ್ಟಿಸಿಕೊಂಡು ಕೂತರು. ಸ್ವಾತಂತ್ರ್ಯ ಕೊಡಿಸುವಲ್ಲಿ ಸಫಲವಾದ ಶಾಂತಿಮಂತ್ರ ಸ್ವಾತಂತ್ರ್ಯಾನಂತರದಲ್ಲಿ ಹಳ್ಳ ಹಿಡಿದು ಅನೇಕ ಅನಾಹುತಗಳನ್ನು ಸೃಷ್ಟಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಅವುಗಳ ಪೈಕಿ ಚೀನಾದ ಅತಿಕ್ರಮಣವೂ ಒಂದು. ಮನುಷ್ಯನೊಬ್ಬ ಒಳ್ಳೆಯವನಾಗಿ ಬದುಕಬೇಕಾದರೆ ಬರಿಯ ಒಳ್ಳೆಯತನವನ್ನು ನೆಚ್ಚಿಕೊಂಡು ಮಾತ್ರ ಕುಳಿತುಕೊಳ್ಳುವುದು ಎಂದೆಂದಿಗೂ ಸಾಲದು, ಕೆಟ್ಟವರಿಂದ ಸದಾ ದೂರವುಳಿಯುವ ಗರ್ವ, ಛಾತಿ ಅವನಿಗೆ ಇರಬೇಕು. ಅಷ್ಟಿರಬೇಕಾದರೆ ಕೆಟ್ಟದ್ದೇನೂ ಎನ್ನುವುದೂ ಅವನಿಗೆ ತಿಳಿದಿರಬೇಕು. ಭಾರತದ ವಿಚಾರದಲ್ಲಿ ಇದು ಹಾಗಲಿಲ್ಲ, ವಿರುದ್ಧವಾಗಿತ್ತು.ಈ ವಿಚಾರ ಸದರಿ ಪುಸ್ತಕದಲ್ಲೂ ವಿಸ್ತಾರವಾಗಿ ಹರಿಯುತ್ತದೆ.

ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಬಂದ ಖುಷಿಗೋ ಎಂಬಂತೆ ನಮ್ಮವರು ಸ್ವಾತಂತ್ರ್ಯ ಬರುವ ಹೊತ್ತಿಗೆ ಭಾರತದ ಉಪಖಂಡ ಎಂದೆಂದೂ ಮರೆಯದ ದೇಶ ವಿಭಜನೆಯ ರಕ್ತಪಾತ ಮಾಡಿ ಮುಗಿಸಿಯಾಗಿತ್ತು. ಭಾರತೀಯರ ಮನಸ್ಥಿತಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದ ಬ್ರಿಟೀಷ್ ದೊರೆಗಳು 'ನಿಮ್ಮ ಕರ್ಮ' ಎಂದು ಕೈ ಕೊಡವಿಕೊಂಡು ಇಲ್ಲಿಂದ ಹೊರಟು ಹೋಗಿದ್ದರು.

ನಮಗೆ ಸ್ವಾತಂತ್ರ್ಯ ಬಂದು ಎರಡು-ಮೂರು ವರ್ಷಗಳ ಅಂತರಕ್ಕೆ ಚೀನಾ ತನ್ನ ಮತ್ತು ಭಾರತದ ನಡುವೆ ಇದ್ದ ಟಿಬೆಟ್ ಅನ್ನು ನುಂಗಿ ನೊಣವಿಕೊಂಡಾಗ ಭಾರತ ಸರ್ಕಾರ ಅದಕ್ಕೆ ಪ್ರತಿಕ್ರಿಯಿಸುವುದಿರಲಿ ಒಂದು ಆತಂಕವನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಹಾಕಲಿಲ್ಲ. ಇದನ್ನು ಹೇಡಿತನ ಎಂದು ಬಗೆಯಿತು ಚೀನಾ. ಖರಾರುವಕ್ಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡ ಚೀನಾ ಮುಂದೆ 1962ರಲ್ಲಿ ಭಾರತಕ್ಕೆ ಯಾವುದೇ ಸುಳಿವು ಕೊಡದೆ ಮೈ ಮೇಲೆ ಬಿದ್ದಿತು, ಭಾರತದ ಸಹನೆಗೆ, ಶಾಂತಿಮಂತ್ರಕ್ಕೆ ಸರಿಯಾಗೇ ಪೆಟ್ಟು ಕೊಟ್ಟಿತ್ತು. ಅವರ ತಯಾರಿಗಳನ್ನು, ಭಾರತ ಸರ್ಕಾರದ ಉಡಾಫೆಯನ್ನೂ ಒಂದೊಂದಾಗಿ ತೆರೆದಿಡುತ್ತಾ ಸಾಗುತ್ತಾರೆ ದಳವಿ.

ಅಲ್ಲಿ ವಿವರಿಸಿರುವ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ಗಡಿ ಹಿಮದ ಕಾಡುಗಳಲ್ಲಿ ಹೈರಾಣಾಗಿ ಪ್ರಾಣ ಬಿಡುವ ಕೆಲವು ಸನ್ನಿವೇಶಗಳು, ಎದುರಾಳಿಗಿಂತ ಹಸಿವು, ಚಳಿಗಳೇ ನಮ್ಮ ಯೋಧರನ್ನು ರೇಜಿಗೆಬ್ಬಿಸಿದ ಅನೇಕ ಸನ್ನಿವೇಶಗಳು ನಮ್ಮೊಳಗೇ ಅಸಹನೀಯತೆಯನ್ನುಂಟು ಮಾಡುತ್ತವೆ. ಯೋಧನೊಬ್ಬ ಗುಹೆಯೊಳಗೆ  ಜಾಗ ಸಿಗದೇ ರಾತ್ರಿಯಿಡೀ ಹೊರಗೆ ಧೋ ಎಂದು ಸುರಿಯುತ್ತಿದ್ದ ಮಂಜಿನಲ್ಲಿ ಕುಳಿತು ಬೆಳಗಾಗುವ ಹೊತ್ತಿಗೆ ಪ್ರಾಣವನ್ನೇ ಬಿಟ್ಟು ಬಿಡುವ ಒಂದು ಕಡೆ ಪ್ರಸ್ತಾವವಿದೆ, ಪ್ರಾಣವನ್ನೇ ತೆಗೆಯುವಷ್ಟು ತೀಕ್ಷ್ಣ ಚಳಿಯಿರುವೆಡೆಯಲ್ಲಿ ಸರಿಯಾದ ಬೂಟು, ಬಟ್ಟೆಗಳನ್ನು ಕೊಡದೆ ಯುದ್ಧಮಾಡಲು ನಮ್ಮ ಸೈನಿಕರನ್ನು ಅಟ್ಟಿದ್ದು ಸರ್ಕಾರಕ್ಕೆ ಮುಂದಾಲೋಚನೆ, ನಿಜ ಸ್ಥಿತಿಯ ಅರಿವು ಯಾವುದೂ ಇರಲಿಲ್ಲವೆನ್ನುವುದನ್ನು ಸಾಬೀತು ಮಾಡುತ್ತದೆ.

ಅನ್ನವೆಂದರೆ ಆಗದ ರೊಟ್ಟಿಯ ಬಹುಪ್ರಿಯರಾದ ಪಂಜಾಬಿಗಳು ಅರುಣಾಚಲದ ಹಿಮ ಪರ್ವತಗಳ ಟೆಂಟುಗಳಲ್ಲಿ ಅನ್ನ ಬೇಯಿಸಿಕೊಂಡು ತಿನ್ನುತ್ತಿದ್ದರಂತೆ, ಅದ್ಯಾಕೆ ಹೀಗೆ ಅನ್ನುವ  ಬ್ರಿಗೇಡಿಯರ್  ಪ್ರಶ್ನೆಗೆ 'ರೊಟ್ಟಿಯ ಕಾವಲಿಯನ್ನು ಈ ಪರ್ವತಕ್ಕೆ ಹೊತ್ತು ತರಲು 3-4 ಸೈನಿಕರ ಅಗತ್ಯವಾದರೂ ಉಂಟು ಅದರ ಬದಲು ನಾವು ಅವರ ಕೈಲೇ ಮದ್ದು ಗುಂಡುಗಳನ್ನು ಹೊರಿಸಿಕೊಂಡು ಬಂದೆವು' ಅಂದರಂತೆ. ಹೀಗೆ ತಮ್ಮ ಬೇಕು, ಬೇಡಗಳನ್ನು ಬದಿಗೊತ್ತುವ ಸೈನಿಕ ದೇಶಕ್ಕಾಗಿ ಬಡಿದಾಡಿ ಸಾಯಲು ಎಂದೆಂದಿಗೂ ಸನ್ನದ್ಧನಾಗಿರುತ್ತಾನೆ, ಆದರೆ ಆತನನ್ನು ನಡೆಸಿಕೊಳ್ಳಬೇಕಾದ ಸರ್ಕಾರವೂ ಕೂಡ ಅಷ್ಟೇ ಗಂಭೀರವಾಗಿ ಆತನ ಪ್ರಾಣವನ್ನು ಪರಿಗಣಿಸಬೇಕು.

ಧೋಲಾ ಪೋಸ್ಟ್ ಎಂಬ ಸ್ಥಳವೇ ಅರುಣಾಚಲದಲ್ಲಿ ಈ ಯುದ್ಧದ ಕೇಂದ್ರ ಬಿಂದು ಅನ್ನುವುದು ಈ ಪುಸ್ತಕದಿಂದ ನಮಗೆ ಗೊತ್ತಾಗುತ್ತದೆ, ಅದರ ಜೊತೆ ಜೊತೆಗೆ ಅಲ್ಲಿ ಆ ಪೋಸ್ಟ್ ಅನ್ನು ಸ್ಥಾಪಿಸಿದ್ದ ಮಿಲಿಟರಿ ಅಧಿಕಾರಿ ಆ ಪ್ರದೇಶದ ಬಗ್ಗೆ ಅಮೂಲಾಗ್ರವಾಗಿ ಅರ್ಥಮಾಡಿಕೊಂಡಿರಲಿಲ್ಲ ಎನ್ನುವುದು ಕೂಡ. ಆಗಿನ ಪ್ರಧಾನಿ ನೆಹರೂವನ್ನು ಒಪ್ಪಿಸಲು, ಒಲಿಸಿಕೊಳ್ಳಲು ಆಗಿನ ಅನೇಕ ಮಿಲಿಟರಿ ಅಧಿಕಾರಿಗಳು ಸೇನೆಯ ವಿಚಾರದಲ್ಲಿಯೇ ಅನೇಕ ಉಡಾಫೆಯ, ಹಾರಿಕೆಯ ಮಾತುಗಳನ್ನಾಡಿರುವುದು, ಅದರ ನಂತರ ನೆಹರೂ ಸರ್ಕಾರ ಸೈನಿಕರ ಅನೇಕ ಬೇಡಿಕೆಗಳ ಪತ್ರಗಳನ್ನು ಕಸದ ಬುಟ್ಟಿಗೆಸೆದು ಇರುವಷ್ಟರಲ್ಲಿಯೇ ಕಾದಾಡಿ ಎಂದಿದ್ದು ಎಲ್ಲವೂ ಇಲ್ಲಿ ದಾಖಲಾಗಿದೆ. ಶತ್ರು ಪಡೆಗಳ ಕಣ್ಣಿಗೆ ಬಿದ್ದೇವು ಅನ್ನುವ ಭಯದಿಂದ ಚಳಿಗೆ ಮೈ ಕಾಸಿಕೊಳ್ಳಲು ಬೆಂಕಿ ಹಾಕಿಕೊಳ್ಳಲೂ ಹಿಂದೇಟು ಹಾಕುತ್ತಿದ್ದ ನಮ್ಮ ಸೈನಿಕರ ಎದುರಿನಲ್ಲೇ ಧೈರ್ಯದಿಂದ ಚೀನೀ ಸೈನಿಕರು ಬೆಂಕಿ ಹಚ್ಚಿಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದರಂತೆ, ಅದೂ ರಾತ್ರಿಯ ಹೊತ್ತು. ತಮ್ಮ ಇರುವಿಕೆಯನ್ನು ಧೈರ್ಯವಾಗಿ ತೋರಿಸಿಕೊಳ್ಳುತ್ತಿದ್ದ ಪ್ರಪಂಚದ ಮೊದಲ ಯುದ್ಧಭೂಮಿ ಎಂದರೆ ಇದೇ ಇರಬೇಕು!. ಇಷ್ಟೇ ಅಲ್ಲದೆ ಚೀನೀ ಬಣದ ಕೆಲವು ಸೇನಾ ಕಮ್ಯಾಂಡರ್ ಗಳು ಕೆಲವು ಬಾರಿ ಭಾರತೀಯ ಸೀಮಾ ರೇಖೆಯ ಬಳಿಗೆ ಧಾವಿಸಿ ಸ್ಪಷ್ಟ ಹಿಂದಿಯಲ್ಲಿ 'ಇದು ನಮ್ಮ ಸರಹದ್ದು, ಇಲ್ಲಿಂದ ನೀವು ಹಿಂದಕ್ಕೆ ಹೊರಡಿ' ಎಂದು ಘೋಷಣೆ ಹೊರಡಿಸುತ್ತಿದ್ದರಂತೆ. ಅದರರ್ಥ ಚೀನಾ ಭಾರತದ ಮೇಲೆ ಯುದ್ಧ ಸಾರುವುದಕ್ಕಾಗಿಯೇ ತನ್ನದೇ ಕೆಲವು ಸೇನಾಳುಗಳಿಗೆ ಹಿಂದಿ ಕಲಿಸಿತ್ತು, ಹಾಗು ಆ ಯೋಜನೆ ಕಡಿಮೆ ಅಂದರೂ ಎರಡು-ಮೂರು ವರ್ಷಗಳಿಂದಲೇ ಇತ್ತು ಎಂದು. ಯುದ್ಧಕಾಗಿಯೇ ತಯಾರಾಗಿ ಬಂದು ಯುದ್ಧದ ಮುನ್ಸೂಚನೆಯೇ ಇಲ್ಲದ ಸೇನೆಯ ಮೇಲೆ ಬಿದ್ದು ಅವರನ್ನು ಹೊಸಕಿ ಹಾಕಿದ ಭಯಾನಕ ರಕ್ತಸಿಕ್ತ ಅಧ್ಯಾಯಕ್ಕೆ ಚೀನಾ ಕಾರಣವಾಗಿತ್ತು. ಎಂದಿನಂತೆ ನಮ್ಮ ದೇಶದ ನೇತಾರರು ವಿಶ್ವ ಸಂಸ್ಥೆಯ ಮುಂದೆ ಗೋಗರೆಯುತ್ತಿದ್ದರು. ಒಟ್ಟಿನಲ್ಲಿ 'ಹೊಸ ಅಗಸ ಬಟ್ಟೆಯನ್ನ ಎತ್ತಿ ಎತ್ತಿ ಒಗೆದನಂತೆ' ಎನ್ನುವ ಗಾದೆಯಂತೆ ನೆಹರೂ ಹೊಸ ಅಧಿಕಾರ ಕೈಗೆ ಸಿಕ್ಕಾಗ ಎಲ್ಲ ತರಹದ ತಪ್ಪುಗಳನ್ನು ಮಾಡಿದ್ದಾರೆ, ಆದರೆ ಅದಕ್ಕೆ ನಿಜವಾಗಿಯೂ ಬೆಲೆ ತೆತ್ತಿದ್ದು ನಮ್ಮ ದೇಶದ ಅಸಂಖ್ಯ ಜನರು. ಅದು ಸರಿಮಾಡಲಾರದಂತಹ ತಪ್ಪುಗಳ ಪಟ್ಟಿ, ದುರಾದೃಷ್ಟವಶಾತ್ ಇಂದಿಗೂ ನಾವು ಆ ತಪ್ಪುಗಳ ಬಲೆಯೊಳಗೆ ಸಿಲುಕಿಕೊಂಡಿದ್ದೇವೆ.

ಹಾಗಂದ ತಕ್ಷಣ ಈ ಪುಸ್ತಕ 1962ರ ಚೀನಾ ಅತಿಕ್ರಮಣದ ಎಲ್ಲ ಆಯಾಮಗಳನ್ನು ವಿವರಿಸಿದೆ ಎಂದರ್ಥವಲ್ಲ, ಆ ಕೃತಿ ಯುದ್ಧ ಕಾಲದ ದೇಶದ ಸಮಗ್ರ ಕ್ಷೇತ್ರಗಳ ದೃಷ್ಟಿಕೋನದಿಂದ ಬರೆದುದ್ದಲ್ಲ, ಮಿಲಿಟರಿ ಕ್ಷೇತ್ರದೊಳಗೇ ಲಡಾಕ್ ನ ಗಡಿಯಲ್ಲಿ ನಡೆದ ಚೀನಾ ಠಳಾಯಿಸಿದ್ದನ್ನು ಎಲ್ಲೂ ನಮೂದು ಮಾಡುವುದಿಲ್ಲ. ಅರುಣಾಚಲ ಪ್ರದೇಶದ ತವಾಂಗ್, ಮೀಸಾಮಾರಿ ಪ್ರದೇಶಗಳ ಹಿಮ ಕಂದರಗಳಲ್ಲಿ ನಡೆದ ಚೀನಾ ಚಿತಾವಣೆಯನ್ನು, ನಮ್ಮ ವೀರ ಯೋಧರು ಆ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಯಾರನ್ನೂ ದೂರದೇ ಪ್ರಚಂಡ ಚಳಿಯಲ್ಲಿ ನಡುಗಿ ಶತ್ರುಗಳೆದುರಾದರೂ ಅವರಿಗೆ ಪ್ರತಿರೋಧವೊಡ್ಡಲು ಅವಶ್ಯ ಪ್ರಮಾಣದ ಗುಂಡುಗಳಿಲ್ಲದೆ ಬಂದೂಕಿನ ಮೊನೆಯಲ್ಲಿ ತಿವಿಯುತ್ತಲೇ ಹುತಾತ್ಮರಾದ  ಸೈನಿಕರ ಬಗ್ಗೆ, ಹೇಳಬೇಕೆಂದರೆ ತಮ್ಮ ಕಣ್ಣರಿವಿಗೆ ಬಂದಷ್ಟನ್ನೇ ದಳವಿಯವರು ಬರೆದು ಮುಗಿಸಿದ್ದಾರೆ. ಆದರೆ ಏನು ಹೇಳಬೇಕೋ ಅದನ್ನು ಕರಾರುವಕ್ಕಾಗಿ ಹೇಳಿ ಮುಗಿಸಿದ್ದಾರೆ. ಮೊದಲೇ ಹೇಳಿದಂತೆ ಹೊಸ ಅಧಿಕಾರ ರಾಜಕಾರಣಿಗಳ ಕೈಲಿ ಯಾವ್ಯಾವ ಆಟ ಆಡಿಸಿತು, ಕೆಲವು ಕಡೆ ಅಂದಿನ ರಾಜಕಾರಣಿಗಳು ತಮಗೆ ಕೊಟ್ಟಿದ್ದ ಸ್ಥಾನ ನಿಭಾಯಿಸಲು ಎಷ್ಟು ಅಸಮರ್ಥರಾಗಿದ್ದರು ಎನ್ನುವುದನ್ನು ಎಳ್ಳಷ್ಟೂ ಅಳುಕಿಲ್ಲದೆ ಹೇಳಿ ಮುಗಿಸಿದ್ದಾರೆ ದಳವಿ.

Tawang War Memorial, Photos, History, Reviews, Information & Guide
1962ರ ಭಾರತ-ಚೀನಾ ಯುದ್ಧ ಸ್ಮಾರಕ, ತವಾಂಗ್, ಅರುಣಾಚಲ ಪ್ರದೇಶ.
ಅಂದಹಾಗೆ ದಳವಿಯವರು ಇದನ್ನು ಬರೆದದ್ದು ಅವರು ಸೆರೆಯಾಳಾಗಿ ಸಿಕ್ಕು ಬಂಧಿಸಿ ಚೀನಾಗೆ ಕರೆದೊಯ್ದಾಗ, ಚೀನಾದ ಸರೆಮನೆಯಲ್ಲಿ. ಚೀನಿಯರದ್ದೇ ಪೆನ್ನು, ಪೇಪರುಗಳಲ್ಲಿ ಭಾರತೀಯ ರಾಜಕೀಯ ನೇತಾರರು ಮಿಲಿಟರಿ ವಿಚಾರದಲ್ಲಿ ಉಂಟು ಮಾಡಿಕೊಂಡ ಅನಗತ್ಯ ಎಡವಟ್ಟುಗಳನ್ನು ಖಂಡ ತುಂಡವಾದ ಕಟು ಪದಗಳನ್ನು ಬಳಸಿಯೇ ಬರೆದರು ದಳವಿಯವರು!. ಅದಾದ ಮೇಲೆ ಅವರನ್ನು ಸೆರೆಯಿಂದ ಬಿಡಿಸಿ ಕೋಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಕರೆತಂದಾಗ ನಮ್ಮ ಸೇನೆಯೇ ಅವರನ್ನು ನಂಬಲಿಲ್ಲವಂತೆ. ಚೀನಾದಲ್ಲಿ ಬ್ರೈನ್ ವಾಷ್ ಆಗಿರಬಹುದು ಎಂಬ ಊಹೆಯ ಆಧಾರದ ಮೇಲೆ ಖಡ್ಡಾಯ ರಜೆಯ ಮೇಲೆ ಅವರನ್ನು ಮನೆಯಲ್ಲಿ ಕುಳ್ಳಿರಿಸಿತಂತೆ ಸರ್ಕಾರ. ನಂತರ ದಳವಿಯವರನ್ನು ತೀರಾ ಹತ್ತಿರದಿಂದ ಬಲ್ಲವರಾಗಿದ್ದ ಕೆಲವು ಸೇನಾ ವಕ್ತಾರರು ಆ ಯುದ್ಧದ ಸೋಲಿನ ಕಾರಣಗಳ ಮೇಲೆ ವರದಿಯೊಂದನ್ನು ಬರೆದು ಸರ್ಕಾರಕ್ಕೆ ಕಳಿಸಿದರಂತೆ. ಆ ವರದಿಯಲ್ಲಿನ ಎಷ್ಟು ಅಂಶಗಳು ಅನುಷ್ಠಾನವಾದವೂ, ಇಲ್ಲ ಎನ್ನುವುದು ಆಗಿನ ಸೇನೆಗೆ ಹಾಗು ದೇವರಿಗೆ ಗೊತ್ತು. ಅದಾದ ಒಂದು ವರ್ಷದೊಳಗಾಗಿ ನೆಹರೂ ತೀರಿಕೊಂಡರು.

ದುರಂತವೆಂದರೆ ಅಂದು ಚೀನಾದೊಂದಿಗಿನ ಸೆಣಸಾಟದಲ್ಲಿ ಆ ಹಿಮದಲ್ಲಿ ಸಮಾಧಿಯಾದ ನನ್ನ ವೀರ ಯೋಧರಿಗೆ ಗೌರವಾದರಗಳಿಂದ ಅಂತ್ಯ ಕ್ರಿಯೆಗಳಾಗಲು ಸಾಧ್ಯವಿರಲಿಲ್ಲ, ಮೃತ ದೇಹಗಳನ್ನ ಹೊತ್ತು ನರಕ ಸದೃಶ ಪರ್ವತಗಳಲ್ಲಿ ನಡೆಯುವುದೂ ಸುಲಭದ ಮಾತಾಗಿರಲಿಲ್ಲ, ಹಾಗು ಹಾಗೆ ಹೊತ್ತು ತರಲು ಅವಶ್ಯ ಸೈನಿಕರ ಸಂಖ್ಯೆಯೂ ಅಲ್ಲಿರಲಿಲ್ಲ. ಚೀನಾವನ್ನು ಹಣಿಯಲು ಹಿಮ ಪರ್ವತಗಳಿಗೆ ಬರಿ ಕೈಯಲ್ಲಿ ಅಟ್ಟಿದ ಸರ್ಕಾರ ಅವರ ಪ್ರಾಣದ ಜೊತೆಗೆ ಅಕ್ಷರಶಃ ಚೆಲ್ಲಾಟವಾಡಿತು. ಯಾರ ಯಾರದೋ ಮಾತುಗಳಿಗೆ ಮಣೆ ಹಾಕಿ ಸತ್ಯ ಸಂಗತಿಗಳನ್ನು ಅರಿಯಲು ಅಸಮರ್ಥವಾಗಿ ಚೀನಾದ ಗುಂಡುಗಳಿಗೆ ಆಹಾರ ಒದಗಿಸಿತು. ಆ ಕೋಪ ಇನ್ನೂ ಭಾರತೀಯರ ಹೃದಯದ ಮೂಲೆಯಲ್ಲಿಇದ್ದೇ ಇದೆ. ನನ್ನ ದೇಶವನ್ನು ರಕ್ಷಿಸಲು ಹಿಮ ಪರ್ವತಗಳನ್ನು ಏರಿ ಹೊರಟ ಅಸಂಖ್ಯ ಮಹಾಸೇನಾನಿಗಳು, ವೀರ ಯೋಧರು ಹಿಂದಿರುಗಿ ಬರಲೇ ಇಲ್ಲ. ಅಲ್ಲೇ ಕಾಡು ಹೆಣಗಳಾಗಿಹೋದರು. ಕಡೆ ಪಕ್ಷ ಅವರ ಮೃತ ದೇಹಗಳನ್ನಾದರೂ ತಂದು ಗೌರವ ಸೂಚಿಸಲಾಗಲಿಲ್ಲ. ಆ ಕಾರಣಕ್ಕೆ ಭಾರತೀಯನಾಗಿ ಇಂದಿಗೂ ನನಗೆ ಖೇದವಿದೆ.

ದಳವಿಯವರ ಆ ಕೃತಿಯಲ್ಲಿ ಇನ್ನೂ ಅನೇಕ ವಿಷಯಗಳಿವೆ, ಬಿಡುವಾದಾಗ ಓದಿಕೊಳ್ಳಿ. ಕನ್ನಡಕ್ಕೆ ರವಿಬೆಳಗೆರೆಯವರು ಅನುವಾದಿಸಿದ್ದಾರೆ. ಅಲ್ಲಿ ಅವರು ಇತರೆ ಅನೇಕ ಪೂರಕ ಅಂಶಗಳನ್ನು ನಮೂದು ಮಾಡಿದ್ದಾರೆ. ಅದೇ ನೀವು ಆ ಮಹಾಯೋಧನಿಗೆ ಅರ್ಪಿಸುವ ಶ್ರದ್ಧಾಂಜಲಿ.

-0-

ಶನಿವಾರ, ಮೇ 16, 2020

ಬೂತ್ ಲೆವೆಲ್ಲು - ಭ್ರಾತೃತ್ವ

ಕಾಲದಿಂದ ಕಾಲಕ್ಕೆ ನಮ್ಮ ದೇಶದಲ್ಲಿ ಚುನಾವಣೆಗಳು ನಡೆಯುತ್ತಿವೆ, ಜನಗಳು ಪಾಲ್ಗೊಳ್ಳುತ್ತಿದ್ದಾರೆ. ದೇಶದೊಳಗೆ ಆರ್ಥಿಕ ಪರಿಸ್ಥಿತಿ, ಚುನಾವಣೆಯ ಪರಿಕಲ್ಪನೆ ಹೆಚ್ಚಿನ ಜನರಿಗೆ ಉತ್ತಮವಾಗಿರುವುದರಿಂದ ಹಿಂದಿಗಿಂತಲೂ ಈಗ ಹೆಚ್ಚೆಚ್ಚು ಜನ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದು ಮತದಾನ ಮಾಡುವುದಾಗಿರಬಹುದು, ಚುನಾವಣೆಗೆ ನಿಲ್ಲುವುದಿರಬಹದು, ಚುನಾವಣೆಯ ಪ್ರಚಾರವಿರಬಹುದು ಇಲ್ಲೆಲ್ಲಾ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಜನ ಭಾಗವಹಿಸುತ್ತಿದ್ದಾರೆ. ದೇಶದ ಪ್ರಜಾತಂತ್ರದ ಹಬ್ಬವೆನಿಸಿಕೊಳ್ಳುವ ಚುನಾವಣೆಯಲ್ಲಿ ಹೆಚ್ಚೆಚ್ಚು ಜನ ಪಾಲ್ಗೊಳ್ಳುವುದು ದೇಶ ತಮ್ಮ ಭವಿಷ್ಯತ್ತಿನ ಬಗ್ಗೆ ಎಷ್ಟು ಕಾಳಜಿ ವಹಿಸಿದೆ ಎಂಬುದನ್ನು ಅಳೆಯುವುದಕ್ಕೊಂದು ಮಾಪನ ನಿಜ, ಆದರೆ ಅದು ಎಲ್ಲ ಕಾಲಗಳಲ್ಲೂ ನಿಜವಲ್ಲ. ಭಾರತದ ಈಗಿನ ಮಟ್ಟಿಗಂತೂ ಆ ಅನಿಸಿಕೆ ಸತ್ಯವಾಗಿರಲಿಕ್ಕೆ ಸಾಧ್ಯವಿಲ್ಲವೇ ಇಲ್ಲ.

ದುಡ್ಡಿನಾಸೆಗೆ, ಜಾತಿ ಓಲೈಕೆಗೆ, ಧರ್ಮ ಪ್ರಚಾರಕ್ಕೂ ಚುನಾವಣೆಗಳು ವೇದಿಕೆಗಳಾಗಿ ದೇಶದೊಳಗೆ ಗುಂಪುಗಳಾಗಿರುವುದನ್ನು ಭಾರತ ಸ್ವಾತಂತ್ರ್ಯ ಕಂಡಾಗಿನಿಂದ ನಾವು ಕಂಡುಕೊಂಡೇ ಬಂದಿದ್ದೇವೆ. ರಾಜಕೀಯ ವಕ್ತಾರರು ಜಾತಿಯನ್ನೋ, ಧರ್ಮವನ್ನೋ, ಭಾಷೆಯನ್ನೋ ಹೆಕ್ಕಿಕೊಂಡು ತಮ್ಮ ಚುನಾವಣೆಯಲ್ಲಿ ಪ್ರಚಾರದ ಸರಕನ್ನಾಗಿ ಮಾಡಿಕೊಂಡು ಭಾಷಣ ಬಿಗಿದು, ಚುನಾವಣೆಯ ನಂತರ ಅತ್ತ ತಿರುಗಿಯೂ ನೋಡದೆ ತಮ್ಮ ಕೆಲಸಗಳಲ್ಲಿ ತಾವು ಮಗ್ನರಾಗಿರುವುದೂ ನಾವೇನು ಕಾಣದ್ದಲ್ಲ. ತೀರಾ ಇತ್ತೀಚಿಗೆ ಚುನಾವಣೆಯಲ್ಲಿ ವಕ್ತಾರರು ಹಾಕುವ ಬಿಗಿಯಾದ ಪಟ್ಟು ಎಂದರೆ ಬೂತ್ ಲೆವೆಲ್ಲಿನ ಪಕ್ಷ ಸಂಘಟನೆ!. ಬೂತ್ ಲೆವೆಲ್ಲಿನ ಪಕ್ಷ ಸಂಘಟನೆಯ ಮಾರ್ಗ ಸದ್ದರಿಯದೇ ನಮ್ಮ ಸಂವಿಧಾನದ ಮೂಲ ಆಶಯಕ್ಕೆ ಬಲವಾದ ಪೆಟ್ಟು ಕೊಡುತ್ತಿದೆ. ಅತಿಶಯೋಕ್ತಿ ಎನಿಸಿದರೂ ಇದು ಸುಳ್ಳಲ್ಲ. ಇದುವರೆವಿಗೂ ಅಷ್ಟಾಗಿ ಯಾರು ಗಮನಿಸದ ವಿಚಾರವೋ ಏನೋ?. ಯಾರೂ ಇದರ ಬಗ್ಗೆ ಸೊಲ್ಲೆತ್ತಲಾರರು, ಪ್ರಜಾ ಪ್ರಭುತ್ವ ಸಂಖ್ಯಾ ಬಲದ ಆಟ ಎನ್ನುವುದು ಎಲ್ಲರಿಗೂ ಗೊತ್ತಿರುವುದೂ ಈ ದಿವ್ಯ ಮೌನಕ್ಕೆ ಕಾರಣವೇನೋ? ಇರಬಹುದು!.

ರಾಜಕೀಯದ ಮತಯಾಚನೆಗೆ ಇರುವ ದಾರಿಗಳನ್ನೆಲ್ಲ ಒಟ್ಟಾಗಿ ಪಟ್ಟಿ ಮಾಡಿದರೆ ಕೊನೆಯಿಂದ ಎರಡನೇ ಸ್ಥಾನಕ್ಕೆ ನಿಲ್ಲುವುದು ಬೂತ್ ಲೆವೆಲ್ಲು. ಬೂತ್ ಲೆವೆಲ್ಲಿನ ಪಕ್ಷ ಸಂಘಟನೆಯಲ್ಲಿ ಗ್ರಾಮ ಗ್ರಾಮಗಳನ್ನೂ ಗಲ್ಲಿ ಗಲ್ಲಿಗಳನ್ನು ರಾಜಕೀಯ ಸಿದ್ಧಾಂತಗಳ ಕೇಂದ್ರವನ್ನಾಗಿಸಲಾಗುತ್ತದೆ. ಇದು ಚುನಾವಣೆಯ ಸಮಯದಲ್ಲಿ ಮಾತ್ರ ನಡೆಯುವುದಾಗಿದ್ದರೆ ಸುಮ್ಮನಿರಬಹುದಾಗಿತ್ತೇನೋ, ಆದರೆ ಈ ರೀತಿಯ ಸಂಘಟನೆ ಚುನಾವಣೆಯ ನಂತರ ಮಾಡುವ ಅನಾಹುತವೇ ಹೆಚ್ಚು. ಸೇನೆಯ ಕುರಿತು ಒಂದು ಮಾತಿದೆ 'ಸರ್ಕಾರ ಸೇನೆಗೆ ಸೇರಿಸಿಕೊಳ್ಳುವಾಗ ಮೆದುಳು ಕಿತ್ತುಕೊಂಡು ಕೈಗೆ ಬಂದೂಕು ಕೊಡುತ್ತದೆ, ಸೇವೆ ಮುಗಿದ ನಂತರ ತನ್ನ ಬಂದೂಕನ್ನು ತಾನು ಹಿಂಪಡೆಯುತ್ತದೆ. ಆದರೆ ಮೆದುಳನ್ನು ಹಿಂತಿರುಗಿಸುವುದನ್ನು ಮರೆಯುತ್ತದೆ' ಎಂದು. ಇಲ್ಲೂ ಥೇಟ್ ಹಾಗೆಯೇ. ಪಕ್ಷಗಳು ಸಿದ್ಧಾಂತಗಳನ್ನು ಪ್ರಜೆಗಳ ಮುಂದೆ ಕೊಂಡೊಯ್ಯುವುದು ಒಂದು ಕಡೆಯಾದರೆ ಆ ಸಿದ್ಧಾಂತವೇ ನಮ್ಮ ಜೀವನಾಡಿ ಎಂಬಂತೆ ಬಿಂಬಿಸುವುದು ಈ ಕಾಲದ ಪಕ್ಷ ಸಂಘಟನೆಗಳಲ್ಲಿ ಎದ್ದೆದ್ದು ಕಂಡು ಬರುತ್ತಲೇ ಇದೆ.

The Constitution of India (Preamble) that guarantees Justice ...
ಭಾರತದ ಸಂವಿಧಾನದ ಮುನ್ನುಡಿ ಪುಟ


ಚುನಾವಣೆಗೆಂತಲೇ ತಮ್ಮ ಸಿದ್ಧಾಂತಗಳನ್ನು ಧಾರೆಯೆರೆಯುವ ಪಕ್ಷಗಳು ಚುನಾವಣೆಯ ನಂತರ
ಅವುಗಳ ಸಿದ್ಧಾಂತಗಳನ್ನು ಕಿತ್ತುಕೊಂಡು ಹೋಗಲಾರವು. ಆ ಸಿದ್ಧಾಂತಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬಿಸಿರಕ್ತದ ಪ್ರಜೆಗಳು ಅದೇ ಊರಿನ ಅದೇ ಗಲ್ಲಿಯ ಬೇರೆ ಸಿದ್ಧಾಂತಗಳ ಅನುಯಾಯಿಗಳ ಜೊತೆ ಹೊಂದಿಕೊಳ್ಳುವುದೇ ದುಸ್ತರವಾಗುತ್ತದೆ. ಈಚೀಚಿನ ವರ್ಷಗಳಲ್ಲಿ ಇದಕ್ಕಾಗಿಯೇ ಜಗಳಗಳು, ಹೊಡೆದಾಟಗಳು, ಕೊಲೆಗಳೇ ನಡೆದಿವೆ. ಒಂದೇ ಊರಿನಲ್ಲಿರುವರು ಭ್ರಾತೃತ್ವ ಭಾವನೆಯಿಂದ ಇರಬೇಕಾದ್ದು ಸಮಂಜಸ, ಆದರೆ ಇಲ್ಲಿ ಇದ್ದ ಆ ಭಾವನೆಯನ್ನು ಚುನಾವಣೆಗೆಂದು ಕದಡಿದವರು ಯಾರು?. ಇದು ಸಂವಿಧಾನದ ಮೂಲ ಭಾವನೆಗೆ ಮರ್ಮಾಘಾತ ನೀಡುತ್ತಿರುವುದು ನಿಜವಲ್ಲವೆ?. ಈ ದೃಷ್ಟಿಕೋನದಲ್ಲಿ ಜನರು ಏಕೆ ಯೋಚಿಸುತ್ತಿಲ್ಲ?. ದುರಂತವಲ್ಲವೇ. ನಮ್ಮ ಹೆಮ್ಮೆಯ ಭಾರತವೇ ಹಾಗೆ. ಮೂಲ ತೊಂದರೆಯ ತಂಟೆಗೆ ಹೋಗುವುದಿಲ್ಲ, ಮೂಲ ತೊಂದರೆಯಿಂದ ಉಂಟಾದ ಸಣ್ಣ ಪುಟ್ಟ ತೊಂದರೆಗಳನ್ನೇ ಬಗೆಹರಿಸಿಕೊಳ್ಳುತ್ತಾ ಮೂಲ ತೊಂದರೆಯನ್ನು ಮತ್ತೊಂದು ಭುಜದ ಮೇಲೆ ಹೊತ್ತು ಸಲಹುತ್ತಾ ಬರುವುದು ನಮಗೇನು ಹೊಸದಲ್ಲ. ಹಾಗೆ ಮಾಡಿಕೊಂಡೆ ತಲೆಮಾರುಗಳನ್ನು ಕಳೆದಿದ್ದೇವೆ, ಮತ್ತು ಇನ್ನೂ ಅದೇ ತೊಂದರೆಗಳ ಹೊಲೆಗೆಸರಲ್ಲಿ ಸಿಲುಕಿ ಒದ್ದಾಡುತ್ತಲೇ ಇದ್ದೇವೆ.

ಚುನಾವಣೆಯ ಪ್ರಚಾರ ಮತ್ತಾವುದೇ ರೀತಿ ನಡೆಯಲಿ, ಆದರೆ ಈ ಬೂತ್ ಲೆವೆಲ್ಲು ಎಂಬ ಭೂತ ನಮ್ಮ ನಮ್ಮ ನಡುವೆ ತಂದೊಡ್ಡುತ್ತಿರುವ ಮನಸ್ತಾಪಗಳನ್ನು ಅದೆಂದೂ ಸರಿಮಾಡಲಾಗದು. ಇದಕ್ಕೆ ಕೆಲವರು ಪ್ರತ್ಯುತ್ತರ ಕೊಡುವುದೇನೆಂದರೆ, ಪ್ರಜಾತಂತ್ರದ ಝಲಕ್ಕೇ ಅಂತಹುದು ಬೇರೆ ಬೇರೆ ಮನೋಧೋರಣೆಯ ಎಲ್ಲರು ಒಟ್ಟಾದರೆ ಮಾತ್ರ ಹೊಸದೇನನ್ನೋ ಸೃಷ್ಟಿಸುವುದು ಎಂದು. ಸರಿ ಹಾಗಿದ್ದ ಮೇಲೆ ಇಂದು ದೇಶದೊಳಗೆ ನಡೆಯುತ್ತಿರುವ ಗುಂಪುಗಾರಿಕೆಯ ಮೂಲ ಎಲ್ಲಿಯದ್ದು ಎಂದೇನಾದರೂ ಹುಡುಕಿದರೆ ನಿಮಗೆ ಸಿಗುವುದೇ ಇದು. ವಿವಿಧ ಮನೋಧೋರಣೆಯವರ ಅಂಶಗಳನ್ನು ಹೆಕ್ಕಿಕೊಳ್ಳುವುದು ಬೇರೆ, ಅವರ ನಡುವೆ ಇರುವ ಅಂತರಗಳನ್ನು ಬೃಹದಾಕಾರವಾಗಿ ತೋರಿಸಿ ಚುನಾವಣೆಯ ಲಾಭ ಗಿಟ್ಟಿಸಿಕೊಳ್ಳುವುದು ಬೇರೆ. ಅಲ್ಲಿ ಸ್ವಾರ್ಥವಿರುತ್ತದೆ. ಅವರ ಸ್ವಾರ್ಥಗಳಿಗಾಗಿ ನಾವು ಬಡಿದಾಡಿಕೊಳ್ಳುವುದು ಮೂರ್ಖತನವಲ್ಲದೆ ಮತ್ತೇನು?.

ಪ್ರಪಂಚದಲ್ಲಿ ನಡೆದಿದ್ದ ಹಲವು ಕ್ರಾಂತಿಗಳ ಪ್ರತಿಫಲಗಳೂ ನಮ್ಮ ಸಂವಿಧಾನದಲ್ಲಿ ಕಂಗೊಳಿಸುತ್ತವೆ. ಅದರಲ್ಲಿ ಬಹು ಮುಖ್ಯವಾದ ಅಂಗ ಭ್ರಾತೃತ್ವ. ಫ್ರೆಂಚ್ ಕ್ರಾಂತಿಯ ಕೂಸು ಅದು. ಭಾರತದಲ್ಲಿ ಜಾತಿ ಪದ್ಧತಿಗಳಿದ್ದಂತೆ ಅಲ್ಲಿಯೂ ಹಿಂದೊಮ್ಮೆ ಎಸ್ಟೇಟ್ ಪದ್ಧತಿ ಜಾರಿಯಲ್ಲಿದ್ದಿತು. ಫ್ರಾನ್ಸಿನಲ್ಲಿ ಹತ್ತೊಂಹತ್ತನೇ ಶತಮಾನದಲ್ಲಿ ನಡೆದ ದುಡಿಯುವ/ಶ್ರಮಿಕ ವರ್ಗ ಕೇಂದ್ರೀಕೃತ ಕ್ರಾಂತಿಗೆ ಇಡೀ ಪ್ರಪಂಚ ಉಘೇ ಎಂದುಬಿಟ್ಟಿತು. ಫ್ರಾನ್ಸಿನ ರಾಜಾಡಳಿತವೂ ಬಿಗಿ ಸಡಿಲಿಸಿ ಸಾಮಾನ್ಯರೇ ದೇವರು ಎಂದುಬಿಟ್ಟಿತು. ಭ್ರಾತೃತ್ವ ಭಾವನೆ ಎಲ್ಲರಲ್ಲೂ ಮೊಳೆಯಬೇಕು ಎಂದಿತು ಫ್ರೆಂಚ್ ಜನಾಂಗ. ಅಹುದೆಂದು ಒಪ್ಪಿದ ಅಲ್ಲಿನ ಆಡಳಿತ ಅದನ್ನೇ ಕಾನೂನು ಮಾಡಿತು ಕೂಡ. ಅಲ್ಲಿಂದಾಚೆಗೆ ಫ್ರಾನ್ಸಿನ ಈ ಭ್ರಾತೃತ್ವ ಎಂಬ ಪದ ಎಷ್ಟೋ ದೇಶಗಳ ಸಂವಿಧಾನಗಳಲ್ಲಿ ಕಂಗೊಳಿಸಿದೆ. ಆ ಕ್ರಾಂತಿಯಾನಂತರ ಫ್ರಾನ್ಸಿನಲ್ಲಿ ಇನ್ನೂ ಅನೇಕ ಕ್ರಾಂತಿಗಳು ನಡೆದು ಅವರ ಮೊದಲ ಫ್ರೆಂಚ್ ಕ್ರಾಂತಿಯು ಕಲ್ಪಿಸಿಕೊಟ್ಟಿದ್ದ ಅನುಕೂಲತೆಗಳನ್ನು ಗಾಳಿಗೆ ತೂರಿ ಎಷ್ಟೋ ಹೋರಾಟಗಳು ಫ್ರಾನ್ಸಿನ ಭೂಮಿಕೆಯಲ್ಲೇ ನಡೆದಿವೆ. ಈ ಸಿದ್ಧಾಂತಗಳೇ ಹೀಗೆ ಎಲ್ಲ ಕಾಲಕ್ಕೂ, ದೇಶಕ್ಕೂ ಒಪ್ಪಿಗೆಯಾಗುವಂತಹ ಸಿದ್ಧಾಂತಗಳು ಇನ್ನೂ ಹುಟ್ಟೇ ಇಲ್ಲ ಬಿಡಿ.

-o-



ಮಂಗಳವಾರ, ಏಪ್ರಿಲ್ 7, 2020

ಮನೆವಾರ್ತೆ - ಕಿರುಗಾದಂಬರಿ

ಈಚೀಚಿಗೆ ಕನ್ನಡ ಬರಹಗಾರರು ಹೆಚ್ಚೆಚ್ಚು ಬರುತ್ತಿದ್ದಾರೆ, ಬರೆಯುತ್ತಿದ್ದಾರೆ. ಕುವೆಂಪು, ಕಾರಂತರು, ಭೈರಪ್ಪನವರಂತಹವರು ನೆಚ್ಚಿನ ಲೇಖಕರಾದರೂ ನಮ್ಮ ಸಮಕಾಲೀನ ಸಮಸ್ಯೆಗಳಿಗೆ, ಸಂತೋಷಗಳಿಗೆ, ಹಾಸ್ಯಗಳಿಗೆ ಅವರ ಕೃತಿಗಳಲ್ಲಿ ಅಷ್ಟಾಗಿ ಆಸ್ಪದವಿಲ್ಲ. ಇದು ಅವರ ತಪ್ಪಲ್ಲ, ನಮ್ಮ ತಪ್ಪು ಅಲ್ಲ. ವ್ಯಕ್ತಿಯೊಬ್ಬ ಬರೆಯುವ ಕೃತಿ ಅವನ ಕಾಲ, ದೇಶದ ಮೇಲೆಯೂ ನಿಂತಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇ.

ಸಾಮಾನ್ಯವಾಗಿ ಸಾಹಿತ್ಯದಲ್ಲಿ ನಮ್ಮ ಜೀವನದ ಯಾವುದೋ ತೊಂದರೆಗೆ ಉತ್ತರ ಸಿಗಬಹುದು, ಯಾವುದೋ ಸುಪ್ತ ಪ್ರಜ್ಞೆ ಜಾಗೃತವಾಗಬಹುದು, ಯಾವುದೋ ಹೊಸ ವಿಚಾರ ಮನದಟ್ಟಾಗಬಹುದು ಹೀಗೆ ಇನ್ನೂ ಅನೇಕ 'ಆಗುವಿಕೆ'ಗಳು ನಡೆಯಬಹುದು, ಆದರೆ ಆ ಸಾಹಿತ್ಯವನ್ನು ಓದುವಾಗ ಅದರಲ್ಲಿ ನಮ್ಮನ್ನು ನಾವು ಎಷ್ಟರ ಮಟ್ಟಿಗೆ ಸಮೀಕರಿಸಿಕೊಂಡೆವು ಎನ್ನುವ ಆಧಾರದ ಮೇಲೂ ಅದರ ಆಳಕ್ಕಿಳಿದು ಅರ್ಥ ಮಾಡಿಕೊಳ್ಳುವ ವಿಧಾನ ಚಾಲ್ತಿಯಲ್ಲಿದೆ. ಎಲ್ಲರೂ ಇದೇ ವಿಧಾನದಿಂದ ಸಾಹಿತ್ಯ ಓದಬಲ್ಲರು ಎಂದು ಹೇಳಲಾರೆ, ಆದರೆ ಬಹು ಪಾಲಿನ ಜನರು ಇದೇ ಮಾರ್ಗದಲ್ಲಿ ಸಾಹಿತ್ಯವನ್ನು ನೆಚ್ಚಿಕೊಂಡಿರುವುದು ಕಾಲ ಕಾಲಕ್ಕೆ ಸಾಧಿತವಾಗಿದೆ.

ಹಳೆ ತಲೆಮಾರಿನ ಲೇಖಕರ ಸಾಹಿತ್ಯವನ್ನೋದುವಾಗ ಈ ಸಮೀಕರಣದ ತೊಂದರೆಯಿಂದ ನಾನು ಒದ್ದಾಡುತ್ತಿದೆ. ಸಾಹಿತ್ಯದಲ್ಲಿ ಇರಬಹುದಾದ ಕಲ್ಪನಾ ಪಾತ್ರಗಳ ಕುರಿತು 'ಇದು ನಿಜ ಸ್ಥಿತಿಯಲ್ಲಿ ನಡೆದರೆ ?'  ಮುಂದೇನು ಅನ್ನುವ ಧೋರಣೆಯ ಮೇಲೂ ಆ ಪಾತ್ರಗಳನ್ನೂ ಕಂಡದ್ದುಂಟು. ಇವೆಲ್ಲವುಗಳಿಗೂ ಉತ್ತರವನ್ನು ನನ್ನ ಸಮಕಾಲೀನ ಲೇಖಕರು ಈಯಬಲ್ಲರು ಎಂಬ ಆಸೆಯೊಂದು ನನ್ನಲ್ಲಿ ಬಲವಾಯಿತು. ಸಮಕಾಲೀನ ಅದರಲ್ಲೂ ಯುವ ಲೇಖಕರ ಬರಹಗಳು ಈಗಿನ ಕಾಲಕ್ಕೆ ಒಪ್ಪುವ ವಿಚಾರಗಳನ್ನು ಹೆಕ್ಕಿ ತೆಗೆದುಕೊಂಡು ಅದರಮೇಲೆ ಸಾಹಿತ್ಯ ರಚನೆಯಲ್ಲಿ ತೊಡಗುವ ಯಾವುದಾದರೊಂದು ತಾಣವಿದ್ದರೆ ಅದು ನನಗೆ ವರವಾದಂತಾಯಿತು ಎಂದುಕೊಂಡು ಅನ್ವೇಷಣೆಯಲ್ಲಿ ತೊಡಗಿದ್ದ ನನಗೆ ದೊರಕಿದ್ದು 'ಪ್ರತಿಲಿಪಿ' ಎನ್ನುವ ತಾಣ.

ಅಲ್ಲಿ ಸಮಕಾಲೀನ ಸಾಧಕರ ಮಹಾ ಕೂಟವೇ ನೆರೆದಿದೆ, ಆಧುನಿಕ ವಿಚಾರಗಳು ಡಿಜಿಟಲ್ ಮಾಧ್ಯಮದ ಮುಖೇನ ಚರ್ಚೆಗೆ ಬರುತ್ತವೆ, ಜೀವನದ ವಿವಿಧ ರಂಗಗಳಲ್ಲಿರುವವರು ಅಲ್ಲಿ ನಡೆಯುವ ನಿತ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ, ಅಪಾರ ವಿಚಾರ ವಿನಿಮಯ ಅಲ್ಲಿ ನಡೆಯುತ್ತದೆ. ಅದೊಂದು ಮಹಾ ಸಾಗರ,ಅದರೊಳಗೆ ಇಳಿದು ನಮಗೆ ಬೇಕಾದ್ದಷ್ಟೇ ಹೆಕ್ಕಿಕೊಳ್ಳುವುದು ನಮ್ಮ ಧ್ಯೇಯವಾಗಬೇಕು ಅಷ್ಟೇ. ಇಂತಹ ತಾಣದಲ್ಲಿ ಇಂದು ನಾನೂ ಒಂದು ಕಿರುಗಾದಂಬರಿಯನ್ನು ಬರೆದಿದ್ದೇನೆ. ಇದು ಆ ತಾಣದಲ್ಲಿ ನನ್ನ ಚೊಚ್ಚಲ ಬರಹ. ಈ ಕೆಳಗಿನ ಕೊಂಡಿಯ ಸಹಾಯದಿಂದ ಅದನ್ನು ನೀವೂ ಓದಿ.

https://kannada.pratilipi.com/series/wcl6dynn7x8m

ಶುಕ್ರವಾರ, ಮಾರ್ಚ್ 27, 2020

ಚೀನಾದ ಸುಯೋಗದೆಡೆಗೆ ಹೆಜ್ಜೆ

ಗತ್ತು ಬೆದರಿ ಹೋಗಿದೆ, ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ, ಬಡ ರಾಷ್ಟ್ರಗಳಾದಿಯಾಗಿ ಎಲ್ಲರೂ ಕದ ಕವುಚಿಕೊಂಡು ಮನೆಯೊಳಗೆ ಕೂತುಬಿಟ್ಟಿದ್ದಾರೆ. ಕಣ್ಣಿಗೆ ಕಾಣದ ಜೀವಿಯೊಂದು ಪ್ರಪಂಚದ ಮನುಷ್ಯರನ್ನೆಲ್ಲಾ ಇನ್ನಿಲ್ಲದಂತೆ ಭೀತಿಗೊಳಪಡಿಸಿದೆ. ಹಿಂದೆಂದೂ ಕಾಣದಂತಹ ಕರ್ಫ್ಯೂ ಪರಿಸ್ಥಿತಿಯನ್ನು ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಹೇರಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಗಳು ಪಾತಾಳದತ್ತ ಸಾಗಿವೆ, ಉತ್ಪಾದನಾ ರಂಗ ಬಾಗಿಲು ಜಡಿದುಕೊಂಡ ಪರಿಣಾಮ ಉತ್ಪಾದನೆ ಶೂನ್ಯ ತಲುಪಿದೆ. ಅದು ಹಾಗೆಯೇ ಮುಂದುವರೆದರೆ ಸಾಮಗ್ರಿಗಳಿಗೆ ಹಾಹಾಕಾರ ಉಂಟಾಗುವುದು ಆಶ್ಚರ್ಯವೇನಲ್ಲ. ಆಹಾರ ಬೆಳೆಗಳಿಗೆ ಕರ್ಫ್ಯೂವಿನಿಂದ ವಿನಾಯಿತಿ ಇದ್ದರೂ ರಸಗೊಬ್ಬರ ಮತ್ತಿತರ ಕೃಷಿ ಅಗತ್ಯ ವಸ್ತುಗಳು ಉತ್ಪಾದನೆ ನಿಲ್ಲಿಸಿರುವುದರಿಂದ ಕೃಷಿಯ ಮೇಲೆ ಹೊಡೆತ ಬೀಳದಿರದು. ದೇಶದೊಳಗೆ ಆರೋಗ್ಯ ಇಲಾಖೆ ಒಂದು ಹೊರತು ಪಡಿಸಿ ಇನ್ನಾವ ಇಲಾಖೆಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಿರುವುದು ಕಾಣಸಿಗುತ್ತಿಲ್ಲ. ನಮ್ಮ ಭಾರತದೊಳಗೆ ಪ್ಲೇಗು, ದಡಾರ ಬಂದಿದ್ದ ಸ್ವಾತಂತ್ರ್ಯ ಪೂರ್ವ ಕಾಲದ ಸಮಯವನ್ನು ಇದು ನೆನಪಿಸುವಂತಿದೆ. ಇಲ್ಲಿಗೆ ಸುಮಾರು ೧೦೨ ವರ್ಷಗಳ ಹಿಂದೆ ಬಾಂಬೆ ಜ್ವರ ಎನ್ನುವ ಮಾರಣಾಂತಿಕ ಪಿಡುಗೊಂದು ಮುಂಬಯಿನ ಬಂದರಿನ ಮೂಲಕ ಭಾರತಕ್ಕೆ ಕಾಲಿಟ್ಟಿತ್ತಂತೆ, ರೇವು ಪಟ್ಟಣದ ಅಧಿಕಾರಿಗಳು, ಪೊಲೀಸರು ಈ ರೋಗಕ್ಕೆ ಗುರಿಯಾಗಿ ಮೊದಮೊದಲು ಸತ್ತರಂತೆ. ತದನಂತರ ಅದೇ ರೋಗಕ್ಕೆ ತುತ್ತಾಗಿ ಭಾರತದಲ್ಲೇ ಲಕ್ಷಾಂತರ ಜನ ಸತ್ತರಂತೆ.

ಸ್ಪೇನ್ ದೇಶದಲ್ಲಿ ಹುಟ್ಟಿದ ಆ ವೈರಾಣು ಇಂಗ್ಲೀಷರ ಮುಖಾಂತರ ಕಡಲು ದಾಟಿ ಭಾರತಕ್ಕೆ ದಾಂಗುಡಿಯಿಟ್ಟರೂ, ಇಲ್ಲಿ ಬಹು ಬೇಗ ಹರಡಲು ಜಾಲ ಸುಸಜ್ಜಿತವಲ್ಲದೆ ಇರುವ ಮಿತಿಯಲ್ಲೇ ಹರಡಿ ಮರೆಯಾಯ್ತು. ಆಗ್ಗೆ ಬಂದು ಹೋಗುವ, ಜನಗಳನ್ನು ವೇಗವಾಗಿ ಸಾಗಿಸುವ ವಾಹನಗಳಿಲ್ಲದ ಪರಿಣಾಮ ಭಾರತದ ಆದ್ಯಂತ್ಯಕೆ ಸುಲಭವಾಗಿ ಹರಡಲು ಸಾಧ್ಯವಾಗಲಿಲ್ಲವೇನೋ. ಅದಾದ ಮೇಲೆ ಪ್ರಪಂಚವನ್ನು ಯಾವುದು ಈಗಿನಷ್ಟು ವಿಪರೀತಕ್ಕೆ ಕಾಡಿರಲಿಕ್ಕಿಲ್ಲ. ಆಗಾಗ್ಗೆ ಭೇಟಿ ಕೊಟ್ಟು ಹೋದ ಸಾರ್ಸ್, ಹೆಚ್1ಎನ್1, ನಿಫಾ ವೈರಸ್ಸುಗಳು, ಹಂದಿ ಜ್ವರ, ಹಕ್ಕಿ ಜ್ವರ, ಮಂಗನ ಕಾಯಿಲೆಗಳೂ ಜಾಗತೀಕ ಮಟ್ಟದಲ್ಲಿ ಈಗಿನಷ್ಟು ಭಯ ಹುಟ್ಟಿಸಲು ಅಸಮರ್ಥವಾದವು. ಇವೆಲ್ಲವುಗಳ ತರುವಾಯು ಮನುಷ್ಯನ ಮಿತಿಯನ್ನು ಮನುಷ್ಯನಿಗೆ ಮತ್ತೊಮ್ಮೆ ತಿಳಿಸಲು ಭೂತಾಯಿ ಯೋಜನೆಯೊಂದನ್ನು ಕೈಗೊಂಡಂತೆ ಕರೋನ ವೈರಸ್ ಬಂದೆರಗಿದೆ.

ಕರೋನ ವೈರಸ್ ಕಾರಣದಿಂದ ಮುಚ್ಚಿದ ದೆಹಲಿಯ ಇಂಡಿಯಾ ಗೇಟ್

ಚೀನಾ ದೇಶದ ವುಹಾನ್ ನಗರದಲ್ಲಿ ಸಮುದ್ರಾಹಾರ ಮಾರುವ ಮಾರುಕಟ್ಟೆಯಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡಿತು ಎಂದು ನಂಬಲಾಗಿರುವ ಈ ಮಹಾ ಮಾರಣಾಂತಿಕ ವೈರಸ್ ಬಗ್ಗೆ ಹಲವಾರು ಊಹೆಗಳು ಚಾಲ್ತಿಯಲ್ಲಿವೆ. ಅಮೇರಿಕಾವೂ ಸೇರಿ ಮೊದಲಾದ ಪ್ರಬಲ ರಾಷ್ಟ್ರಗಳು ಚೀನಾ ದೇಶವು ಕೈಗೊಂಡಿರುವ ಜೈವಿಕ ಯುದ್ಧವಿದೆಂದು ಆಪಾದನೆ ಮಾಡುತ್ತಿವೆ. ಆಪಾದನೆಯ ಮಗ್ಗುಲಲ್ಲೇ ಆ ದೇಶಗಳಲ್ಲಿ ಅಸಂಖ್ಯ ಜನಗಳು ಮಾರಣಾಂತಿಕ ವೈರಸ್ ಗೆ ತುತ್ತಾಗಿದ್ದಾರೆ, ಇನ್ನು ಹಲವರು ಇಹ ಲೋಕ ತ್ಯಜಿಸಿಯೂ ಬಿಟ್ಟಿದ್ದಾರೆ.

ಅಮೆರಿಕಾದ ಸೇನಾ ವಲಯದಲ್ಲಿ ಕೇಳಿಬರುತ್ತಿರುವ ಈ ವೈರಸ್ ಬಗೆಗಿನ ವಿಷಯವೇನೆಂದರೆ ಈಗಿನ ವರೆವಿಗೂ ಚೀನಾ ಸುಮಾರು ೧೫೦೦ ಬಗೆಯ ವೈರಸ್ ಗಳನ್ನು ವುಹಾನ್ ನ ವೈರಾಣು ಅಧ್ಯಯನ ಕೇಂದ್ರದಲ್ಲಿ ಪ್ರಯೋಗಾರ್ಥ ಸಂಗ್ರಹಿಸಿ ಇಟ್ಟಿದೆ.  ಆ ೧೫೦೦ ವೈರಸ್ ಗಳ ಪೈಕಿ ಕರೋನ ವೈರಸ್ ಕೊಡ ಒಂದಾಗಿದ್ದು, ಇತರ ರಾಷ್ಟ್ರಗಳ ಮೇಲೆ ಹಿಂಬಾಗಿಲ ಮೂಲಕ ಜೈವಿಕ ಯುದ್ಧ ಸಾರಲು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ವುಹಾನ್ ವೈರಾಣು ಅಧ್ಯಯನ ಕೇಂದ್ರ)ದಲ್ಲಿ ಸಂಗ್ರಹಿಸಿಡಲಾಗಿತ್ತು. ಪ್ರಯೋಗ ಮಾಡುತ್ತಿರುವ ಸಂದರ್ಭದಲ್ಲಿ ಉಂಟಾಗಿರುವ ಅಚಾನಕ್ ಎಡವಟ್ಟಿನಿಂದ ವೈರಾಣು ಸೋರಿಕೆಯಾಗಿ ಹೊರಜಗತ್ತಿಗೆ ಹರಿಯಿತು. ಅನ್ಯರ ಮೇಲೆ ಯುದ್ಧ ಸಾರಲು ಚೀನಾ ಇರಿಸಿಕೊಂಡಿದ್ದ ಆ ಪ್ರಬಲ ಜೈವಿಕಾಸ್ತ್ರ ಆಕಸ್ಮಿಕವಾಗಿ ತಮ್ಮ ಮೇಲೆಯೇ ತಿರುಮಂತ್ರವಾಯಿತು, ಇದಿಷ್ಟು.

ವೈರಾಣು ತನ್ನ ಕಬಂಧ ಬಾಹುಗಳನ್ನು ವುಹಾನ್ ನಾದ್ಯಂತ ಹರಡಲು ಶುರುವಿಟ್ಟುಕೊಂಡಾಗ ಚೀನಾ ಸರ್ಕಾರ ವೈರಸ್ ಹರಡುವಿಕೆ ತಡೆಗಟ್ಟಲು ವುಹಾನ್ ಪ್ರಾಂತ್ಯವನ್ನು ಪ್ರಪಂಚದಿಂದ ಅಕ್ಷರಶಃ ಬೇರ್ಪಡಿಸಿಬಿಟ್ಟಿತಂತೆ. ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕೊಳ್ಳಲು ಜನ ಮುಗಿಬಿದ್ದು ಕಿಲೋಮೀಟರ್ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದು ಮೊನ್ನೆ ಮೊನ್ನೆ ವರೆಗೂ ಚೀನಾದಿಂದ ಬಂದ ವಿಡಿಯೋಗಳಲ್ಲಿ ದಾಖಲಾಗಿತ್ತು.ಈ ದುರಂತದಲ್ಲಿ ಚೀನಾದಲ್ಲಿ ಕೋಟಿಗಟ್ಟಲೆ ಜನ ಅಸು ನೀಗಿರಬಹುದು, ಆದರೆ ಆ ದೇಶ ಹೊರಜಗತ್ತಿಗೆ ತಪ್ಪು ಲೆಕ್ಕಗಳನ್ನು ಕೊಡುತ್ತಿದೆ ಎಂದು ಅನೇಕ ದೇಶಗಳು ವಾದಿಸುತ್ತಿವೆ. ಅದಕ್ಕೆ ಪುಷ್ಟಿಯೆನ್ನುವಂತೆ ಇತ್ತೀಚಿಗೆ ತಾವು ಚೀನಾದ ಫೋನ್ ಕಾಲ್ ಗಳ ಮೇಲೆ ನಿಗಾ ಇರಿಸುವುದಾಗಿಯೂ, ೨೦೧೯ರ ಡಿಸೆಂಬರ್ ನಿಂದ ಈಚೆಗೆ ಬರೋಬ್ಬರಿ ೧ ಕೋಟಿ ಫೋನ್ ಗಳು ಚೀನಾದಲ್ಲಿ ಸ್ವಿಚ್ ಆಫ್ ಆಗಿರುವುದಾಗಿಯೂ ಅನೇಕ ದೇಶಗಳು ಹೇಳಿಕೊಳ್ಳುತ್ತಿವೆ. ಒಟ್ಟಿನಲ್ಲಿ ಚೀನಾದತ್ತ ಎಲ್ಲ ದೇಶಗಳ ದೃಷ್ಟಿ ನೆಟ್ಟಿದೆ. ಏಷ್ಯಾ ಖಂಡದಲ್ಲಿ ನಾಯಕತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಆ ದೇಶ ಹೀಗೆ ಮಾಡಿದ್ದರೂ ಮಾಡಿರಬಹುದೆಂಬ ಅನುಮಾನ ಹಲವು ದೇಶಗಳಿಗೆ ಬಲವಾಗಿ ಇದ್ದಂತಿದೆ. ಹಲವಾರು ಜನ ಅದಾಗಲೇ ವಿಶ್ವ ಸಂಸ್ಥೆ ಮಧ್ಯೆ ಪ್ರವೇಶಿಸಿ ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಳ್ಳುವಂತೆ ಒತ್ತಡ ಹೇರುತ್ತಲೂ ಇದ್ದಾರೆ.

ಅಲ್ಲಿಗೆ ಚೀನಾದ ರಾಜ ತಾಂತ್ರಿಕತೆ ಸಂಪೂರ್ಣವಾಗಿ ಮುಗ್ಗರಿಸುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿವೆ. ಇನ್ನೂ ಮುಂದುವರೆದು ಚೀನಾದ ಬಣದಲ್ಲಿ ಯಾವುದಾದರೂ ದೇಶಗಳು ಗುರುತಿಸಿಕೊಂಡವೆಂದರೆ ಅದರ ಅರ್ಥ ಆ ದೇಶಗಳಿಗೆ ಚೀನಾದಿಂದ ಯಾವುದೋ ತೆರನಾದ ಲಾಭ ಇದೆ ಎಂತಲೇ. ಲಾಭದ ಆಸೆ ತೋರಿಸಿ ಕೆಲವು ದೇಶಗಳನ್ನು ನುಂಗಿ ನೊಣವಿಕೊಂಡ ಇತಿಹಾಸ ಈಗಾಗಲೇ ಚೀನಾಕ್ಕೆ ಇದೆ. ಅದರ ಮೇಲೂ ಸಮಕಾಲೀನ ಪರಿಸ್ಥಿತಿಗಳನ್ನು ನಿಭಾಯಿಸಲು, ಜನರು ದಂಗೆ ಏಳದಂತೆ ತಡೆದು ದೇಶ ನಡೆಸಲು ಪಾಕಿಸ್ತಾನದಂತಹ ರಾಷ್ಟ್ರಗಳಿಗೆ ಚೀನಾದ ಒಡನಾಟ ಬಲವಂತವಾದರೂ ಬೇಕೇ ಬೇಕು. ಪರಿಸ್ಥಿತಿಯ ತೀಕ್ಷಣತೆಗೆ ಕಟ್ಟು ಬಿದ್ದು ದೇಶಗಳು ಚೀನಾದ ಒಡನಾಟಕ್ಕೆ ಒಗ್ಗಿಕೊಳ್ಳುತ್ತವೇ ಹೊರತು ನಿಜವಾದ ಸ್ನೇಹದಿಂದಲ್ಲ.ಎಲ್ಲ ದೇಶಗಳೂ ಈಗ ಚೀನಾವನ್ನು ಅನುಮಾನದ ಭೂತಗನ್ನಡಿ ಹಿಡಿದು ನೋಡುತ್ತಿವೆ. ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಹೊರಟಿದ್ದ ಚೀನಾಕ್ಕೆ ಕರೋನ ಮರ್ಮಾಘಾತ ನೀಡಿದೆ, ಅಷ್ಟೇ ಅಲ್ಲದೆ ಇಡೀ ಪ್ರಪಂಚದ ಆರ್ಥಿಕತೆಯನ್ನು ಹಿಡಿದು ಕೆಳಕ್ಕೆ ದೂಡಿದೆ.

