ಭಾನುವಾರ, ಡಿಸೆಂಬರ್ 24, 2017
ಮಾನವೀಯತೆ - ನಿನ್ನ ವಿಳಾಸವೆಲ್ಲಿ
ಭಾನುವಾರ, ಡಿಸೆಂಬರ್ 3, 2017
ನನಗಾಗಿ ಜನ್ಮ ತಳೆದ ಜೇನ ಹನಿ
ಭಾನುವಾರ, ನವೆಂಬರ್ 26, 2017
ಇರದಿದುಮ್ ಅವಗಾಹಿಸಿ ಇರ್ಪುದ ಸ್ಪುರಿಸು
ನಿನ್ನಿಂದ ಕೈ ಮುಗಿಸಿ
ತಾನಿರ್ಪ ಜಗದಾಗರಗಳಾವನೂ
ಎಳೆಯೊಳಗೂ ಅರುಹದೇ
ಇದೇಮ್ ಧರ್ಮ ನಿರಪೇಕ್ಷ ಪರೀಕ್ಷೆ
ಅದರೊಳಗೂ ಇಳಿ
ಬರುವುದಿರುವುದೇಮ್ ತಾನಳೆದು
ಇರದಿಹ ಗುಣವಂ ಅವಗಾಹಿಸಿ
ಇರ್ಪುದ ಸ್ಪುರಿಸು
ಅದೇ ಧರ್ಮ
ಅದೇ ಜ್ಞಾನ
ಅದೇ ವಿಜ್ಞಾನ
ನಗುತಿಹಳು ನೋಡಲ್ಲಿ ಕನ್ನಡಮ್ಮ
ಕನ್ನಡವ ಬೆಳೆಸೆನ್ನದಿರು
ಕನ್ನಡವನುಳಿಸಿ ಬೆಳೆಸಲು
ಅದೇನು ಕಮರುತಿರುವ ಗಿಡವೇ ?
ಬತ್ತುತ್ತಿರುವ ನದಿಯೇ?
ಕನ್ನಡವೊಂದು ಹೆಮ್ಮರ
ನೆರಳರಸಿ ಬರುವರಿಗಾಶ್ರಯ
ದಣಿದವರಿಗೊಂದು ತಂಗುದಾಣ
ಬಳಲಿದವರ ತಲೆಗೊಂದು
ಮೆತ್ತೆ ಹೂವಿನ ತಲೆದಿಂಬು
ಹಮ್ಮೇನು ಬಿಮ್ಮೇನು
ಯಾರ ಹಂಗೇನು ಕನ್ನಡಕೆ
ಯುಗ ಯುಗಾಂತರಗಳುರುಳಿ
ತಲೆ ತಲಾಂತರಗಳಳಿದರೂ
ನಗುತಿಹಳು ನೋಡಲ್ಲಿ ಕನ್ನಡಮ್ಮ.
ಬುಧವಾರ, ನವೆಂಬರ್ 15, 2017
ಸೌಜನ್ಯ
ಮೌನವೆಂದರೇನು?
ಮಾತೆಂದರೇನು?
ಮೌನ ಮಾತುಗಳ ಬೆಲೆ
ಎಲ್ಲೆಲ್ಲಿ ಎಷ್ಟೆಷ್ಟು
ಎಲ್ಲಕೂ ಬೆಲೆಯಿದು
ಸೌಜನ್ಯ!
ಪ್ರಕೃತಿಯೆಂದರೇನು?
ವಿಕೃತಿಯೆಂದರೇನು?
ಪ್ರಕೃತಿ ವಿಕೃತಿಗಳೆರಡಕ್ಕೂ
ಜುಗಲ್ ಬಂದಿ ಅದೇ
ಸೌಜನ್ಯ!
ಅಕ್ರಮ ತಾನ್ ಮನದೊಳಗೆ
ಮೇರೆ ಮೀರಿ
ಉಕ್ಕಿ ಹರಿಯೆ
ಸಕ್ರಮ ತಾನ್ ಮನದೊಡೆಯ
ತಂದು ತಹಬದಿಯದು
ಸೌಜನ್ಯ!
ಗುರುವಾರ, ನವೆಂಬರ್ 9, 2017
ಬಾಳಿಗೊಂದು ದೀಪಿಕೆ
ಕಾರ್ಯದಲ್ಲೊಂದು ತತ್ಪರತೆ
ಬದುಕೊಳಗೊಂದು ಘನತೆ
ಅನ್ಯರೊಡನಾಟಗಳೊಳಗೂ
ಅವರರವರ ಬಾಳ್ಗೊಂದು ದೀಪಿಕೆ
ಏನಿಲ್ಲಿ ಕಾಣುತಿಹುದು?
ತಂತ್ರ- ಜ್ಞಾನಗಳನೆಲ್ಲ ಮೀರಿದ
ಮಾನವೀಯತೆ
ಕನ್ನಡವೇ ತಾನ್ ಮನುಜನಾಗಿ
ಅವತರಿಸಿ ಕುಂತಂತೆ
ಧೀಮಂತ ಕನ್ನಡತಿ
ಮನವೇನು ಗುಣವೇನು
ಮನುಜನ ಬುದ್ಧಿಯ ಸುಪರ್ದಿ
ಯೊಳಗೇನೇನೊ ಮಾಯೆ
ಅದರೊಳಗಿಳಿದು ತನ್ನ ತಾ
ಮರೆತಂತೆ ಜೀವನರಂಗದೊಳಗೆ
ತಾ ಜಾಣೆ ಈ ಕನ್ನಡತಿ
ನುಡಿಸಿದರೆಷ್ಟೋ ಸಂತೋಷ
ನಗಿಸಿದರೆಷ್ಟೋ ಉನ್ಮಾದ
ಮನುಜರ ಮನವರಿದು
ನಡೆಯುವ ಈ ಪೆಣ್ ಗಿಲ್ಲ ಸೋಲು
ಇದು ಶತ ಸಿದ್ಧ.
ಶುಕ್ರವಾರ, ನವೆಂಬರ್ 3, 2017
ನಮ್ಮ ನರೇಶ
ಎತ್ತರದ್ದೊಂದು ನಿಲುವು
ದಿಟ್ಟವಾದ್ದೊಂದು ನೋಟ
ಅರಿವ ಜ್ಞಾನಗಳೊಳಗೆ
ಸ್ಪಷ್ಟವಾದ್ದೊಂದು ಅರಿಮೆ
ನಡೆಯೊಳಗೆ ನಿಜ
ಜೀವನವರಿತ ಚತುರ
ಹೇಳಿ-ಕೇಳುವುದರೊಳಗಿನ
ನಂಬಿಕೆಗಳನೆಲ್ಲಾ ದೂರ ನೂಕಿ
ತನ್ನಾತ್ಮ ಸಂತೋಷದೊಳಗೆ
ತಲ್ಲೀನನಿವನು
ಸಂತೋಷಿಗಳೊಳಗೂ
ದುಃಖಿಗಳೊಳಗೂ
ಅವರೇ ಆಗಿ ನಿಂತುಬಿಡುವನೀ
ಹುಡುಗ
ಆಗಾಗ ಬೆದಕಿರುವ 'ನೀನೊಬ್ಬ ದಡ್ಡ'
ಇನ್ನೊಮ್ಮೆ ಕೆಣಕಿರುವ 'ನೀನೊಬ್ಬ ಅದಮ'
ಇನ್ನಾರಲ್ಲೋ ಉಸುರಿರುವ 'ನಾನೊಬ್ಬ ಮೂರ್ಖ ಶಿಖಾಮಣಿ'ಯೆಂದು
ಇನ್ನು ಏನೇನೊ ಜನರ ಭಾವಗಳು
ಎಲ್ಲವನೂ ಕಂತೆ ಮಾಡಿ
ನನ್ನತ್ತ ತೂರಿರುವ,
ನಿಜಜೀವನ ರಂಗದ ಮಜಲೊಂದನು
ಇಲ್ಲೇ ಪರಿಚಯಿಸಿರುವ
ನನಗರಿಯದ ಜಗದ ಬಾಗಿಲನು
ತೋರಿರುವ
ತಾನೆತ್ತಲೂ ಸುಳಿಯದೇ
ಧೀಮಂತನಂತೆ ಕೂತಿರುವ
ದಾರಿಗಾರರಿಗೆ ಅಡ್ಡಲಾಗದೆ
ಸುಮ್ಮನಿದ್ದವರ ಮುಂದೆ ದೂಡದೆ
ತಾನೊಬ್ಬ ತಾಳ್ಮೆ ತಳೆದು ನಗುತಿರುವ
ಅವನೇ ನಮ್ಮ ನರೇಶ.
ಕಾಲದರಿವೇ ಗುರು!!
ಕಾಲ ತಾನ್ ಕಾಲಿಕ್ಕಿ
ಕಾಲ್ಗವುಚಿದನೆಲ್ಲ ಕಲಗಚ್ಚ
ಮಾಡಿ ಮುನ್ನಡೆಯುತಿರೆ
ಮಗುವೊ? ಮಂಗವೋ?
ನೀನೊಂದೂ ತಿಳಿಯದೆ
ಅರಳಿದ ಕಣ್
ಕೆರಳಿದ ಕಿವಿಮಾಡಿ
ಭ್ರಾಂತಿಯೊಳಗೆ ಬೆಚ್ಚುವುದೇನ್
ತರವಲ್ಲ ತಗಿ
ಕಾಲ ತಾನ್ ಥೇರನೇರಿ
ಧೂಳಿಕ್ಕಿ ತಾನ್ ಧೀಮಂತನಂತೆ
ಬರುತಿರೆ ಬೆದರಿ ಚದುರಿದ
ಅಂಬೆಗರುವಂತೆ
ಗ್ರಹಣ ಬಡಿದು ಕಲ್ಲೋಲಗೊಂಡ
ಕಡಲಂತೆ ಚಡಪಡುವಯೇನ್
ಒಡಮಾಡು ಸನ್ನದ್ಧನಾಗು
ಕಾಲದೂರಿಗೊಂದೇ ಕಾಲ್ದಾರಿ
ಗುರು ಗುರಿಗಳಿಲ್ಲದೆ
ತಾನೇ ಗುರುವಾಗಿ
ತನ್ನತ್ತ ಸೆಳೆಯುತಲಿಹುದು ನಿನ್ನ
ಅದರೊಳಗೆ ಹುದುಗಿಹೋಗುವ
ಮುನ್ನ ಸಾಧಿಸುವೆಯೇನ್!?
