ಭಾನುವಾರ, ಮೇ 30, 2021

ತತ್ವ ಸಿದ್ಧಾಂತಗಳೆಲ್ಲೆ ಮೀರಿ

ನಮ್ಮ ದೇಶ ಅನೇಕ ಭಾಷೆ, ಸಂಸೃತಿ, ವಿಚಾರ, ಧರ್ಮ, ಜಾತಿಗಳ ಆಗರ. ಇಲ್ಲಿನಷ್ಟು ವೈವಿಧ್ಯತೆಯನ್ನೂ ಪ್ರಪಂಚದ ಬೇರಾವ ಭಾಗದಲ್ಲೂ ಕಾಣುವುದು ಸಾಧ್ಯವೇ ಇಲ್ಲ. ಪ್ರಪಂಚದ ಎಲ್ಲ ದೇಶಗಳು ತಮ್ಮ ಭಾಷೆಯೋ, ಧರ್ಮವೋ, ರಾಜಕೀಯ ಕಾರಣಕ್ಕೋ ಒಂದಾಗಿ ದೇಶವೆನಿಸಿಕೊಂಡರೆ ಭಾರತ ಮಾತ್ರ ಇವುಗಳೆಲ್ಲವನ್ನೂ ಮೀರಿ ನಿಂತಿರುವುದು ಆಶ್ಚರ್ಯವೇ. ಸ್ವಾತಂತ್ರ್ಯಾನಂತರ ದೇಶ ವಿಭಜನೆಗೊಂಡು ಧರ್ಮಾಧಾರಿತ ವಿಭಜನೆಗೆ ಮೊದಲಾದಾಗ ಭಾರತವು ಧರ್ಮಾತೀತ ವಿಚಾರವನ್ನಪ್ಪಿಕೊಂಡಿತು. ಕಾರಣ, ಭಾರತ ಕಳೆದ ಮೂರು ಸಹಸ್ತ್ರಮಾನಗಳಲ್ಲಿ ತನ್ನ ನೆಲದಲ್ಲೇ ಇನ್ನಿತರ ಧರ್ಮಗಳಿಗೆ ಜನ್ಮವಿತ್ತಿದೆ, ಅಷ್ಟಲ್ಲದೇ ಹೊರಗಿನಿಂದ ಬಂದ ಧರ್ಮಗಳಿಗೂ ಜಾಗ ಕೊಟ್ಟಿದೆ.

ಧರ್ಮದ ವಿಚಾರಕ್ಕೆ ದೇಶವನ್ನೇ ತುಂಡರಿಸಿಕೊಂಡರೂ ನಮ್ಮಲ್ಲಿ ಹಲವರಿಗೆ ಬುದ್ಧಿ ಬಾರದಿರುವುದು ವಿಚಿತ್ರವೆನಿಸುತ್ತದೆ. ದೇಶಕ್ಕಿಂತ ಧರ್ಮವೇ ದೊಡ್ಡದೆಂದು ಧರ್ಮದ ಪರದೆಯೊಳಗೆ ಭಾರತ ವಿರೋಧಿ ದೇಶಗಳಿಗೂ ಬೆಂಬಲವೀಯುವರೂ, ತಮ್ಮ ಧರ್ಮಗಳೊಳಗೇ ಅನೇಕ ಒಡಕು ಸೃಷ್ಟಿಸಿಕೊಂಡು ತತ್ವ-ಸಿದ್ಧಾಂತಗಳಿಗೆ ಬಡಿದಾಡಿಕೊಳ್ಳುವವರೂ, ಒಂದೇ ಧರ್ಮದೊಳಗೂ ಬಡಿದಾಡಿಕೊಳ್ಳುವವರೂ, ಧರ್ಮದೊಳಗೂ ಪಂಥ ಮಾಡಿಕೊಂಡು ಧಾರ್ಮಿಕ ಆಚರಣೆ-ಅನುಷ್ಠಾನಗಳ ಹೆಸರಲ್ಲೇ ತಮ್ಮ ಜೀವನವನ್ನು ಬರಡು ಮಾಡಿಕೊಂಡವರೂ ಅಸಂಖ್ಯವಾಗಿದ್ದಾರೆ. ಧರ್ಮ, ದೇವರು. ಆಚರಣೆ, ಅನುಷ್ಠಾನ ಅಂತ ಯಾವುದ್ಯಾವುದನ್ನು ಎಷ್ಟೆಷ್ಟು ಮಾಡಿದರು ಕೊನೆಗೆ ನಾವು ಮಾಡುವ ಕೆಲಸವೊಂದೇ ನಮ್ಮ ಕೈ ಹಿಡಿಯುವುದು ಎನ್ನುವ ಬುದ್ಧಿ ತಿಳಿದವರೂ ಮತ್ತೆ ಅದೇ ಹೊಲೆಗೆಸರಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ದೇಶದ ಬುದ್ಧಿವಂತ ನಾಗರೀಕರು ಈ ಪರಿ ಮೌಢ್ಯಕ್ಕೊಳಗಾದರೆ, ಅದೂ ಈ ವೈಜ್ಞಾನಿಕ ಯುಗದಲ್ಲಿ! ದೇಶ ಪ್ರಗತಿ ಸಾಧಿಸುತ್ತದೆ ಎನ್ನುವುದು ಕಲ್ಪನೆಯಾಗಿಯೇ ಉಳಿಯುತ್ತದೆ ಹೊರತು ಕಾರ್ಯ ರೂಪಕ್ಕೆ ಬರುವುದಿಲ್ಲ.

ಹಾಗೆಂದು ದೇವರಿದ್ದಾನೋ, ಇಲ್ಲವೋ? ಎಂಬ ಜಿಜ್ಞಾಸೆಗೆ ನಾನು ನಾಂದಿಯಾಗುತ್ತಿಲ್ಲ. ದೇವರಿದ್ದರೆ, ಅವನು ಸರ್ವಶಕ್ತ, ಸರ್ವಾಂತರ್ಯಾಮಿ. ನಿಮ್ಮ ಎಲ್ಲ ಬೇಕು ಬೇಡಗಳನ್ನು ತಿಳಿದವನು ಆತ. ಆತನನ್ನು ನೀವು ಬೇಡಿಕೊಳ್ಳುವ ಅವಶ್ಯಕತೆಯಾದರೂ ಏನು?. ವಿವಿಧ ಮಂತ್ರ, ಆರಾಧನೆಗಳಿಂದ ಆತನಿಗೆ ಭಕ್ತಿ ಸಮರ್ಪಣೆ ಮಾಡುವ ಜರೂರತ್ತಾದರೂ ಏನು? ಅವನ ಕಟಾಕ್ಷದಿಂದಲೇ ಇಲ್ಲಿಗೆ ಬಂದು ಬಾಳುತ್ತಿರುವ ನೀವು ಅವನನ್ನೇ ಬೇಡುವುದೇನನ್ನು?. ನಿಮಗೇನು ಬೇಕು? ಏನು ಬೇಡವೆಂದು ಆತನಿಗೆ ತಿಳಿದಿಲ್ಲದಿರುವಷ್ಟು ಆತ ದಡ್ಡನೆಂದುಕೊಂಡಿರಾ?. ಖಂಡಿತಾ ಇಲ್ಲ. ಒಂದು ಪಕ್ಷ ದೇವರಿಲ್ಲ ಎಂದಿಟ್ಟುಕೊಳ್ಳಿ. ಆಗ ನಿಮಗ್ಯಾರು ಇಲ್ಲ. ನಿಮ್ಮನ್ನು ಹೆತ್ತವರು, ಬಂಧು ಬಳಗ, ನಿಮ್ಮನ್ನು ಪ್ರೀತಿಸುವ ಜನ ಅಷ್ಟರ ಹೊರತು ಪ್ರಪಂಚದಲ್ಲಿನ್ಯಾರು ಇಲ್ಲ. ಹಾಗೆಂದಮೇಲೆ ನಿಮ್ಮ ಸ್ವಂತ ಬಲ ನಂಬಿಕೊಂಡು ನೀವು ಬದುಕಬೇಕು, ಬಾಳಬೇಕು. ಸ್ವಂತ ಬಲವ ನಂಬಿ ಬದುಕಿದವನಿಗೆ ಇಲ್ಲಿ ಸೋಲಾಗಿದೆಯೇ?. ಇಲ್ಲವಲ್ಲ. ಸ್ವಬಲವ ನಂಬಿ ಬದುಕಿದವರೂ ಅಮೋಘವಾದವುಗಳನ್ನು ಇಲ್ಲಿ ಸೃಷ್ಟಿಸಿದ್ದಾರಲ್ಲ!

