ಶನಿವಾರ, ಮೇ 16, 2020

ಬೂತ್ ಲೆವೆಲ್ಲು - ಭ್ರಾತೃತ್ವ

ಕಾಲದಿಂದ ಕಾಲಕ್ಕೆ ನಮ್ಮ ದೇಶದಲ್ಲಿ ಚುನಾವಣೆಗಳು ನಡೆಯುತ್ತಿವೆ, ಜನಗಳು ಪಾಲ್ಗೊಳ್ಳುತ್ತಿದ್ದಾರೆ. ದೇಶದೊಳಗೆ ಆರ್ಥಿಕ ಪರಿಸ್ಥಿತಿ, ಚುನಾವಣೆಯ ಪರಿಕಲ್ಪನೆ ಹೆಚ್ಚಿನ ಜನರಿಗೆ ಉತ್ತಮವಾಗಿರುವುದರಿಂದ ಹಿಂದಿಗಿಂತಲೂ ಈಗ ಹೆಚ್ಚೆಚ್ಚು ಜನ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಅದು ಮತದಾನ ಮಾಡುವುದಾಗಿರಬಹುದು, ಚುನಾವಣೆಗೆ ನಿಲ್ಲುವುದಿರಬಹದು, ಚುನಾವಣೆಯ ಪ್ರಚಾರವಿರಬಹುದು ಇಲ್ಲೆಲ್ಲಾ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಜನ ಭಾಗವಹಿಸುತ್ತಿದ್ದಾರೆ. ದೇಶದ ಪ್ರಜಾತಂತ್ರದ ಹಬ್ಬವೆನಿಸಿಕೊಳ್ಳುವ ಚುನಾವಣೆಯಲ್ಲಿ ಹೆಚ್ಚೆಚ್ಚು ಜನ ಪಾಲ್ಗೊಳ್ಳುವುದು ದೇಶ ತಮ್ಮ ಭವಿಷ್ಯತ್ತಿನ ಬಗ್ಗೆ ಎಷ್ಟು ಕಾಳಜಿ ವಹಿಸಿದೆ ಎಂಬುದನ್ನು ಅಳೆಯುವುದಕ್ಕೊಂದು ಮಾಪನ ನಿಜ, ಆದರೆ ಅದು ಎಲ್ಲ ಕಾಲಗಳಲ್ಲೂ ನಿಜವಲ್ಲ. ಭಾರತದ ಈಗಿನ ಮಟ್ಟಿಗಂತೂ ಆ ಅನಿಸಿಕೆ ಸತ್ಯವಾಗಿರಲಿಕ್ಕೆ ಸಾಧ್ಯವಿಲ್ಲವೇ ಇಲ್ಲ.