ಕಾಲದರಿವೇ ಗುರು!!!
ಶುಕ್ರವಾರ, ಅಕ್ಟೋಬರ್ 6, 2017
ನಾವು ಗಟ್ಟಿಗರಾಗದ ಹೊರತು ಭಾಷೆ ಉಳಿಸುವುದು ಅಸಾಧ್ಯ
ಸೋಮವಾರ, ಅಕ್ಟೋಬರ್ 2, 2017
ಲಾಲ್ ಬಹದ್ದೂರ್ ಶಾಸ್ತ್ರಿ - ಅಪ್ರತಿಮ ನಿಷ್ಠಾವಂತ
ಮಂಗಳವಾರ, ಸೆಪ್ಟೆಂಬರ್ 19, 2017
ಒಡಮಾಡು ಇನ್ನೊಂದಕೆ
ಬೈದೊಳ್ ಭಕ್ತಿ
ಚೀರಿದೊಳ್ ಭಕ್ತಿ
ಶಪಿಸಿದೊಳೂ ಭಕ್ತಿ
ಭಕ್ತಿಯೇ ಅಲ್ಲೆಲ್ಲ ಏಕತ್ರ ಶಕ್ತಿ
ದುಃಖದೊರ್ ದುಃಖದೊಳ್
ನಕ್ಕಿದೊಳ್ ದುಃಖ
ಬಿಕ್ಕಿದೊಳ್ ದುಃಖ
ಅಳುವೊಳ್ ದುಃಖ
ಗೊಣಗಿ ಗೊಡವಿದೊಳೆಲ್ಲ
ದುಃಖವೇ ದುಃಖ
ದಾರಿಗಾರ ನೀ ದಾರಿಯೊಳ್
ನಡೆದೋದಷ್ಟೆ ದಾರಿಗಾರ
ಪರಂತು ನಿಶ್ಯೇಷ ಜೀವನ
ಅದರೊಳಗೆ ನಿನಗೆ
ಗುರುವಿರನು ಗುರಿಯಿರದು
ನಿರರ್ಥವದು ಮುರುಟದನು
ಮೊದಲಾಗಿ ಒಡಮಾಡು
ಇನ್ನೊಂದಕೆ ಅಲ್ಲೇನು
ಬಲವಿಹುದೋ ಬಲ್ಲವರ್ಯಾರು
ಶನಿವಾರ, ಆಗಸ್ಟ್ 26, 2017
ನದಿಗಳಿಗಾಗಿ ಜಾಥಾ ಭಾರತದ ಈಗಿನ ಅವಶ್ಯಕತೆ
ಬರಿದಾಗಿ ಬತ್ತಿರುವ ಕಾವೇರಿ, ಮಹದೇಶ್ವರ ಬೆಟ್ಟದ ಹತ್ತಿರವಿರುವ ಕರ್ನಾಟಕ ತಮಿಳುನಾಡು ಗಡಿಯಲ್ಲಿನ ದೃಶ್ಯ |
ಮನುಷ್ಯನ ಜೀವನಕ್ಕೆ ನೀರು ಅತೀ ಅವಶ್ಯಕವಾದ ಕಾರಣ ಮನುಷ್ಯನ ಬದುಕು ನದಿ ಸಾಮಿಪ್ಯದಲ್ಲೇ ಆರಂಭವಾಯಿತು. ದಿನಗಳು ಕಳೆದಂತೆ ಹಳ್ಳಿಗಳು ನಗರಗಳಾಗಿ ಮನುಷ್ಯನ ನಾಗರೀಕತೆಯು ಹೊಸ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಇವತ್ತಿನ ಮಟ್ಟಿಗೆ ಬಂದು ನಿಂತಿದೆ. ಆದರೆ ಮನುಷ್ಯ ತಾನು ಬೆಳೆಯುವ ಭರದಲ್ಲಿ ಕಡೆಗಣಿಸಿದ್ದು ಮಾತ್ರ ನದಿಗಳನ್ನು. ಭಾರತದ ಸಂಸ್ಕೃತಿಯಲ್ಲಂತೂ ನದಿಗಳಿಗೆ ವಿಶೇಷ ಸ್ಥಾನ, ಬೇರೆಲ್ಲೂ ನಡೆಯದ ನದಿಯ ಆರತಿ ನಡೆಯುವುದು ಭಾರತ ಉಪಖಂಡದಲ್ಲಿ ಮಾತ್ರ. ನದಿಗೆ ದೇವರ ಸ್ಥಾನ ಕೊಟ್ಟ ಕೆಲವೇ ಕೆಲವು ಸಂಸ್ಕೃತಿಗಳಲ್ಲಿ ಭಾರತದ ಸಂಸ್ಕೃತಿಗೆ ಅಗ್ರ ಸ್ಥಾನ. ಇಂತಿರುವ ಭಾರತದ ನದಿಗಳು ಇಂದು ಏನಾಗಿವೆ, ಏನಾಗುತ್ತಿವೆ ಎನ್ನುವ ಅರಿವು ಬರೀ ಸರ್ಕಾರಕ್ಕಿದ್ದರೆ ಸಾಲದು, ಜನ ಸಾಮಾನ್ಯರಲ್ಲೂ ವ್ಯಕ್ತವಾಗಬೇಕು ಎನ್ನುವ ಅಭಿಲಾಷೆಯಿಂದಲೇ 'ಈಶಾ' ಸಂಸ್ಥೆಯ ಸಂಸ್ಥಾಪಕ ಹಾಗು ದಾರ್ಶನಿಕ ಸದ್ಗುರು ಜಗ್ಗಿ ವಾಸುದೇವ್ 'ನದಿಗಳಿಗಾಗಿ ಜಾಥಾ(ರ್ಯಾಲಿ ಫಾರ್ ರಿವರ್ಸ್)' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕನ್ಯಾಕುಮಾರಿಯಿಂದ ಹಿಡಿದು ಹಿಮಾಚಲದ ವರೆವಿಗೂ ರ್ಯಾಲಿ ಹೊರಡಲಿದೆ. ಮಾರ್ಗದಲ್ಲಿನ ಹದಿನಾರೂ ರಾಜ್ಯಗಳು ಈ ರ್ಯಾಲಿಗೆ ಕೈಜೋಡಿಸಿದ್ದು ಅಸಂಖ್ಯಾತ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಹೊಸದೊಂದು ಯೋಜನೆ ಸಿದ್ಧಪಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಸಲುವಾಗಿ ಜಾಥಾ ನಡೆಯುತ್ತಿದ್ದು ನೀರು ಬಳಸುವ ಸರ್ವರೂ ಈ ಜಾಥಾ ದಲ್ಲಿ ಪಾಲ್ಗೊಳ್ಳುವಂತೆ ಘೋಷಣೆ ಹೊರಡಿಸಲಾಗಿದೆ.