ಬಿಡಿ, ಈ ವಾದ ಪ್ರತಿವಾದ ಮುಗಿಯದ ಕಥೆ. ಅದೂ ಭಾರತದಲ್ಲಿ. ದೇವರನ್ನು ಭೋಗ್ಯ ಹಾಕಿಸಿಕೊಂಡವರಂತೆ, ದತ್ತು ಪಡೆದುಕೊಂಡವರಂತೆ ಕೆಲವರಾಡುವುದು ನೋಡಿದರೆ ಅವರೆಂದೂ ನಿಜ ಸ್ಥಿತಿಯ ಅರಿವು ಮಾಡಿಕೊಂಡವರಲ್ಲ ಎನಿಸುತ್ತದೆ. ತಾವು ಓದಿರುವ ತಮ್ಮ ಧಾರ್ಮಿಕ ಗ್ರಂಥಗಳಲ್ಲಿರುವುದೇ ಸರಿ ಎಂದು ಹೊಡೆದಾಟಕ್ಕೆ ನಿಲ್ಲುವ ಪ್ರವೃತ್ತಿ ಅನೇಕರಲ್ಲಿದೆ. ಧರ್ಮ, ಜಾತಿ, ಪಂಗಡಗಳ ಮೇಲಿನ ಅತೀವ ನಿಷ್ಠೆ ಮಾನವತೆಗೆ ವಿರುದ್ಧವೇ ಹೊರತು ಮಾನವತೆಯ ಪರವೆಂದೂ ಅಲ್ಲ. ನಿಮ್ಮನ್ನು ನೀವು ಪಂಗಡವೊಂದರೊಳಗೆ ಗುರುತಿಸಿಕೊಂಡಾಗಲೇ ನಿಮ್ಮಲ್ಲಿನ ಮಾನವೀಯತೆಗೆ ಗಡಿ ಬಂದು ಅದರ ವಿಸ್ತಾರತೆಯನ್ನು ಕಿರಿದಾಗಿಸುತ್ತಾ ಸಾಗುತ್ತದೆ ಅಷ್ಟೇ.

ಈ ಚರ್ಚೆ, ವಾದಗಳಿಗೆಲ್ಲಾ ಹೊರತಾಗಿ ಕಾಯಕವ ನಂಬಿ ಬದುಕಿ, ಮೈ ಮುರಿದು ದುಡಿಯಿರಿ. ಮಾಡುವ ಕಾಯಕದಲ್ಲಿ ನಿಷ್ಠೆಯಿರಿಸಿ ದುಡಿದರೆ ಫಲಾಫಲ ಬಂದೇ ತೀರುತ್ತದೆ ಎನ್ನುವುದನ್ನೇ ಹನ್ನೆರಡನೇ ಶತಮಾನದ ಬಸವಾದಿ ಶರಣರು ಸಾರಿದರು, ಅಷ್ಟೇ ಅಲ್ಲ ಹಾಗೆ ಬಾಳಿ ತೋರಿಸಿದರೂ ಕೂಡ. ಕೆಲವು ದಶಕಗಳ ಹಿಂದೆ ಚೀನಾ ದೇಶ ಇದೇ ಕಾಯಕ ತತ್ವವನ್ನು ಜನರ ಮೇಲೆ ಬಲ ಪ್ರಯೋಗ ಮಾಡಿ ಹೇರಿತಾದರೂ ತನ್ನ ಬೆಳವಣಿಗೆಯಲ್ಲಿ ಆಶ್ಚರ್ಯಕರ ವೇಗವನ್ನು ತೋರಿತು. ಅಲ್ಲಿಂದ ಆ ದೇಶದ ನಸೀಬು ಬದಲಾದದ್ದು ಈಗ ಇತಿಹಾಸ. ಹಿಂದೂ ಧರ್ಮ ಭಕ್ತಿಯಿಂದ ಅನುಸರಿಸುವ ಭಗವದ್ಗೀತೆಯಲ್ಲಿಯೂ ಶ್ರೀ ಕೃಷ್ಣ "ಕರ್ಮಣ್ಯೇ ವಾಧಿಕಾರಸ್ತೇ......" ಎನ್ನುವಾಗ ಕಾರ್ಯ ನಿಷ್ಠರಾಗಿ, ಇನ್ನುಳಿದವುಗಳ ಕುರಿತು