ಶನಿವಾರ, ಡಿಸೆಂಬರ್ 31, 2016

ಮಿನುಗು ತಾರೆಯ ಮರಣ ಪತ್ರ

ಕನ್ನಡ ನಾಡಿನಲ್ಲಿ  ಈವತ್ತು ಮಿನುಗು ತಾರೆ ಎಂದರೂ ನೆನಪಾಗುವುದು ನಟಿ ಕಲ್ಪನಾ ಮಾತ್ರ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಕಲ್ಪನಾ ಹೆಸರಿಗೆ ತಕ್ಕಂತೆ ಕನ್ನಡ ಚಿತ್ರ ಜಗತ್ತಿನಲ್ಲಿ ಕೆಲವೇ ಕೆಲವು ಕಾಲ ಮಿನುಗಿ ಮರೆಯಾಗಿ ಹೋದವರು.  ಕಲ್ಪನಾ ನಮ್ಮಿಂದ ಮರೆಯಾಗಿ ಇನ್ನೆರಡು-ಮೂರು ವರ್ಷಗಳಲ್ಲಿ ನಾಲ್ಕು ದಶಕ ಸಂದುಬಿಡಲಿದೆ. ಚಿತ್ರಗಳಲ್ಲಿ ಜನರೆಲ್ಲರೂ ತೆರೆಯ ಮೇಲೆ ಕಾಣುವಂತೆ ನಟಿಯ ನಿಜ ಜೀವನದಲ್ಲಿಯೂ ಹಲವು ಸಿನಿಮೀಯ ಘಟನೆಗಳು ನಡೆದು ಆಕೆಯನ್ನು ಮಾನಸಿಕವಾಗಿ ಝರ್ಜರಿತಳನ್ನಾಗಿ ಮಾಡಿ ಕೊನೆಗೊಂದು ದಿನ ಸಾವಿನ ಮನೆಯ ಅತಿಥಿಯಾಗಿದ್ದು ಇದೀಗ ದುರಂತ ಇತಿಹಾಸ. 

ಸಿನಿಮಾ ಹಾಗು ನಾಟಕ ರಂಗ ಎರಡನ್ನು ತೀರಾ ಹತ್ತಿರದಿಂದ ಬಲ್ಲ ಕಲ್ಪನಾರಿಗೆ ಮೇಲ್ನೋಟಕ್ಕೆ ಆರ್ಥಿಕ ತೊಂದರೆಗಳು ಭಾದಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನಿತರ ವಯಕ್ತಿಕ ತೊಂದರೆಗಳಿದ್ದರೂ ಅವುಗಳೆಲ್ಲವನ್ನೂ ನಿಭಾಯಿಸಿ ಅಭಿಮಾನಿಗಳೆದುರಲ್ಲಿ ಗಟ್ಟಿಗಿತ್ತಿ ಎನ್ನಿಸಿಕೊಳ್ಳಬಹುದಿತ್ತು. ಆ ಮೂಲಕ ತಮ್ಮ ಎಷ್ಟೋ ಅಭಿಮಾನಿಗಳ ಜೀವನದಲ್ಲೂ ಒಂದು ಮಾದರಿಯಾಗಿ ನಿಲ್ಲಬಹುದಿತ್ತು. ಆದರೆ ನಡೆದಿದ್ದು ಒಂದೂ ಹೀಗಿಲ್ಲವಲ್ಲ!!. ಬೆಳಗಾವಿಯ ಸಂಕೇಶ್ವರದ ಬಳಿಯ ಗೋಟೂರು ಪ್ರವಾಸಿ ಮಂದಿರದಲ್ಲಿ ನಾಟಕ ಪ್ರದರ್ಶನಗಳ ನಿಮಿತ್ತ ಉಳಿದುಕೊಂಡಿದ್ದ ಕಲ್ಪನಾ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ನಿಜ ಜೀವನದಲ್ಲಿಯೂ ದುರಂತ ನಾಯಕಿಯಾಗಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಲ್ಪನಾ ತಮ್ಮ ಕೈಲಿದ್ದ ವಜ್ರದ ಉಂಗುರ ವನ್ನು ಸುತ್ತಿಗೆಯಿಂದ ಕುಟ್ಟಿ ಪುಡಿ ಮಾಡಿ ಸೇವಿಸಿದ್ದು ಸಾವಿಗೆ ಕಾರಣ ಎಂದು ಉಲ್ಲೇಖಿತವಾಗಿದೆ. ಮರಣೋತ್ತರ ಪರೀಕ್ಷೆಯಲ್ಲೂ ಅದೇ ದೃಢ ಪಟ್ಟಿದೆ. ಆದರೆ ಕಲ್ಪನಾ ಚಿಕ್ಕಮ್ಮ ಪ್ರಕಾರ ಕಲ್ಪನಾ ರು ಸೇವಿಸಿದ್ದರೆನ್ನಲಾದ ವಜ್ರದುಂಗುರ ಅವರದೇ ಅಲ್ಲವಂತೆ.  ಮುಖದ ಮೇಲೆ ಆಗಿದ್ದ ಗಾಯವೂ ಅನುಮಾನಾಸ್ಪದವಾಗಿದ್ದು ಆ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕು ಎನ್ನುವುದು ಕುಟುಂಬ ಸದಸ್ಯರ ಆಗ್ಗಿನ ಬೇಡಿಕೆಯಾಗಿತ್ತಂತೆ. 