ದುಡ್ಡಿನಾಸೆಗೆ, ಜಾತಿ ಓಲೈಕೆಗೆ, ಧರ್ಮ ಪ್ರಚಾರಕ್ಕೂ ಚುನಾವಣೆಗಳು ವೇದಿಕೆಗಳಾಗಿ ದೇಶದೊಳಗೆ ಗುಂಪುಗಳಾಗಿರುವುದನ್ನು ಭಾರತ ಸ್ವಾತಂತ್ರ್ಯ ಕಂಡಾಗಿನಿಂದ ನಾವು ಕಂಡುಕೊಂಡೇ ಬಂದಿದ್ದೇವೆ. ರಾಜಕೀಯ ವಕ್ತಾರರು ಜಾತಿಯನ್ನೋ, ಧರ್ಮವನ್ನೋ, ಭಾಷೆಯನ್ನೋ ಹೆಕ್ಕಿಕೊಂಡು ತಮ್ಮ ಚುನಾವಣೆಯಲ್ಲಿ ಪ್ರಚಾರದ ಸರಕನ್ನಾಗಿ ಮಾಡಿಕೊಂಡು ಭಾಷಣ ಬಿಗಿದು, ಚುನಾವಣೆಯ ನಂತರ ಅತ್ತ ತಿರುಗಿಯೂ ನೋಡದೆ ತಮ್ಮ ಕೆಲಸಗಳಲ್ಲಿ ತಾವು ಮಗ್ನರಾಗಿರುವುದೂ ನಾವೇನು ಕಾಣದ್ದಲ್ಲ. ತೀರಾ ಇತ್ತೀಚಿಗೆ ಚುನಾವಣೆಯಲ್ಲಿ ವಕ್ತಾರರು ಹಾಕುವ ಬಿಗಿಯಾದ ಪಟ್ಟು ಎಂದರೆ ಬೂತ್ ಲೆವೆಲ್ಲಿನ ಪಕ್ಷ ಸಂಘಟನೆ!. ಬೂತ್ ಲೆವೆಲ್ಲಿನ ಪಕ್ಷ ಸಂಘಟನೆಯ ಮಾರ್ಗ ಸದ್ದರಿಯದೇ ನಮ್ಮ ಸಂವಿಧಾನದ ಮೂಲ ಆಶಯಕ್ಕೆ ಬಲವಾದ ಪೆಟ್ಟು ಕೊಡುತ್ತಿದೆ. ಅತಿಶಯೋಕ್ತಿ ಎನಿಸಿದರೂ ಇದು ಸುಳ್ಳಲ್ಲ. ಇದುವರೆವಿಗೂ ಅಷ್ಟಾಗಿ ಯಾರು ಗಮನಿಸದ ವಿಚಾರವೋ ಏನೋ?. ಯಾರೂ ಇದರ ಬಗ್ಗೆ ಸೊಲ್ಲೆತ್ತಲಾರರು, ಪ್ರಜಾ ಪ್ರಭುತ್ವ ಸಂಖ್ಯಾ ಬಲದ ಆಟ ಎನ್ನುವುದು ಎಲ್ಲರಿಗೂ ಗೊತ್ತಿರುವುದೂ ಈ ದಿವ್ಯ ಮೌನಕ್ಕೆ ಕಾರಣವೇನೋ? ಇರಬಹುದು!.

ರಾಜಕೀಯದ ಮತಯಾಚನೆಗೆ ಇರುವ ದಾರಿಗಳನ್ನೆಲ್ಲ ಒಟ್ಟಾಗಿ ಪಟ್ಟಿ ಮಾಡಿದರೆ ಕೊನೆಯಿಂದ ಎರಡನೇ ಸ್ಥಾನಕ್ಕೆ ನಿಲ್ಲುವುದು ಬೂತ್ ಲೆವೆಲ್ಲು. ಬೂತ್ ಲೆವೆಲ್ಲಿನ ಪಕ್ಷ ಸಂಘಟನೆಯಲ್ಲಿ ಗ್ರಾಮ ಗ್ರಾಮಗಳನ್ನೂ ಗಲ್ಲಿ ಗಲ್ಲಿಗಳನ್ನು ರಾಜಕೀಯ ಸಿದ್ಧಾಂತಗಳ ಕೇಂದ್ರವನ್ನಾಗಿಸಲಾಗುತ್ತದೆ. ಇದು ಚುನಾವಣೆಯ ಸಮಯದಲ್ಲಿ ಮಾತ್ರ ನಡೆಯುವುದಾಗಿದ್ದರೆ ಸುಮ್ಮನಿರಬಹುದಾಗಿತ್ತೇನೋ, ಆದರೆ ಈ ರೀತಿಯ ಸಂಘಟನೆ ಚುನಾವಣೆಯ ನಂತರ ಮಾಡುವ ಅನಾಹುತವೇ ಹೆಚ್ಚು. ಸೇನೆಯ ಕುರಿತು ಒಂದು ಮಾತಿದೆ 'ಸರ್ಕಾರ ಸೇನೆಗೆ ಸೇರಿಸಿಕೊಳ್ಳುವಾಗ ಮೆದುಳು ಕಿತ್ತುಕೊಂಡು ಕೈಗೆ ಬಂದೂಕು ಕೊಡುತ್ತದೆ, ಸೇವೆ ಮುಗಿದ ನಂತರ ತನ್ನ ಬಂದೂಕನ್ನು ತಾನು ಹಿಂಪಡೆಯುತ್ತದೆ. ಆದರೆ ಮೆದುಳನ್ನು ಹಿಂತಿರುಗಿಸುವುದನ್ನು ಮರೆಯುತ್ತದೆ' ಎಂದು. ಇಲ್ಲೂ ಥೇಟ್ ಹಾಗೆಯೇ. ಪಕ್ಷಗಳು ಸಿದ್ಧಾಂತಗಳನ್ನು ಪ್ರಜೆಗಳ ಮುಂದೆ ಕೊಂಡೊಯ್ಯುವುದು ಒಂದು ಕಡೆಯಾದರೆ ಆ ಸಿದ್ಧಾಂತವೇ ನಮ್ಮ ಜೀವನಾಡಿ ಎಂಬಂತೆ ಬಿಂಬಿಸುವುದು ಈ ಕಾಲದ ಪಕ್ಷ ಸಂಘಟನೆಗಳಲ್ಲಿ ಎದ್ದೆದ್ದು ಕಂಡು ಬರುತ್ತಲೇ ಇದೆ.