ನದಿಯ ಇಕ್ಕೆಲಗಳಲ್ಲಿ ಒಂದು ಕಿಲೋಮೀಟರ್ ವರೆವಿಗೂ ಕಾಡು ಬೆಳೆಸುವ ಮಾದರಿ ಪ್ರಾತ್ಯಕ್ಷಿಕೆ |
ಮಂಗಳವಾರ, ಆಗಸ್ಟ್ 22, 2017
ಎಡವಿದವರು - ಕೆಡವಿದವರು
ದಾಳಿ ದಾರ್ಷ್ಟ್ರ್ಯಗಳೊಳಗೆ ಕೆಡವದವರಿಲ್ಲ
ಎಡವಿದವರೇಳಲು ಎದ್ದವರೆಡವಲು
ಬಾಳೊಂದು ಬೀಳ್ಗಲ್ಲು ಬಿದ್ದೇಳಿ ಮಾಮೂಲು
ಬಿದ್ದವರೊಡನಾಡಿ ಪಾರುಗಾರ ಪರಮಾತ್ಮ
ಕಟ್ಟಿದುದ ಕೆಡವಲು ಕೆಡವಿದುದ ಕಟ್ಟಿ
ನಿಲುಹಲು ಇರುವ ಗೊಡವೆಯೇ ಬೇಡದೆ
ಯಾವನೋ ಕಟ್ಟಿಗಾಣಿಸಿದ ಪಂಜಿನರಮನೆಯೊಳಾಡುವನು
ಒಲೆ ಮುಂದಲ ಶೂರ ಅರಸೊತ್ತಿಗೆ ಭಿತ್ತಿಗಳ
ಮುಂದಲ ಮಹಾರಾಜಾ
ಆರಾರು ಕಟ್ಟಿ ಆರಾರು ಕೆಡವುದೀ ಬಾಳೊಂದು
ಕಟ್ಟಿ ಕಡಿದುರುಳಿಸುವ ಬೀಳ್ಗಲ್ಲು ಕಡೆಗಲ್ಲು
ಅರಿಮೆಯಿಕ್ಕಳ ಗುರಿಯಿಕ್ಕಿ ತಾ ತಗೆದಿದುದೇನು
ತಡಕದರೊಳಗೆ ಬಾಳ್ಗೇನು ಹಿರಿಮೆ
ಬಾಳ್ಕಟ್ಟಲು ವಾಡಗೆಯ ಭೋಗವೀ ದೇಹ
ಬಾಳ್ಕೆಡವಲು ವೀರನೆಂಬ ಅಂಕಿತವೇಕೆ
ಅರಿಮೆಯ ಗುರು ಹೃದಯದೊಳಿದ್ದು
ಕೆಡಲ್ಗೊಡುವುದೇ
ಆ ಅರಿಮೆಯೇ ಗುರು...ಆ ಗುರುವೇ
ಭುವಿಯೂರ ದೈವ
ಮೆಚ್ಚಿದನು ಪೆಚ್ಚದೆ ಕಡು ಸತ್ಯ
ಕೊನೆಯೊಳಗೆ ಪೆಚ್ಚುಗಾರ ನೀನಲ್ಲ
ಬೆಳಗಿಸೊಮ್ಮೆ ಅರಿಮೆಯ ಅಂತರಾತ್ಮವ
ಬಟಾ ಬಯಲು ನಿನ್ನೀ ಹೃದಯದಲಿ
ಮಂಗಳವಾರ, ಆಗಸ್ಟ್ 15, 2017
ಸ್ವತಂತ್ರ ಭಾರತಕ್ಕೆ ತುಂಬಿತು ಎಪ್ಪತ್ತು
ಅದು ಇಪ್ಪತ್ತನೇ ಶತಮಾನದ ಆದಿಭಾಗ. ದಕ್ಷಿಣ ಏಷ್ಯಾ ಬ್ರಿಟಿಷರ ಆಡಳಿತಕ್ಕೆ ಸಿಕ್ಕು ಅಕ್ಷರಶಃ ನಲುಗಿತ್ತು. ಈ ನೆಲದ್ದಲ್ಲದ ಸಂಸ್ಕೃತಿ, ಭಾಷೆ, ಆಚಾರ, ಆಡಳಿತಗಳನ್ನು ಯುರೋಪ್ ಖಂಡದಿಂದ ಈ ನೆಲಕ್ಕೆ ಸರಬರಾಜು ಮಾಡಿದ್ದೂ ಅಲ್ಲದೆ ಇಲ್ಲಿನ ಜನಗಳ ತಲೆಗೆ ಬಲವಂತವಾಗಿ ತುಂಬಿದ್ದರು ಬ್ರಿಟೀಷರು. ಇಲ್ಲಿನ ಮೂಲ ತತ್ವಗಳನ್ನು, ಮೂಲಭೂತ ಅಂಶಗಳನ್ನೆಲ್ಲ ದಿಕ್ಕರಿಸಿ ಪರಕೀಯರ ಆಡಳಿತೆಯೊಳಗೆ ಬಲವಂತವಾಗಿ ದೂಡಿದರೆ ಯಾರಿಗೆ ತಾನೇ ಸ್ವಾಭಿಮಾನ ಕುಂದುವುದಿಲ್ಲ. ಭಾರತದೊಳಗೂ ಅದೇ ಆಯಿತು, ಪರಕೀಯರ ಆಡಳಿತದ ವಿರುದ್ಧ ದನಿಗಳು ಒಂದೊಂದೇ ಬಲಗೊಳ್ಳತೊಡಗಿದಾಗ ಅವುಗಳನ್ನು ದಮನ ಮಾಡಲು ಅಷ್ಟೇ ಲಘುಬಗೆಯಿಂದ ಆಡಳಿತ ಪಾಳಯದಲ್ಲಿ ತಯಾರಿಗಳು ಸದ್ದಿಲ್ಲದೇ ನಡೆಯುತ್ತಲೇ ಇದ್ದವು. ವಿರುದ್ಧ ದನಿಯೆತ್ತಿದವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳುವುದು ಇಲ್ಲವೇ ಗುಂಡಿಟ್ಟು ಕೊಲ್ಲುವುದು ಅವ್ಯಾಹತವಾಗಿ ಮುಂದುವರೆದಿರುತ್ತಿದ್ದಾಗ ದೇಶದ ಎಷ್ಟೋ ಜನ ತಬ್ಬಲಿಗಳಾಗಿಹೋದರು.ಅಸಂಖ್ಯಾತ ತಾಯಿಯರು ತಮ್ಮ ಮಕ್ಕಳನ್ನು ಕಳೆದುಕೊಂಡರು, ಎಷ್ಟೋ ವೃದ್ಧರು ಆಸರೆಯಿಲ್ಲದೆ ಬೀದಿ ಹೆಣಗಳಾದರು, ಎಷ್ಟೋ ಮಕ್ಕಳು ದಿಕ್ಕಿಲ್ಲದೆ ಬೀದಿಯಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ ಭಿಕ್ಷೆ ಬೇಡುತ್ತಾ ತಮ್ಮ ಭವಿಷ್ಯವನ್ನೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಆಹುತಿಯಾಗಿಸಿಬಿಟ್ಟರು. ಇವೆಲ್ಲಾ ಈ ದೇಶದ ಜನಗಳು ಸವೆಸಿದ ಅಹಿತಕರ ದಿನಗಳು, ಅದಕ್ಕೆ ಕಾರಣ "ನಾವು ಚೆನ್ನಾಗಿದ್ದರೆ ಸಾಕು"ಎಂಬ ಸ್ವಾರ್ಥವಲ್ಲ ಬದಲಾಗಿ ನಮ್ಮ ಮುಂದಿನ ಪೀಳಿಗೆಗೆ ಸ್ವತಂತ್ರ್ಯ ಲೋಕದಲ್ಲಿ ವಿಹರಿಸುವ ಭಾಗ್ಯವನ್ನು ಕರುಣಿಸುವ ಸಲುವಾಗಿಯೇ ಎಂಬುದನ್ನು ಈ ಕಾಲದ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕಾಗಿದೆ.
ಭಾರತ ಸೀಮೆಯೊಳಗೆ ಆಡಳಿತದಲ್ಲಿ ಸ್ವತಂತ್ರ ಕೋರಿ ಎದ್ದ ದಂಗೆ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿದ ಪರಿ ಎಂತಹುದೆಂದರೆ ಎರಡನೇ ಮಹಾಯುದ್ಧದಲ್ಲಿ ಕೈ ಸುಟ್ಟುಕೊಂಡ ಸಂಧರ್ಭದಲ್ಲಿಯೇ ಭಾರತವನ್ನು ಬಿಟ್ಟು ಹೊರಡಬೇಕಾದ ಸಂದಿಗ್ದತೆಗೆ ಸಿಲುಕಿಕೊಂಡ ಸೂರ್ಯ ಮುಳುಗದ ದೇಶದ ದೊರೆಗಳು ಅದನ್ನೊಂದು ನುಂಗಲಾರದ ತುತ್ತಾಗಿಯೇ ಪರಿಗಣಿಸಿದರು. ಇದಾದ ನಂತರದಲ್ಲಿ ಆ ದೇಶ ಸೋಲುಗಳ ಸರಮಾಲೆಯನ್ನು ತನ್ನ ಕೊರಳಿಗೆ ಸುತ್ತಿಕೊಳ್ಳುತ್ತಲೇ ಹೋಯಿತು ಅಥವಾ ಅಲ್ಲಿ ಹೇಳಿಕೊಳ್ಳುವಂತಹ ಯಾವ ಬೆಳವಣಿಗೆಗಳು ಕಾಣಲಿಲ್ಲ.
ನಮ್ಮ ನಿಜವಾದ ಆಧುನಿಕ ತಾಪತ್ರಯಗಳು ಶುರುವಾಗಿದ್ದೇ ಅಲ್ಲಿಂದ, ಸ್ವತಂತ್ರ್ಯ ಭಾರತದಲ್ಲೇ ನಾವು ನಿಂತು ಕಟ್ಟಿದ ಸರ್ಕಾರವೇ ಇರುತ್ತದೆ ಹಾಗಾಗಿ ಬದುಕು ಮತ್ತಷ್ಟು ಸುಲಾಭವಾಗಲಿಕ್ಕೆ ಸಾಕು ಎನ್ನುವ ಆಗಿನ ಹಿರಿಯರ ಯೋಚನೆ/ಯೋಜನೆಗಳಿಗೆ ಮೂಲಾಧಾರವಾಗಿದ್ದ ಗತ ವೈಭವದ ಭಾರತ ಇನ್ನಿಲ್ಲವಾಗಿತ್ತು. ಕಣ್ಮುಂದೆ ತೊಂದರೆಗಳ ಪರ್ವತವೊಂದು ಧುತ್ತನೆ ಎದುರಾಗಿ 'ಏರು ನನ್ನನ್ನು' ಎಂದು ಸವಾಲೆಸೆದು ನಿಂತಂತೆಯೇ ಇತ್ತು. ಪುರಾತನ ಭಾರತ ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಕಾಯ್ದುಕೊಂಡಿದ್ದ ವ್ಯಾಪಾರ, ಶಿಕ್ಷಣ, ವಿಜ್ಞಾನದ ಗಾಢವಾದ ಸಂಬಂಧಗಳನ್ನು ಕಡಿದುಕೊಂಡು ನಡುಮಧ್ಯದಲ್ಲಿ ಕಡುವೈರಿ ಪಾಕಿಸ್ತಾನವೆಂಬ ದೇಶವೊಂದನ್ನು ಕಟ್ಟಿದ್ದು ನಮ್ಮ ದೇಶದ ಸಾಂಪ್ರದಾಯಿಕ ವ್ಯಾಪಾರ ಶೈಲಿಗೆ ಧಕ್ಕೆಯಾಗಿ ಈ ದೇಶದ ಪೂರ್ವಕಾಲದ ಆರ್ಥಿಕ ಶೈಲಿಗೆ ಆಘಾತವಾಗಿತ್ತು. ಆಧುನಿಕ ವ್ಯಾಪಾರ ಮಾರ್ಗಗಳನ್ನು ಹುಡುಕಲೇ ಬೇಕಾದ ಅನಿವಾರ್ಯತೆಗೆ ಒಗ್ಗಿಕೊಂಡ ಭಾರತ ಅದನ್ನು ಸುಲಲಿತವಾಗಿ ನಿಭಾಯಿಸುವಲ್ಲೂ ಯಶಸ್ವಿಯಾಯಿತು. ಭೂಮಾರ್ಗವಲ್ಲದೆ ಜಲಮಾರ್ಗವನ್ನು ಅವಲಂಬಿಸಿ ಆ ಮೂಲಕ ಯಥೇಚ್ಛ ವ್ಯಾಪಾರಗಳಿಗೆ ಒಗ್ಗುವುದು ಅದರ ಜೊತೆ ಜೊತೆಗೆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಆಧುನಿಕವಾಗಿ ಶೋಧಿಸಿದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂಲಕವೂ ಆಗಷ್ಟೇ ಶುರುವಾಗಿದ್ದ ಕೈಗಾರಿಕಾ ಕ್ರಾಂತಿಯಲ್ಲೂ ತನ್ನ ಪಾಲು ದಾಖಲಿಸುವ ಉತ್ಕಟ ಬಯಕೆಯಿಂದ ಭಾರತ ಸರ್ವ ರಂಗಗಳಲ್ಲೂ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಹೋಯಿತು.