ಬೇಡಿಕೆಗಳು, ಹೇಳಿಕೆಗಳು, ಕೇಳಿಕೆಗಳು, ಮನವಿಗಳೂ ಏನೇ ಆದರೂ ಒಳ್ಳೆಯ ಹೆಂಡತಿಯಾಗಿ, ಪ್ರೀತಿಯ ಪತ್ನಿಯಾಗಿ, ಮಾನಸಿಕ ಅಸ್ವಸ್ಥೆಯಾಗಿ, ದೇವರೇ ಕೊಟ್ಟಂತಹ ತಂಗಿಯಾಗಿ, ಪೌರಾಣಿಕ ಪಾತ್ರಗಳಲ್ಲಿ ಐತಿಹಾಸಿಕ ಪಾತ್ರಗಳಲ್ಲಿ ಗತ ಕಾಲದ ಹೆಣ್ಣಾಗಿ ನಟಿಸಿ ಕನ್ನಡಿಗರ ಮನಸಿನೊಳಗೆ ಇಳಿದು ಆಯಾ ಪಾತ್ರಗಳ ಮೂಲಕವೇ ಜ್ಞಾಪಕದಲ್ಲಿದ್ದ ಕಲ್ಪನಾ ಅದಾಗಲೇ ಜೀವನ ರಂಗದಿಂದಲೂ ತೆರೆ ಮರೆಗೆ ಸರಿದು ಹೋಗಿಯಾಗಿತ್ತು. ಅಲ್ಲಿಗೆ ಕನ್ನಡಿಗರ ಕಲಾ ಪ್ರಚಾರಕಿಯೊಬ್ಬಳು ಕಲಾ ಪ್ರಪಂಚದಿಂದ ಬಹು ದೂರ ಪಯಣಿಸಿಬಿಟ್ಟಿದ್ದಳು. ಅಂದು ಕಲ್ಪನಾ ಜೀವನದಲ್ಲಿ ನಡೆದ ದುರಂತ ಬರೀ ಆಕೆಯ ಪಾಲಿಗೆ ದುರಂತವಾಗದೆ ಕನ್ನಡ ಚಿತ್ರರಂಗದ ಪಾಲಿಗೆ ದುರಂತವಾಗಿ ಹೋಗಿದ್ದು ಸುಳ್ಳಲ್ಲ.  

ಇಂತಹ ಮಿನುಗು  ತಾರೆ ತಮ್ಮ ಇಹಲೋಕ ಯಾತ್ರೆ ಮುಗಿಸುವ ಮೊದಲು ತಮ್ಮ ಕುಟುಂಬ ಸದಸ್ಯರಿಗೂ, ಪೊಲೀಸ್ ಅಧಿಕಾರಿಗಳಿಗೂ ಬರೆದ ಪತ್ರ ಎಲ್ಲೋ ಸಿಕ್ಕಿತು. ಅದನ್ನೇ ಯಥಾವತ್ತಾಗಿ ಸಾದರಿಸಿದ್ದೇನೆ.
                                                              ***  
ಅಮ್ಮ,
ನಿನ್ನೆನಿಮಗೆ 1,200 ರೂಪಾಯಿಗಳನ್ನು ಮನಿಯಾರ್ಡರ್ ಕಳುಹಿಸಿದ್ದೇನೆ.ಈವತ್ತು  300 ರೂಪಾಯಿಗಳ ಡ್ರಾಫ್ಟ್ ಅನ್ನು ಕಳುಹಿಸುತ್ತಿದ್ದೇನೆ. ನನ್ನ ಗಂಟಲು ನೋವಿನಿಂದ ಆಗಾಗ ನಾಟಕಗಳು ನಿಲ್ಲುತ್ತಾ ಇವೆ. ದೇವರೇ ನನ್ನ ಕಾಪಾಡಬೇಕು. ಬಾಬನಿಗೂ ಈವತ್ತು  400 ರೂಪಾಯಿಗಳನ್ನು ಕಳುಹಿಸುತ್ತಿದ್ದೇನೆ. ಮಿಕ್ಕ ಹಣವನ್ನು ಅವನಿಗೆ ಇನ್ನೆರಡುದಿನಗಳಲ್ಲಿ ಕಳುಹಿಸುತ್ತೇನೆ.

ನೀವೂ ಚಿಕ್ಕಮ್ಮ ಆರೋಗ್ಯವೆಂದು ನಂಬಿದ್ದೇನೆ. ಗಂಟಲಿನ ತೊಂದರೆ ಇಲ್ಲದಿದ್ದರೆ ಬೇರೆ ಎಲ್ಲ ವಿಚಾರಗಳಲ್ಲೂ ನಾನೂ ಆರೋಗ್ಯವಾಗಿದ್ದೇನೆ. ತಿಂಗಳ ಕೊನೆಯಲ್ಲಿ ಊರಿಗೆ ಬರುತ್ತೇನೆ. ಇಲ್ಲಿಂದ ಮುಂದೆ ಬಿಜಾಪುರ ಅಥವಾ ಜಮಖಂಡಿಗೆ ಹೋಗುತ್ತಿದ್ದೇವೆ. ಊರು ಸೇರಿದ ಮೇಲೆ ಪತ್ರ ಬರೆಯುತ್ತೇನೆ. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ.

                                                                                                     ಇಂತಿ ನಿಮ್ಮ ಮಗಳಾದ
                                                                                                                  ಕಲ್ಪನಾ.

                                                              ***
ಮಾನ್ಯ ಪೊಲೀಸ್ ಅಧಿಕಾರಿಗಳಿಗೆ,
ನಿಮಗೆ ನನ್ನ ಕೊನೆಯ ನಮಸ್ಕಾರಗಳು. ನನಗೆ ಹೋದಲ್ಲಿ ಬಂದಲ್ಲಿ ತಕ್ಕ ಕಾವಲು ಕೊಟ್ಟು ನನ್ನ ಗೌರವಕ್ಕೆ ತುಸು ಧಕ್ಕೆ ಬಾರದಂತೆ ಕಾಪಾಡಿದ ನಿಮಗೆ ಇದೋ ನನ್ನ ಅನಂತ ಕೃತಜ್ಞತೆಗಳು.

ನನ್ನ ಮುಖದ ಮೇಲಿರುವ ಗಾಯಗಳನ್ನು ನೋಡಿ ನೀವು ಆಶ್ಚರ್ಯ ಪಡಬಹುದು ಅಲ್ಲವೇ?. ನಿನ್ನೆ ನಾಟಕಕ್ಕೆ ಹೋಗುವಾಗ ಆಕಸ್ಮಿಕವಾಗಿ ಕಾರಿಗೆ ಅಡ್ಡ ಬಂದ ಹಸು ಕಾಪಾಡುವುದಕ್ಕಾಗಿ ಹಾಕಿದ ಸಡನ್ ಬ್ರೇಕ್ ನಿಂದಾಗಿ ನನ್ನ ಮುಖ ಎದುರಿನ ಸೀಟಿಗೆ ಬಡಿದು ಮುಖದಲ್ಲಿ ಗಾಯಗಳಾಗಿವೆ.

