ಗುರುವಾರ, ಜುಲೈ 23, 2020

ಶೂನ್ಯದಿಂದೇಳಲು ಇರುವ ಮಾರ್ಗವೊಂದೇ

2009ರ ಜನವರಿಯಲ್ಲಿ ಇದ್ದಕಿದ್ದಂತೆ ಭಾರತದ ಹೃದ್ರೋಗ ತಜ್ಞರೊಬ್ಬರು ಭಾರತದ ದಿನ ಪತ್ರಿಕೆಗಳಲ್ಲಿ ಮಿಂಚಲಾರಂಭಿಸಿದರು. ಎಲ್ಲ ಸುದ್ದಿ ವಾಹಿನಿಗಳ ಕೆಲವು ದಿನಗಳ ಕೇಂದ್ರ ಬಿಂದು ಅವರಾಗಿದ್ದರು. ಅವರು ಮತ್ತಿನ್ಯಾರು ಅಲ್ಲ ಒಡಿಶಾದ ಡಾ.ರಮಾಕಾಂತ ಪಾಂಡೆಯವರು. ಅವರು ಅಷ್ಟೊಂದು ಪ್ರಸಿದ್ಧಿಗೆ ಬರಲು ಕಾರಣ ಅವರು ಅಂದಿನ ಭಾರತದ ಪ್ರಧಾನ ಮಂತ್ರಿ ಡಾ.ಮನ್ ಮೋಹನ್ ಸಿಂಗ್ ಅವರ ಹೃದಯ ಶಸ್ತ್ರ ಚಿಕಿತ್ಸೆಯ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದು. 

ಅದಾದ ತರುವಾಯು ಭಾರತದ ಹೈ ಪ್ರೊಫೈಲ್ ಮಂದಿಗೆಲ್ಲ ಹೃದ್ರೋಗ ವಿಚಾರದಲ್ಲಿ ಖಾಯಂ ವೈದ್ಯರಂತಾಗಿ ಹೋದರು ಅವರು. ಆ ಸಮಯಕ್ಕೆ ಭಾರತದ ಎಷ್ಟೋ ವೃತ್ತ ಪತ್ರಿಕೆಗಳು ಅವರ ಕುರಿತಾಗಿ ಲೇಖನಗಳನ್ನ ಬರೆದು ಪ್ರಕಟಿಸಿದ್ದವು. 

ಡಾ.ಮನ್ ಮೋಹನ್ ಸಿಂಗ್ ಅವರೊಂದಿಗೆ ಡಾ.ರಮಾಕಾಂತ್ ಪಾಂಡಾ
ಡಾ.ಮನ್ ಮೋಹನ್ ಸಿಂಗ್ ಅವರೊಂದಿಗೆ ಡಾ.ರಮಾಕಾಂತ್ ಪಾಂಡಾ

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ, ಮಿತವಾದ ಹಣಕಾಸು ವ್ಯವಸ್ಥೆಯ ಮಧ್ಯಮ ಕುಟುಂಬದ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ರಮಾಕಾಂತರು ತಮ್ಮೂರಿನಲ್ಲಿ ಶಾಲೆಯಿಲ್ಲದೆ ಎರಡು ಮೈಲಿ ದೂರದ ಶಾಲೆಗೆ ನಡೆದುಕೊಂಡೇ ಹೋಗಿ ಬರುತ್ತಾ ಇಡೀ ಭಾರತವೇ ಮೆಚ್ಚುವಂತಹ, ಪ್ರಧಾನಿಗಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡುವಂತಹ ಎತ್ತರಕ್ಕೆ ಬೆಳೆದಿದ್ದು ಅನೇಕ ಕಷ್ಟ ಕೋಟಲೆಗಳನ್ನು ಎದುರಿಸಿದ ನಂತರವೇ.  ಅವರ ಅನೇಕ ಕಷ್ಟ ಕೋಟಲೆಗಳ ಬಗ್ಗೆ ತಿಂಗಳಾನುಗಟ್ಟಲೆ ಪತ್ರಿಕೆಯಲ್ಲಿ ಬರುತ್ತಲೇ ಇತ್ತು. ಯಾವುದೋ ಮಾಧ್ಯಮದವರು ಅವರ ಮುಂದೆ ಮೈಕು ಹಿಡಿದು ಅವರ ಕಷ್ಟದ ಹಿನ್ನೆಲೆಯ ಬಗ್ಗೆ ವಿಚಾರಿಸಿದಾಗ 'ಎಲ್ಲರೂ ಕಷ್ಟ ಪಟ್ಟೇ ಮೇಲೇರಬೇಕು, ಇಲ್ಲದಿದ್ದರೆ ಅವರು ಏರಿದ ಸ್ಥಾನಕ್ಕೆ ಬೆಲೆಯೇ ಇರುವುದಿಲ್ಲ' ಎಂದುಬಿಟ್ಟರು. ತಾವು ಪಟ್ಟ ಕಷ್ಟವನ್ನು ಧಾರಾವಾಹಿಗಳಂತೆ ಮಸಾಲೆ ಬೆರೆಸಿ ಪ್ರದರ್ಶನಕ್ಕಿಟ್ಟು ಜನರ ಅನುಕಂಪ ಗಿಟ್ಟಿಸಿಕೊಂಡು ಟೋಪಿ ಹಾಕುತ್ತಿರುವರೇ ಹೆಚ್ಚಿರುವ ಈ ಯುಗಮಾನದಲ್ಲಿ ಡಾ.ಪಾಂಡಾ ಹೇಳಿದ ಈ ಮಾತು ಅತ್ಯಂತ ಮೌಲ್ಯ ಪಡೆದುಕೊಳ್ಳುತ್ತದೆ.