ಚೀನಾ ತನ್ನ ಉದ್ಧಾರಕ್ಕಾಗಿ ತನಗೆ ಸಿಗುವ ಎಲ್ಲಾ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವುದು ಯಾರಿಗೂ ಅರ್ಥವಾಗದ ವಿಷಯವೇನಲ್ಲ. ಆದರೆ ಅದರ ನಿರ್ಧಾರದಿಂದ ಅಮಾಯಕರಿಗೆ ತೊಂದರೆಯಾಗದಂತಿರಲಿ, ನೋವಾಗದಂತಿರಲಿ. ಚೀನಾ ಸಸ್ಟೈನಬಲ್ ಡೆವಲಪ್ಮೆಂಟ್(ಸುಸ್ಥಿರ ಅಭಿವೃದ್ಧಿ) ಮಾರ್ಗದಲ್ಲಿ ಇದೆಯೆಂದು ಆ ದೇಶದ ವಕ್ತಾರರು ಮಾತ್ರ ಹೇಳಿಕೊಳ್ಳುವಂತಾಗದೆ ಅದು ನಿಜ ಸ್ಥಿತಿಯಲ್ಲಿಯೂ ಹಾಗೆ ಇರಲಿ. ಅನ್ಯ ದೇಶಗಳ ಮೇಲೆ ಹಿಡಿತ ಸಾಧಿಸುವ ಚೀನಾದ ಮನೋಧೋರಣೆ ಇನ್ನಾದರೂ ಕಡಿಮೆಯಾಗಲಿ. ಪ್ರಕೃತಿಗೆ ಇನ್ನಿಲ್ಲದಂತೆ ಅಪಚಾರವೆಸಗಿರುವ ಚೀನಾ ತನ್ನ ತಪ್ಪನ್ನು ಅರಿತುಕೊಂಡು ಒಳಿತಿನ ಕಡೆಗೆ ಹೆಜ್ಜೆಯಿಡಲಿ, ಸುಯೋಗದೆಡೆಗೆ ಹೆಜ್ಜೆಯಿರಿಸುವ ನಾಯಕತ್ವವವನ್ನು ಅದೇ ವಹಿಸಿಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ.

-o-

ಸೋಮವಾರ, ಮಾರ್ಚ್ 9, 2020

ನಾನಿನ್ನೂ ಮನಗಂಡಿಲ್ಲ

ಅಗೋ! ನೋಡಲ್ಲಿ.
ಹಿರಿದಾರಿಯೊಳಗೆ ಮೊರೆಯುವ
ಕಾರುಗಳ ಮಾಲೀಕ ನಾನಾಗಲಿಲ್ಲ,
ಪೂರ್ವ-ಪಶ್ಚಿಮ ಸಮುದ್ರಗಳ ದಾಟಿ
ನಾನೋಡಲಿಲ್ಲ,
ಉತ್ತರದ ಹಿಮಾಲಯವನು ದಾಟುವ
ಸುಯೋಗವದು ದೊರೆತೇ ಇಲ್ಲ.

ಇರುವ ದೇಶದೊಳಗೆ ಭಲಾರೆ
ಚಾಲಾಕಿ ನಾನಾಗಲಿಲ್ಲ.
ಅನ್ಯರಿಗೆ ಮೆತ್ತೆ ಹೂವಿನ ದಿಂಬಾಗಿ
ನಾ ಮಾಡುತ್ತಿರುವುದೇನೋ ಅರಿವಿಲ್ಲ,
ಮಾಡುವ ಕೃತಿಯೊಳಗೆ ಮನವಿಲ್ಲ,
ಮಾಡದ ಕೃತಿಗಳೆಡೆಗೆ ಬಿಡುವಿಲ್ಲ,
ನಾನೇನೋ ಇನ್ನು ಅರಿಯಲಾಗಿಲ್ಲ,
ಎಲ್ಲರ ಜೀವನವೂ ಹೀಗೆಯೇನೋ?
ನಾನಿನ್ನೂ ಮನಗಂಡಿಲ್ಲ.

-o-

ಶುಕ್ರವಾರ, ಮಾರ್ಚ್ 6, 2020

ಕನ್ನಡ ಗಂಗೆ

ಈಚೀಚೆಗೆ ಆಲೂರು ವೆಂಕಟರಾಯರ 'ಕರ್ನಾಟಕ ಗತ ವೈಭವ' ಪುಸ್ತಕವನ್ನೋದುತ್ತಿದ್ದೆ. ಈ ಮೊದಲೇ ಒಮ್ಮೆ ನಡು-ನಡುವಿನ ಪ್ರಕರಣಗಳನ್ನು ಓದಿಕೊಂಡಿದ್ದರಿಂದ್ದ ಆ ಪುಸ್ತಕವನ್ನು ಆಮೂಲಾಗ್ರವಾಗಿ ಅರ್ಥ ಮಾಡಿಕೊಂಡಿದ್ದೇನೆ ಅನ್ನುವ ಭಾವನೆ ಬಂದಿರಲಿಲ್ಲ. 'ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ' ಅನ್ನುವಂತೆ ನನಗೆ ಬೇಕಾದಷ್ಟನ್ನೇ ಓದಿಕೊಂಡು ಅದರೊಳಗೊಂದು ಅರ್ಥ ಗ್ರಹಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲೋ, ಸಮಾನ ಮನಸ್ಕರೊಂದಿಗೆ ಹರಟುವಾಗಲೋ ಹಂಚಿಕೊಳ್ಳುತ್ತಿದ್ದೆ. ಪುಸ್ತಕವೊಂದನ್ನು ಪ್ರತೀ ಬಾರಿ ಓದಿದಾಗಲೂ ಬೇರೆ ಬೇರೆ ಭಾವನೆಗಳನ್ನು ಗ್ರಹಿಸುತ್ತೇವೆ ಎನ್ನುವ ಮಾತು ನಿಜ, ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನದನ್ನು ಗ್ರಹಿಸಿಕೊಳ್ಳುತ್ತಾ ಹೋದೆ.

karnataka gatha vaibhava book ಗೆ ಚಿತ್ರಗಳ ಫಲಿತಾಂಶಗಳು
ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು

ಎಂದಿನಂತೆ ವೆಂಕಟರಾಯರು ಗಾಢ ನಿದ್ರೆಯಲ್ಲಿದ್ದ ಕನ್ನಡಿಗರನ್ನು ತಮ್ಮ ಲೇಖನಿಯಿಂದಲೇ ಚುಚ್ಚಿ ಚುಚ್ಚಿ ಎಬ್ಬಿಸುತ್ತಿದ್ದರು. ಕನ್ನಡಿಗರ ಅಭಿಮಾನ ಶೂನ್ಯತ್ವವನ್ನು ಎತ್ತಿ ತೋರಿಸುತ್ತಲೂ, ಕನ್ನಡಿಗರ ಐತಿಹಾಸಿಕ ಮಹತ್ತುಗಳನ್ನು ತೆರೆದಿಡುತ್ತಲೂ ಮುಂದೆ ಸಾಗುತ್ತಿದ್ದ ಬಗೆ ಸ್ವರಾಜ್ಯ ಚಳುವಳಿ ಉತ್ತುಂಗದಲ್ಲಿದ್ದ ಆ ಕಾಲಕ್ಕೂ, ಸ್ವಾಯತ್ತತೆ ಉತ್ತುಂಗದಲ್ಲಿರುವ ಈ ಕಾಲಕ್ಕೂ ಸರಿಯಾಗಿ  ಒಪ್ಪುವಂತಹುದೇ. ಆಗ್ಗೆ ನಮ್ಮ ಹಿಂದಿನ ಸಾಧನೆಗಳ ಬಗ್ಗೆ ನಮಗೆ ತಿಳಿಯಪಡಿಸಿ ನಮ್ಮ ಇತಿಹಾಸದ ಬಗ್ಗೆ ಹೆಮ್ಮೆ ಮೂಡಿಸಿ ನಮ್ಮ ತಲೆಮಾರನ್ನು ದೇಶದ ಸ್ವಾತಂತ್ರ್ಯಕ್ಕೆ ಅಣಿಗೊಳಿಸುವುದು ತುರ್ತಾದ ಕಾರ್ಯವಾದ್ದರಿಂದ ಹಾಗೂ ಆಗಿನ ಸಂಶೋಧನೆಗಳ ಮಿತಿಗಳನ್ನು ಅರಿತುಕೊಂಡು ವೆಂಕಟರಾಯರು ಅಂದು ಮಾಡಿದ ಪ್ರಯತ್ನ ಅಭಿನಂದನಾರ್ಹ, ಪುಸ್ತಕದ ಮೊದಲ ಮುದ್ರಣ ಹೊರಟು ಕೆಲವೇ ತಿಂಗಳುಗಳಲ್ಲಿ ಎರಡನೇ ಮುದ್ರಣಕ್ಕೆ ಅಣಿಗೊಂಡಿದ್ದು ಕನ್ನಡ ಓದುಗರು ಹೊಸದೇನನ್ನೋ ಗ್ರಹಿಸುತ್ತಿದ್ದಾರೆ ಅನ್ನುವುದಕ್ಕೆ ಕೈಗನ್ನಡಿ. ಇದೂ ಮುಂದುವರೆದು ಭಾಷಾವಾರು ಪ್ರಾಂತ ರಚನೆಯಲ್ಲಿ ಕರ್ನಾಟಕದ ನಾಲ್ಕೂ ದಿಕ್ಕುಗಳ ಗಡಿ ಗುರುತು ಮಾಡುವಲ್ಲಿ ಇದೇ 'ಕರ್ನಾಟಕ ಗತ ವೈಭವ' ಪುಸ್ತಕ ವಹಿಸಿದ ಪಾತ್ರ ಅಂತಿತಹುದಲ್ಲ. ಸ್ವರಾಜ್ಯ ಚಳುವಳಿಗೆ ಕನ್ನಡಿಗರನ್ನು ಅಣಿಗೊಳಿಸುವಾಗ ತಮಗೇ ಗೊತ್ತಿಲ್ಲದಂತೆ ಭವಿಷ್ಯದ ಕರ್ನಾಟಕ ರಾಜ್ಯಕ್ಕೆ ರೂಪು ರೇಷೆ ಬರೆದಿದ್ದ ಮಹತ್ಕೃತಿಯನ್ನು ಸಿದ್ಧಪಡಿಸಿದ್ದರು ವೆಂಕಟರಾಯರು.

ಆದರೂ ಹಿಂದೊಮ್ಮೆ ಗೋದಾವರೀ ನದಿಯನ್ನು ದಾಟಿ ವಿಂದ್ಯ ಪರ್ವತದಾಚೆಗೂ ಆಳ್ವಿಕೆ ನಡೆಸಿದ್ದ, ನೇಪಾಳ-ಮಯನ್ಮಾರ್ ದೇಶಗಳೊಂದಿಗೆ ಕೊಳು-ಕೊಡುಗೆ ವ್ಯವಹಾರಗಳನ್ನು ನಡೆಸಿದ್ದ, ಮಧ್ಯ ಏಷ್ಯಾ ದೇಶಗಳಿಗೆ ಶಿಲ್ಪಿಗಳನ್ನು ಕಳುಹಿಸಿದ್ದ ಧೀಮಂತ ಕನ್ನಡ ಜನಾಂಗ ಬರು ಬರುತ್ತಾ ತಮ್ಮ ಘನ ಇತಿಹಾಸ ಮರೆತು ಆಳಿಸಿಕೊಳ್ಳುವ, ಅನ್ಯರಿಂದಾಗುವ ಹಿಂಸೆಗೆ ಒಗ್ಗಿಕೊಳ್ಳುವ ಮನಸ್ಥಿತಿಗೆ ತಲುಪಿಕೊಳ್ಳಲು ಕಾರಣಗಳು ಅಸಂಖ್ಯವಿವೆ. ಆ ಕಾರಣಗಳ ಪಟ್ಟಿಯಲ್ಲಿ ಆಗಿನ ಸಮಾಜಿಕ ಕಟ್ಟು ಪಾಡುಗಳು, ಧಾರ್ಮಿಕ ಕಾರಣಗಳು ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ.

ಹನ್ನೆರಡನೇ ಶತಮಾನದವರೆವಿಗೂ ಜೈನರು ಕಟ್ಟಿ ಬೆಳೆಸಿದ ಭಾಷೆ ಕನ್ನಡ. ಇತ್ತೀಚಿಗೆ ಗೆಳೆಯನೊಬ್ಬ ನನ್ನ ಭಾಷಾ ಸಹಿಷ್ಣುತೆಯನ್ನು ಪರೀಕ್ಷಿಸುವ ಸಲುವಾಗಿ 'ಸಂಸ್ಕೃತಂ ದೈವ ಭಾಷಿತಂ' ಎಂದ. ನಾನು ನಸು ನಗುತ್ತಲೇ 'ಕನ್ನಡಂ ಜೈನ ಭಾಷಿತಂ' ಎಂದೆ. ಅದೇಕೆಂದು ಮತ್ತೆ ಚರ್ಚೆ ಆರಂಭವಾಯಿತು. ಹನ್ನೆರಡನೇ ಶತಮಾನದವರೆವಿಗೂ ಹಿಂದೂ ಧಾರ್ಮಿಕ, ವೈಚಾರಿಕ ವಿಚಾರಗಳು ಕನ್ನಡ ಜನರಿಗೆ ಕನ್ನಡದಲ್ಲಿ ತಲುಪುವ ವ್ಯವಸ್ಥೆ ತೀರಾ ಅಲ್ಪವಾಗಿದ್ದುದ್ದು ಇಂದಿಗೆ ಢಾಳಾಗಿ ಗೋಚರಿಸುತ್ತಿದೆ. ಕನ್ನಡದದ ಬಾಲ್ಯಾವಸ್ಥೆಯಲ್ಲಿ ಅದನ್ನು ಜೈನರು ಸಲಹಿದ ಬಗೆಯೇ ವಿಶಿಷ್ಟ.೬ - ೧೦ನೆ ಶತಮಾನದ ಸಮಯದಲ್ಲಿ ಬೌದ್ಧ, ಜೈನ ಧರ್ಮ ಭಾರತದಲ್ಲಿ ಏರುಗತಿಯಲ್ಲಿ ಸಾಗಿದ್ದ ಕಾಲ. ಹಿಂದೂವೆಂಬ ಧರ್ಮವಿಲ್ಲದೆ ಈಗಿನ ಹಿಂದೂಗಳು ಆಗ ಶೈವ, ವೈಷ್ಣವ ಮತ ವಹಿಸಿಕೊಂಡಿದ್ದು, ಬೌದ್ಧ-ಜೈನ ಧರ್ಮಗಳು ಆಗಿನ ಪ್ರಬಲ ಧರ್ಮಗಳ ಕೆಲ ಲೋಪ ದೋಷಗಳನ್ನು ಎತ್ತಿ ತೋರಿ ಅವರುಗಳನ್ನು ತನ್ನತ್ತ ಸೆಳೆದುಕೊಂಡ ಪರಿಣಾಮ ಸಾಹಿತ್ಯ, ಇತಿಹಾಸ ದಾಖಲು ಎಲ್ಲವೂ ಜೈನ-ಬೌದ್ಧ ಮತದ ಸುತ್ತ ಮುತ್ತಲೇ ನಡೆದು ಈಗ ಹಾಗೆ ಕಾಣಿಸುತ್ತಿದೆ ಎನ್ನುವುದು ಕೆಲವು ವಿದ್ವಾಂಸರ ಅಂಬೋಣ, ಇರಲಿ. ಧರ್ಮ-ವೈಚಾರಿಕತೆ-ಭಾಷೆಯ ತ್ರಿಕೋನ ಪೈಪೋಟಿಗೆ ನಾವು ದಾರಿಯಾಗುವುದು ಬೇಡವೇ ಬೇಡ.

ಹನ್ನೊಂದನೇ ಶತಮಾನದ ಅಂತ್ಯ ಸನ್ನಿಹಿತವಾಗುವ ವಚನ ಸಾಹಿತ್ಯ ಕನ್ನಡ ಸಾಹಿತ್ಯದಿಂದ ಟಿಸಿಲೊಡೆದು ನಿಂತು, ಸಾಮಾನ್ಯರನ್ನು ಸಾಮಾನ್ಯ ಭಾಷೆಯಲ್ಲಿಯೇ ತಲುಪುವ ತವಕದಿಂದ ಮೊದಲಾಯ್ತು. ಮುಂದೆ ಕನ್ನಡ ಸಾಹಿತ್ಯದಲ್ಲಿ ವಚನಗಳದ್ದೇ ಕ್ರಾಂತಿಯುಂಟಾಯಿತೆಂದರೂ ತಪ್ಪಾಗಲಾರದು. ತದನಂತರದಲ್ಲಿ ಅಷ್ಟೇ ಪ್ರಮಾಣದ ಕೆಳದೂಡುವಿಕೆಯೂ ನಡೆಯಿತೆನ್ನಿ. ಅದಾದನಂತರ ಪರಕೀಯರ ಆಕ್ರಮಣ, ನಮ್ಮವರ ಮಾರಣ ಹೋಮ ಇಂತಹ ಘಟನಾವಳಿಗಳಿಗೆ ತೆರೆದುಕೊಂಡ ನಾವು ನಮ್ಮ ಹಿನ್ನೆಲೆಯನ್ನು ಗಮನಿಸುವುದಿರಲಿ ಆಗಿನ ತುತ್ತಿನ ಚೀಲ ತುಂಬಿಸಿಕೊಂಡರೆ ಸಾಕೆನ್ನುವ ಮಟ್ಟ ತಲುಪಿದ್ದು ಅತೀ ವಿಷಾದನೀಯ. ಅದರ ನಡು ನಡುವೆ ಅನೇಕ ಆಸ್ಥಾನಗಳು ಕನ್ನಡವನ್ನು ಇನ್ನಿಲ್ಲದಂತೆ ಪೋಷಿಸಿದರೂ ಆಗಿಂದಾಗ್ಗೆ ಭಾಷೆಗಳ ಕೆಸರೆರಚಾಟ ನಡೆದೇ ಇತ್ತು.

ಕನ್ನಡದ ಅವಗಣನೆ ಅಲ್ಲಿಗೆ ನಿಲ್ಲಲಿಲ್ಲ, ಒಳಗೊಳಗೇ ತಿರುಗಿ ಸೆಟೆದು ನಿಲ್ಲುತ್ತಲೇ ಸಾಗಿದ್ದು, ಅದನ್ನು ತಡೆದೂ ಈ ಭಾಷೆ ಬಿಗಿಯಾಗಿ ನಿಂತಿದ್ದು ಅನೂಹ್ಯ. ಅಷ್ಟೇ ಏಕೆ ಈಚೆಗಿನ ಹದಿನಾರನೇ ಶತಮಾನದ ಪುರಂದರ ದಾಸರು ಕರ್ನಾಟಕ ಸಂಗೀತ ಪರಂಪರೆಯನ್ನು ಕಟ್ಟಿ ಬೆಳೆಸುತ್ತಿದ್ದಾಗ ಅದನ್ನು 'ತಿರುಪೆಯವರ ಗೀತ ಮೇಳವೆಂದು' ಆಡಿಕೊಂಡು ನಿರ್ಲಕ್ಷಿಸಿದವರ್ಯಾರು?. ಕನ್ನಡದ ಪುರಂದರರು - ತೆಲುಗಿನ ಅನ್ನಮಾಚಾರ್ಯರು ಕರ್ನಾಟಕ ಸಂಗೀತಕ್ಕೆ ಕೊಟ್ಟ ಕೊಡುಗೆ ಅಂತಿತಹುದೇ?. ಅದೇ ಮುಂದುವರಿದು ೧೭-೧೮ ನೇ ಶತಮಾನಕ್ಕೆ ತಮಿಳುನಾಡಿನ ತ್ಯಾಗರಾಜರು ನೀಡಿದ ಅಮೋಘ ಯೋಗದಾನವನ್ನು ಮರೆಯುವುದೆಂತು?. ಕನ್ನಡ-ತೆಲುಗು ಭಕ್ತಿ -ಸಾಹಿತ್ಯ ಪರಂಪರೆಯಲ್ಲಿ ಪುರಂದರರು-ಅನ್ನಮಾಚಾರ್ಯ-ತ್ಯಾಗರಾಜರನ್ನು ಮರೆಯುವುದೆಂತು?. ಈ ತ್ರಿಮೂರ್ತಿಗಳು ಸಂಗೀತ-ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಮುಚ್ಚಿಡುವಷ್ಟು ಸುಲಭವೂ ಕ್ಲೇಶವೂ ಆಗಿಲ್ಲದ ಕಾರಣದಿಂದಲೇ ಅಲ್ಲವೇ ಅವು ಇಂದಿಗೂ ಜನಜನಿತವಾಗಿರುವುದು, ಇಷ್ಟು ದಿನ ಸವೆಸಿದರು ಕಾಂತಿಗುಂದದೆ ಹೊಳೆಯುತ್ತಿರುವುದು.

ಒಂದು ಭಾಷೆಯ ಸಾಹಿತ್ಯ, ಇತಿಹಾಸ, ಅರ್ಥ ವ್ಯವಸ್ಥೆ ಇನ್ನಿತರ ಮಾನದಂಡಗಳು ಎಷ್ಟೇ ಇರಲಿ, ಆ ಭಾಷೆಯನ್ನಾಡುವ ಮಕ್ಕಳು ಅವರದ್ದೇ ಭಾಷೆಯನ್ನೂ ನಿರ್ಲಕ್ಷಿಸಿಬಿಟ್ಟರೆ ಅಥವಾ ಇನ್ನಿತರ ಭಾಷೆಗಳೆಡೆಗೆ ಹೊರಳಿಕೊಂಡು ಬಿಟ್ಟರೆ ಭಾಷೆ ಸತ್ತಂತೆಯೇ. ಕನ್ನಡಿಗರು ಇದೀಗ ಕಾರ್ಯೋನ್ಮುಖರಾಗಬೇಕಿರುವುದು ಈ ವಿಚಾರದ ವಿರುದ್ಧ ದಿಕ್ಕಿನಲ್ಲಿ. ಕನ್ನಡ ಭಾಷೆಯನ್ನೂ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಘನಿಷ್ಠವಾಗಿ ಬಳಸುತ್ತಾ ಸಾಗುವುದು. ಇದಕ್ಕಿಂತ ದೊಡ್ಡ ಹೋರಾಟ, ಚಳುವಳಿಯೇ ಇಲ್ಲವೆಂಬುದು ನನ್ನ ಭಾವನೆ. ಅದೊಂದು ರೀತಿ ಮಹಾ ಯಾಗದಂತೆ. ವೆಂಕಟರಾಯರು ಕರ್ನಾಟಕ ಗತ ವೈಭವದ ಮೂಲಕ ಆ ಮಹಾಯಾಗಕ್ಕೆ ವೇದಿಕೆ ಕಟ್ಟಿದ್ದಾರೆ, ಅದರೊಳಗೆ ಜ್ವಾಲೆ ಹೊತ್ತಿಸಿ ಯಾಗ ಫಲ ಪಡೆಯಬೇಕಾದವರು ನಾವು ನೀವು ಮಾತ್ರವೇ.

ಕನ್ನಡಿಗರು ಎಡವಿದ್ದು, ಎಡವುತ್ತಿರುವುದು ಎಲ್ಲಿ?

ಅತೀ ಮುಖ್ಯವಾಗಿ ಮೂರು ಕಾರಣಗಳಿಂದ ಕನ್ನಡಿಗರು ಕಳಾ ವಿಹೀನರಾಗಿದ್ದಾರೆ.

೧. ಯಾವುದೇ ಭಾಷೆ ಗಟ್ಟಿಯಾಗಿ ನಿಲ್ಲುವುದು ತಲೆಮಾರಿನಿಂದ ತಲೆಮಾರಿಗೆ ಅದು ಸಾಗಿದಾಗ ಮಾತ್ರವೇ. ಮಹತ್ಕೃತಿಗಳು, ಹೋರಾಟಗಳಷ್ಟೇ ಭಾಷೆಯನ್ನು ಬಿಗಿಯಾಗಿ ಹಿಡಿದು ನಿಲ್ಲಿಸಲು ಅಶಕ್ತವಷ್ಟೇ. ಮಹತ್ಕೃತಿಗಳ ರಚನೆಯಲ್ಲಿ , ಐತಿಹಾಸಿಕವಾಗಿ ಮಂಚೂಣಿಯಲ್ಲಿದ್ದ, ಮಧ್ಯ ಏಷ್ಯಾದ ಅದೆಷ್ಟೋ ಭಾಷೆಗಳು ಹೇಳ ಹೆಸರಿಲ್ಲದಂತೆ ನಿರ್ನಾಮವಾಗಿವೆ. ಕನ್ನಡಿಗರು, ಅದರಲ್ಲೂ ೨೧ನೇ ಶತಮಾನದ ಆದಿಭಾಗದ ಕನ್ನಡಿಗರು ತಮ್ಮ ತಲೆಮಾರಿನ ಬಹುತೇಕ ವಿಚಾರಗಳನ್ನು ತಮ್ಮ ಮಕ್ಕಳ ತಲೆಗೆ ದಾಟಿಸೇ ಇಲ್ಲ. ದಾಟಿಸುವ ವಿಚಾರದಲ್ಲಿ ದ್ವಂದ್ವ ಅವರನ್ನಿನ್ನು ಕಾಡುತ್ತಿರುವಂತಿದೆ. ಸದ್ಯಕ್ಕೆ ಇಂಗ್ಲೀಷು ಸರ್ವಾಂತರ್ಯಾಮಿಯಾಗಿದೆ, ಕನ್ನಡ ಮನೆಯಿಂದ ಕಲಿತದ್ದು ಎಂಬ ಕಾರಣಕ್ಕೆ ಕೆಲವರು ಕನ್ನಡವಾಡುತ್ತಿರುವುದು ಕುಚೋದ್ಯವಲ್ಲ. ಈಗಿನ ಕನ್ನಡ ಹೋರಾಟಗಾರರು ಹಿಂದಿಯ ವಿರುದ್ಧ ತಳೆದಷ್ಟು ಕಠಿಣ ನಿಲುವನ್ನು ಇಂಗ್ಲೀಷಿನ ವಿರುದ್ಧ ತಳೆಯಲು ನಿಸ್ಸಂದೇಹವಾಗಿ ಅಸಮರ್ಥರೇ. ಪ್ರಾಪಂಚಿಕವಾಗಿ ವಿಚಾರ ವಿನಿಮಯ ಮಾಡಲು, ಹೊರಗಿನದನ್ನು ಅರಿತುಕೊಳ್ಳಲು, ಔದ್ಯೋಗಿಕವಾಗಿ ಇಂಗ್ಲೀಷು ಬೇಕೇ ಬೇಕೇ ಎಂದರೂ, ಇಂಗ್ಲೀಷನ್ನು ತಮ್ಮ ಘನತೆ, ಪ್ರತಿಷ್ಠೆಯ  ಒಂದು ಅಂಗವಾಗಿ ಬಳಸುತ್ತಿರುವುದು ವಿಷಾದನೀಯ.

೨. ಕನ್ನಡಿಗರು ಇತಿಹಾಸ ಪ್ರಿಯರಲ್ಲ. ತಮ್ಮ ಘನವಾದ ಇತಿಹಾಸದ ಬಗ್ಗೆ ಎಷ್ಟೋ ಕನ್ನಡಿಗರಿಗೆ ಎಳ್ಳಷ್ಟೂ ಅರಿವಿಲ್ಲ. ಅಸಂಖ್ಯ ಕನ್ನಡಿಗರಿಗೆ ಕನ್ನಡ ನಾಡನ್ನಾಳಿದ ಒಬ್ಬ ರಾಜನ ಹೆಸರೂ ಗೊತ್ತಿಲ್ಲ. ಆಗ್ಗೊಮ್ಮೆ ಈಗೊಮ್ಮೆ ಶಾಲಾ ಪಠ್ಯಪುಸ್ತಕ ಪುನರ್ ರಚನಾ ಸಮಿತಿಗಳು  ಅವರುಗಳ ಕಾರ್ಯವನ್ನು ಕಾಲ ಕಾಲಕ್ಕೆ ನಡೆಯಿಸಿಕೊಡಿತ್ತಿದ್ದು ಸಂತೋಷವಷ್ಟೇ, ಆದರೆ ಈಗೀಗ ಅದು ರಾಜಕೀಯ ಮೇಲಾಟಕ್ಕೆ ಗುರಿಯಾಗಿರುವುದು ವಿಷದೀಕರಿಸದೆ ಬಿಡುವಂತಹುದಲ್ಲ. ಕನ್ನಡಿಗರು ತಮ್ಮ ಘನ ಹಿನ್ನೆಲೆಯ ಬಗ್ಗೆ ಅರಿವುಳ್ಳವರಾಗಬೇಕು, ನಮ್ಮ ಪೂರ್ವಜರು ಹಿಂದೆ ಬದುಕಿ ಬಾಳಿದ ಬಗ್ಗೆ ಅರಿವಿದ್ದರೆ ಮಾತ್ರವಲ್ಲವೆ ಈಗ ನಮಗೆ ಹೆಮ್ಮೆಯುಂಟಾಗುವುದು ಹಾಗು ನಾವು ಮಾಡಬೇಕಿರುವ ಕಾರ್ಯಗಳತ್ತ ಅಪಾರ ಜವಾಬ್ದಾರಿಯುಂಟಾಗುವುದು. ಇಲ್ಲದಿದ್ದರೆ ನಮ್ಮ  ಜನಾಂಗ ಜವಾಬ್ದಾರಿಯುತ ಜನಾಂಗವಾಗಿ ಬಾಳಲು ಸಾಧ್ಯವೇ?.

೩. ಮೂರನೆಯದು ಅಭಿಮಾನ ಶೂನ್ಯತ್ವ, ಆಳಿಸಿಕೊಳ್ಳುವ ಮನೋಧರ್ಮ. ಉತ್ತರದವರನ್ನು ದಕ್ಷಿಣಕ್ಕೆ ಬರದಂತೆ ಎದೆಯೊಡ್ಡಿ ತಡೆದ ಇಮ್ಮಡಿ ಪುಲಿಕೇಶಿ, ವೀರ ವನಿತೆ ಒನಕೆ ಓಬವ್ವ, ಕಿತ್ತೊರಿನ ಚೆನ್ನಮ್ಮ, ಕೆಳದಿಯ ಚೆನ್ನಮ್ಮ, ಕೃಷ್ಣದೇವರಾಯ, ರಾಮರಾಯ, ಸಂಗೊಳ್ಳಿಯ ರಾಯಣ್ಣ ಇಂತಹವರು ಬದುಕಿ ಬಾಳಿದ ಕನ್ನಡ ಕುಲದವರು ನಾವೆಂದು ಹೇಳಿಕೊಳ್ಳಲು ಹೆಮ್ಮೆಯಿರಬೇಕು, ಆದರೆ ಆ ಗಾಂಭೀರ್ಯಯುಕ್ತವಾದ ಹೆಮ್ಮೆಯನ್ನು ತೊರೆದು ಆಳಿಸಿಕೊಳ್ಳುವ, ಆಳುವ ವರ್ಗದವರಿಂದಲೇ ಸಕಲ ಬದಲಾವಣೆಗಳೂ ಸಾಧ್ಯವೆಂಬ ಮನೋಸ್ಥಿತಿಗೆ ತಲುಪಿದ್ದು ನಿಜವಾಗಿಯೂ ಕನ್ನಡಿಗರ ದೌರ್ಭಾಗ್ಯ. ಈ ಕಾರಣದಿಂದಲೇ ಕನ್ನಡಿಗರು ಆಗಾಗ್ಗೆ ನಿದ್ರೆಗೆ ಜಾರಿದಂತೆ ಭಾಸವಾಗುವುದು ಹಾಗೂ ಆಗಾಗ್ಗೆ ಅವರನ್ನು ಬಡಿದೇಳಿಸಲು ಆಲೂರರು, ರಾಜ್ ಕುಮಾರರು, ಕುವೆಂಪು ರಂತಹವರು ಮತ್ತೆ ಮತ್ತೆ ಕನ್ನಡದ ಕಪ್ಪು ಮಣ್ಣಿನ ಬಸಿರಲ್ಲಿ ಆಗಿ ಹೋದದ್ದು.

ಇವಿಷ್ಟೇ ಅಲ್ಲ, ಇನ್ನು ಕಾರಣಗಳು ಹಾಗು ಅವುಗಳಿಗೆ ವಿಮುಖವಾಗಿ ನಡೆಯಬೇಕಿರುವ ಮಾರ್ಗಗಳು ಕನ್ನಡಿಗರ ಮುಂದೆ ಹೇರಳವಾಗಿವೆ. ಅವುಗಳನ್ನು ಸೂಕ್ತ ಸಮಯದಲ್ಲಿ ಆರಿಸಿಕೊಂಡು ನಡೆಯುವದೊಂದೇ ಈಗ ಎಲ್ಲ ಕನ್ನಡಿಗರು ಮಾಡಬೇಕಾಗಿರುವ ಮಹತ್ತರ ಕಾರ್ಯ. ಸದ್ಯ ಕನ್ನಡ ತಾಯಿ ಭುವನೇಶ್ವರಿ ಆಗಾಗ್ಗೆ ತನ್ನ ಘನತೆಯನ್ನು ಹಾಡಿ ಹೊಗಳುವ ಸಂತಾನವನ್ನು ಪಡೆಯುತ್ತಲೇ ಇದ್ದಾಳೆ. ಅದು ನಿಲ್ಲದೆ ಅಕ್ಷಯವಾಗಿಹೋಗಲಿ ಎನ್ನುವುದೇ ನನ್ನ ಅಭಿಲಾಷೆ.

ಕನ್ನಡ ನಿಂತ ನೀರಾಗಬಾರದು, ಸಲೀಲವಾಗಿ ಹರಿಯುವ ಗಂಗೆಯಾಗಬೇಕು. ಆ ಕನ್ನಡ ಗಂಗೆಯನು ಕನ್ನಡದ ಮುಂದಿನ ಪೀಳಿಗೆ ತೀರ್ಥದಂತೆ ಭಾವಿಸಿ ಮೀಯಬೇಕು, ಪ್ರೋಕ್ಷಿಸಿಕೊಂಡು ಪವಿತ್ರರಾಗಬೇಕು ಹಾಗು ಸೇವಿಸಿ ಧನ್ಯರಾಗಬೇಕು. ಇದೇ ಈ ಲೇಖನದ ಆಶಯ.

-o-

ಶನಿವಾರ, ಡಿಸೆಂಬರ್ 28, 2019

ಬ್ರಹ್ಮನಿಗೂ ಬಿದಿರಿಗೂ ಮುಖಾ-ಮುಖಿ

ಬಿದಿರು ಒಮ್ಮೆ ಬ್ರಹ್ಮನಿಗೆ ಎದುರಾಯ್ತಂತೆ, ಬ್ರಹ್ಮನ ಕುರಿತು ಮಾತಾಡಿತಂತೆ.