ಯೋಚಿಸದಿರಿ ಎಂದಿದ್ದಾನೆ. ಫಲಾಫಲಗಳ ಅಪೇಕ್ಷೆಗೆ ನಮಗಿರುವುದು ಸೀಮಿತ ಅಧಿಕಾರವಷ್ಟೇ ಎಂದು ಶ್ರೀ ಕೃಷ್ಣ ನೇರಾನೇರವಾಗಿಯೇ ಹೇಳಿದ್ದಾನೆ. ಆದರೂ ಗೀತೆಯ ವಿವಿಧ ಎಳೆಗಳನ್ನು ತಮ್ಮ ತಮ್ಮ ಬುದ್ಧಿಯಂತೆಯೇ ಅರ್ಥೈಸಿಕೊಳ್ಳುತ್ತ ಒಂದೇ ಭಗವದ್ಗೀತೆಗೆ ನೂರೆಂಟು ವ್ಯಾಖ್ಯಾನಗಳನ್ನು ನೂರೆಂಟು ರೀತಿಯಲ್ಲಿ ವರ್ಣಿಸಿ ಸಮಾಜವನ್ನು ದಿಕ್ಕೆಡಿಸಿದವರು ಅನೇಕರಿದ್ದಾರೆ.

ಈ ತತ್ವ, ಸಿದ್ಧಾಂತಗಳೆಲ್ಲೆ ಮೀರಿ ಸಮಾಜದ ಹನ್ನೆರಡನೇ ಶತಮಾನದ ಆಸುಪಾಸಿನ ಭಾರತೀಯ ಸಾಮಾಜಿಕ ಸನ್ನಿವೇಶಗಳಲ್ಲಿ ಕ್ಲಿಷ್ಟ ಸತ್ಯವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅರ್ಥ ಮಾಡಿಸುವುದನ್ನು ಸಾಮಾಜಿಕ ಜವಾಬ್ದಾರಿಯ ರೀತಿಯಲ್ಲಿ ತೆಗೆದುಕೊಂಡು ಹೊರಟವರು ಅತೀ ಕಡಿಮೆ ಜನ, ಕೆಲವು ಪ್ರದೇಶಗಳಲ್ಲಿ ಇಲ್ಲವೆಂದೇ ಹೇಳಬಹುದು. ಅದರೊಳಗೆ ಬಸವಾದಿ ಶರಣರದು ಮರೆಯಲಾರದಂತಹ ಕೊಡುಗೆ. ಭಾರತೀಯ ಸಾಮಾಜಿಕ ಸಂರಚನೆಯಲ್ಲಿ ಮಂಚೂಣಿಯಲ್ಲಿ ನಿಲ್ಲುವ ಹೊಸ ವಿಚಾರಗಳನ್ನು ಜನರೊಳಗೆ ಬಿತ್ತಿದ ಕನ್ನಡ ಸೀಮೆಯ ಹೆಮ್ಮೆಯ ಶರಣ ಸಂಕುಲ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳನ್ನು ಮೀರಿ ನಿಂತು ಕಾಯಕ ತತ್ವಕ್ಕೆ ಸಂಪೂರ್ಣ ಬೆಂಬಲವಿತ್ತಿದ್ದು ಆಗಿನ ಅತಿ ದೊಡ್ಡ ಕ್ರಾಂತಿ. ಜಾತಕ, ಗ್ರಹಚಾರ ಫಲ, ಪುನರ್ಜನ್ಮ-ಮರುಜನ್ಮ ಸಿದ್ಧಾಂತಗಳನ್ನೆಲ್ಲವನ್ನು ಬದಿಗೆ ಸರಿಸಿ ಕಾಯಕ, ದೈಹಿಕ ಶ್ರಮಾಧಾರಿತ ತತ್ವ ಆಗಿನ ಭಾರತೀಯ ಸನ್ನಿವೇಶಗಳಿಗೆ ಅತ್ಯಾವಶ್ಯಕವಾಗಿದ್ದ ವಿಚಾರ.