The Constitution of India (Preamble) that guarantees Justice ...
ಭಾರತದ ಸಂವಿಧಾನದ ಮುನ್ನುಡಿ ಪುಟ


ಚುನಾವಣೆಗೆಂತಲೇ ತಮ್ಮ ಸಿದ್ಧಾಂತಗಳನ್ನು ಧಾರೆಯೆರೆಯುವ ಪಕ್ಷಗಳು ಚುನಾವಣೆಯ ನಂತರ
ಅವುಗಳ ಸಿದ್ಧಾಂತಗಳನ್ನು ಕಿತ್ತುಕೊಂಡು ಹೋಗಲಾರವು. ಆ ಸಿದ್ಧಾಂತಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬಿಸಿರಕ್ತದ ಪ್ರಜೆಗಳು ಅದೇ ಊರಿನ ಅದೇ ಗಲ್ಲಿಯ ಬೇರೆ ಸಿದ್ಧಾಂತಗಳ ಅನುಯಾಯಿಗಳ ಜೊತೆ ಹೊಂದಿಕೊಳ್ಳುವುದೇ ದುಸ್ತರವಾಗುತ್ತದೆ. ಈಚೀಚಿನ ವರ್ಷಗಳಲ್ಲಿ ಇದಕ್ಕಾಗಿಯೇ ಜಗಳಗಳು, ಹೊಡೆದಾಟಗಳು, ಕೊಲೆಗಳೇ ನಡೆದಿವೆ. ಒಂದೇ ಊರಿನಲ್ಲಿರುವರು ಭ್ರಾತೃತ್ವ ಭಾವನೆಯಿಂದ ಇರಬೇಕಾದ್ದು ಸಮಂಜಸ, ಆದರೆ ಇಲ್ಲಿ ಇದ್ದ ಆ ಭಾವನೆಯನ್ನು ಚುನಾವಣೆಗೆಂದು ಕದಡಿದವರು ಯಾರು?. ಇದು ಸಂವಿಧಾನದ ಮೂಲ ಭಾವನೆಗೆ ಮರ್ಮಾಘಾತ ನೀಡುತ್ತಿರುವುದು ನಿಜವಲ್ಲವೆ?. ಈ ದೃಷ್ಟಿಕೋನದಲ್ಲಿ ಜನರು ಏಕೆ ಯೋಚಿಸುತ್ತಿಲ್ಲ?. ದುರಂತವಲ್ಲವೇ. ನಮ್ಮ ಹೆಮ್ಮೆಯ ಭಾರತವೇ ಹಾಗೆ. ಮೂಲ ತೊಂದರೆಯ ತಂಟೆಗೆ ಹೋಗುವುದಿಲ್ಲ, ಮೂಲ ತೊಂದರೆಯಿಂದ ಉಂಟಾದ ಸಣ್ಣ ಪುಟ್ಟ ತೊಂದರೆಗಳನ್ನೇ ಬಗೆಹರಿಸಿಕೊಳ್ಳುತ್ತಾ ಮೂಲ ತೊಂದರೆಯನ್ನು ಮತ್ತೊಂದು ಭುಜದ ಮೇಲೆ ಹೊತ್ತು ಸಲಹುತ್ತಾ ಬರುವುದು ನಮಗೇನು ಹೊಸದಲ್ಲ. ಹಾಗೆ ಮಾಡಿಕೊಂಡೆ ತಲೆಮಾರುಗಳನ್ನು ಕಳೆದಿದ್ದೇವೆ, ಮತ್ತು ಇನ್ನೂ ಅದೇ ತೊಂದರೆಗಳ ಹೊಲೆಗೆಸರಲ್ಲಿ ಸಿಲುಕಿ ಒದ್ದಾಡುತ್ತಲೇ ಇದ್ದೇವೆ.