ಸಾವು, ನಿಜ. ಇದು ನಾನು ಸಂತೋಷದಿಂದ ಬರಮಾಡಿಕೊಂಡ ಸಾವು. ಇದಕ್ಕೆ ಯಾರೂ ಕಾರಣರಲ್ಲ.ಬದುಕು ಸಾಕೆನಿಸಿತು. ತೀರದ ನಿದ್ರೆಯಲ್ಲಿ ಮುಳುಗಿರಬೇಕೆನಿಸಿತು. ಇದು ನನ್ನ ಮನಸ್ಸಿಗೆ ಎಷ್ಟೋ ಆನಂದ, ನೆಮ್ಮದಿ, ಸುಖ ಸಂತೋಷಗಳನ್ನು ತಂದಿದೆ. ನಾನಿಂದು ಪರಮ ಸುಖಿ.

ನನ್ನ ಅಭಿಮಾನಿಗಳೆಲ್ಲರಿಗೂ, ಅಭಿಮಾನಿಗಳಲ್ಲದವರಿಗೂ ಇದೋ ನನ್ನ ಕೊನೆಯ ನಮಸ್ಕಾರ. ಜೀವನದಲ್ಲಿ ಏನೇನು ಮಾಡಿ ಮುಗಿಸಬೇಕೆಂದಿದ್ದೇನೋ ಅದನ್ನೆಲ್ಲ ದೇವರ ದಯದಿಂದ ಮಾಡಿ ಮುಗಿಸಿದ್ದೇನೆ. ಒಳ್ಳೆಯ ಉತ್ತಮವಾದ ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡುವ ಆಸೆ ಈವತ್ತು ನನ್ನ ಜೊತೆಯಲ್ಲಿಯೇ ಸಾಯುತ್ತಿದೆ. ದೈವೇಚ್ಛೆ !!!

ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಮದುವೆಗೋ ಮಸಣಕೋ
ಹೋಗೆಂದ ಕಡೆ ಹೋಗು
ಮಂಕುತಿಮ್ಮ.

                                                                                                                             -ಇತಿ

                                                                                                                                  ಕಲ್ಪನಾ

ಭಾನುವಾರ, ಡಿಸೆಂಬರ್ 18, 2016

ಅವರೂ ನಮ್ಮೊಳಗೊಬ್ಬರಾದರು

ಹತ್ತನೇ ಶತಮಾನದ ಆಸುಪಾಸಿಗೆ ಈಗಿನ ಇರಾನ್ ತನ್ನನ್ನು ಪರ್ಷಿಯಾ ಎಂದು ಕರೆಸಿಕೊಳ್ಳುತ್ತಿತ್ತು. ಝೋರೆಸ್ಟ್ರಿಯನ್ ಗಳು ಅಲ್ಲಿನ ಮುಖ್ಯ ಜನಾಂಗವಾಗಿ ಗುರುತಿಸಿಕೊಂಡಿದ್ದರು. ಮುಸ್ಲಿಂ ದೊರೆಗಳು ಕ್ರಮೇಣ ಪರ್ಷಿಯಾ ದೇಶವನ್ನು ಆಕ್ರಮಿಸಿಕೊಳ್ಳತೊಡಗಿದಾಗ, ಝೋರೆಸ್ಟ್ರಿಯನ್ನರು ಅವರ ಆಟಾಟೋಪಗಳನ್ನು ತಡೆಯದಾದರು. ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿ ಮುಸ್ಲಿಂ ಧರ್ಮವೊಂದೇ ಅತಿ ಶ್ರೇಷ್ಠ, ಕಂಡ ಕಂಡವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವುದು ಯಾರಾದರೂ ಅದಕ್ಕೆ ನಿರಾಕರಿಸಿದರೆ ಅವರನ್ನು ಮುಗಿಸಿಬಿಡುವಂತಹ ಪಕ್ಕಾ ಸಂಪ್ರದಾಯವಾದಿ ಮುಸ್ಲಿಂ ಜನಾಂಗ(ಎಲ್ಲ ಮುಸ್ಲಿಂ ಜನಾಂಗ ಹೀಗಿಲ್ಲ, ಈ ಹೇಳಿಕೆ ಕೇವಲ ಧರ್ಮಾಂದ ದೊರೆಗಳು ಹಾಗು ಅವರ ಅನುಯಾಯಿಗಳಿಗೆ  ಮಾತ್ರ ಅನ್ವಯಿಸುತ್ತದೆ.) ನಿಧಾನಕ್ಕೆ ಪರ್ಷಿಯಾ ದೇಶದಲ್ಲಿ ಬೀಡು ಬಿಡಲು ಆರಂಭಿಸಿತು.
ಅರಬ್ ದೊರೆಗಳ ಹಲವಾರು ದಾಳಿಗೆ ಮೂಲ ಪರ್ಷಿಯನ್ನರು ಪ್ರತಿರೋಧ ಒಡ್ಡಿದರೂ ಅದು ಮುಗಿಯದ ಕಥೆಯಾಗಿ ಹೋಯಿತು. ಈಗಿನಂತೆ ಆಗ ವಿಶ್ವಸಂಸ್ಥೆಯಿಲ್ಲ. ಸಹಾಯಕ್ಕಾಗಿ ಕೂಗಿದರೆ ಬಂದವರು ಮುಂದೊಂದು ದಿನ ಅವರೇ ವೈರಿಗಳಾಗಿ ಆ ದೇಶವನ್ನು ನುಂಗಿ ನೀರು ಕುಡಿಯುವ ಭಯವಂತೂ ಇದ್ದೇ ಇತ್ತು. ತಮ್ಮ ಗಡಿ ಉಲ್ಲಂಘಿಸಿ ಒಳನುಗ್ಗಲು ಯತ್ನಿಸುತ್ತಿದ್ದ ಅರಬ್ ದೊರೆಗಳನ್ನು ಝೋರೆಸ್ಟ್ರಿಯನ್ನರು ತಡೆದಿದ್ದು ಬರೋಬ್ಬರಿ 200 ವರ್ಷಗಳ ಕಾಲ.  ಈ ಸಮಯವನ್ನು 'ಪರ್ಷಿಯನ್ ಸಾಮ್ರಾಜ್ಯದ ಎರಡು ಶತಮಾನಗಳ ನಿಶ್ಯಬ್ದತೆ' ಎಂದೇ ವರ್ಣಿಸಲಾಗಿದೆ.
                                           ಕ್ರಿ.ಪೂ ೫೦೦ ರಲ್ಲಿ ಪರ್ಷಿಯಾ ಸಾಮ್ರಾಜ್ಯ