ಕಾಯಕ ತತ್ವದ ಜೊತೆ ಜೊತೆಗೆ ಕಂದಾಚಾರಗಳಿಗೆ ತಿಲ ತರ್ಪಣವನಿತ್ತು ಧರ್ಮ, ಜಾತಿ, ಪಂಗಡಗಳೆಲ್ಲವನ್ನೂ ಮೀರಿ ಎಲ್ಲ ಜನಾಂಗಗಳವರನ್ನೂ ಕೂಡಿಕೊಳ್ಳುತ್ತಾ ಹೊಸ ವಿಚಾರದೆಡೆಗೆ ನಡೆದದ್ದು ಭಾರತದ ಧೀರ್ಘ ಇತಿಹಾಸದಲ್ಲಿ ಎದ್ದು ಕಾಣುವ ವಿಚಾರ. ಸರ್ವರನ್ನೂ ಸಮಭಾವದೊಳಗೆ ಕಾಣುತ್ತಾ, ಹಂಚಿ ತಿನ್ನುತ್ತಾ ಸತ್ಯ ನಿಷ್ಠೆಯ ಕಾಯಕ ಜೀವನ ಮಾಡುವುದೇ ಬಸವಾದಿ ಶರಣರ ಪ್ರಮುಖ ಧರ್ಮ ಸಾರ. ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ, ಕ್ಲಿಷ್ಟ ಪದಗಳನ್ನುಪಯೋಗಿಸಿ ವಾಕ್ಪಟುಗಳಿಗೆ, ವಿದ್ವಾಂಸರಿಗೆ ಮಾತ್ರವೇ ಅರ್ಥವಾಗುವಂತಹ ಪರಿಭಾಷೆಯಲ್ಲಿ ಬರೆದಿರುವ ಅನೇಕ ಧರ್ಮಸಾರಗಳು ಹಳ್ಳ ಹಿಡಿದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾದ ಧರ್ಮ ಆಚರಣೆಗಳೆಡೆಗೆ ಇಂದಿನ ಅನೇಕರು ನಡೆಯುತ್ತಿರುವುದಕ್ಕೆ ಕಾರಣವೇನೆಂದು ನಾನು ವಿಶೇಷವಾಗಿ ಇಲ್ಲಿ ವಿವರಿಸುವ ಅಗತ್ಯವಿಲ್ಲವಷ್ಟೆ. ಒಟ್ಟಿನಲ್ಲಿ ನಮ್ಮ ದೇಶದ ಯುವಜನತೆ ಧರ್ಮದ ಅಮಲಿಗೆ ಬಿದ್ದು ತಮ್ಮ ತಮ್ಮಲ್ಲೇ ಯಾರು ಶ್ರೇಷ್ಠರೆಂದು ಬಡಿದಾಡಿಕೊಳ್ಳದೇ ಕಾಯಕ ತತ್ವವನ್ನಳವಡಿಸಿಕೊಂಡು ಅದರೊಳಗೆ ನಿಷ್ಠರಾಗಿ ಬಾಳಿದರೆ ಭಾರತ ಬದುಕಬಹುದು. ಇಲ್ಲದಿದ್ದರೆ ಧರ್ಮದ ಅಮಲಿನಲ್ಲಿ ಸಿಲುಕಿ ನರಕವಾದ ಎಷ್ಟೋ ದೇಶಗಳೊಳಗೆ ಭಾರತವೂ ಒಂದಾಗಿಬಿಡುವುದರಲ್ಲಿ ಅನುಮಾನವಿಲ್ಲ.

-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...