ಬಿದಿರು : ಅಯ್ಯಾ, ಬೇಕಾಗಿತ್ತೇ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ. ಎಲ್ಲ ಮರಗಳಂತೆ ನಾನು ಹಣ್ಣುಗಳಿಂದ ತುಂಬಿ ತೊನೆಯಲಿಲ್ಲ, ಋತುಮಾನಕ್ಕನುಗುಣವಾಗಿ ಹೂ ಬಿಟ್ಟು ಇತರರ ಕಣ್ಣಿಗೆ ಹಬ್ಬವುಂಟು ಮಾಡಲಿಲ್ಲ. ಅದೆಲ್ಲಾ ಹೋಗಲಿ ಕಡೇ ಪಕ್ಷ ಬಿಸಿಲು, ಮಳೆಯೆಂದು ಬಂದವರಿಗೆ ನೆರಳನ್ನೂ ಕೊಡಲಾಗಲಿಲ್ಲ. ಏಕೆ ಬೇಕಾಗಿತ್ತು ನನ್ನ ಈ ಪಾತ್ರ ನಿನ್ನ ಸೃಷ್ಟಿಯೊಳಗೆ.

ಬ್ರಹ್ಮ : ನಸು ನಗುತ್ತಾ, ಕಾಯಿ. ನಿನ್ನಷ್ಟಕ್ಕೆ ನೀನು ಬೆಳೆದು ನಿಂತಿರು. ನಿನ್ನ ಬೆಲೆ ನಿನಗೆ ತಿಳಿಯಲು ಸ್ವಲ್ಪ ಕಾಲವಾಗಬೇಕು.

ಬಿದಿರು : ಆಯಿತು.

ಬಿದಿರು ತಾಳ್ಮೆ ತಳೆಯಿತಂತೆ. ಸೊಂಪಾಗಿ ಬೆಳೆದು ನಿಂತಿತಂತೆ. ಮುಂದೆ ಬಿದಿರು ಏನಾಯಿತು ಗೊತ್ತೇ?

ತಾನು ತುಂಬಿ ತೊನೆಯದ ಹಣ್ಣುಗಳ ತುಂಬಿಡುವ ಬುಟ್ಟಿಯಾಯ್ತಂತೆ, ಬಟ್ಟೆಯ ಒಣಗಿಸುವ ಕೋಲಾಯ್ತಂತೆ, ಸುಮಂಗಲೆಯರು ಬಾಗಿನ ಕೊಡುವ ಮೊರವಾಯ್ತಂತೆ, ಶ್ರೀಕೃಷ್ಣನ ಕೈಲಿ ಕೊಳಲಾಯ್ತಂತೆ, ಹುಟ್ಟಿದ ಮಕ್ಕಳಿಗೆ ತೊಟ್ಟಿಲಾಯ್ತಂತೆ, ಹೊರಟು ನಿಂತ ಪುಣ್ಯಾತ್ಮರಿಗೆ ಚಟ್ಟವಾಯ್ತಂತೆ, ಬಡವರ ಗುಡಿಸಲಿಗೆ ಆಧಾರವಾಯ್ತಂತೆ, ನೇಗಿಲ ಯೋಗಿಯ ಕೈಯ ಬಾರುಕೋಲಾಯ್ತಂತೆ ಇನ್ನು ಏನೇನೊ ಆಗಿ ಎಲ್ಲ ಮರಗಳನ್ನು ಮೀರಿಸುವಂತೆ ಮನುಷ್ಯನ ಸೇವೆಯಲ್ಲಿ ತಲ್ಲೀನವಾಯ್ತಂತೆ.

ಬಿದಿರು ಅನಂತರ ಮನುಷ್ಯನಿಗೆ ಹೇಳಿತಂತೆ, ನೀನು ಯಾವ ಕಾರಣಕ್ಕೆ ಇಲ್ಲಿದ್ದೀಯೋ ಅದರ ಬಗ್ಗೆ ಚಿಂತಿಸದಿರು. ಸದ್ದರಿಯದೇ ಬೆಳೆದು ನಿಲ್ಲು, ನಂತರ ನಿನ್ನ ಬೆಲೆ ಎಷ್ಟೆಂದು ನಿನಗೆ ಅರ್ಥವಾಗುತ್ತದೆ ಎಂದು.

ಮೇಲಿನ ಬ್ರಹ್ಮ ಬಿದಿರಿನ ಸಂಭಾಷಣೆ, ಹಾಗು ಅದರ ನಂತರದಲ್ಲಿ ಬಿದಿರು ತಳೆದ ನಿಲುವು, ನಂತರ ಅದು ಜನಸೇವಕನಾದ ಬಗೆ ಎಲ್ಲವೂ ಕಾಲ್ಪನಿಕವೇ ಸತ್ಯ. ಆದರೆ ಈ ಕಾಲ್ಪನಿಕ ಸನ್ನಿವೇಶ ಮಾನವ ಕುಲಕ್ಕೆ ದಾಟಿಸುತ್ತಿರುವ ಪಾಠ ಅತಿ ದೊಡ್ಡದು. ಆತ್ಮವಿಶ್ವಾಸ ಬಡಿದೇಳಿಸುವ ಈ ಕಾಲ್ಪನಿಕ ಸನ್ನಿವೇಶ ಎಷ್ಟೋ ಕಮರುತ್ತಿರುವ, ಮರುಗುತ್ತಿರುವ ಮನಸ್ಸುಗಳಿಗೆ ದಾರಿ ದೀವಿಗೆಯಾದರೂ ಆಗಬಹುದು.

-o-

ಭಾನುವಾರ, ನವೆಂಬರ್ 17, 2019

ನಾನೇ ಇನ್ನು ಮಾನವ ಮಾಡಿಲ್ಲ

ಅವರು ಬದುಕಿದರು
ಬರೆಯಲಿಲ್ಲ,
ನಾ ಬರೆದೆ
ಬದುಕಲಿಲ್ಲ.

ಅವರಾಡಿದರು
ಸೋಲೋ ಗೆಲುವೋ
ಚಿಂತಿಸಲಿಲ್ಲ,
ನಾನಾಡಲಿಲ್ಲ
ಆದರೂ ಸೋಲಿನ ಬಗೆಗೆ
ಧೈರ್ಯ ತಳೆಯಲೇ ಇಲ್ಲ.

ಅವರೊಡನಾಡಿದರು
ನಾನಾಡಲಿಲ್ಲ,
ನಾನು, ನನ್ನ ಸಿದ್ಧಾಂತಗಳಿಗೆ
ಹಪ ಹಪಿಸಿ
ಯಾರೊಡಗೂ ಕೂಡಿ ಬಾಳಲಿಲ್ಲ.

ಯಾವೊಂದಕೂ ಕೈ ಚಾಚಲಿಲ್ಲ,
ಯಾರಿಗಾಗಿಯೂ ಹಾತೊರೆಯಲಿಲ್ಲ,
ಪ್ರೀತಿ ಪ್ರೇಮದ ಬಂಧನದೊಳಗೆ ಸಿಲುಕಲಿಲ್ಲ,
ಗೆಳೆಯರ ಬಳಗದೊಳಗೆ ಕೇಂದ್ರ ಬಿಂದು ನಾನಾಗಲಿಲ್ಲ,
ಬರೆದವರ ನಡುವೆ ಮೆರೆಯಲಿಲ್ಲ,
ಬದುಕಿದವರ ನಡುವೆ ಬಾಳಲಿಲ್ಲ,
ಏನೇನೂ ಇಲ್ಲಿ ಘಟಿಸಿಲ್ಲ ,
ಘಟಿಸುವ ಸುಸಮಯವೊಂದಕೆ
ನಾನೇ ಇನ್ನು ಮಾನವ ಮಾಡಿಲ್ಲ.

-0-


ಅಮೆರಿಕೆಯ ಧೂತಾವಾಸ

ಉತ್ತರೋತ್ತರದ ಕರ್ಕಾಟಕ ಸಂಕ್ರಾಂತಿ ವೃತ್ತಮಮ್ ದಾಟಿ ದಾಟಿ
ಕಡಲದಾಟಿ ಅರಬೀಯರ ಸೀಮಾ ರೇಖೆಯಂ ಸೀಳಿ
ಯಹೂದಿಗಳ್ ತಾವ್ ಬಾಹುಗಳ್ ಬಿಗಿಯರಿಸಿ ನಿಂತ ಯುದ್ಧ ಭೂಮಿಯಮ್
ಮೇಲ್ಜಾರಿ ಶ್ವೇತ ವರ್ಣೀಯರ್ ಕಟ್ಟಾಳಿದ ಯೂರೋಪಿನಾಂತ
ಸಂತಸವನಾಂತು ಮುನ್ನಡೆದು ಶೀತ ವಲಯದೊಳಿರ್ಪ ಕಡು ಚಳಿಗೆ ಮೈ ತೆತ್ತು
ಭೀಭತ್ಸ ಸಾಗರವ ಲಂಘಿಸಿ ಮುನ್ನಡೆರ್ದು ಗತ ಕಾಲದೊಳ್ ನೆತ್ತರ ವರ್ಣ ಜನಾಂಗಮ್
ಸಾಂಗವಾಗಿ ನೆಲೆಸಿರ್ದ ಅಮೆರಿಕೆಯ ಮೂಡಣ ಪಟ್ಟಣದೊಳಿಳಿಯುವ ಎನ್ನಾಸೆಗೆ
ಉದಕದಭಿಷೇಕ ಮಾಡಿ ಹಿನ್ನಡೆಗೆ ದೂಡಿ ಸಂತೋಷಿಸಿರ್ದ
ಅಮೆರಿಕೆಯ ಧೂತಾವಾಸಕೆ ಶಿರಸಾಷ್ಟಾಂಗ ಪ್ರಣಾಮ. 

ಶನಿವಾರ, ಆಗಸ್ಟ್ 31, 2019

ಥೇರು

ನಾನು ಆಗಷ್ಟೇ ಕನ್ನಡ ಮಾಧ್ಯಮದಲ್ಲಿ ಹತ್ತು ತರಗತಿಗಳನ್ನು ಎಡತಾಕಿ ಹನ್ನೊಂದನೇ ಇಯತ್ತೆಗೆ ಹೋಗಿದ್ದೆ. ಎದೆಯುಬ್ಬಿಸಿ ಟೀಕು-ಟಾಕಲ್ಲಿ ಹೇಳಿಕೊಳ್ಳುವ ಪಿ.ಸಿ.ಎಂ.ಬಿ ಅಂದುಕೊಂಡು ಅದಕ್ಕೆ ಸೇರಿಕೊಂಡಿದ್ದೆ. ನಾನೇ ಸೇರಿಕೊಂಡಿದ್ದೆ ಅನ್ನುವ ಬದಲು ನನ್ನ ಸುತ್ತಲಿನ ಕೆಲವರು ಆ ಕೋರ್ಸು ಪ್ರಪಂಚದ ಸರ್ವ ಶ್ರೇಷ್ಠ ಕೋರ್ಸುಗಳಲ್ಲೊಂದು ಎಂದು ಬಿಂಬಿಸಿಬಿಟ್ಟದ್ದರು. ಅಷ್ಟರಲ್ಲಾಗಲೇ ನನ್ನ ಮನಸ್ಸಿನಲ್ಲಿಯೂ ಅದು ಬಿಟ್ಟು  ಬೇರೆ ಕೋರ್ಸಿಗೆ ಸೇರಿದರೆ ಕೀಳಾಗಿಬಿಡುತ್ತೇನೇನೋ ಎನ್ನುವ ಭಯ, ದುಗುಡ ಕಾಡುತ್ತಿತ್ತು. ಅವೆಲ್ಲ ಕಾರಣಗಳೂ ಮೊದಲಾಗಿ ಆರ್ಥಿಕ ಮುಗ್ಗಟ್ಟಿನ ಇಕ್ಕಟ್ಟಿನಲ್ಲೂ ಆ ಕೋರ್ಸಿಗೆ ಸೇರಿಕೊಂಡಿದ್ದೆ. ನಮ್ಮ ತರಗತಿಗಳು ಇನ್ನೂ ಶುರುವಾಗಿರಲಿಲ್ಲ, ಜೂನ್ ಒಂದರಿಂದ ಶುರುವಾಗುವುದರಲ್ಲಿತ್ತು. ಅಷ್ಟರಲ್ಲಿ ನಮ್ಮ ಮನೆಗೆ ಠಳಾಯಿಸಿದ ಕೆಲವರು ಕನ್ನಡ ಮೀಡಿಯಮ್ಮಿನಿಂದ ಹೋಗಿ ಪಿ.ಯು.ಸಿ ಯಲ್ಲಿ ಅದೂ ಇಂಗ್ಲೀಷಿನಲ್ಲಿ ವಿಜ್ಞಾನ ಓದುವುದು ಬಹುದೊಡ್ಡ ರಿಸ್ಕ್. ಅದರ ಬದಲು ಕಾಮರ್ಸಿಗೋ,  ಡಿಪ್ಲೋಮಾಗೋ ಸೇರಬಹುದಲ್ಲವೇ ಎಂಬ ಉಪದೇಶವನ್ನೂ ಕೊಟ್ಟರು. ಸಾಲದಕ್ಕೆ ಅದಕ್ಕೆ ಸೇರಿ ಫೇಲ್ ಆಗಿ ಮನೆ ಸೇರಿಕೊಂಡವರ ಅಥವಾ ಅದರ ನಂತರ ಡಿಪ್ಲೊಮಾ ಇನ್ನಿತರ ಕೋರ್ಸುಗಳಿಗೆ ತಗುಲಿಕೊಂಡವರ ಉದಾಹರಣೆ ಸಮೇತ ವಿವರಿಸುತ್ತಿದ್ದರು. ನನ್ನಲ್ಲಿ ಇರಬಹುದಾದ ಭಯವನ್ನು ಮತ್ತಷ್ಟು ಜಾಗೃತಗೊಳಿಸಲು ಯತ್ನಿಸುತ್ತಿದ್ದರು ಎನ್ನುವುದು ಮೇಲ್ನೋಟಕ್ಕೆ ತಿಳಿದುಬಿಡುವಷ್ಟಾದರೂ, ಅದ್ಯಾವ ಧೈರ್ಯದ ಮೇಲೆ ಹೋಗಿ ಸೇರಿಕೊಂಡೆನೋ ಈಗ್ಗೆ ಗೊತ್ತಿಲ್ಲ. ಬಹುಶಃ ಮೊಂಡು ಧೈರ್ಯ ವಿರಬಹುದೇನೋ, ಅಥವಾ ಇದೇ ಶ್ರೇಷ್ಠವೆಂಬ ಇತರರು ತುರುಕಿದ್ದ ಭಾವನೆಗಳೋ ಈಗ ಅರಿಯೆ. ಸರಿ ಅದರ ಮುಂದುವರಿದ ಭಾಗವಾಗಿ ಆಗಿದ್ದರ ಬಗ್ಗೆ ಖುಷಿಯಾಗಿ ಬರೆಯಬೇಕೆನಿಸುತ್ತದೆ. ಬರೆಯುತ್ತೇನೆ.

ಅದೊಂದು ದಿನ ಪ್ರಥಮ ಪಿ.ಯು.ಸಿ ಯಲ್ಲಿ ಬಯಾಲಜಿಯ ಬಾಟನಿ (ಸಸ್ಯಶಾಸ್ತ್ರ) ಪಾಠ ನಡೆಯುತ್ತಿತ್ತು. ಪಾಠವನ್ನು ಅಷ್ಟಾಗಿ ಯಾರೂ ಕೇಳುತ್ತಿರಲಿಲ್ಲವೆನ್ನಿ. ಇಂಗ್ಲೀಷಿನ ಮೇಲೆ ಆಗಾಧ ಹಿಡಿತವಿದ್ದುಬಿಟ್ಟಿದ್ದರೆ ನಾನು ಕೇಳುತ್ತಿರಲಿಲ್ಲವೇನೋ, ಮನೆಗೆ ಹೋಗಿ ಓದಿದರಾಯ್ತು ಎನ್ನುವ ನಿಲುವು ತಳೆಯುತ್ತಿದ್ದೆನೇನೋ. ಇಂಗ್ಲೀಷಿನ ಮೇಲಿನ ಭಯ ಅಂದಿನ ಪಾಠವನ್ನು ಅಲ್ಲೇ ಕ್ಲಾಸಿನಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಪಾಠದ ನಡುವಲ್ಲಿ ಏಕದಳ - ದ್ವಿದಳ ಸಸ್ಯಗಳ ಸ್ಥೂಲ ವರ್ಗೀಕರಣವನ್ನು ವಿವರಿಸುತ್ತಿದ್ದರು. ವರ್ಗೀಕರಣಕ್ಕೆ ಕಾರಣವಾದ ಅಂಶಗಳನ್ನು ಹೇಳುತ್ತಾ ಏಕದಳ ಸಸ್ಯಗಳು ದ್ವಿದಳ ಸಸ್ಯಗಳಷ್ಟು ಗಟ್ಟಿ ಬರುವುದಿಲ್ಲ. ದ್ವಿದಳ ಸಸ್ಯಗಳು ಮೂಲತಃ ಬಹಳ ಗಟ್ಟಿ, ಹಾಗು ಕೆಲವಂತೂ ಸಾವಿರಾರು ವರ್ಷ ಆಯುಷ್ಯ ಹೊಂದಿವೆ ಎಂದೆಲ್ಲ ವಿವರಿಸುತ್ತಿದ್ದರು. ಏಕದಳ ಸಸ್ಯಗಳು ದ್ವಿದಳ ಸಸ್ಯಗಳಷ್ಟು ಗಟ್ಟಿ ಬರಲಾರವು ಎಂದ ಮೇಲೆ ಅವುಗಳ ಉಂಟಾದ ಧಾನ್ಯಗಳನ್ನಷ್ಟೇ ಬಳಸುತ್ತಾರೆ, ಅದರ ಕಾಂಡದ ಉಪಯೋಗ ಯಾವುದೇ ಕಾರಣಕ್ಕೂ ಇಲ್ಲ ಎಂದರು. ನನಗೆ ಥಟ್ಟನೆ ನಮ್ಮೂರಿನಲ್ಲಿ ಥೇರು ಕಟ್ಟುತ್ತಿದ್ದು ಜ್ಞಾಪಕ ಬಂತು, ಅಷ್ಟೇ ಅಲ್ಲದೆ ಅಡಿಕೆಯ ಮರದ ತುಂಡುಗಳನ್ನು ಮಲೆನಾಡಿನ ಕಡೆ ಬೇಲಿ ಕಟ್ಟಲು ಬಳಸುತ್ತಿದ್ದುದನ್ನು ನೋಡಿದ್ದೆ, ಬಯಲು  ಸೀಮೆಯಲ್ಲಿ ಅಡಿಕೆ ಬೆಳೆದವರು ಅಡಿಕೆಯ ಕಟ್ಟಿಗೆಗಳನ್ನು ಮನೆಯ ಹೆಂಚಿನ ಛಾವಣಿಯ ರಿಪೀಸ್ ಪಟ್ಟಿಗಳಾಗಿ ಉಪಯೋಗಿಸಿದ್ದು ಕಂಡಿದ್ದೆ. ಇಷ್ಟಾದ ಮೇಲೆ ಏಕದಳ ಸಸ್ಯಗಳ ಕಾಂಡ ಉಪಯೋಗ ಇಲ್ಲವೇ ಇಲ್ಲ ಎಂದಿದ್ದು ಪ್ರಶ್ನಿಸಬೇಕು ಎನಿಸಿತು. ಪಾಠವನ್ನು ಅಮೂಲಾಗ್ರವಾಗಿ ಅರ್ಥ ಮಾಡಿಕೊಳ್ಳುತ್ತಿದ್ದುದರ ಒಂದು ಮುಖವು ಅದಾಗಿದ್ದರಿಂದ ನಮ್ಮ ಲೆಕ್ಚರರ್ ಮಾತು ಮುಂದುವರಿಸುವ ಮುನ್ನವೇ ತಡೆದೆ.

ಏಕದಳ ಸಸ್ಯಗಳ ಕಾಂಡ ಉಪಯೋಗ ಇಲ್ಲವೇ ಇಲ್ಲ ಎನ್ನುವುದು ಮಿಥ್ಯೆ, ನಮ್ಮೂರಿನಲ್ಲಿ ಥೇರು ಕಟ್ಟಲು ತೆಂಗಿನ ಮರದ ತುಂಡುಗಳನ್ನು ಬಳಸುತ್ತಾರೆ ಎಂದು ಬಿಟ್ಟೆ. ಇಡೀ ತರಗತಿ ಗೊಳ್ಳೆಂದು ನಕ್ಕಿಬಿಟ್ಟಿತು. ನನಗೆ ಏನೋ ತಪ್ಪು ಮಾಡಿದ ಅನುಭವಾಗಿ ನಾಚಿಕೆಯಾಗಿಬಿಟ್ಟಿತು, ತಲೆ ತಗ್ಗಿಸಿಬಿಟ್ಟೆ. ಇಂಗ್ಲೀಷು ಮೀಡಿಯಮ್ಮಿನಿಂದ ಬಂದವರ ಮುಂದೆ ಹಿಂಗೆ ನಡೆದುಕೊಳ್ಳಬಾರದಿತ್ತು, ಕ್ಲಾಸು ಮುಗಿದ ಮೇಲೆ ಕೇಳಿದರೂ ಆಗಿತ್ತು ಎಂದು ಒಳಗೊಳಗೇ ನನ್ನನ್ನೇ ಹಳಿದುಕೊಳ್ಳಲು ಆರಂಭಿಸಿದ್ದೆ.ಎಲ್ಲರನ್ನೂ ತಡೆದ ನಮ್ಮ ಲೆಕ್ಚರರ್ ಹೇಳಿದರು ನೀನು ಹೇಳುವುದರಲ್ಲೂ ಅರ್ಥವಿದೆ, ಅಂತಹ ಉಪಯೋಗಗಳಲ್ಲಿ ಏಕದಳ ಸಸ್ಯಗಳನ್ನು ಬಳಸಿಕೊಳ್ಳುತ್ತಾರೆನ್ನುವುದು ನನಗೂ ತಿಳಿದಿರಲಿಲ್ಲ. ಕ್ಲಾಸು ಮುಗಿದ ಮೇಲೆ ಬಂದು ನನ್ನನು ಕಾಣು ಎಂದು ಹೇಳಿ ಅಂದಿನ ಪಾಠ ಮುಗಿಸಿ ಹೋಗಿಬಿಟ್ಟರು.

ನನ್ನ ಹಿಂದಿನ ಬೆಂಚಿನ ಹುಡುಗರು 'ಯಾರ್ ಗುರು ಇವ್ನು ಪಕ್ಕಾ ಹಳ್ಳಿ ತುಂಡು, ಬಯಾಲಾಜಿಗೆ ಥೇರು ತಂದು ನಿಲ್ಲಿಸಿದ' ಎಂದು ಆಡಿಕೊಂಡು ನಗುತ್ತಲೇ ಇದ್ದರು,  ಅಂದಿನ ಕ್ಲಾಸು ಮುಗಿಯಿತು. ಸ್ಟಾಫ್ ರೂಮಿಗೆ ನಡೆದು ಹೋದೆ. ಅಲ್ಲಿದ್ದ ನಮ್ಮ ಬಯಾಲಜಿ ಲೆಕ್ಚರರ್ ನನ್ನ ಬಗ್ಗೆ, ಹಿನ್ನೆಲೆ ಎಲ್ಲವನ್ನೂ ತಿಳಿದುಕೊಂಡು ಇತರ ಲೆಕ್ಚರರ್ ಮುಂದೆ ನನ್ನನ್ನ ತೋರಿಸಿ ಹೊಗಳಿದ್ದೇ ಹೊಗಳಿದ್ದು. ಹಳ್ಳಿಯ ಸೊಗಡಿನ ಅನುಭವವೇನಾದರೂ ಯಾರಿಗಾದರೂ ಬೇಕಿದ್ದರೆ ಇವನನ್ನು ಕಂಡು ಮಾತನಾಡಿ ಎಂದು ಎಲ್ಲರಿಗೂ ಸಂತೋಷದಿಂದಲೇ ಹೇಳುತ್ತಿದ್ದರು. ಅಲ್ಲಿಂದಾಚೆಗೆ ಅವರು ಕ್ಲಾಸಿಗೆ  ಬರುವಾಗ ನೋಟ್ಸ್ ಮಾಡಿಕೊಂಡು ಬರುವುದು ರೂಢಿ ಮಾಡಿಕೊಂಡರು. ಎಲ್ಲಿ ಯಾವಾಗ ಏನು ಅನುಮಾನ ಬಂದರೂ ನೇರವಾಗಿ ಬಂದು ತನ್ನನ್ನೇ ಕಂಡು ಮಾತನಾಡುವಂತೆ ಹೇಳಿದ್ದಾರೆ. ಕೆಲವು ಬಾರಿ ಹೋಗಿದ್ದಾಗ ಕನ್ನಡದಲ್ಲಿಯೇ ಎಲ್ಲವನ್ನೂ ವಿವರಿಸಿ ಕಳುಹಿಸುತ್ತಿದ್ದರು.

ಅಂದಹಾಗೆ ಅಂದು ಆಡಿಕೊಂಡವರ ಪೈಕಿ ಒಬ್ಬರೋ ಇಬ್ಬರು ಪಾಸಾದರು. ಇನ್ನುಳಿದವರು ಏನೇನೋ ಆಗಿ ಹೋದರು. ಈಚೀಚಿಗೆ ಬೆಂಗಳೂರಿನ ವಿಜಯನಗರದಲ್ಲಿ ಓಲಾ ಕ್ಯಾಬಿನಲ್ಲಿ ಬರುತ್ತಿದ್ದಾಗ ಆ ಗುಂಪಿನ ಹುಡುಗನೊಬ್ಬ ಸಿಕ್ಕಿದ್ದ. ಓಲಾ ಕ್ಯಾಬಿನ ಡ್ರೈವರ್ ವೃತ್ತಿ ಅವನ ಹೊಟ್ಟೆ ತುಂಬಿಸುತ್ತಿತ್ತು. ಎಷ್ಟೋ ಹೊತ್ತಾದ ಮೇಲೆ ಅವನೇ ನನ್ನ ಗುರುತಿನ ಬಗ್ಗೆ ವಿವರಿಸಿದ, ನಾನೂ ಅವನ ಗುರುತು ಹಿಡಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗ ಆಡಿಕೊಂಡಿದ್ದೆ, ಅದನ್ನೇನು ಮನಸಿನಲ್ಲಿ ಇಟ್ಟುಕೊಂಡಿಲ್ಲ ಅಲ್ವಾ ಎಂದ. ಇಲ್ಲವೆಂದು ಗೋಣು ಅಲ್ಲಾಡಿಸಿ ನನ್ನ ಫೋನ್ ನಂಬರ್ ಅವನ ಕೈಗಿತ್ತು ಮನೆಗೆ ನಡೆದೆ. ಒಂದೇ ಕ್ಲಾಸಿನಲ್ಲಿ ಕುಳಿತಿದ್ದ ನಾವು ನಮ್ಮ ನಮ್ಮ ತಲೆ ಮೆರೆಸಿದಂತೆ ನಡೆದು ಹೋದ ದಾರಿಯ ನೆನೆಸಿಕೊಂಡು ನಾನೂ ಅರೆಕ್ಷಣ ಭಾವುಕನಾಗಿಹೋದೆ.

-o-





ಸೋಮವಾರ, ಜುಲೈ 29, 2019

ದೇವೋತ್ತಮ

ವೈರಾಗ್ಯವಂತ ಪಾರ್ಥನಿಗೆ 

ರಣಭೂಮಿಯೊಳಗೆ 

ಧೈರ್ಯದ ಬಿರುಗಾಳಿಯೆಬ್ಬಿಸಿದನು,

ತನ್ನವರೇ ಬಂಧು ಬಾಂಧವ ಗುರು 

ಹಿರಿಯರನು ತುಂಡರಿಸಿ ಚೆಂಡಾಡೆಂದನು,

ಅಧರ್ಮಕ್ಕೆಲುಬಾಗುವರ 

ನಡುವ ಮುರಿಯೆಂದನು ಧರ್ಮದಾತ.


ಭಿಕ್ಷಾರ್ಥಿಯಾದ ಕುಚೇಲನಿಗೆ

ಅರಮನೆಯಲ್ಲಿ ಪಲ್ಲಂಗವೇರಿಸಿ 

ಅವನ ಪಾದೋದಕ ತಲೆಗೆ 

ಪ್ರೋಕ್ಷಿಸಿ, ನಡಿಯೆಂದನು.

ಮನದ ತುಮುಲಗಳ ಅರ್ಥೈಸಿಕೊಂಡು 

ಕೇಳದೆಯೂ ಕರುಣಿಸಿದನು ಭಾಗ್ಯದಾತ.

ಪಂಚ ಪಾಂಡವರ ಮಡದಿಗೆ 


ಅಯೋಗ್ಯನೊಬ್ಬ ಮುಡಿಹಿಡಿದೆಳೆದಾಗ

ಧುತ್ತೆಂದು ಎದುರ್ಗೊಂಡನು,

ಅಸಂಸ್ಕೃತರನೇನು ಸುಸಂಸ್ಕೃತರ 

ಪಟ್ಟಕ್ಕೆಳೆಯಲಿಲ್ಲ.

ಅಲ್ಲಾಗಲಿದ್ದ ಅಸಂಸ್ಕೃತಿಗೆ ತೆರೆಯೆಳೆದು

ನಿಂತನಾಗ ನೀತಿದಾತ.


ಭಯಗೊಂಡವನ ವಂದಿಗಿದ್ದನು,

ನೊಂದು ಬೆಂದವನ ಜೊತೆಗಿದ್ದನು,

ಆರ್ತಳ ಕೂಗಿಗೆ ಓಡಿ ಬಂದನು,

ರಣಾಂಗಣದಲ್ಲಿ ಟೊಂಕ ಕಟ್ಟಿ ನಿಂತನು,

ಚತುರನಾದನು, ಮುಂದಣ ಪರ್ವಗಳ 

ಅರಿವಿದ್ದರೂ ಹುಸಿ ನಗೆಯೊಂದನು 

ಬೀರಿದ್ದನು.


ತಾನಿರುವ ಪರ್ಯಂತ ನಿಮ್ಮ 

ನಿಮ್ಮ ಕಾರ್ಯಕ್ಕೆ ತಕ್ಕಂತೆ 

ಬದುಕೊದಗುವುದು ಎಂಬುದನ್ನು 

ಸೂಚ್ಯವಾಗಿ ತನ್ಮೂಲಕ ಬಿತ್ತರಿಸುತ್ತಲೇ 

ಇದ್ದನವನು 

ಅರಿಯುವರ ಸಂಖ್ಯೆ ದೊಡ್ಡದಿರಲಿಲ್ಲವೇನೋ 

ಕೊನೆಗೆ 

ಅರಿತವರ ಪಾಲಿಗಾದನವನು 'ದೇವೋತ್ತಮ'.


ಭಾನುವಾರ, ಜುಲೈ 28, 2019

ನಾನು ಮತ್ತು ವಿಶ್ವ ಮಾನವ ಸಂದೇಶ ಭಾಗ ೨

ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನದಾರು
ಲೆಕ್ಕವಿರಿಸಿಲ್ಲ ಜಾಗ ತನ್ನಾದಿಬಂಧುಗಳ
ದಕ್ಕುವುದೇ ನಿನಗೆ ಜಸ - ಮಂಕುತಿಮ್ಮ

ಭಾವ ಋಷಿ ಡಿವಿಜಿಯವರ ಸಾಲುಗಳಿವು. ಪ್ರಪಂಚದಲ್ಲಿ ಎಂತೆತದೋ ಮಹಾನ್ ಘಟನೆಗಳು ಘಟಿಸಿ ಮುಗಿದಿವೆ, ಆದರೆ ಅವುಗಳಿಗೆ ಕಾರಣೀಕರ್ತನಾಗಿ/ಮೂಲ ಪುರುಷನಾಗಿ ಈ ಪ್ರಪಂಚ ಯಾವೊಬ್ಬ ವ್ಯಕ್ತಿಯನ್ನು ತನ್ನ ಜ್ಞಾಪಕದಲ್ಲಿರಿಸಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಹೆಸರಿಗಾಗಿ, ಕೀರ್ತಿಗಾಗಲಿ, ಹಣಕ್ಕಾಗಿ ಬದುಕಿರುವವರೆಗೂ ಬಡಿದಾಡಿ ಸಾಯುತ್ತೇವಲ್ಲ ಇದು ಯಾವ ಪುರುಷಾರ್ಥಕ್ಕಾಗಿ?. ಅದರಲ್ಲಿ ನಾವು ಪ್ರಕೃತಿಯನ್ನು ಎದುರಿಸಿ ಜಯಿಸಲು ಸಾಧ್ಯವೇ? ಎನ್ನುವ ನಿಲುವು ಡಿ.ವಿ.ಜಿಯವರದು.ವಯ್ಯಕ್ತಿಕ ಬೇಕುಗಳಿಗಷ್ಟೇ ಬಡಿದಾಡದೆ, ಸಮೂಹವೊಂದರಲ್ಲಿ ಗುರುತಿಸಿಕೊಂಡ ಮನುಷ್ಯ ತನ್ನ ಸಮೂಹಕ್ಕಾಗಿ ಬಡಿದಾಡುತ್ತಿರುವುದು, ಅಂತಹ ಸಮೂಹ ಬಡಿದಾಟ ಕೂಟಕ್ಕೆ ಸೊ ಕಾಲ್ಡ್ ಸರ್ಕಾರ, ಇನ್ನಿತರ ಸಂಸ್ಥೆಗಳಿಂದ ಒಪ್ಪಿಗೆಯ ಮುದ್ರೆಯಿರುವುದು ಮನುಷ್ಯ ಇನ್ನೂ ಹೊಂದಿಕೊಂಡು ಬಾಳಲಾರ ಎಂಬುದನ್ನು ಎತ್ತಿ ತೋರಿಸುವಂತಿದೆ. ಬೇರೆ ದೂರವೆಲ್ಲೋ ಬೇಡ, ನಮ್ಮ ಭಾರತದ ಗಡಿಗಳನ್ನು ಒಂದು ದಿನದ ಮಟ್ಟಿಗೆ ಸೇನೆ ಜಮಾವಣೆಯಿಂದ ಹಿಂತೆಗೆದರೆ ಬೆಳಗು ಹರಿಯುವುದರೊಳಗೆ ಎಷ್ಟೆಷ್ಟು ಅನಾಹುತಗಳಿಗೆ ದಾರಿಯಾಗುತ್ತದೆ ಎಂದು ಊಹೆ ಮಾಡಿಕೊಂಡರೆ ಸಾಕು, ಎದೆ ಝಲ್ಲೆನ್ನುತ್ತದೆ. ಸರ್ಕಾರವೇ ಮುಂದೆ ನಿಂತು ನಿಲ್ಲಿಸಿರುವ ಸೇನೆ ಎತ್ತಿ ತೋರಿಸುತ್ತಿರುವುದು ಅದನ್ನೇ ನಾವು ಕೂಡಿ ಬಾಳಲಾರೆವೆಂದು. ಗಡಿಯಿಂದ ಅತ್ತಲಿರುವ ಜನರು ಹಿಂದೊಮ್ಮೆ ನಮ್ಮವರೇ ಆಗಿದ್ದರು ಎಂಬ ಅರಿವು ನಮಗಷ್ಟೇ ಅಲ್ಲ ಅವರಿಗೂ ಇದ್ದುಬಿಟ್ಟರೆ ಭಾರತ-ಪಾಕಿಸ್ತಾನಗಳು ರಾಮ ರಾಜ್ಯಗಳಾಗಿಬಿಡುತ್ತಿದ್ದವು. ಸದ್ಯಕ್ಕೆ ಅದು ಕನಸಿನ ಮಾತು ಅಷ್ಟೇ.