ಧರ್ಮಬದ್ಧರಾದ ಅಲ್ಲಿನ ಮುಸ್ಲಿಮರಿಂದ ವಿಪರೀತ ಹಾನಿಗೊಳಗಾದ ಝೋರೆಸ್ಟ್ರಿಯನ್ನರು ಕೆಲವಾರು ಜನ ಪ್ರಾಣಕ್ಕೆ ಹೆದರಿ ಮತಾಂತರವಾದರೂ, ಕೆಲವರು ದೇಶ ತೊರೆದು ಪೂರ್ವ ದೇಶಗಳತ್ತ ವಲಸೆ ಹೊರಟು ಹೋದರು. ಬರಗಾಲ, ದಾಳಿ, ಅಂಟುರೋಗಗಳಿಗೆ ಹೆದರಿ ಊರು ಬಿಡುತ್ತಿದ್ದ ಪ್ರಕರಣಗಳನ್ನು ಕೇಳಿದ್ದೇವೆ, ಆದರೆ ಧರ್ಮವೊಂದರ ಕಟ್ಟುಬದ್ಧತೆಗೆ ಬಲಿಯಾಗಿ ದೇಶ ಬಿಡುವ ಧೌರ್ಬಾಗ್ಯ ಝೋರೆಸ್ಟ್ರಿಯನ್ನರದ್ದಾಯಿತು. ಹಾಗಲ್ಲದಿದ್ದರೆ ಧರ್ಮಾಂತರವಾಗುವುದು, ಅದೂ ಇಲ್ಲದಿದ್ದರೆ ಪ್ರಾಣ ಬಿಡುವುದೊಂದೇ ಝೋರೆಸ್ಟ್ರಿಯನ್ ಸಮುದಾಯಕ್ಕೆ ಉಳಿದುಕೊಂಡ ಆಯ್ಕೆಗಳಾದವು. ಪರ್ಷಿಯಾ ದಿಂದ ಕಾಲ್ಕಿತ್ತು ಪೂರ್ವಕ್ಕೆ ಗುಳೇ ಹೊರಟ ಝೋರೆಸ್ಟ್ರಿಯನ್ನರಿಗೆ ಕಂಡಿದ್ದು ಸಿಂಧೂ  ನದಿಯಿಂದಾಚೆಗೆ ಹಿಂದೂ ಮಹಾ ಸಾಗರದ ವರೆವಿಗೂ ವಿಸ್ತಾರವಾಗಿ ಹರಡಿಕೊಂಡಿದ್ದ ಭಾರತ, ಕ್ಷಮಿಸಿ ಬರೀ ಭಾರತವಲ್ಲ 'ಅಖಂಡ ಭಾರತ'.

ಎಲ್ಲೆಲ್ಲೂ ಹಿಂದೂ ಮಹಾ ಸಂಸ್ಥಾನಗಳು, ರಾಜ್ಯಗಳು, ಪ್ರಜೆಗಳನ್ನು ಮಕ್ಕಳೆಂದುಕೊಂಡು ರಾಜೋಚಿತ ಜವಾಬ್ದಾರಿ ಮೆರೆದಿದ್ದ ಸಂಸ್ಥಾನಿಕ ರಾಜರು. ಎಲ್ಲೆಲ್ಲೂ ಸುಭೀಕ್ಷ ಆಡಳಿತ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಿಂದೂ ಧರ್ಮದ ಹೆಮ್ಮೆಯ ಸ್ಥಳಗಳು, ನೀರು ಕೇಳಿದರೆ ಮಜ್ಜಿಗೆಯನ್ನೇ ಕುಡಿದು ಊಟ ಮಾಡಿಕೊಂಡು ಹೋಗಿ ಎನ್ನುವಷ್ಟು ಸುಶಿಕ್ಷಿತ ಅತಿಥಿ ಸತ್ಕಾರ, ಅತಿಥಿಗಳೆಂದರೆ ಇನ್ನಿಲ್ಲದ ಭಕ್ತಿ. ತಮಗೆ ತೊಂದರೆ ಮಾಡಿಕೊಂಡು ಅತಿಥಿಗಳನ್ನು ಪೊರೆದ ಅದೆಷ್ಟೋ ಕಥೆಗಳು, ಶರಣು ಬಂದವರನ್ನು ರಕ್ಷಿಸದಿರುವುದು ಹೇಡಿತನದ ಸಂಕೇತವೆನ್ನುವುದು ರಾಮಾಯಣ ಕಾಲದಿಂದಲೇ ಎಲ್ಲಾ ಭಾರತೀಯ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಹೇಳಿಕೊಟ್ಟಿದ್ದ ಬುದ್ಧಿ. ಇಂತಹವೆಲ್ಲ ಇನ್ನು ಎಷ್ಟೆಷ್ಟೋ ಭಾರತೀಯತೆಯ ಆಂತರ್ಯದಲ್ಲಿ ಅಡಗಿಕೊಂಡು ಕುಳಿತುಬಿಟ್ಟಿವೆ. ಅಂತೂ ಅವನ್ನೆಲ್ಲ ಕಂಡು ಝೋರೆಸ್ಟ್ರಿಯನ್ನರು ಹಿಗ್ಗಿ ಹೋದರು. ಕಷ್ಟ ಕಾಲದಲ್ಲಿ ಭಾರತೀಯರು ಆಗಬಹುದೇನೋ ಎಂದು ಬಗೆದು ಬಂದಿದ್ದ ಅವರ ಅನಿಸಿಕೆ ಸುಳ್ಳಾಗಲಿಲ್ಲ. ಸಿಂಧೂ ನದಿ ದಾಟಿದ ಝೋರೆಸ್ಟ್ರಿಯನ್ನರು ಸಿಂಧೂ ಗೆ ಹೊಂದಿಕೊಂಡಂತೆಯೇ ಇದ್ದ ಈಗಿನ ಪಾಕಿಸ್ತಾನದ ಸಿಂಧ್ ಹಾಗು ಭಾರತದ ಗುಜರಾತ್ ಪ್ರಾಂತ್ಯಗಳಲ್ಲಿ ಬೀಡು ಬಿಡಲು ಆರಂಭಿಸಿದರು.

ಪರ್ಷಿಯಾ ದೇಶದಿಂದ ಬಂದಿದ್ದರಿಂದ ಇವರನ್ನು ಪರ್ಷಿಯನ್ನರು / ಪಾರ್ಸಿಗಳು ಎಂದು ಕರೆಯಲಾಯಿತು. ಅಂದಿನಿಂದ ಝೋರೆಸ್ಟ್ರಿಯನ್ ಎಂಬ ಹೆಸರಿಗೆ ಬದಲಾಗಿ ಪಾರಸೀ ಎಂಬ ಹೆಸರೇ ಈ ಜನಾಂಗಕ್ಕೆ ಅಂಟಿ ಹೋಯಿತು.

