ಶುಕ್ರವಾರ, ಏಪ್ರಿಲ್ 30, 2021

ಮರೆಯಲ್ಲೇ ಮೂರನೇ ಮಹಾ ಯುದ್ಧ?

ನಮ್ಮ ಜಗತ್ತಿನ ಮೊದಲ ಎರಡು ಮಹಾ ಯುದ್ಧಗಳು ಆರಂಭವಾದಾಗಲಾಗಲಿ, ಅಥವಾ ನಡೆಯುವಾಗಲಾಗಲಿ ಅದು ಮಹಾ ಯುದ್ಧವೆಂಬ ಅರಿವು ಯುದ್ಧರಂಗದಲ್ಲಿ ನೇರವಾಗಿ ಪಾಲ್ಗೊಂಡವರಿಗೇ ಇರಲಿಲ್ಲ. ಸಮರದ ಅಂತ್ಯ ಕಾಲಕ್ಕೆ ಗಾಯಗೊಂಡವರ, ಸತ್ತವರ ಸಂಖ್ಯೆಗಳ ಆಧಾರಗಳನ್ನು ಪಡೆದುಕೊಳ್ಳುತ್ತಾ ಪಾಲ್ಗೊಂಡ ದೇಶಗಳು ಒಹ್ ನಮ್ಮಿಂದ ಎಂತ ದುರಂತವಾಯಿತು ಎಂದು ಪೇಚಾಡಿಕೊಳ್ಳುತ್ತಾ ಇದು ವಿಶ್ವ ಯುದ್ಧ ಎಂದು ಪೆಚ್ಚು ಮೊರೆಯಲ್ಲೇ ಘೋಷಿಸಿಕೊಳ್ಳುತ್ತಿದ್ದುದನ್ನು ನಾವಾಗಲೇ ಎರಡು ಬಾರಿ ಕಂಡಿದ್ದೇವೆ. ಒಬ್ಬರ ಮೇಲೊಬ್ಬರು ಬಿದ್ದು, ದೇಶದ ಗಡಿಗಳೊಳಕ್ಕೆ ನುಗ್ಗಿ ಆಯಾ ದೇಶಗಳ ಸಾರ್ವಭೌಮತೆಗೆ ಸವಾಲೆಸೆದು ಯುದ್ಧಕ್ಕೆ ಪಂಥಾಹ್ವಾನ ಕೊಡುತ್ತಿದ್ದುದು ನಾವಿದುವರೆಗೂ ನೋಡಿಕೊಂಡು ಬಂದಿದ್ದ ಯುದ್ಧಗಳ ರೀತಿ.

ರಾಜಕುಮಾರನೊಬ್ಬನ ಕೊಲೆಯನ್ನೇ ಮುಂದು ಮಾಡಿಕೊಂಡು 1914ರಲ್ಲಿ ಭುಗಿಲೆದ್ದ ಸಣ್ಣ ಹಿಂಸಾಚಾರ ಮಹಾ ಯುದ್ಧವಾಗಿ ಮಾರ್ಪಟ್ಟಿತ್ತು. ನೋಡ ನೋಡುತ್ತಿದ್ದಂತೆ ಯುರೋಪ್ ಖಂಡದ ಪ್ರಬಲ ದೇಶಗಳೆಲ್ಲಾ ಗುಂಪುಗೂಡಿಕೊಂಡು ಯುದ್ಧವನ್ನು ರೌದ್ರಾವತಾರ ತಳೆಯುವಂತೆ ಮಾಡಲಾಯ್ತು. ಅಷ್ಟರಲ್ಲಾಗಲೇ ಪ್ರಪಂಚದ ಭೂಭಾಗದ ಪೈಕಿ 50% ಕ್ಕೂ ಹೆಚ್ಚಿನ ಪ್ರದೇಶಗಳನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡಿದ್ದ ಯುರೋಪಿಯನ್ ದೇಶಗಳಿಗೆ ಸಂಪನ್ಮೂಲಗಳಿಗೆ, ಯುದ್ಧಾಳುಗಳಿಗೆ ಕೊರತೆಯೇನು