ಸೋಮವಾರ, ಜುಲೈ 29, 2019

ದೇವೋತ್ತಮ

ವೈರಾಗ್ಯವಂತ ಪಾರ್ಥನಿಗೆ 

ರಣಭೂಮಿಯೊಳಗೆ 

ಧೈರ್ಯದ ಬಿರುಗಾಳಿಯೆಬ್ಬಿಸಿದನು,

ತನ್ನವರೇ ಬಂಧು ಬಾಂಧವ ಗುರು 

ಹಿರಿಯರನು ತುಂಡರಿಸಿ ಚೆಂಡಾಡೆಂದನು,

ಅಧರ್ಮಕ್ಕೆಲುಬಾಗುವರ 

ನಡುವ ಮುರಿಯೆಂದನು ಧರ್ಮದಾತ.


ಭಿಕ್ಷಾರ್ಥಿಯಾದ ಕುಚೇಲನಿಗೆ

ಅರಮನೆಯಲ್ಲಿ ಪಲ್ಲಂಗವೇರಿಸಿ 

ಅವನ ಪಾದೋದಕ ತಲೆಗೆ 

ಪ್ರೋಕ್ಷಿಸಿ, ನಡಿಯೆಂದನು.

ಮನದ ತುಮುಲಗಳ ಅರ್ಥೈಸಿಕೊಂಡು 

ಕೇಳದೆಯೂ ಕರುಣಿಸಿದನು ಭಾಗ್ಯದಾತ.

ಪಂಚ ಪಾಂಡವರ ಮಡದಿಗೆ 


ಅಯೋಗ್ಯನೊಬ್ಬ ಮುಡಿಹಿಡಿದೆಳೆದಾಗ

ಧುತ್ತೆಂದು ಎದುರ್ಗೊಂಡನು,

ಅಸಂಸ್ಕೃತರನೇನು ಸುಸಂಸ್ಕೃತರ 

ಪಟ್ಟಕ್ಕೆಳೆಯಲಿಲ್ಲ.

ಅಲ್ಲಾಗಲಿದ್ದ ಅಸಂಸ್ಕೃತಿಗೆ ತೆರೆಯೆಳೆದು

ನಿಂತನಾಗ ನೀತಿದಾತ.


ಭಯಗೊಂಡವನ ವಂದಿಗಿದ್ದನು,

ನೊಂದು ಬೆಂದವನ ಜೊತೆಗಿದ್ದನು,

ಆರ್ತಳ ಕೂಗಿಗೆ ಓಡಿ ಬಂದನು,

ರಣಾಂಗಣದಲ್ಲಿ ಟೊಂಕ ಕಟ್ಟಿ ನಿಂತನು,

ಚತುರನಾದನು, ಮುಂದಣ ಪರ್ವಗಳ 

ಅರಿವಿದ್ದರೂ ಹುಸಿ ನಗೆಯೊಂದನು 

ಬೀರಿದ್ದನು.


ತಾನಿರುವ ಪರ್ಯಂತ ನಿಮ್ಮ 

ನಿಮ್ಮ ಕಾರ್ಯಕ್ಕೆ ತಕ್ಕಂತೆ 

ಬದುಕೊದಗುವುದು ಎಂಬುದನ್ನು 

ಸೂಚ್ಯವಾಗಿ ತನ್ಮೂಲಕ ಬಿತ್ತರಿಸುತ್ತಲೇ 

ಇದ್ದನವನು 

ಅರಿಯುವರ ಸಂಖ್ಯೆ ದೊಡ್ಡದಿರಲಿಲ್ಲವೇನೋ 

ಕೊನೆಗೆ 

ಅರಿತವರ ಪಾಲಿಗಾದನವನು 'ದೇವೋತ್ತಮ'.


