ಸೋಮವಾರ, ಜುಲೈ 29, 2019

ದೇವೋತ್ತಮ

ವೈರಾಗ್ಯವಂತ ಪಾರ್ಥನಿಗೆ 

ರಣಭೂಮಿಯೊಳಗೆ 

ಧೈರ್ಯದ ಬಿರುಗಾಳಿಯೆಬ್ಬಿಸಿದನು,

ತನ್ನವರೇ ಬಂಧು ಬಾಂಧವ ಗುರು 

ಹಿರಿಯರನು ತುಂಡರಿಸಿ ಚೆಂಡಾಡೆಂದನು,

ಅಧರ್ಮಕ್ಕೆಲುಬಾಗುವರ 

ನಡುವ ಮುರಿಯೆಂದನು ಧರ್ಮದಾತ.


ಭಿಕ್ಷಾರ್ಥಿಯಾದ ಕುಚೇಲನಿಗೆ

ಅರಮನೆಯಲ್ಲಿ ಪಲ್ಲಂಗವೇರಿಸಿ 

ಅವನ ಪಾದೋದಕ ತಲೆಗೆ 

ಪ್ರೋಕ್ಷಿಸಿ, ನಡಿಯೆಂದನು.

ಮನದ ತುಮುಲಗಳ ಅರ್ಥೈಸಿಕೊಂಡು 

ಕೇಳದೆಯೂ ಕರುಣಿಸಿದನು ಭಾಗ್ಯದಾತ.

ಪಂಚ ಪಾಂಡವರ ಮಡದಿಗೆ 


ಅಯೋಗ್ಯನೊಬ್ಬ ಮುಡಿಹಿಡಿದೆಳೆದಾಗ

ಧುತ್ತೆಂದು ಎದುರ್ಗೊಂಡನು,

ಅಸಂಸ್ಕೃತರನೇನು ಸುಸಂಸ್ಕೃತರ 

ಪಟ್ಟಕ್ಕೆಳೆಯಲಿಲ್ಲ.

ಅಲ್ಲಾಗಲಿದ್ದ ಅಸಂಸ್ಕೃತಿಗೆ ತೆರೆಯೆಳೆದು

ನಿಂತನಾಗ ನೀತಿದಾತ.


ಭಯಗೊಂಡವನ ವಂದಿಗಿದ್ದನು,

ನೊಂದು ಬೆಂದವನ ಜೊತೆಗಿದ್ದನು,

ಆರ್ತಳ ಕೂಗಿಗೆ ಓಡಿ ಬಂದನು,

ರಣಾಂಗಣದಲ್ಲಿ ಟೊಂಕ ಕಟ್ಟಿ ನಿಂತನು,

ಚತುರನಾದನು, ಮುಂದಣ ಪರ್ವಗಳ 

ಅರಿವಿದ್ದರೂ ಹುಸಿ ನಗೆಯೊಂದನು 

ಬೀರಿದ್ದನು.


ತಾನಿರುವ ಪರ್ಯಂತ ನಿಮ್ಮ 

ನಿಮ್ಮ ಕಾರ್ಯಕ್ಕೆ ತಕ್ಕಂತೆ 

ಬದುಕೊದಗುವುದು ಎಂಬುದನ್ನು 

ಸೂಚ್ಯವಾಗಿ ತನ್ಮೂಲಕ ಬಿತ್ತರಿಸುತ್ತಲೇ 

ಇದ್ದನವನು 

ಅರಿಯುವರ ಸಂಖ್ಯೆ ದೊಡ್ಡದಿರಲಿಲ್ಲವೇನೋ 

ಕೊನೆಗೆ 

ಅರಿತವರ ಪಾಲಿಗಾದನವನು 'ದೇವೋತ್ತಮ'.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...