ಕೋಟಿ ಕೋಟಿ ಭಾರತೀಯರ ಕನಸು ನನಸಾದ ದಿನದ ಪತ್ರಿಕೆಯಿದು, ವಿಷಾದವೆಂದರೆ ಈ ಸುದ್ದಿ ಇಲ್ಲಿ ಅಚ್ಚಾಗಲು ಲಕ್ಷಾಂತರ ಭಾರತೀಯರ ನೆತ್ತರು ಹರಿದಿದೆ |
ಬ್ರಿಟಿಷ್ ರಾಣಿಯನ್ನು ಎಳೆಯಬೇಕಾಗಿದ್ದು ಕುದುರೆಗಳು, ಆದರೂ ಇದನ್ನೊಮ್ಮೆ ನೋಡಿ |
ಭರತ ಖಂಡದಿಂದ ತುಂಡರಿಸಿಕೊಂಡು ಬೇರೆ ದೇಶಗಳೆಂಬ ಪಟ್ಟ ಕಟ್ಟಿಕೊಂಡ ಹಲವು ದೇಶಗಳು ಭಯೋತ್ಪಾದನೆ, ಬಡತನ ಮತ್ತಿತರ ಬಿರುದುಗಳನ್ನು ತನ್ನೊಳಗೆ ಸೇರಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಸುಕಾಗುತ್ತಿವೆ. ಆದರೆ ಭಾರತ ಮಾತ್ರ ತನ್ನನ್ನು ತೊರೆದು ಹೋದ ಬ್ರಿಟಿಷ್ ಸಾಮ್ರಾಜ್ಯವೇ ಬಾಯಿಯ ಮೇಲೆ ಬೆರಳಿಟ್ಟು ನೋಡುವಂತೆ ಬೆಳೆದು ನಿಲ್ಲುತ್ತಿದೆ. ೧೯೪೭ರ ಆಗಸ್ಟ್ ೧೫ರೆಂದು ಭಾರತದಿಂದ ಹೊರಡುವ ಮೊದಲು ದೆಹಲಿಯ ಬ್ರಿಟಿಷ್ ಅಧಿಕಾರಿಯೊಬ್ಬ ಹೇಳಿದನಂತೆ "ಇದಾಗಿ ಮುಂದೆ ಅಸ್ತಿತ್ವಕ್ಕೆ ಬರಲಿರುವ ಪಾಕಿಸ್ತಾನ ಹಾಗು ಹಿಂದುಸ್ತಾನ ಗಳೆರಡರಲ್ಲಿಯೂ ಪಾಕಿಸ್ತಾನವೇ ಬಹುಬೇಗ ಅಭಿವೃದ್ಧಿ ದಾಖಲಿಸಲಿದೆ, ಕಾರಣ ಪಾಕಿಸ್ತಾನದಲ್ಲಿರುವುದು ಒಂದೇ ಧರ್ಮ ಅದನ್ನು ಬಿಟ್ಟು ಅವರಿಗೆ ಬೇರೆ ಜಾತಿ ಪಂಥಗಳಿಲ್ಲ. ಹೀಗಿರುವ ದೇಶ ಐಕ್ಯತೆ ಸಾಧಿಸುವುದು ಬಹಳ ಸುಲಭ ಆದ ಕಾರಣ ಆ ದೇಶ ಬಹು ಬೇಗ ಪ್ರಗತಿ ಸಾಧಿಸಲಿದೆ". ಒಂದು ದೃಷ್ಟಿ ಕೋನದಲ್ಲಿ ಬ್ರಿಟಿಷ್ ಅಧಿಕಾರಿ ಹೇಳಿದ್ದು ಸರಿಯಿರಬಹುದು. ಆದರೂ ಪ್ರಪಂಚದಲ್ಲೆಲ್ಲೂ ಇರದಷ್ಟು ವಿವಿಧತೆಯನ್ನು ತನ್ನೊಡಲೊಳಗೆ ತುಂಬಿಕೊಂಡು ಜಗತ್ತಿಗೆ ಗುರುವಾಗಿ ಬೆಳೆದು ನಿಂತಿರುವ ಭಾರತ ಇಂದು ನಿಜಕ್ಕೂ ಆ ಬ್ರಿಟಿಷ್ ಅಧಿಕಾರಿಯ ಮಾತು ಸುಳ್ಳು ಮಾಡಿಬಿಟ್ಟಿದೆ. ಭಾರತ ಧೃಡವಾಗಿ ಬೆಳೆದು ನಿಂತ ಶೈಲಿ ನೋಡಿ ಬ್ರಿಟಿಷರೇ ಇಂದು ನಾಚಿಕೆ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸ್ವಾತಂತ್ರ್ಯ ಭಾರತದ ಮುಂದಿನ ಹಾದಿಯೂ ಹೂವಿನ ಹಾಸಿಗೆಯಾಗಿರಲಿಲ್ಲ. ಕಬ್ಬಿನ ರಸವನ್ನೆಲ್ಲ ತೆಗೆದು ಬರಿಯ ಸಿಪ್ಪೆಯನ್ನು ಬಿಸಾಡಿದಂತೆ ಬ್ರಿಟಿಷರು ಇಲ್ಲಿನ ಸಂಪತ್ತು, ಸಿರಿವಂತಿಕೆಗಳನ್ನೆಲ್ಲ ದೋಚಿ ಪಶ್ಚಿಮದ ಖಜಾನೆಯೊಳಗೆ ಪೇರಿಸಿಕೊಂಡು ಬಿಟ್ಟರು.
ಶನಿವಾರ, ಆಗಸ್ಟ್ 5, 2017
ಜಗ - ಹುಡುಕು ತಾಣ
ಶನಿವಾರ, ಜುಲೈ 8, 2017
ನಾವು ನಾವು ಅರಿತರೆ ಮಾತ್ರ ತಾಯಿ ಭಾರತಿ
ವೀಣಾಪಾಣಿ
ಇಣುಕೊಮ್ಮೆ ನಮ್ಮ
ಹಟ್ಟಿ, ಓಣಿ ದಾರದಂಗಳಿಗೆ
ಕೊರಗುತಿಹರು, ಸೊರಗುತಿಹರು
ತಾಯಿ ಭಾರತೀಯ
ನಲ್ಮೆಯ ಕುಡಿಗಳು.
ವಿಲಾಸಕ್ಕೊಲಿದ ಧನಲಕ್ಷ್ಮೀ
ಒಲಿಯಿಲ್ಲಿ ನಮ್ಮ ತನು
ಮನಗಳಿಗೊಂದಿಷ್ಟು
ಉಲ್ಲಾಸ ತಂದೆರಚು
ನಾವು ಕುಂತು
ಉಣ್ಣುವೆವು ಕೆಲವು ದಿನ.
ಭೋಗ ಭಾಗ್ಯಕೊಲಿದ
ದೇವೇಂದ್ರ ಕಳಿಸು
ನಿನ್ನ ಗುಮಾಸ್ತರ
ಉಣ್ಣಲು ಉಡಲು
ಇಲ್ಲದ ನಮ್ಮ ಕೇರಿ
ಜನಗಳೊಡನೊಮ್ಮೆ
ಮಾತನಾಡಿಸು
ತೀರಿಗೆರಡು ಮಾರಿಗೊಂದು
ದೇವರುಗಳ ಕಡೆದು
ಕೂರಿಸಿದ್ದೇವೆ
ನಮಗಿಲ್ಲವಾದರೂ
ದೇವರನ್ನು ಸಲುಹಿಬಿಟ್ಟಿದ್ದೇವೆ
ಈಗಿದೇನು ಏನು
ನಿಮ್ಮ ಹಠ
ಬನ್ನಿ ಎಲ್ಲರೂ ಇಳಿದು
ಇಲ್ಲೊಮ್ಮೆ ನೋಡಿ
ಧರ್ಮಗಳು ಕತ್ತಿ
ಕೊಡಲಿಗಳ ಹಿಡಿದು
ನಿಂತಿವೆ. ಜಾತಿಗಳು
ಜುಟ್ಟು, ಜನಿವಾರಗಳಲ್ಲಿ
ಅಡಗಿ ಹೋಗಿವೆ
ಆಳುಗರು ಜಾತಿಗಳ
ಹೊಸ ಸೂತ್ರಧಾರರು,
ಹೆಸರೊಳಗೆ ಮಾತ್ರ
ಪ್ರಜೆಗಳು ಪ್ರಭುಗಳು
ದಿಟದಲಿ ಅವರೆಲ್ಲ
ಆಳಿಸಿಕೊಳ್ಳುವ
ಹಂಬಲದವರು
ಒಗ್ಗಟ್ಟಿನೊಳಗೆ ನಾವು ನಾವು
ಸಲಹಿಕೊಂಡರೆ ಮಾತ್ರ ದೇಶ
ನಾವು ನಾವು ಅರಿತರೆ
ಮಾತ್ರ ತಾಯಿ ಭಾರತಿ
ಆಳುಗರ ಕೈಗೆ ಜುಟ್ಟು
ಕೊಟ್ಟರೆ ನಮಗೆ ದೇವರೇ ಗತಿ!.
ನಮೋ ಇಸ್ರೇಲ್ ಭೇಟಿ - ಭಾರತದಲ್ಲಿ ಕುಡಿಯುವ ನೀರಿನ ಬವಣೆ ಹಿಂಗಬಹುದೇ?
