ಗುರುವಾರ, ಆಗಸ್ಟ್ 30, 2018

ನಾನು ಮತ್ತು ವಿಶ್ವಮಾನವ ಸಂದೇಶ ಭಾಗ ೧

"ಹುಟ್ಟಿದ ಮಕ್ಕಳೆಲ್ಲ ವಿಶ್ವ ಮಾನವರಾಗಿಯೇ ಹುಟ್ಟುತ್ತಾರೆ ಆದರೆ ಬೆಳೆ ಬೆಳೆಯುತ್ತಾ ಅವರನ್ನು ಅಲ್ಪ ಮಾನವರನ್ನಾಗಿಸಲಾಗುತ್ತದೆ. ಅಲ್ಪ ಮಾನವನಾದವನನ್ನು ಮತ್ತೆ ವಿಶ್ವ ಮಾನವನನ್ನಾಗಿಸುವ ಕಾಯಕ ವಿದ್ಯೆಯದಾಗಬೇಕು" - ಕುವೆಂಪು.

ಮತ್ತೆ ಮತ್ತೆ ಓದಬೇಕೆನಿಸುವ ಸಾಲುಗಳಿವು, ಕುವೆಂಪುರ ಕೊನೆಯ ಹೊತ್ತಗೆ "ಕೊನೆಯ ತೆನೆ ಹಾಗು ವಿಶ್ವ ಮಾನವ ಸಂದೇಶ"ದಿಂದ ಹೆಕ್ಕಿ ತೆಗೆದದ್ದು. ಮೇಲು ಕೀಳುಗಳೆಂಬ, ಧರ್ಮ ಅಧರ್ಮಗಳೆಂಬ, ವರ್ಣ ಭೇಧಗಳೆಂಬ ಯಾವ ಒಡಕಿನ ನೀತಿಯೂ ಹುಟ್ಟುವ ಮಗುವಿನ ಮನಸೊಳಗೆ ದೈವದತ್ತದಂತೆ ಅವತರಿಸಲೇ ಇಲ್ಲ. ನೂರಾರು ಧರ್ಮ ಜಾತಿಗಳನ್ನು ಕಟ್ಟಿ ಆಯಾ ಸಿದ್ಧಾಂತಗಳಿಗಾಗಿ ಬಡಿದಾಡಿಕೊಂಡು  ಸಾಯುವದಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನಾ ಕೂಟಗಳನ್ನು ಹೆಣೆದು ಅಮಾಯಕರ ಬಲಿಗೆ ಕಾರಣವಾಗುತ್ತಿರುವುದು ಇಂದಿನ ಅತಿ ಖೇದ ವಿಚಾರಗಳಲ್ಲೊಂದು ಎಂದರೆ ತಪ್ಪಾಗುವುದಿಲ್ಲವೇನೋ. ಹುಟ್ಟಿದ ಮಗುವಿಗೆ ಜಾತಿ ಭೇದಗಳೆನ್ನುವ ನೀರೆರೆದಿದ್ದು ನಾವೇ, ಧರ್ಮ ಅಧರ್ಮ, ಪಾಪ ಪುಣ್ಯ ಹೀಗೆ ನಮ್ಮ ಕೆಣ್ಣೆದುರಿಗಿನ ಕೆಲವೊಮ್ಮೊಮ್ಮೆ ನಾವೇ ಸರಿಯಾಗಿ ಪಾಲಿಸದಂತಹ ನಿಯಮಾವಳಿಗಳನ್ನು ಮುಗುವಿಗೆ ಉಣಿಸಿ ದೇಶದೊಳಗಿನ ಭೇದಕ್ಕೆ ಇನ್ನಷ್ಟು ನೀರೆರೆದು ನಾವೇ ಬೆಳೆಸುತ್ತಿರುವುದು ಸುಳ್ಳಲ್ಲ.

ಸಮುದಾಯ, ಪಂಥ, ಮತ ಧರ್ಮಗಳ ನಡುವಿನ ಬಿಗುವು ಎಲ್ಲರಿಗೂ ಗೊತ್ತಿರುವಂತದ್ದೇ. ಅಂತಹ ಬಿಗುವಿನ ಪರಿಸರ ತೆಗೆದು ಸಾಮರಸ್ಯದ ಕಹಳೆ ಮೊಳಗಲೆಂದೇ ನಮ್ಮೀ ದೇಶ ತನ್ನ ಮಕ್ಕಳಿಗೆ ಶಿಕ್ಷಣ ಕೊಡುತ್ತಿದೆಯೇ ಹೊರತು ಡಾಕ್ಟರು ಇಂಜಿನೀಯರುಗಳಾಗಿ ದೊಡ್ಡ ಪಗಾರದ ನೌಕರಿ ಹಿಡಿದು ಜಾತಿ ಧರ್ಮಗಳ ಜಾಡು ಹಿಡಿದು ಅಳೆದು ತೂಗಿ ಮಾಡಿರೆಂದಲ್ಲ. ಇತ್ತೀಚಿಗೆ ಫೇಸ್ಬುಕ್, ಟ್ವಿಟ್ಟರ್,ಕೋರಾ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬುದ್ಧಿವಂತರ ಸೋಗಿನಲ್ಲಿ ಒಡೆಯುವ ನೀತಿ ಇಂತಹ ಸಾಮಾಜಿಕ ತಾಣಗಳ ಮುಖಾಂತರ ನಿಧಾನವಾಗಿ ನಮ್ಮ ಯುವ ಜನತೆಯ ಮನಸ್ಸಿಗಿಳಿಯುತ್ತಿದೆ. ದೇಶದಲ್ಲಿ ಯಾವುದೋ ಕಾರಣಕ್ಕಾದ ಕೊಲೆಯನ್ನು ಧರ್ಮವೋ ಅಥವಾ ರಾಜಕೀಯ ಪಕ್ಷವೊಂದಕ್ಕೋ ಕಟ್ಟಿ ತಾಳೆ ಹಾಕಿ ಆದಷ್ಟೂ ಸಮುದಾಯವನ್ನು ಆರೋಪಿ ಸ್ಥಾನದಲ್ಲಿಟ್ಟು ನೋಡಿಬಿಡುವುದು ಸರ್ವೇ ಸಾಮಾನ್ಯವಾಗುತ್ತಿದೆ. ಅದೂ ಸಾಲದೇ ಇದೆಲ್ಲವನ್ನು ಮಾಡುತ್ತಿರುವರು ಅವಿದ್ಯಾವಂತರಲ್ಲ, ಅಶಿಕ್ಷಿತರಲ್ಲ, ಬದಲಾಗಿ ಒಳ್ಳೆ ಶಿಕ್ಷಣ ಪಡೆದ ಸೊ ಕಾಲ್ಡ್ ಶಿಕ್ಷಿತರು, ಬುದ್ಧಿಜೀವಿಗಳು.

ನಮ್ಮ ದೇಶ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಡೆಗೆ ಕಾಲಿಟ್ಟಾಗ ನಮ್ಮ ನಿಮ್ಮ ಹಿರೀಕರು ಯೋಚಿಸಿ ಕಾರ್ಯರೂಪಕ್ಕೆ ತಂದಿದ್ದು ದೇಶದ ಶಿಕ್ಷಣ ವ್ಯವಸ್ಥೆ ಬಲ ಪಡಿಸುವುದು ಹಾಗು ಹೆಚ್ಚು ಹೆಚ್ಚು ಜನರನ್ನು ಸುಶಿಕ್ಷಿತರನ್ನಾಗಿ ಮಾಡುವುದು. ಎಂದೋ ಪ್ರತಿಫಲ ಕೊಡುವ ಆ ಯೋಜನೆ ಅಂದಿನ ಕಾಲಮಾನಕ್ಕೆ ಭರಿಸಲಾಗದ ಬಾಬತ್ತಿನ ಯೋಜನೆಯಾದರೂ ಅಲ್ಲಿ ಎದುರಾಗುವ ಕಷ್ಟಗಳನ್ನು ನುಂಗಿಕೊಂಡು, ಏಗಿಕೊಂಡು ಶಿಕ್ಷಣ ಯೋಜನೆಗಳನ್ನು ಜಾರಿಮಾಡಿದ್ದರು. ನಮ್ಮ ಜನ ಶಿಕ್ಷಣ ಪಡೆದಷ್ಟು ದೇಶ ಸುಭೀಕ್ಷತೆಯೆಡೆಗೆ ನಡೆಯುತ್ತದೆ, ಜನ ಬುದ್ಧಿವಂತರಾದಷ್ಟು ದೇಶ ಸಬಲವಾಗಿ ಭವಿಷ್ಯದಲ್ಲಿ ನಡೆಯಬಹುದಾದ ಬ್ರಿಟಿಷ್ ರಾಜ ನೀತಿಯಂತಹ ವಸಾಹತು ವಾದವನ್ನು ತಮ್ಮ ಬುದ್ಧಿಮತ್ತೆಯಿಂದಲೇ ಇಲ್ಲಿನ ಜನರು ನಿರಾಕರಿಸಿಬಿಡುತ್ತಾರೆ ಎನ್ನುವ ಕನಸನ್ನು ಅವರು ಆಗ ಕಟ್ಟಿರಲಿಕ್ಕೆ ಸಾಕು.ಆದರೆ ಶಿಕ್ಷಿತರಾದ ಜನಾಂಗ ಮಾಡಿದ್ದು, ಮಾಡುತ್ತಿರುವುದು ಎಲ್ಲವೂ ಬೇರೆಯೇ. ಶಿಕ್ಷಿತರಾದ ತಕ್ಷಣ ತಂಡೋಪ ತಂಡವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು ಒಂದಾದರೆ, ಈ ವಲಸೆಯಿಂದ ಕೃಷಿ ಕಾರ್ಮಿಕರ ಅಭಾವ ಮಿತಿ ಮೀರಿದ್ದು ಭಾರತದ ಕೃಷಿಗೆ ಎಳೆದ ಬರೆಯಲ್ಲದೆ ಮತ್ತಿನ್ನೇನೂ ಅಲ್ಲ. ಇನ್ನೂ ಮೀರಿ ವೃತ್ತಿಪರ ಶಿಕ್ಷಣಗಳನ್ನು ಪಡೆಯುವ ಈಗಿನ ಮಂದಿ ವಿದೇಶಕ್ಕೆ ಹಾರಿ ಯಥೇಚ್ಛವಾಗಿ ಸಂಪಾದಿಸಲು ಮಾಡಿಕೊಳ್ಳುತ್ತಿರುವ ಯೋಜನೆಗಳು ಪಶ್ಚಿಮ ದೇಶದ ರಾಯಭಾರಿ ಕಚೇರಿಗಳ ಮುಂದಿನ ಭಾರತೀಯರು ವೀಸಾ ಪಡೆಯಲು ಸಾಲುಗಟ್ಟಿರುವುದನ್ನು ಕಂಡಾಗಲೇ ಅರ್ಥವಾಗುತ್ತದೆ. ಒಟ್ಟಿನಲ್ಲಿ ಈ ದೇಶದಲ್ಲಿ ಯಾವುದಕ್ಕೋ ಹೆಣೆದ ಯೋಜನೆಯೊಂದು ಇನ್ಹೇಗೋ ತಿರುಗಿ ಅದಲು ಬದಲಾಗಿ ಬೆರೆತುಹೋಗಿದ್ದು ಇದೀಗ ಮೆಲ್ಲಗೆ ಇತಿಹಾಸವಾಗುತ್ತಿದೆ.