ವಿಶ್ವ ಮಾನವ ಸಂದೇಶದಲ್ಲಿ ರಸಋಷಿ ಹಂಬಲಿಸುತ್ತಾರೆ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಎಲ್ಲ ಧರ್ಮಗ್ರಂಥಗಳನ್ನು ಓದಿ ತನ್ನ ಧರ್ಮವನ್ನು ತಾನೇ ದರ್ಶಿಸಿಕೊಳ್ಳಬೇಕು, ಯಾವುದೋ ಒಂದು ಗ್ರಂಥಕ್ಕೆ ಕಟ್ಟು ಬೀಳದೆ ಮನುಕುಲಕ್ಕೆ ಉಪಕಾರಿಯಾಗಿ ನಿಲ್ಲುವ ಅಂಶಗಳನ್ನು ತೆಗೆದುಕೊಂಡು ತನಗಾಗಿಯೇ ವೈಯಕ್ತಿಕವಾದ ಗ್ರಂಥವೊಂದನ್ನು ತೀರ್ಮಾನ ಮಾಡಿಕೊಂಡು ಅದರಂತೆ ನಡೆಯಬೇಕು. ಹೀಗಾದಾಗ ಪ್ರಪಂಚದಲ್ಲಿ ಎಷ್ಟು ಜನರು ಇರುತ್ತಾರೆಯೋ ಅಷ್ಟೇ ಸಂಖ್ಯೆಯ ಧರ್ಮಗಳು ಇರುತ್ತವೆ.  ಒಂದೇ ಸಿದ್ಧಾಂತಕ್ಕೆ ಹಲವಾರು ಜನರು ಒಟ್ಟಾದಾಗ ಮಾತ್ರ ಅದರೊಳಗೆ ನಾವು, ನಮದೆಂಬ ಹೊಮ್ಮು ಕಾಣಿಸಿಕೊಳ್ಳುವುದು. ಅದೇ ಬದಲಾಗಿ ಒಂದು ಸಿದ್ಧಾಂತಕ್ಕೆ ಒಬ್ಬೊಬ್ಬರು ಮಾತ್ರವಿದ್ದಾಗ ನಾವು ನಮದೆಂಬ ಹೊಮ್ಮು ಅಲ್ಲಿ ಸುಳಿಯಲಾರದು, ಅದನ್ನು ಇನ್ನೊಬ್ಬರ ಮುಂದೆ ಪ್ರದರ್ಶಿಸಿ ಶಹಬಾಸ್ ಗಿರಿ ಪಡೆದುಕೊಳ್ಳುವ ಚಾಳಿ ಸಂಪೂರ್ಣವಾಗಿ ನಿಂತುಹೋಗಬೇಕು. ಅಂತಹ ವೈಯಕ್ತಿಕ ಸಿದ್ಧಾಂತಗಳನ್ನು ಪ್ರಶಂಸಿಸುವ ವೇದಿಕೆಗಳು ಕೂಡ ಕ್ರಮೇಣ ನಿಸ್ತೇಜವಾಗುತ್ತ ಬಂದರೆ ಪ್ರತಿಯೊಬ್ಬನು ಅವನದೇ ಧರ್ಮವೊಂದನ್ನು ಕಡೆದು ನಿಲ್ಲಿಸಿಕೊಳ್ಳಲು ಸಾಧ್ಯವಿದೆ.ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕಿ ತೋರಿಸುವುದೇ ಮಾನವನ ಜೀವನದ ಪರಮ ಧ್ಯೇಯವಾಗಬೇಕು.ಪ್ರಪಂಚದಲ್ಲಿ ಮತ್ತೊಬ್ಬರನ್ನು ತಾವು ನಂಬಿದ ಸಿದ್ಧಾಂತಕ್ಕೆ/ತತ್ವಕ್ಕೆ ಒಗ್ಗಿಕೊಂಡು ಬಾಳಬೇಕೆಂಬುವ ಹಂಬಲವನ್ನು ಬಿಟ್ಟುಬಿಡುವುದೇ ಉತ್ತಮವೆನಿಸುತ್ತದೆ.

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಪುಸ್ತಕವೊಂದಕ್ಕೆ ಕಟ್ಟು ಬಿದ್ದ ಕೆಲವರು ಅಮಾಯಕರನ್ನು ನಿಷ್ಕಾರುಣವಾಗಿ ಕೊಂದರು, ಪಶ್ಚಿಮ ದೇಶಗಳಿಂದ ಪೂರ್ವ ದೇಶಗಳಿಗೆ ಸಿದ್ಧಾಂತಗಳ ಕಂತೆಯ ಹೊತ್ತುಕೊಂಡ ಬುದ್ಧಿವಂತರೆನಿಸಿಕೊಂಡವರ ಗುಂಪೊಂದು ಬಂದು ಇಲ್ಲಿನವರಿಗೆ ಅಲ್ಲಿಯ ಸಿದ್ಧಾಂತಗಳನ್ನು ಹೇರಲು ತುದಿಗಾಲಲ್ಲಿ ನಿಂತಿರುವುದು ಎನ್ನುವ ವಿಚಾರಗಳನ್ನು ಕೇಳಿದಾಗ ಎತ್ತ ಸಾಗುತ್ತಿದೆ ಆಧುನಿಕ ಜಗತ್ತು ಎನ್ನುವ ಅನುಮಾನ ಮೂಡುತ್ತಿದೆ. ಜನ ಹೆಚ್ಚು ಹೆಚ್ಚು ಓದಿಕೊಂಡಷ್ಟು ಬುದ್ಧಿವಂತರಾಗಿ ಒಳಿತು ಕೆಡಕುಗಳ ದೂರಾಲೋಚನೆ ಮಾಡುತ್ತಾರೆ ಎಂಬ ಹಳೆಯ ತಲೆಮಾರಿನವರ ನಿಲುವು ತಪ್ಪಾಗಿಬಿಡುವುದಕ್ಕೆ ಆಸ್ಪದವನಂತೂ ಕೊಡಲೇ ಬಾರದು. ಎಲ್ಲಕಿಂತ ಮಿಗಿಲಾಗಿ ನಾವು ನಾವೇ ಕಟ್ಟಿಕೊಂಡ ತತ್ವ ಸಿದ್ಧಾಂತಗಳನ್ನು ಮಗ್ಗುಲಿಗೆ ಸರಿಸಿ ಮನುಷ್ಯರಾಗಿ ಬದುಕುವುದು ಮೊದಲಾಗಬೇಕು.

ಅಂದಹಾಗೆ, ವೈಯಕ್ತಿಕ ಸಿದ್ಧಾಂತಗಳು ಈಗ್ಗೆ ಹೊಸವೇನಲ್ಲ. ಹಿಂದಿನಿಂದಲೂ ಅವು ಸರ್ವೇ ಸಾಮಾನ್ಯವಾಗಿ ಇದ್ದಂತಹವು. ವ್ಯತ್ಯಾಸವಿಷ್ಟೇ, ಆಗ ಮತ್ತೊಬ್ಬರ ಮೇಲೆ ಅವುಗಳನ್ನು ಹೇರಲು ಇದ್ದ ಮಾಧ್ಯಮಗಳ ಸಂಖ್ಯೆ ತೀರಾ ವಿರಳ ಇದೀಗ ವಿಪರೀತ ಹೆಚ್ಚು. ಅದೇ ಕಾರಣಕ್ಕೆ ಸಮಾಜದಲ್ಲಿನ ಕಂದಕಗಳು ಹೆಚ್ಚಾಗುತ್ತಿರುವುದು.

ಶನಿವಾರ, ಮೇ 25, 2019

ದಕ್ಷಿಣ-ಉತ್ತರಗಳ ಶೀತಲ ಸಮರ

ಪ್ರಪಂಚದಲ್ಲಿ ಮಾನವ ತನ್ನ ಹೆಜ್ಜೆಯೂರಿ ತನ್ನದೇ ಒಂದು ನಾಗರೀಕತೆ ಕಡೆದು ನಿಲ್ಲಿಸಿಕೊಳ್ಳುವಾಗ ಪ್ರಕೃತಿ ತಾನು ಸುಮ್ಮನೆ ಕುಳಿತಿರಲಿಲ್ಲ. ಸರ್ವವನ್ನು ಮಾನವನ ಕೈಗಿತ್ತು ತಾನು ಕೈಚೆಲ್ಲಿಯೂ ಇರಲಿಲ್ಲ. ಮಂಗನ ರೂಪದಲ್ಲಿದ್ದ ಸಸ್ತನಿ ಪ್ರಾಣಿಗಳ ವರ್ಗವೊಂದು ಅಪಾರ ಬುದ್ಧಿಮತ್ತತೆ ಮೆರೆದು ಉನ್ನತ ಸ್ಥರದತ್ತ ದಾಪುಗಾಲಿಡುತ್ತಿರುವಾಗಲೂ ಪ್ರಕೃತಿಯಲ್ಲಿ ವಿನಾಶಗಳು, ವಿಕೋಪಗಳು ಜರುಗುತ್ತಲೇ ಸಾಗಿದ್ದವು. ತನ್ನ ಜಾಗೃತಗೊಂಡ ಬುದ್ಧಿಯಿಂದ ನೋಡಿದ ಮಾನವನಿಗೆ ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವುದರ ಜೊತೆಗೆ ಪ್ರಕೃತಿ ರುದ್ರಾವತಾರ ತಾಳಿದಾಗ ತಪ್ಪಿಸಿಕೊಂಡು ಬದುಕುವುದೂ ಅಂದಿನ ಕಾಲಮಾನದ ಬಹುಮುಖ್ಯ ಅವಶ್ಯಕತೆಯೂ ಆಗಿಹೋಯಿತು. ವಿಕೋಪ, ವಿನಾಶಗಳಲ್ಲದ ಸಮಯದಲ್ಲಿಯೂ ತನ್ನ ಜೀವದ ಹಂಗಿಗಾಗಿ ಹೋರಾಡಿ ಉಳಿದುಕೊಳ್ಳುವ ವರಸೆಯೊಂದನ್ನು ಮನುಷ್ಯ ಹೊಸದಾಗಿ ಕಲಿತ ಎನ್ನುವುದಕ್ಕಿಂತ, ಪ್ರಕೃತಿಯೇ ಅದನ್ನು ಕಲಿಸಿರುವುದನ್ನು ಲಾಗಾಯ್ತಿನಿಂದಲೂ ಕಾಣುತ್ತಲೇ ಬರಬಹುದು.

ಅಂತಹವುಗಳಲ್ಲಿ ಮುಖ್ಯವಾದದ್ದು ವಲಸೆ ಹೋಗುವುದು ಮಾನವ ಕುಲ ಉಗಮವಾದಾಗಿನಿಂದ ನಡೆದಿರುವ ನಡೆಯುತ್ತಿರುವ ವಿದ್ಯಮಾನ. ನೀರಿದ್ದ ಕಡೆಗೆ ಅಥವಾ ವನ್ಯ ಜೀವಿಗಳಿಂದ ಸುರಕ್ಷಿತವಾಗಿರಬಹುದಾದ ಪ್ರದೇಶಗಳಿಗೆ ವಲಸೆಹೋಗುವುದು ಹಿಂದಿನಿಂದಲೂ ಬಂದಿರುವ ಪ್ರಕ್ರಿಯೆಯೇ. ತಂತ್ರಜ್ಞಾನ ಬೆಳೆದು ಮಾನವನ ದೇಹಕ್ಕೆ ಬಹಳಷ್ಟು ಕಷ್ಟವಿಲ್ಲದಂತಹ  ದಿನಗಳು ಈಗಾಗಲೇ ಅನುಭವಕ್ಕೆ ಬಂದಿವೆ. ನೀರು-ನಿಡಿ, ವನ್ಯಜೀವಿಗಳಿಗೆ ಬೆದರಿ ಕಾಲ್ಕೀಳುವ ಬದಲು ಅವಕ್ಕೆಲ್ಲ ಸೆಡ್ಡು ಹೊಡೆದು ಅಲ್ಲೇ ನೆಲೆ ನಿಲ್ಲುವ ಛಾತಿಯನ್ನು ಮನುಷ್ಯ ರೂಢಿಸಿಕೊಂಡಿದ್ದಾನೆ. ನೀರಿಲ್ಲದಿದ್ದರೆ ನೂರಾರು ಮೈಲುಗಳಿಂದ ಪಂಪು ಮಾಡಿ ನೀರನ್ನು ತರಬಲ್ಲ, ವನ್ಯಜೀವಿಗಳ ಭಯವಂತೂ ಕೇಳುವ ಗೋಜೇ ಬೇಡ, ಪಾಪ ಅವು ನಮ್ಮಿಂದ ಸುರಕ್ಷಿತವಾಗಿದ್ದರೆ ಸಾಕು ಅನ್ನುವ ಮಟ್ಟಕ್ಕೆ ತಲುಪಿ ಸರ್ಕಾರ ನಡೆಸುವ ಅಭಯಾರಣ್ಯಗಳಲ್ಲಿ, ಸಂರಕ್ಷಿತ ಕಾಡುಗಳಲ್ಲಿ ಗಪ್-ಚಿಪ್ ಆಗಿ ಹೋಗಿವೆ.

ಇಷ್ಟೆಲ್ಲಾ ಸಾಧಿಸಿ ಬೀಗುವ ಮನುಷ್ಯ ತಾನೇ ಹೆಣೆದುಕೊಂಡ ಬಲೆಗೆ ಬೀಳುವುದರಲ್ಲಿ ಎತ್ತಿದ ಕೈ ಅಲ್ಲವೇ. ಮನುಷ್ಯನ ಆಧುನಿಕ ಅವಶ್ಯಕತೆಗಳನ್ನು ಪೂರೈಸಲು, ಅಷ್ಟೇಕೆ ಸರ್ವೇ ಸಾಧಾರಾಣವಾಗಿ ಬದುಕು ಸಾಗಿಸಲು ಹಣವನ್ನು ಹುಟ್ಟುಹಾಕಿದ. ಅದೇ ಹಣವನ್ನು ಸಂಪಾದಿಸಲು ಆದಿಕಾಲದಂತೆ ಮತ್ತೆ ವಲಸೆಗೆ ಹಚ್ಚಿಕೊಳ್ಳುತ್ತಿರುವನೂ ಅವನೇ. ಹೊಸದನ್ನೇನೋ ಮಾಡಲುಹೋಗಿ ಮಗದೊಂದು ತೊಂದರೆಗೆ ಸಿಲುಕಿಕೊಳ್ಳುವ ಮನುಷ್ಯ ಸಾಬೀತುಪಡಿಸುತ್ತಿರುವುದೇನೆಂದರೆ ಪ್ರಕೃತಿಯ ಮುಂದೆ 'ನಾನಿನ್ನೂ ಕಲಿಯುತ್ತಿರುವ ಎಳೆಗರುವಷ್ಟೇ' ಎನ್ನುವುದರ ಹೊರತಾಗಿ ಮತ್ತೇನೂ ಅಲ್ಲ. ಇರಲಿ, ಹಣದ ಹಂಬಲಕ್ಕೆ ಬಿದ್ದ ಮನುಷ್ಯ ಮತ್ತೆ ಅದೇ ದಾರಿ ಹಿಡಿದ. ವಲಸೆ. ಆದರೆ ಜ್ಞಾಪಕವಿರಲಿ. ಈ ವಲಸೆಯ ಕಾಲಘಟ್ಟಕ್ಕೆ ಬರುವಷ್ಟರಲ್ಲಾಗಲೇ ಅವನು ತನ್ನನು ತಾನು ಸಂಸ್ಕೃತಿಯೊಂದಕ್ಕೆ, ಭಾಷೆಯೊಂದಕ್ಕೆ, ಸಂಪ್ರದಾಯವೊಂದಕ್ಕೆ ಬಿಗಿಯಾಗಿ ಕಟ್ಟಿಕೊಂಡಿದ್ದ. ಆತ ಆದಿಕಾಲದ ವಲಸೆಗಾರನಾಗಿ ಉಳಿದಿಲ್ಲ. ತನ್ನದೇ ಚೌಕಟ್ಟು ಇರುವ ಒಬ್ಬ ನಾಗರೀಕನಾಗಿ ಬೆಳೆದು ನಿಂತು ಹಣಕ್ಕಾಗಿ ಮತ್ತೆಲ್ಲಿಗೋ ವಲಸೆ ಹೊರಟಿದ್ದಾನೆ.

ವಲಸೆ ಹೋದವ, ಬರಿಗೈಯಲ್ಲಿ ವಲಸೆ ಹೋದರೂ ಬರಿ ತಲೆಯಲ್ಲಿ ಹೋಗಲಿಲ್ಲ. ತನ್ನ ಸುತ್ತಲ ಪರಿಸರ, ವಾತಾವರಣ ತನಗೆ ಧಾರೆಯೆರೆದಿದ್ದ ಎಲ್ಲವನ್ನು ಹೊತ್ತುಕೊಂಡು ಹೊರಟುಬಿಟ್ಟ.ತಾನು ಕಲಿತಿದ್ದ ಕೆಲವನ್ನು ಅಲ್ಲಿಯೂ ಪ್ರಯೋಗಿಸಲು ನೋಡಿದ. ಕೆಲವು ಕಡೆ ನಯವಾದ ಜನಾಂಗ ಹೊಸದೇನೇ ಬಂದರು ಬಿಗಿದಪ್ಪಿಕೊಂಡು ಕಲಿತುಬಿಟ್ಟರು. ಇನ್ನು ಹಲವೆಡೆ 'ಪರಕೀಯ' ಭಾವನೆಯಿಂದ ಕಂಡುಬಿಟ್ಟರು. ಮತ್ತೊಬ್ಬರದನ್ನು ಪರಮ ಶ್ರೇಷ್ಠವೆಂದು ಒಪ್ಪಿಕೊಂಡರೆ ಸ್ಥಳೀಯ ವಿಚಾರಗಳು ಮೌಲ್ಯಹೀನವಾಗಿಬಿಡುವುದಿಲ್ಲವೇ ಎಂಬ ವಾದ ಹಿಡಿದ ಕೆಲವರು ಹೋರಾಟದ ಹಾದಿ ಹಿಡಿದರು. ಜಾಗತೀಕರಣದ ಹೊಸ್ತಿಲಲ್ಲಿ ನಿಂತು ಬೀಗುತ್ತಿರುವ ಆಧುನಿಕ ವಿಶ್ವದ ಆಧುನಿಕ ತೊಳಲಾಟವಿದೇ. ಇತ್ತೀಚಿಗೆ ಇದು ತೀರಾ ಪ್ರಸ್ತುತವೆನಿಸದ್ದು ಭಾರತದಲ್ಲಿ ಉತ್ತರ - ದಕ್ಷಿಣವೆಂಬ ಕಲ್ಪನೆಗೆ ಉಗ್ರ ಅವತಾರ ಕೊಟ್ಟು ಒಬ್ಬರ ಮೇಲೊಬ್ಬರು ಕೆಸರು ಎರಚಾಡಿಕೊಂಡಾಗ.

ಅತೀವ ಜನರು ಒಂದು ಕಡೆಗೆ ವಲಸೆ ಹೋಗಿ ದೊಡ್ಡ ನಗರ ನಿರ್ಮಾಣವಾಗಿ ಅಲ್ಲಿನ ಪ್ರಾಂತೀಯ ಸಂಸ್ಕೃತಿ ದಮನವಾಗುತ್ತಿರುವುದು ಸುಳ್ಳಲ್ಲ. ಒಂದು ಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳುವುದು ಪ್ರಕೃತಿ ನಿಯಮ. ಅಂತೆಯೇ ಅಗಾಧ ಅಭಿವೃದ್ಧಿ ಬಯಸಿ ಐ ಟಿ ಕ್ಷೇತ್ರ ಬರ ಮಾಡಿಕೊಂಡ ನಾವು ಕಾಲದ ಹೊಡೆತಕ್ಕೆ ಸಿಕ್ಕು ಪಶ್ಚಿಮ ಸಂಸ್ಕೃತಿ ಅಪ್ಪಿಕೊಂಡಿದ್ದಷ್ಟೇ ಅಲ್ಲದೆ ನಮ್ಮ ಭಾಷೆ ಸಂಸ್ಕೃತಿಗಳ ವಿನಾಶಕ್ಕೆ ಆಗಾಗ ಮರುಗುತ್ತಲೇ ಇದ್ದೇವೆ. ಐ ಟಿ ಕ್ಷೇತ್ರ ಬಹುವಾಗಿ ಬೆಳೆದಿದ್ದು ಭಾರತದ ದಕ್ಷಿಣದಲ್ಲಿ. ಅಭಿವೃದ್ಧಿ, ಆಧುನಿಕತೆ ಹೆಸರಲ್ಲಿ ಐ ಟಿ ಕ್ಷೇತ್ರ ಬೆಳೆಸಿ ಇಂದಿಗೆ ದುಬಾರಿ ಆದಾಯ ದೇಶಕ್ಕೆ ತರುವ ವ್ಯವಹಾರವನ್ನಾಗಿಸಿದ್ದೇವೆ. ಆದಾಯವಿದ್ದ ಮೇಲೆ ಜನ ವಲಸೆ ಬರುವುದು ಸರ್ವೇ ಸಾಮಾನ್ಯ, ಅವರೊಂದಿಗೆ ಸಂಸ್ಕೃತಿ ಭಾಷೆ ವಿನಿಮಯ ಅವಶ್ಯಕ. ಅದರ ಮಗ್ಗುಲಲ್ಲೇ ಸ್ಥಳೀಯ ಸಂಸ್ಕೃತಿ ದಮನವಾಗದಂತೆ ಕಾಯುವುದು ಮೂಲ ಜನಾಂಗದ ಅತಿ ಮುಖ್ಯ ಧ್ಯೇಯವಾಗುತ್ತದೆ. ಒಂದೊಂದು ಪ್ರಾಂತಗಳಲ್ಲಿ ಈ ಧ್ಯೇಯಗಳಿಗೆ ಸರ್ಕಾರವೇ ರೂಪು ರೇಷೆ ಬರೆದಿರುವುದು ಸಂತೋಷದಾಯಕವಷ್ಟೇ.

ಇಡೀ ದಕ್ಷಿಣ ಭಾರತದ ರಾಜ್ಯಗಳೆಲ್ಲ ಸೇರಿದರು 25ಕೋಟಿ ಸಂಖ್ಯೆಯ ಗಡಿ ದಾಟುವುದು ಅಸಾಧ್ಯವೆನ್ನುವ ಸ್ಥಿತಿಯಲ್ಲಿ ಹತ್ತಿರ ಹತ್ತಿರ 60ಕೋಟಿಯಷ್ಟಿರುವ ಭಾರತೀಯ ಹಿಂದಿ ಭಾಷಿಗರು ಉದ್ಯೋಗದ ಕಾರಣಕ್ಕಾಗಿ ದಕ್ಷಿಣಕ್ಕೆ ಕಾಲ್ಕಿತ್ತಿದ್ದು ತೀರಾ ಗೊತ್ತಿಲ್ಲದ ವಿಚಾರವೇನಲ್ಲ.ಸರ್ವಕಾಲೀನ ನದಿಗಳು ಭಾರತದ ಉತ್ತರದಲ್ಲಿದ್ದು ಸಮತಟ್ಟಾದ ಭೂಮಿಯನ್ನು ಹೊಂದಿರುವ ಕಾರಣವೂ ಮುಂದಾಗಿ ಉತ್ತರದಲ್ಲಿ ಅದರಲ್ಲೂ ಜನ ದಟ್ಟಣೆಯಿರುವ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶಗಳಲ್ಲಿ ಆಧುನಿಕ ಕಾಲಘಟ್ಟದಲ್ಲಿ ಅತಿ ಹೆಚ್ಚಿನ ಉದ್ಯೋಗ ಒದಗಿಸಬಹುದಾದ ಐಟಿ ಕ್ಷೇತ್ರ ಅಷ್ಟಾಗಿ ತಲೆಯೆತ್ತಲಿಲ್ಲ. ಈಗೀಗ ನೋಯ್ಡಾ,  ದೆಹಲಿಗಳಲ್ಲಿ ತಲೆಯೆತ್ತುತ್ತಿವೆಯಾದರೂ ಬೆಂಗಳೂರು-ಹೈದೆರಾಬಾದ್ ಗಳಲ್ಲಿ ಬೆಳೆದ ಐಟಿ ಮುಂದೆ ಅದು ಅಲ್ಪವಷ್ಟೇ.ದ್ರಾವಿಡ ಭಾಷಾವರ್ಗ ಪ್ರಬಲವಾಗಿರುವ ದಕ್ಷಿಣದಲ್ಲಿ ಹಿಂದಿ ಭಾಷಿಗರ ಜನಸಂಖ್ಯೆ ಬೆಳೆಯಲು ಇದೊಂದು ಅತ್ಯಂತ ಪ್ರಮುಖ ಕಾರಣ.

ದಕ್ಷಿಣಕ್ಕೆ ಭಾಷೆಯ ತೊಂದರೆಯೇಕೆ?.

ಬ್ರಿಟೀಷರ ಕಪಿ ಮುಷ್ಟಿಯಲ್ಲಿದ್ದ ಭರತ ಖಂಡಕ್ಕೆ ಸ್ವಾತಂತ್ರ್ಯ ಬರಲು ಎರಡು ಶತಮಾನಗಳೇ ಬೇಕಾದವು. ಅದರಲ್ಲೂ ಹೇಳಿಕೊಳ್ಳುವ ಹೋರಾಟಗಳು ಆರಂಭವಾಗಿದ್ದು 1857ರ ಸಿಪಾಯಿ ದಂಗೆಯ ನಂತರವೇ. ಸ್ವಾತಂತ್ರ್ಯ ಸಿಕ್ಕಿದರೆ ಸಾಕು ಎನ್ನುವಂತಹ ಪರಿಸ್ಥಿತಿಗೆ ತಲುಪಿದ್ದ ಅಂದಿನ ತಲೆಮಾರು ಸ್ವಾತಂತ್ರ್ಯಾನಂತರ ನಡೆಯಬಹುದಾದ ಆಡಳಿತೆಯ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ. ಭಾರತದಲ್ಲಿ ಆಗಿದ್ದ ಅತ್ಯಲ್ಪ ವಿದ್ಯಾವಂತರಿಗೆ ಆ ಬಗ್ಗೆ ಕೆಲವು ಸೂಕ್ಷ್ಮತೆಗಳು ಅರಿವಿದ್ದರೂ ಅವಿದ್ಯಾವಂತರಿಗೆ ತಲುಪಲು ಸಾಧ್ಯವೂ ಆಗಿರಲಿಲ್ಲ. ಆ ಕಾರಣಕ್ಕಾಗಿಯೇ ಭಾರತದ ಪ್ರಜಾತಂತ್ರ ವ್ಯವಸ್ಥೆ ಪಶ್ಚಿಮದ ಎರವಲು ಹಾಗು ಇಲ್ಲಿನ ಆಗಿನ ವಿದ್ಯಾವಂತರ ದೂರಾಲೋಚನೆ.ಭಾರತದ ಸರ್ವ ಜನರ ಅಭಿಪ್ರಾಯವೂ ಅದೇ ಆಗಿತ್ತು ಎನ್ನಲು ಸಾಧ್ಯವಿಲ್ಲ. ಅದು ಹಾಗಿರಲು ಸಾಧ್ಯವಿಲ್ಲವೆಂಬ ವಾದಕ್ಕೆ ಪುಷ್ಟಿ ನೀಡುವ ದಾಖಲೆಗಳೂ ಯಾವುವು ಇಲ್ಲ. ಅದಾಗಿ ಬ್ರಿಟಿಷರ ಹಿಡಿತದಿಂದ ಸಡಿಲಗೊಂಡು ಸ್ವಾತಂತ್ರ್ಯ ಪಡೆಯುವುದು ಖಾತ್ರಿಯಾದಾಗಲೇ ದೇಶದಲ್ಲಿ ಸ್ವಾತಂತ್ರ್ಯಾನಂತರ ವ್ಯವಸ್ಥೆಯೇನು? ಎನ್ನುವಂತಹ ಪ್ರಶ್ನೆಗಳು ಎದ್ದಿದ್ದು ಮತ್ತು ಅನೇಕರು ಅದಕ್ಕೆ ಉತ್ತರ ಕಂಡು ಹಿಡಿಯಲು ಟೊಂಕ ಕಟ್ಟಿ ನಿಂತಿದ್ದು. ಆಗ್ಗೆ ಪಶ್ಚಿಮದಲ್ಲಿ ನಡೆದಿದ್ದ ಫ್ರೆಂಚ್ ಕ್ರಾಂತಿ, ರಷ್ಯಾ ಕ್ರಾಂತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಹಾಗು ಕ್ರಾಂತಿಯ ಅನಂತರ ಆ ದೇಶಗಳಲ್ಲಿ ಆಡಳಿತ ವ್ಯವಸ್ಥೆ ಸುಲಭಗೊಂಡ ವಿಧಾನಗಳನ್ನು ಅರಿತಿದ್ದ ಆಗಿನ ಭಾರತೀಯ ವಿದ್ಯಾವಂತರು ಪ್ರಜಾತಂತ್ರ ವ್ಯವಸ್ಥೆಯನ್ನೇ ಅನುಮೋದಿಸಲು ಹೆಚ್ಚು ಸಮಯವೇನು ಹಿಡಿಯಲಿಲ್ಲ.ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ವಿಕೇಂದ್ರೀಕರಣದ ಪ್ರಶ್ನೆಗಳು ಹುಟ್ಟಿಕೊಂಡಾಗ ಅದಕ್ಕೆ ಉತ್ತರವಾಗಿ ಹೊಮ್ಮಿದ್ದೇ ರಾಜ್ಯವಾರು ಪ್ರಾಂತ ವಿಂಗಡಣೆ.

ಹಿಂದಿದ್ದ ಸಂಸ್ಥಾನಗಳಂತೆ ರಾಜ್ಯ ರಚನೆಯಾಗುವುದಾದರೆ ಹಿಂದಿನ ಅರಸರು ತಮ್ಮ ಶಕ್ತ್ಯಾನುಸಾರ ಯುದ್ಧಮಾಡಿ ಸಂಪಾದಿಸಿದ ಗೆದ್ದ ಭೌಗೋಳಿಕ ಪ್ರಾಂತಕ್ಕೆ ಬೆಲೆ ಕೊಟ್ಟಂತಾಗುತ್ತಿತ್ತು ಹಾಗು ಅಲ್ಲಿನ ಬಹು ಸಂಸ್ಕೃತಿ, ವೇಷ-ಭಾಷೆಗಳಲ್ಲಿ ಯಾವುದನ್ನು ಎತ್ತಿ ಹಿಡಿಯಬೇಕೆನ್ನುವ ಗೊಂದಲಗಳು ಉಂಟಾಗುತ್ತಿದ್ದುದು ವೇದ್ಯವಾಗುತ್ತಿತ್ತು. ಈ ವಿಚಾರಗಳ ಮೇಲೆ ಗಮನ ಹರಿಸಿದ್ದ ಆಗಿನ ಪ್ರಸಿದ್ಧ ಗಾಂಧೀವಾದಿ ಶ್ರೀ.ಪೊಟ್ಟಿ ಶ್ರೀರಾಮುಲು ತೆಲುಗು ಭಾಷಿಗರಿಗಾಗಿಯೇ ರಾಜ್ಯವೊಂದನ್ನು ವಿಂಗಡಿಸಬೇಕೆಂದು ಧರಣಿ ಕೂತರು. ತೆಲುಗು ಭಾಷಿಗರು ಗರಿಷ್ಟ ಪ್ರಮಾಣದಲ್ಲಿರುವ ಪ್ರದೇಶಗಳನ್ನೆಲ್ಲಾ ಸೇರಿಸಿ ಅಂದ್ರ ಪ್ರದೇಶ ನಿರ್ಮಾಣವಾಗಬೇಕು ಎನ್ನುವುದು ಅವರ ಧ್ಯೇಯ. ಅಲ್ಲಿಗೆ ಭಾಷಾವಾರು ಪ್ರಾಂತ್ಯ ರಚನೆಗೆ ಶಿಲಾನ್ಯಾಸವಾದಂತಾಯಿತು. ತಮಿಳುನಾಡಿನ ದ್ರಾವಿಡ ಚಳುವಳಿಗಳು ಭಾಷಾ ವಿವಿಧತೆಗೆ ಒತ್ತು ಕೊಟ್ಟು ದ್ರಾವಿಡ ಭಾಷೆಗೂ ಇನ್ನಿತರ ಭಾಷೆಗಳಿಗೂ ಇರುವ ದೂರವನ್ನು ಭೂತಗನ್ನಡಿ ಹಿಡಿದು ತೋರಿಸಿದ್ದೂ ಅದಕ್ಕೆ ಸೇರಿಕೊಂಡು ತಮಿಳುನಾಡಿನಲ್ಲಿ ತಮಿಳು ಭಾಷೆಯೇ ಸಾರ್ವಭೌಮ ಭಾಷೆ ಎಂಬ ಅಲಿಖಿತ, ಅನಧೀಕೃತ ನಿಯಮವೊಂದು ತಮಿಳುನಾಡಿನಲ್ಲಿ ಚಾಲ್ತಿಗೆ ಬಂತು. ಅದಕ್ಕೆ ರಾಜಕೀಯ ಬಲವೂ ಸೇರಿ ತಮಿಳು ಭಾಷೆಯ ರಕ್ಷಕರಂತೆ ಹಲವು ಮುಖಂಡರು ತಮಿಳು ಸಂಸ್ಕೃತಿ ಹಾಗು ಭಾಷೆಯ ಆಧಾರದ ಮೇಲೆ ಪಕ್ಷಗಳನ್ನು ಕಟ್ಟಿ ಬೆಳೆಸಿದರು.