ಆಗಲಿಲ್ಲ. ಹೀಗೆ ನಾಲ್ಕು ವರ್ಷಗಳ ಮೇಲೆ ಕೆಲವು ದಿವಸಗಳು ನಡೆದ ಯುದ್ಧ ಪರ್ಯಾವಸಾನವಾದಾಗ ಪ್ರಪಂಚದ ಸೇನೆ ಮತ್ತು ಸಾಮಾನ್ಯ ನಾಗರೀಕರು ಸೇರಿ ಒಂದು ಮುಕ್ಕಾಲು ಕೋಟಿ ಜನ ಯುದ್ಧದಿಂದ ಸಾವನ್ನಪ್ಪಿದರು ಎಂಬ ಅಧೀಕೃತ ವರದಿ ಹೊರ ಬಿತ್ತು. ವರದಿ ಅಧೀಕೃತವಷ್ಟೇ, ಸಾವು ನೋವುಗಳ ಸಂಖ್ಯೆ ಇನ್ನೂ ಹೆಚ್ಚಿದ್ದರೂ ಇರಬಹುದು. ಆ ಯುದ್ಧದಲ್ಲಿ ಪಾಲ್ಗೊಂಡಿದ್ದ ಹಾಗು ನಂತರ ಉಳಿದುಕೊಂಡ ರಾಷ್ಟ್ರಗಳು ಯುದ್ಧೋನ್ಮಾದ ಇಳಿಸಿಕೊಂಡು ಪ್ರಪಂಚದೆದುರು ಬಂದು ತಾವು ಮಾಡಿದ ಕೆಲಸ ನಿರ್ಲಜ್ಜವೆಂತಲೂ, ಈ ಹಿಂದೆ ಎಂದೂ ನಡೆದಿರದಿದ್ದ ಆ ಪರಿಯ ಮಾನವ ವಿನಾಶಕ್ಕೆ ನಾಂದಿಯಾದೆವೆಂದೂ ಪೇಚಾಡಿಕೊಳ್ಳುತ್ತ 'ರಾಷ್ಟ್ರ್ರಗಳ ಒಕ್ಕೂಟ'ವೆಂಬ ಮುಳುಗುವ ಹಡಗಿನ ರೀತಿಯ ಹೊಸ ಸಂಸ್ಥೆಯನ್ನು ತೆರೆದು ಎಲ್ಲಾ ದೇಶಗಳು ಈ ಸಂಸ್ಥೆಯ ಆಜ್ಞಾರಾಧಕಾರಗಬೇಕು ಎಂದವು. ಮೂಲತಃ ಈ ಒಕ್ಕೂಟ ರಚನೆಗೆ ಜಾಗತೀಕ ವಿರೋಧ ವ್ಯಕ್ತವಾಗಿದ್ದು ಆರಂಭದಲ್ಲೇ ಅಪಶಕುನವೆಂಬಂತಾಗಿತ್ತು.

ಆ ಸಂಸ್ಥೆ ಆರಂಭವಾದ ಹದಿನೈದು-ಹದಿನಾರು ವರ್ಷಗಳಿಗೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುವವರು ಯಾರೂ ಇಲ್ಲವಾದರು. ನಾನಾ ಕಾರಣಗಳಿಂದ ಕಳೆಗುಂದಿದ ಆ ಸಂಸ್ಥೆ ಯಾವುದಕ್ಕೆ ನಿರ್ಮಾಣವಾಗಿತ್ತೋ ಆ ಮೂಲ ಧ್ಯೇಯವನ್ನೇ ನಡೆಸಿಕೊಳ್ಳಲಾರದಷ್ಟು ಅಶಕ್ತವಾಯಿತು. ಕೊನೆಗೆ ಎರಡನೇ ವಿಶ್ವ ಯುದ್ಧ ಆರಂಭವಾಗಿಯೇ ಹೋಯಿತು.