ಜನ ಹೆಚ್ಚೆಚ್ಚು ದುಡ್ಡು ಸಂಪಾದಿಸಲು ಶುರುವಿಟ್ಟುಕೊಳ್ಳುತ್ತಿದ್ದಂತೆಯೇ ದೇಶೀಯ ಮಟ್ಟದಲ್ಲಿ ಅರ್ಥವ್ಯವಸ್ಥೆಯ ಮಾಪನಗಳಾದ ಜಿಡಿಪಿ, ಎನ್ಡಿಪಿ, ಎನ್ ಎನ್ ಪಿ ಗಳೆಲ್ಲ ಸುಧಾರಿತ ಮಟ್ಟಕ್ಕೆ ಬಂದು ತಗುಲಿ ಪ್ರಪಂಚದೆದುರು ಭಾರತವೂ ಬೆಳೆದು ನಿಂತ ರಾಷ್ಟ್ರ ಎಂದು ಸಾಬೀತು ಪಡಿಸುತ್ತಿವೆ, ಆದರೆ ದೇಶದೊಳಗಿನ ಮಾನವೀಯ ಮೌಲ್ಯಗಳು ಅಷ್ಟೇ ವೇಗವಾಗಿ ಕುಸಿದು ಈ ಮಣ್ಣಿನ ಜನ ಮನಸ್ಥಿತಿಗಳನ್ನು ಅಲುಗಾಡಿಸುತ್ತಿರುವುದು ಸುಳ್ಳಲ್ಲ.ಹಾಗಾದರೆ ಆಗಿದ್ದೇನು?. ವಿದ್ಯೆ ಕಲಿತವರೆಲ್ಲ ವಿಶ್ವ ಮಾನವೀಯತೆಗೆ ಆಕರ್ಷಿತರಾಗಲಿಲ್ಲವೇ? ಜನಾಂಗವೊಂದು ಶಿಕ್ಷಿತವಾದರೆ ಆ ರಾಷ್ಟ್ರ ಸುಭೀಕ್ಷಗೊಳ್ಳುತ್ತದೆ ಎಂಬ ನಮ್ಮ ಹೀರೀಕರ ನಿಲುವು ತಪ್ಪಾಯಿತೇ? ಜಾತಿ, ಧರ್ಮಗಳನ್ನು ವೋಟಿಗೋಸ್ಕರ ವಿಕೇಂದ್ರೀಕರಿಸಿ ಗುಂಪು ಗುಂಪುಗಳ ನಡುವೆ ಕಿಚ್ಚು ಹಚ್ಚುವರ ಸಂಖ್ಯೆ ಮೇರೆ ಮೀರಿತೆ? ಇಂದಿನ ಕಾಲಮಾನದ ಹಣ ಬಲ ಜನಗಳನ್ನು ಹೀಗಾಗಲು ಪುಸಲಾಯಿಸಿತೆ? ....... ಪಟ್ಟಿ ಮುಂದುವರಿಯುತ್ತಲೇ ಇರುತ್ತದೆ, ಆದರೆ ಅದಕ್ಕೆ ಉತ್ತರವೀಯಬಲ್ಲವನು ಮಾತ್ರ ಕಾಲನೊಬ್ಬನೇ.

ಸಮುದಾಯಗಳ ನಡುವಿನ ಬಿಗುವು ಹೆಚ್ಚುತ್ತಿರುವ ಈ ಸಮಯದಲ್ಲಿ ಕುವೆಂಪುರ ವಿಶ್ವ ಮಾನವ ಸಂದೇಶ ವಿಶ್ವಕ್ಕೆ ಅತಿ ಪ್ರಸ್ತುತವೆನಿಸುತ್ತದೆ.

ಭಾನುವಾರ, ಆಗಸ್ಟ್ 26, 2018

ಸಾವರಿಸಿ ಸುಧಾರಿಸಿದ್ದತಿಯಾಯ್ತು

ಸಾವರಿಸಿ ಸುಧಾರಿಸಿದ್ದತಿಯಾಯ್ತು,
ಕ್ರಿಯೆಯನೊಮ್ಮೆ ಮಾತಾಡಿಸು.
ತಡವರಿಸಿ ಸಾಧಿಸಿದ್ದತಿಯಾಯ್ತು
ಕನಸುಗಳನೊಮ್ಮೆ ಬಡಿದೇಳಿಸು.

ಬರೆದೋದಿದ್ದು ಬಹುವಾಯ್ತು
ಅರಿಯುವ ಕಾಲವಿದು, ಚಿತ್ತೈಸು.
ಇತಿಹಾಸಗಳ ಬೆದಕಿದ್ದಾಯ್ತು
ಭೂತ, ಭವಿಷ್ಯಗಳನೂ ಬದುಕಿಸು.

ಭಾನುವಾರ, ಜುಲೈ 8, 2018

ನಾನವನಲ್ಲ

ಹೊಸಕಾಲದ ಅಲೆಯದು
ಭುಗಿಲೆದ್ದು
ಜಗತ್ತನ್ನು ಜಾಗತೀಕರಿಸುವ
ಹೊಸ್ತಿಲಿಗೆ ಸರಿಗಟ್ಟಿದೆ,
ಅಲೆಯೊಳಗೆ ಸಿಕ್ಕು ಕೊಚ್ಚಿ
ಹಾಯುವ ಭರದಲ್ಲಿ
ನಮ್ಮ ಹಳೆ ಬುಡಗಳನ್ನು
ನಮಗರಿವಿಲ್ಲದೆ ಕಳಚಿ
ದೂರ ಸರಿದಿದ್ದೇವೆ
ಅದರೊಳಗೊಬ್ಬ ನಾನು
ಸುತ್ತಲ ಪರಿಸರದಲ್ಲಿ
ಅದೇನೇನೋ ನಡೆಯುತ್ತಿದೆ
ಅವಾವು ನಾನಾಗಿಲ್ಲ

ಅವರಿವರ ವಾಟ್ಸಾಪಿನ
ಸ್ಟೇಟಸುಗಳಲ್ಲಿ
ಬರ್ತ್ ಡೇ ಗೆ ಭಾಜನನಾಗಲಿಲ್ಲ
ನಡುರಾತ್ರಿ ಮೀರಿ
ಬೆಳ್ಳಿ ಚುಕ್ಕಿಗೆ ಬೆಳಗಾದರೂ
ಮಂದ ಮಂದ ಬೆಳಕೊಳಗೆ
ಮೈ ಮರೆಯಲಿಲ್ಲ
ಮತ್ತಿಗಂತೂ ಏರಲೇ ಇಲ್ಲ
ಟ್ರೆಕ್ಕಿನ ನೆಪವೊಡ್ಡಿ ಇಳಿಜಾರಿನ
ಗುಡ್ಡಬೆಟ್ಟಗಳನೊಮ್ಮೆಯೂ ತಡಕಲಿಲ್ಲ
ವೀಕೆಂಡು ಕರೆತರುವ
ಯಾವ ಅಮಲಿನ ವಿದ್ಯಮಾನಕ್ಕೂ
ಸಾಕ್ಷಿಯಾಗಲಿಲ್ಲ
ಜೀವನದ ಹಳೆ ರಗಳೆಗಳನ್ನು
ಡೈರಿಯೊಳಗೆ ತುರುಕಿಡಲಿಲ್ಲ
ಹೊಸ ವರಸೆಗಳನ್ನು
ಸೆಲ್ಫಿಗಷ್ಟೇ ಸೀಮಿತಗೊಳಿಸಲಿಲ್ಲ

ಇದಿರ ಹಳಿಯುವ ಮನಸ್ಸಿಲ್ಲ
ತನ್ನ ಬಣ್ಣಿಸುವ ನಾನತ್ವ
ಇಲ್ಲವೇ ಇಲ್ಲ
ಈ ಯುಗಮಾನದವನು
ನಾನಲ್ಲ
ಅಮೋಘ ಮಾನವೀಯತೆಯ
ದೀವಿಗೆಯದು
ಹೃದಯದಲಿ ಪ್ರಜ್ವಲಿಸುತಿದೆ
ಅದಕೆ ಈ ಯುಗ ನನಗಲ್ಲವೂ ಅಲ್ಲ
ನಿಮ್ಮೀ ಹೊರಗಣ್ಣಿಗೆ ನಾನೇನೋ
ನಾನವನಲ್ಲ.

ಗುರುವಾರ, ಜೂನ್ 14, 2018

ಅಮಿತ ಸವಾಲು - 'ಕಾ'ರಂಭ ಪದ್ಯ

ಕನಸದು ಕತ್ತಲಲಿ ಕಾಡುವುದು,
ಕಡೆದೆದ್ದು ಕಂಡರೆ ಕೇವಲ
ಕನವರಿಕೆಯಂತಿಹುದದು,
ಕಣ್ಗೆ ಕಂಡಿದ್ದೆಲ್ಲವ
ಕೊನೆಮೊದಲರಿಯದೇ
ಕೈಗೊಳ್ಳುವ ಕಸರತ್ತು,
ಕೇವಲನಾಗಿ, ಕನಸುಗಾರನಾದ
ಕಷ್ಟ ಕಾರ್ಪಣ್ಯಗಳ ಕಂಡ
ಕರ್ಮಜೀವಿಗಿದು ಕೊಡುಗೆಯೇನು?
ಕೊಡುಗೆಯೋ? ಕರ್ತಾರನ ಕುಯುಕ್ತಿಯೋ?
ಕಂಡವರ್ಯಾರು?.
ಕಾಣದಿದ್ದರೂ ಕುಶಲ ಕರ್ಮಿ ಕರ್ತಾರನವನು.
ಕಂಡಿರೇನು?!!
                  - - * - -
ಕುಚೇಲನಿಗೆ ಕಷ್ಟವಿತ್ತು,,
ಕೃಷ್ಣನಿಗದು ಕಣ್ಸನ್ನೆಯಲ್ಲಿ
ಕಂಡಿತ್ತು,
ಕಷ್ಟದೊಳರಗಿದ ಕಡುಗಷ್ಟವನ್ನರಿತಿದ್ದ
ಕೃಷ್ಣ ಕೇಳದೆಯೇ
ಕೈವಲ್ಯ ಕರುಣಿಸಿದ್ದ. 
ಕಷ್ಟದವರ ಕುಟೀರದೊಳಗುದಿಸಿದ
ಕುವರ ಕುಚೇಲನೆಂಬುವನು
ಕೃಷ್ಣನ ಕುಟೀರದೊಳಗಧಿಪತಿಯಾಗಿದ್ದ
ಕುಚೇಷ್ಟೆಕುಖ್ಯಾತಿಗಳೊಳಗೆ
ಕುಣಿದುಕುಣಿಸಿದವರೆಲ್ಲ 
ಕಾಣದಂತೆ ಕರಗಿ
ಕಣ್ಣರಿವಿನಿಂದ ಕಣ್ಮರೆಯಾದಾಗ್ಯೂ
ಕೃಷ್ಣ ಕೇಳುಗನಾಗಿದ್ದ
ಕುಚೇಲ ಕುದುರಿದ್ದ,
ಕಮರದಂತೆ ಕಡೆದುನಿಂದಿದ್ದ.