ಈ ವಿಚಾರವನ್ನಿಲ್ಲಿ ಪ್ರಸ್ತಾವನೆ ಮಾಡಲು ಕಾರಣವಿಷ್ಟೇ, ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಕೋವಿಡ್ ಗಲಾಟೆಗಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದದ್ದು ಡ್ರೋನ್ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಸ್ವಘೋಷಿತ ಯುವ ವಿಜ್ಞಾನಿ ಪ್ರತಾಪ್ ಅಲಿಯಾಸ್ ಡ್ರೋನ್ ಪ್ರತಾಪ್.

ಜರ್ಮನಿಯ ಹ್ಯಾನೋವರ್ ನಲ್ಲಿ ಅನ್ಯರ ಡ್ರೋನ್ ಜೊತೆಗೆ ಸ್ವಘೋಷಿತ ಯುವ ವಿಜ್ಞಾನಿ ಪ್ರತಾಪ್

ಜಪಾನು, ಜರ್ಮನಿಯಂತಹ ತಾಂತ್ರಿಕವಾಗಿ ಹೆಚ್ಚಿನ ತಾಂತ್ರಿಕ ನಿಷ್ಣಾತರಿರುವ ದೇಶಗಳಲ್ಲಿ ನಡೆಯುವ ವಿಜ್ಞಾನ, ತಂತ್ರಜ್ಞಾನ ಕೂಟಗಳಲ್ಲಿ ಪಾಲ್ಗೊಂಡು ಸ್ವರ್ಣ ಪದಕ ಗೆದ್ದಿರುವುದಾಗಿ, ಹಾಗು ಫ್ರಾನ್ಸ್ ನಂತಹ ದೇಶವೇ ಪೌರತ್ವ ಕೊಡಲು ಮುಂದಾಗಿಬಿಟ್ಟಿದೆ ಎನ್ನುವಂತಹ ಹಸಿ ಸುಳ್ಳುಗಳನ್ನು ಹೇಳುತ್ತಾ, ರಾಜ್ಯ ಹಾಗು ಕೇಂದ್ರ ಸರ್ಕಾರದ ಮಂತ್ರಿಗಳಾದಿಯಾಗಿ ಎಲ್ಲರಿಗೂ ಟೋಪಿ ಹಾಕಿದ್ದ ಪ್ರತಾಪನ ನಿಜವಾದ ಬಣ್ಣ ಬಟಾ ಬಯಲಾಗಿದೆ. ಈತನ ಬಣ್ಣ ಬಯಲಾದುದಕ್ಕೆ ಸಂತೋಷ ಪಡುವ ಅಗತ್ಯವೇನಿಲ್ಲ, ಆದರೆ ಅದೆಷ್ಟೋ ನವೋದಯ ಲೇಖಕರಿಗೂ, ವಿಜ್ಞಾನಿಗಳಿಗೂ, ಉದ್ಯಮಿಗಳಿಗೂ ಈತನ ಈ ಹಗರಣದಿಂದ ಅನುಮಾನ ಮೂಡುವ ಹಾಗಾಗಿದೆ. ಯಾರೇ ಸಹಾಯ ಯಾಚಿಸಿ ಬಂದರು ಅವರು ಒಂದು ಹೆಜ್ಜೆ ಹಿಂದೆ ಇಡಬೇಕಾದದಂತಹ ಪರಿಸ್ಥಿತಿ ಬಂದೊದಗಿದೆ. ನಂಬಿಸಿ ಟೋಪಿ ಹಾಕುವ ಪ್ರತಾಪನಂತಹವರ ಉದಾಹರಣೆ ಕಣ್ಣ ಮುಂದೆಯೇ ಇರುವಾಗ ಕೊಡುಗೈ ದಾನಿಗಳೂ ಹಿಂದೇಟು ಹಾಕುವುದು ಸಹಜ.