ಗುಜರಾತ್ ಪ್ರಾಂತದ ಆಗಿನ ಅರಸ ಜಾದಿ ರಾಣಾ ಪಾರ್ಸಿಗಳನ್ನು ಬರಮಾಡಿಕೊಂಡ ರೀತಿಯೇ ವಿಭಿನ್ನ. ರಾಣಾ ತನ್ನ ರಾಯಭಾರಿಯನ್ನು ಕರೆದು ಅವನಲ್ಲಿ ಒಂದು ಹಂಡೆಗೆ ಕಂಠ ಪೂರ್ತಿ ಹಾಲು ತುಂಬಿಸಿ ಅದನ್ನು ಆಗಷ್ಟೇ ಪ್ರಾಂತಕ್ಕೆ ಬಂದು ಬೀಡು ಬಿಡುತ್ತಿದ್ದ ಪಾರ್ಸಿಗಳಿಗೆ ಕಳುಹಿಸುತ್ತಾನೆ. ಸಾಂಕೇತಿಕವಾಗಿ ಅದರ ಅರ್ಥ ಇಲ್ಲಿ ನಮಗೆ ಜಾಗವಿಲ್ಲ ತುಂಬಿಕೊಂಡಿದ್ದೇವೆ ಇನ್ನು ನಿಮ್ಮನ್ನೆಲ್ಲಿ ಪೋಷಿಸಲು ಸಾಧ್ಯ ಎಂದು. ಆದರೆ ಬುದ್ಧಿವಂತಿಕೆಯಲ್ಲಿ ತೀಕ್ಷ್ಣಮತಿಗಳಾಗಿರುವ ಪಾರ್ಸಿಗಳು ತುಂಬಿದ ಹಂಡೆ ಹಾಲಿಗೆ ಮಣಗಟ್ಟಲೆ ಸಕ್ಕರೆ ಸುರಿದು 'ನಾವೂ ನಿಮ್ಮ ನಡುವೆ ಹೀಗೆ ಅಂದರೆ ಹಾಲಿನಲ್ಲಿ ಸಕ್ಕರೆ ಬೆರೆತಂತೆ ಬೆರೆಯುತ್ತೇವೆ' ಎಂಬ ಸಂದೇಶವನ್ನು ಕೊಟ್ಟು ಕಳುಹಿಸಿದರು. ನಡೆಯಿಂದ ಸಂತೋಷಭರಿತನಾದ ರಾಣಾ ಕೂಡಲೇ ತ್ವರೆ ಮಾಡಿ ಪಾರಸೀ ಪ್ರಮುಖರನ್ನು ಭೇಟಿಯಾಗಿ ಆತನ ಪ್ರಾಂತದಲ್ಲಿ ಇರಲು ಕೆಲವು ಷರತ್ತುಗಳನ್ನು ಹಾಕಿದನು. ಪಾರ್ಸಿಗಳು ಹಿಂದೂ ಮುಂದೂ ನೋಡದೆ  ಅವುಗಳನ್ನು ಒಪ್ಪಿಕೊಂಡರೂ ಕೂಡ
ಷರತ್ತುಗಳೆಂದರೆ,
1. ಅವರ ಧರಿಸಿನ ಶೈಲಿ ಮೂಲ ಪಾರಸೀ ಶೈಲಿಯನ್ನು ಹೋಲದೆ ಸ್ಥಳೀಯ ಶೈಲಿಯಿಂದ ಕೂಡಿರಬೇಕು.
2. ವ್ಯಾಪಾರವೇ ಪಾರಸೀಗಳ ಮುಖ್ಯ ಕಸುಬಾದ್ದರಿಂದ ಸ್ಥಳೀಯ ಭಾಷೆಯಾದ ಗುಜರಾತಿಯನ್ನು ಖಡ್ಡಾಯವಾಗಿ ಕಲಿತು ಅದರಲ್ಲೇ ವ್ಯವಹರಿಸಬೇಕು.
3.ಆಹಾರ ಪದ್ಧತಿ ಸ್ಥಳೀಯರಂತೆಯೇ ಇರಬೇಕು, ಗೋಮಾಂಸ ಮತ್ತಿರ ಆಹಾರ ವಿಧಗಳನ್ನು ವರ್ಜಿಸಬೇಕು.

ಅವನು ಹಾಕಿದ ಷರತ್ತುಗಳಿಗೆಲ್ಲ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡ ಪಾರ್ಸಿಗಳು ಇಂದಿಗೂ ದನದ ಮಾಂಸ ಮುಟ್ಟುವುದಿಲ್ಲ. ಕೆಲವಾರು ಜನರು ಅಭ್ಯಾಸ ರೂಢಿಸಿಕೊಂಡಿದ್ದರು ಧರ್ಮಬದ್ಧರಾದ ಗುಜರಾತ್ ಪ್ರಾಂತದ ಪಾರ್ಸಿಗಳು ದನದ ಮಾಂಸ ವರ್ಜಿಸಿದ್ದಾರೆ. ಅವರ ಉಡುಗೆ ಶೈಲಿ ಈಗಲೂ ಭಾರತೀಯರಂತೆ ಇದ್ದು ಹೊರಗಿನಿಂದ ಬಂದರೂ ನಮ್ಮೊಳಗೆ ಸೇರಿಕೊಂಡು ನಮ್ಮವರೇ ಆಗಿ ಹೋದ ಪಾರಸೀ ಜನಾಂಗದ ಒಂದು ಉತ್ತಮ ಅತ್ಯುತ್ತಮ ನಡೆ.

