ಶುಕ್ರವಾರ, ಜೂನ್ 18, 2021

ಧರ್ಮಶ್ರೀ - ಧರ್ಮ ಸಮನ್ವಯ

'ಧರ್ಮ' ಎನ್ನುವ ಪದ ಈಗ್ಗೆ ಕೆಲವು ವರ್ಷಗಳವರೆಗೂ ಆಧ್ಯಾತ್ಮಿಕ ಪದವಾಗಿತ್ತು. ದಾನಿಗಳಿರುವ, ಮಾನವೀಯತೆಯ ಪರವಿರುವ ವ್ಯಕ್ತಿಗಳ ಸುತ್ತ ಮುತ್ತ ಈ ಪದ ದಿನನಿತ್ಯ ಎಂಬಂತೆ ಕೇಳಿ ಬರುತ್ತಿತ್ತು. ಆದರೆ ತೀರಾ ಇತ್ತೀಚಿಗೆ ಅದು ಸಂಪೂರ್ಣವಾಗಿ ರಾಜಕೀಯ ಸರಕಾಗಿ ಹೋಗಿದೆ. ಧರ್ಮದ ವಿಚಾರವೆತ್ತಿದ ಯಾವನೇ ಆದರೂ ಅವನು ರಾಜಕೀಯ ಲಾಭಕ್ಕಾಗಿ ಮಾತಾಡುತ್ತಿದ್ದಾನೆ ಎನ್ನುವ ಪರಿಸ್ಥಿತಿ ಭಾರತ ದೇಶದೊಳಗೆ ನಿರ್ಮಾಣವಾಗಿದೆ. ದೇಶೀಯವಾಗಿ ಆ ಪದ ಕೇಳಿದಾಕ್ಷಣ ಮೂಗು ಮುರಿಯುವ ಇಲ್ಲವೇ ವಹಿಸಿಕೊಂಡು ಕೆಲವು ಪಂಥಗಳಿಗೆ ಅಂಟಿಕೊಳ್ಳುವ ಜಾಢ್ಯ ಬಹುತೇಕರಿಗೆ ಬಂದೊದಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನನ್ನ ಕೈಗೆ ಸೇರಿಕೊಂಡದ್ದು ಎಸ್.ಎಲ್.ಭೈರಪ್ಪನವರ 'ಧರ್ಮಶ್ರೀ' ಎನ್ನುವ ಕಾದಂಬರಿ. ಶ್ರೀಲಂಕಾ ಸಂಜಾತ ಆನಂದ ಕುಮಾರಸ್ವಾಮಿಯವರ ಪರಿಚಯ ಮಾಡಿಕೊಡುತ್ತಾ ಕಥೆಯೆಡೆಗೆ ತೆರೆದುಕೊಳ್ಳುವ ಧರ್ಮಶ್ರೀ ಹಿಂದೂ ಧರ್ಮದಲ್ಲಿರುವ ಕೆಲವು ಹುಳುಕುಗಳನ್ನು ತೆರೆದಿಡುತ್ತಲೇ ಭಾರತ ದೇಶದಲ್ಲಿ ಉಂಟಾಗುತ್ತಿದ್ದ ಮತಾಂತರ ಹಾಗೂ ಮತಾಂತರಗೊಂಡ ವ್ಯಕ್ತಿಗಳಲ್ಲಿ ಏರ್ಪಡುತ್ತಿದ್ದ ಸಾಂಸ್ಕೃತಿಕ, ಮಾನಸಿಕ ಸಂಘರ್ಷ - ಅದಕ್ಕೆ ಆಗಿನ ಸಮಾಜ ಪ್ರತಿಕ್ರಿಯಿಸುತ್ತಿದ್ದ ರೀತಿ, ಹಿಂದೂ ಧರ್ಮದಲ್ಲಿ ಚಳುವಳಿಗಳು ರೂಪುಗೊಂಡು ಹಿಂದೆ ಆಗದಿದ್ದ ಕೆಲವು ಕಾರ್ಯ ಯೋಜನೆಗಳನ್ನು ಜಾರಿ ಮಾಡುವ ಪ್ರಕರಣಗಳ ಜೊತೆಗೆ ಇಡೀ ಕಾದಂಬರಿ ಹರಿಯುತ್ತದೆ.
ನಮ್ಮ ಹಾಸನದ ಚನ್ನರಾಯಪಟ್ಟಣದ ಸಮೀಪದ ಹಳ್ಳಿಯೊಂದರ ಹುಡುಗ ಧರ್ಮಶ್ರೀಯ ಕಥಾ ನಾಯಕ ಸತ್ಯ ಅಲಿಯಾಸ್ ಸತ್ಯನಾರಾಯಣ. ಭೌದ್ಧಿಕವಾಗಿ, ಶಾರೀರಿಕವಾಗಿ ಸಬಲನಾಗಿ ಬೆಳೆಯುತ್ತಿದ್ದ ಹುಡುಗನಿಗೆ ಊರಿನ ಹುಡುಗರೊಂದಿಗೆ ಸೇರಿ ಗುಂಪುಗಾರಿಕೆ ಮಾಡುತ್ತಾ ರಾಜ, ಸೇನಾಧಿಪತಿಯೆಂದು ವಿಂಗಡಿಸಿಕೊಂಡು ಇನ್ನೊಂದು ಗುಂಪಿನೆದುರು ತನ್ನ ಪರಾಕ್ರಮವನ್ನು ತೋರಿಸಿಕೊಳ್ಳುವ ಖಯಾಲಿರುತ್ತದೆ. ಹುಡುಗಾಟಿಕೆ ಆತನ ವಿದ್ಯೆಗೆಲ್ಲಿ ತೊಂದರೆ ಮಾಡುತ್ತದೋ ಎನ್ನುವ ಭಯದಿಂದ ಹುಡುಗನ ತಾಯಿ ತನ್ನ ಮಗನನ್ನು ಸ್ವಲ್ಪ ಕಟುವಾಗಿದ್ದ ತನ್ನ ಅಣ್ಣನ ಮನೆಗೆ ಓದುವ ಸಲುವಾಗಿ ಕಳುಹಿಸುತ್ತಾಳೆ. ಆತ ತನ್ನ ಸೋದರ ಮಾವನ ಮನೆಯಲ್ಲಿ ಉಳಿದುಕೊಂಡು ಓದುವುದಕ್ಕೆ ಶುರುವಿಟ್ಟುಕೊಂಡ ಮಧ್ಯೆಯೇ ಆತನ ತಾಯಿ ಪ್ಲೇಗ್ ವ್ಯಾಧಿಗೆ ಬಲಿಯಾಗುತ್ತಾಳೆ. ಪ್ಲೇಗ್ ಎನ್ನುವುದು ಅಂಟುಜಾಢ್ಯವಾದ್ದರಿಂದ ಆತನ ತಾಯಿಯ ಅಂತ್ಯ ಸಂಸ್ಕಾರಕ್ಕೆ ಹೋಗುವುದಕ್ಕೂ ಆತನಿಗೆ ತಡೆ ಬೀಳುತ್ತದೆ. ಅನಂತರ ಕ್ರಮೇಣವಾಗಿ ಆತ ತನ್ನ ಹುಟ್ಟೂರನ್ನೇ ಮರೆಯುತ್ತಾ ಓದುವುದರಲ್ಲಿ, ಆಟೋಟಗಳಲ್ಲಿ ಮೈ ಮರೆಯುತ್ತಾನೆ. ಆತನ ಸೋದರ ಮಾವ ಬರೀ ಕಠಿಣ ವ್ಯಕ್ತಿಯಾಗಿ ಮಾತ್ರವಿರಲಿಲ್ಲ, ತನ್ನದೇ ಊರಿನಲ್ಲಿ ಸಣ್ಣ ಸಣ್ಣ ಕಳ್ಳತನಗಳನ್ನು ಮಾಡುವ, ಜನರನ್ನು ಯಾಮಾರಿಸುವ, ಕಾರಣವಿಲ್ಲದೆ ಸತ್ಯನನ್ನು ತಾರಾಮಾರು ಬಡಿಯುವ ವ್ಯಗ್ರನೂ ಆಗಿರುತ್ತಾನೆ.