ವಿ. ಸೂ: 'ಕ' ಕಾರದಿಂದಲೇ ಪದಗಳು ಪ್ರಾರಂಭವಾಗುವಂತೆ ಪದ್ಯ ಬರೆಯಲು ಸೂಚಿಸಿದ್ದು ಕನ್ನಡ ಸಾಹಿತ್ಯಾಸಕ್ತರಲ್ಲಿ ಓರ್ವರಾದ ಅಮಿತ್ ಜೋಷಿಯವರು. ಆದ್ದರಿಂದಲೇ ತಲೆಬರಹ 'ಅಮಿತ ಸವಾಲು' ಆಗಿದೆ. 

'ಅ'ಕಾರ ಹಾಗೂ ಅಹಂಕಾರ

ಅರಿವಿನದೊಂದು ಅಂತರಾತ್ಮ ಅಹಮಿಕೆಯನು
ಅರುಹಿತ್ತು,
ಅದನೇನೂ ಅವಗಾಹಿಸದೆ ಅಲಕ್ಷಿಸಿ ಅತ್ತಲಾಗಿಸಿ
ಅಪ್ರಚೋದಿತ ಅವಿವೇಕವನ್ನೇ ಅಂತರಾಳದ
ಅರಸಾಗಿಸಿಬಿಟ್ಟಿದ್ದೆ.

ಅಂತೂ ಅದೆಂದೋ ಅರಿವಾಯಿತು,
ಅಜ್ಞಾನ ಅಳಿದು ಅರಾಜಕತೆ, ಅಲ್ಪತನ,
ಅವಿಧೇಯತೆಗಳರ್ಥ ಅರಿತು
ಅಲ್ಪಗಳಿಂದ ಅನತಿಯಾಗಿ
ಅಭ್ಯಾಗತನಾಗುವ ಅವಕಾಶಕ್ಕೆ
ಅಭಾರಿಯಾಗಲಿದ್ದೇನೆ. ಅವಗಾಹಿಸಿರಿಲ್ಲಿ!!!

ಮಂಗಳವಾರ, ಜೂನ್ 5, 2018

ಅಲ್ಪದ ಅಮಲು

ಪುಟ್ಟಿದುದಲ್ಲಿ ವಿಶ್ವಮಾನವತೆಯ ಸೊಡರಲ್ಲಿ
ಜೋಲಾಡಿದ್ದು ಜಾತಿಯೆಂದೆಂಬ ಜೋಲಿಯಲಿ
ಪಾಲ್ಕುಡಿದಿದ್ದು ಪಾಮರರ ನೋಡಲ್ಲಿ ಎನುತಲಿ
ಓಲಾಡಿದ್ದು ಒಪ್ಪ ಓರಣಗಳೆನಿಸೊ ಮಡಿಮೈಲಿಗೆಗಳಲಿ
ಬಚ್ಚ ಬಾಯದನು ಅಚ್ಚುಮಾಡಿ ರಚ್ಚೆ ಹಿಡಿಯುತಲಿ
ಎನ್ನೆಡಬಲ ತಿರುಗಿ ನನ್ನಾಡಿಸುವರ ನಿರೀಕ್ಷಿಸುತಲಿ
ಮೋಟು ಗೋಡೆಯೊಂದನಿಡಿದು ಸೆಟೆಸೆಟೆದು
ಹೆಜ್ಜೆಯನಿಟ್ಟು ಅದು ಜಾರಿಸೆ ನಾನುರುಳಿ
ನಾನರಿವವರೆಗೂ ಜಗವೆಲ್ಲ ನನ್ನಂತೆಯೆಂದು ಬಗೆಯುತಲಿ

ಪುಟ್ಟಿದ್ದೇನಾದೊಡೇನ್ ಬೆಳೆಬೆಳೆಯುತಾ ಅಲ್ಪಿಯಾಗುತಲಿ
ಮೇಲ್ಮೇಲೆ ಪ್ರಚಲಿತ-ವಿಚಲಿತನಾಗುತಲಿ
ಅಲ್ಪದ ಅಮಲುಗಳೆಲ್ಲವ ಗುಂಡಿಗೆಗೆ ಪೇರಿಸುತಲಿ
ಕಲ್ಗುಂಡಿನಂತಿರ್ದ ಮನಃಬ್ರಹ್ಮನನು ಅಲ್ಪಿಯಾಗಿಸುತಲಿ
ಅದಾಗಿ ನಾನು ಅಲ್ಪತನದ ಅಲೆಗಿಳಿದು
ಅಲ್ಪಾವಧಿಯನೇ ಪರಮಾವಧಿಯಾಗಿಸಿ
ಅಲ್ಪದವೆಲ್ಲ ಮಹತ್ತಾಗಿ ತೋರಿ
ಮಹತ್ತಿನ ಮರ್ಯಾದೆ ಮೂರ್ಕಾಸಿಗಿಲ್ಲವಾದೊಡೂ
ಅಲ್ಪಿಯೊಳಗಭಿಮಾನ ತಳೆಯಲು ಸನ್ನಾಹವದು
ತರವೇ??

ರಮ್ಯ ವಿಕಾಸ

ಕನ್ನಡ ಪಡುವಣದ ಕಡಲ್ತೀರ

ತೆಂಕಿನ ತುಳುವರ ತಿಟ್ಟು

ಬಡಗದ ಬೇಗೆಯ ಬುಗ್ಗೆ 

ಮೂಡಣಕ್ಕಿಳೆಯಿಕ್ಕಿರುವ ಕಾಲ್ಝರಿ

ಕಣ್ಹಾಯುವ ಸೀಮಾಂತರದ

ಧರಿತ್ರಿಯ ಸೊಬಗು

ಕಾಲ್ನಿಲುಕದ ದೇಹವಣಿಯುವ

ಬಿಂಕದೊಳಾದಂತೆ ತೋರ್ಪ

ತಿಟ್ಟು ಕಣಿವೆ ಕಮರುಗಳು

ಕಿಕ್ಕಿರುದುಕ್ಕಿರುವ ಹರಿದ್ವರ್ಣದ

ನಟ್ಟನಡುವೊಳೊಂದೂರು

ಪುತ್ತೂರು!!!!  

 

ಗತದ ಚಕಿತಗಳೊಳಗೊಮ್ಮೆ

ಬರಡಿದ ಕೆರೆಯಾಳದಲಿ

ಮನುಜರು ತೇಗಿದ ದನಿಯಾನಿಸಿ

ನೀರೊಸರಿತಂತೆ !!

ಏನಿರಬಹುದಲ್ಲಿ??

ಯಃಕಶ್ಚಿತ್ ನಮ್ಮ ಹೃದಯದ

ಮಿಡಿತವರಿಯಿತೇ ಪ್ರಕೃತಿ?

ಹಾಗಿದ್ದೊಡೆ ಇದೇ

ಮಹಾಧರ್ಮಭೂಮಿ

ಮಾನವೀಯತೆ-ಪ್ರಕೃತಿ ಬೆಸೆದು

ಮಿಡಿದ ಮನುಕುಲದ

ಮಹಾ ಯಾಗ ಭೂಮಿ.


ಇತಿ ಮುತ್ತನೆತ್ತಿದ

ಸಹೃದಯದೂರೊಳೊಂದವತಾರವಾಯ್ತು

ರಮ್ಯಮನೋಹಕ ವಾಯಿತ್ತು

ತಾಳ್ಮೆಜಾಣ್ಮೆಹಿರಿಮೆ

ಬೆರೆಸಿ ತ್ರಯವಾಯ್ತು.

 ತ್ರಯ ಆಧುನಿಕತೆಗೆ

ಒಗ್ಗಿತ್ತುಇಲ್ಲೂ

ಅದೇ ಮನಮೋಹಕತೆ

ಅದೇ ವಿಕಾಸದ ಹಾದಿ

ರಮ್ಯವಲ್ಲವೇ  ವಿಕಾಸ !

 

ಬಳಿಸಾರಿದವರೊಡಗಿನವರಿಗೆ

ಇಲ್ಲವೆಂದಿಲ್ಲ,

ಸರಿಯದವರ ಸುದ್ದಿ

ಸಹವಾಸಗಳ ಗೊಡವೆಯಿಲ್ಲ,

ತಾನಾಯಿತ್ತುತನ್ನ ಕೃತಿಯಾಯಿತ್ತು.

ಮಹಾಧರ್ಮ ಭುವಿಯ

ಮಣ್ಣಿನ ಗುಣವದು.

ಮಳೆ ಬಂದು ತಾನ್

ಮಣ್ಣ ಸುಗಂಧ  ಪಸರುವುದು,

ಮಳೆಯ ಮೀರಿದ

ಗಂಧವೊಂದ ತಂದೆಸರಿದ

ಪೆಣ್ಗೇನೆಂದು ಹೆಸರಿಡಬಹುದು

ಹೆಸರೇನಾದರೇನು

ವಿಕಾಸವದು ರಮ್ಯವೇ

ಅಲ್ಲಲ್ಲ!!!

ರಮ್ಯ ವಿಕಾಸ



ಸೋಮವಾರ, ಮೇ 28, 2018

ಸುನೀಲನಾಗು ನೀ

ಕಂಡವರಿಗೆ ಎದುರಾಗಿ

ಎದುರವರ ಮನಕೆ ಮುಳುವಾಗಿ

ಮಾತೊಳಗೆ ಯುದ್ಧ ಸನ್ನಿಧಿಗೊಯ್ವ

ಎದುರಾಳಿಗಳೆದೆಯಲಿ

ಹರಿಗತ್ತಿಯಾಗಿ ತೊಯ್ದು

ಮಾತು ಖಡ್ಗವಾಗಿ

ನೋಟ ಕಟುವಾಗಿ

ದೇಹ ಬೃಹದ್ಭಾರವಾಗಿ

ಲೋಕದ ಪರಮಾರ್ಥ

ನಿನಗೇಕೆ ಸುಮ್ಮನಿರು

ಸುನೀಲನಾಗಿ

 

ಮಾತು ಮನದಿಂದತ್ತತ್ತ

ಸುಳಿದು ಸುರಗಂಗೆಯಾಗಲೂ

ಸರಿ

ಬರದೊಳಗ ಝರಿಯಾಗಲೂ

ಸರಿ

ಮುಟ್ಟಿ ಕುಡಿಯಲೊಪ್ಪದ

ಕಡಲುಪ್ಪಾಗಲೂ ಸರಿ

ಮನ ಬಗೆದಂತದು

ತಾನು ತಿಳಿದಂತದು

ನೀನ್ ಹುಟ್ಟಿ ಬೆಳೆದ ಕೇರಿ

ದಾರಿಗಳ ಗುಣವನುಸುರುವುದೀ ಮಾತು

ಬಿಡು ಪರಮಾರ್ಥ ಚಿಂತೆ

ಸುನೀಲನಾಗು ನೀ

ಸೋಮವಾರ, ಮೇ 21, 2018

ಯುಗಾಚಾರ್ಯ

ಚಿಕ್ಕಂದಿನಿಂದ ಕಂಡಿದ್ದನವನು

ಸಾತ್ಯಕಿಯನ್ನು ಆದರೇನು

ಸಾತ್ಯಕಿಗೆ ಭೇದಿಸಲಾಗಲಿಲ್ಲ

ಕೃಷ್ಣನ ಮನದಿಂಗಿತ ಅರಿವಾಗಲಿಲ್ಲ

 