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಈ ಪ್ರತಾಪನ ಮೋಡಿಗಳನ್ನು ಬಯಲಿಗೆಳೆದಾಗಲೂ ಆತ ತಪ್ಪೊಪ್ಪಿಕೊಳ್ಳಲಿಲ್ಲ. ಬದಲಾಗಿ ಸುಳ್ಳುಗಳನ್ನು ಮುಚ್ಚಿಹಾಕಲು ಮತ್ತಷ್ಟು  ಸುಳ್ಳುಗಳನ್ನು ಒಂದಕ್ಕೊಂದು ಸೇರಿಸಿ ಹೆಣೆದ. ತಪ್ಪಾಗಿದ್ದೆ ಅಲ್ಲಿ. ಈ ಡಿಜಿಟಲ್ ಯುಗಮಾನದಲ್ಲಿ ಸುಳ್ಳುಹೇಳಬೇಕಾದರೆ ಭಾರಿ ಜ್ಞಾಪಕ ಶಕ್ತಿಯಿರಬೇಕು, ಇಲ್ಲದಿದ್ದರೆ ಜಗತ್ತಿನ ಎದುರು ಮಾನ ಹರಾಜಾಗುತ್ತದೆ ಎನ್ನುವುದಕ್ಕೆ ನಕಲಿ ವಿಜ್ಞಾನಿ ಪ್ರತಾಪನೇ ಬಿಸಿ ಬಿಸಿ ಉದಾಹರಣೆ.

ನಕಲಿ ಪ್ರಶಸ್ತಿಪತ್ರಗಳನ್ನು ಹಿಡಿದುಕೊಂಡೆ ಟಿ.ವಿ ಚಾನೆಲ್ ಒಂದಕ್ಕೆ ದೌಡಾಯಿಸಿದ ಆತ ಜೆರ್ಮನಿಯ ಯಾವುದೋ ಕಂಪನಿಯ ಡ್ರೋನ್ ಒಂದನ್ನು ತೋರಿಸಿ ಅದನ್ನು ತಾನೇ ಮಾಡಿದ್ದಾಗಿ ಘಂಟಾ ಘೋಷವಾಗಿ ಸಾರಿಬಿಟ್ಟ. ತನ್ನ ಸುಳ್ಳುಗಳೆಲ್ಲವೂ ಸತ್ಯವೆಂದು ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳಿದ. ನಡುನಡುವೆ ತಾನು ಉತ್ಪ್ರೇಕ್ಷೆಯಿಂದ ಕೆಲವು ಸಂಖ್ಯೆಗಳನ್ನು ತಪ್ಪಾಗಿ ಹೇಳಿರುವುದಾಗಿ ಒಪ್ಪಿಕೊಂಡ. 