ಅಲ್ಲಿಂದಾಚೆಗೆ ತಮಿಳುನಾಡಿನ ರಾಜಕೀಯ ತಮಿಳು ಪರ ಎಂದು ತೋರಿಸಿಕೊಳ್ಳಲಾದರೂ ಮತ್ತೊಂದು ಭಾಷೆಯನ್ನು ಹೇರಿಕೆಯಂತೆ ಬಿಂಬಿಸಬೇಕಾದ ಜರೂರತ್ತು ಇತ್ತು. ಅದಕ್ಕೆ ಆಗಷ್ಟೇ ಕೇಂದ್ರ ಹಿಂದಿಯ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ದಿಕ್ಕು ದೆಸೆ ತೋರಿಬಿಟ್ಟಿತು. ಕೇಂದ್ರದ ವ್ಯವಹಾರಗಳಲ್ಲಿ ಹಿಂದಿ ನಮಗೆ ಒಪ್ಪದ್ದೆಂದು ಹಾಗು ಬರೀ ಇಂಗ್ಲಿಷ್ನಲ್ಲಿ ಇದ್ದರೆ ಸಾಕೆಂದು ತನ್ನ ವಾದ ಮುಂದಿಟ್ಟಿದ್ದ ತಮಿಳುನಾಡು, ಈಚೀಚಿಗೆ ಎರಡು ಸಾವಿರ ಹೊಸ ನೋಟುಗಳು ಬಂದಾಗಲೂ ಅದರಲ್ಲಿ ಮುದ್ರಿತವಾಗಿದ್ದ ದೇವನಾಗರಿ ಲಿಪಿಯ ಸಂಖ್ಯೆಗಳನ್ನು ಕಂಡು ಕೆಂಡಾಮಂಡಲವಾಗಿ ಹೈ ಕೋರ್ಟ್ ನಲ್ಲಿ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದನ್ನು ಮರೆಯುವಂತಿಲ್ಲ.

ತಮಿಳುನಾಡಿನ ಭಾಷೆಯ ಮೇಲಿನ ಬದ್ಧತೆಯನ್ನು ಗಮನಿಸಿದ ಇನ್ನಿತರ ರಾಜ್ಯಗಳು ತಾವು ಮಾತೃಭಾಷೆಯ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾದವು. ಒಮ್ಮೊಮ್ಮೆ ಭಾಷೆಯ ವಿಚಾರದಲ್ಲಿ ತಮಿಳುನಾಡು ಇಡುವ ಬಲಪ್ರಯೋಗಾತ್ಮಕ ಹೆಜ್ಜೆಯನ್ನು ಇಡುವುದನ್ನೂ ಮರೆಯಲಿಲ್ಲ. ಭಾಷೆಯ ವಿಚಾರದಲ್ಲಿ ಅತೀವ ಸ್ವಾಭಿಮಾನ ತಳೆದು ರುದ್ರಾವತಾರ ತಳೆದ ಎಷ್ಟೋ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತಲೇ ಇರುತ್ತವೆ. ಕರ್ನಾಟಕ, ತಮಿಳುನಾಡು ಹಾಗು ಮಹಾರಾಷ್ಟ್ರಗಳಲ್ಲಿ ನಡೆದ ಇಂತಹ ಘಟನೆಗಳು ಬಹುಪಾಲು ಹಿಂದಿ ಭಾಷೆಯ ವಿರುದ್ಧವೇ ನಡೆದ ಪ್ರಸಂಗಗಳಾಗಿದ್ದು ಇನ್ನೊಂದು ಮುಖ್ಯವಾದ ವಿಚಾರ.

ಇತ್ತೀಚಿಗೆ ಐಟಿ ಕ್ಷೇತ್ರ ಬೆಳೆದ ಪರಿಣಾಮ ಉತ್ತರ ಭಾರತೀಯರ ಸಂಖ್ಯೆ ಬೆಂಗಳೂರು, ಚೆನ್ನೈಗಳಲ್ಲಿ ಸಾಕಷ್ಟಾಗಿದೆ. ಆ ಮೂಲಕ ಇಲ್ಲಿ ತೆರೆ ಕಾಣುವ ಹಿಂದಿ ಸಿನೆಮಾಗಳು ಭರ್ಜರಿ ಹಣ ಮಾಡುತ್ತಿವೆ. ಹಿಂದಿ ಸಂಗೀತ ರಸಸಂಜೆ, ಕಾಮಿಡಿ ಶೋಗಳಂತಹ ಕಾರ್ಯಕ್ರಮಗಳು ಹೆಚ್ಚು ಜನರನ್ನು ಸೆಳೆದು ದುಡ್ಡು ಮಾಡಿ ದೊಡ್ಡ ದೊಡ್ಡ ಸಂಖ್ಯೆಗಳನ್ನು ವೃತ್ತ ಪತ್ರಿಕೆಗಳಲ್ಲಿ ಪ್ರಕಟ ಮಾಡಿ ದಕ್ಷಿಣದಲ್ಲಿ ಹಿಂದಿ ಪ್ರಾಬಲ್ಯ ಅಮೋಘವಾಗುತ್ತಿದೆಯೆಂದು ಸಾಬೀತು ಪಡಿಸಲು ನೋಡುತ್ತಿರುವುದು ದಕ್ಷಿಣ ಭಾರತೀಯರಲ್ಲಿ ಭಾಷೆಯ ವಿಚಾರದಲ್ಲಿ ಅನುಮಾನ ಮೂಡಿಸುತ್ತಿದೆ. ಹಿಂದಿಯವರು ದಕ್ಷಿಣದ ಭಾಷೆಗಳನ್ನೇ ಕಲಿಯದೇ ಅಲ್ಲಿ ಆರಾಮವಾಗಿ ಬದುಕಬಹುದೆಂದು ಪ್ರಚಾರ ಪಡಿಸಲು ಕೆಲವು ಹಿಂದಿ ಶಕ್ತಿಗಳು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವುದು ದಕ್ಷಿಣದವರಿಗೆ ಇರಿಸು ಮುರಿಸು ತಂದಿರುವುದು ಸುಳ್ಳಲ್ಲ. ಯಾವುದೇ ಪ್ರದೇಶದ ಸಂಸ್ಕೃತಿ, ಭಾಷೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು ಎಂಬ ಅರಿವು ಅವರಲ್ಲೂ ಬಂದು ಇಲ್ಲಿನ ಜನರ ನಾಡಿ ಮಿಡಿತಕ್ಕೆ ತಕ್ಕಂತೆ ಬದುಕಿಬಿಟ್ಟರೆ ಅವರ ಜೀವನವೂ ನಮ್ಮ ಜೀವನವೂ ಸುಗಮವಾಗುವುದರಲ್ಲಿ ಸಂದೇಹವಿಲ್ಲ.


ಭಾಷೆಯನ್ನು ಹೇರಬಹುದೇ?.

ತಾವು ಹೇಳಿರುವುದು ನಡೆಯದಿದ್ದರೆ ಶಿರದ ಮೇಲೆ ಕತ್ತಿಯಿತ್ತು ಝಳಪಿಸುತ್ತಿದ್ದ ಅರಸರಿರುವ ಕಾಲದಲ್ಲೇ ಭಾಷೆಗಳು ನಿಂತಿವೆ, ಬೆಳೆದಿವೆ. ಇಂತಿರುವಾಗ ಸರ್ಕಾರವೊಂದು ಯಾವುದೋ ಭಾಷೆಯಲ್ಲಿ ಮಾರ್ಗಸೂಚಕ ಫಲಕಗಳನ್ನು, ಬ್ಯಾಂಕಿನ ಚಲನ್ನುಗಳನ್ನು ಮುದ್ರಿಸಿದರೆ ಅದು ಭಾಷೆಯ ಹೇರಿಕೆ ಹೇಗಾಗುತ್ತದೆ? ಭಾಷೆಯ ವಿಚಾರದಲ್ಲಿ ಆ ಭಾಷೆಯಾಡುವರ ಮನಸ್ಥಿಸ್ತಿ ಬದ್ಧವಾಗಿದ್ದರೆ ಹೇರಿಕೆಯೆನ್ನುವುದು ಮಿಥ್ಯವಷ್ಟೇ ಎನ್ನುವ ವಾದ ಕೆಲವರದಾದರೆ ದಕ್ಷಿಣದವರಿಗೆ ಅಗತ್ಯವೇ ಅಲ್ಲದ ಹಿಂದಿಯನ್ನು ಸರ್ಕಾರಿ ವ್ಯವಹಾರಗಳಲ್ಲಿ ತುರುಕಿರುವುದೇಕೆ? ಎಂದು ಪ್ರಶ್ನಿಸುವ ಮಂದಿಯೂ ಇದ್ದಾರೆ.

ಒಂದು ಭಾಷೆಯನ್ನಾಡುವ ಜನರು ತಾವು ಘನಿಷ್ಠವಾಗಿ ಅವರದೇ ಮಾತೃ ಭಾಷೆ ಬಳಸುತ್ತಾ ಇತರ ಭಾಷೆಗಳನ್ನು ಎಲ್ಲ ರಂಗಗಳಲ್ಲಿಯೂ ಮಗ್ಗುಲಾಗಿಸಿಬಿಟ್ಟರೆ ಮುಗಿಯಿತು ಯಾರಿಗೂ ಯಾವ ಭಾಷೆಯೂ ಹೇರಿಕೆಯಾಗಲಾರದು.ಒಂದು ಭಾಷೆಯನ್ನು ಪ್ರಮುಖವಾಗಿಸುವ ಯಾವುದೇ ಸರ್ಕಾರದ ಅಥವಾ ಸರ್ಕಾರೇತರ ಶಕ್ತಿ ಅಲ್ಲಿಗೆ ಕುಗ್ಗಿ ಹೋಗಿ ಕ್ರಮೇಣ ಆ ಭಾಷೆ ಆ ಪ್ರಾಂತದಲ್ಲಿ ನಿಶ್ಯೇಷವಾಗಿಬಿಡುತ್ತದೆ.  ದಕ್ಷಿಣ ಭಾರತೀಯರು ಇದೀಗ ಪ್ರಬಲವಾಗಿ ಬೆಳೆದು ನಿಲ್ಲಬೇಕಿರುವುದು ಇದೇ ಮಾರ್ಗದಲ್ಲಿ. ಗರಿಷ್ಟ ಪ್ರಮಾಣದಲ್ಲಿ ತಮ್ಮ ಮಾತೃಭಾಷೆಯನ್ನು ಬಳಸುವುದು ಹಾಗು ತನ್ಮೂಲಕ ಆ ಭಾಷೆಯ ಬೆಳವಣಿಗೆಗೆ ಒತ್ತು ಕೊಡುವುದು. ದುರಂತವೆಂದರೆ ಇಂಗ್ಲೀಷ್ ಬಳಸಲು ಯಾವುದೇ ಸಂಕೋಚವಿಲ್ಲದೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿರುವ ದಕ್ಷಿಣ ಭಾರತೀಯರು ಹಿಂದಿಯನ್ನು ಹೇರಿಕೆಯ ವಸ್ತುವಾಗಿ ನೋಡುತ್ತಿರುವುದು. ಇಂಗ್ಲೀಷ್ ಭಾಷೆ ಔದ್ಯೋಗಿಕವಾಗಿ ಹಾಗು ಪ್ರಾಪಂಚಿಕ  ಜ್ಞಾನಕ್ಕಾಗಿ ಅತ್ಯವಶ್ಯಕ ಅದಕ್ಕಾಗಿ ಅದರ ವಿಚಾರದಲ್ಲಿ ತಗಾದೆ ಇಲ್ಲವೆಂದು ಕೆಲವರು ಹೇಳುವುದು ಕಂಡಾಗ ಅವರ ಚಳುವಳಿಗೆ ಅಥವಾ ವಿಚಾರ ಧಾರೆಗೆ ಬಲವಾದ ಅಡಿಪಾಯ ಇಲ್ಲದೆ ಗಾಳಿ ಬಂದ ಕಡೆ ತೂರಿಕೊಳ್ಳುವಂತೆ ಇರುವುದು ನಗು ತರಿಸುತ್ತದೆ.

ಹೀಗೆ ದಕ್ಷಿಣಕ್ಕೂ-ಉತ್ತರಕ್ಕೂ ಅಂಟಿದ ಶೀತಲ ಸಮರ ಭಾಷೆಯ ವಿಚಾರದ್ದಾಗಿದ್ದು ಇದೀಗಲೇ ಎಲ್ಲರು ಈ ವಿಚಾರದಲ್ಲಿ ಜಾಗೃತವಾಗಿ ಹೆಜ್ಜೆಯಿಡುವುದು ಅತ್ಯುತ್ತಮ. ಇಲ್ಲವಾದಲ್ಲಿ ಮುಂದೊಂದು ದಿನ ಈ ವಿಚಾರ ಭುಗಿಲೆದ್ದು ಮತ್ತಷ್ಟು ಅನಾಹುತಗಳಿಗೆ, ಅಂತರಗಳಿಗೆ ಕಾರಣವಾಗಿಬಿಡಬಹುದು!. ಹಾಗಾಗದಿರಲಿ ಎಂದು ಆಶಿಸುತ್ತಾ , ಎಲ್ಲಾ ಭಾಷೆಗಳನ್ನು ಗೌರವಿಸಿ ಹಾಗು ಮಾತೃ ಭಾಷೆಯನ್ನು ಪ್ರೀತಿಸಿ ಬೆಳೆಸಿ ಎಂದು ಹೇಳುತ್ತಾ. ಜೈ ಭಾರತ

-o-

ಬುಧವಾರ, ಮಾರ್ಚ್ 27, 2019

ಬೀಚಿಯವರ ನಗೆ-ತತ್ವ ಚಟಾಕಿಗಳು


  • ಚಿಕ್ಕ ಮಗು ಮಾತು ಮಾತಿಗೆ ಕೇಳುವ ಈ 'ಏಕೆ' ಯಲ್ಲಿಯೇ ತತ್ವಜ್ಞಾನದ ಎಲ್ಲ ತಥ್ಯವೂ ಅಡಕವಾಗಿದೆ.
  • ಒಂದೇ ಹಗ್ಗದಿಂದ ಇಬ್ಬರೂ ನೇಣುಬಿಗಿದುಕೊಳ್ಳುವದಕ್ಕೆ ಮದುವೆ ಎಂದು ಹೆಸರು.
  • ಒಬ್ಬನಿಗೆ ಹದಿನಾಲ್ಕು ಮಕ್ಕಳಿದ್ದರೆ ಮೊತ್ತ ಮೊದಲನೆಯವನಿಗೆ ಕಟ್ಟ ಕಡೆಯವನು ದೂರದ ಸಂಬಂಧಿ.. ಹೌದೋ? ಅಲ್ಲವೋ ?
  • ಮನೆ ನಿಂತಿರುವುದು ಮಡದಿಯ ಮೇಲೆ, ಅಕಸ್ಮಾತ್ ಅದು ಬಿದ್ದರೆ ಗಂಡನ ತಲೆಯ ಮೇಲೆ!!.
  • ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
  • ವಾರದಲ್ಲಿ ಮೂರು ದಿನಾವಾದರೂ ನಗುತ್ತಾ ಇರಿ. ಇವತ್ತು, ನೆನ್ನೆ ಹಾಗು ನಾಳೆ.
  • ಆ ಭಗವಂತ ಮೋಸ ಮಾಡುವ ಹೆಂಗಸರನ್ನು ಸೃಷ್ಟಿಸಿಯೇ ಇಲ್ಲ. ಆದರೆ ಮೋಸ ಹೋಗುವ ಗಂಡಸರನ್ನು ಮಾತ್ರ ಸೃಷ್ಟಿಸಿದ್ದಾನೆ.
  • ಬಾಳಿನಲ್ಲಿ ಏನಿಲ್ಲ? .. ಕೊಲ್ಲಲು ವಿಷವಿದೆ, ಬದುಕಿಸಲು ಔಷಧವೂ ಇದೆ. ಔಷಧದಲೂ ವಿಷವಿದೆ. ಇದುವೇ ಜೀವನ.
  • ಗೆಳೆಯನನ್ನು ಉಪ್ಪಿನಂತೆ ಬಳಸಬೇಕೇ ವಿನಾ ಸಕ್ಕರೆಯಂತೆ ಸುರುವಿಕೊಳ್ಳಬಾರದು.
  • ಜೀವನೋಪಾಯಕ್ಕಾಗಿ ಅಲ್ಲದೆ ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ 'ಹವ್ಯಾಸ'ಗಳು.
  • ಕೆಲಸವಿಲ್ಲದೇ ಸುಮ್ಮನೆ ಕುಳಿತವನ ಭುಜದ ಮೇಲೆ ಶನಿಯು ಬಂದು ಕೂರುತ್ತಾನೆ.
  • ಉತ್ತಮ ಸಾಹಿತಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಕಸದ ಬುಟ್ಟಿ.
  • ಬದುಕಿದ್ದಾಗ ತಂದೆ ತಾಯಿಗೆ ನೀರು ಕೊಡದವನು, ಸತ್ತ ಮೇಲೆ ಧಾರಾಳವಾಗಿ ಬೆಂಕಿ  ಇಡುತ್ತಾನೆ.
  • ಎಮ್ಮೆ ತಿರುಗಾಡಿ ಮೇಯುತ್ತದೆ, MLA ಕುಳಿತಲ್ಲೇ ಮೇಯುತ್ತಾನೆ.
  • ಮಾತುಗಳನ್ನು ಎಣಿಸಿ ನೋಡಬಾರದು, ತೂಕ ಮಾಡಿ ನೋಡಬೇಕು.
  • ಡಾಕ್ಟರರ ಸುತ್ತಲೂ ರೋಗಿಗಳೇ ಇರುವಂತೆ, ಒಳ್ಳೆಯವರ ಸುತ್ತಲೂ ಕೆಟ್ಟವರೇ ಇರುತ್ತಾರೆ.
  • ಬಾಳಿನ ವ್ಯಾಕರಣ - ಹೆಣ್ಣು : ಪದ್ಯ, ಗಂಡು : ಗದ್ಯ, ಮಕ್ಕಳು : ರಗಳೆ.
  • ಸುಳ್ಳನ್ನಾಡುವ ನೂರಾರು ಗೆಳೆಯರಿರುತ್ತಾರೆ, ಸತ್ಯವನ್ನಾಡುವ ಸಾವಿರಾರು ಶತ್ರುಗಳಿರುತ್ತಾರೆ.
  • ಹಸಿವು ಚೆನ್ನಾಗಿದ್ದರೆ ಊಟ ಚೆನ್ನಾಗಿಯೇ ಇರುತ್ತದೆ.
  • ಸಾವಿನ ಬಗ್ಗೆ ಎಚ್ಚರಿಸಲು ವರ್ಷಕ್ಕೊಮ್ಮೆ ಕಾಲರಾಯನು ಗಂಟೆ ಬಾರಿಸುವ ದಿನವೇ ಜನ್ಮ ದಿನ.
  • ಬಳಸಿದಂತೆಲ್ಲ ಬೆಳೆಯುವ ಅಕ್ಷಯ ಪಾತ್ರೆ ನಗು.
  • ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣುವುದಿಲ್ಲ, ಗಂಡನ ಒಳ್ಳೆ ಗುಣ ಹೆಂಡತಿಗೆ ಕಾಣುವುದಿಲ್ಲ.
  • ಮಾವನ ಮನೆ ಸೇರುವ ಗಂಡು, ಗಂಡನ ಮನೆಗೆ ಬಾರದ ಹೆಣ್ಣು ಇಬ್ಬರೂ ಭೂಮಿಗೆ ಭಾರ.
  • ಹಲವಾರು ಹೆಚ್ಚು ಕಷ್ಟ ಪಟ್ಟು ಉಣ್ಣುತ್ತಾರೆ, ಕೆಲವರು ಹೆಚ್ಚು  ಉಂಡು ಕಷ್ಟ ಪಡುತ್ತಾರೆ.
  • ಸತ್ಯವನು ಅರಿತವನು ಸತ್ತಂತೆ ಇರಬೇಕು.
  • ನಗು ದೇವ ಭಾಷೆ, ಅಳು ಪಿಶಾಚಿ ಭಾಷೆ.
  • ಮಗುವಿಗೆ ಅಳು, ಹೆಣ್ಣಿಗೆ ನಗು, ಅವಿವೇಕಿಗೆ ಧೈರ್ಯ, ಅಪ್ರಾಮಾಣಿಕನಿಗೆ ರಾಜಕಾರಣ ಅತ್ಯುತ್ತಮ ಆಯುಧಗಳು.
  • ಹೆಂಡವಿದು ಜಗವು, ಮಿತವಾಗಿ ಕುಡಿಯಿದನು.



-0-

ಭಾನುವಾರ, ಮಾರ್ಚ್ 3, 2019

ಹಾಡಿರಿಂದು ಇತಿ ಶ್ರೀ

ಅನ್ನವಿಕ್ಕಲು, ನೀರ ಕುಡಿಸಲು
ಜಾತಿ ಧರ್ಮ ಜಾಡು ಹಿಡಿದ
ಮನುವ ಮನಸ್ಥಿತಿಗೆ
ಹಾಡಿರಿಂದು ಇತಿ ಶ್ರೀ.

ಯೋಗ್ಯವಾಗಿ ಬದುಕಿ ಬಾಳಿ
ಸಾಂಗವಾಗಿ ಪರರ ಸಿರಿತನಕೆ
ತೆರೆದ ಬಾಯ್ಗೆ
ಹಾಡಿರಿಂದು ಇತಿ ಶ್ರೀ.

ತನ್ನದೇನು ನೋಡದಂದು
ಅನ್ಯದವರ ಗುಣ ಮರ್ಯಾದೆಗಳ
ಅಳೆದು ತೂಗೋ ರಾಗಕಿನ್ನು
ಹಾಡಿರಿಂದು ಇತಿ ಶ್ರೀ.

ಪರರ ಹೆಣ್ಣು , ಹೊನ್ನು ಕಂಡು
ಬಾಯಿ ತೆರೆದು ಶ್ವಾನದಂತೆ
ಅಲೆವ ಧೋರಣೆಗಿನ್ನು
ಹಾಡಿರಿಂದು ಇತಿಶ್ರೀ.

ದೇವರನ್ನು ನೆಚ್ಚಿಕೊಂಡು
ಡಂಭ, ಪುಂಡರ ಪೊರೆವ
ಮೂಢತನದ ಭಕ್ತಿಗಿನ್ನು
ಹಾಡಿರಿಂದು ಇತಿ ಶ್ರೀ.

ನಾನು, ನನ್ನದೆಲ್ಲವೆಂದು
ಮೆಚ್ಚಿನಿಂದ ಗಚ್ಚಿ ಹಿಡಿದು
ಬಿಡದ ಮನೆವಾರ್ತೆಗಿನ್ನು
ಹಾಡಿರಿಂದು ಇತಿ ಶ್ರೀ.

ಅನ್ಯರೊಳಗೆ ಕೂಡಿಕೊಂಡು
ತನ್ನದೆಲ್ಲ ಹಿಂದು  ಮಾಡಿ
ತನ್ನವರನು ಮುಂದು ಮಾಡೋ
ಗುಣದ ಪಥಕೆ
ಒಗ್ಗುವಂತ ಕೀರ್ತಿ ಬೆಳೆಸಿ
ಯೋಗಿಯಂತೆ ಬಾಳ್ಮೆ ನಡೆಸಿ
ತೂಕದಿಂದ ಕೂಡಿಕೊಂಡ ಬಾಳ್ಮೆಯದಕೆ
ಹಾಡಿರೊಮ್ಮೆ ಇತಿ ಶ್ರೀ.

ಭಾನುವಾರ, ಫೆಬ್ರವರಿ 10, 2019

ಮಾತಾ ವೈಷ್ಣೋದೇವಿ ಯಾತ್ರೆ

ಭಾರತ ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ. ಭಾರತದ ಮೊದಲ ಹತ್ತು ಶ್ರೀಮಂತ ದೇಗುಲಗಳಲ್ಲಿ ಒಂದಾದ ವೈಷ್ಣೋದೇವಿಗೆ ವಿಶೇಷವಾಗಿ ದೇವಾಲಯವೇ ಇಲ್ಲ ಹಾಗು ಅದಕ್ಕೆಂತಲೇ ವಿಗ್ರಹವೂ ಇಲ್ಲ. ವೈಷ್ಣೋದೇವಿ ಇರುವುದು ಗುಹಾಲಯದಲ್ಲಿ ಹಾಗು ಪೂಜೆ ಸಲ್ಲಿಸಲಾಗುವುದು  ಒಂದು ಕಲ್ಲಿನಲ್ಲಿ ಉಂಟಾದ 3 ಉಬ್ಬುಗಳಿಗೆ. ರಾಕ್ಷಸರ ಸಂಹಾರಾನಂತರ ಮಹಾದೇವಿ ದುರ್ಗೆಯು ಈ ಕಲ್ಲುಗಳ ಮೂಲಕ ಅಂತರ್ಧಾನಳಾದಳು ಎಂಬುದು ಇಲ್ಲಿನ ಪ್ರತೀತಿ.. ಈ ಮೂರು ಉಬ್ಬುಗಳನ್ನು ಮಹಾ ಕಾಳಿ, ಮಹಾ ಲಕ್ಷ್ಮಿ, ಸರಸ್ವತಿ ಎಂದು ಭಕ್ತರು ಅಪಾರ ನಂಬಿಕೆ ಇರಿಸಿಕೊಂಡಿದ್ದಾರೆ. ಭೂಲೋಕದಲ್ಲಿ ತೀವ್ರಗೊಂಡಿದ್ದ ಅಸುರರ ಉಪಟಳಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ದೇವಾನು ದೇವತೆಗಳೆಲ್ಲ ಕೂಡಿ ತಮ್ಮ ಶಕ್ತಿಯನ್ನು ದುರ್ಗೆಗೆ ಧಾರೆಯೆರೆದು ಭುವಿಗೆ ಕಳುಹಿಸಿದರು, ಹೀಗೆ ಭುವಿಗೆ ಬಂದ ದುರ್ಗೆಯು ಕಾಶ್ಮೀರ ಪ್ರಾಂತದ ತ್ರಿಕೂಟ ಪರ್ವತದ ಗುಹೆಯಲ್ಲಿ ಅಡಗಿದ್ದ ರಾಕ್ಷಸರನ್ನು ನವರಾತ್ರಿಯ ಸಮಯದಲ್ಲಿ  ಸಂಹರಿಸಿದಳು ಎಂಬಂತಹ ಬಲವಾದ ನಂಬಿಕೆ ಇಲ್ಲಿನ ಭಕ್ತರದ್ದು.

ಈ ಕ್ಷೇತ್ರಕ್ಕೆ ದರ್ಶನ ನೀಡುವ ಭಕ್ತರಲ್ಲಿ ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಪಂಜಾಬ್, ಹರ್ಯಾಣ, ದೆಹಲಿ, ಮಧ್ಯಪ್ರದೇಶದ ಭಕ್ತರು ಹೆಚ್ಚಾಗಿದ್ದಾರೆ. ದಕ್ಷಿಣ ಭಾರತೀಯರು ತೀರಾ ಕಡಿಮೆ ಪ್ರಮಾಣದಲ್ಲಿರುವುದರಿಂದ ಇಲ್ಲಿಗೆ ಭೇಟಿಕೊಡುವ ದಕ್ಷಿಣ ಭಾರತೀಯರಿಗೆ ಅಲ್ಪ ಸ್ವಲ್ಪ ಹಿಂದಿ ಗೊತ್ತಿದ್ದರೆ ಉತ್ತಮ, ಇಲ್ಲದಿದ್ದರೂ ತೊಂದರೆಯಿಲ್ಲ. ಅಲ್ಪ ಸ್ವಲ್ಪ ಇಂಗ್ಲಿಷ್ ಭಾಷೆಯಲ್ಲಿಯೂ ವ್ಯವಹರಿಸಬಹುದು.

ಯಾತ್ರಿಕರಿಗೆ ಮೊದಲ್ನುಡಿ

ವೈಷ್ಣೋದೇವಿ ಆಲಯವು ಜಮ್ಮು ಕಾಶ್ಮೀರ ರಾಜ್ಯದಲ್ಲಿದ್ದು ಜಮ್ಮುವಿನಿಂದ 45 ಕಿಲೋ ಮೀಟರ್ ದೂರವಿದೆ. ಕಟರಾ ನಗರ ಒಂದರ್ಥದಲ್ಲಿ ವೈಷ್ಣೋದೇವಿ ಪರ್ವತಾರೋಹಣದ ಆರಂಭ ಬಿಂದು. ಇಲ್ಲಿಂದಲೇ ಪರ್ವತ ಏರುವರು ಆರೋಹಣಕ್ಕೆ ಸಜ್ಜಾಗಬೇಕು. ಜಮ್ಮುವಿನಿಂದ ಕಟರಾಗೆ ತಲುಪಲು ಬಸ್ ಗಳ ಸೇವೆ ಲಭ್ಯವಿದ್ದು ಗರಿಷ್ಠ ಸಂಖ್ಯೆಯ ವೈಷ್ಣೋದೇವಿ ಭಕ್ತರು ಜಮ್ಮು ಮಾರ್ಗವಾಗಿಯೇ ಕಟರಾ ತಲುಪುತ್ತಾರೆ. ಭಾರತದ ವಿವಿಧ ನಗರಗಳಿಂದ ಜಮ್ಮುವಿಗೆ ಬಸ್, ರೈಲು  ಹಾಗು ವಿಮಾನ ಸೇವೆ ಇರುವುದರಿಂದ ಈ ಮಾರ್ಗವನ್ನು ಬಹುತೇಕರು ಅನುಸರಿಸುತ್ತಾರೆ. ಅದರ ಹೊರತಾಗಿ ರೈಲಿನಲ್ಲಿ ಆಗಮಿಸುವರಿಗಾಗಿ ಕಟರಾ ನಗರದವರೆಗೂ ರೈಲು ಸೇವೆಯಿದ್ದು ಕಟರಾ ರೈಲು ನಿಲ್ದಾಣದ ಹೆಸರೂ ವೈಷ್ಣೋದೇವಿ ಎಂದೇ ಇದೆ. ವೈಷ್ಣೋದೇವಿ ರೈಲು ನಿಲ್ದಾಣದಿಂದ ಕಟರಾ 1 ಕಿಲೋಮೀಟರ್ ದೂರವಿದೆ.

ಕಟರಾ ದಲ್ಲಿ ವೈಷ್ಣೋದೇವಿ ಆಡಳಿತ ಮಂಡಳಿಯ ರೂಮುಗಳೇ ಲಭ್ಯವಿದ್ದು ಆನ್ಲೈನ್ ನಲ್ಲಿಯೂ ಬುಕ್ ಮಾಡಲು ಅವಕಾಶವಿದೆ. ಅಮಾವಾಸ್ಯೆ, ನವರಾತ್ರಿ, ವಾರಾಂತ್ಯಗಳಂತಹ ತೀವ್ರ ಜನಜಂಗುಳಿಯಿರುವ ಸಮಯಗಳಲ್ಲಿ ಆಡಳಿತ ಮಂಡಳಿಯ ರೂಮುಗಳು ಸಿಗುವುದು ಕಷ್ಟ ಸಾಧ್ಯವಾಗಬಹುದು. ಅದಕ್ಕಾಗಿ ಕಟರಾದಲ್ಲಿ ಹಲವಾರು ಖಾಸಗಿ ಲಾಡ್ಜ್ ಗಳು ಲಭ್ಯವಿವೆ. ಹೆಚ್ಚಿನ ಲಗೇಜ್ ಒಯ್ಯುವವರು ತಮ್ಮ ಲಗೇಜ್ ಅನ್ನು ಕಟರಾದಲ್ಲಿಯೇ ಇರಿಸಿ ಅತಿ  ಮುಖ್ಯವೆನಿಸುವುಗಳನ್ನು ಮಾತ್ರ ಪರ್ವತಾರೋಹಣ ಸಮಯದಲ್ಲಿ ತಮ್ಮೊಂದಿಗೆ ಇರಿಸಿಕೊಳ್ಳುವುದು ಉತ್ತಮ. ಮೊಬೈಲ್ ಫೋನುಗಳನ್ನು ಒಯ್ಯಲು ಯಾವುದೇ ಆತಂಕವಿಲ್ಲ. ಪವರ್ ಬ್ಯಾಂಕ್ ಒಯ್ಯುವುದು ಉತ್ತಮವಲ್ಲ. ಎಲ್ಲ ಕಡೆಯೂ ಮೊಬೈಲ್ ಬಳಸಲು ಅವಕಾಶವಿದ್ದು ವೈಷ್ಣೋದೇವಿ ಆಲಯದಲ್ಲಿ ಮಾತ್ರ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗುತ್ತದೆ. ಜಮ್ಮು ಕಾಶ್ಮೀರ ರಾಜ್ಯದ್ದಲ್ಲದ ಬೇರೆ ಯಾವ ನೆಟ್ವರ್ಕ್ ಗಳು ಕಟರಾದಲ್ಲಿ ಸಿಗುವುದಿಲ್ಲ. ಹಾಗಾಗಿಯೇ ತುರ್ತಾಗಿರುವರು ಲ್ಯಾಂಡ್ಲೈನ್ ಸೇವೆಗಳನ್ನು ಬಳಸುತ್ತಾರೆ, ಇಲ್ಲವಾದರೆ ಜಮ್ಮು ಕಾಶ್ಮೀರದ್ದೇ ಸಿಮ್ ಕಾರ್ಡ್ ಖರೀದಿಸಿ ಬಳಸುತ್ತಾರೆ.

ಕಟರಾದಲ್ಲಿ ಇಳಿದುಕೊಳ್ಳುವ ಯಾತ್ರಿಕರು ಅಲ್ಲಿಯೇ ಹಿಡಿದ ರೂಮ್ ನಲ್ಲಿಯೇ ಸ್ನಾನ ಶೌಚ ಕ್ರಿಯೆಗಳನ್ನು ಮುಗಿಸಿಕೊಳ್ಳುವುದು ಉತ್ತಮ, ಯಾತ್ರೆಯ ಸಮಯದಲ್ಲಿ ಬಾಣಗಂಗಾ ಹಾಗು ವೈಷ್ಣೋದೇವಿ ಭವನದ ಬಳಿ ಸ್ನಾನಘಟ್ಟಗಳಿದ್ದರೂ ಅಲ್ಲಿ ಅತೀವ ಜನಸಂದಣಿಯಿರುತ್ತದೆ.

ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ಕೊಡುವ ಎಲ್ಲರೂ ಕಟರಾ ದಲ್ಲಿರುವ ಪರ್ಚಿ ಕೌಂಟರ್ ನಿಂದ ಚೀಟಿ ಪಡೆದುಕೊಂಡೇ ತೆರಳಬೇಕು. ಕಟರಾದಲ್ಲಿ ಎರಡು ಪ್ರಮುಖ ಬಸ್ ನಿಲ್ದಾಣಗಳಿದ್ದು ಆ ಎರಡೂ ನಿಲ್ದಾಣಗಳಿಗೆ ಹೊಂದಿಕೊಂಡಂತೆ ಪರ್ಚಿ ಕೌಂಟರ್ ಅನ್ನು ತೆರೆಯಲಾಗಿದೆ. ಕಟರಾ ಮುಖ್ಯ ವೃತ್ತದ ಬಳಿ ಒಂದು ಪರ್ಚಿ ಕೌಂಟರ್ ಇದ್ದರೆ, ಅಲ್ಲಿಂದ ಅರ್ಧ ಕಿಲೋಮೀಟರು ದೂರವಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಪರ್ಚಿ ಕೌಂಟರ್ - 2 ಇದೆ.ಈ ಕೌಂಟರ್ ಗಳಲ್ಲಿ  ಪಡೆಯುವ ಚೀಟಿಗಳಿಗೆ ಯಾವುದೇ ಹಣವಿಲ್ಲದೆ ಉಚಿತವಾಗಿ ಪಡೆಯಬಹುದು.