ಕುಂತರೊಂದು-ನಿಂತರೊಂದು ವದರುವ ಸೋದರ ಮಾವನ ಹೆಂಡತಿಯ ಅವತಾರವೂ ಸತ್ಯನಿಗೆ ಕ್ರಮೇಣ ಇರಿಸು ಮುರಿಸು ತರಿಸುತ್ತದೆ. ಅನಿಷ್ಟಕ್ಕೆಲ್ಲಾ ಶನೇಶ್ವರನೇ ಹೊಣೆ ಎನ್ನುವ ಆಕೆಯ ಧೋರಣೆ ಸತ್ಯನಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ದಿನ ಗಳೆಯುತ್ತಿದಂತೆಯೇ ಸತ್ಯ ತನ್ನ ಸೋದರ ಮಾವನ ಏಟಿಗೆ ಮಾಮೂಲಿನ ವ್ಯಕ್ತಿಯಾಗಿ ಹೋಗಿದ್ದ. ಆತನ ಮೈ ಮೇಲೆ ಸೋದರಮಾವನಿಂದ ಮೂಡುತ್ತಿದ್ದ ಏಟಿನ ಬಾಸುಂಡೆಗಳು ಅವನನ್ನು ಬಾಧಿಸುವುದಕ್ಕಿಂತಲೂ ಅವನ ಮೇಷ್ಟರೊಬ್ಬರನ್ನು ಬಾಧಿಸಿಬಿಟ್ಟವು. ಹುಡುಗ ಆ ಕೂಪದಿಂದ ಪಾರಾದರೆ ಸಾಕೆಂಬ ಧೋರಣೆಯಿಂದ ಆ ಮೇಷ್ಟರು ಹುಡುಗನನ್ನು ತನ್ನ ಪರಿಚಯದ ಬೇರೆ ಊರಿನ ಮತ್ತೊಬ್ಬ ಮೇಷ್ಟರ ಮನೆಗೆ ಸಾಗಹಾಕಿ ಬಿಟ್ಟರು. ಹುಡುಗ ಸೋದರ ಮಾವನ ವ್ಯಗ್ರತೆಯಿಂದ ನುಣುಚಿಕೊಂಡಿದ್ದ. ಆ ನಡುವೆ ತನ್ನ ಹುಟ್ಟೂರಿನ ಬಗೆಗಿನ ಯೋಚನೆಗಳು ಬಂದರೂ ಅತ್ತ ತಲೆ ಹಾಕಲಿಲ್ಲ. ಕೆಲಸವಿಲ್ಲದೇ, ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳದೆ ವಿರಾಗಿಯಂತೆ ಊರೂರು ಅಲೆಯುತ್ತಿದ್ದ ತಂದೆಯ ಬಗೆಗೆ ಜ್ಞಾಪಕವಾದಾಗೆಲ್ಲ ಇರಿಸು ಮುರಿಸು ಉಂಟಾಗುತ್ತಿದ್ದ ಆತನ ತಂಗಿ ಹಾಗು ಅಜ್ಜಿ ಊರಿನಲ್ಲಿ ಇರುವ ಚಿಕ್ಕ ಹೊಲದ ಆದಾಯ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದರು. ತಾಯಿ ಸತ್ತ ನಂತರ ಕೆಲವು ಒಡವೆಗಳ ಸಮೇತ ಕಣ್ಮರೆಯಾದ ತಂದೆ ಎತ್ತ ಹೋದರೆಂದೂ ತಿಳಿಯದೆ ಸತ್ಯ ತನ್ನ ಓದಿನ ಕಡೆಗೆ ಗಮನ ಕೊಡುತ್ತಾನೆ. ಓದು-ಆಟೋಟಗಳು ಅವನ ವಯ್ಯಕ್ತಿಕ ಜೀವನದ ನೋವುಗಳನ್ನು ಅಷ್ಟು ಮರೆಸುತ್ತವೆ.