ಅಲ್ಲಿಯವರೆಗೂ ಕಾವೇರಿ ಸಮಸ್ಯೆಗೆ ಶಾಶ್ವವಾತ ಪರಿಹಾರವೆಂದರೆ ನದಿ ಜೋಡಣೆ ಮಾತ್ರ ಹಾಗು ಅದು ಅಧಿಕ ಖರ್ಚಿನ ವ್ಯವಹಾರವಾದ್ದರಿಂದ ಅದರ ಅನುಷ್ಠಾನ ಕಷ್ಟ ಸಾಧ್ಯವೆಂದೇ ನಂಬಿಕೊಂಡಿದ್ದ ಕಾವೇರಿ ಕೊಳ್ಳದ ಜನಗಳಿಗೆ ಹೊಸ ವಿಚಾರ ಹೊಳೆದಿದ್ದು ಆಗಲೇ. ಅಂದು ಆ ಸಭೆಯಲ್ಲಿ ಮಾತನಾಡುತ್ತ ಸುಬ್ರಮಣಿಯನ್ ಸ್ವಾಮಿ ಇಸ್ರೇಲ್ ನ ವಿಚಾರವನ್ನು ಪ್ರಸ್ತಾಪಿಸಿದ್ದರು. ದೇಶದೊಳಗೆ ಅತೀ ಕಡಿಮೆ ನದಿಗಳನ್ನು ಹೊಂದಿ ಹಾಗು ಅತೀ ಕಡಿಮೆ ಮಳೆಯಾಗುವ ಪ್ರದೇಶಗಳನ್ನು ಹೊಂದಿರುವ ಇಸ್ರೇಲ್ ನೀರಿಗಾಗಿ ಹಾಹಾಕಾರವೆಬ್ಬಿಸದೇ ಸಮುದ್ರದ ನೀರನ್ನೇ ಶುದ್ಧೀಕರಿಸಿ ಕೃಷಿ ಕಾರಣಕ್ಕೂ ಹಾಗು ಕುಡಿಯುವ ಅನುಕೂಲಕ್ಕಾಗಿಯೂ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದರು. ಅಂದು ನಾವೆಲ್ಲಾ ಅದನ್ನು ಕೇಳಿದ್ದೆವು ಆದರೆ ಮೊನ್ನೆ ಮೋದಿ- ಬೆಂಝಮೀನ್ ನೆತನ್ಯಾಹು ಭೇಟಿಯಲ್ಲಿ ಸಮುದ್ರ ತೀರವೊಂದಕ್ಕೆ ಭೇಟಿ ಕೊಟ್ಟ ಉಭಯ ನಾಯಕರು ಅಲ್ಲಿಯೇ ಇದ್ದ ನೀರು ಶುದ್ಧೀಕರಣ ಯಂತ್ರವೊಂದರ ಮೂಲಕ ಸಮುದ್ರ ನೀರನ್ನು ಶುದ್ಧೀಕರಿಸಿ ಅಲ್ಲಿಯೇ 'ಚೀರ್ಸ್' ಎಂದು ಕುಡಿಯುತ್ತಿದ್ದುದನ್ನು ಸರಿಸುಮಾರು ಭಾರತದ ಎಲ್ಲಾ ಮಾಧ್ಯಮಗಳು ವರದಿ ಮಾಡಿವೆ. ಇದಾದ ನಂತರ ಭಾರತ-ಇಸ್ರೇಲ್ ಒಡಗೂಡಿ ಭಾರತೀಯ ಸೇನೆ, ಕೃಷಿ, ನೀರಾವರಿ ಮುಂತಾದ ವಿಚಾರಗಳ ಬಗ್ಗೆ ಒಪ್ಪಂದ ಮಾಡಿಕೊಂಡವು. ಇದನ್ನು ಕಂಡು ನೀರಿನ ಸಮಸ್ಯೆಯೆದುರಿಸುತ್ತಿರುವ ಮಂದಿಗೆ ಬಹಳ ಖುಷಿಯಾಗಿರಲಿಕ್ಕೆ ಸಾಕು, ಅದರಲ್ಲೂ ದಕ್ಷಿಣ ಭಾರತದ ಹೈದ್ರಾಬಾದ್ ಕರ್ನಾಟಕ ಪ್ರಾಂತ, ಮುಂಬೈ ಕರ್ನಾಟಕ ಪ್ರಾಂತ, ಕಾವೇರಿ ಕೊಳ್ಳವಾದ ಕರ್ನಾಟಕ-ತಮಿಳುನಾಡಿನ ಹಲವಾರು ಜಿಲ್ಲೆಗಳು ಇಂತಹ ವ್ಯವಸ್ಥೆಯನ್ನು ತಮ್ಮಲ್ಲೂ ಅನುಷ್ಠಾನಗೊಳಿಸಿದರೆ ಹೇಗಿರುತ್ತದೆ ಎನ್ನುವ ಯೋಚನೆಗೆ ಹಾರಿರುವುದಕ್ಕೆ ಸಾಕು.
7000 ಕಿಲೋಮೀಟರ್ ಗೂ ಮೀರಿ ಸಮುದ್ರ ತೀರ ಹೊಂದಿರುವ ಹಾಗು 130 ಕೋಟಿಗೂ ಅಧಿಕ ಜನ ಸಂಖ್ಯೆಯುಳ್ಳ ಭಾರತ ಸಮುದ್ರ ನೀರಿನ ಶುದ್ಧೀಕರಣದ ಕಡೆ ಇದುವರೆಗೂ ಗಮನ ಕೊಡದಿರುವುದೇ ವಿಪರ್ಯಾಸ. ಭಾರತದ ಕೃಷಿ ಮಾನ್ಸೂನ್ ನೊಂದಿಗಿನ ಜೂಜಾಟ ಎನ್ನುವುದು ನಮಗೂ ನಿಮಗೂ ಗೊತ್ತಿರುವ ಸಮಾಚಾರವೇ. ಹಾಗೆಯೇ ಹಿಮಾಲಯದ ತಪ್ಪಲಿನ ನದಿಗಳನ್ನು ಹೊರತು ಪಡಿಸಿದರೆ ಭಾರತದ ಇನ್ನೆಲ್ಲ ನದಿಗಳೂ ಮಳೆಯಾಧಾರಿತ ಎನ್ನವುದು ತಿಳಿದಿರುವ ಸಂಗತಿಯೇ. ಜಾಗತಿಕ ಹಾಗು ವೈಜ್ಞಾನಿಕ ಕಾರಣಗಳಿಗಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿರುವುದು ಇದೀಗ ಗೌಪ್ಯ ವಿಚಾರವಲ್ಲ. ಹೀಗಿರುವಾಗ ಇಸ್ರೇಲ್ ನೀರಿನ ಶುದ್ಧೀಕರಣದಂತಹ ಹೊಸ ತಂತ್ರಜ್ಞಾನ ಬಳಸಿಕೊಂಡು ಭಾರತ ಹೊಸ ಭಾಷ್ಯ ಬರೆಯುವುದು ಅನಿವಾರ್ಯವಾಗಿದೆ. ಬರ ಪರಿಸ್ಥಿತಿ ನಿರ್ವಹಣೆಗೆಂದು ಪ್ರತೀ ಬರಗಾಲದಲ್ಲೂ ದೆಹಲಿ ಕದ ತಟ್ಟುವ ಕರ್ನಾಟಕ-ತಮಿಳುನಾಡಿನ ರಾಜಕಾರಣಿಗಳಿಗೆ ಈಗಲಾದರೂ ದೇವರು ಇಂತಹ ತಂತ್ರಜ್ಞಾನಗಳತ್ತ ಮನಸ್ಸು ಹರಿಸುವ ಶಕ್ತಿ ಕೊಡಲಿ.
ಭಾನುವಾರ, ಜೂನ್ 25, 2017
ಭುವಿಗೂ ಮುಗಿಲಿಗೂ ಮಾತು - ಮಳೆ
ಬಯಕೆಗಳ ಮುಗಿಲಿಗೆ
ಒಯ್ಯುವ ಪಣವಾಗಿ
ನೀರ ನೆಪ ಮಾಡಿ
ಇಬ್ಬನಿ, ಆವಿ, ಮಂಜು,
ಮಂಗಾಳಗಳ ಕಡೆದು
ಗುಟ್ಟಾಗಿ ಕಳಿಸುತಿದೆ.
ಭುವಿಯ ಭಾವವರಿತ
ಮುಗಿಲು ತಾನೆಲ್ಲರಿಗೂ
ಮುಂದಾಳು, ಮಿಗಿಲಾಳು,
ದೊಡ್ದಾಳು, ಕಟ್ಟಾಳು,
ಭಯವೇಕೆಂದು ಬಗೆದು
ತನ್ನ ಭಾವ ಬದುಕುಗಳನ್ನೆಲ್ಲ
ಬೆಸೆದು ಮಳೆಯಾಗಿ ಸುರಿಸುತಿದೆ.
ತನ್ನ ಭಾವಕೆ ಸ್ಪಂದನೆ
ತನ್ನ ನೋವಿಗೆ ಸಾಂತ್ವನ
ತನ್ನ ಜೀವಕೆ ಜೊತೆಗಾರನ
ಬೆಂಬಲ ಕಂಡು ಭುವಿ
ಮನಸು ಉಲ್ಲಾಸಿತವಾಗಿ
ಸುಕೋಮಲ ಸುವಾಸನೆ ಸುಯ್ಯುತಿದೆ
ನಿರಾಳತೆ ಎದ್ದೆದ್ದು ಕಾಣುತಿದೆ.
ಆ ನಿರಾಳತೆ ಇಲ್ಲಿರುವ
ಜೀವಗಳ ಪೊರೆಯುತಿದೆ
ಅಲ್ಲಿ ನಡೆಯುವ ಸಂವಹನ
ಇಲ್ಲಿನ ಬದುಕಿಗೆ ಆಧಾರವಾಗಿದೆ
ಅಲ್ಲಿಂದ ಘಟಿಸುವ ಸರ್ವವೂ
ನಮ್ಮ ಒಳಿತಿಗಾಗಿಯೇ
ಭುವಿಯ ಮಕ್ಕಳಲ್ಲವೇ ನಾವು.