ರಣನೀತಿ, ರಾಜ ನೀತಿಯಲಿ

ನೀತ್ಯಾಚಾರ್ಯನವನು

ಸಂಧಾನ, ವಿಶ್ವಾಸಗಳಲಿ

ಯುಗಾಚಾರ್ಯನವನು

 

ಕೈಲಾಗದ ಪಾಂಚಾಲಿಗೆ 

ಕೃಪಾಚಾರ್ಯನವನು

ಕೈಲಾದ ಪಾಂಡವರಿಗೆ

ಧರ್ಮಾಚಾರ್ಯನವನು

 

ಕರೆಯದ ಹೊರತು ಬರದೆ

ನಿಂತನವನು

ವ್ಯಾಕುಲಿಸಿ ಕರೆದೊಡನೆ

ಬಿಡನವನು

 

ಪಗಡೆಯ ದಾಳ ಉರುಳುವ

ಮೊದಲು ಭಿನ್ನಹವಲ್ಲದ 

ಕರೆಬರಲೆಂದು ಬಗೆದನಿವನು  

ಹೊರನಿಂದು ಕಾದನಿವನು

 

ಕರೆಯದು ಬಂತವಗೆ

ಎಂದು? ಎಲ್ಲ ಮುಗಿದೇ

ಹೋಗಿ ಪಾಂಚಾಲಿಯ ಮುಡಿ

ವಸ್ತ್ರ ವೈಭವಗಳೆಲ್ಲ ಕದಡಿ

 

ಧಾರಾಕಾರ ಕಣ್ಣೀರು ತಂದು

ಯಾರು ಏನೂ ಮಾಡದಂದು

ಎಲ್ಲ ಬಲ್ಲವರಾಗರವಾಗಿದ್ದ

ಪಾಂಡವರೈವರ ಗೆದ್ದು ಬೀಗಿದ್ದ.

ಶನಿವಾರ, ಮೇ 19, 2018

ಸೋತವರ ಸೊಡರಲ್ಲಿ

ಸೋತವರ ಸೊಡರಲ್ಲಿ
ಗೆಲುವೆದ್ದು ಬೀಗಿತು
ಮೀಸಲು, ಶೇಷದ
ಹಮ್ಮು ಬಿಮ್ಮುಗಳಿಲ್ಲದಿದ್ದರೂ
ಸೋತವರಿಗೆ ಸಂವಿಧಾನ
ನೆರಳಾಯಿತು.

ಹಿಂದುಳಿದವರ,
ಕೈಲಾಗದವರ,
ಕೆಳ ಸ್ತರದ,
ದೇಶದ ಸರ್ವರ ಹಿತವನೂ
ಕಾಯುವೆನೆಂದೆಂಬ
ದೇಶದ ಮಹಾಗ್ರಂಥ
ಸೋಲ ಸಿಂಹಾಸನಕ್ಕೇರಿಸಿದೆ.

ನೂರು ಸೋಲು ಒಂದೇ
ಗೆಲುವಿನ ಮಹಾ ಮಂತ್ರ
ವೆಂದರೆ ಹೊರತು,
ಸೋತು ಸೋತವರ
ಕೂಟ ಹೆಣೆದರದು
ಗೆಲುವಿನ ಸಿಂಹಾಸನವೇ .

ಸೋಲುವರ ಕೂಟವಿರಲಿ
ಗೆದ್ದವರ ಹಜಾರವಿರಲಿ
ಸೋಲು ಗೆಲುವಿನ
ತಾಳೆಯನೇ ಹಾಕದ
ಮುತ್ಸದ್ದಿಗಳಿರಲಿ
ನಾವು ನಾವು ಗೇಯ್ದರಷ್ಟೇ
ಬದುಕು... ಅದು ಸುವಿಸ್ತಾರ
ಸುವಿಶಾಲ ಸುನೀಲ .


ಸೋಮವಾರ, ಏಪ್ರಿಲ್ 30, 2018

ಸ್ವಲ್ಪ ಸ್ವಾರ್ಥಿಯಾಗಲಿರುವೆ

ನಾ ನಿಂತ ಜನ ವಂದ್ಯರಾಗಬೇಕು,

ನಾ ಕುಂತ  ನೆಲ ಸಾಧಕರಿಗೆ ಧೃವ ತಾರೆಯಾಗಬೇಕು,

ನನ್ನೊಡನಾಡಿಗಳೆಲ್ಲಾ ನನ್ನ ಸಂಭ್ರಮಿಸಬೇಕು,

ನಾ ಹುಟ್ಟಿ ಬೆಳೆದು ಓಡಾಡಿದ ಸ್ಥಳಗಳೆಲ್ಲಾ

ಇತರರ ಮನೆ ಮಾತಾಗಬೇಕು,

ನಾ ನಡೆದ ದಾರಿ ಇರುವರಿಗೆ ಗುರಿಯಾಗಬೇಕು.

 

ಸದ್ದರಿಯದೇ ನಾನು ಅಸಂಖ್ಯರ

ಮನೆ ಮಾತಾಗಬೇಕು,

ಹಿಂದೆ ಮುಂದವರಿಗೆಲ್ಲ ನಾನೇ

ಗುರುತಾಗಬೇಕು,

ಎಡವುವರ ಕೈ ಹಿಡಿದು ನಡೆಸುವಂತೆ

ನಾನಾಗಬೇಕು,

ನಡೆಯುವರಿಗೆ ಎಡವದಂತೆ ತಿಳಿಹೇಳುವ

ಶ್ರೇಷ್ಠಿ ನಾನಾಗಬೇಕು.


ಸಾಧನೆಯ ಗುಲ್ಲು ಹತ್ತಿದವರು

ನನ್ನ ಎಡತಾಕಬೇಕು,

ಅಕ್ಕರೆಗೂ ಅಕ್ಕರಕೂ ದಾಹವೆನಿಸಿದವರು

ನನ್ನ ಒಡನಾಡಬೇಕು,

ನಾನು ಕೇಂದ್ರವಾಗಿರಬೇಕು,

ಆದರೂ ನಾನು ನಾನೇ ಆಗಿರಬೇಕು.

 

ನಾನೊಮ್ಮೆ ಹಿಂದಿರುಗಿ ಬರದೂರಿಗೆ

ಪಯಣಿಸಿಬಿಟ್ಟಾಗ,

ನಾನೊಮ್ಮೆ ಅರಿವಿನ ಅಂತರಾತ್ಮವಿರದ

ಊರ ಜೀವಿಯಾಗಿಹೋದಾಗ

ನನ್ನವರೆಲ್ಲಾ ಇನ್ನಿಲ್ಲದಂತೆ ಪ್ರಲಾಪಿಸಬೇಕು,

ಅವರ ಹೃದಯಗಳು ನನ್ನ ತನ್ಮಯತೆಯಲ್ಲಿ

ತೊಯ್ದು ಹೋಗಬೇಕು,

ಅವರ ಭಾವುಕತೆಯೊಳಗೆ ಬೆರೆತು

ಕಾಲದೊಡನೆ ನಾನೂ ಕಳೆದುಹೋಗಬೇಕು.

 

ಬುಧವಾರ, ಮಾರ್ಚ್ 14, 2018

ಇಂದಿನ ವಿರಾಟರು ಹಿಂದೊಮ್ಮೆ ಸೈರಾಟರೆ!!

ಅದೃಷ್ಟವಾದವನ್ನು ಒಪ್ಪದಿರಿ, ಮೈ ಮುರಿದು ದುಡಿಯಿರಿ , ನೀವಂದು ಕೊಂಡಂತೆ ನೀವಾಗಿ ಎಂದಿದ್ದಾರೆ ನವ ಕರ್ನಾಟಕ ನಿರ್ಮಾತೃ ಸರ್ ಎಂ. ವಿಶ್ವೇಶ್ವರಯ್ಯನವರು. ಆ ದೃಷ್ಟಿಯಲ್ಲಿ  ನೋಡಿದರೆ ಈಗಿನ ಮಹನೀಯರೆಲ್ಲ ಹಿಂದೊಮ್ಮೆ ಏನೊಂದು ಅರಿಯದೆ ಯಾವುದೋ ಅರಿಯದ ಕ್ಷೇತ್ರಕ್ಕೆ ಕಾಲಿಟ್ಟು ಅಲ್ಲಿನ ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡೆ ಸಾಗಿ ಆ ಕ್ಷೇತ್ರದ ದೃವತಾರೆಗಳಾಗಿ ಮೆರೆಯುತ್ತಿರುವುದು ಸ್ಪಷ್ಟವಷ್ಟೇ. ಇದರ ನಡುವೆಯೂ ಕೆಲ ಕೆಲವರಿಗೆ ಅದೃಷ್ಟವೆನ್ನುವಂತಹ ವಿಚಾರಗಳು ಕೈಹಿಡಿಯುವುದು ಜನಗಳನ್ನು ಇನ್ನು ಅದೃಷ್ಟವಾದದೆಡೆಗೆ ಸೆಳೆಯಲು ಅನುವು ಮಾಡಿಕೊಟ್ಟಂತಿದೆ.

ಎಲ್ಲಿಗೋ ಹೋಗಲು ರೈಲಿಗಾಗಿ ಕಾಯುತ್ತ ನಂಜನಗೂಡಿನ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ಮುತ್ತುರಾಜನಿಗೆ ನಿರ್ದೇಶಕ ಎಸ್ ಎಲ್ ಎನ್ ಸಿಂಹ ಅದೃಷ್ಟ ರೂಪದಲ್ಲಿ ಬರಲಿಲ್ಲವೇ??. ಕನ್ನಡ ಪತ್ರಿಕೆಯೊಂದರಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ತಂದೆಗೆ ಮಧ್ಯಾಹ್ನದ ಊಟ ಕೊಟ್ಟು ಬರಲು ಹೋದ ಸಂಪತ್ ಕುಮಾರ್ ಗೆ ಅಲ್ಲೇ ಕುಳಿತಿದ್ದ ನಿರ್ದೇಶಕರೊಬ್ಬರು ಅದೃಷ್ಟ ರೂಪಿಯಾಗಲಿಲ್ಲವೇ??. ಯಾರಿಗೆ ಗೊತ್ತು ಯಾರ್ಯಾರ ಅದೃಷ್ಟ ಹೇಗಿರುತ್ತದೆ ಎಂದು? ಎನ್ನುವ ವಾಕ್ಯವೇನಾದರೂ ನಿಮ್ಮ ತಲೆಯಲ್ಲಿ ಹೊಳೆದಿದ್ದರೆ ನೀವು ಪ್ರತ್ಯಕ್ಷವಾಗಿಯೋ ಅಥ್ವಾ ಪರೋಕ್ಷವಾಗಿಯೋ ಅದೃಹಸ್ತವಾದವನ್ನು ಒಪ್ಪಿದ್ದೀರಿ ಎಂತಲೇ ಅರ್ಥ. ಇರಲಿ ಇವೆಲ್ಲ ಒತ್ತಟ್ಟಿಗಿರಲಿ.