ಸೋದರಮಾವನ ಊರು ತೊರೆದು ಪರವೂರಿಗೆ ಹೋಗಿ ನೆಲೆ ನಿಂತ ಸತ್ಯನಿಗೆ ಅಲ್ಲಿನ ಅನ್ಯ ಜಾತಿಯ ಮೇಷ್ಟರ ಸಂಪೂರ್ಣ ಸಹಕಾರವಿರುತ್ತದೆ. ನೆಲೆ ನಿಲ್ಲಲು ಬಾಡಿಗೆಯ ರೂಮು, ಊಟಕ್ಕೆ ವಾರಾನ್ನ ಸಹಕಾರಿಯಾಗುತ್ತವೆ. ಉಪನಯನವೇ ಆಗದೆ ವಾರಾನ್ನ ಮಾಡುವುದು ಬ್ರಾಹ್ಮಣರಲ್ಲಿ ಕೂಡದೆಂತಲೂ, ಅದು ಅಧಾರ್ಮಿಕವೆಂತಲೂ ಆತನಿಗೆ ಆಹಾರವನ್ನು ನಿರಾಕರಿಸಲಾಗುತ್ತದೆ. ಸದಾ ಕಾಲ ತನ್ನ ಒಳಿತನ್ನೇ ಬಯಸುತ್ತಿದ್ದ ಅನ್ಯ ಜಾತಿಯ ಮೇಷ್ಟರ ಮನೆಯಲ್ಲಿ ಊಟ ಮಾಡುವ ಪ್ರಸಂಗ ಎದುರಾದಾಗ ಸತ್ಯನ ಮನಸ್ಸು ಮೊಟ್ಟ ಮೊದಲಿಗೆ ತಾಕಲಾಟಕ್ಕಿಳಿಯುತ್ತದೆ. ಅಂದು ಆರಂಭಗೊಂಡ ತಾಕಲಾಟ, ತುಮುಲಗಳು ಕಾದಂಬರಿಯ ಅಂತ್ಯದವರೆಗೂ ಒಂದಿಲ್ಲೊಂದು ವಿಚಾರಗಳಿಗೆ ಸತ್ಯನಿಗೆ ಬಂದು ತಾಗಿಕೊಳ್ಳುತ್ತವೆ. ಸಾಂಸ್ಕೃತಿಕ, ಮಾನಸಿಕ, ಧಾರ್ಮಿಕ ಘರ್ಷಣೆಯ ಆರಂಭವದು ಸತ್ಯನಿಗೆ. ಅಲ್ಲಿಯೇ ಅವನಿಗೆ ಕ್ರೈಸ್ತ ಹುಡುಗಿ ರಾಚಮ್ಮ ಪರಿಚಿತಳಾಗುತ್ತಾಳೆ ಆದರೆ ಜೊತೆಗೆ ಆ ಸುತ್ತಮುತ್ತಲ ಊರಿನಲ್ಲಿ ನಡೆಯುತ್ತಿದ್ದ ಕ್ರೈಸ್ತ ಮಿಷಿನರಿಗಳ ಕಾರ್ಯಗಳು ಸತ್ಯನ ಅರಿವಿಗೆ ಬರುವುದಕ್ಕೆ ತೊಡಗುತ್ತವೆ. ತನ್ನ ಮನದಲ್ಲೇ ಸತ್ಯನ ಅಭಿಮಾನಿಯಾಗಿದ್ದ ರಾಚಮ್ಮ ಆತನ ಮೈಕಟ್ಟು, ಬುದ್ಧಿವಂತಿಕೆ, ತರ್ಕ ಶೈಲಿ, ಹವ್ಯಾಸಗಳಿಂದ ಪ್ರಭಾವಿತಳಾಗಿರುತ್ತಾಳೆ. ದುರಾದೃಷ್ಟ, ಆ ಊರಿನಲ್ಲಿಯೂ ಸತ್ಯನಿಗೆ ಅನ್ನಕ್ಕೆ ತಾತ್ವಾರವಾಗುತ್ತದೆ. ಆತ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿಳಿಯುತ್ತಾನೆ.
ಮೈಸೂರಿಗೆ ಬಂದಿಳಿದು ಅನಾಥಾಲಯದಲ್ಲಿ ಊಟದ ವ್ಯವಸ್ಥೆಯಾಗಿ ಅನ್ನದ ಬರ ಸತ್ಯನಿಗೆ ತೀರುತ್ತದೆ, ಆದರೆ ಅನಾಥಾಲಯದಲ್ಲಿ ಪರಿಚಿತರಾದ ಕೆಲವು ರಾಷ್ಟ್ರ, ಧರ್ಮ ಪ್ರೇಮಿ ವ್ಯಕ್ತಿಗಳಿಂದ ವಿಚಾರವಂತಿಕೆಯ ಹಸಿವು ಶುರುವಾಗುತ್ತದೆ. ತನ್ನ ಶಿಕ್ಷಣದ ನಡುವೆಯೇ ಗ್ರಂಥ ಭಂಡಾರದಿಂದ ಅನೇಕ ಪುಸ್ತಿಕೆಗಳನ್ನು ತಂದು ಓದಿ ಹಿಂದೂ ಧರ್ಮದ ಬಗೆಗಿನ ತನ್ನ ದೃಷ್ಟಿಕೋನವನ್ನು ಇನ್ನಷ್ಟು ತೀಕ್ಷ್ಣಗೊಳಿಸಿಕೊಳ್ಳಲು ನಿಷ್ಕಲ್ಮಶ ಪ್ರಯತ್ನವನ್ನು ಸತ್ಯ ಮಾಡುತ್ತಾನೆ. ಸತ್ಯನಿಗೆ ಅನಾಥಾಲಯದಲ್ಲಿ ಪರಿಚಿತರಾದ ಆರ್.ಎಸ್.ಎಸ್. ವಿಚಾರ ಧಾರೆಗಳಿಂದ ಪ್ರಭಾವಿತರಾದ ಶಂಕರ ಒಂದು ರೀತಿಯಲ್ಲಿ ಸತ್ಯನ ಮಾನಸ ಗುರುವಾಗಿ ನಿಲ್ಲುತ್ತಾನೆ. ಆರ್.ಎಸ್.ಎಸ್ ನ ಪ್ರತಿಯೊಂದು ನೀತಿ ನಿಲುವುಗಳನ್ನು ಪ್ರಶ್ನೆ ಮಾಡುತ್ತಾ ಸತ್ಯ ಅದರ ವಿಚಾರಧಾರೆಗಳು ಶಂಕರನಲ್ಲಿ ಅತ್ಯಂತ ಬಲವಾಗಿ ಬೇರೂರಿರುವುದನ್ನು ಅರಿತುಕೊಳ್ಳುವ ಜೊತೆಗೆ ಆತನನ್ನು ಮಹಾ ಯಜ್ಞಕ್ಕೆ ತಯಾರಾದ ಒಬ್ಬ ಋಷಿಯಂತೆ ಕಾಣುತ್ತಾನೆ. ಶಂಕರನ ಹಾಗು ಆತನ ಅಣ್ಣ ರಾಮಣ್ಣನ ಸಹವಾಸ ಸತ್ಯನ ಹಿಂದೂ ಧರ್ಮ, ಸಂಸ್ಕೃತಿ ಅಧ್ಯಯನಕ್ಕೆ ಮತ್ತಷ್ಟು ಹುರುಪು ತುಂಬುತ್ತವೆ. ಅದು ಎಲ್ಲಿಯವರೆಗೂ ಎಂದರೆ ಮೈಸೂರಿನ ಪ್ರಮುಖ ಗಲ್ಲಿಯ ಕ್ರೈಸ್ತ ಮಿಷಿನರಿಯ ಸಭೆಗೆ ಹೋಗಿ ಅಲ್ಲಿನ ಸಭೆಯನ್ನು ಹತ್ತಿಕ್ಕುವವರೆಗೂ. ಮುಂದೆ ಅದೇ ಹಳ್ಳಿಯ ರಾಚಮ್ಮನ ಭೇಟಿ ಅನಿರೀಕ್ಷಿತವಾಗುತ್ತದೆ, ಆಕೆಯ ಗಂಡ ಸತ್ಯನಿಗೆ ಕಾಲೇಜಿನಲ್ಲಿ ಪಾಠ ಹೇಳುವ ಉಪಾಧ್ಯಾಯರಾಗಿರುತ್ತಾರೆ.ಬಾಲ್ಯದ ಗೆಳೆಯನೆಂಬ ಕಾರಣಕ್ಕೆ ರಾಚಮ್ಮನ ಮನೆಗೆ ಹೋಗಿ ಬರುತ್ತಲಿದ್ದ ಸತ್ಯನ ಕಡೆಗೆ ಅವರ ಮನೆಯಲ್ಲಿಯೇ ಆಗೊಮ್ಮೆ ಈಗೊಮ್ಮೆ ಸುಳಿದಾಡುತ್ತಿದ್ದ ಲಿಲ್ಲಿಯ ಕಣ್ಣು ಬೀಳುತ್ತದೆ. ಆರಂಭದಲ್ಲಿ ಹಿಂದೂ-ಕ್ರೈಸ್ತ ವಿಚಾರಧಾರೆಯ ವಾದಗಳಿಂದ ಅವರ ಮಾತು ಕಥೆಗಳು ಮುಗಿಯುತ್ತಿದ್ದರೂ ಬರ-ಬರುತ್ತಾ ಕ್ರೈಸ್ತಳಾದ ಲಿಲ್ಲಿಯ ಮನಃಪರಿವರ್ತನೆ ಶುರುವಾಗುತ್ತದೆ. ಹಿಂದೂ ಧರ್ಮವೆನ್ನುವುದು ಈ ನೆಲದ ಸಂಸ್ಕೃತಿಯೆನ್ನುವುದನ್ನು ಆಕೆ ಅರ್ಥ ಮಾಡಿಕೊಳ್ಳುವ ಮೊದಲೇ ಅವರ ಸ್ನೇಹ ಸಲುಗೆಗೆ ತಿರುಗಿ ಅದು ಪ್ರೀತಿಯೂ ಆಗಿ ಮೊಳೆತಿರುತ್ತದೆ.