ಚುನಾವಣೆಯ ಪ್ರಚಾರ ಮತ್ತಾವುದೇ ರೀತಿ ನಡೆಯಲಿ, ಆದರೆ ಈ ಬೂತ್ ಲೆವೆಲ್ಲು ಎಂಬ ಭೂತ ನಮ್ಮ ನಮ್ಮ ನಡುವೆ ತಂದೊಡ್ಡುತ್ತಿರುವ ಮನಸ್ತಾಪಗಳನ್ನು ಅದೆಂದೂ ಸರಿಮಾಡಲಾಗದು. ಇದಕ್ಕೆ ಕೆಲವರು ಪ್ರತ್ಯುತ್ತರ ಕೊಡುವುದೇನೆಂದರೆ, ಪ್ರಜಾತಂತ್ರದ ಝಲಕ್ಕೇ ಅಂತಹುದು ಬೇರೆ ಬೇರೆ ಮನೋಧೋರಣೆಯ ಎಲ್ಲರು ಒಟ್ಟಾದರೆ ಮಾತ್ರ ಹೊಸದೇನನ್ನೋ ಸೃಷ್ಟಿಸುವುದು ಎಂದು. ಸರಿ ಹಾಗಿದ್ದ ಮೇಲೆ ಇಂದು ದೇಶದೊಳಗೆ ನಡೆಯುತ್ತಿರುವ ಗುಂಪುಗಾರಿಕೆಯ ಮೂಲ ಎಲ್ಲಿಯದ್ದು ಎಂದೇನಾದರೂ ಹುಡುಕಿದರೆ ನಿಮಗೆ ಸಿಗುವುದೇ ಇದು. ವಿವಿಧ ಮನೋಧೋರಣೆಯವರ ಅಂಶಗಳನ್ನು ಹೆಕ್ಕಿಕೊಳ್ಳುವುದು ಬೇರೆ, ಅವರ ನಡುವೆ ಇರುವ ಅಂತರಗಳನ್ನು ಬೃಹದಾಕಾರವಾಗಿ ತೋರಿಸಿ ಚುನಾವಣೆಯ ಲಾಭ ಗಿಟ್ಟಿಸಿಕೊಳ್ಳುವುದು ಬೇರೆ. ಅಲ್ಲಿ ಸ್ವಾರ್ಥವಿರುತ್ತದೆ. ಅವರ ಸ್ವಾರ್ಥಗಳಿಗಾಗಿ ನಾವು ಬಡಿದಾಡಿಕೊಳ್ಳುವುದು ಮೂರ್ಖತನವಲ್ಲದೆ ಮತ್ತೇನು?.

