ಶನಿವಾರ, ಡಿಸೆಂಬರ್ 28, 2019

ಬ್ರಹ್ಮನಿಗೂ ಬಿದಿರಿಗೂ ಮುಖಾ-ಮುಖಿ

ಬಿದಿರು ಒಮ್ಮೆ ಬ್ರಹ್ಮನಿಗೆ ಎದುರಾಯ್ತಂತೆ, ಬ್ರಹ್ಮನ ಕುರಿತು ಮಾತಾಡಿತಂತೆ.

ಬಿದಿರು : ಅಯ್ಯಾ, ಬೇಕಾಗಿತ್ತೇ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ. ಎಲ್ಲ ಮರಗಳಂತೆ ನಾನು ಹಣ್ಣುಗಳಿಂದ ತುಂಬಿ ತೊನೆಯಲಿಲ್ಲ, ಋತುಮಾನಕ್ಕನುಗುಣವಾಗಿ ಹೂ ಬಿಟ್ಟು ಇತರರ ಕಣ್ಣಿಗೆ ಹಬ್ಬವುಂಟು ಮಾಡಲಿಲ್ಲ. ಅದೆಲ್ಲಾ ಹೋಗಲಿ ಕಡೇ ಪಕ್ಷ ಬಿಸಿಲು, ಮಳೆಯೆಂದು ಬಂದವರಿಗೆ ನೆರಳನ್ನೂ ಕೊಡಲಾಗಲಿಲ್ಲ. ಏಕೆ ಬೇಕಾಗಿತ್ತು ನನ್ನ ಈ ಪಾತ್ರ ನಿನ್ನ ಸೃಷ್ಟಿಯೊಳಗೆ.

ಬ್ರಹ್ಮ : ನಸು ನಗುತ್ತಾ, ಕಾಯಿ. ನಿನ್ನಷ್ಟಕ್ಕೆ ನೀನು ಬೆಳೆದು ನಿಂತಿರು. ನಿನ್ನ ಬೆಲೆ ನಿನಗೆ ತಿಳಿಯಲು ಸ್ವಲ್ಪ ಕಾಲವಾಗಬೇಕು.

ಬಿದಿರು : ಆಯಿತು.

ಬಿದಿರು ತಾಳ್ಮೆ ತಳೆಯಿತಂತೆ. ಸೊಂಪಾಗಿ ಬೆಳೆದು ನಿಂತಿತಂತೆ. ಮುಂದೆ ಬಿದಿರು ಏನಾಯಿತು ಗೊತ್ತೇ?

ತಾನು ತುಂಬಿ ತೊನೆಯದ ಹಣ್ಣುಗಳ ತುಂಬಿಡುವ ಬುಟ್ಟಿಯಾಯ್ತಂತೆ, ಬಟ್ಟೆಯ ಒಣಗಿಸುವ ಕೋಲಾಯ್ತಂತೆ, ಸುಮಂಗಲೆಯರು ಬಾಗಿನ ಕೊಡುವ ಮೊರವಾಯ್ತಂತೆ, ಶ್ರೀಕೃಷ್ಣನ ಕೈಲಿ ಕೊಳಲಾಯ್ತಂತೆ, ಹುಟ್ಟಿದ ಮಕ್ಕಳಿಗೆ ತೊಟ್ಟಿಲಾಯ್ತಂತೆ, ಹೊರಟು ನಿಂತ ಪುಣ್ಯಾತ್ಮರಿಗೆ ಚಟ್ಟವಾಯ್ತಂತೆ, ಬಡವರ ಗುಡಿಸಲಿಗೆ ಆಧಾರವಾಯ್ತಂತೆ, ನೇಗಿಲ ಯೋಗಿಯ ಕೈಯ ಬಾರುಕೋಲಾಯ್ತಂತೆ ಇನ್ನು ಏನೇನೊ ಆಗಿ ಎಲ್ಲ ಮರಗಳನ್ನು ಮೀರಿಸುವಂತೆ ಮನುಷ್ಯನ ಸೇವೆಯಲ್ಲಿ ತಲ್ಲೀನವಾಯ್ತಂತೆ.

ಬಿದಿರು ಅನಂತರ ಮನುಷ್ಯನಿಗೆ ಹೇಳಿತಂತೆ, ನೀನು ಯಾವ ಕಾರಣಕ್ಕೆ ಇಲ್ಲಿದ್ದೀಯೋ ಅದರ ಬಗ್ಗೆ ಚಿಂತಿಸದಿರು. ಸದ್ದರಿಯದೇ ಬೆಳೆದು ನಿಲ್ಲು, ನಂತರ ನಿನ್ನ ಬೆಲೆ ಎಷ್ಟೆಂದು ನಿನಗೆ ಅರ್ಥವಾಗುತ್ತದೆ ಎಂದು.

ಮೇಲಿನ ಬ್ರಹ್ಮ ಬಿದಿರಿನ ಸಂಭಾಷಣೆ, ಹಾಗು ಅದರ ನಂತರದಲ್ಲಿ ಬಿದಿರು ತಳೆದ ನಿಲುವು, ನಂತರ ಅದು ಜನಸೇವಕನಾದ ಬಗೆ ಎಲ್ಲವೂ ಕಾಲ್ಪನಿಕವೇ ಸತ್ಯ. ಆದರೆ ಈ ಕಾಲ್ಪನಿಕ ಸನ್ನಿವೇಶ ಮಾನವ ಕುಲಕ್ಕೆ ದಾಟಿಸುತ್ತಿರುವ ಪಾಠ ಅತಿ ದೊಡ್ಡದು. ಆತ್ಮವಿಶ್ವಾಸ ಬಡಿದೇಳಿಸುವ ಈ ಕಾಲ್ಪನಿಕ ಸನ್ನಿವೇಶ ಎಷ್ಟೋ ಕಮರುತ್ತಿರುವ, ಮರುಗುತ್ತಿರುವ ಮನಸ್ಸುಗಳಿಗೆ ದಾರಿ ದೀವಿಗೆಯಾದರೂ ಆಗಬಹುದು.

-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...