ಬಿ ಜೆ ಪಿ ವರಿಷ್ಠ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭಾರತೀಯರ ಸಹಿಷ್ಣುತಾ ವಿಚಾರವಾಗಿ ಪದೇ ಪದೇ ಇಸ್ರೇಲ್ ದೇಶದ ನಡೆಯೊಂದನ್ನು ಪುನರುಚ್ಚರಿಸುತ್ತಿರುತ್ತಾರೆ. ಇಸ್ರೇಲ್ ದೇಶವು ತನ್ನ ಸಾಂವಿಧಾನಿಕ ಮೊದಲ ಅಧಿವೇಶನದಲ್ಲೇ ತನ್ನ ನೆಲದಿಂದ ಗುಳೆ ಹೊರಟ ಜನರನ್ನು ಅತ್ಯಾದರದಿಂದ ಬರ ಮಾಡಿಕೊಂಡು ಸಹಬಾಳ್ವೆಗೆ ಮಾದರಿಯಾಗಿ ನಿಂತ ಭಾರತೀಯರನ್ನು ಅಭಿನಂದಿಸಿದ ವಿಷಯ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆಧಾರ್ಮಿಕ ಹಿನ್ನೆಲೆಯಲ್ಲಿ ಒಂದು ಧರ್ಮದ ಹೊಡೆತವನ್ನು ತಾಳಲಾಗದೆ ಅಲ್ಲಿಂದ ಕಾಲ್ಕಿತ್ತ ಜ್ಯುಯೂ ಜನಾಂಗವನ್ನು ಎಲ್ಲರೂ ತಿರಸ್ಕಾರ ಮನೋಭಾವದಿಂದಲೇ ಕಾಣುತ್ತ ಹೋದರು, ಆದರೆ ಬಿಗಿದಪ್ಪಿಕೊಂಡಿದ್ದು ಭಾರತ ಮಾತ್ರ. ಅದಕ್ಕೆ ಕಾರಣ ನಮ್ಮ ಉಪನಿಷತ್ತು, ಧರ್ಮಗ್ರಂಥ ಗಳಿಂದ ನಾವು ಕಲಿತ 'ಅತಿಥಿ ದೇವೋಭವ' ಎನ್ನುವ ಸಾಲು.

ಮಾತನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿಷ್ಟೇ, ಮಧ್ಯ ಪ್ರಾಚ್ಯ ರಾಷ್ಟ್ರಗಳ ಮುಖಾಂತರ ಕೈಬರ್ ಕಣಿವೆ ದಾಟಿ ಭಾರತಕ್ಕೆ ಲಗ್ಗೆ ಇಟ್ಟ ಮುಸ್ಲಿಂ ದೊರೆಗಳು ಬಲವಂತದಿಂದ ಇಲ್ಲಿನ ರಾಜರುಗಳ ಮೇಲೆ ಅಧಿಕಾರ ಚಲಾಯಿಸಿ ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸಿದರೂ ಇಲ್ಲಿನ ಜನರಿಗೆ ಅಂದರೆ ಮೂಲ ಭಾರತೀಯರಿಗೆ ಅವರೂ ನಮ್ಮಂತೆಯೇ ಅನ್ನಿಸಲಿಲ್ಲ, ಅನ್ನಿಸುವಂತೆ ಅವರು ನಡೆದುಕೊಳ್ಳಲೂ ಇಲ್ಲ. ಹೆಜ್ಜೆ ಹೆಜ್ಜೆಗೂ  ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳ ದಮನವಾಯಿತು. ಕೆಲವರು ಅವುಗಳನ್ನು ದಮನ ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡರೂ ಕೂಡ. ಇಲ್ಲಿನ ಸಂಸ್ಕೃತಿಯ ಸಮಾಧಿಯ ಮೇಲೆ ತಮ್ಮ ಬೇಳೆ ಬೇಯಿಸಿಕೊಂಡು ಬಿಡುವ ಚಪಲವೂ ಕೆಲವರಿಗೆ ಉಂಟಾಗಿ ಅವುಗಳ ಪ್ರಯೋಗಕ್ಕೂ ಭಾರತದ ನೆಲ ವೇದಿಕೆಯಾಗಿ ಹೋಯಿತು.

ಇನ್ನು ಯೂರೋಪಿಯನ್ನರ ಭಾರತದ ದಾಳಿ ವಿಚಾರವು ಸರಿ ಸುಮಾರು ಅದೇ ಮುಳ್ಳಿಗೆ ತಗುಲಿಕೊಳ್ಳುವಂತದ್ದೇ. ಅವರು ಭಾರತದೆಡೆಗೆ ದೃಷ್ಟಿ ನೆಡುವುದಕ್ಕೆ ಮುಖ್ಯ ಕಾರಣ ಇಲ್ಲಿನ ಸಿರಿ ಸಂಪತ್ತು ಬಿಟ್ಟರೆ ಮತ್ತೇನೂ ಅಲ್ಲ. ಇಲ್ಲಿನ ಐಶ್ವರ್ಯದ ಮೇಲೆ ಮಾತ್ತ್ರ ಕಣ್ಣಿಟ್ಟು ದೇಶದ ಒಳ ಹೊಕ್ಕ ಐರೋಪ್ಯರು ಇಲ್ಲಿನ ಮತ್ತಷ್ಟು ಕೆಡುಕುಗಳನ್ನು ತಮ್ಮ ಅನುಕೂಲಕ್ಕೆ ಬಳಸಿ ಕೊಂಡರು. ವಿಚಾರದಲ್ಲಿ ನಮ್ಮದೂ ತಪ್ಪಿದೆ, ಆದರೂ ಸಮಯಕ್ಕೆ ತಕ್ಕಂತೆ ಎಲ್ಲವನ್ನು ಉಪಯೋಗಿಸಿಕೊಂಡ ಅವರು ಭಾರತದೊಳಗೆ ಭದ್ರ ಬುನಾದಿಯೊಂದನ್ನು ಕಟ್ಟಿಕೊಂಡರು ಹಾಗು ತಾವು  ಬೆಳೆದರು. ಇಷ್ಟಾದರೂ ಭಾರತದ ಜನಗಳಿಗೆ ಅವರು ನಮ್ಮವರು ಎನಿಸಲಿಲ್ಲ.