ಭಾನುವಾರ, ಜುಲೈ 28, 2019

ನಾನು ಮತ್ತು ವಿಶ್ವ ಮಾನವ ಸಂದೇಶ ಭಾಗ ೨

ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನದಾರು
ಲೆಕ್ಕವಿರಿಸಿಲ್ಲ ಜಾಗ ತನ್ನಾದಿಬಂಧುಗಳ
ದಕ್ಕುವುದೇ ನಿನಗೆ ಜಸ - ಮಂಕುತಿಮ್ಮ

ಭಾವ ಋಷಿ ಡಿವಿಜಿಯವರ ಸಾಲುಗಳಿವು. ಪ್ರಪಂಚದಲ್ಲಿ ಎಂತೆತದೋ ಮಹಾನ್ ಘಟನೆಗಳು ಘಟಿಸಿ ಮುಗಿದಿವೆ, ಆದರೆ ಅವುಗಳಿಗೆ ಕಾರಣೀಕರ್ತನಾಗಿ/ಮೂಲ ಪುರುಷನಾಗಿ ಈ ಪ್ರಪಂಚ ಯಾವೊಬ್ಬ ವ್ಯಕ್ತಿಯನ್ನು ತನ್ನ ಜ್ಞಾಪಕದಲ್ಲಿರಿಸಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಹೆಸರಿಗಾಗಿ, ಕೀರ್ತಿಗಾಗಲಿ, ಹಣಕ್ಕಾಗಿ ಬದುಕಿರುವವರೆಗೂ ಬಡಿದಾಡಿ ಸಾಯುತ್ತೇವಲ್ಲ ಇದು ಯಾವ ಪುರುಷಾರ್ಥಕ್ಕಾಗಿ?. ಅದರಲ್ಲಿ ನಾವು ಪ್ರಕೃತಿಯನ್ನು ಎದುರಿಸಿ ಜಯಿಸಲು ಸಾಧ್ಯವೇ? ಎನ್ನುವ ನಿಲುವು ಡಿ.ವಿ.ಜಿಯವರದು.ವಯ್ಯಕ್ತಿಕ ಬೇಕುಗಳಿಗಷ್ಟೇ ಬಡಿದಾಡದೆ, ಸಮೂಹವೊಂದರಲ್ಲಿ ಗುರುತಿಸಿಕೊಂಡ ಮನುಷ್ಯ ತನ್ನ ಸಮೂಹಕ್ಕಾಗಿ ಬಡಿದಾಡುತ್ತಿರುವುದು, ಅಂತಹ ಸಮೂಹ ಬಡಿದಾಟ ಕೂಟಕ್ಕೆ ಸೊ ಕಾಲ್ಡ್ ಸರ್ಕಾರ, ಇನ್ನಿತರ ಸಂಸ್ಥೆಗಳಿಂದ ಒಪ್ಪಿಗೆಯ ಮುದ್ರೆಯಿರುವುದು ಮನುಷ್ಯ ಇನ್ನೂ ಹೊಂದಿಕೊಂಡು ಬಾಳಲಾರ ಎಂಬುದನ್ನು ಎತ್ತಿ ತೋರಿಸುವಂತಿದೆ. ಬೇರೆ ದೂರವೆಲ್ಲೋ ಬೇಡ, ನಮ್ಮ ಭಾರತದ ಗಡಿಗಳನ್ನು ಒಂದು ದಿನದ ಮಟ್ಟಿಗೆ ಸೇನೆ ಜಮಾವಣೆಯಿಂದ ಹಿಂತೆಗೆದರೆ ಬೆಳಗು ಹರಿಯುವುದರೊಳಗೆ ಎಷ್ಟೆಷ್ಟು ಅನಾಹುತಗಳಿಗೆ ದಾರಿಯಾಗುತ್ತದೆ ಎಂದು ಊಹೆ ಮಾಡಿಕೊಂಡರೆ ಸಾಕು, ಎದೆ ಝಲ್ಲೆನ್ನುತ್ತದೆ. ಸರ್ಕಾರವೇ ಮುಂದೆ ನಿಂತು ನಿಲ್ಲಿಸಿರುವ ಸೇನೆ ಎತ್ತಿ ತೋರಿಸುತ್ತಿರುವುದು ಅದನ್ನೇ ನಾವು ಕೂಡಿ ಬಾಳಲಾರೆವೆಂದು. ಗಡಿಯಿಂದ ಅತ್ತಲಿರುವ ಜನರು ಹಿಂದೊಮ್ಮೆ ನಮ್ಮವರೇ ಆಗಿದ್ದರು ಎಂಬ ಅರಿವು ನಮಗಷ್ಟೇ ಅಲ್ಲ ಅವರಿಗೂ ಇದ್ದುಬಿಟ್ಟರೆ ಭಾರತ-ಪಾಕಿಸ್ತಾನಗಳು ರಾಮ ರಾಜ್ಯಗಳಾಗಿಬಿಡುತ್ತಿದ್ದವು. ಸದ್ಯಕ್ಕೆ ಅದು ಕನಸಿನ ಮಾತು ಅಷ್ಟೇ.