ಭಾನುವಾರ, ಮೇ 28, 2017
ಜ್ಞಾನ ಗಂಗೆ
ಉದಿಸಿದ್ದೆಲ್ಲಿ
ಪರ್ಯಾವಸಾನವೆಲ್ಲಿ ಯಾವೊಂದು
ತಿಳಿಯದ, ತಿಳಿಸದ
ಆದ್ಯಂತ್ಯವಿಲ್ಲದ ಹರಿವದು
ಆದ್ಯಂತ್ಯ ಕಂಡಿರುವುದು
ಹರಿವ ಗಂಗೆಯಲ್ಲ
ಮೊಗೆವ ಕೈ
ಹಿಗ್ಗುವ ಬಾಯ್
ಮೀಯುವ ಮೈ
ಗೆಲುವೇ ಗೆಲುವೇ
ನಿನಗಾಗಿ ನಾಲ್ಕುಗೋಡೆಗಳ ಮಧ್ಯೆ
ದುಡಿಯುವೆ ನಾನು
ನಿನಗಾಗಿ ಶ್ರದ್ಧೆ ಭಕ್ತಿಗಳನ್ನು
ಪಣವಾಗಿಡುವೆ ನಾನು
ಜಗಮಗಿಸುವ ಬೆಳಕಿನ ಚಿತ್ತಾರದ
ವೇದಿಕೆಯೊಳಗೆ ಅಪ್ಪು ಬಾ ನನ್ನ
ಸಾವಿರಾರು ಜನರ ಹಾರೈಕೆ
ಅದಕೆ ಆಧಾರವಾಗಲಿ
ಅವರ ಚಪ್ಪಾಳೆ ಅದಕೆ ಸಾಕ್ಷಿಯಾಗಲಿ
ಅದರೊಳಗೆ ನಾನೆಂಬುದು
ಬರಿ ನೆಪವಾಗಲಿ.
ಏನು ಬೇಕು ನಿನಗೆ
ಏನ ಬಯಸುವೆ ನೀನು
ಯಾರನಪ್ಪುವೆ ನೀನು
ಯಾರನು ಇಡಾಡುವೆ ನೀನು
ಬಿಡು ಇದೊಂದು ಗುಟ್ಟನು
ನನ್ನೊಡನೆ
ನೀನೆಳೆದ ಪರಿಧಿಯೊಳಗೆ
ನೀನೆಣಿಸುವ ರೀತಿಯಲೆ ಸುತ್ತುವೆ
ನನ್ನೊಮ್ಮೆ ಅಪ್ಪು ಬಾ
ನಿನ್ನಪ್ಪುಗೆಯಲ್ಲಿ ಸಿಹಿ ಸುಖ ಕಂಡವರೆಷ್ಟು?
ಕೆಲವರಷ್ಟೇ
ಶನಿವಾರ, ಮೇ 20, 2017
ಸೋಲಿಗೆ ಸೋಲುಣಿಸುವುದೇ ನಿಜವಾದ ಯಶೋಮಾರ್ಗ
ಕಾಯವನು ಖಂಡಿಸದೆ
ಉಂಡುಂಡು ತೇಗುವರೆಲ್ಲಾ ಕೈಲಾಸಕೆ
ಪೋದೊಡೆ ಅದನೇನು ರಂಡೆಯಾಳುವಳೆ ಸರ್ವಜ್ಞ.
ಮೇಲಿನ ಸರ್ವಜ್ಞ ಮೂರ್ತಿಯ ವಚನ ಬೊಟ್ಟು ಮಾಡುತ್ತಿರುವುದು ಯಾವ ಕೈಲಾಸ ? ಎಂಬ ಯೋಚನೆ ನಿಮಗೇನಾದರೂ ಹೊಳೆದಿದ್ದರೆ ಅದು 'ಶಿವನಿದ್ದಾನೆ' ಎಂಬಂತಹ ಕೈಲಾಸವೆಂಬ ಸ್ಥಳದ ಬಗ್ಗೆಯಲ್ಲ. ಬದಲಾಗಿ ಜೀವನದ ಔನ್ನತ್ಯವೇ ಕೈಲಾಸ, ಅದು ನಿನ್ನಿಂದ ಸಾಧಿತವಾಗಬೇಕಾದರೆ ಸಾಧನೆ ಹಾದಿ ಕಠಿಣ ಮಾತ್ರವಲ್ಲದೆ ನಿನ್ನ ದೇಹವನ್ನು ನೀನು ಎಡೆ ಬಿಡದೆ ದುಡಿಸಿಕೊಂಡು ತೀರಬೇಕು. ಆಗ ಮಾತ್ರ ಔನ್ನತ್ಯ ದೊರಕಿ ನೀನು ಮನುಷ್ಯನಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ ಎನ್ನುವ ಅರ್ಥ ಸರ್ವಜ್ಞನದು.ಜೀವನದಲ್ಲಿ ಗೆಲುವೆನ್ನುವುದು ಸಿಗಬೇಕಾದರೆ ಅದರ ದಾರಿಯಲ್ಲಿ ಎದುರಾಗುವ ಕಷ್ಟಗಳು ಸಾವಿರ. ಅದನ್ನೆಲ್ಲ ಈಜಿದರೆ ಮಾತ್ರ ಕೈಲಾಸ(ಗೆಲುವು) ಎನ್ನುವುದನ್ನು ತನ್ನ ನಿಜಜೀವನದಲ್ಲಿ ಸಾಧಿಸಿ ತೋರಿಸಿ ಭಾರತದ ಯುವಜನತೆಗೆ ಮಾದರಿಯಾಗಿ ನಿಂತಿರುವ ಮಾದರಿ ವ್ಯಕ್ತಿ ರಮೇಶ್ ಘೋಲಪ್.
ಅದು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನ ಒಂದು ಹಳ್ಳಿ. ಬೇಸಿಗೆಯ ಸುಡು ಬಿಸಿಲಲ್ಲಿ ಹೆಂಗಸೊಬ್ಬಳು ಬಳೆಯ ಮಲ್ಲಾರ ಹೊತ್ತುಕೊಂಡು ಸುಮಾರು 7-8 ವರ್ಷದ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು 'ಬಾಂಗ್ಡ್ಯಾ ಬಾಂಗ್ಡ್ಯಾ'(ಕನ್ನಡದಲ್ಲಿ ಬಳೆಗಳು ಎಂದರ್ಥ) ಎಂದು ತನ್ನ ಮಕ್ಕಳ ಬಾಯಿಂದ ಕೂಗಿಸುತ್ತ ನಡೆಯುತ್ತಿದ್ದಳು. ಆ ಮೂವರ ದೇಹಗಳು ಬಡಕಲಾಗಿದ್ದಿದ್ದು ಹಾಗು ಅವರ ಬಳೆ ಮಾಡುವ ಪರಿ ನೋಡಿದರೆ ಬಡತನವೆನ್ನುವುದು ಅವರ ಮನೆಯ ಖಜಾನೆಯೊಳಗೆ ಸುಭದ್ರವಾಗಿಈ ಕೂತುಬಿಟ್ಟಿದೆ ಎನ್ನುವುದು ಯಾರಿಗೂ ಅರ್ಥವಾಗದ ಸಂಗತಿಯೇನೂ ಆಗಿರಲಿಲ್ಲ. ಬಳೆಗಳು ಎಂದು ಸಾರುತ್ತಿದ್ದ ಆ ಇಬ್ಬರು ಹುಡುಗರಲ್ಲಿ ಒಬ್ಬ ರಾಮು, ಹುಟ್ಟಿದ ಕೆಲವೇ ತಿಂಗಳುಗಳಿಗೆ ಪೋಲಿಯೊ ಬಂದು ಎಡಗಾಲು ಸ್ವಲ್ಪ ಊನವಾಯಿತು. ಕಾಲಿಗೆ ತೊಂದರೆಯಾಯಿತಾದರೂ ಕಾಲು ಎಳೆಕೊಂಡು ನಡೆಯಲು ಯಾವ ತೊಂದರೆಯೂ ಕಾಣಿಸಿಕೊಳ್ಳದ ಕಾರಣ ತಟ್ಟಾಡಿಕೊಂಡು, ಕಾಲು ಎಳೆಕೊಂಡು ತನ್ನ ತಮ್ಮನೊಂದಿಗೆ ಸ್ಕೂಲಿಗೆ ಹೋಗಿ ಬಂದು ಮಾಡುತ್ತಿದ್ದ ಹುಡುಗ ಅವನು. ಬೇಸಿಗೆ ಕಾಲದ ರಜೆಯಲ್ಲಿ ತಾಯಿಯೊಂದಿಗೆ ಬಳೆ ಮಾರಲು ಇಬ್ಬರು ಮಕ್ಕಳು ಹೊರಟುಬಿಡುತ್ತಿದ್ದರು. ರಾಮುವಿನ ತಂದೆ ಅದೇ ಊರಿನಲ್ಲಿ ಸಣ್ಣ ಸೈಕಲ್ ರಿಪೇರಿ ಪೆಟ್ಟಿ ಅಂಗಡಿ ಇಟ್ಟುಕೊಂಡಿದ್ದರಾದರೂ ಕುಡಿತದ ಚಟಕ್ಕೆ ಸಿಕ್ಕು ಹಣ, ಆರೋಗ್ಯಗಳನ್ನು ಅದಾಗಲೇ ಕಳೆದುಕೊಂಡಿದ್ದಾಗಿತ್ತು. ಆವತ್ತಿನ ಹೊಟ್ಟೆಗೆ ಮೂಲವಾಗುವಷ್ಟು ಕಾಸಲ್ಲಿ ಕೈಯಾಡುತ್ತಿದ್ದರೂ ನಾಳೆಗೇನು ಎನ್ನುವಂತಹ ಪರಿಸ್ಥಿತಿ ಅವರದ್ದಾಗಿತ್ತು.