ನಾಟಕದಲ್ಲಿ ಅಭಿನಯಮಾಡಿ ರೂಢಿಯಿರುವರಿಗೆ ಮೈಕು ಸಿಕ್ಕಿದ ತಕ್ಷಣ ಡೈಲಾಗುಗಳು ತನ್ನಿಂತಾನೇ ಜ್ಞಾಪಕ ಬಂದುಬಿಡುತ್ತವಂತೆ, ಪ್ರೇಕ್ಷಕರು ಕೇಳಲಿ ಬಿಡಲಿ ಅವರ ಡೈಲಾಗುಗಳಲ್ಲಿ ಅವರು ತಲ್ಲೀನರಾಗಿಬಿಡುತ್ತಾರೆ. ಈ ಪ್ರತಾಪನೂ ಅಂತಹುದೇ ಒಂದು ಮಿಕವಲ್ಲದೇ ಮತ್ತಿನ್ನೇನು ಅಲ್ಲ. ಮೈಕು ಸಿಕ್ಕ ತಕ್ಷಣ ತಾನು ಪಡದ ಕಷ್ಟಗಳೆನ್ನೆಲ್ಲ ಪಟ್ಟೇ ಎಂದು ಬಿಂಬಿಸಿಕೊಂಡ. ಜನರ ಚಪ್ಪಾಳೆಗಳಿಗೆ ಮಾರುಹೋದ ಅವನು ಭಾರಿ ಸುಳ್ಳುಗಳನ್ನೇ ಹೇಳಿ ಮುಗಿಸಿದ. ಪೂರ್ವಾಪರ ಯೋಚಿಸದ, ತನಿಖೆ ಮಾಡದ ನಮ್ಮ ಜನ ಅವನನ್ನ ಬಿಗಿದಪ್ಪಿಕೊಂಡರು. ಎಷ್ಟೋ ಜನ ತಮ್ಮ ಮಕ್ಕಳಿಗೆ ಅವನ ಉದಾಹರಣೆ ಕೊಟ್ಟು ಬೈದದ್ದೂ ಉಂಟು. ಅಂದು ಪ್ರತಾಪನ ಉದಾಹರಣೆ ಕೊಟ್ಟು ಬೈದಿದ್ದವರೇ ಇಂದು ಅವನಂತಹ ಮಗ ಹುಟ್ಟದಿರುವುದು ನಮ್ಮ ಪುಣ್ಯ ಎಂದು ನಿಟ್ಟುಸಿರು ಬಿಡುತ್ತಿರುವುದೂ ಸುಳ್ಳಲ್ಲ.

ಈತ ಈಗ ಸಮಾಜಕ್ಕೆ ದಾಟಿಸುವ ಒಂದು ಕೆಟ್ಟ ಪರಿಪಾಠ ಮುಂದೆ ಯಾರು ಯಾರನ್ನೂ ನಂಬಲಾರದಂತಹ ಪರಿಸ್ಥಿತಿ ಸೃಷ್ಟಿ ಮಾಡಬಲ್ಲುದು. ತಮ್ಮ ಕಷ್ಟವನ್ನು ಪ್ರದರ್ಶನಕ್ಕಿಟ್ಟರೆ ನಮ್ಮನ್ನು ನಂಬುವ ಬಹಳ ಮಂದಿ ನಮ್ಮ ಸುತ್ತ ಮುತ್ತ ಇದ್ದಾರೆ ಎನ್ನುವುದು ಹಲವರ ಗಮನಕ್ಕೆ ಬಂದಿದೆ. ಅದರ ಜೊತೆಗೆ ಕಷ್ಟವೆಂದು ಹೇಳಿಕೊಂಡು ಬಂದವರನ್ನು ಪೂರ್ವಾಪರ ವಿಚಾರಣೆಗಳಿಲ್ಲದೆ ನಂಬಬಾರದೂ ಎನ್ನುವ ಅರಿವೂ ಬಂದಾಗಿದೆ. ಇದರ ಜೊತೆಗೆ ಡಾ.ರಮಾಕಾಂತ ಪಾಂಡಾ ಅವರು ಹೇಳಿದಂತೆ ಶೂನ್ಯದಿಂದೇಳಲು ಕಷ್ಟಪಡುವುದೊಂದೇ ಇರುವ ಮಾರ್ಗ. ಅದನ್ನು ಬಿಟ್ಟು ಬೇರೆ ಯಾವ ಮಾರ್ಗವೂ ಇಲ್ಲ. ಹಾಗೇನಾದರೂ ಅನ್ಯ ಮಾರ್ಗವೊಂದು ಯಾರಿಗಾದರೂ ಸಿಕ್ಕಿದ್ದೇ ಆದರೆ ಅದು ಬಹು ಕಾಲ ನಿಲ್ಲಬಲ್ಲ ಮಾರ್ಗವಾಗಿರುವುದಿಲ್ಲ. ಅದರಲ್ಲಿ ನಮ್ಮ ನಕಲಿ ವಿಜ್ಞಾನಿ ಪ್ರತಾಪ್ ಆಯ್ದುಕೊಂಡದ್ದು ಮಾತಿನ ಮೋಡಿಯ ಮಾರ್ಗ, ಆ ಮಾರ್ಗಕ್ಕೆ ಸಿಕ್ಕ ಬಹುಮಾನವನ್ನು ನೀವೀಗಾಗಲೇ ನೋಡಿದ್ದೀರಲ್ಲ! 

-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...