ಬಹುತೇಕ ಏಷ್ಯಾ ಹಾಗು ಯುರೋಪ್ ಖಂಡಗಳಲ್ಲಿ ನಡೆದ ಈ ಯುದ್ಧ ಜಪಾನಿನ ಅನಿರೀಕ್ಷಿತ ದಾಳಿಯಿಂದಲೂ, ಅಮೆರಿಕಾದ ಆತುರದ ನಿರ್ಣಯದಿಂದಲೂ ಲಕ್ಷಾಂತರ ನಾಗರೀಕರನ್ನು ಬಲಿ ಕೊಡುವದರ ಜೊತೆಗೆ ಪರ್ಯವಸಾನವಾಯಿತು. ವಿಜ್ಞಾನ-ತಂತ್ರಜ್ಞಾನದಲ್ಲಿ ದಾಪುಗಾಲಿಡುತ್ತಿದ್ದ ಅಮೆರಿಕಾ ತಾನು ಹೊಸದಾಗಿ ಕಂಡು ಹಿಡಿದಿದ್ದ ಸಮೂಹ ನಾಶಕ ಅಸ್ತ್ರವನ್ನು ಜಪಾನಿನ ಹಿರೋಷಿಮಾ, ನಾಗಾಸಾಕಿಗಳ ಮೇಲೆ ಪ್ರಯೋಗ ಮಾಡಿ ಲಕ್ಷಾಂತರ ಮಂದಿಯ ಮಾರಣ ಹೋಮ ನಡೆಸಿದ ನಂತರವೇ ಅದಕ್ಕೆ ಜ್ಞಾನೋದಯವಾಯಿತು ತಾನೆಂತಹ ಪ್ರಮಾದವೆಸಗಿದೆ ಎನ್ನುವುದು. ಸುಮಾರು ಏಳು ವರ್ಷಗಳ ಕಾಲ ನಡೆದ ಎರಡನೇ ಮಹಾ ಯುದ್ಧದಲ್ಲಿ ಸೇನೆ ಹಾಗು ನಾಗರೀಕರೂ ಸೇರಿ ಸುಮಾರು ಆರು ಕೋಟಿ ಜನ ಪ್ರಾಣಕಳೆದುಕೊಂಡರು.

ಮೊದಲನೇ ವಿಶ್ವ ಯುದ್ಧದ ತರುವಾಯು ಯುರೋಪ್ ಖಂಡಗಳ ದೇಶಗಳ ಮೇಲೆ ಪ್ರಜಾತಂತ್ರದ ಮಿಂಚು ಹಾದು ಹೋಗಿ ಅಲ್ಲಿನ ಬಹುತೇಕ ದೇಶಗಳು ತಮ್ಮ ಭಾಗ್ಯವಿಧಾತರನ್ನು ತಾವೇ ಆರಿಸಿಕೊಳ್ಳುವ ರೀತಿಗೆ ಉಘೇ ಎಂದವು. ಎರಡನೇ ವಿಶ್ವ ಯುದ್ಧದ ತರುವಾಯು ಪ್ರಾಬಲ್ಯ ಕಳೆದುಕೊಂಡ ಯುರೋಪ್ ದೇಶಗಳು ನಿಧಾನಕ್ಕೆ ತಮ್ಮ ಹಿಡಿತದಲ್ಲಿದ್ದ ದೇಶಗಳನ್ನು ಬಿಟ್ಟುಬಿಡತೊಡಗಿದವು, ಆಗಲೇ ನಮ್ಮ ಭಾರತವೂ ಸೇರಿದಂತೆ ಅಸಂಖ್ಯ ದೇಶಗಳು ಸ್ವಾತಂತ್ರ್ಯ ಸಾಧಿಸಿದವು. ಮೊದಲ ಹಾಗು ಎರಡನೇ ವಿಶ್ವ ಯುದ್ಧಗಳು ದೊಡ್ಡ ಪ್ರಮಾಣದಲ್ಲಿ ಮನುಕುಲದ ವಿನಾಶ ಉಂಟು ಮಾಡಿದರೂ ಅವುಗಳ ಫಲಿತಾಂಶ ಪ್ರಪಂಚದ ಪಾಲಿಗೆ ಉತ್ತಮ ಬಗೆಯಲ್ಲಿ ಒದಗಿಕೊಂಡಿದ್ದು ಕಾಕತಾಳೀಯವಲ್ಲ. ಮೊದಲ ಹಾಗು ಎರಡನೇ ವಿಶ್ವ ಯುದ್ಧಗಳ ನಡುವಿನ ವ್ಯತ್ಯಾಸವನ್ನು