ಅಷ್ಟೇ ಏಕೆ ಸ್ವಾತಂತ್ರ್ಯ ದಕ್ಕಿ ಪ್ರಜೆಗಳೇ ಪ್ರಭುಗಳನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪಿಸುವಂತಾದರೂ ಪ್ರಭುಗಳು ನಮ್ಮ ಪ್ರಜೆಗಳಿಗೆ ನಮ್ಮವರೆನಿಸುತ್ತಿಲ್ಲ. ಕಾರಣ ಸಿಂಹಾಸನಾಧೀಶ್ವರರಾದವರೆಲ್ಲ ತಮ್ಮ ಮನೆ ಮನವನ್ನು ಭ್ರಷ್ಟಾಚಾರದ ಮೂಲಕ ಬೆಳಗಿಕೊಳ್ಳುತ್ತಿದ್ದಾರೆ. ನನಗೆ ಒಮ್ಮೊಮ್ಮೆ ಅನಿಸುತ್ತಿರುತ್ತದೆ ಭಾರತೀಯರದು ಅದೆಂತಹ ದೌರ್ಭಾಗ್ಯ. ಎಂದು ಭಾರತೀಯರಿಗೆ ನಮ್ಮವರು, ನಮ್ಮ ಮಣ್ಣಿನವರು ಎನಿಸುವ ಆಡಳಿತ ಸಿಗುವುದು. ಅದಕ್ಕೆ ಇವರೆಲ್ಲರನ್ನು ನೋಡಿ ನನಗನ್ನಿಸಿತು ನಮ್ಮ ಇಷ್ಟಕ್ಕೆ ಒಗ್ಗಿಕೊಂಡು ಬಾಳು ಕಟ್ಟಿಕೊಂಡ ಏಕೈಕ ಭಾರತೀಯೇತರ ಜನಾಂಗ ಪಾರಸೀ ಜನಾಂಗ, ಅದಕ್ಕೆ ತಲೆ ಬರಹ ಕೊಟ್ಟಿದ್ದು 'ಅವರೂ ನಮ್ಮೊಳಗೊಬ್ಬರಾದರು'.

ಶನಿವಾರ, ಡಿಸೆಂಬರ್ 17, 2016

ಬಂದು ಬಿಡು ಚಿನ್ನಾ

ಮಾತೆಲ್ಲ ಮರೆತು, ದೃಷ್ಟಿ ಮಸುಕಾಗಿ
ಬೆನ್ನು ಬಾಗಿ, ಕಣ್ಣು ಮಂಜಾಗಿ
ಮಾತು ತೊದಲಿ ಕೈ ನಡುಗಿ ನಾ
ಹೊರಟು ಹೋಗುವ  ಮುನ್ನ
ಒಮ್ಮೆ ನೋಡಲೇಬೇಕು ನಿನ್ನ
ಯಾರಿಗೂ ಕಾಯದೆ ಬಂದುಬಿಡು ಚಿನ್ನಾ.

ಮನಸು ಎಂಬ ಮಂಟಪ ಬೆಳಗಿ
ಕನಸು ಎಂಬ ಕೂಸಿಗೆ ಮರುಗಿ
ಬಿಟ್ಟು ಹೋಗಲೇ ಬೇಡ ನನ್ನ
ನಿನಗಾಗಿಯೇ ಕಾಯುತಿರುವೆ ನೀ ಬಂದುಬಿಡು ಚಿನ್ನಾ.

ವಾಟ್ಸಾಪ್ ಫೇಸ್ ಬುಕ್ಕು ಗಳಿಗಿಂತ
ನಿನ್ನೊಡನಾಟವೇ ಚೆನ್ನ
ನಿರ್ಜೀವ ತಂತ್ರಗಳವು ಇಂದಿಗೂ ಬೇಡ ಇನ್ನಾ
ಬೇಸರಿಸದೆ ನೀ ಮತ್ತೆ ನನ್ನೊಡನೆ ಬಂದು ಬಿಡು ಚಿನ್ನಾ.

ಒಮ್ಮೊಮ್ಮೆ ಮರುಗಿ
ಒಮ್ಮೊಮ್ಮೆ ಸೊರಗಿ
ಒಮ್ಮೊಮ್ಮೆ ಕೊರಗಿ
ಏನೇನೋ ನಡೆಯುತ್ತಿದೆ ಇನ್ನಾ
ನನ್ನ ಪರಿಸ್ಥಿತಿ ಇನ್ನೂ ಭಿನ್ನ
ಅದನ್ನೆಲ್ಲ ಕೇಳಲಾದರೂ ನೀ ಬರುವೆಯಾ ಚಿನ್ನಾ
ನಿನ್ನ ದಾರಿಯನ್ನೇ ಕಾಯುತಿರುವೆ ಇನ್ನಾ.

ಗುರುವಾರ, ಡಿಸೆಂಬರ್ 15, 2016

ಐಟಿ ಬಿಟಿ ಪ್ರೀತಿ

ಫೇಸ್ಬುಕ್ ನಲ್ಲಿ ಹುಟ್ಟಿ 
ವಾಟ್ಸಾಪ್ ನಲ್ಲಿ ಬೆಳೆದು 
ಸಲ್ಲದ ಕಾರಣಕ್ಕೆ ಮುರಿದು 
ಬೀಳುವುದು ಪ್ರೀತಿಯೇನೆ? 

ದುಡ್ಡು, ಧರ್ಮ, ಜಾತಿ 
ಎಲ್ಲಕ್ಕೂ ತಿಲ ತರ್ಪಣವಿಟ್ಟು
ನೀನಿಲ್ಲದೆ ನಾನಿಲ್ಲ 
ನಾನಿಲ್ಲದೇ ನೀನಿಲ್ಲ 
ನಿನ್ನಬಿಟ್ಟರೆ ಬದುಕೇ ಇಲ್ಲ 
ಎಂದುಕೊಳ್ಳುವುದು ನಿಜವಾದ 
ಪ್ರೀತಿ, ಚಿರ ಪ್ರೀತಿ ಎಂದಷ್ಟೇ ತಿಳಿದಿದ್ದೆ 
ಕಾಲ ಬದಲಾದಂತೆ ಪ್ರೀತಿಯೂ
ಬದಲಾಗಲಿದೆ, ಆಗುತ್ತಲೂ ಇದೆಯಲ್ಲ! 