ಈ ಉರಿ ಬೇಸಿಗೆಯಲ್ಲಿ ಅದೃಷ್ಟದ ಪ್ರಲಾಪವನ್ನು ಇಷ್ಟೊಂದು ಮಾಡಲು ಕಾರಣ ಮರಾಠಿಯ ಅತ್ಯದ್ಭುತ ಸಿನಿಮಾ 'ಸೈರಾಟ್'. ಹಾಗು ಅದರಲ್ಲಿನ ನಾಯಕ ನಾಯಕಿಯರಾಯಾದ ಆಕಾಶ್ ಠೋಸರ್, ರಿಂಕು ರಾಜಗುರು.

ಮರಾಠಿ ಸಿನೆಮಾ 'ಸೈರಾಟ್' ನ ಒಂದು ದೃಶ್ಯ. ರಿಂಕು ರಾಜಗುರು ಹಾಗು ಆಕಾಶ್ ಠೋಸರ್  
ಆಕಾಶ್ ಠೋಸರ್ ಹುಟ್ಟಿದ್ದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಾಳಾದಲ್ಲಿ ಫೆಬ್ರವರಿ 1993ರಲ್ಲಿ. ತಂದೆ ಕಾಮಗಾರಿ ಗುತ್ತಿಗೆದಾರ ತಾಯಿ ಗೃಹಿಣಿ. ಹುಟ್ಟಿದ್ದು ಗ್ರಾಮೀಣ ಪ್ರದೇಶವಾದರೂ ಬೆಳೆದಿದ್ದು ಪುಣೆ ನಗರದ ಔನ್ದ್ ನಲ್ಲಿ. ಔನ್ದ್ ನಗರದದ ಶಿವಾಜಿ ವಿದ್ಯಾಲಯ ಹಾಗು ಅದರ ಸಮೀಪವೇ ಇರುವ ಪುಣೆಯ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯವೇ ಆಕಾಶ್ ಕಲಿತ ವಿದ್ಯಾಕೇಂದ್ರಗಳು. ಓದುವುದರೊಂದಿಗೆ ಕುಸ್ತಿ ಕಾಳಗ ಕಲೆಯಲ್ಲೂ ಆಸಕ್ತಿ ಹೊಂದಿದ್ದನಾದ್ದರಿಂದ ಪೈಲ್ವಾನ್ ವೃತ್ತಿಯನ್ನು ಆಗೀಗ ಅಪ್ಪಿಕೊಳ್ಳುತ್ತಿದ್ದ. ಅದಕ್ಕೆ ತಕ್ಕನಾದ ಕಟ್ಟು ಮಸ್ತಾದ ದೇಹ ಹಾಗು ನಾಜೂಕಿನ ಬಗ್ಗೆ ಮತ್ತೆ ಹೆಚ್ಚೇನೂ ಹೇಳುವ ಅವಶ್ಯಕತೆಯೇ ಇಲ್ಲವೆನ್ನಿ. ಇಂತಿದ್ದ ಆಕಾಶ್ ಸಿನೆಮಾ ರಂಗದಲ್ಲಿ ಬೆಳೆಯುವ ಅಥವಾ ಅದಕ್ಕಾಗಿ ಪ್ರಯತ್ನಿಸುವ ಕನಸನ್ನು ಎಂದೂ ಕಂಡವನಲ್ಲ.

ಇಂತಿದ್ದ ಆಕಾಶ್ 2015ರ ಅದೊಂದು ದಿನ ಯಾವದೋ ಕಾರಣಕ್ಕೆ ತನ್ನೂರಾದ ಜೇವೂರ್ ನ ರೈಲು ನಿಲ್ದಾಣದಲ್ಲಿ ಪುಣೆಗೆ ಬರುವುದಕ್ಕಾಗಿ ರೈಲಿಗಾಗಿ ಕಾಯುತ್ತ ನಿಂತಿದ್ದ. ಅವನ ಅದೃಷ್ಟವೂ  ಅದೇ ರೈಲು ನಿಲ್ದಾಣದಲ್ಲಿ ಕಾಯುತ್ತ ನಿಂತಿತ್ತು ಎನ್ನುವುದು ಮತ್ತೊಂದು ಸೋಜಿಗದ ಸಂಗತಿಯೇ ಸರಿ. 'ಸೈರಾಟ್' ಸಿನೆಮಾ ನಿರ್ದೇಶಕ ನಾಗರಾಜ್ ಮಂಜುಳೆ ಯವರ ಸೋದರನೂ ಅದೇ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ. ಅಲ್ಲಿ ಕಣ್ಣಿಗೆ ಬಿದ್ದಿದ್ದು ಆಕಾಶ್, ಅವನನ್ನು ಕಂಡು ಮಾತನಾಡಿ ಸಿನೆಮಾದಲ್ಲಿ ನಟಿಸುವ ಅವಕಾಶವಿರುವುದಾಗಿಯೂ ಹಾಗು ಅದಕ್ಕಾಗಿ ಕೆಲವು ಫೋಟೋ ಹಾಗು ವಿಳಾಸವನ್ನು ತರುವಂತೆಯೂ ಬುಲಾವ್ ಕೊಟ್ಟಾಗ ಎಲ್ಲವನ್ನು ಕೊಟ್ಟು ಆಡಿಷನ್ ಮುಗಿಸಿ ಮನೆಗೆ ಬಂದಿದ್ದ ಆಕಾಶ್. ಕೆಲವು ದಿನಗಳಾದ ಮೇಲೆ ತಾನು ಸಿನೆಮಾ ಗೆ ಆಯ್ಕೆಯಾಗಿರುವುದು ತಿಳಿದಾಗ ಯಾವುದು ಸೈಡ್ ರೋಲ್ ಇರಬೇಕು , ಐದು-ಹತ್ತು ನಿಮಿಷಗಳ ಪಾತ್ರವೊಂದಿರಬಹುದೆಂದು ಬಗೆದಿದ್ದ ಆಕಾಶ್ ಗೆ ಅದೃಷ್ಟವೆನ್ನುವುದು ಬಹುದೊಡ್ಡ ಉಡುಗೊರೆಯೊಂದನ್ನು ನೀಡಿತ್ತು. ಸೈರಾಟ್ ಸಿನೆಮಾದ ಮುಖ್ಯ ನಾಯಕನ ಪಾತ್ರದಲ್ಲಿ ಆಕಾಶ್ ಕಾಣಿಸಿಕೊಳ್ಳಬೇಕೆಂಬ ನಿಲುವಿಗೆ ಅದರ ದಿಗ್ದರ್ಶಕರು ಅದಾಗಲೇ ಬಂದೇ ಬಿಟ್ಟಿದ್ದರು.  

ಕುಸ್ತಿ ಪಟುವಾಗಿದ್ದ ಆಕಾಶ್ ಗೆ ಮೊದಲ ಕೆಲಸ ತನ್ನ ತೂಕ ಇಳಿಸಿಕೊಳ್ಳುವುದೇ ಆಗಿತ್ತು. ನಿರ್ದೇಶಕರ ಆಣತಿಯ ಮೇರೆಗೆ ಆಕಾಶ್ ಬರೋಬ್ಬರಿ 13ಕೆ.ಜಿ. ತೂಕವನ್ನು ಒಂದೂ ವರೆ ತಿಂಗಳ ಅವಧಿಯಲ್ಲಿ ಇಳಿಸಿಕೊಂಡಿದ್ದ. ಹೃದಯಸ್ಪರ್ಶಿ ಸಿನೆಮಾಗಳಿಗೆಂದೇ ಹೆಸರು ವಾಸಿಯಾದ  ಮರಾಠಿ ನಿರ್ದೇಶಕ ನಾಗರಾಜ್ ಮಂಜುಳೆಯವರ ಮನೆಯೇ ಆಕಾಶ್ ನ ತಾಲೀಮಿಗೆ ವೇದಿಕೆಯಾಯಿತು.  ಇದಿಷ್ಟೇ ಅಲ್ಲದೆ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲೆ ರಿಂಕು ರಾಜಗುರು ಚಿತ್ರದ ನಾಯಕಿ.  ಮುಗ್ದ ಹುಡುಗರ ಜೀವನವರಿಯದ ಅಮರ ಪ್ರೇಮ ಕಥನ ಸಿನೆಮಾಗೆ ಹಂದರವಾದ್ದರಿಂದ ಮುಗ್ದ ಹುಡುಗರ ಆಯ್ಕೆ ಮತ್ತಷ್ಟು ಸುಲಲಿತವಾಯಿತು.

ನಟನೆಯ ಪಟ್ಟುಗಳು, ಮುಖ ಲಕ್ಷಣ ಬದಲುವಿಕೆಯಂತಹ ಪಟ್ಟುಗಳನ್ನು ಸ್ವತಃ ನಿರ್ದೇಶಕರೇ ಆಕಾಶ್ ಹಾಗು ರಿಂಕುವಿಗೆ ದಿನಂಪ್ರತಿ ಉಣಬಡಿಸುತ್ತಿದ್ದರು. ಶ್ರೇಷ್ಠ ಕಲಾಕೃತಿಯೊಂದನ್ನು ತಯಾರು ಮಾಡಬೇಕಾದರೆ ಅದರ ಕುಡಿ ಕೊನರುಗಳನ್ನೆಲ್ಲ ಹೇಗೆ ಸಜ್ಜುಗೊಳಿಸಬೇಕೆನ್ನುವ ಪ್ರೌಢಿಮೆ ಇರುವ ಕೆಲವೇ ನಿರ್ದೇಶಕರಲ್ಲಿ ನಾಗರಾಜ್ ಮಂಜುಳೆ ಕೂಡ ಒಬ್ಬರು ಎನ್ನುವುದು ಅರಿಯುವುದೇ ಇಂತಹ ವಿಚಾರಗಳಿಂದಲೇ. ಸಿನೆಮಾ ಚಿತ್ರೀಕರಣಕ್ಕಿಂತ ಮುಂದಾಗಿ ಹಾಗು ಚಿತ್ರೀಕರಣ ಪರ್ಯಂತ ನಟರ ತಂಡವನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಪಳಗಿಸಿದ ನಿರ್ದೇಶಕರ 'ಸೈರಾಟ್' ಸಿನೆಮಾ ಇದೀಗ ಯಾವ ಪರಿಯ ಜಯ ಗಳಿಸಿದೆ ಎನ್ನುವುದನ್ನು ಮತ್ತೂ ಎಳೆ ಎಳೆಯಾಗಿ ಹೇಳುವ ಅಗತ್ಯವಿಲ್ಲವಷ್ಟೆ. ಅಂತೂ ಹಿರಿತೆರೆಗೆ ಸುನಾಮಿಯಂತೆ ಅಪ್ಪಳಿಸಿದ 'ಸೈರಾಟ್' ಯುವಜನತೆಯನ್ನು ಮೋಡಿಗೊಳಗು ಮಾಡಿತು. ಸಂಗೀತವಂತೂ ಹಾಲಿವುಡ್ ನ ಆರ್ಕೆಸ್ಟ್ರಾ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುಗಳ ರೆಕಾರ್ಡಿಂಗ್ ಮಾಡಿದ ಭಾರತದ ಮೊದಲ ಸಿನೆಮಾವೆನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು ಅಂತೆಯೇ ಯುವಜನತೆಯನ್ನು ಸಂಗೀತೋನ್ಮತ್ತರನ್ನಾಗಿಸಿತು.