ಒಬ್ಬರನ್ನು ಬಿಟ್ಟು ಒಬ್ಬರಿರಲಾರದ ಪ್ರೇಮ ಪಾಶಕ್ಕೆ ಸಿಲುಕುವ ಅವರಿಬ್ಬರೂ ಮದುವೆಯಾಗುವ ನಿರ್ವಾಹಕ್ಕೆ ಬರುತ್ತಾರೆ. ಹುಡುಗಿಯ ತಂದೆ ಶ್ರೀಮಂತ ವರ್ಗದವನಾದ್ದರಿಂದ ಹುಡುಗನೇ ಕ್ರಿಸ್ತಮತಕ್ಕೆ ಸೇರಿ ಹುಡುಗಿಯನ್ನು ಚರ್ಚಿನಲ್ಲಿ ಮದುವೆಯಾಗುತ್ತಾನೆ. ಆದರೆ ಹುಡುಗಿಯಾದ ಲಿಲ್ಲಿ ತನ್ನ ಸೌಭಾಗ್ಯದ ಖಣಿಯನ್ನೆಲ್ಲಾ ಸತ್ಯನಲ್ಲೇ ಕಾಣುತ್ತಾಳೆ. ಆತನಿಗಾಗಿ ಯಾವ್ಯಾವ ಮಹಾ ತ್ಯಾಗಕ್ಕೂ ಆಕೆ ಸಿದ್ದ.ಹಿಂದೂ ಯುವಕನಾಗಿದ್ದವನು ಕ್ರಿಸ್ತ ಮತಕ್ಕೆ ಬಂದು ಕ್ರೈಸ್ತ ಹುಡುಗಿಯನ್ನು ಮದುವೆಯಾದನೆಂದು ಕ್ರೈಸ್ತ ಮತದ ಶಾಲೆಯೊಂದರಲ್ಲಿ ಹೆಡ್ ಮೇಷ್ಟರ ವೃತ್ತಿ ಆ ಮತದ ಬಳುವಳಿಯಾಗಿ ಬರುತ್ತದೆ. ಒಲ್ಲದ ಮನಸ್ಸಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿಕೊಂಡಿದ್ದ, ಹೃದಯದಲ್ಲೇ ಹಿಂದೂ ಸಂಸ್ಕೃತಿಯ ಜ್ವಲಂತವನ್ನು ಹೊತ್ತಿಸಿಕೊಂಡ ಸತ್ಯ ವಿಪರೀತ ಮಾನಸಿಕ ತೊಳಲಾಟಕ್ಕೆ ಬೀಳುತ್ತಾನೆ. ಚರ್ಚಿನ ಬಿಷಪ್ಪರು ಹೊರಡಿಸುವ ಕಟ್ಟಪ್ಪಣೆಗಳಿಗೂ, ಸಮಾಜ ಆತನನ್ನು ನೋಡುವ ರೀತಿಯೂ ಬದಲಾದ ಮೇಲೆ ಪದೇ ಪದೇ ಖಿನ್ನತೆಗೊಳಗಾಗಿ ಅನಾರೋಗ್ಯದ ಪಶುವಾಗುತ್ತಾನೆ ಸತ್ಯ.ಸತ್ಯನ ಒಳ ಮನಸ್ಸಿನ ತುಮುಲಗಳನ್ನು ವಿಕ್ರಾಂತವಾಗಿ ಪತ್ತೆ ಮಾಡಿಬಿಡುತ್ತಿದ್ದ ಲಿಲ್ಲಿ ಸದಾ ಕಾಲ ಸತ್ಯನ ಮಾನಸ ಗುರುವಾದ ಶಂಕರನಿಗೆ ಪತ್ರ ಬರೆಯುತ್ತಾಳೆ. ಕ್ರೈಸ್ತ ಮತದಲ್ಲಿದ್ದುಕೊಂಡು ಸಾಂಸ್ಕೃತಿಕ ಘರ್ಷಣೆಗೆ ತನ್ನ ಮನಸ್ಸನ್ನು ಈಡು ಮಾಡಿಕೊಂಡು ದಿನೇ ದಿನೇ ಕೃಶವಾಗುತ್ತಿರುವ ಸತ್ಯ ಉಳಿಯಬೇಕಾದರೆ ಏನು ಮಾಡಬೇಕೆನ್ನುವುದನ್ನು ಅವಳೇ ಸೂಚ್ಯವಾಗಿ ಶಂಕರನಿಗೆ ಬರೆಯುತ್ತಾಳೆ. ಶಂಕರನ ಸಲಹೆಯ ಹಾಗು ತನ್ನ ಮನೋ ಇಚ್ಛೆಯ ಮೇರೆಗೆ ತನ್ನ ಸೌಭಾಗ್ಯದ ನಿಧಿಯನ್ನು ಉಳಿಸಿಕೊಳ್ಳಲು ಲಿಲ್ಲಿ ಸತ್ಯನ ಸಮೇತ ಆರ್ಯ ಸಮಾಜದ ಹೊಸ ಪದ್ಧತಿಯಂತೆ ಹಿಂದೂ ಧರ್ಮಕ್ಕೆ ಮರಳುತ್ತಾರೆ. ಕ್ಸೆವಿಯರ್ ಸತ್ಯದಾಸ ಆಗಿದ್ದ ಸತ್ಯ ಮೊದಲಿನ ಹಾಗೆ ಸತ್ಯನಾರಾಯಣನಾಗಿಯೂ, ಲಿಲ್ಲಿಯಾಗಿದ್ದ ಕ್ರೈಸ್ತ ಹುಡುಗಿ 'ಧರ್ಮಶ್ರೀ' ಯಾಗಿಯೂ ಹಿಂದೂ ಧರ್ಮಕ್ಕೆ ಮರಳಿ ಬರುತ್ತಾರೆ. ಅಲ್ಲಿಗೆ ಸತ್ಯನ ಮತಾಂತರ ಹಾಗು ಅದರ ನಂತರದ ಉಂಟಾದ ಸಾಂಸ್ಕೃತಿಕ ಸಂಘರ್ಷಗಳಿಗೆ ಪೂರ್ಣ ವಿರಾಮ ಬೀಳುತ್ತದೆ. ಕ್ರೈಸ್ತ ಶಾಲೆಯ ಹೆಡ್ ಮಾಸ್ಟರ್ ವೃತ್ತಿಗೆ ರಾಜಿನಾಮೆಯನ್ನು ಧರ್ಮಶ್ರೀಯೇ ಬರೆದು ಸಹಿಗಾಗಿ ಸತ್ಯನ ಮುಂದಿಟ್ಟಾಗ ಸತ್ಯನ ಹೊಸ ಬಾಳಿನ ಬಾಗಿಲು ತೆರೆಯುತ್ತದೆ. ಮುಂದಣ ಜೀವನದ ಸ್ಪಷ್ಟ ಪರಿಕಲ್ಪನೆ ಉಂಟಾಗಿ ಬಾಳನ್ನು ಬಾನೆತ್ತರಕ್ಕೆ ಕೊಂಡೊಯ್ಯಲು ಅಣಿಯಾಗುತ್ತಾನೆ.