ಪ್ರೀತಿಗೆ ರಾಯಭಾರಿ ನಾನೀಗ 
ಪ್ರೀತಿ ಬಯಸಿ ಹಿಂದೆ ಮುಂದೆ ಸುಳಿದು
ಕಾಡಿ ಬೇಡಿ ಮಾಡುವ ಪ್ರೀತಿ ಶೂನ್ಯ 
ಕಾಡುವ ಬೇಡುವ ಪ್ರಮೇಯ ನಿಜ ಪ್ರೀತಿಯ 
ಪಾಲಲ್ಲ. ಇನ್ಯಾರಿಂದಲೂ 
ಪ್ರೀತಿ ಬಯಸಲಾರೆ, ಆದರೆ ಬಳಿ ಸುಳಿದವರಿಗೆ 
ಪ್ರೀತಿ ಮೊಗೆ ಮೊಗೆದು ಕೊಡಲು ಮರೆಯಲಾರೆ 

                                           ಇಂತಿ ನೊಂದ ಪ್ರೇಮಿ :( 


ಶನಿವಾರ, ಡಿಸೆಂಬರ್ 3, 2016

ಬಿದ್ದರೇನು

ಬಿದ್ದರಿಲ್ಲಿ ಮುಗಿಯಿತು, ಎತ್ತುವರು ಎಳೆಸುವರ್ಯಾರು ಇಲ್ಲ 
ಬಿದ್ದರೇಳುವ ಛಾತಿಯೊಂದೇ ಅವರವರ ಬೆನ್ನಿಗೆ 
ಬಿದ್ದರೆತ್ತುವ ಜನರ ಕಾಣುತಿದ್ದರೆ ಮುಗಿಯಿತಲ್ಲಿಗೆ 
ಇದೇ ದೇವರು ಕೊಟ್ಟ ಭವ ಸಮುದ್ರದ ಬಾಳ್

ಬುದ್ಧನೆದ್ದ

ಭಗವಾನ್ ಬುದ್ಧ ಒಮ್ಮೆ ತನ್ನ ಶಿಷ್ಯರ ಒಡಗೂಡಿ ಲೋಕ ಸಂಚಾರ ಮಾಡುತ್ತಾ ಹಳ್ಳಿಯೊಂದಕ್ಕೆ ಬಂದ. ಆ ಹಳ್ಳಿಯಲ್ಲಿ ಇದ್ದ ಶ್ರೀಮಂತನೊಬ್ಬನಿಗೆ ಬುದ್ಧನ ಯಾವ ಭೋಧನೆಗಳಲ್ಲೂ ನಂಬಿಕೆಯಿರಲಿಲ್ಲ. ಹೀಗಾಗಿ ಬುದ್ಧನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತೀರ್ಮಾನ ಮಾಡಿಕೊಂಡು ರೋಷಾವೇಶದಿಂದ ಕುದಿಯುತ್ತಾ ಬುದ್ಧನ ಬಳಿಗೆ ಬಂದು ಕಿರುಚಾಡಲು ಶುರು ಮಾಡಿದ. "ನೀನೇನು ಮಹಾ ದೇವ ಮಾನವನೋ?.....ನೀನು ಹೇಳುವ ಮಾತುಗಳೆಲ್ಲಾ ತಲೆ ಬುಡವಿಲ್ಲದೆ ನಿರಾಧಾರ ವಾಗಿರುವಂತಹವು, ಇಷ್ಟಕ್ಕೂ ಇನ್ನೊಬ್ಬರಿಗೆ ಭೋಧನೆ  ಮಾಡಲು ನಿನಗೆ ಅಧಿಕಾರ ಕೊಟ್ಟವರ್ಯಾರು" ಎಂದೆಲ್ಲಾ ಆವೇಶದ ಮಾತುಗಳನ್ನಾಡುತ್ತಾನೆ.

ಎಲ್ಲವನ್ನೂ ಸಮಾಧಾನದಿಂದಲೇ ಕೇಳಿಸಿಕೊಂಡ ಬುದ್ಧ  ಶ್ರೀಮಂತನಿಗೆ ಪ್ರಶ್ನೆಯೊಂದನ್ನು ಕೇಳುತ್ತಾನೆ "ಮಗೂ ನಾನು ಯಾರಿಗೋ ಕೊಡಲೆಂದು ಉಡುಗೊರೆಯೊಂದನ್ನು ತಂದಿದ್ದೇನೆ, ಆದರೆ ನಾನು ಕೊಟ್ಟ ಉಡುಗೊರೆಯನ್ನು ಯಾರು ಸ್ವೀಕರಿಸಲಿಲ್ಲವೆಂದಾಗ ಆ ಉಡುಗೊರೆ ಯಾರ ಪಾಲಾಗುತ್ತದೆ?".

ಅನಿರೀಕ್ಷಿತ ಪ್ರಶ್ನೆಯಿಂದ ಶ್ರೀಮಂತ ಅಚ್ಚರಿಗೊಳಗಾದರೂ ಉತ್ತರಿಸುತ್ತಾನೆ. "ಆ ಉಡುಗೊರೆ ಕೊಂಡು ತಂದವರದ್ದೇ ಆಗುತ್ತದೆ".

ಬುದ್ಧ ಅದಕ್ಕೆ ಪ್ರತಿಕ್ರಿಯಿಸುತ್ತಾನೆ , "ಅಂತೆಯೇ ನೀನು ನನ್ನ ಮೇಲೆ ವಿನಾ ಕಾರಣ ಕೋಪಗೊಂಡರೆ ನಾನು ಅದನ್ನು ಸ್ವೀಕರಿಸುವುದಿಲ್ಲ, ಹಾಗೆಂದ ಮೇಲೆ ನಿನ್ನ ಕೋಪ ನಿನಗೆ ಹಿಂದಿರುಗಿ ಬಂತು ಎಂದಲ್ಲವೇ".ಶ್ರೀಮಂತನು ಹೌದು ಎನ್ನುತ್ತಾನೆ.

ನೀನು ಪರರನ್ನು ದ್ವೇಷಿಸಿದರೆ ಆ ದ್ವೇಷವನ್ನು ಯಾರು ಸ್ವೀಕರಿಸುವುದಿಲ್ಲ, ಅಂದ ಮೇಲೆ ಆ ದ್ವೇಷ ನಿನಗೆ ಹಿಂತಿರುಗಿ ಬರುತ್ತದೆ. ದ್ವೇಷವೇ ಹಿಂದಿರುಗಿ ಬಂದಾಗ ಸಂತೋಷ, ನೆಮ್ಮದಿಗಳು ಕನಸಾಗಿಯೇ ಉಳಿಯುತ್ತವೆ. ಹಾಗಾಗಿ ದ್ವೇಷ, ಅಸೂಯೆಗಳನ್ನು ಶಮನ ಮಾಡಿ ಪ್ರೀತಿಯನ್ನು ಕೊಟ್ಟಾಗ ಮಾತ್ರ ಜೀವನ ಸುಖಮಯವಾಗುತ್ತದೆಂದು ಬುದ್ಧ ತನ್ನ ಮಾತು ಮುಗಿಸುತ್ತಾನೆ.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...