ಮರಾಠಿ ಸಿನೆಮಾ ರಂಗಕ್ಕೆ ಬರೋಬ್ಬರಿ ಒಂದು ಶತಮಾನದ ಇತಿಹಾಸವುಂಟು. ಭಾರತದ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಸ್ವತಃ ಮರಾಠಿಗರಾಗಿದ್ದವರು. ಒಂದು ಶತಮಾನದಾದ್ಯಂತ ಯಾವ ಮರಾಠಿ ಸಿನೆಮಾವು ಮಾಡಿರದಿದ್ದಷ್ಟು ಹಣವನ್ನು 'ಸೈರಾಟ್'  ಗಲ್ಲಾ  ಪೆಟ್ಟಿಗೆಯಲ್ಲಿ ಗಳಿಸಿಬಿಟ್ಟಿತ್ತು. ಜನರನ್ನು ಯಾವ ಪರಿಗೆ ಈ ಸಿನೆಮಾ ಸೆಳೆಯಿತೆಂದರೆ , ಕರ್ಮಾಳಾ ಪರಿಸರದಲ್ಲಿರುವ ಮೆಟ್ಟಿಲ ಬಾವಿಗೆ ಜನ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದನ್ನು ಈಗೀಗಲೂ ಕೆಲವು ಮರಾಠಿ ಚಾನೆಲ್ಲುಗಳು ವರದಿ ಮಾಡುತ್ತಿವೆ. ಜನರನ್ನು ಉನ್ಮತ್ತತೆಯ ಹೊಳೆಯಲ್ಲಿ ತೇಲಿಸಿದ ಈ ಸಿನೆಮಾದ ಹಿಂದಿನ ಮುಗ್ದ ಮಕ್ಕಳ ಅದೃಷ್ಟಗಾಥೆ ನಿಜಕ್ಕೂ ಅನೂಹ್ಯ. ಅಂದು ಏನೊಂದು ಅರಿಯದೆ ಜೇವೂರ್ ನ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಹುಡುಗನಿಂದು ಮರಾಠಿ ಸಿನೆಮಾ ರಂಗದಲ್ಲಿ ಸ್ಟಾರ್ ನಟ. 

ನಟನಾ ವೃತ್ತಿಯನ್ನೇ ನಂಬಿ ಬಂದು ಬದುಕು ಕಟ್ಟಿಕೊಂಡವರೆಷ್ಟೋ, ಕಳೆದುಕೊಂಡವರೆಷ್ಟೋ. ತಮ್ಮ ನೆಚ್ಚಿನ ನಟ ನಟಿಯರನ್ನು ಅನುಸರಿಸುತ್ತಾ ಚಿತ್ರರಂಗಕ್ಕೆ ಬಂದು ಬದುಕು ಕಳೆದುಕೊಂಡು ಮುಂಬೈ, ಚೆನ್ನೈ ನ ಬೀದಿಗಳಲ್ಲಿ ಹೆಣವಾದವರೂ ಬೇಕಾದಷ್ಟು. ಕಲಾ ರಂಗದ ಬಗ್ಗೆ ಚಾಲ್ತಿಯಲ್ಲಿರುವ ನಾಣ್ಣುಡಿಯೊಂದು ಇದೇ ಸಂಧರ್ಭದಲ್ಲಿ ಜ್ಞಾಪಕ ಬರುತ್ತಿದೆ. 'ಕಲಾ ರಂಗ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ'. ಕೈ ಬೀಸಿ ಕರೆದವರು ನಮ್ಮ ನಿಮ್ಮ ದೃಷ್ಟಿಯಲ್ಲಿ ಅದೃಷ್ಟವಂತರೆನಿಸಿಕೊಳ್ಳುತ್ತಾರೆ. ಇಲ್ಲದವರು ಸರ್ವೇ ಸಾಮಾನ್ಯರಾಗಿ ನಮ್ಮ ನಿಮ್ಮ ನಡುವೆಯೇ ಕಾಣದೆ ಮರೆಯಾಗಿ ಹೋಗುತ್ತಾರೆ. ಅಂತೂ ಚಿತ್ರರಂಗದಲ್ಲಿ ಮಿಂಚಿ ಮಿನುಗಿದವರೆಲ್ಲ ಎಲ್ಲವನ್ನು ಬಲಾವರಾಗಿರಲಿಲ್ಲ. ಅವರೂ ಇಂದಿನ ವಿರಾಟ ಭಾವ ಪಡೆಯುವ ಮೊದಲು ಸೈರಾಟರಾಗಿದ್ದರು ಎನ್ನುವುದನ್ನು ಮರೆಯುವಂತಿಲ್ಲ. ಅವರ ಕಥೆಗಳೂ ನಮ್ಮಕಥೆಗಳಿಗಿನ್ನ ವಿಭಿನ್ನವೇನಲ್ಲ. ನಮ್ಮ ನಿಮ್ಮ ನಡುವೆಯೇ ಅರಳಿದ ಅವರ ಶೈಲಿ ಮಾತ್ರ ಭಿನ್ನವಷ್ಟೇ.

ಶುಕ್ರವಾರ, ಫೆಬ್ರವರಿ 23, 2018

ವಿಧಿಗೆ ಬಿದಿಗೆಯಿದು

ಜನರಿಲ್ಲ ನಿನಗೆ, ಬಾದ್ಯನಾಗು
ಅನುರಾಗಕೆ ಕೊರತೆಯಿಲ್ಲಿ
ಅನುರಾಗಿಯಾಗು,
ಸಾಧನಗೆ ಹಿನ್ನಡೆಯಿಲ್ಲಿ
ಸಾಧಿಸು,
ಕುಹಕ ಮನಸುಗಳ ಹಜಾರವಿದು
ಸುಮನಸ್ಕನಾಗು

ಕುಟಿಲ ಕರ್ಮಿಗಳ ಕಾರಸ್ಥಾನವಿದು
ಕುಗ್ಗದಿರು
ಉಪಮೆ ಮಹೋಪಮೆಗಳ ಮಜಲಿದು
ಉಪಾಸಿಸು
ಸುಶ್ರಾವ್ಯ ಗೀತೆಯಿದು
ಬಜಾಯಿಸು
ಗರ್ವ ಪರ್ವಗಳ ಸಡಗರವಿದು
ಪ್ರವರ್ತಿಸು

ಬಡಾಯಿಗಳ ಬಜಾರಿದು
ಸದ್ದು ಗದ್ದಲವಿರದೆ ಸುಮ್ಮನಿರು
ಶ್ರೇಷ್ಟಿಗಳ ಸಮೂಹವಿದು
ಶ್ರೇಷ್ಟನಾಗು
ಬದುಕೊಂದು ಪಯಣ
ಪಯಣಿಸು
ವಿಧಿಗೆ ತದಿಗೆಯಿದು
ಕಥೆ ಮುಗಿಸು.


ಭಾನುವಾರ, ಫೆಬ್ರವರಿ 11, 2018

ನಮ್ಮ ನಿಮ್ಮ ಜೀವನವೂ ಗುಲಾಬಿ ಟಾಕೀಸು ತಾನೇ?

ಸದಾ ಕಡಲ್ಮೊರೆತ, ಅಲ್ಲೆಲ್ಲ ಮೀನ ವಾಸನೆ, ಕಡಲೆ ಅವರಿಗೆಲ್ಲ ಹಿಟ್ಟು ಬಟ್ಟೆಯ ಮೂಲ, ಕಡಲು ಶಾಂತಿ ಧೋತ್ರ ಹೊದ್ದುಕೊಂಡು ಶಾಂತವಾಗಿದ್ದರೆ ಅವರ ಮನೆಯ ಒಲೆ ಬೆಂಕಿಯಾಡಿಸುತ್ತದೆ, ತಟ್ಟೆ ಲೋಟಗಳು ದಿನವೂ ನೀರ ಕಾಣುತ್ತವೆ. ಕಡಲೇನಾದರೂ ಅಬ್ಬರಿಸಿ ಬೊಬ್ಬಿರಿದುಬಿಟ್ಟರೆ ಅವರ ಬದುಕು ಮೂರಾ ಬಟ್ಟೆ, ಅಯ್ಯಯ್ಯಪ್ಪ ಅದನ್ನು ನೆನೆಸಿಕೊಳ್ಳುವುದು ಅತಿ ಭಾರ. ಕಡಲ ಮೀನುಗಳೇ ಅನ್ನವಾದ್ದು ನೆಪವಾಗಿ ಕಡಲೊಂದಿಗಿನ ಸಂಬಂಧದಷ್ಟೇ ಗಟ್ಟಿಯಾದ್ದೂ ಪೇಟೆಯ ಬಂಧ, ಅದು ಕಡಲ ಮೀನುಗಳ ಬಿಕರಿಗೆ ಯೋಗ್ಯ ಸ್ಥಾನ ತಾನೇ ಅದಕ್ಕೆ ಮಾತ್ರ. ಪೇಟೆಯೆಂದ ಮೇಲೆ ಪೇಟೆಯ ರಾಜ ಬೀದಿಗಳು ಮಾತ್ರವಲ್ಲ, ಪೇಟೆಯೊಳಗಿನ ಚಿತ್ರ ಮಂದಿರ ಅಲ್ಲಿನ ಡಾನ್ಸು, ಫೈಟು ಚಿತ್ರ ಮಂದಿರದ ತೆರೆ ದಾಟಿ ಬಂದು ಕಡಲ ತಡಿಯವರ ಮನಸ್ಸಿನ ಮೇಲೆ ಅಚ್ಚಾಗಿ ಹಾಗೆ ಕೂತು ತಾವು ಕಡಲ ತಡಿ ಸೇರಿಬಿಡುತ್ತಿದ್ದವು. 