ವಿಶ್ವ ಮಾನವ ಸಂದೇಶದಲ್ಲಿ ರಸಋಷಿ ಹಂಬಲಿಸುತ್ತಾರೆ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಎಲ್ಲ ಧರ್ಮಗ್ರಂಥಗಳನ್ನು ಓದಿ ತನ್ನ ಧರ್ಮವನ್ನು ತಾನೇ ದರ್ಶಿಸಿಕೊಳ್ಳಬೇಕು, ಯಾವುದೋ ಒಂದು ಗ್ರಂಥಕ್ಕೆ ಕಟ್ಟು ಬೀಳದೆ ಮನುಕುಲಕ್ಕೆ ಉಪಕಾರಿಯಾಗಿ ನಿಲ್ಲುವ ಅಂಶಗಳನ್ನು ತೆಗೆದುಕೊಂಡು ತನಗಾಗಿಯೇ ವೈಯಕ್ತಿಕವಾದ ಗ್ರಂಥವೊಂದನ್ನು ತೀರ್ಮಾನ ಮಾಡಿಕೊಂಡು ಅದರಂತೆ ನಡೆಯಬೇಕು. ಹೀಗಾದಾಗ ಪ್ರಪಂಚದಲ್ಲಿ ಎಷ್ಟು ಜನರು ಇರುತ್ತಾರೆಯೋ ಅಷ್ಟೇ ಸಂಖ್ಯೆಯ ಧರ್ಮಗಳು ಇರುತ್ತವೆ.  ಒಂದೇ ಸಿದ್ಧಾಂತಕ್ಕೆ ಹಲವಾರು ಜನರು ಒಟ್ಟಾದಾಗ ಮಾತ್ರ ಅದರೊಳಗೆ ನಾವು, ನಮದೆಂಬ ಹೊಮ್ಮು ಕಾಣಿಸಿಕೊಳ್ಳುವುದು. ಅದೇ ಬದಲಾಗಿ ಒಂದು ಸಿದ್ಧಾಂತಕ್ಕೆ ಒಬ್ಬೊಬ್ಬರು ಮಾತ್ರವಿದ್ದಾಗ ನಾವು ನಮದೆಂಬ ಹೊಮ್ಮು ಅಲ್ಲಿ ಸುಳಿಯಲಾರದು, ಅದನ್ನು ಇನ್ನೊಬ್ಬರ ಮುಂದೆ ಪ್ರದರ್ಶಿಸಿ ಶಹಬಾಸ್ ಗಿರಿ ಪಡೆದುಕೊಳ್ಳುವ ಚಾಳಿ ಸಂಪೂರ್ಣವಾಗಿ ನಿಂತುಹೋಗಬೇಕು. ಅಂತಹ ವೈಯಕ್ತಿಕ ಸಿದ್ಧಾಂತಗಳನ್ನು ಪ್ರಶಂಸಿಸುವ ವೇದಿಕೆಗಳು ಕೂಡ ಕ್ರಮೇಣ ನಿಸ್ತೇಜವಾಗುತ್ತ ಬಂದರೆ ಪ್ರತಿಯೊಬ್ಬನು ಅವನದೇ ಧರ್ಮವೊಂದನ್ನು ಕಡೆದು ನಿಲ್ಲಿಸಿಕೊಳ್ಳಲು ಸಾಧ್ಯವಿದೆ.ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕಿ ತೋರಿಸುವುದೇ ಮಾನವನ ಜೀವನದ ಪರಮ ಧ್ಯೇಯವಾಗಬೇಕು.ಪ್ರಪಂಚದಲ್ಲಿ ಮತ್ತೊಬ್ಬರನ್ನು ತಾವು ನಂಬಿದ ಸಿದ್ಧಾಂತಕ್ಕೆ/ತತ್ವಕ್ಕೆ ಒಗ್ಗಿಕೊಂಡು ಬಾಳಬೇಕೆಂಬುವ ಹಂಬಲವನ್ನು ಬಿಟ್ಟುಬಿಡುವುದೇ ಉತ್ತಮವೆನಿಸುತ್ತದೆ.