ಗಂಡನ ಕುಡಿತದ ಚಟವನ್ನು ಬಿಡಿಸಲಾಗದೆ ಸಂಸಾರ ನೊಗ ಹೇಗಾದರೂ ಎಳೆಯಲು ಆ ಮಹಾತಾಯಿ ಬಳೆಯ ಮಲ್ಲಾರವನ್ನು ಹೊತ್ತುಕೊಂಡು ಊರೂರು ಅಲೆದು ಬಳೆ ಮಾರಿ ತನ್ನ ಮಕ್ಕಳಿಗೆ ಹೊಟ್ಟೆಗೂ ಬಟ್ಟೆಗೂ ಸರಿಯಾದ ದಾರಿಯಾಗುವಂತೆ ನೋಡಿಕೊಂಡಿದ್ದಳು. ರಾಮುವಿನ ಊರಿನಲ್ಲಿ ಇದ್ದಿದ್ದೇ ಒಂದು ಸರ್ಕಾರಿ ಪ್ರಾಥಮಿಕ ಶಾಲೆ. ಮಾಧ್ಯಮಿಕ ಶಾಲೆಗೆ ಬೇರೆ ಊರಿಗೆ ನಡೆದುಕೊಂಡು ಅಥವಾ ಸೈಕಲ್ ನಲ್ಲಿ ಹುಡುಗರು ಹೋಗಬೇಕಾಗಿದ್ದರಿಂದ ರಾಮು ಮಾಧ್ಯಮಿಕ ಶಾಲೆಗೆ ತನ್ನೂರಿನ ತಾಲೂಕೇ ಆಗಿದ್ದ ಬಾರ್ಶಿಯಲ್ಲಿನ ಚಿಕ್ಕಪ್ಪನ ಮನೆಯಲ್ಲಿ ಓದುವ ಸಲುವಾಗಿ ತಂಗಿದ. ಅಂತೂ ಇಂತೂ ಏಗುತ್ತಾ ನೀಗುತ್ತಾ ಅವನ ವಿದ್ಯಾಭ್ಯಾಸ ಚಿಕ್ಕಪ್ಪನ ಆಶ್ರಯದಲ್ಲಿ ಚೆನ್ನಾಗಿ ನಡೆಯುತ್ತಿತ್ತು. ಅದು 2005 ನೇ ಇಸವಿ. ರಾಮು ದ್ವಿತೀಯ ಪಿ ಯು ಸಿ ಯಲ್ಲಿ ಓದುತ್ತಿದ್ದ. ಆಗಷ್ಟೇ ಆತನಿಗೆ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದವು. ಮುಖ್ಯ ಪರೀಕ್ಷೆಗೆ ದಿನಗಳನ್ನೆಣಿಸುತ್ತ ಹುಡುಗರು ಕೂತಿದ್ದರು. ಇದೆ ಸಮಯದಲ್ಲಿ ಕುಡಿದು ಕುಡಿದು ಅನಾರೋಗ್ಯಕ್ಕೆ ತುತ್ತಾದ ರಾಮುವಿನ ತಂದೆ ತೀರಿಕೊಂಡರು.
ಸಾವಿನ ಸುದ್ದಿ ಕೇಳಿದ ತಕ್ಷಣವೇ ಹೊರಟು ನಿಂತ. ಆದರೇನು ಬಾರ್ಶಿಯಿಂದ ತನ್ನೂರಿಗೆ ಬಸ್ ಚಾರ್ಜು ಬರಿ ಏಳು ರೂಪಾಯಿ, ಅದರಲ್ಲೂ ರಾಮುವಿಗೆ ಅಂಗವಿಕಲರ ಐ ಡಿ ಕಾರ್ಡ್ ಇದ್ದಿದ್ದಿರಿಂದ ಚಾರ್ಜು ಬರೀ 2 ರೂಪಾಯಿ. ಸಂಕಷ್ಟಗಳ ಕೂಪದೊಳಗೆ ಬಿದ್ದುಹೋದ ರಾಮುವಿಗೆ ಆ ಎರಡು ರೂಪಾಯಿ ಕೂಡ ಸಿಗಲಿಲ್ಲ. ತನ್ನ ಸ್ನೇಹಿತರು ಇತರರನ್ನು ಕಾಡಿಬೇಡಿ ಹೇಗೋ ಎರಡು ರೂಪಾಯಿಗಳನ್ನು ಹೊಂದಿಸಿಕೊಂಡ ಹುಡುಗ ಊರಿಗೆ ಹೋಗಿ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ. ಇತ್ತ ಕಾಲೇಜಿನಲ್ಲಿ ಆತ ಬರೆದಿದ್ದ ಪ್ರಿಪರೇಟರಿ ಪರೀಕ್ಷೆಗಳಲ್ಲೆಲ್ಲ ಆತನೇ ಮಂಚೂಣಿಯಲ್ಲಿದ್ದ. ರಸಾಯನ ಶಾಸ್ತ್ರದ ಪರೀಕ್ಷೆಯಲ್ಲಿ 40 ಅಂಕಗಳಿಗೆ 35 ಗಳಿಸುವ ಮೂಲಕ ತನ್ನ ತರಗತಿಯಲ್ಲಿಯೇ ಮೊದಲ ಸ್ಥಾನದಲ್ಲಿ ನಿಂತಿದ್ದ. ತನ್ನ ತಂದೆಯ ಅಂತ್ಯ ಕ್ರಿಯೆ ಮುಗಿದ ಮೇಲೆ ನಾಲ್ಕಾರು ದಿನ ಊರಿನಲ್ಲಿಯೇ ಉಳಿದು ತಾಯಿಗೂ, ತನ್ನ ತಮ್ಮನಿಗೂ ಸಮಾಧಾನದ ಮಾತುಗಳನ್ನಾಡಿದರೂ ಈತನ ದ್ವಿತೀಯ ಪಿ ಯು ಸಿ ಮುಖ್ಯ ಪರೀಕ್ಷೆ ಒಂದು ತಿಂಗಳಿಗೂ ಕಡಿಮೆಯಿರುವುದು ಅರಿಕೆಯಾಗಿ ಆತನ ತಾಯಿ ಹಾಗು ತಮ್ಮನೇ ಮುಂದೆ ನಿಂತು ಬಾರ್ಶಿಗೆ ಹಿಂದಿರುಗಿ ಪರೀಕ್ಷೆಗೆ ಸಿದ್ಧವಾಗುವಂತೆ ನೋಡಿಕೊಂಡರು. ತನ್ನ ತಂದೆಯ ಸಾವಿನ ಸೂತಕದ ಛಾಯೆಯೊಳಗೆ ಪರೀಕ್ಷೆ ಬರೆದು ಮುಗಿಸಿದ ರಾಮು ಇಡೀ ತನ್ನ ಗ್ರಾಮ ಹೆಮ್ಮೆ ಪಡುವಂತೆ ಪಿ ಯು ಸಿ ಯಲ್ಲಿ 88.5 ಶೇಕಡಾ ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಪಾಸಾಗಿಬಿಟ್ಟ.
ರಾಮು ವಿಜ್ಞಾನ ವಿಭಾಗದಲ್ಲಿ ಪಾಸಾದರೂ ವೈದ್ಯಕೀಯ/ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಸೇರಲು ಅವಶ್ಯವಾದ ಹಣವಿಲ್ಲದಿರುವ ಕಾರಣವನ್ನು ಚಿಂತಿಸಿ ಸುಲಭವಾಗಿ ಕೈಗೆಟುಕುವ ಕೋರ್ಸ್ ಡಿ.ಎಡ್ (ಡಿಪ್ಲೋಮ ಇನ್ ಎಜುಕೇಷನ್) ಸೇರಿಕೊಂಡು ಮೊದಲು ದುಡಿಯುವ ಕೆಲಸ ಗಿಟ್ಟಿಸಿ ತನ್ನ ತಾಯಿ ತಮ್ಮನಿಗೆ ಆರ್ಥಿಕವಾಗಿ ಬೆಂಗಾವಲಾಗಬೇಕೆಂದು ತೀರ್ಮಾನಿಸಿದ.ಡಿ.ಎಡ್ ಮಾಡುತ್ತಿರುವಾಗಲೇ ಮುಕ್ತ ವಿಶ್ವ ವಿದ್ಯಾಲಯವೊಂದರಲ್ಲಿ ಕಲಾ ವಿಭಾಗದ ಪದವಿಯನ್ನು ಪಡೆದುಕೊಂಡ. ಪದವಿ ಹಾಗು ಡಿ.ಎಡ್ ಎರಡೂ ಕೈ ಸೇರುವಷ್ಟರಲ್ಲಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುವ ಅವಕಾಶವೂ ಕೂಡಿಬಂದು ಕಾಸು ಕಾಸಿಗೂ ಪರದಾಡುವ ಪರಿಸ್ಥಿತಿಯಿಂದ ದೂರಾದರೆ ಸಾಕು ಎನ್ನುವಂತಾಗಿದ್ದ ರಾಮು ಶಿಕ್ಷನಾಗಿ ಮಕ್ಕಳಿಗೆ ಪಾಠ ಹೇಳಲು ಪ್ರಾರಂಭಿಸಿದ್ದ. ಆದರೆ ಅವನ ಅಂತರಂಗದಾಸೆಯೇ ಬೇರೆಯಾಗಿತ್ತು, ಆಗಾಗ ಅದು ಅವನ ನೆನಪಿಗೆ ಬಂದು ಒಳಗೊಳಗೇ ಇರಿಯುತ್ತಿತ್ತಾದರೂ ಮನೆಯ ಪರಿಸ್ಥಿತಿ ಅವನ ಕೈಗಳನ್ನು ಕಟ್ಟಿಹಾಕಿಬಿಟ್ಟಿತ್ತು. ಮುಂದೆ ತಾನೇ ದುಡಿಯುವಂತಾದ ಮೇಲೆ ತನ್ನ ತಮ್ಮ ಹಾಗು ತಾಯಿಯನ್ನು ಬಾರ್ಶಿಯಲ್ಲಿನ ಆತನ ಚಿಕ್ಕಮ್ಮ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಕಟ್ಟಿಕೊಂಡಿದ್ದ ಎರಡು ಕೋಣೆಗಳಿರುವ ಮನೆಯ ಪೈಕಿ ಒಂದು ಕೋಣೆಗೆ ಸ್ಥಳಾಂತರಿಸಿದ್ದ. ಹೊಟ್ಟೆಗೂ ಬಟ್ಟೆಗೂ ನೇರ ಮಾಡಿಕೊಂಡು, ನಡೆಯುವಾಗ ಎಡವಿಕೊಂಡು ಬಿದ್ದಾಗ ಕೊಡವಿಕೊಂಡು ಅಂತೂ ಜೀವನವನ್ನು ಸಾಗಿಸುತ್ತಿದ್ದ.