ನಾವು ಗಮನಿಸ ಹೊರಟರೆ ಮೊದಲನೇ ವಿಶ್ವಯುದ್ಧದ ತಯಾರಿ ಸಂಪೂರ್ಣವಾಗಿ ಶೂನ್ಯವಾಗಿತ್ತು. ಯುದ್ಧಕ್ಕೆ ತಂತ್ರಜ್ಞಾನ, ವಿಜ್ಞಾನ ಯಾವ ರೀತಿ ಪರಿಣಾಮಕಾರಿಯಾಗಬಲ್ಲುದು ಎಂಬ ಯೋಚನೆಯನ್ನು ಮಾಡಿಕೊಂಡು ಕೂತಿದ್ದವರು ಯಾರು ಇರಲಿಲ್ಲ. ಆದರೆ ಅದರ ತರುವಾಯು ಎರಡನೇ ವಿಶ್ವ ಯುದ್ಧಕ್ಕೂ ಮೊದಲು ಅನೇಕ ವೈಜ್ಞಾನಿಕ ಪ್ರಯೋಗಗಳು ನಡೆದು ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವಿನಾಶ ಉಂಟು ಮಾಡುವಂತಹ ಸಮೂಹ ನಾಶಕಗಳೂ ಮೊದಲಾಗಿ ಅನೇಕ ತಂತ್ರಜ್ಞಾನ ಆಧಾರಿತ ಯಂತ್ರಗಳು ಸೇನಾ ವಲಯದಲ್ಲಿ ಸೇರಿಕೊಂಡವು. ಅದರಿಂದಾಗಿ ಮನುಷ್ಯ ಹೆಚ್ಚಿನ ಪ್ರಯಾಸವಿಲ್ಲದೆ ಹೆಚ್ಚು ಜನರನ್ನು ಕೊಲ್ಲಲು, ದೇಶವೊಂದರ ಭೌತಿಕ ಆಸ್ತಿ-ಪಾಸ್ತಿಗಳನ್ನು ನಾಶ ಮಾಡಲು ಅತ್ಯಂತ ಸಮರ್ಥನಾದ. ರಾಷ್ಟ್ರಗಳು ಪೈಪೋಟಿಗೆ ಬಿದ್ದು ಅಸ್ತ್ರಗಳನ್ನು, ಸೇನಾ ಬಲವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾಗ್ಯೂ ಎರಡನೇ ವಿಶ್ವ ಯುದ್ಧದ ಫಲವಾಗಿ ಉದಿಸಿದ ವಿಶ್ವ ಸಂಸ್ಥೆಯ ಅಂಕೆಯಲ್ಲೇ ಬಹುತೇಕ ರಾಷ್ಟ್ರಗಳು ಇವೆ. ಹಾಗಂತ ವಿಶ್ವ ಸಂಸ್ಥೆಯ ಕಟ್ಟಪ್ಪಣೆಯನ್ನು ಅನೂಚಾನುವಾಗಿ ಎಲ್ಲ ರಾಷ್ಟ್ರಗಳು ಪಾಲಿಸುತ್ತಿಲ್ಲ. ಉತ್ತರ ಕೊರಿಯಾದಂತಹ ದೇಶಗಳು ಆಗಾಗ್ಗೆ ಸೆಟೆದು ಕೊಂಡು ನಿಲ್ಲುತ್ತಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಮೂರನೇ ವಿಶ್ವ ಯುದ್ಧಕ್ಕೆ ವೇದಿಕೆ ತಯಾರಾಗಿದೆಯೇ? ಅದು ನಡೆದರೆ ಯಾರೆಲ್ಲರ ನಡುವೆ ನಡೆಯಬಹುದು? ಅದರ ಪರಿಣಾಮ ಏನೇನಾಗಬಹುದು? ಎನ್ನುವ ನಮ್ಮ ಮಾಧ್ಯಮಗಳ ಊಹಾತ್ಮಕ ಕಾರ್ಯಕ್ರಮಗಳಿಗೂ ಸೆಡ್ಡು ಹೊಡೆದು ಮೂರನೇ ವಿಶ್ವ ಯುದ್ಧ ಈಗಾಗಲೇ ಆರಂಭವಾಗಿ ಸದ್ದರಿಯದೇ ನಡೆಯುತ್ತಿದೆಯೇ? ಎನ್ನುವ ಯೋಚನೆ ಒಂದು ಕ್ಷಣ ಉಂಟಾಗುತ್ತದೆ. ಕರೋನಾ ವೈರಸ್ ಅನ್ನು ಚೀನಾ ದೇಶದ ವುಹಾನ್ ನಗರದ ವೈರಸ್ ಅಧ್ಯಯನ ಕೇಂದ್ರದಲ್ಲಿ ಸೃಷ್ಟಿ ಮಾಡಲಾಯಿತು, ಅನ್ಯ ದೇಶಗಳ ಮೇಲೆ ಹಿಂಬಾಗಿಲಿನ ಮೂಲಕ ಯುದ್ಧಗೈದು ಸಾರ್ವಭೌಮನಾಗಿ ಮೆರೆಯಬೇಕೆಂಬ ಚೀನಾದ ಹಪಾಹಪಿಗೆ ಬೆಲೆಕೊಟ್ಟು ಸೃಷ್ಟಿ ಮಾಡಿದ ಈ ವೈರಸ್ ಅಲ್ಲಿನ ವಿಜ್ಞಾನಿಗಳ ಕಣ್ತಪ್ಪಿನಿಂದ ಹೊರ ಜಗತ್ತಿಗೆ ಹರಿದುಬಿಟ್ಟಿತು ಎಂಬ ಸುದ್ದಿ ಬಯಲಾಗುತ್ತಿದ್ದಂತೆ ಅಮೆರಿಕಾದ ಟ್ರಂಪ್ ರ ಆಡಳಿತ ಚೀನಾದ ವಿರುದ್ಧ ತೀಕ್ಷಣವಾಗಿ ಪ್ರತಿಕ್ರಿಯಿಸಿತು. ಆದರೆ ಅಲ್ಲಿನ ಚುನಾವಣೆಗಳು ಸಮೀಪವಿದ್ದುದರಿಂದ 'ಕೈಲಾಗದವನು ಮೈ ಪರಚಿಕೊಂಡ' ಎನ್ನುವಂತೆ ಟ್ರಂಪ್ ತನ್ನ ದೇಶದೊಳಗಿನ ಪರಿಸ್ಥಿತಿ ನಿಭಾಯಿಸಲು ಅಸಮರ್ಥರಾಗಿ ಚುನಾವಣೆ ಗೆಲ್ಲುವ ಉದ್ದೇಶವೊಂದರಿಂದಲೇ ಚೀನಾದ ಕಡೆಗೆ ಕೈ ತೋರುತ್ತಿದ್ದಾರೆ ಎಂದು ಅಮೆರಿಕೆಯ ಪ್ರಜೆಗಳೇ ಹಾಸ್ಯ ಮಾಡಿ ನಕ್ಕುಬಿಟ್ಟರು. ನಂತರ ಆ ವಿವಾದದೊಳಗೆ ಅಮೆರಿಕಾದ ಪೂರ್ವ ಅಧ್ಯಕ್ಷ ಬರಾಕ್ ಒಬಾಮ ಹೆಸರು ಕೇಳಿ ಬಂದ ಮೇಲಂತೂ, ವಿರೋಧ ಪಕ್ಷವನ್ನು ಹಳಿಯುವುದಕ್ಕಾಗಿ ಟ್ರಂಪ್ ಇದನ್ನೆಲ್ಲಾ ಹಣ ಕೊಟ್ಟು ಮಾಡಿಸುತ್ತಿದ್ದಾರೆ, ಇದೊಂದು ಚುನಾವಣೆಯ ಗಿಮಿಕ್ ಇರಬಹುದು ಎಂತಲೇ ಅಮೆರಿಕಾದ ಅನೇಕರು ಬಗೆದರು.