 
ಇಂತಿರುವ ಕನ್ನಡ ನಾಡ ಕಡಲ್ಬದಿಯ ಕುಂದಗನ್ನಡ ಸೀಮೆಯೊಳಗಿದ್ದವಳು ನಮ್ಮ ಗುಲ್ ನಭಿ ತಾನು ಮುಸಲ್ಮಾನಳಾದರೂ ಸೂಲಗಿತ್ತಿ ವೃತ್ತಿಯಿಂದ ಜಾತಿ ಧರ್ಮವೆಂಬ ಅಭೇದ್ಯ ಕೋಟೆಯೊಂದಕ್ಕೆ ಸೆಡ್ಡು ಹೊಡೆದು ನಿಂತುಬಿಟ್ಟಿದ್ದಳು, ಅವಳೇ ಸೆಡ್ಡು ಹೊಡೆದಿದ್ದಳು ಎನ್ನುವುದಕ್ಕಿಂತ ಮಾನವೀಯತೆಯ ಅನಿವಾರ್ಯ ಸಮಯಗಳನ್ನು ಆಕೆಯನ್ನು ಹಂಗಾಗಿಸಿದ್ದವು ಎನ್ನಲೇನು ಅಡ್ಡಿಯಿಲ್ಲವೇ ಇಲ್ಲ. ಅವಳೊಡನಾಡುವ ಹೆಂಗಳೆಯರ ಗುಂಪಿನೊಳಗೆ ಗುಲ್ ನಭೀ ಗುಲಾಬಿಯಾಗಿ ಮಾರ್ಪಾಡುಗೊಂಡಿದ್ದಳು, ಎಷ್ಟರ ಮಟ್ಟಿಗೆಂದರೆ ತನ್ನ ನಿಜ ಹೆಸರನ್ನು ತಾನೇ ಮರೆವಷ್ಟು. ದೇಶದ ಮೇಲೆ ಧರ್ಮಾಧಾರಿತ ನೆರೆ ದೇಶವೊಂದು ಕಾಲ್ಕೆರೆದು ಯುದ್ಧಕ್ಕೆ ನಿಂತು ರಾಷ್ಟ್ರದೊಳಗೆ ಬಿಸಿ ವಾತಾವರಣ ಸೃಷ್ಟಿಸಿದ್ದು ನೇರವಾಗಿ ಗುಲಾಬಿಗೂ ತಟ್ಟಿ ಆ ಜಾತಿಯವರೆಲ್ಲ ಗುಳೆ ಹೊರಟು ಒಂದೂರಲ್ಲಿ ಒಟ್ಟಿಗೆ ನಿಲ್ಲಬೇಕೆಂಬ ಒತ್ತಾಯ ಬಲವಾದರೂ ಗುಲಾಬಿ ಗಟ್ಟಿ ಮನಸ್ಸು  ಮಾಡುತ್ತಾಳೆ  ತನ್ನ ತಪ್ಪಿಲ್ಲದ ಮೇಲೆ ಹುಟ್ಟಿದೂರ ಬಿಡುವುದು ಹುಂಬತನವಲ್ಲದೆ ಮತ್ತೇನು ಎಂದುಕೊಳ್ಳುತ್ತಾಳೆ.

ಎದೆಗೆರಡಕ್ಷರವಿಳಿಯದಿದ್ದರೂ ಕಡಲ ತಡಿಯ ಹೆಣ್ಮಗಳ ಧೈರ್ಯ ಮನಸೂರೆಗೊಳ್ಳುತ್ತದೆ. ಮತ್ತೂಬ್ಬ ಮಗದೊಬ್ಬರ ಕೊಳ್ಳೆಹೊಡೆದು ಬದುಕಿಬಿಡೋಣ ವೆನ್ನುವ ಸಮಾಜದೊಳಗೆ ಗುಲಾಬಿ  ತನ್ನ ಬಲದಿಂದಲೇ ತಾನು ಬದುಕುವ ಕೆಚ್ಚನ್ನು ತನ್ನ ತಲೆಯೊಳಗೆ ತುಂಬಿಕೊಂಡೆ ಹುಟ್ಟಿದ್ದಳೇನೋ?. ಆದ್ದರಿಂದಲೇ ಅವಳ ಜಾತಿಯ ಹಟ್ಟಿ ದಾರದಂಗಳೆಲ್ಲಾ ಕದ ಕವುಚಿಕೊಂಡು ಊರು ಬಿಟ್ಟರೂ ಗುಲಾಬಿ  ಮನೆಯ ಟಿ ವಿ ಸೂಜಿಗಲ್ಲಂತೆ ತನ್ನತ್ತ ಜನರನ್ನು ಸೆಳೆಯುತ್ತದೆ. ಗುಲಾಬಿ ಮನೆಯೇ ಚಿತ್ರಮಂದಿರವಾಗಿ  ಮಗ್ಗುಲು ಬಗಲಿನ ಜನಗಳಿಂದ ಟಾಕೀಸು ಎಂದು ಕರೆಸಿಕೊಳ್ಳುತ್ತದೆ. ಸಾಲದ್ದಕ್ಕೆ ಎಲ್ಲೋ ಸಿಕ್ಕ ಸಿನೆಮಾ ಪೋಸ್ಟರ್ ಒಂದನ್ನು ತಂದು ತನ್ನ ಸಿನೆಮಾ ನೋಡುವ ಹುಚ್ಚಿಗೆ ಒಂದಿಷ್ಟು  ರಸಗೊಬ್ಬರ ಸಿಂಪಡಿಸಿಬಿಟ್ಟಿರುತ್ತಾಳೆ. ಗುಲಾಬಿಯೊಳಗೊಂದು ಹಾರುವ ಹಕ್ಕಿಯಿರುತ್ತದೆ. ಸದ್ದಿಲ್ಲದೇ ಅದಕ್ಕೆ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ  ಮೂಲೆಯಲ್ಲಿ  ಬಿದ್ದಿರುವಂತೆ ನೋಡಿಕೊಳ್ಳುತ್ತಾಳೆ ಗುಲಾಬಿ.ಊರವರ ಗೊಂದಾರಗಳಿಗೆಲ್ಲ ಹೋಗಿ ಸೂಲಗಿತ್ತಿಯಾಗಿ ಅದೆಷ್ಟೋ ಜೀವಗಳನ್ನು ಉಳಿಸಿ, ಇನ್ನೆಷ್ಟೋ ಜೀವಗಳನ್ನು ಸುಸೂತ್ರವಾಗಿಸಿ ಹಿಂತಿರುಗಿ ಬರುತ್ತಿದ್ದ ಗುಲಾಬಿಗೆ ಮಗ್ಗುಲ ಮನೆಯ ಹುಡುಗಿಯ ನಾಪತ್ತೆ ಅರಿಯದ ಲೆಕ್ಕದಂತಾಗುತ್ತದೆ. ಕಳೆದು ಹೋದ ಹುಡುಗಿ ಸಿಕ್ಕಿ ಮರವೊಂದರ ಮರೆಯಲ್ಲಿ ಗುಲಾಬಿಯೊಡನೆ ಮಾತಾಡಿದ್ದು ಊರವರಿಗೆ ವಕ್ರವಾಗಿ ಕಾಣುತ್ತದೆ. ಅನಿಷ್ಟಕೆಲ್ಲ ಶನೇಶ್ವರನೇ ಕಾರಣ ಅನ್ನುವಂತೆ  ಗುಂಪೊಂದು ಗುಲಾಬಿ  ಮನೆಗೆ ಲಗ್ಗೆಯಿಕ್ಕುತ್ತದೆ. ಗುಲಾಬಿಯ ಸಾಮಾನು ಸರಂಜಾಮು ಸಮೇತ ಆಕೆಯನ್ನೇ ಹೊತ್ತುಕೊಂಡು ಹಡಗಿನಲ್ಲಿರಿಸಿ ಮತ್ತೊಂದೂರಿಗೆ ಸಾಗಹಾಕಿಬಿಡುತ್ತದೆ. ಪರವೂರಿಗೆ ಸಾಗುತ್ತಿರುವ ಗುಲಾಬಿ ಮುಂದೊಮ್ಮೆ ಇಲ್ಲಿ  ಸೂಲಗಿತ್ತಿಯರ ಅನಿವಾರ್ಯತೆಯಾದಾಗ ಇದೆ ಊರು ತನ್ನನ್ನೇ ಹುಡುಕಿ ಹಿಂದೆ ಬರುತ್ತದೆಂದು, ಬಿಸಿರಕ್ತದ ಕೆಲವು ಹುಡುಗರಿಗೆ ಆ ಸಮಯದ ಅರಿವೆಯಿಲ್ಲದೆ ಇಂದು ಹೀಗಾಡುತ್ತಿರುವುದು ಎಂದು ವರ್ತಮಾನ, ಭವಿಷ್ಯಗಳನ್ನು ಅರ್ಥ ಮಾಡಿಕೊಂಡ ಋಷಿಯಂತೆ ದೋಣಿಯೊಂದರಲ್ಲಿ ಕುಳಿತು ಹಿಂದಿರುಗಿ ನೋಡದೆ ಹೊರಟು ಹೋಗುತ್ತಾಳೆ. ಅಲ್ಲಿಗೆ ಗುಲಾಬಿ ಕಥೆ ಮುಗಿಯುತ್ತದೆ.

ಮನುಷ್ಯನೊಬ್ಬನ ಬದುಕುವ ಛಲ, ಆ ಛಲಕ್ಕೆ ತಕ್ಕಂತೆ ಅವನ ಸುತ್ತಲಿನ ವಾತಾವರಣ ಅವನ ಮೇಲೆಸೆಯುವ ಸವಾಲುಗಳು ಹಾಗು ಆ ಸವಾಲುಗಳನ್ನು ಆ ಮನುಷ್ಯ ಮೆಟ್ಟಿ ನಿಲ್ಲುವ ರೀತಿ, ವರ್ಚಸ್ಸು ಇವುಗಳನ್ನೆಲ್ಲ ಕಂತೆ ಮಾಡಿ ಚಿತ್ರಿಸಿರುವ ಅಪೂರ್ವ ಕಲಾಕೃತಿ 'ಗುಲಾಬಿ ಟಾಕೀಸು'.ನಾವೇನೋ ಬಯಸಿದಾಗ ಸಿಗದಿರುವುದು, ಬಯಸದಿದ್ದ ಕಾಲದಲ್ಲಿ ಕಾಲಿಗೆ ತೊಡರಿಕೊಳ್ಳುವಂತೆ ಪ್ರಾಪ್ತವಾಗುತ್ತದೆ. ಬದುಕಬೇಕೆನ್ನುವ ಛಲ ಬಿಗಿಯಾದಾಗ ಬದುಕು ಎಲ್ಲರಿಗೂ ಮತ್ತೊಂದು ಹೊಸದೇನನ್ನೋ ತೋರಿಸಿರುತ್ತದೆ. ಬಯಸದಿರುವ ಹಾದಿಗಳಿಗೆ ನಮ್ಮನ್ನು ತಳ್ಳಿ ತಮಾಷೆ ನೋಡುತ್ತದೆ. ಕೆಲವೊಮ್ಮೆ ಬದುಕು ತಳ್ಳುವ ದಾರಿಗಳು ಸುಲಲಿತವಾದರೆ, ಕೆಲವೊಮ್ಮೆ ದುರ್ಭರವಾಗಿಯೂ ಇದ್ದು ವ್ಯಕ್ತಿಯನ್ನು ಸಾಣೆ ಹಿಡಿದು ಅವನ ಬಿಗಿತನ ಅಳೆಯಲು ಮುಂದಾಗಿಬಿಡುತ್ತದೆ. ಆ ದೃಷ್ಟಿಯಲ್ಲಿ ಗುಲಾಬಿ ಟಾಕೀಸು ನಮಗೊಂದು ಪಾಠವೇ ಸರಿ .... ಅಲ್ಲಲ್ಲ ನಮ್ಮ ಬದುಕೂ ಗುಲಾಬಿ ಟಾಕೀಸು ತಾನೇ?.