ನಮ್ಮ ದೇಶದ ಸಕಲ ಸಂಪತ್ತನ್ನು ಲೂಟಿ ಹೊಡೆದು ನಮ್ಮನ್ನು ಕೃಶರನ್ನಾಗಿಸಿದ ವರ್ಗವೇ ಮನುಕುಲದ ಸೇವೆಯೆಂದು, ದೇವರ ರಾಜ್ಯ ದರ್ಶನ ಮಾಡಿಸುತ್ತೇವೆಂದು ಹೇಳುತ್ತಾ ನಮ್ಮ ಸಣ್ಣ ಸಣ್ಣ ಅಸಹಾಯಕತೆಗಳನ್ನೂ ಬಳಸಿಕೊಂಡು ಮತಾಂತರ ಮಾಡಿದ್ದು ಈ ದೇಶದ ದುರ್ವಿಧಿ.ಅದರೊಳಗೆ ಅವರದು ಮಾತ್ರವೇ ಪಾತ್ರವಿದೆ, ನಮ್ಮದೇನು ಇಲ್ಲ ಎನ್ನುವ ಹಾಗೂ ಇಲ್ಲ. ನಮ್ಮಲ್ಲಿಯೂ ಅನೇಕ ಹುಳುಕುಗಳಿದ್ದವು/ಇವೆ ಕೂಡ. ಅವುಗಳನ್ನು ಅವರು ಅನುಕೂಲ ಸಿಂಧು ಎನ್ನುವಂತೆ ಬಳಸಿಕೊಂಡು ಈ ನೆಲದ್ದಲ್ಲದ್ದ ಸಂಸ್ಕೃತಿಯನ್ನು, ನಡೆ ನುಡಿಯನ್ನು ಇತ್ತ ತಂದೆಸೆದರು ಅಷ್ಟೇ. ಆ ಮತಾತಂತರ ಸುಳಿಯೊಳಗೆ ಯಾವುದೋ ಕಾರಣಕ್ಕೆ ಸಿಲುಕಿಕೊಂಡ ಜೀವಗಳು ಪಡುವ ಪಡಿಪಾಟಲುಗಳು ಈ ಕಾದಂಬರಿಯ ಆದ್ಯಂತ ಹರಿಯುತ್ತವೆ. ಜೊತೆ ಜೊತೆಗೆ ಹಿಂದೂ ಧರ್ಮದಲ್ಲಿನ ಹುಳುಕುಗಳು, ಹಿಂದೂ ಜನರು ಜಾಗೃತರಾಗಬೇಕಾದ ಅಂಶ ಯಾವುದು ಎನ್ನುವತ್ತಲೂ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಕೆಲವೊಮ್ಮೆ ಪರೋಕ್ಷವಾಗಿ ಬೆಳಕು ಹರಿಯುತ್ತದೆ. ಮನುಷ್ಯನಲ್ಲಿ ಯಾವುದಕ್ಕೂ ಕೊರತೆ ಇರದಿದ್ದರೂ ಸಾಂಸ್ಕೃತಿಕ ಸಂಘರ್ಷವೊಂದು ಆತನನ್ನು ಕೃಶನನ್ನಾಗಿಸುತ್ತದೆ ಎನ್ನುವುದು ಮನುಷ್ಯ ತಾನು ಬೆಳೆದು ಬಂದ ದಾರಿಯಲ್ಲಿ ಸಂಸ್ಕೃತಿಯನ್ನು ಅದೆಷ್ಟರ ಮಟ್ಟಿಗೆ ಬಿಗಿಯಾಗಿ ತಬ್ಬಿ ಹಿಡಿದಿದ್ದನೆನ್ನುವುದನ್ನು ಸೂಚಿಸುತ್ತದೆ.ಆ ಹಿಡಿತ ಸ್ವಲ್ಪ ತಾಳ-ಮೇಳ ತಪ್ಪಿದರೂ ಮರಣ ಸದೃಶ ಜೀವನವೊಂದಕ್ಕೆ ತಾನು ಸಾಕ್ಷಿಯಾಗುತ್ತಾನೆ ಎನ್ನುವುದು 'ಧರ್ಮಶ್ರೀ' ನಮಗೆ ಪ್ರವಹಿಸುವ ಸಂದೇಶ.

-o-

ಭಾನುವಾರ, ಜೂನ್ 6, 2021

ಕಂಪನಿಯದೇ ಕಂಪನ

ಮೊನ್ನೆ ಮೊನ್ನೆ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನೋದುತ್ತಿದ್ದೆ. ೧೯೫೮ರಲ್ಲಿ ಉಂಟಾದ ಸಂಗ್ರಾಮಕ್ಕೆ ಬ್ರಿಟೀಷ್ ಅರಸೊತ್ತಿಗೆ ತಲೆಬಾಗದಿದ್ದರೂ ಸ್ವಲ್ಪ ಬೆದರಿಕೊಂಡಿದ್ದು ನಿಜ. ಆ ಕಾರಣಕ್ಕೆ ಸಂಗ್ರಾಮವನ್ನು ತಣ್ಣಗಾಗಿಸಲು 'ಕಂಪನಿ ಸರ್ಕಾರ'ದಿಂದ 'ಬ್ರಿಟೀಷ್ ರಾಜ್' ಸರ್ಕಾರದೆಡೆಗೆ ನಮ್ಮ ಪಯಣ ಎಂದು ಬ್ರಿಟೀಷ್ ದೊರೆಗಳು ಭಾರತದಲ್ಲಿ ಸಾರಬೇಕಾಯ್ತು. ಇದರಿಂದ ಭಾರತದ ಜನಾಂಗ ತೃಪ್ತಿಯನ್ನೇನು ಹೊಂದಲಿಲ್ಲವಾದರೂ ಹೊಸ ವ್ಯವಸ್ಥೆಯೊಂದರ ಪರಿಚಯವಾಗಲು ಆ ಘಟನೆ ನಾಂದಿಯಾಯಿತು. ಕಂಪನಿಯಿಂದಲೇ ಸಕಲ ಯುದ್ಧಗಳಾಗಿ ಭಾರತದ ಸಕಲ ಸಂಸ್ಥಾನಗಳು ಕಂಪನಿಯ ಪಾಲಾದ ತರುವಾಯು ಇಂಗ್ಲೆಂಡಿನ ಬ್ರಿಟೀಷ್ ದೊರೆಗಳು ನೇರವಾಗಿಯೇ ಈಸ್ಟ್ ಇಂಡಿಯಾ ಕಂಪನಿಗೆ ಲಗಾಮು ಬಿಗಿದು ಸರ್ಕಾರದ ಚುಕ್ಕಾಣಿಯನ್ನು ತಮ್ಮ ಕೈಗೆ ತೆಗೆದುಕೊಂಡರು. ಅಂದಿನಿಂದ ಇಂದಿನವರೆಗೂ ವಿವಿಧ ಕಂಪನಿಗಳು ಭಾರತದಲ್ಲಿ ಬಂದು ಹೋಗಿವೆ, ಕೆಲವು ಈಗಲೂ ಇವೆ. 'ಕಂಪನಿ' ಎನ್ನುವ ಪದ ಇಂಗ್ಲೀಷಿನವರ ಜೊತೆ ಭಾರತಕ್ಕೆ ಬಂತೆಂಬುದು ಮೇಲ್ನೋಟಕ್ಕೆ ನಮಗೆ ಅರಿವಿದ್ದೇ ಇದೆ. ಆದರೆ ಕಂಪನಿಯ ಸಂಸ್ಕೃತಿ ನಮ್ಮ ನಮ್ಮಲ್ಲಿ ಬದಲಾವಣೆ ತಂದೊಡ್ಡಿದ್ದು ಹೇಗೆ? ಅದು ಭಾರತದ ಸಕಲ ಸೊಡರುಗಳ ತುತ್ತಿನ ಚೀಲಕ್ಕೆ ಜೀವ ಸೆಲೆಯಾಗಿದ್ದು ಹೇಗೆ? ಎನ್ನುವ ವಿಚಾರಗಳೆಲ್ಲಾ ಸಂಶೋಧನಾ ಪ್ರಬಂಧಗಳಾಗಬೇಕಾಗಬಹುದು. ತೀರಾ ಚಿಕ್ಕದೆನ್ನಿಸುವ ಈ ವಿಚಾರ ಅಷ್ಟೊಂದು ಧೀರ್ಘ ಹಾಗು ಅದರ ಪರಿಣಾಮಗಳು ದೇಶಿಯ ಹಣಕಾಸು ವ್ಯವಸ್ಥೆಯ ಮೇಲೆ ನೇರಾ ನೇರವಾಗಿಯೇ ಉಂಟಾಗುತ್ತಾ ಸಾಗುತ್ತವೆ.