ಕರೋನಾ ಎರಡನೇ ಅಲೆಗೆ ಮತ್ತೆ ಲಾಕ್ ಡೌನ್ ಆದ ಭಾರತದ ಐಟಿ ರಾಜಧಾನಿ
ಅದರ ಕುರಿತು ಕೂಲಂಕುಷವಾದ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಲು ಯಾವ ದೇಶಗಳ ಹತ್ತಿರವೂ ಸಮಯವಿರಲಿಲ್ಲ, ಸಮಯವಿದ್ದವರಿಗೆ ಚೀನಾವನ್ನು ಎದುರಿಸುವ ಸ್ಥೈರ್ಯವೇ ಇರಲಿಲ್ಲ. ತಮ್ಮ ತಮ್ಮ ದೇಶದ ನಾಗರೀಕರ ಪ್ರಾಣ ಉಳಿಸಿಕೊಳ್ಳುವುದೇ ಆಯಾ ದೇಶಗಳ ವಕ್ತಾರರಿಗೆ ಪ್ರಮುಖವಾದ್ದರಿಂದ ಟೀಕೆ ಟಿಪ್ಪಣಿಗಳಿಗೆ ಅವಕಾಶವಿಲ್ಲದೆ ಅವರೆಲ್ಲರೂ ಕಾರ್ಯ ಪ್ರವೃತ್ತರಾದರು. ಪರಿಣಾಮ 2020ರ ಬಹುತೇಕ ಅರ್ಧ ವರ್ಷದಷ್ಟು ಕಾಲ ಪ್ರಪಂಚವೇ ಲಾಕ್ ಡೌನ್ ಆಗಬೇಕಾಯಿತು. ಜಾಗತೀಕ ಉತ್ಪಾದನಾ ರಂಗಕ್ಕೆ ಹಿಂದೆಂದೂ ಕಂಡಿರದಂತಹ ಹೊಡೆತ ಬಿತ್ತು, ಅಗತ್ಯ ವಸ್ತುಗಳ ಬೆಲೆ ಗಗನ ಮುಖಿಯಾಯ್ತು. ವುಹಾನ್ ನಗರದಲ್ಲಿ ಜನಿಸಿ ಸರ್ವ ದೇಶಗಳಿಗೂ ಪದಾರ್ಪಣೆ ಮಾಡಿದ ವೈರಸ್ ಯುರೋಪ್ ಖಂಡದ 2020ರ ಚಳಿಗಾಲದಲ್ಲಿ ಹೊಸ ಅವತಾರ ತಳೆಯಿತು. ಉಗ್ರಾವತಾರ ತಾಳಿದ ವೈರಸ್ ಯುರೋಪ್ ಖಂಡವನ್ನು ಇನ್ನಿಲ್ಲದಂತೆ ಕಾಡಿ ಭಾರತಕ್ಕೂ ವಕ್ಕರಿಸಿತು.

ಇಷ್ಟೆಲ್ಲಾ ಘಟನೆಗಳಾಗುವಾಗ ನಮ್ಮನ್ನು ಆಶ್ಚರ್ಯಕ್ಕೆ ದೂಡುವುದು ಕರೋನಾ ವೈರಸ್ ನ ಜನ್ಮ ಸ್ಥಾನವಾದ ಚೀನಾದ ನಡವಳಿಕೆ. ದೇಶಗಳು ಲಾಕ್ ಡೌನ್ ಜಾರಿಗೊಳಿಸುತ್ತಿದಂತೆ ಸುತ್ತಲಿನ ದೇಶಗಳೊಂದಿಗೆ ತಗಾದೆ ತೆಗೆದು ಸಿಕ್ಕ ಸಿಕ್ಕ ಕಡೆಗಳಲ್ಲಿ ಠಳಾಯಿಸುವುದಕ್ಕೆ ಯತ್ನಿಸಿತು. ಭಾರತ, ಮಯನ್ಮಾರ್, ನೇಪಾಳ, ವಿಯೆಟ್ನಾಮ್, ಆಸ್ಟ್ರೇಲಿಯಾಗಳ ಮೇಲೆ ಹಲ್ಲು ಮಸೆದು ಜಗಳಕ್ಕಿಳಿಯಿತು. ಅದೃಷ್ಟವಶಾತ್ ಆ ಪೈಕಿ ಕೆಲವು ದೇಶಗಳು ತಮ್ಮನ್ನು ತಾವು