ಪ್ರಪಂಚದಲ್ಲಿ ನಡೆದಿದ್ದ ಹಲವು ಕ್ರಾಂತಿಗಳ ಪ್ರತಿಫಲಗಳೂ ನಮ್ಮ ಸಂವಿಧಾನದಲ್ಲಿ ಕಂಗೊಳಿಸುತ್ತವೆ. ಅದರಲ್ಲಿ ಬಹು ಮುಖ್ಯವಾದ ಅಂಗ ಭ್ರಾತೃತ್ವ. ಫ್ರೆಂಚ್ ಕ್ರಾಂತಿಯ ಕೂಸು ಅದು. ಭಾರತದಲ್ಲಿ ಜಾತಿ ಪದ್ಧತಿಗಳಿದ್ದಂತೆ ಅಲ್ಲಿಯೂ ಹಿಂದೊಮ್ಮೆ ಎಸ್ಟೇಟ್ ಪದ್ಧತಿ ಜಾರಿಯಲ್ಲಿದ್ದಿತು. ಫ್ರಾನ್ಸಿನಲ್ಲಿ ಹತ್ತೊಂಹತ್ತನೇ ಶತಮಾನದಲ್ಲಿ ನಡೆದ ದುಡಿಯುವ/ಶ್ರಮಿಕ ವರ್ಗ ಕೇಂದ್ರೀಕೃತ ಕ್ರಾಂತಿಗೆ ಇಡೀ ಪ್ರಪಂಚ ಉಘೇ ಎಂದುಬಿಟ್ಟಿತು. ಫ್ರಾನ್ಸಿನ ರಾಜಾಡಳಿತವೂ ಬಿಗಿ ಸಡಿಲಿಸಿ ಸಾಮಾನ್ಯರೇ ದೇವರು ಎಂದುಬಿಟ್ಟಿತು. ಭ್ರಾತೃತ್ವ ಭಾವನೆ ಎಲ್ಲರಲ್ಲೂ ಮೊಳೆಯಬೇಕು ಎಂದಿತು ಫ್ರೆಂಚ್ ಜನಾಂಗ. ಅಹುದೆಂದು ಒಪ್ಪಿದ ಅಲ್ಲಿನ ಆಡಳಿತ ಅದನ್ನೇ ಕಾನೂನು ಮಾಡಿತು ಕೂಡ. ಅಲ್ಲಿಂದಾಚೆಗೆ ಫ್ರಾನ್ಸಿನ ಈ ಭ್ರಾತೃತ್ವ ಎಂಬ ಪದ ಎಷ್ಟೋ ದೇಶಗಳ ಸಂವಿಧಾನಗಳಲ್ಲಿ ಕಂಗೊಳಿಸಿದೆ. ಆ ಕ್ರಾಂತಿಯಾನಂತರ ಫ್ರಾನ್ಸಿನಲ್ಲಿ ಇನ್ನೂ ಅನೇಕ ಕ್ರಾಂತಿಗಳು ನಡೆದು ಅವರ ಮೊದಲ ಫ್ರೆಂಚ್ ಕ್ರಾಂತಿಯು ಕಲ್ಪಿಸಿಕೊಟ್ಟಿದ್ದ ಅನುಕೂಲತೆಗಳನ್ನು ಗಾಳಿಗೆ ತೂರಿ ಎಷ್ಟೋ ಹೋರಾಟಗಳು ಫ್ರಾನ್ಸಿನ ಭೂಮಿಕೆಯಲ್ಲೇ ನಡೆದಿವೆ. ಈ ಸಿದ್ಧಾಂತಗಳೇ ಹೀಗೆ ಎಲ್ಲ ಕಾಲಕ್ಕೂ, ದೇಶಕ್ಕೂ ಒಪ್ಪಿಗೆಯಾಗುವಂತಹ ಸಿದ್ಧಾಂತಗಳು ಇನ್ನೂ ಹುಟ್ಟೇ ಇಲ್ಲ ಬಿಡಿ.

-o-



ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...