ವ್ಯಾಪಾರದ ಕಂಪನಿಯಾಗಿ ಪಶ್ಚಿಮದೇಶಗಳಿಂದ ಭಾರತಕ್ಕೆ ಬಂದಿಳಿದ ಕಂಪನಿಗಳು ತಮ್ಮೊಡನೆ ಸಂಸ್ಕೃತಿಯೊಂದನ್ನು, ವ್ಯವಹಾರ ಸಿದ್ಧಾಂತವೊಂದನ್ನೂ ಹೊತ್ತುಕೊಂಡು ಬಂದವು. ಅಲ್ಲಿಯವರೆಗೂ ಭಾರತದಲ್ಲಿ ತಂಡ ತಂಡ ವಾಗಿ ಒಂದಿಲ್ಲೊಂದು ಊರಿಗೆ ಹೋಗಿ ಮಾಡುವ ಯುದ್ಧಗಳು, ಕಲಾ ಸೇವೆಗಳು, ಸಂತೆ-ಮಾರುಕಟ್ಟೆಗಳು ಇದ್ದವೇ ಹೊರತು ನಿಯಮಗಳನ್ನು ಮೈಗೂಡಿಸಿಕೊಂಡು ಶಿಸ್ತುಬದ್ಧವಾದ, ಕ್ರಮವಾದ ವ್ಯವಹಾರ ಸಿದ್ಧಾಂತಗಳನ್ನು ಹೊಂದಿ ಒಂದು ತಂಡವಾಗಿ ಕೆಲಸ ಮಾಡುವ ವ್ಯಾವಹಾರಿಕ ಸಂಸ್ಥೆಗಳು ಇಲ್ಲವೆಂದು ತೋರುತ್ತದೆ. ಬಹುಶಃ ಇದ್ದರೂ ಭಾರತ ಉಪಖಂಡದಾದ್ಯಂತ ಹಾಗೆ ಇದ್ದಿತು ಎನ್ನುವುದಕ್ಕೆ ಪ್ರಬಲ ಸಾಕ್ಷಿ ಪುರಾವೆಗಳು ಇಲ್ಲವಷ್ಟೆ. ಭಾರತೀಯ ಆಡಳಿತೆಯಲ್ಲಿ ಸಿರಿವಂತಿಕೆ ನೋಡಿ ಮಣೆ ಹಾಕುವ ಕಾಲ ದೂರಾಗಿ, ನೇಮಿತ ಅಧಿಕಾರಿಗಳ ಮೂಲಕ ರಾಜ ಪ್ರಭುತ್ವವನ್ನು ಸ್ಥಾಪಿಸುವ ಹಾಗು ರಾಜಸ್ವಕ್ಕಾಗಿ ಅಧಿಕಾರಿಗಳನ್ನೇ ಬಳಸಿಕೊಳ್ಳುವ ರಿವಾಜು ಮೊಘಲರ ಕಾಲದಲ್ಲೇ ಬೇರೂರಲು ಆರಂಭವಾಗಿದ್ದು ಭಾರತೀಯರಿಗೆ ಕಂಪನಿ ಸಂಸ್ಕೃತಿಗೆ ಒಗ್ಗಿಕೊಳ್ಳಲು ವರದಾನವಾಗಿರಬೇಕು.

ಬ್ರಿಟೀಷರು ದಕ್ಷಿಣ ಭಾರತದ ಮೂಲಕ ಒಳ ನುಗ್ಗಲು ಸಮರ್ಥರಾದರೂ ಉತ್ತರದ ಗಂಗಾ ಮುಖಜ ಭೂಮಿ ಅವರಿಗೆ ಹೆಚ್ಚು ಮಾನವ ಸಂಪನ್ಮೂಲ ಹಾಗು ಪ್ರಾಕೃತಿಕ ಸಂಪನ್ಮೂಲಗಳನ್ನು ಒದಗಿಸಿಕೊಟ್ಟಿತು. ಅದೇ ಕಾರಣಕ್ಕೆ ಬಂಗಾಳ ಬ್ರಿಟೀಷರ ಆರಂಭಿಕ ಕಾರ್ಯ ಸ್ಥಾನವಾಯಿತು. ಈಸ್ಟ್ ಇಂಡಿಯಾ ಕಂಪನಿಯ ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದರೂ ಕಂಪನಿಯ ಕೆಲವು ದುರಾಲೋಚನೆ ಮಾಡುವ ವ್ಯಕ್ತಿಗಳಿಂದ ವ್ಯತಿರಿಕ್ತವಾಯಿತು. ಕಂಪನಿಯು ಸ್ಥಳೀಯ ಸರ್ಕಾರಕ್ಕೆ(ಬಂಗಾಳದ ನವಾಬನ ಸರ್ಕಾರಕ್ಕೆ) ಕೊಡುವ ಸುಂಕದಲ್ಲಿ ವಿನಾಯಿತಿ ಕೇಳಿತು, ವಿನಾಯಿತಿ ಕೊಡಲು ನೀವೇನು ನಮ್ಮ ಸೋದರ ಮಾವನ ಮಕ್ಕಳೇ?, ಬಾಯ್ಮುಚ್ಚಿಕೊಂಡು ಸುಂಕ ಕಟ್ಟಿ ಎನ್ನುವಂತಹ ಬಂಗಾಳದ ನವಾಬನ ವರ್ತನೆಗೆ ಕ್ರುದ್ಧರಾಗಿ ಇಂಗ್ಲೀಷರು ಸೇಡು ತೀರಿಸಕೊಳ್ಳಲು ನಿಲ್ಲುತ್ತಾರೆ. ಸ್ಥಳೀಯ ರಾಜಕೀಯ ಸನ್ನಿವೇಶಗಳನ್ನು ಬಳಸಿಕೊಂಡು ಬಂಗಾಳದ ನವಾಬನಿಗೂ ಆತನ ಸೇನಾಧಿಪತಿಗೂ ಕಿತಾಪತಿ ತಂದಿಟ್ಟು ಅಲ್ಲಿನ ಸರ್ಕಾರವನ್ನು ಕೆಡವಿ ತಾವೇ ಅಧಿಕಾರ ಗದ್ದುಗೆಗೇರುತ್ತಾರೆ. ವಿಧಿಯಿಲ್ಲದೇ ಅಂದಿನ ದೆಹಲಿಯ ಮೊಘಲ್ ಆಡಳಿತ ಉತ್ತರಾಧಿಕಾರಿಗಳಿಲ್ಲದ ಬಂಗಾಳಕ್ಕೆ ಕಂಪನಿಯೇ ಉತ್ತರಾಧಿಕಾರಿ ಎಂದು ಘೋಷಿಸುತ್ತದೆ. ತಮ್ಮದೇ ಅಧಿಕಾರದಲ್ಲಿ ಸುಂಕರಹಿತ ವ್ಯಾಪಾರ-ವ್ಯವಹಾರ ನಡೆಸಲು ಮೊದಲಾಗುವ ಕಂಪನಿ ಅಲ್ಲಿನ ಜನರ ಭೂ-ತೆರಿಗೆ ಸೇರಿ ಇನ್ನಿತರ ತೆರಿಗೆಯ ರುಚಿಯನ್ನು ನೋಡುತ್ತದೆ. ನಾಯಿಯೊಂದಕ್ಕೆ ಮನುಷ್ಯ ಮಾಂಸದ ರುಚಿ ಸಿಕ್ಕರೆ ಪದೇ ಪದೇ ಅದನ್ನೇ ಬಯಸುತ್ತದಂತೆ, ಅದಕ್ಕಾಗಿ ನೂರಾರು ಜನರನ್ನು ಕಡಿಯುತ್ತದಂತೆ ಆ ನಾಯಿ. ಅಂತಹುದೇ ಚಾಳಿಗೆ ಒಳಗಾದ ಈಸ್ಟ್ ಇಂಡಿಯಾ ಕಂಪನಿ ಸುತ್ತ ಮುತ್ತಲ ರಾಜ್ಯಗಳನ್ನು ನೊಣವಿಕೊಂಡಿದ್ದಲ್ಲದೆ ದೆಹಲಿಯ ಮೊಘಲ್ ಗದ್ದುಗೆಗೆ ಗುದ್ದು ಕೊಟ್ಟಿತು. ಅದಾದ ನಂತರ ಇಡೀ ಭಾರತ ಉಪಖಂಡದ ಸಂಸ್ಥಾನಗಳು ಪ್ರತ್ಯಕ್ಷವಾಗಿ, ಅಥವಾ ಪರೋಕ್ಷವಾಗಿ ಕಂಪನಿಯ ವ್ಯವಹಾರದಡಿಗೆ ಬಂದಿದ್ದು ಅನಂತರ ಮೊದಲ ಸಿಪಾಯಿ ದಂಗೆಯ ಫಲವಾಗಿ ಕಂಪನಿಯ ಲಂಡನ್ನಿನ ರಾಜ ಪ್ರಭುತ್ವ ನೇರವಾಗಿ ಭಾರತದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದ್ದು ಇದೀಗ ಇತಿಹಾಸ. ಬಹುಷಃ ಭಾರತದಷ್ಟು ಸಂಪನ್ಮೂಲಗಳನ್ನು ಬ್ರಿಟೀಷರ ದೇಶಕ್ಕೆ ವರ್ಗಾಯಿಸಿದಷ್ಟು ಇನ್ಯಾವ ವಸಾಹತು ದೇಶವೂ ವರ್ಗಾಯಿಸಿಲ್ಲ.