ರಕ್ಷಿಸಿಕೊಂಡರೂ ಮಯನ್ಮಾರ್ ನಂತಹ ದೇಶಗಳು ಸೋತು ಹೋದವು. ಸದ್ಯಕ್ಕೆ ಚೀನಾದ ಕೆಂಗಣ್ಣಿಗೆ ಸಿಲುಕಿರುವುದು ತೈವಾನ್. ಇವೆಲ್ಲವುಗಳ ನಡುವೆ ಬಂದ ಹೊಸ ಸುದ್ದಿಯೆಂದರೆ ಇಡೀ ಪ್ರಪಂಚದಲ್ಲಿನ ಎಲ್ಲ ದೇಶಗಳು ನಷ್ಟದಲ್ಲಿದ್ದರೆ ಚೀನಾದ ಜಿಡಿಪಿ ಹಿಂದೆಂದೂ ಕಾಣದಂತೆ ಪುಟಿದೆದ್ದು ನಿಂತಿರುವುದು. ಇಷ್ಟೆಲ್ಲಾ ಕಂಡ ಮೇಲೆ ಇದು ಚೀನಾದ ಚಿತಾವಣೆ ಒಂದು ಭಾಗ ಎನಿಸದೆ?. ಕರೋನಾ ವ್ಯಾಧಿ ಪ್ರಪಂಚಕ್ಕೆ ಅಪ್ಪಳಿಸಿ ಒಂದು ವರ್ಷದ ಮೇಲೆ 2-3 ತಿಂಗಳಾಗಿದೆ ಅಷ್ಟೇ, ಅಷ್ಟರಲ್ಲಿ ಇಂದಿನವರೆಗೂ 32 ಲಕ್ಷದಷ್ಟು ಜನರನ್ನು ಬಲಿ ಪಡೆದುಕೊಂಡಿದೆ, ಅದರಲ್ಲೂ ಚೀನಾ, ಉತ್ತರ ಕೊರಿಯಾಗಳ ಲೆಕ್ಕ ಇದುವರೆವಿಗೂ ಸರಿಯಾಗಿ ಸಿಕ್ಕಿಲ್ಲ. ಒಂದು ವರ್ಷಕ್ಕೆ ಇಷ್ಟು ಅವಾಂತರವಾದರೆ, ವಿಶ್ವ ಯುದ್ಧಗಳ ರೀತಿ ನಾಲ್ಕಾರು ವರ್ಷ ಇದೆ ರೀತಿ ದೂಡಿದರೆ ಸಾವಿನ ಸಂಖ್ಯೆ ಕೋಟಿ ದಾಟುವುದರಲ್ಲಿ ಯಾವ ಸಂಶಯವೂ ಇಲ್ಲ.

ಹಿಂದೆ ಬರುತ್ತಿದ್ದ ಪ್ಲೇಗ್, ಕಾಲರಾಗಳು ಹೀಗೆ ಭಾಯಾನಕ ಸನ್ನಿವೇಶ ಸೃಷ್ಟಿಸಿದ್ದರೂ ಆಗ್ಗೆ ಜಗತ್ತಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಪ್ರಯಾಣ ಈಗಿನಷ್ಟು ಸುಲಭವಾಗಿರಲಿಲ್ಲ. ಈಗ ಲಾಜಿಸ್ಟಿಕ್ ಕ್ಷೇತ್ರ ಹಿಂದೆಂದಿಗಿಂತಲೂ ಸಬಲವಾಗಿದೆ, ಅದು ಕರೋನ ರೋಗವಾಹಕದಲ್ಲೂ ಸಬಲವಾಗಿದ್ದು ದುರಂತವೇ ಸರಿ. ಈ ಕಾರಣವೊಂದರಿಂದಲೇ ಕರೋನಾ ಪ್ಲೇಗ್, ಕಾಲರಾ ಹೆಮ್ಮಾರಿಗಳಂತೆ ಮಿಂಚಿ ಮರೆಯಾಗುತ್ತದೆ ಎನ್ನಲಾಗುವುದಿಲ್ಲ. ಅದಕ್ಕಾಗಿಯೇ ಚಿಕಿತ್ಸೆ ಬರುವವರೆಗೂ ಇಲ್ಲೇನಾಗುತ್ತದೆ ಎನ್ನುವ ಧೈರ್ಯ ವಿಶ್ವ ಸಂಸ್ಥೆಯ ಅರೋಗ್ಯ ಇಲಾಖೆಯೂ ಸೇರಿದಂತೆ ಸೇರಿ ಯಾರಿಗೂ ಇದ್ದಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶ್ವದ ಸಕಲ ಸರ್ವತ್ರರೂ ಕೈ ಚೆಲ್ಲಿರುವಾಗ ಚೀನಾದ ಲಘುಬಗೆಯ ನಡೆ ಆಶ್ಚರ್ಯ ಉಂಟು ಮಾಡುವಂತಹುದು. ಅಲ್ಲಿ ಕರೋನ ಮೊದಮೊದಲಿಗೆ ದಾಂಗುಡಿಯಿಟ್ಟಾಗ ಬಲ ಪ್ರಯೋಗದ ಮೂಲಕ ಜನರನ್ನು ಹತೋಟಿಗೆ ತಂದು ಕೇವಲ ಆರೇ ತಿಂಗಳಲ್ಲಿ ಸಂಪೂರ್ಣ ಗುಣ ಮುಖನಾದೆ ಎಂದಿತು ಚೀನಾ, ಆದರೆ ಅಲ್ಲಿನ ದೇಶದೊಳಗಣ ಪರಿಸ್ಥಿತಿಯೇನೋ ಹೊರಗಿನವರಿಗೆ ಗೊತ್ತಿದ್ದಂತಿಲ್ಲ.

ಜಗತ್ತನ್ನೆಲ್ಲಾ ಸೊರಗುವಂತೆ ಮಾಡಿ, ತಾನು ಪಟ ಪಟನೇ ಪುಟಿಯುತ್ತಿರುವ ಚೀನಾ ಮರೆಯಲ್ಲಿ ಮೂರನೇ ವಿಶ್ವ ಯುದ್ಧಕ್ಕೆ ಕಾರಣವಾಯಿತೆ?. ಯುದ್ಧ ರಂಗದಲ್ಲಿ ನಿಂತು ಹೋರಾಡದೆ ಹಿಂಬಾಗಿಲಲ್ಲಿ ವೈರಸ್ ಮೂಲಕ ಜಗತ್ತನ್ನು ಸೋಲಿಸಿ ತಾನು ವಿಶ್ವ ನಾಯಕನ ಪಟ್ಟಕ್ಕೆ ಅಣಿಯಾಯಿತೇ?. ಕಳೆದೆರಡು ಮಹಾ ಯುದ್ಧಗಳ ಸಮಯದಲ್ಲಿ ಆದಂತೆಯೇ ಇದೆಲ್ಲಾ ಮುಗಿದ ಮೇಲೆ ಇದು ಮಹಾ ಯುದ್ಧವೆಂಬ ಅರಿಕೆ ನಮ್ಮಲ್ಲಾಗುವುದೇ?. ಅಷ್ಟರಲ್ಲಿ ನಾವು ಜೀವಂತ ಬದುಕಿರುವೆವೇ?. ಯಾವುದಕ್ಕೂ ಸದ್ಯಕ್ಕೆ ಉತ್ತರವಿಲ್ಲ. ಈ ವೈರಸ್ ಹಗರಣ ಜಗತ್ತಿನಿಂದ ಮರೆಯಾದ ಮೇಲೆ ಜಗತ್ತು ವಿನಾಶವಾಗದೆ ಉಳಿದರಷ್ಟೇ ಚಿಂತಿಸಬಹುದು. ಇಲ್ಲದಿದ್ದರೆ ಈಗ ನಾವು ಹರಪ್ಪ-ಮೆಹೆಂಜೋದಾರೊ ನಾಗರೀಕತೆಗಳನ್ನು ನೋಡುತ್ತಿರುವಂತೆಯೇ ಮುಂದಿನ ಯಾವುದೋ ಪೀಳಿಗೆ ನಮ್ಮ ಮನೆಗಳಿಗೆ ಬಂದು ನಮ್ಮ ಪಾತ್ರೆ ಪಗಡಗಳನ್ನು ಅಧ್ಯಯನ ವಸ್ತುಗಳನ್ನಾಗಿ ಮಾಡಿಕೊಳ್ಳಲೂಬಹುದು. ಪರಿಣಾಮ ಭಿನ್ನವಾಗಿರಲೂಬಹುದು.

-0-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...