ಭಾನುವಾರ, ನವೆಂಬರ್ 17, 2019

ನಾನೇ ಇನ್ನು ಮಾನವ ಮಾಡಿಲ್ಲ

ಅವರು ಬದುಕಿದರು
ಬರೆಯಲಿಲ್ಲ,
ನಾ ಬರೆದೆ
ಬದುಕಲಿಲ್ಲ.

ಅವರಾಡಿದರು
ಸೋಲೋ ಗೆಲುವೋ
ಚಿಂತಿಸಲಿಲ್ಲ,
ನಾನಾಡಲಿಲ್ಲ
ಆದರೂ ಸೋಲಿನ ಬಗೆಗೆ
ಧೈರ್ಯ ತಳೆಯಲೇ ಇಲ್ಲ.

ಅವರೊಡನಾಡಿದರು
ನಾನಾಡಲಿಲ್ಲ,
ನಾನು, ನನ್ನ ಸಿದ್ಧಾಂತಗಳಿಗೆ
ಹಪ ಹಪಿಸಿ
ಯಾರೊಡಗೂ ಕೂಡಿ ಬಾಳಲಿಲ್ಲ.

ಯಾವೊಂದಕೂ ಕೈ ಚಾಚಲಿಲ್ಲ,
ಯಾರಿಗಾಗಿಯೂ ಹಾತೊರೆಯಲಿಲ್ಲ,
ಪ್ರೀತಿ ಪ್ರೇಮದ ಬಂಧನದೊಳಗೆ ಸಿಲುಕಲಿಲ್ಲ,
ಗೆಳೆಯರ ಬಳಗದೊಳಗೆ ಕೇಂದ್ರ ಬಿಂದು ನಾನಾಗಲಿಲ್ಲ,
ಬರೆದವರ ನಡುವೆ ಮೆರೆಯಲಿಲ್ಲ,
ಬದುಕಿದವರ ನಡುವೆ ಬಾಳಲಿಲ್ಲ,
ಏನೇನೂ ಇಲ್ಲಿ ಘಟಿಸಿಲ್ಲ ,
ಘಟಿಸುವ ಸುಸಮಯವೊಂದಕೆ
ನಾನೇ ಇನ್ನು ಮಾನವ ಮಾಡಿಲ್ಲ.

-0-


ಅಮೆರಿಕೆಯ ಧೂತಾವಾಸ

ಉತ್ತರೋತ್ತರದ ಕರ್ಕಾಟಕ ಸಂಕ್ರಾಂತಿ ವೃತ್ತಮಮ್ ದಾಟಿ ದಾಟಿ
ಕಡಲದಾಟಿ ಅರಬೀಯರ ಸೀಮಾ ರೇಖೆಯಂ ಸೀಳಿ
ಯಹೂದಿಗಳ್ ತಾವ್ ಬಾಹುಗಳ್ ಬಿಗಿಯರಿಸಿ ನಿಂತ ಯುದ್ಧ ಭೂಮಿಯಮ್
ಮೇಲ್ಜಾರಿ ಶ್ವೇತ ವರ್ಣೀಯರ್ ಕಟ್ಟಾಳಿದ ಯೂರೋಪಿನಾಂತ
ಸಂತಸವನಾಂತು ಮುನ್ನಡೆದು ಶೀತ ವಲಯದೊಳಿರ್ಪ ಕಡು ಚಳಿಗೆ ಮೈ ತೆತ್ತು
ಭೀಭತ್ಸ ಸಾಗರವ ಲಂಘಿಸಿ ಮುನ್ನಡೆರ್ದು ಗತ ಕಾಲದೊಳ್ ನೆತ್ತರ ವರ್ಣ ಜನಾಂಗಮ್
ಸಾಂಗವಾಗಿ ನೆಲೆಸಿರ್ದ ಅಮೆರಿಕೆಯ ಮೂಡಣ ಪಟ್ಟಣದೊಳಿಳಿಯುವ ಎನ್ನಾಸೆಗೆ
ಉದಕದಭಿಷೇಕ ಮಾಡಿ ಹಿನ್ನಡೆಗೆ ದೂಡಿ ಸಂತೋಷಿಸಿರ್ದ
ಅಮೆರಿಕೆಯ ಧೂತಾವಾಸಕೆ ಶಿರಸಾಷ್ಟಾಂಗ ಪ್ರಣಾಮ. 

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...