ಬ್ರಿಟೀಷ್ ಸರ್ಕಾರ ಭಾರತದಲ್ಲಿ ಅನುಷ್ಠಾನವಾದ ೧೯೫೮ರ ನಂತರ ಕಂಪನಿ ಎನ್ನುವುದು ಭಾರತದ ಸ್ಮೃತಿ ಪಟಲದಿಂದ ದೂರವೇನು ಉಳಿಯಲಿಲ್ಲ. ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳು ಹುಟ್ಟಕೊಂಡವು. ಭಾರತೀಯರ ಅಧಿಪತ್ಯದಲ್ಲೇ ನಡೆಯುವ ಕೈಗಾರಿಕೆ, ಮುದ್ರಣ ಮಾಧ್ಯಮ ಕಂಪನಿಗಳು ಹುಟ್ಟಿಕೊಂಡು ಅನೇಕರ ತುತ್ತಿನ ಚೀಲಕ್ಕೆ ಕಾರಣವಾದವು. ಅದಕ್ಕಿರುವ ಅತ್ಯಂತ ಉತ್ತಮ ಉದಾಹರಣೆ ಎಂದರೆ ಅದು ನಮ್ಮ ದೇಶದ 'ಟಾಟಾ' ಸಂಸ್ಥೆ. ಸಿಪಾಯಿ ದಂಗೆ ಮುಗಿದ ಒಂದೇ ದಶಕದಲ್ಲಿ ಕಂಪನಿ ಆರಂಭವಾಗಿ ದೇಶದಾದ್ಯಂತ ಈವತ್ತಿನ ಮಟ್ಟಿಗೆ ಬೆಳೆದು ನಿಂತಿರುವುದು ನೀವು ನಾವೆಲ್ಲಾ ಸಾಕ್ಷೀಕರಿಸಿಕೊಂಡಿರುವ ಸತ್ಯ.

ಸಂಗೀತ ವಿಚಾರದಲ್ಲಿ ಘರಾಣಗಳನ್ನು ಮಾಡಿಕೊಂಡು ಊರೂರು ತಿರುಗಿ ಕಚೇರಿಗಳನ್ನು ನೀಡುತ್ತಿದ್ದ ಸಂಗೀತ ತಂಡಗಳೂ ತಮ್ಮ ಹೆಸರನ್ನು ಕಂಪನಿಯಾಗಿ ಬದಲಿಸಿಕೊಂಡವು. ಇವೆಲ್ಲಕ್ಕಿಂತ ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಿಂದ ಇಪ್ಪತ್ತನೇ ಶತಮಾನದ ಬಹುಪಾಲು ಸುಮಾರು ೧೦೦-೧೨೦ ವರ್ಷಗಳ ಕಾಲ ಕನ್ನಡ ಸೀಮೆಯಲ್ಲಿ ಮೆರೆದದ್ದು ನಾಟಕದ ಕಂಪನಿಗಳು. ನಾಟಕದ ಕಂಪನಿಗಳು ಕನ್ನಡ ಸೀಮೆಯಲ್ಲಿ ಸಿನೆಮಾ ಪ್ರಪಂಚಕ್ಕಿಂತ ಮೊದಲು ನೆಚ್ಚಿಕೊಂಡಿದ್ದ ಮನೋರಂಜನಾ ಮಾಧ್ಯಮ. ಅಲ್ಲಿನ ಜೀವನ ಶೈಲಿ, ಕಷ್ಟ-ನಷ್ಟಗಳನ್ನು ಇಂದು ನಾವು ಹಲವರ ಜೀವನ ಚರಿತ್ರೆಗಳಿಂದ ತಿಳಿದುಕೊಳ್ಳಬಹುದು. ಕನ್ನಡ ವರನಟ ಡಾ.ರಾಜ್ ಕುಮಾರ್, ಗುಬ್ಬಿ ವೀರಣ್ಣನವರು, ಸುಬ್ಬಯ್ಯ ನಾಯ್ಡು, ಗುಡಿಗೇರಿ ಬಸವರಾಜರ ಜೀವನ ಚರಿತ್ರೆಗಳನ್ನೊಮ್ಮೆ ನೀವು ತಿಳಿದುಕೊಂಡರೆ ನಾಟಕ ಕಂಪನಿಯ ಸಂಸ್ಕೃತಿ ಆಗ್ಗೆ ಅನೇಕ ಕಲಾವಿದರಿಗೆ ಜೀವ ಸೆಲೆಯಾಗಿದ್ದು ಹೇಗೆ ಎನ್ನುವುದು ತಿಳಿದುಬರುತ್ತದೆ. ಪುಟ್ಟಣ್ಣ ಕಣಗಾಲರ ನಿರ್ದೇಶನದ 'ರಂಗನಾಯಕಿ' ಸಿನೆಮಾ ಕೂಡ ಇದೇ ಕಥಾ ಹಂದರದ್ದು. ಅದೊಂದು ಸಿನೆಮಾ ನಿಮಗೆ ನಾಟಕ ಕಂಪನಿಯ ಹಿಂದಿನ ನೋವು-ನಲಿವುಗಳನ್ನು ಕಟ್ಟಿಕೊಡುವಷ್ಟು ಸುಲಭವಾಗಿ ನಾನು ಇಲ್ಲಿ ಕಟ್ಟಿಕೊಡಲಾರೆನೇನೋ!. ಅವಶ್ಯವಾಗಿ ಆ ಸಿನೆಮಾವನ್ನು ನೋಡಿ, ನಾನಿಲ್ಲಿ ಬರೆಯುವುದಕ್ಕಿಂತ ಹೆಚ್ಚಿನ ವಿಚಾರ ವಿಶೇಷತೆ ನಿಮ್ಮೊಳಗೆ ಹರಿಯುತ್ತದೆ.