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಪುಸ್ತಕವೊಂದಕ್ಕೆ ಕಟ್ಟು ಬಿದ್ದ ಕೆಲವರು ಅಮಾಯಕರನ್ನು ನಿಷ್ಕಾರುಣವಾಗಿ ಕೊಂದರು, ಪಶ್ಚಿಮ ದೇಶಗಳಿಂದ ಪೂರ್ವ ದೇಶಗಳಿಗೆ ಸಿದ್ಧಾಂತಗಳ ಕಂತೆಯ ಹೊತ್ತುಕೊಂಡ ಬುದ್ಧಿವಂತರೆನಿಸಿಕೊಂಡವರ ಗುಂಪೊಂದು ಬಂದು ಇಲ್ಲಿನವರಿಗೆ ಅಲ್ಲಿಯ ಸಿದ್ಧಾಂತಗಳನ್ನು ಹೇರಲು ತುದಿಗಾಲಲ್ಲಿ ನಿಂತಿರುವುದು ಎನ್ನುವ ವಿಚಾರಗಳನ್ನು ಕೇಳಿದಾಗ ಎತ್ತ ಸಾಗುತ್ತಿದೆ ಆಧುನಿಕ ಜಗತ್ತು ಎನ್ನುವ ಅನುಮಾನ ಮೂಡುತ್ತಿದೆ. ಜನ ಹೆಚ್ಚು ಹೆಚ್ಚು ಓದಿಕೊಂಡಷ್ಟು ಬುದ್ಧಿವಂತರಾಗಿ ಒಳಿತು ಕೆಡಕುಗಳ ದೂರಾಲೋಚನೆ ಮಾಡುತ್ತಾರೆ ಎಂಬ ಹಳೆಯ ತಲೆಮಾರಿನವರ ನಿಲುವು ತಪ್ಪಾಗಿಬಿಡುವುದಕ್ಕೆ ಆಸ್ಪದವನಂತೂ ಕೊಡಲೇ ಬಾರದು. ಎಲ್ಲಕಿಂತ ಮಿಗಿಲಾಗಿ ನಾವು ನಾವೇ ಕಟ್ಟಿಕೊಂಡ ತತ್ವ ಸಿದ್ಧಾಂತಗಳನ್ನು ಮಗ್ಗುಲಿಗೆ ಸರಿಸಿ ಮನುಷ್ಯರಾಗಿ ಬದುಕುವುದು ಮೊದಲಾಗಬೇಕು.

ಅಂದಹಾಗೆ, ವೈಯಕ್ತಿಕ ಸಿದ್ಧಾಂತಗಳು ಈಗ್ಗೆ ಹೊಸವೇನಲ್ಲ. ಹಿಂದಿನಿಂದಲೂ ಅವು ಸರ್ವೇ ಸಾಮಾನ್ಯವಾಗಿ ಇದ್ದಂತಹವು. ವ್ಯತ್ಯಾಸವಿಷ್ಟೇ, ಆಗ ಮತ್ತೊಬ್ಬರ ಮೇಲೆ ಅವುಗಳನ್ನು ಹೇರಲು ಇದ್ದ ಮಾಧ್ಯಮಗಳ ಸಂಖ್ಯೆ ತೀರಾ ವಿರಳ ಇದೀಗ ವಿಪರೀತ ಹೆಚ್ಚು. ಅದೇ ಕಾರಣಕ್ಕೆ ಸಮಾಜದಲ್ಲಿನ ಕಂದಕಗಳು ಹೆಚ್ಚಾಗುತ್ತಿರುವುದು.

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...