ಪರ್ಚಿ ಕೌಂಟರ್ ನಲ್ಲಿ ಪ್ರತೀ ಯಾತ್ರಿಕರಿಗೂ ವಿತರಿಸುವ ಚೀಟಿ
ಕಟರಾದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪರ್ಚಿ  ಕೌಂಟರ್ - 2

ಚೀಟಿ ಪಡೆಯದ ಯಾತ್ರಿಕರನ್ನು ಬಾಣಗಂಗಾ ಚೆಕ್ ಪೋಸ್ಟ್ ನ ಪೊಲೀಸ್ ಚೌಕಿಯಲ್ಲಿಯೇ ತಡೆ ಹಿಡಿಯಲಾಗುತ್ತದೆ. ಬಾಣಗಂಗಾ ಚೆಕ್ ಪೋಸ್ಟ್ ದಾಟುವ ಸಮಯದಲ್ಲಿ ಯಾತ್ರಿಕರು ಯಾವುದೇ ರೀತಿಯ ಗುಟ್ಕಾ, ಪಾನ್ ಮಸಾಲಾ, ಬೀಡಿ, ಸಿಗರೇಟುಗಳನ್ನು ಒಯ್ಯುವಂತಿಲ್ಲ. ಹಾಗೇನಾದರು ಒಯ್ದರೆ ಬಾಣಗಂಗಾ ಚೆಕ್ ಪೋಸ್ಟ್ ನ ಪೊಲೀಸ್ ಚೌಕಿಯಲ್ಲಿಯೇ ಅವುಗಳೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆಯುತ್ತಾರೆ.

ಕೌಂಟರ್ ನಲ್ಲಿ ಚೀಟಿ ಪಡೆದವರು ಹೆಲಿಕ್ಯಾಪ್ಟರ್ ಮಾರ್ಗವಾಗಿ ತೆರಳಬಯಸುವರು(ಹೆಲಿಕ್ಯಾಪ್ಟರ್ ಗಾಗಿ  ತಿಂಗಳ ಮೊದಲೇ ಆನ್ಲೈನ್ ನಲ್ಲಿ ಬುಕ್ ಮಾಡಿರಬೇಕು) ಹೆಲಿಪ್ಯಾಡ್ ನತ್ತ ಟ್ಯಾಕ್ಸಿ ಹಿಡಿದು ಸಾಗಬಹುದು. ಕಟರಾ ಮುಖ್ಯ ವೃತ್ತದಲ್ಲಿಯೇ ಟ್ಯಾಕ್ಸಿ ಸೌಲಭ್ಯವಿದ್ದು ಅಲ್ಲಿಂದ ಯಾತ್ರಿಕರು ಹೆಲಿಪ್ಯಾಡ್ ಗೆ ಧಾವಿಸಬಹುದು. ಅದು ಅತ್ಯಂತ ಸುಲಭವಾದ ಮಾರ್ಗವಾಗಿದ್ದು ಕಟರಾ ಹೆಲಿಪ್ಯಾಡ್ ನಿಂದ ಹೊರಟ ಹೆಲಿಕ್ಯಾಪ್ಟರ್ ನೇರವಾಗಿ ಸಂಜಿಛಾತ್ ಹೆಲಿಪ್ಯಾಡ್ ತಲುಪುತ್ತದೆ. ಅಲ್ಲಿಂದ ವೈಷ್ಣೋದೇವಿ ಆಲಯ(ಸ್ಥಳೀಯರು ಇದನ್ನು ಭವನ ಎಂದು ಕರೆಯುತ್ತಾರೆ ಹಾಗು ಅಲ್ಲಿರುವ ಎಲ್ಲಾ ಮಾರ್ಗಸೂಚಿಗಳಲ್ಲಿಯೂ ದೇವಾಲಯವನ್ನು 'ಭವನ' ಎಂದೇ ನಮೂದಿಸಲಾಗಿದೆ.) ಕೇವಲ 3 ಕಿಲೋಮೀಟರು ಮಾರ್ಗವಾಗಿದ್ದು ಸಂಜಿಛಾತ್ ನಿಂದ ಭವನದ ವರೆವಿಗೂ ಎಲೆಕ್ಟ್ರಿಕ್ ವಾಹನಗಳು, ಕುದುರೆಗಳು,  ಪಲ್ಲಕ್ಕಿಗಳು ಲಭ್ಯವಿವೆ.
ಕಟರಾ ಮುಖ್ಯ ವೃತ್ತ. 
ಇಲ್ಲಿಂದಲೇ ಬಾಣಗಂಗಾ ಚೆಕ್ ಪೋಸ್ಟ್ ಗೆ ನೇರ ದಾರಿಯಿದೆ.

ಬಾಣಗಂಗಾ ಚೆಕ್ ಪೋಸ್ಟ್ ಸ್ವಾಗತ ಕಮಾನು
ಇನ್ನು ಪರ್ಚಿ ಕೌಂಟರ್ ನಲ್ಲಿ ಚೀಟಿ ಪಡೆದ ಹೆಲಿಕ್ಯಾಪ್ಟರ್ ಸೇವೆ ಬಳಸದಿರುವ ಯಾತ್ರಿಕರು ಬಾಣಗಂಗಾ ಮಾರ್ಗವಾಗಿ ಪರ್ವತಾರೋಹಣಕ್ಕೆ ಸಜ್ಜಾಗಬೇಕು. ಬಾಣಗಂಗಾ ಚೆಕ್ ಪೋಸ್ಟ್ ಕಟರಾ ಮುಖ್ಯ ವೃತ್ತದಿಂದ 1.5 ಕಿಲೋ ಮೀಟರ್ ದೂರದ ಮಾರ್ಗವಾಗಿದ್ದು ಅಲ್ಲಿಗೆ ಆಟೋಗಳ ಸೌಲಭ್ಯವು ಇದೆ.ಬಾಣಗಂಗಾ ಚೆಕ್ ಪೋಸ್ಟ್ ನಲ್ಲಿ ಭದ್ರತಾ ತಪಾಸಣೆ ಇರುತ್ತದೆ. ಇಲ್ಲಿ ಯಾತ್ರೆ ಮಾಡುವ ಎಲ್ಲರೂ 'जय माता दी' ಎಂದು ಬರೆದಿರುವ ಕೆಂಪು ವಸ್ತ್ರವನ್ನು ತಲೆಗೆ ಕಟ್ಟಿಕೊಂಡು ಸಾಗುತ್ತಾರೆ. ಇದು ದೇವಸ್ಥಾನದ ಅಧೀಕೃತ ನಿಯಮವಲ್ಲ, ಬದಲಾಗಿ ಭಕ್ತರ ಭಕ್ತಿಯ ವಿಧ ಅಷ್ಟೇ.

ಪರ್ವತಾರೋಹಣ ಸಮಯದಲ್ಲಿ ತಲೆಗೆ ಜೈ ಮಾತಾ ದಿ ಘೋಷಣೆಯ ಪಟ್ಟಿ


ಬಾಣಗಂಗಾ ಚೆಕ್ ಪೋಸ್ಟ್ ನಿಂದ ಕುದುರೆ, ಪಲ್ಲಕ್ಕಿ  ಗಳು ಲಭ್ಯವಿದ್ದು ವಿವಿಧ ರೀತಿಯ ದರ ಪಟ್ಟಿಗಳನ್ನು ಹೊಂದಿವೆ. ಕುದುರೆ, ಪಲ್ಲಕ್ಕಿಯಲ್ಲಿ ತೆರಳುವರು ಅಧಕುವಾರಿ ವರೆಗೂ ಅಷ್ಟೇ ತಲುಪಲು ಸಾಧ್ಯ.ಅಧಕುವಾರಿ ಬಾಣಗಂಗಾದಿಂದ ಭವನದ ವರೆಗಿನ ಹಾದಿಯ ಸರಿಯಾಗಿ ಅರ್ಧ ಭಾಗದಷ್ಟು. ಅಲ್ಲಿಂದ ಮುಂದೆ ಎಲೆಕ್ಟ್ರಿಕ್ ವಾಹನಗಳ ಸೌಲಭ್ಯವಿದ್ದು ಅದಕ್ಕೆಂತಲೇ ಅಧಕುವಾರಿಯಲ್ಲಿ  ಕೌಂಟರ್ ಒಂದನ್ನು ತೆರೆಯಲಾಗಿದೆ. ಆಸಕ್ತರು ಅಲ್ಲಿಂದ ಎಲೆಕ್ಟ್ರಿಕ್ ವಾಹನದಲ್ಲಿ ತೆರಳಬಹುದು. ವೈಷ್ಣೋದೇವಿ ತ್ರಿಕೂಟ ಪರ್ವತಾರೋಹಣ ಸಮಯದಲ್ಲಿ ದಕ್ಷಿಣ ಭಾರತೀಯ ಖಾದ್ಯಗಳು ಸಿಗುವುದು ವಿರಳ. ಅಲ್ಲಲ್ಲಿ ಇಡ್ಲಿ ಅಥವಾ ದೋಸೆ ಹೋಟೆಲ್ ಗಳು ಎದುರಾಗುತ್ತವೆ. ಇಲ್ಲವೇ ಅನ್ನ- ರಾಜ್ಮಾ ಕೂಟು ದೊರೆಯುತ್ತದೆ. ಮಾರ್ಗದುದ್ದಕ್ಕೂ ಸೌತೆಕಾಯಿ, ನಿಂಬೆಹಣ್ಣಿನ ಷರಬತ್ತು, ಪಾನಕಗಳ ಅಂಗಡಿಗಳು ಹೇರಳವಾಗಿವೆ. ಸುಸ್ತು ಅಥವಾ ಇನ್ನಿತರ ಆರೋಗ್ಯ ಸಂಬಂಧಿ ತೊಂದರೆಗಳಿದ್ದವರು ಕಟರಾ ದಿಂದಲೇ ಬೇಕಾದ ಔಷಧಗಳನ್ನು  ಖರೀದಿಸುವುದು ಉತ್ತಮ. ಬಾಣಗಂಗಾ ಚೆಕ್ ಪೋಸ್ಟ್ ನಿಂದ ವೈಷ್ಣೋದೇವಿ ಆಲಯದ ವರೆವಿಗೂ ಬಾಣಗಂಗಾ, ಅಧಕುವಾರಿ, ಸಂಜಿ ಛಾತ್, ಭವನ ಈ ನಾಲ್ಕು ಕಡೆ ವೈದ್ಯಕೀಯ ಸೇವೆಗಳು ಲಭ್ಯವಿದ್ದು ಅಲ್ಲಿ ನಮಗೆ ಬೇಕಾದ ಔಷಧಗಳು ದೊರೆಯುವುದು ಖಾತ್ರಿಯಿಲ್ಲದ ಕಾರಣ ಔಷಧಗಳನ್ನು ಕಟರಾದಿಂದಲೇ ಒಯ್ಯುವುದು ಉತ್ತಮ.

ಬಾಣಗಂಗಾದಿಂದ ಪರ್ವತಾರೋಹಣ ಆರಂಭವಾಗುತ್ತಿದ್ದಂತೆಯೇ ಕಡಿದಾದ ಮಾರ್ಗಗಳ ಮೂಲಕ ಹಾಯ್ದು ಅಧಕುವಾರಿ ತಲುಪಬೇಕು. ದಾರಿಯಲ್ಲಿ ಸಾಗುವಾಗ ಮಧ್ಯೆ ಮಧ್ಯೆ ಮೆಟ್ಟಿಲುಗಳ ಸೌಲಭ್ಯವೂ ಇದ್ದು ಶಕ್ತರು ಮೆಟ್ಟಿಲ  ಮೂಲಕವೂ ಏರಬಹುದು. ಇಲ್ಲದಿದ್ದರೆ ಕಡಿದಾದ ದಾರಿಯ ಮೂಲಕ ನಡೆದೇ ಸಾಗಬಹುದು. ಅಕ್ಕ ಪಕ್ಕದಲ್ಲಿ ಕುದುರೆ, ಪಲ್ಲಕ್ಕಿಗಳೂ ಸಾಗುತ್ತಿರುತ್ತವೆ.ಪರ್ವತ ಏರುವ ಮಾರ್ಗಮಧ್ಯೆ ಸುಸಜ್ಜಿತ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳಿವೆ. ಬಿಸಿಲರಿ ನೀರಿನ ಬಾಟಲಿಗಳನ್ನೂ ಮಾರುವ ಅಂಗಡಿಗಳೂ ಸಾಕಷ್ಟಿವೆ. ನಡೆದೇ ಸಾಗುವ ಯಾತ್ರಿಕರಿಗೆ ಕುಳಿತು ಸುಧಾರಿಸಿಕೊಳ್ಳಲು ಸಾಕಷ್ಟು ನೆರಳಿನ ಕುಟೀರಗಳನ್ನು ವ್ಯವಸ್ಥೆ ಮಾಡಲಾಗಿದೆ.  ವೈಷ್ಣೋದೇವಿ ಪರ್ವತದಲ್ಲಿ ಹಲವಾರು ಕಡೆಗಳಲ್ಲಿ ಭೂಮಿ, ಕಲ್ಲು ಬಂಡೆಗಳು ಕುಸಿಯುವ ಪ್ರದೇಶಗಳನ್ನು ಗುರುತು ಮಾಡಲಾಗಿದೆ. ಹಾಗು ಅದನ್ನು ಸೂಚಿಸುವ ಬೋರ್ಡುಗಳನ್ನೂ ಅಲ್ಲಿ ಹಾಕಲಾಗಿದೆ. ಯಾತ್ರಿಕರು ಇಂತಹ ಸ್ಥಳಗಳಲ್ಲಿ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು ಅಪಾಯಕಾರಿಯಾಗಿರುತ್ತದೆ. ಅಂತಹ ಸ್ಥಳದಲ್ಲಿ ವೇಗವಾಗಿ ಸಾಗಬೇಕೆಂದು ಘೋಷಣೆಗಳನ್ನು ಹೊರಡಿಸಲಾಗುತ್ತಿರುತ್ತದೆ.

ಬಾಣಗಂಗಾದಿಂದ ಹಿಡಿದು ಭವನದವರೆವಿಗೂ ಸಾಗುವ ಮಾರ್ಗದಲ್ಲಿ ನೆರಳಿನ ಹೊದಿಕೆಯನ್ನು ಕಲ್ಪಿಸಲಾಗಿದೆ. ಮಳೆ ಅಥವಾ ಬಿಸಿಲಿನ ಸಂಧರ್ಭಗಳಲ್ಲಿ ಯಾವುದೇ ತೊಂದರೆಯಿಲ್ಲ. ಗುಂಪಿನಲ್ಲಿ ಹೊರಡುತ್ತಿರುವ ಯಾತ್ರಿಕರು ಕೊನೆಯವರವಿಗೂ ಗುಂಪಿನಲ್ಲಿಯೇ ಇರುವುದು ಉತ್ತಮ. ಪರ್ವತದ ಮೇಲೆ ನೆಟ್ವರ್ಕ್ ಸಮಸ್ಯೆಯಿರುವ ಕಾರಣ ಅಕಸ್ಮಾತ್ ಗುಂಪಿನಿಂದ ಯಾರಾದರೂ ಬೇರುಳಿದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂಧರ್ಭಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅನೌನ್ಸ್ಮೆಂಟ್ ಕೌಂಟರ್ ಗೆ ಹೋಗಿ ಅಲ್ಲಿ ಮಾಹಿತಿ ನೀಡಬೇಕು. ದೇವಸ್ಥಾನದ ಮಂಡಳಿ ತಪ್ಪಿಸಿಕೊಂಡ ಸದಸ್ಯರ ಮಾಹಿತಿಯನ್ನು ಮೈಕ್ ನಲ್ಲಿ ಘೋಷಣೆಯನ್ನಾಗಿ ಹೊರಡಿಸುತ್ತದೆ. ಇಂತಹ ಅನೌನ್ಸ್ಮೆಂಟ್ ಕೌಂಟರ್ ಗಳು ಬಾಣಗಂಗಾ, ಅಧಕುವಾರಿ ಹಾಗು ಭವನ ಗಳಲ್ಲಿವೆ.

ಬಾಣಗಂಗಾದಿಂದ ಆರಂಭವಾಗುವ ಪರ್ವತದ ಆರೋಹಣ ಚರಣಪಾದುಕಾದ ಮಾರ್ಗವಾಗಿ ಅಧಕುವಾರಿಯ ಕಡೆಗೆ ಸಾಗುತ್ತದೆ. ಕುದುರೆ, ಪಲ್ಲಕ್ಕಿಗಳಲ್ಲಿ ಬರುವ ಯಾತ್ರಿಕರಿಗೆ ಅಧಕುವಾರಿಯೇ ಇಳಿಯುವ ಸ್ಥಳ. ಅಲ್ಲಿಂದ ಮುಂದೆ ಎಲೆಕ್ಟ್ರಿಕ್ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ. ಹರಕೆ ಹೊತ್ತಂತಹವರು ಹಾಗೂ ಆಸಕ್ತರು ಸಂಪೂರ್ಣ ಪರ್ವತಾರೋಹಣವನ್ನು ಪಾದಯಾತ್ರೆ ಮೂಲಕವೇ ಪೂರೈಸುತ್ತಾರೆ. ಅಧಕುವಾರಿಗೆ ತಲುಪಿದ ನಂತರ ಅಲ್ಲಿನ ನಯನ ಮನೋಹರ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಎರಡೂ ಕಡೆಗಳಲ್ಲಿ ವ್ಯಾಪಿಸಿರುವ ಪರ್ವತ ಶ್ರೇಣಿಗಳು, ಕತ್ತೆತ್ತಿ ನೋಡಿದರೆ ಕಾಣುವ ವೈಷ್ಣೋದೇವಿಯೆಡೆಗಿನ ದಾರಿ, ಮುಂದೆ ಕಣ್ಣು ಹಾಯಿಸಿದರೆ ಕಾಣುವ ಕಟರಾ ನಗರ, ದೂರದಲ್ಲಿ ಗೋಚರವಾಗುವ ಸಿಂಧೂ ನದಿಯ ಉಪನದಿಗಳು ಮನಸ್ಸಿಗೆ ಹಬ್ಬವುಂಟುಮಾಡುತ್ತವೆ. ಅಧಕುವಾರಿಯಲ್ಲಿ ತಂಗುದಾಣವಿದ್ದು ಕುಳಿತುಕೊಳ್ಳಲು ವಿಶಾಲವಾದ ಸ್ಥಳ ಇದೆ. ಪರ್ವತದ ಮಧ್ಯಭಾಗವಾದ ಕಾರಣ ಅಲ್ಲಿ ಒಂದು ವ್ಯೂ ಪಾಯಿಂಟ್ ಅನ್ನು ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು, ವೈದ್ಯಕೀಯ ಸೇವೆ, ಪೊಲೀಸ್ ಮಾಹಿತಿ ಕೇಂದ್ರ, ಭೋಜನಾಲಯಗಳ ವ್ಯವಸ್ಥೆ ಅಧಕುವಾರಿಯಲ್ಲಿದ್ದು ಯಾತ್ರಿಕರಿಗೆ ಹೇಳಿ ಮಾಡಿಸಿದಂತಿರುವ ತಂಗುದಾಣ.ಮುಂದೆ ಅಧಕುವಾರಿಯಿಂದ ಭವನದ ಕಡೆಗೆ ಎರಡು ಮಾರ್ಗಗಳಿವೆ. ಒಂದು ಅಧಕುವಾರಿಯಿಂದ ಎಡಬಾಗಕ್ಕೆ ಗುರುತು ಮಾಡಿರುವ ರಸ್ತೆ . ಇಲ್ಲಿನ ರಸ್ತೆ ಅತ್ಯಂತ ಸುಸಜ್ಜಿತವಾಗಿದ್ದು ಮೆಟ್ಟಿಲುಗಳಿಲ್ಲದೆ ಪ್ರಯಾಣಿಸಲು ಅನುಕೂಲಕರವಾಗಿದೆ. ಆದರೆ ಇದೇ ಮಾರ್ಗವಾಗಿ ಎಲೆಕ್ಟ್ರಿಕ್ ವಾಹನಗಳು ತೆರಳಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಮಾತ್ರ ಸಾಗಬೇಕು. ಹಾಗು ಈ ಮಾರ್ಗದಲ್ಲಿ ಹೆಚ್ಚು ಭೂಕುಸಿತ ಉಂಟಾಗುವ, ಕಲ್ಲು ಬಂಡೆಗಳು ಆಯತಪ್ಪಿ ಬೀಳುವ ಪ್ರದೇಶಗಳನ್ನು ಗುರುತಿಸಲಾಗಿದೆ. ಅವಘಡಗಳು ಹೆಚ್ಚು ಇಲ್ಲಿ ಸಂಭವಿಸಿಲ್ಲವಾದರೂ ಈ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಅದು ಬಿಟ್ಟರೆ ಮತ್ತೊಂದು ದಾರಿ ಅಧಕುವಾರಿಯಿಂದ ಎಡಕ್ಕೆ ತಿರುಗದೆ ನೇರವಾಗಿ ಸಾಗುವುದು. ಈ ಮಾರ್ಗದಲ್ಲಿ ಅಲ್ಲಲ್ಲಿ ಮಾತ್ರ ನೆರಳಿನ ಹೊದಿಕೆ ಕಲ್ಪಿಸಲಾಗಿದೆ. ಇಲ್ಲಿ ಮೆಟ್ಟಿಲುಗಳನ್ನು ಏರಿಕೊಂಡು ಮಾತ್ರವೇ ಸಾಗಬಹುದಾದ ಪ್ರದೇಶಗಳಿದ್ದು ಶಕ್ತರು ಹಾಗು ಆಸಕ್ತರು ಈ ಮಾರ್ಗದಲ್ಲಿಯೂ ತೆರಳಬಹುದು. ಮೆಟ್ಟಿಲು ಹತ್ತುವ ಪ್ರದೇಶಗಳು ಎದುರಾದಾಗ ಅಲ್ಲಿ ಎಷ್ಟು ಮೆಟ್ಟಿಲುಗಳಿವೆ ಎಂಬ ಫಲಕವನ್ನು ಮೆಟ್ಟಿಲು ಹತ್ತುವರಿಗಾಗಿಯೇ ಅಳವಡಿಸಲಾಗಿದೆ. ಅವುಗಳ ಮಾಹಿತಿಯಿಂದ ಆಸಕ್ತರು ತಮ್ಮ ಶಕ್ತ್ಯಾನುಸಾರ ಮೆಟ್ಟಿಲುಗಳನ್ನು ಏರಬಹುದು, ಇಲ್ಲವಾದರೆ ಕಡಿದಾದ ರಸ್ತೆಗಳನ್ನು ಬಳಸಬಹುದು.ಅಧಕುವಾರಿಯಿಂದ ಭವನ 7 ಕಿಲೋಮೀಟರು ದೂರದ ಹಾದಿ.

ಅಧಕುವಾರಿಯಿಂದ ಭವನದ ಕಡೆಗೆ ಸಾಗುವ ಮಾರ್ಗದಲ್ಲಿ ಕೋತಿಗಳು ಅಸಂಖ್ಯವಾಗಿದ್ದು ಅಲ್ಲಿ ಎಚ್ಚರ ವಹಿಸುವುದು ಉತ್ತಮ. ಕೆಲವು ಸಮಯದಲ್ಲಿ ಕೋತಿಗಳಿಂದಲೂ ಕಲ್ಲು ಬಂಡೆಗಳು ಜಾರಿ ಯಾತ್ರಿಕರ ಪಥದ ಮೇಲೆ ಬೀಳುವ ಅಪಾಯವಿದ್ದೇ ಇರುತ್ತದೆ. ಅಧಕುವಾರಿ ದಾಟಿದ ನಂತರ ಪರ್ವತದ ಎತ್ತರದ ಭಾಗಕ್ಕೆ ಸಾಗುವುದರಿಂದ ಉಷ್ಣಾಂಶ ಕಡಿಮೆಯಾಗಿ ಶೀತಗಾಳಿಯ ಅನುಭವವಾಗುತ್ತದೆ. ಇನ್ನು ನವೆಂಬರ್-ಮಾರ್ಚ್ ನಡುವಿನ ಸಮಯದಲ್ಲಿ ಅಲ್ಲಿ ಹಿಮಪಾತವೇ ಆಗುತ್ತಿರುತ್ತದೆ. ಬೇಸಿಗೆಯ ದಿನಗಳಲ್ಲಿ ಅಷ್ಟೇನೂ ಶೀತ ವಾತಾವರಣವಿರದೆ ಅನುಕೂಲ ವಾತಾವರಣವಿರುತ್ತದೆ.

ಇಂತಹ ಹಾದಿಯನ್ನು 7 ಕಿಲೋಮೀಟರು ಕ್ರಮಿಸಿದರೆ ಅಲ್ಲಿ ಎದುರಾಗುತ್ತದೆ ವೈಷ್ಣೋದೇವಿ ಗುಹಾಲಯ. ಇದು ವಿಶೇಷವಾಗಿ ದೇವಾಲಯದಂತಹ ರಚನೆಗಳನ್ನೇನ್ನೂ ಹೊಂದಿಲ್ಲ. ಅಲ್ಲಿರುವ ಅಮೃತಶಿಲೆಯ ಗುಹೆಯೇ ವೈಷ್ಣೋದೇವಿಗೆ ಆಲಯ. ಇಲ್ಲಿ ಗೋಪುರ ರಚನೆಯಿಲ್ಲ, ಗಂಟಾನಾದವಿಲ್ಲ. ನಡೆಯುವ ವಿಶೇಷ ಪೂಜೆಗಳೆಲ್ಲ ಬೆಳಗಿನ ಜಾವದ ಸಮಯದಲ್ಲಿಯೇ ಮುಗಿದು ಹೋಗುವುದರಿಂದ ಯಾತ್ರಿಕರಿಗೆ ದರ್ಶನ ಅವಕಾಶ ಸಂಪೂರ್ಣ ಲಭ್ಯವಾಗುತ್ತದೆ. ಗುಹಾಲಯದ ಮುಂದೆ ಜನ ಸಂದಣಿ ಉಂಟಾಗುವುದರಿಂದ ಸೂಕ್ತ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಇಲ್ಲಿ ಸರತಿ ಸಾಲಿನಲ್ಲಿ ಕೆಲವು ಕಾಲ ನಿಂತು ಕಾಯಬೇಕಾಗುತ್ತದೆ. ನವರಾತ್ರಿ, ಅಮಾವಾಸ್ಯೆಗಳಂತಹ ಸಂಧರ್ಭಗಳಲ್ಲಿ ಸರತಿಯ ಸಾಲು ಕಿಲೋಮೀಟರ್ ಗಟ್ಟಲೆ ಇರಲೂ ಬಹುದು. ವಾರಾಂತ್ಯಗಳೂ ಇದಕ್ಕೆ ಹೊರತಾಗಿಲ್ಲ. ಇತರೆ ದಿನಗಳಲ್ಲಿ ಸರತಿಯ ಸಾಲು  ಕಡಿಮೆಯೇ ಇರುತ್ತದೆ.

ಗುಹಾಲಯಕ್ಕೆ ಪ್ರವೇಶಿಸುವ ಮೊದಲು ಸ್ನಾನ ಮಾಡಲು ಆಸಕ್ತರಾದವರಿಗೆ ಭವನಕ್ಕೆ ಸಮೀಪದಲ್ಲಿಯೇ ಸ್ನಾನ ಘಟ್ಟವೊಂದನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಸ್ನಾನ ಮಾಡಿಕೊಂಡು ಗುಹಾಲಯ ಪ್ರವೇಶಿಸಬಹುದು. ಅತೀ ಭಾರವಾದ ಲಗೇಜುಗಳನ್ನು ಆಲಯದ ಒಳಗೆ ತರಲು ಅವಕಾಶವಿಲ್ಲ ಹಾಗಾಗಿಯೇ ಭವನದ ಸಮೀಪದಲ್ಲಿಯೇ ಕ್ಲಾಕ್ ರೂಮುಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಲಗೇಜುಗಳನ್ನು ಇರಿಸಿ ದರ್ಶನಕ್ಕೆ ಮುಂದಾಗಬೇಕು.

ಸುಮಾರು 10 ಮೀಟರ್ ಉದ್ದವಿರುವ ಗುಹೆಯ ಕೊನೆಯ ಭಾಗದಲ್ಲಿ ವೈಷ್ಣೋದೇವಿಯ ದರ್ಶನ ಲಭ್ಯವಾಗುತ್ತದೆ. ಇಡೀ ಪರ್ವತಾರೋಹಣದ ಪರಿಶ್ರಮ ಅಲ್ಲಿಗೆ ಸಾರ್ಥಕವಾದಂತಹ ಭಾವ ತಳೆಯುವ ಭಕ್ತರು 'ಜೈ ಮಾತಾ ದಿ' ಎಂಬ ಘೋಷಣೆಗಳನ್ನು ಕೂಗುತ್ತಾರೆ. ವೈಷ್ಣೋದೇವಿಯ ಮುಂದೆ ಆಸೀನರಾಗಿರುವ ಪುರೋಹಿತರು ತೀರ್ಥವನ್ನು ಎಲ್ಲ ಭಕ್ತರಿಗೂ ವಿತರಿಸುತ್ತಾರೆ ಹಾಗು ಎಲ್ಲರ ಹಣೆಗೂ ತಿಲಕ ಇಡುತ್ತಾರೆ. ಪ್ರತಿಯೊಬ್ಬ ಭಕ್ತನಿಗೂ ವೈಷ್ಣೋದೇವಿಯ ದರ್ಶನ ಭಾಗ್ಯ 5-10 ಸೆಕೆಂಡ್ ಗಳಷ್ಟು ಲಭ್ಯವಾಗುತ್ತದೆ. ವೈಷ್ಣೋದೇವಿ ಪಕ್ಕದಲ್ಲಿಯೇ ನದಿಯೊಂದು ಉಗಮವಾಗುತ್ತಿರುವ ಸ್ಥಳವಿದೆ.ವೈಷ್ಣೋದೇವಿಯ ಪಕ್ಕದಲ್ಲಿಯೇ 4-5 ಮೆಟ್ಟಿಲುಗಳನ್ನು ಇಳಿಯಬೇಕಾದ ಸ್ಥಳವಿದೆ, ಅಲ್ಲಿಯೇ ನದಿ ಉಗಮವಾಗಿ ಹರಿಯುತ್ತಿದೆ. ಆ ನದಿಯ ನೀರನ್ನು ತೀರ್ಥದಂತೆ ಭಾವಿಸಿ ಭಕ್ತರು ತಲೆಗೆ ಪ್ರೋಕ್ಷಿಸಿಕೊಳ್ಳುತ್ತಾರೆ. ಅಲ್ಲಿಂದ ನೇರವಾಗಿ 5 - 6 ಮೀಟರ್ ದೂರ ಸಾಗಿದರೆ ಗುಹಾಲಯದಿಂದ ಹೊರ ಬಂದುಬಿಟ್ಟಿರುತ್ತೇವೆ. ಅಲ್ಲಿಗೆ ವೈಷ್ಣೋದೇವಿ ಯಾತ್ರೆಯ ಬಹು ಮುಖ್ಯವಾದ ಘಟ್ಟ ಮುಗಿಯುತ್ತದೆ.ಭವನದ ಸುತ್ತಲೂ ಅನೇಕ ಧರ್ಮ ಛತ್ರಗಳೂ ಲಭ್ಯವಿದ್ದು ಅಲ್ಲಿ ಭಕ್ತರು ಉಳಿಯಲು ಅವಕಾಶ ಕಲ್ಪಿಸಲಾಗಿದೆ. ದೂರದೂರುಗಳಿಂದ ಬರುವ ರೈತಾಪಿ ವರ್ಗದವರು, ಖಾಸಗಿ ಲಾಡ್ಜ್ ಗಳಿಗೆ ಅವಕಾಶವಾಗದವರು ಅಲ್ಲಿಯೇ ತಂಗುತ್ತಾರೆ.

ಇಲ್ಲಿ ವೈಷ್ಣೋದೇವಿ  ಆಡಳಿತ ಮಂಡಳಿಯ ವತಿಯಿಂದ ವಿತರಿಸಲಾಗುವ ಪ್ರಸಾದದ ಪೊಟ್ಟಣಗಳನ್ನು ಖರೀದಿಸಬಹುದು. ಭವನದಿಂದ ಹೊರಬಂದ ನಂತರ 100 ಮೀಟರ್ ಬಂದ ದಾರಿಯಲ್ಲಿಯೇ ಹಿಂದಿರುಗಿದರೆ ವೈಷ್ಣೋದೇವಿ ಪ್ರಸಾದ ಕೇಂದ್ರ ಸಿಗುತ್ತದೆ. ವೈಷ್ಣೋದೇವಿ ಪ್ರಸಾದವನ್ನು 'ಭೇನ್ಟ್' ಎಂದು ಕರೆಯಲಾಗುತ್ತದೆ. ಹಣ ಪಾವತಿ ಮಾಡಿ ಪ್ರಸಾದ ಕೊಂಡುಕೊಳ್ಳಬಹುದು. ಅಲ್ಲಿಗೆ ವೈಷ್ಣೋದೇವಿ ದರ್ಶನ ಯಾತ್ರೆ ಮುಗಿದಂತೆಯೇ.

ವೈಷ್ಣೋದೇವಿಯ ಗುಹಾಲಯ ಪರ್ವತದ ತುತ್ತ ತುದಿಯಲಿಲ್ಲ. ಭವನದಿಂದ 2 ಕಿಲೋ ಮೀಟರ್ ಮೇಲಿನ ಭಾಗವೇ ತ್ರಿಕೂಟ ಪರ್ವತದ ತುತ್ತ ತುದಿ. ಇಲ್ಲಿ ಭೈರೋ ಬಾಬಾ ಎಂದು ಕರೆಯಲ್ಪಡುವ ಶಿವನ ದೇವಾಲಯವಿದೆ. ಈ ದೇವಾಲಯಕ್ಕೆ ಭೇಟಿ ಕೊಡದಿದ್ದರೆ ವೈಷ್ಣೋದೇವಿ ಯಾತ್ರೆಯೇ ಅಪೂರ್ಣವೆಂದು ಭಕ್ತರು ಭಾವಿಸುವುದು ಉಂಟು. ವೈಷ್ಣೋದೇವಿ ಪ್ರಸಾದ ಕೌಂಟರ್ ಮುಂದೆಯೇ ಮೇಲ್ಭಾಗಕ್ಕೆ ಏರಲು ಕಡಿದಾದ ದಾರಿಯಿದೆ. ಅದೇ ಭೈರೋ ದೇವಾಲಯಕ್ಕೆ ಮಾರ್ಗ. ಇಲ್ಲಿಂದ ಮತ್ತೆ ಭೈರೋ  ದೇವಾಲಯಕ್ಕೆ ಕುದುರೆಗಳ ಸೌಲಭ್ಯವಿದೆ. ಎಲೆಕ್ಟ್ರಿಕ್ ವಾಹನಗಳ ಸೌಲಭ್ಯ ಇಲ್ಲಿ ನಿಷಿದ್ಧವಾಗಿದೆ.

ಇದೇ ಹಾದಿಯಲ್ಲಿ 2 ಕಿಲೋಮೀಟರು ಸಾಗಿದರೆ ಪರ್ವತದ ತುತ್ತ ತುದಿಯು ಸಿಗುತ್ತದೆ. ಅಲ್ಲೇ ಸ್ತಿತ್ಯವಾಗಿದೆ ಭೈರೋ ದೇವನ ಆಲಯ. ಭವನದಿಂದ ಭೈರೋ ದೇವಾಲಯಕ್ಕೆ ಇರುವ ದಾರಿ ತೀವ್ರ ಕಡಿದಾಗಿದ್ದು ಯಾತ್ರಿಕರು ಭವನದ ಬಳಿ ಸಾಕಷ್ಟು ವಿಶ್ರಾಂತಿ ಪಡೆದು ಲಘು ಆಹಾರ ಸೇವಿಸಿ ಹೊರಡುವುದು ಉತ್ತಮ. ತೀವ್ರ ಚಳಿಗಾಳಿ ಬೀಸುವ ಸಮಯಗಳಲ್ಲಿ ಪರ್ವತದ ತುತ್ತ ತುದಿಯಲ್ಲಿ ಒತ್ತಡ ಕುಸಿಯುವುದರಿಂದ ಆಮ್ಲ ಜನಕದ ಕೊರತೆಯುಂಟಾಗುತ್ತದೆ. ಇನ್ನುಳಿದಂತೆ ಭೈರೋ ಆಲಯಕ್ಕೆ ಭೇಟಿ ನೀಡಲು ಯಾವುದೇ ತೊಂದರೆಗಳಿಲ್ಲ. ಈ ಭಾಗದಲ್ಲಿ ಇರುವ ವನ್ಯಜೀವಿಗಳೆಂದರೆ ಜಿಂಕೆ ಸಾರಂಗಗಳು ಮಾತ್ರ. ಹಾಗಿರುವುದರಿಂದ ಪ್ರಾಣಿಗಳಿಗೆ ಭೀತಿ ಪಡುವ ಅಗತ್ಯವಿಲ್ಲ. ಹಾಗಿದ್ದಾಗ್ಯೂ ಕೋತಿಗಳಿಂದ ಜಾಗೃತರಾಗಿರುವುದು ಉತ್ತಮ. ಪರ್ವತದ ತುತ್ತ ತುದಿಯ ಭೈರೋ ದೇವನ ಆಲಯದಲ್ಲಿ ಶಿವನ ದರ್ಶನ ಪಡೆದು ಅಲ್ಲಿರುವ ವ್ಯೂ ಪಾಯಿಂಟ್ ನಲ್ಲಿ ಕೆಲವು ಕಾಲ ವಿಶ್ರಮಿಸಬಹುದು. ಭೈರೋ ಬಾಬಾ ಭೇನ್ಟ್ ಪ್ರಸಾದವನ್ನು ಕೊಂಡುಕೊಳ್ಳಬಹುದು. ಉತ್ತರ ಭಾರತೀಯ ಖಾದ್ಯಗಳ ಹೋಟೆಲ್ ಗಳು ಕೂಡ ಅಲ್ಲಿದ್ದು ಐಸ್ ಕ್ರೀಮ್, ಚಹಾ ದಂತಹ ಚಿಕ್ಕ ಚಿಕ್ಕ ಅಂಗಡಿಗಳು ಅಲ್ಲಿವೆ. ವ್ಯೂ ಪಾಯಿಂಟ್ ನಲ್ಲಿ ಕುಳಿತು ನೋಡಲು ನೆರಳಿನ ಕುಟೀರವೂ ಇದೆ. ಭೈರೋದೇವನ ದೇವಾಲಯವೇ ತ್ರಿಕೂಟ ಪರ್ವತದ ಅಂತ್ಯ. ಅದೇ ದಾರಿಯಲ್ಲಿ ಮುಂದೆ ಸಾಗಿದರೆ ಪರ್ವತದಿಂದ ಕೆಳಗಿಳಿಯುವ ದಾರಿ ಅದಾಗುತ್ತದೆ. ಅಲ್ಲಿಂದ ಅಧಕುವಾರಿಗೆ ನೇರ ದಾರಿಯಿದ್ದು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ತಲುಪಬಹುದು. ಬಂದ ದಾರಿಯಲ್ಲಿಯೇ ಇಳಿಯುವುದು ಕೂಡ ಸಾಧ್ಯವಿದೆ. ಆದರೆ ಭೈರೋ ದೇವಾಲಯದಿಂದ ಅಧಕುವಾರಿಗೆ ಇರುವ ನೇರ ದಾರಿ ಸುಲಭ ಮಾರ್ಗದ್ದಾಗಿದೆ. ಹಾಗಾಗಿ ಗರಿಷ್ಠ ಯಾತ್ರಿಕರು ಅದೇ ಮಾರ್ಗವನ್ನು ಅನುಸರಿಸುತ್ತಾರೆ.

ಅಧಕುವಾರಿ ತಲುಪಿದ ನಂತರ ಪರ್ವತಾರೋಹಣ ಸಮಯದಲ್ಲಿ ಕ್ರಮಿಸಿದ್ದ ದಾರಿಯನ್ನೇ ಕ್ರಮಿಸಿ ಇಳಿಯಬೇಕು. ಅಲ್ಲಿಗೆ ಯಾತ್ರಿಗಳು ಮರಳಿ ಬಾಣಗಂಗಾ ತಲುಪುತ್ತಾರೆ. ಅಲ್ಲಿಗೆ ತ್ರಿಕೂಟ ಪರ್ವತಾರೋಹಿಗಳೆಂಬ ಕೀರ್ತಿಯು ಯಾತ್ರಿಗಳಿಗೆ ಲಭ್ಯವಾಗುತ್ತದೆ. ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸುವ ಯಾತ್ರಿಗಳು ಭೈರೋ ದೇವನ ಆಲಯದಿಂದ ಸಂಜಿಛಾತ್ ಗೆ ಇರುವ ಮಾರ್ಗದಲ್ಲಿ ನಡೆದು ಅಥವಾ ಕುದುರೆಯ ಮೇಲೆ ಸಾಗಿ ಹೆಲಿಪ್ಯಾಡ್ ತಲುಪಬಹುದು. ಅಲ್ಲಿಂದ ನೇರ ಕಟರಾಗೆ ಹೆಲಿಕ್ಯಾಪ್ಟರ್ ಬಂದಿಳಿಯುತ್ತದೆ.ಭವನ ಹಾಗು ಭೈರೋ ಬಾಬಾ ಆಲಯಗಳ ಬಳಿ ಅಥವಾ ಮಾರ್ಗ ಮಧ್ಯೆ ಎಲ್ಲಿಯೂ ವಿಶ್ರಾಂತಿ ಪಡೆಯದ ಪಾದಯಾತ್ರಿಗಳು ಬಾಣಗಂಗಾ ತಲುಪುವ ಹೊತ್ತಿಗೆ ನಿತ್ರಾಣರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ನಡು-ನಡುವೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯವಾಗಿರುತ್ತದೆ. ಕಟರಾದಲ್ಲಿ ಮೊದಲೇ ರೂಮು ಹಿಡಿದು ಅನಂತರ ಪರ್ವತಾರೋಹಣ ಮಾಡಿದ ಯಾತ್ರಿಕರು ನಿಶ್ಚಿಂತೆಯಿಂದ ರೂಮು ತಲುಪಿ ಸಾಕಷ್ಟು ವಿಶ್ರಾಂತಿಯತ್ತ ಗಮನ ಹರಿಸಬೇಕು.

ಆದಷ್ಟು ಮಾರನೆಯ ದಿನ ಹೆಚ್ಚು ದೈಹಿಕ ಶಕ್ತಿ ಖರ್ಚಾಗುವ ಯಾವ ಯೋಜನೆಗಳನ್ನು ಹಾಕಿಕೊಳ್ಳದಿರುವುದು ಉತ್ತಮ. ಪಾದಯಾತ್ರೆಯಲ್ಲಿ ಪರ್ವತ ಹತ್ತಿಳಿದ ಯಾತ್ರಿಕರಿಗೆ ಕೈ ಕಾಲು ನೋವು ಕೆಲವು ವಾರಗಳ ವರೆವಿಗೂ ಹಾಗೆ ಉಳಿದಿರುತ್ತದೆ. ಆದ ಕಾರಣ ಅದಕ್ಕೆ ಸಂಬಂಧಿಸಿದ ಔಷಧ ವ್ಯವಸ್ಥೆಗಳನ್ನು ಕಟರಾದಲ್ಲಿ ಪಡೆಯುವುದು ಉತ್ತಮ.

ಪರ್ವತ ಹತ್ತಿಳಿಯುವ ಸಮಯ ಇಷ್ಟೇ ಎಂದು ನಿಗದಿತವಾಗಿ ಹೇಳಲು ಸಾಧ್ಯವಿಲ್ಲ. ಅದು ಅವರವರ ಶಕ್ತಿಯ ಅನುಸಾರ ತೀರ್ಮಾನಿಸಲ್ಪಡುತ್ತದೆ. ಮಾರ್ಗ ಮಧ್ಯೆ ಅವರು ಪಡೆಯುವ ವಿಶ್ರಾಂತಿ ಸಮಯ, ದರ್ಶನಕ್ಕಿದ್ದ ಸರತಿಯ ಸಾಲು, ಮಳೆ ಹಿಮಪಾತ ಮತ್ತಿತರ ಸಮಯಗಳಲ್ಲಿ ಉಂಟಾಗುವ ಅಡಚಣೆಗಳು ಕೂಡ ಯಾತ್ರೆಯ ಸಮಯವನ್ನು ಹೆಚ್ಚು ಮಾಡುವಲ್ಲಿ ಪಾತ್ರ ವಹಿಸುತ್ತವೆ.

ಸೂಚನೆ: ಚಳಿಗಾಲದಲ್ಲಿ ತೀವ್ರ ಹಿಮಪಾತವಿರುವುದರಿಂದ ವೈಷ್ಣೋದೇವಿಗೆ ಆ ಸಮಯದಲ್ಲಿ ಭೇಟಿಕೊಡುವುದು ಪ್ರಾಣಾಪಾಯಕಾರಿ. ಕೆಲವು ಸಾಹಸ ಪ್ರಿಯ ಯಾತ್ರಿಕರು ಚಳಿಗಾಲದಲ್ಲಿ ಭೇಟಿ ಕೊಡುತ್ತಾರಾದರೂ ಬಹಳ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಚಿಕ್ಕ ಮಕ್ಕಳು,  ಅನಾರೋಗ್ಯ ಪೀಡಿತರು, ಅಂಗವಿಕಲರು, ಮಹಿಳೆಯರು, ವೃದ್ಧರು ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ಕೊಡಲೇಬಾರದು.ಅತಿಯಾಗಿ ಮಳೆಯಾಗುವ ಸಂಧರ್ಭದಲ್ಲಿ ಪರ್ವತದ ಕೆಲವು ಭಾಗಗಳಲ್ಲಿ ಕಲ್ಲು ಬಂಡೆಗಳು ಮೇಲೆ ಬೀಳುವ ಸಂಭವವಿರುವುದರಿಂದ ಬಹಳ ಜಾಗೃತೆ ವಹಿಸಬೇಕು.

ವೈಷ್ಣೋದೇವಿ ಯಲ್ಲಿ ನಾನು
ವೈಯ್ಯಕ್ತಿಕವಾಗಿ ನಾನು ಏಕಾಂಗಿಯಾಗಿ ಬೆಳಗಿನ 7.15 ಕ್ಕೆ ಪರ್ವತ ಆರೋಹಣ ಮಾಡಲು ಶುರು ಮಾಡಿದ್ದೆ (ನಾನು ಪರ್ಚಿ ಚೀಟಿ ಪಡೆದಿದ್ದೆ 6.55ರಲ್ಲಿ, ಅಲ್ಲಿಂದ ಬಾಣಗಂಗಾದವರೆವಿಗೂ ನಡೆಯಲು 20 ನಿಮಿಷ ಸಮಯ ಹಿಡಿಯಿತು.  ಮೇಲೆ ಕಾಣುವುದು ನನ್ನದೇ ಪರ್ಚಿ ಚೀಟಿ ಅಲ್ಲಿ ಸಮಯ ಗಮನಿಸಿ). 12.30 ಸುಮಾರಿಗೆ ಭವನ ತಲುಪಿದ್ದೆ. 1 ಗಂಟೆಯ ಸುಮಾರಿಗೆ ದರ್ಶನ ವಾಗಿತ್ತು. ನಂತರ ಅಲ್ಲಿಯೇ ಹತ್ತಿರದಲ್ಲಿದ್ದ ಹೋಟೆಲ್ ನಲ್ಲಿ ಲಘು ಆಹಾರ ಸೇವಿಸಿದ್ದೆ. ಮುಂದೆ ಭೈರೋಬಾಬಾ ದರ್ಶನಕ್ಕೆ ಮತ್ತೆ ಹತ್ತಬೇಕು ಎನ್ನುವ ಅರಿವಿದ್ದ ಕಾರಣ ಲಘು ಆಹಾರವಷ್ಟೇ ಸೇವಿಸಿದ್ದೆ. ಭವನದ ಪ್ರಸಾದ ಪೊಟ್ಟಣಗಳನ್ನು ಖರೀದಿಸಿದ ನಂತರ ಅಲ್ಲಿಯೇ 1 ಗಂಟೆಯ ಕಾಲ ವಿಶ್ರಾಂತಿ ಪಡೆದೆ. ಉತ್ತರ ಭಾರತದ ಸಾಧು ಸಂತರ, ರೈತಾಪಿ ಮಹಿಳೆಯರ ಗುಂಪುಗಳು ನನಗೆ ಎದುರಾಗಿದ್ದವು. ಅವರೊಂದಿಗೆ ಕೆಲವು ಕಾಲ ಸಂಭಾಷಣೆ ನಡೆಸಿ ಅಪಾರ ಅಂಶಗಳನ್ನು ಕಲಿಯಲು ಅವಕಾಶವಾಯಿತು. ಬಿಹಾರದ ಮಹಿಳೆಯರ ಗುಂಪೊಂದು ವೈಷ್ಣೋದೇವಿ ಆಲಯಕ್ಕೆ ಭೇಟಿ ನೀಡಿತ್ತು. ಅವರು ಪ್ರತೀ ವರ್ಷವೂ ಅಲ್ಲಿಗೆ ಭೇಟಿ ನೀಡುವುದು ವಾಡಿಕೆಯಂತೆ, ಕೃಷಿ ಕಾರ್ಯಗಳು ಹೆಚ್ಚು ಇಲ್ಲದ ಸಮಯದಲ್ಲಿ ಎಲ್ಲರು ಯೋಜನೆ ಹಾಕಿಕೊಂಡು ರೈಲುಮಾರ್ಗವಾಗಿ ವೈಷ್ಣೋದೇವಿಗೆ ಭೇಟಿಯಿತ್ತಿದ್ದರು.

ಮೂರು ದಿನ ಅಲ್ಲಿಯೇ ಉಳಿಯುವ ಅವರು ಒಂದು ದಿನ ಪೂರ್ತಿ ಪರ್ವತ ಹತ್ತುವರಂತೆ, ಒಂದು ದಿನ ಪೂರ್ತಿ ಭವನದ ಧರ್ಮಛತ್ರದಲ್ಲಿರುವರಂತೆ ಇನ್ನೊಂದು ದಿನ ಭೈರೋಬಾಬಾ ದರ್ಶನ ಮಾಡಿಕೊಂಡು ಪರ್ವತ ಇಳಿಯುವರಂತೆ. "ಹಾಗಿಲ್ಲದಿದ್ದರೆ ನಾವೆಲ್ಲಾ 50 ವರ್ಷ ದಾಟಿದವರು ಒಂದೇ ದಿನದಲ್ಲಿ ಪರ್ವತ ಹತ್ತಿಳಿಯಲು ಸಾಧ್ಯವೇ?" ಎಂದು ಅವರು ಕೇಳುತ್ತಿದ್ದುದು ಜ್ಞಾಪಕದಲ್ಲಿದೆ. ಪರ್ವತ ಇಳಿದ ಅದೇ ದಿನ ರೈಲು ಮಾರ್ಗವಾಗಿ ಊರು ಸೇರಿಕೊಳ್ಳುವರಂತೆ!!.
ಹೀಗೆ ಕೆಲವರನ್ನು ಮಾತನಾಡಿಸಿಕೊಂಡು 2 ಗಂಟೆಯ ಸುಮಾರಿಗೆ ವೈಷ್ಣೋದೇವಿ ಭವನದಿಂದ ಹೊರಟು ಭೈರೋಬಾಬಾ ಆಲಯದತ್ತ ಹೆಜ್ಜೆ ಹಾಕಲು ಶುರು ಮಾಡಿದೆ. ಒಂದು ಘಂಟೆಯ ಕಠಿಣ ಹಾದಿ ಸವೆಸಿದ ತರುವಾಯು ಭೈರೋಬಾಬಾ ದೇವಾಲಯ ತಲುಪಿ ದರ್ಶನ ಪಡೆದೆ.

ಅಲ್ಲಿ ಸುಮಾರು 20 ನಿಮಿಷಗಳಷ್ಟು ವಿಶ್ರಾಂತಿ ಪಡೆದು ಸಮೋಸ ಮೆಲ್ಲುತ್ತ ಅಲ್ಲಿರುವ ಕಾಫಿ ಡೇ ಒಂದರಿಂದ ಕಾಫೀ ಕೊಂಡುಕೊಂಡು ಕಾಫೀ ಹೀರಿದೆ. ಅಲ್ಲಿ 'ಕಾಫಿ ಗೆ ಬಾರಿ ರೇಟು' ಎಂದು ಮನಸಿನಲ್ಲಿ ಅನಿಸಿತ್ತಾದರೂ, "ಈ ಪರ್ವತದ ಮೇಲೆ ಇಲ್ಲಿಗೆ ಕಾಫೀ ತಂದು ಕಡಿಮೆ ರೇಟಿಗೆ ಕೊಡಲು ಅವರೇನು ನಮ್ಮ ಮಾವನ ಮಕ್ಕಳೇ" ಎಂದು ನನ್ನಷ್ಟಕ್ಕೆ ನಾನೇ ನಗುತ್ತಾ ಇಳಿಯುವ ದಾರಿಯತ್ತ ಗಮನ ಹರಿಸಿದೆ.  4 ಗಂಟೆಯ ಸುಮಾರಿಗೆ ಪರ್ವತ ಅವರೋಹಣ ಆರಂಭವಾಯಿತು. ದಾರಿ ಸುಲಭವೆನಿಸಿತು. ದಾರಿಯಲ್ಲಿ ಸಹ ಪಥಿಕರನ್ನು ಮಾತನಾಡಿಸಿಕೊಳ್ಳುತ್ತ ನನಗಾದ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಾಗಿ ಸುಮಾರು 5.20ರಷ್ಟರಲ್ಲಿ ಅಧಕುವಾರಿ ತಲುಪಿದ್ದೆ. ಅಲ್ಲಿ ಸೌತೆಕಾಯಿಯೊಂದನ್ನು ಮೆಲ್ಲುತ್ತಾ ಸುಮಾರು 20 ನಿಮಿಷ ವಿಶ್ರಾಂತಿ ತೆಗೆದುಕೊಂಡೆ.

ಅಲ್ಲಿಂದ ಇಳಿಯುವಷ್ಟರಲ್ಲಿ ಕಾಲು ತೀವ್ರತರದ ನೋವಿಗೆ ಒಳಗಾಗಿತ್ತು. ಹಾಗೂ ಸಾಧನೆಯಂತೆ ಸುಮಾರು 7.30ರಷ್ಟರಲ್ಲಿ ಬಾಣಗಂಗಾ ಚೆಕ್ ಪೋಸ್ಟ್ ತಲುಪಿದ್ದೆ. ನಾನು ನನ್ನ ಚಪ್ಪಲಿಗಳನ್ನು ಬಾಣಗಂಗಾ ಚೆಕ್ ಪೋಸ್ಟ್ ನಲ್ಲಿನ ಕ್ಲಾಕ್ ರೂಮ್ ವೊಂದರಲ್ಲಿ ಬಿಟ್ಟು ಇಡೀ ಪರ್ವತವನ್ನು ಬರಿ ಕಾಲಿನಲ್ಲಿ ಹತ್ತಿ ಇಳಿದಿದ್ದೆ. ಬರಿ ಕಾಲಿನಲ್ಲಿಯೇ ಹತ್ತಬೇಕು ಎನ್ನುವ ನಿಯಮವೇನೂ ಅಲ್ಲಿಲ್ಲ. ಆ ಕಾರಣದಿಂದಲೂ ವಿಪರೀತ ಕಾಲು ನೋವಾಗಿರಲೂ ಬಹುದು.ಬಾಣಗಂಗಾದಿಂದ ಕಟರಾ ಖಾಸಗಿ ಬಸ್ ನಿಲ್ದಾಣದ ಬಳಿಯಿದ್ದ ರೂಮ್ ಗೆ ನಡೆಯುವಷ್ಟರಲ್ಲಿ ನನ್ನ ಸಂಪೂರ್ಣ ಶಕ್ತಿ ಖರ್ಚಾದಂತೆ ಭಾಸವಾಗಿತ್ತು. 8.30 ರ ಸುಮಾರಿಗೆ ರೂಮು ತಲುಪಿದ ನಾನು ಆಗ ಮಲಗಿ ಮತ್ತೆ ಎದ್ದದ್ದು ಬೆಳಗ್ಗೆ 8ಕ್ಕೆಯೇ. ಅಲ್ಲಿಂದ ಎದ್ದು ಕಟರಾ ಮುಖ್ಯ ವೃತ್ತದಲ್ಲಿರುವ ಹೋಟೆಲ್ ಒಂದರಲ್ಲಿ ಮಸಾಲೆ ದೋಸೆ ತಿಂದು ಒಂದು ಚಹಾ ಹೀರಿ ನಿಧಾನವಾಗಿ ಕಟರಾ ನಗರವೆನ್ನೆಲ್ಲ ಸುತ್ತಿ ನೋಡಿದೆ. ನಂತರ 10.30ರ ಸುಮಾರಿಗೆ ರೂಮಿಗೆ ಹಿಂದಿರುಗಿ 11 ಗಂಟೆಗೆ ಸರಿಯಾಗಿ ರೂಮ್ ಚೆಕ್ಔಟ್ ಮಾಡಿ 1 ಗಂಟೆಗೆ ನನಗೆ ಅಮೃತಸರಕ್ಕೆ ಹೊರಡಲು ಇದ್ದ ಬಸ್ಸಿನ ಕಡೆಗೆ ಹೆಜ್ಜೆ ಹಾಕಿದೆ. ಇದು ನನ್ನ ಮೊದಲನೇ ಜಮ್ಮು ಕಾಶ್ಮೀರ ಪ್ರವಾಸವಾಗಿ ಅವಿಸ್ಮರಣೀಯವಾಯಿತು.


ಕಟರಾದಿಂದ ಬಾಣಗಂಗಾಗೆ ಸಾಗುವ ೧.೫ ಕಿಲೋ ಮೀಟರ್ ಮಾರ್ಗದ ಒಂದು ಭಾಗ
ತ್ರಿಕೂಟ ಪರ್ವತ ಹತ್ತುವತ್ತ

ಬಾಣಗಂಗಾದತ್ತ ಜನ ಸಮೂಹ

ಮಾತಾ ವೈಷ್ಣೋದೇವಿ
ರಾತ್ರಿಯ ಸಮಯದಲ್ಲಿ ಕಟರಾದಿಂದ ತ್ರಿಕೂಟ ಪರ್ವತ 

25 ಸೆಪ್ಟೆಂಬರ್ 2018ರ ಬೆಳಗಿನ 7 ಗಂಟೆಗೆ ಬಾಣಗಂಗಾದಿಂದ ತ್ರಿಕೂಟ ಪರ್ವತ ಮಂಜಿನೊಡನೆ ಗೋಚರಿಸಿದ ರೀತಿ. 


-o-

ಮಂಗಳವಾರ, ಜನವರಿ 22, 2019

ನಮ್ಮನೂ ನಿಮ್ಮತ್ತ ಹರಸಿ



ನಡೆದಾಡಿದ ದೇವರೇ
ನಾವು ನಿಮ್ಮಂತೆ ದೈವವಾಗಲು
ಸಾಧ್ಯವಿಲ್ಲವೇನೋ,
ನಿಮ್ಮಾ ಮಹೋನ್ನತ
ಮನುಕುಲದ ಸೇವೆ
ನಮಗೊಲಿಯದೇನೋ!

ನಾವು ನಿಮ್ಮಂತೆ ಯೋಗಿಯಾಗಲು
ಆಗದೇನೋ,
ಭಾವ ಯೋಗಗಗಳ ಮೀರಿ
ಬದುಕುವ ಒಳ ಬೆಂಬಲ
ನಮಗಿರಲಾರದೇನೋ!

ನಾವು ನಿಮ್ಮಂತೆ ಸನ್ಯಾಸವನಪ್ಪಲು
ವಿಧಿ ಹಾಯಿಗೊಡದೇನೋ,
ನಮ್ಮ ಪಾಲಿನ
ವಿಧಿ ಬರಹ
ಬೇರೆಯದೇನೋ ಇರಬಹುದೇನೋ!

ನಾವು ನಿಮ್ಮಂತೆ ಜನಾನುರಾಗಿಯಾಗಲು
ಮನ ಬಿಡದೇನೋ,
ನಾನು ನನ್ನದೆಂಬ ಅಹಮಿಕೆ
ಉಕ್ಕಿ ಹರಿದು ಇಲ್ಲೊಂದು
ಸ್ವಾರ್ಥ ಸಮ್ಮಿಳಿಸಬಹುದೇನೋ!

ಇಲ್ಲಿ ನಿಮ್ಮ ದಾರಿಯಲರಿದು
ನೀವೇರಿದ ಕಡಲನೇರಿ
ಹೋಗಿಬಿಡಬಹುದೇನೋ,
ಆದರೆ ನಾವು ನೀವಾಗಲು
ಇಹವೊಪ್ಪದೇನೋ !

ನಮ್ಮ ಬೇಡುವ ಕೈಯದು
ಭಿಕ್ಷಾಪಾತ್ರೆಯಾಗಬಹುದೇನೋ,
ಆದರೆ ನಿಮ್ಮಂತೆ
ಲಕ್ಷ ಜನಗಳ ಪೊರೆವ
ಅಕ್ಷಯ ಜೋಳಿಗೆಯಾಗದೇನೋ!

ನೀವಾಗಿದ್ದು ನಾವಾಗೇವೇನೋ,
ನಿಮ್ಮ ಗೌರವ, ನಿಮ್ಮ
ಭಾವ, ನಿಮ್ಮ ಭಕ್ತಿಯರಿವು
ನಮ್ಮ ಹೃದಯವರಿತು
ನಿಮ್ಮ ಪಾದಕೆ ಅಡ್ಡಬೀಳಬಹುದೇನೋ!

ನೀವಣಿದ ದಾರಿಯಲಿ
ಕೆಲ ದೂರವನಾಯ್ವ
ಬಲವ ಕರುಣಿಸಿ
ನಮ್ಮನೂ ಶ್ರೀ ಶ್ರೀಯಾಗಿಸಿ
ಪೂಜ್ಯ ಶ್ರೀ ಗುರುದೇವ.

ಅಂದು ನೀವಿರಿಸಿದ ಹೆಜ್ಜೆ
ಇಂದು ಭೋದಿಯ
ವೃಕ್ಷವಾಗಿದೆ.
ನಿಮ್ಮ ಕರುಣೆಯ ದೃಷ್ಟಿಯಿತ್ತ
ಬೀರಿ ನಮ್ಮನೂ
ನಿಮ್ಮತ್ತ ಹರಸಿ.

ಶನಿವಾರ, ಜನವರಿ 5, 2019

ನಿನ್ನ ಗೌರವಕೆ ಭಾಜನರಲ್ಲವೋ ಅಣ್ಣ


ಕಳಬೇಡವೆಂದೆ, ಕಳವಿಗಿಳಿದೆವು.
ಕೊಲಬೇಡವೆಂದೆ, ಅನ್ಯಕೆ ಮನಸೋತು
ಬದುಕಿದ್ದು ಸತ್ತಂತಿರುವದು ನಮ್ಮ ಕೊಲೆಯಾಗಿದೆ.
ಹುಸಿಯನಾಡದಿರೆಂದೆ,
ಹುಸಿಯೆ ಬದುಕ ಸಾರ ಸರ್ವಸ್ವವಾಗಿಸಿದ್ದೇವೆ.
ಮುನಿಯಬೇಡಿರೆಂದೆ,
ಅದೇಕೋ ಅಪಥ್ಯವಾಗಿಹೋಯ್ತು
ಮುನಿಸು ನವರಸಗಳಿಗೊಂದಧಿಕವಾಗಿ ಆಧುನಿಕ
ರಸವತ್ತತೆಯಲ್ಲಿ ಮೇಳೈಸಿದ್ದೇವೆ.
ಅನ್ಯರ ಕೂಡ ಅಸಹ್ಯವಂತೂ ಅನೂಚಾನವಾಗಿ
ನೀನಿದ್ದ ಕಾಲದಿಂದಲೂ ಬಿಡದೆ ಬಂದಿದೆ.
ತನ್ನ ಬಣ್ಣಿಸುವುದು, ಇದಿರ ಹಳಿಯುವುದು
ಈ ದಿನಮಾನದ ದೈನಿಕ ವ್ಯವಹಾರ ಚತುರತೆಗಳಲ್ಲೊಂದಾಗಿದೆ.
ಇನ್ನುಳಿದಂತೆ ಚರಿತ್ರೆ ಶುದ್ಧಿಗಾಗಿ
ಅಂತರಂಗ ಬಹಿರಂಗಗಳೇ ಇಲ್ಲವೆಂದು ಪ್ರವರ್ತಿಸುವ ಕೆಲವು ಪ್ರವರ್ತಕರು
ಗುಟ್ಟಾಗಿ ಅಂತರಂಗಗಳ ಮೇಲಾಟದ ಗುಲಾಮರಾಗಿದ್ದಾರೆ.

ನೀನಿತ್ತ ಧರ್ಮರಾಜ್ಯವಿಂದು
ತಪ್ಪಿನ ಗ್ರಹಿಕೆಗಳೊಳಗೆ ನಲುಗಿದೆ.
ಜ್ಞಾನಿಗಳ ಚಾವಡಿಯೆಂದೆಂಬ ಹರಟುಗಾರರ
ಕೂಟಗಳು ನಿನ್ನ ಬರಸೆಳೆದು ಸಿದ್ಧಾಂತವೊಂದಕೆ
ಬಿಗಿಯುವ ಸನ್ನಾಹದಲ್ಲಿದ್ದರೆ,
ಅಂದು ನಿನ್ನ ನಿಲುವೇನು
ನಿನ್ನ ಬಿಗುವೇನು? ಎಲ್ಲವನು
ಇಂದಿಲ್ಲಿ ಕೆದಕಲು ಹೊರಟಿದ್ದಾರೆ.

ಹಾಗೆಂದೇನು ನಿನ್ನ ಮರೆತಿಲ್ಲ.
ಜಾತಿ ಗೊಡವೆಯನೆರೆಯುವ ಮನಸ್ಸಿದ್ದವರು
ನಿನ್ನ ಭಾವಿಸಿಕೊಂಬಿದ್ದಾರೆ.
ಆಡಳಿತೆಯ ಮೇಲಾಟಕ್ಕೆ ನೀನಾಹಾರವಾಗಿದ್ದೀಯೆ,
ಧರ್ಮ ಕ್ರಾಂತಿಯನೆಬ್ಬಿಸ
ಹೊರಟವರಿಗೆ ನೀನಾಯುಧವಾಗಿದ್ದೀಯೆ.
ಮಡಿ ಮೈಲಿಗೆಗಳಿಗೆ ನೀ ನಾಂದಿಗಾರನಾಗಿದ್ದೀಯೆ
ನಿನ್ನ ನಿಲುವೇನೇನಲ್ಲವೋ ಅವೆಲ್ಲವೂ ನೀನಾಗಿದ್ದೀಯೆ.

ನಿನ್ನವರು ನಿನ್ನ ಮೆರೆಸಿದ ರೀತಿಯಿದು
ನಿನ್ನವರು ಬಾಳುತ್ತಿರುವ ನೀತಿಯಿದು
ಆ ರೀತಿ ನೀತಿಯ ಕಂಡರೆ
ಶಾಂತಿ ಮೂರ್ತಿ ನೀನು ಕ್ರುದ್ಧನಾಗುವಿಯೇನೋ
ನೀನು ಅರೆಕ್ಷಣ ಅರೆಗಾವಿಲನಾಗುವಿಯೇನೋ
ಜನರೊಳಗೆ ಬೆರೆತು ಅಲ್ಲೇ ಅವರ ಅಜ್ಞಾನ
ಅರುಹಿದವನು ನೀನು, ಅವರಿಗಾಗಿ ಗಡಿಪಾರು,
ನಿಂದೆ, ಧರ್ಮ ದ್ರೋಹಿ ಎಂಬೆಲ್ಲ ಪಟ್ಟಗಳನ್ನು
ಹೊತ್ತುಕೊಂಡವನು ನೀನು.
ಅಣ್ಣ, ನಿನ್ನನ್ನು ದೇವರಾಗಿಸಿದ್ದಾರೆ ಇಲ್ಲಿ
ಆದರೂ ಅವರ ಮನದೊಳಗೆ ನಿನ್ನನೊಂದು
ಜಾತಿಗೆಸೆದು ವಿಂಗಡಿಸಿದ್ದಾರೆ, ಅದೇನೇ ಆಗಲಿ
ನಿನ್ನ ಗೌರವಕೆ ನಾವು ಭಾಜನರಲ್ಲವೋ ಅಣ್ಣ.
ಕ್ಷಮಿಸಿ ಬಿಡು ಅಣ್ಣ ಬಸವಣ್ಣ.

ಕೊನೆಯ ಬರಹ

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...