ಸೋಮವಾರ, ಜನವರಿ 8, 2018

ಅಶ್ವಿನಿ

ಗಂಧರ್ವೆಯಿವೆಯಲ್ಲ,

ಸೋಜಿಗವೇನಲ್ಲ

ಕೃತಿ ಸಂಸ್ಕೃತಿ ತಾನ್
ತನ್ನ ದಾರಿಯೊಳ್ ಇವಳಂ
ಬಿಡದೆ
ತಾನೇ ಕೃತಿಯೊಡತಿಯಾಗಿ
ಸಂಸ್ಕೃತಿಯಾಗಿ
ಧರ್ಮದ ಸಾಕಾರ ಮೂರುತಿಯಾಗಿ
ಧರ್ಮವದು ತಾನೇ ಪೆಣ್ ರೂಪ ತಳೆದು
ಆವಿರ್ಭವಿಸಿಹುದು ನೋಡಿಲ್ಲಿ

ಏನೀ ಮಾಯೆ
ಪೆಣ್ ಮಾಯೆ
ಕೃತಿ ಮಾಯೆ
ಸಂಸ್ಕೃತಿ ಮಾಯೆ
ಧರ್ಮ ಮಾಯೆ
ಮಾಯೆ ತಾನ್ ಜಾಲವಾಗಿ
ಇವಳಂ ಬೀಸದೆ
ಬಿಟ್ಟಿದುದೆಲ್ಲಿ
ಸಂಸ್ಕೃತಿ ತಾನ್ ಕೃತಿಯಾಗಿ
ಬದುಕಲು
ಇಳೆಯೊಳಗವತರಿಸಿಕೊಂಬಂತೆ

ಅಶ್ವಿನಿ ದೇವತೆ.

ಭಾನುವಾರ, ಡಿಸೆಂಬರ್ 24, 2017

ಮಾನವೀಯತೆ - ನಿನ್ನ ವಿಳಾಸವೆಲ್ಲಿ

ಸಿರಿಯರ ಗಲ್ಲಿಯೊಳಗೊಮ್ಮೆ
ಇಣುಕಿದ್ದೆ ಮಾನವೀಯತೆಯನೊಮ್ಮೆ
ಕಣ್ತುಂಬಿಕೊಳಲು, ಏನತಿಶಯ
ಮಾನವೀಯತೆಗೆ ಹರಕು 
ಛಾಪೆ ಆಸರೆಯಾಗಿತ್ತು
ದರ್ಪ ಸುಪ್ಪತ್ತಿಗೆಯೊಳಗಿತ್ತು

ಕೊರಗುವರ ಹಟ್ಟಿದಾರದಂಗಳೊಳಗೆ
ಒಮ್ಮೆ ಕಣ್ಣು ಹಾಯಿಸಿದೆ 
ಮಾನವೀಯತೆಯನೊಮ್ಮೆ ತಡಕಿದೆ 
ಅವರಿಗೆ ತನ್ನ ವಿಳಾಸವನೀಯದೆ 
ಮಾನವೀಯತೆ ಮರೆಯಾಯಿತ್ತು 
ಸಿರಿತನದ ದಾರಿಯೊಂದೇ ಅವರ ದೃಷ್ಟಿಗೆ ನಿಲುಕಿತ್ತು 

ಓದದವರ, ಓದಿ ಬರೆದವರ 
ಒಡನಾಟಗಳೊಳಗೆಲ್ಲ ಶೋಧಿಸಿದೆ 
ಸಿರಿತನವೊಂದೇ ಸೂಜಿಗಲ್ಲಿನಂತೆ ಸೆಳೆಯುತಿತ್ತು 
ಮಾನವೀಯತೆಯೊಂದನು ಮರೆಸಿತ್ತು 
ಅಲ್ಲೂ ಅದರ ವಿಳಾಸವಿಲ್ಲ 
ಧನದಾಹ ಅದರ ವಿಳಾಸ ಮಸುಕಾಗಿಸಿತ್ತು 

ಅಲ್ಲೆಲ್ಲೋ ಕುಸಿದು ಬಿದ್ದವರ 
ಇಲ್ಲೆಲ್ಲೋ ಅಪಘಾತಗೊಂಡವರ 
ಇನ್ನೆಲ್ಲೋ ದಾರಿದ್ರೋಪದ ಅಗ್ನಿಕುಂಡದೊಳಗೆ 
ಬಿದ್ದು ನರಳಿದವರ ಕಂಡು 
ಅವರ ವರಾತಗಳೆಲ್ಲ ಮಾನವೀಯತೆಯ 
ಗೈರನ್ನು ಎತ್ತೆತ್ತಿ ತೋರಿದಂತಿತ್ತು 

ದೇವರ ಸಾಕ್ಷಾತ್ಕಾರಕ್ಕೆ ಹಿಮಾಲಯ,
ದಿವ್ಯ ತೀರ್ಥ, ಪುಣ್ಯ ಕ್ಷೇತ್ರಗಳುಂಟು
ಆತ್ಮದ ಸಾಕ್ಷಾತ್ಕಾರಕ್ಕೆ ಜೀವನ 
ನಾವಿಕೆ ದೇಹವುಂಟು 
ಮಾನವೀಯತೆಯ ಸಾಕ್ಷಾತ್ಕಾರಕೆ 
ಏನುಂಟು?. ಸಂಪೂರ್ಣವಾಗಿ ಮರೆಯಾಯಿತ್ತು 

ಮನದೊಳಗೆ ಹುದುಗಿದ ಆಸೆ ಭಾವಗಳ 
ಮಗ್ಗುಲಿಗೆ ತಳ್ಳುವ ಧೈರ್ಯ ಮಾಡಿ 
ಕೆದಕಿ ನೋಡಿದೆ, ಬಹು ದಿನಗಳಿಂದ 
ಬಳಸದೆ ಮೂಲೆಗೆ ತುರುಕಿದ್ದ ಕಬ್ಬಿಣದ 
ಗುಂಡು ತಾನು ಸೊರಗುತ್ತಾ ಮೂಲೆಯಲ್ಲಿತ್ತು 
ಕೊನೆಗೂ ಮಾನವೀಯತೆಯ ವಿಳಾಸ ದೊರೆತಾಗಿತ್ತು.

ಭಾನುವಾರ, ಡಿಸೆಂಬರ್ 3, 2017

ನನಗಾಗಿ ಜನ್ಮ ತಳೆದ ಜೇನ ಹನಿ

ಬ್ರಹ್ಮ ಲೋಕದೊಳಗೊಮ್ಮೆ
ಜೇನ ಹನಿಯೊಂದನು ಕಂಡಿದ್ದೆ
ಬ್ರಹ್ಮ ನುಡಿದಿದ್ದ ನನಗಾಗಿಯೇ
ಜೇನ ಹನಿಯೆಂದು !

ಭೂಲೋಕದೊಳಗೆಷ್ಟೆಷ್ಟೋ ಜೇನ ಹನಿಗಳು
ಎಷ್ಟೆಷ್ಟೋ ಹೂದುಂಬಿಗಳು
ಎಡತಾಕಿದೆ ನನದ್ಯಾವುದು ಇನ್ನೂ
ದೊರೆತಿಲ್ಲ, ತಿಳಿಯುತ್ತಲೂ ಇಲ್ಲ

ಹೃದಯ ಸನ್ನದ್ಧವಾಯಿತು
ಮನಸು ತೆರೆಯಿತು
ಬಾಹುಗಳು ಬಿಗಿಯಪ್ಪುಗೆಗೆ ಕಾತರಿಸಿ
ನನ್ನದೆಂಬ ಹುಂಬತನ ಕುಡಿಯೊಡೆಯಿತು

ನನಗಾಗಿ ಜನ್ಮ ತಳೆದ ಜೇನ ಹನಿ
ಎಲ್ಲೋ ಬೆಳೆದಿರುವ ಜೇನ ಹನಿ
ತಲುಪುವದೆಂದು ನನಗೆ 
ಅದೂ ನನ್ನಂತೆ ಕಾತರಿಸುತ್ತಿರುವುದೇ?

ಭಾನುವಾರ, ನವೆಂಬರ್ 26, 2017

ಇರದಿದುಮ್ ಅವಗಾಹಿಸಿ ಇರ್ಪುದ ಸ್ಪುರಿಸು

ಧರ್ಮ ತಾನ್ ದೇವರಾಗಿ
ನಿನ್ನಿಂದ ಕೈ ಮುಗಿಸಿ
ತಾನಿರ್ಪ ಜಗದಾಗರಗಳಾವನೂ
ಎಳೆಯೊಳಗೂ ಅರುಹದೇ

ಇದೇಮ್ ಧರ್ಮ ನಿರಪೇಕ್ಷ ಪರೀಕ್ಷೆ
ಅದರೊಳಗೂ ಇಳಿ
ಬರುವುದಿರುವುದೇಮ್ ತಾನಳೆದು
ಇರದಿಹ ಗುಣವಂ ಅವಗಾಹಿಸಿ
ಇರ್ಪುದ ಸ್ಪುರಿಸು
ಅದೇ ಧರ್ಮ
ಅದೇ ಜ್ಞಾನ
ಅದೇ ವಿಜ್ಞಾನ

ನಗುತಿಹಳು ನೋಡಲ್ಲಿ ಕನ್ನಡಮ್ಮ

ಕನ್ನಡವ ಉಳಿಸೆನ್ನದಿರು
ಕನ್ನಡವ ಬೆಳೆಸೆನ್ನದಿರು
ಕನ್ನಡವನುಳಿಸಿ ಬೆಳೆಸಲು
ಅದೇನು ಕಮರುತಿರುವ ಗಿಡವೇ ?
ಬತ್ತುತ್ತಿರುವ ನದಿಯೇ?

ಕನ್ನಡವೊಂದು ಹೆಮ್ಮರ
ನೆರಳರಸಿ ಬರುವರಿಗಾಶ್ರಯ
ದಣಿದವರಿಗೊಂದು ತಂಗುದಾಣ
ಬಳಲಿದವರ ತಲೆಗೊಂದು
ಮೆತ್ತೆ ಹೂವಿನ ತಲೆದಿಂಬು

ಹಮ್ಮೇನು ಬಿಮ್ಮೇನು
ಯಾರ ಹಂಗೇನು ಕನ್ನಡಕೆ
ಯುಗ ಯುಗಾಂತರಗಳುರುಳಿ
ತಲೆ ತಲಾಂತರಗಳಳಿದರೂ
ಚೆಲುವೆಲ್ಲ ತನ್ನದೆಂದು
ನಗುತಿಹಳು ನೋಡಲ್ಲಿ ಕನ್ನಡಮ್ಮ.

ಬುಧವಾರ, ನವೆಂಬರ್ 15, 2017

ಸೌಜನ್ಯ

ಮೌನವೆಂದರೇನು?
ಮಾತೆಂದರೇನು?
ಮೌನ ಮಾತುಗಳ ಬೆಲೆ
ಎಲ್ಲೆಲ್ಲಿ ಎಷ್ಟೆಷ್ಟು
ಎಲ್ಲಕೂ ಬೆಲೆಯಿದು
ಸೌಜನ್ಯ!

ಪ್ರಕೃತಿಯೆಂದರೇನು?
ವಿಕೃತಿಯೆಂದರೇನು?
ಪ್ರಕೃತಿ ವಿಕೃತಿಗಳೆರಡಕ್ಕೂ
ಜುಗಲ್ ಬಂದಿ ಅದೇ
ಸೌಜನ್ಯ!

ಅಕ್ರಮ ತಾನ್ ಮನದೊಳಗೆ
ಮೇರೆ ಮೀರಿ
ಉಕ್ಕಿ ಹರಿಯೆ
ಸಕ್ರಮ ತಾನ್ ಮನದೊಡೆಯ
ತಂದು ತಹಬದಿಯದು
ಸೌಜನ್ಯ!

ಕೊನೆಯ ಬರಹ

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...