ಇನ್ನು ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ನುಗ್ಗಿದ ಭಾರತ ೧೯೯೧ರಲ್ಲಿ ತನ್ನ ಆರ್ಥಿಕ ನೀತಿಯಲ್ಲಿ ಸ್ವಲ್ಪ ಸಡಿಲಿಕೆ ಮಾಡಿಕೊಂಡು ಮುಕ್ತ ಮಾರುಕಟ್ಟೆಯೆಡೆಗೆ ನಡೆಯಿತು. ವಿದೇಶದ ಕಂಪನಿಗಳು ಭಾರತಕ್ಕೆ ದಾಂಗುಡಿಯಿಡಲು ಅದು ಕಾರಣವಾಯಿತಷ್ಟೆ. ಭಾರತದಲ್ಲಿ ಮಿತಿ ಮೀರಿ ಬೆಳೆಯುತ್ತಿದ್ದ ಜನಸಂಖ್ಯೆಗೆ ವಿಪರೀತ ಉದ್ಯೋಗದ ಅವಕಾಶಗಳನ್ನು ವಿದೇಶಿ ಕಂಪನಿಗಳು ಭಾರತದ ನೆಲದಲ್ಲೇ ಸೃಷ್ಟಿಸಿಕೊಟ್ಟವು. ಭಾರತೇತರ ದೇಶಗಳಲ್ಲಿ ಮಾನವ ಸಂಪನ್ಮೂಲ ಕೊರತೆ ಇಂದಿಗೂ ಇದೆ, ಒಂದಷ್ಟು ದೇಶಗಳು ಇದಕ್ಕೆ ಹೊರತಾಗಿರಬಹುದು, ಆದರೆ ಇಂದು ಭಾರತ ವಿಶ್ವದ ಅನೇಕ ರಾಷ್ಟ್ರಗಳಿಗೆ ತನ್ನ ನೆಲದಿಂದ ಮಾನವ ಸಂಪನ್ಮೂಲ ಒದಗಿಸುತ್ತಿರುವುದು ಸಾರುವುದೇನನ್ನು? ಕೆಲವೇ ದಶಕಗಳ ಹಿಂದೆ ಭಾರತಕ್ಕೆ ತಲೆ ನೋವಾಗಿದ್ದ ಜನಸಂಖ್ಯಾ ಏರಿಕೆ ಇದೀಗ ಭಾರತಕ್ಕೆ ವರದಾನವಾಗಿದ್ದು ಹೇಗೆ?

ವಿದೇಶಿ ಕಂಪನಿಗಳು ಭಾರತದ ಸರ್ಕಾರಿ ಸ್ವಾಮ್ಯವನ್ನು ಮೀರಿಸಿದಷ್ಟು ಜನರಿಗೆ ಭಾರತದ ಗಡಿಯ ಒಳಗೂ, ಹೊರಗೂ ಉದ್ಯೋಗ ಕೊಟ್ಟಿವೆ. ಆ ಮೂಲಕ ಭಾರತದ ಜನಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರೂ ಅದು ತಲೆ ನೋವಾಗದಂತೆ, ಬದಲಾಗಿ ಅದೇ ವರದಾನವಾಗುವಂತೆ ಬದಲಿಸಲಾಗಿದೆ. ಭಾರತ ಇಂದು ಪ್ರಪಂಚಕ್ಕೆ ಮಾನವ ಸಂಪನ್ಮೂಲ ಸರಬರಾಜು ಮಾಡುವ ಪ್ರಮುಖ ದೇಶವಾಗಿದೆ. ಕೆಲವು ಪೂರ್ವ ದೇಶಗಳೂ ಈಗೀಗ ಭಾರತದ ನಡೆ ಅನುಸರಿಸಿ ತನ್ನ ನೆಲದ ಮಾನವ ಸಂಪನ್ಮೂಲವನ್ನು ಬೌದ್ಧಿಕವಾಗಿ ಅಣಿಗೊಳಿಸಿ ಪಶ್ಚಿಮ ದೇಶಗಳೆಡೆಗೆ ಹೊರಡಿಸುತ್ತಿರುವುದು ನಾವಿಲ್ಲಿ ಗಮನಿಸಬೇಕಾದ ಅಂಶ.ಅದಷ್ಟೇ ಅಲ್ಲ, ನಮ್ಮ ಹಿಂದಿನ ತಲೆಮಾರಿನವರು ಯಾರು ಕಂಡಿರದಂತಹ ವಿಪರೀತ ಉದ್ಯೋಗಗಳು ಸೃಷ್ಟಿಯಾಗಿವೆ. ಹಿಂದೆಲ್ಲಾ ದಶಕಗಳ ಗಟ್ಟಲೆ ಒಂದೇ ಕಂಪನಿಯಲ್ಲಿ ದುಡಿದು ನಿವೃತ್ತರಾಗುತ್ತಲೋ ಅಥವಾ ತಮ್ಮ ಉದ್ಯೋಗ ಜೀವನದಲ್ಲಿ ಎರಡೋ ಮೂರು ಬಾರಿಯೋ ಉದ್ಯೋಗ ಬದಲಿಸುತ್ತಿದ್ದ ಕಾಲವೀಗ ಹೋಗಿ ವರ್ಷಕ್ಕೊಂದರಂತೆ ಉದ್ಯೋಗ ಬದಲಿಸುವ ಅವಕಾಶ ನಮಗೆಲ್ಲ ದಕ್ಕಿರುವುದು ಕಂಪನಿಗಳ ಕೃಪಾಶೀರ್ವಾದದಿಂದಲೇ. ಈ ಅವಕಾಶ ಮಾನವನ ಇತಿಹಾಸದಲ್ಲಿ ಇದೇ ಮೊದಲು ಎಂಬುದು ನಮಗೆ ಇನ್ನೂ ಖುಷಿ ಉಂಟು ಮಾಡಬಹುದು.ದೇಶದ ಒಳಗೂ ಹೊರಗೂ ಈ ಪರಿ ಉದ್ಯೋಗಗಳು ಸೃಷ್ಟಿಯಾಗಿರುವುದರಿಂದ ದೇಶಿಯ ಆರ್ಥಿಕ ವ್ಯವಸ್ಥೆ ಮೊದಲಿಗಿಂತಲೂ ಸುಧಾರಿಸಿಕೊಂಡಿದೆ. ಭಾರತ ಸರ್ಕಾರವೂ ೨೦ ಲಕ್ಷ ಕೋಟಿಗಿಂತಲೂ ಹೆಚ್ಚಿನ ಬಜೆಟ್ ಮಂಡನೆ ಮಾಡುವದಕ್ಕೆ ಹಿಡಿದು ಅದಾಗಲೇ ದಶಕ ಉರುಳಿರಬೇಕು!.

ಕಂಪನಿ ಸಂಸ್ಕೃತಿ ಭಾರತಕ್ಕೆ ಕಾಲಿಟ್ಟಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಈ ದೇಶದ ಜನರ ತುತ್ತಿನ ಚೀಲಕ್ಕೆ ಆಧಾರವಾಗಿವೆ. ಅವುಗಳ ಮಧ್ಯೆ ಮಧ್ಯೆ ಕೆಲವು ಅಹಿತಕರಗಳು ನಡೆದರೂ ಈ ದೇಶದ ಅನ್ನದ ಹಸಿವನ್ನು ತೀರಿಸಲು ಕಂಪನಿಗಳ ಪಾತ್ರವಿರುವುದನ್ನು ನಾವು ಮರೆಯುವಂತಿಲ್ಲ.ವರ್ತಮಾನ ಕಾಲದಲ್ಲೂ ಕೂಡ ಅತೀ ಹೆಚ್ಚು ಪಧವೀಧರರನ್ನು ಪ್ರತೀ ವರ್ಷ ಉತ್ಪಾದಿಸುತ್ತಿರುವ ಭಾರತಕ್ಕೆ ಉದ್ಯೋಗ ವಿಚಾರದಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿರುವುದು ಕಂಪನಿಗಳ ಅಸ್ತಿತ್ವವೇ.ಕಂಪನಿಗಳ ಈ ಕಂಪನ ಚಾಲ್ತಿಯಲ್ಲಿರುವವರೆವಿಗೂ ಮೊದಲಿನ ಹಾಗೆ ಅನ್ನಕ್ಕೇನು ಕೊರತೆಯಾಗಲಾರದು ಬಿಡಿ.

-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...