ರಾಮು ತನ್ನ ಸುತ್ತಲಿನ ಸಾಮಾಜಿಕ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ. ತನ್ನ ಚಿಕ್ಕಮ್ಮನಂತೆ ತನ್ನತಾಯಿಗೂ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆ ದೊರಕುವಂತಾಗಲು ಅರ್ಜಿ ಹಾಕಿಸಿದ್ದ. ಆತನ ತಾಯಿ ಸರ್ಕಾರಿ ಕಛೇರಿಗಳನ್ನೆಲ್ಲಾ ಎಡತಾಕಿ ಕೊನೆಗೆ ತನ್ನ ಬಿ ಪಿ ಎಲ್ ರೇಷನ್ ಕಾರ್ಡ್ ಈ ಯೋಜನೆಗೆ ಅರ್ಹವಲ್ಲವಂತೆ ಎನ್ನುವ ಕಾರಣವನ್ನು ಮೇಲಧಿಕಾರಿಗಳಿಂದ ಪಡೆದುಕೊಂಡು ನಿರಾಸೆಯಿಂದ ಮನೆಗೆ ಮರಳಿದ್ದು ಕಂಡು ರಾಮು ಕೆಂಡಾಮಂಡಲವಾಗಿದ್ದ. ನ್ಯಾಯಬೆಲೆ ಅಂಗಡಿಯವನು ಕೂಡಾ ತಮ್ಮ ಕಾರ್ಡ್ ಗೆ ದೊರೆಯಬೇಕಿದ್ದ ಸೀಮೆ ಎಣ್ಣೆಯನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಹೆಚ್ಚು ಹಣಕ್ಕೆ ಬೇರೆಯವರಿಗೆ ಮಾರುತ್ತಿದ್ದು ಬಿ ಪಿ ಎಲ್ ಕಾರ್ಡ್ ಗಳಿಗೆ ಸೀಮೆ ಎಣ್ಣೆ ಕೊಡುವಾಗ ಇಲ್ಲದ ಸಬೂಬುಗಳನ್ನು ಹೇಳಿ ಸಾಗ ಹಾಕುತ್ತಿದ್ದ. ಇದನ್ನೆಲ್ಲಾ ಅನುಭವಿಸುತ್ತಿದ್ದ ಇನ್ನು ಕೆಲವರು ಯಾರಿಗೆ ದೂರು ಕೊಡುವುದು ಎಂದೂ ತಿಳಿಯದ ಮುಗ್ದರು ಹಾಗು ಅವಿದ್ಯಾವಂತರಾಗಿದ್ದ ಕಾರಣ ನ್ಯಾಯಬೆಲೆ ಅಂಗಡಿಯವನ ದರ್ಪಕ್ಕೆ ಕೊನೆಯೆಂಬುದೇ ಇಲ್ಲವಾಗಿ ಹೋಗಿತ್ತು.
ಇಷ್ಟು ಸಾಲದೇ ಧನದಾಹಿ ಸರ್ಕಾರಿ ಅಧಿಕಾರಿಯೊಬ್ಬ ಸುಮಾರು ಜನ ವಿಧವೆಯರನ್ನು ಒಟ್ಟುಗೂಡಿಸಿ ಅವರಿಗೆ ವಿಧವಾ ವೇತನವನ್ನು ಸುಲಭವಾಗಿ ದಕ್ಕಿಸಿಕೊಡುವ ಮಾತು ಕೊಟ್ಟು ಅವರಿಂದ ಹಣ ಪಡೆದುಕೊಂಡು ಪರಾರಿಯಾಗಿದ್ದ. ರಾಮುವಿನ ಮನೆಯಲ್ಲಿ ರೂಪಾಯಿ ರೂಪಾಯಿಗೂ ಹೆಣಗುವ ಪರಿಸ್ಥಿತಿಯಲ್ಲಿ ಅಧಿಕಾರಿ ಹಣ ಪೀಕಿದ್ದು ಇನ್ನೂ ಸಂಕಷ್ಟಕ್ಕೀಡುಮಾಡಿಬಿಟ್ಟಿತು. ಇವಕ್ಕೆಲ್ಲ ರಾಮುವಿನ ಮನಸ್ಸು ಜರ್ಜರಿತವಾಗಿಹೋಯಿತು. ನಮ್ಮ ಸರ್ಕಾರದ ವ್ಯವಸ್ಥೆಯೊಳಗಿನ ಲೋಪಗಳು ಢಾಳಾಗಿ ಕಂಡು ರಾಕ್ಷಸೀಯ ರೂಪ ಪಡೆದು ಬಡವರ, ಅಸಹಾಯಕರ ಮೇಲೆ ಅಧಿಕಾರಿಗಳ ರೂಪದಲ್ಲಿ ದಾಳಿಯೆಸಗುತ್ತಿದ್ದು ಕಂಡು ರಾಮು ಮಮ್ಮಲ ಮರುಗಿ ಹೋದ.ರಾಮು ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಕಾಲೇಜು ವಿದ್ಯಾರ್ಥಿ ಸಂಘದ ಪ್ರಮುಖ ಸದಸ್ಯನಾಗಿದ್ದನು. ಕಾರ್ಯಕ್ರಮಗಳ ಅಥವಾ ಇತರ ಕಾಲೇಜಿಗೆ ಸಂಬಂಧಪಟ್ಟ ವಿಚಾರಗಳ ಸಂಬಂಧ ಆಗಾಗ ಬಾರ್ಶಿಯಲ್ಲಿರುವ ತಾಲೂಕು ಕಚೇರಿಗೆ ಹೋಗಿ ಅಲ್ಲಿ ತಹಶೀಲ್ದಾರ್ ರನ್ನು ಭೇಟಿಯಾಗಿವುದು ಸಾಮಾನ್ಯವಾಗಿತ್ತು. ರಾಮು ತಹಶೀಲ್ದಾರರ ಕಾರ್ಯ ವೈಖರಿ ಕಂಡು ಅವರಿಗೆ ಸಮಾಜದಲ್ಲಿ ಇರುವ ಗೌರವ, ಸ್ಥಾನ ಮಾನಗಳನ್ನು ಕಂಡು ಅಚ್ಚರಿಯ ನೋಟ ಬೀರಿದ್ದ. ತಾನು ಹೀಗೆಯೇ ಆದರೆ ಸದ್ಯ ಈಗಿನ ಪರಿಸ್ಥಿಗಳು ಸುಧಾರಿಸಬಹುದು ಎನ್ನುವ ಕನಸು ರಾಮುವಿನ ಕಣ್ಣಲ್ಲಿ ಆಗ ಮೂಡಿರಲಿಕ್ಕೆ ಸಾಕು.
ಇಷ್ಟೆಲ್ಲಾ ಕಷ್ಟಗಳು ರಾಮುವಿನ ಹೆಗಲಿಗೆ ಏರಿಕೊಂಡಿದ್ದೆ ತಡ ರಾಮು ಜಾಗೃತನಾಗಿಬಿಟ್ಟ. ತಹಸೀಲದಾರರನ್ನು ಕಂಡು ತಾನು ಹಾಗೆಯೇ ಆಗಬೇಕು ಎಂದು ಆಸೆ ಪಡುತ್ತಿದ್ದ ರಾಮು ತಾನೇಕೆ ಹಾಗಾಗಲು ಸಾಧ್ಯವಿಲ್ಲವೆಂದು ತನಗೆ ತಾನೇ ಪ್ರಶ್ನೆ ಹಾಕಿಕೊಂಡ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ವೃತ್ತಿ ಪವಿತ್ರವಾದರೂ ತನ್ನ ಸುತ್ತಲಿನ ಸಮಾಜದಲ್ಲಿನ ಢಾಳು ವ್ಯವಸ್ಥೆಗಳನ್ನು ಹೆಡೆ ಮುರಿಕಟ್ಟಲು ತಾನೇ ಟೊಂಕ ಕಟ್ಟಿ ನಿಲ್ಲಬೇಕೆಂದು ತೀರ್ಮಾನ ಮಾಡಿಕೊಂಡ. 2009ರ ಸೆಪ್ಟೆಂಬರ್ ನ ಒಂದು ದಿನ ಎಲ್ಲ ಪೂರ್ವಾಪರ ಗಳನ್ನೂ ಯೋಚಿಸಿ ತನ್ನ ತಾಯಿಯ ಮೂಲಕ ಸ್ವ-ಸಹಾಯ ಸಂಘವೊಂದರಿಂದ ಸ್ವಲ್ಪ ಹಣವನ್ನು ಸಾಲವನ್ನಾಗಿ ಪಡೆದು ಭಾರತದ ಅಗ್ರ ಪರೀಕ್ಷೆ ಯು ಪಿ ಎಸ್ ಸಿ ಗೆ ಸಿದ್ಧತೆ ಮಾಡಿಕೊಳ್ಳಲು ಪುಣೆಗೆ ಹೊರಟುಬಿಟ್ಟ.ಆರು ತಿಂಗಳ ಮಟ್ಟಿಗೆ ತನ್ನ ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ತನ್ನ ಕಣ್ಣರಿವಿಗೆ ಕಂಡಿದ್ದ ಸ್ನೇಹಿತರ ಮೂಲಕ ಮಾಹಿತಿ ಸಂಗ್ರಹಿಸಿ ಗಟ್ಟಿ ಮನಸ್ಸು ಮಾಡಿ ರಾಮು ಈ ನಿರ್ಧಾರ ಕೈಗೊಂಡಿದ್ದ.
ರಾಮು ಸಣ್ಣಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ಆತನಿಗೆ ಯು ಪಿ ಎಸ್ ಸಿ(ಕೇಂದ್ರ ಲೋಕ ಸೇವಾ ಆಯೋಗ) ಹಾಗು ಎಂ ಪಿ ಎಸ್ ಪಿ (ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ) ಬಗ್ಗೆ ಏನೊಂದು ಗೊತ್ತಿರಲಿಲ್ಲ. ಪುಣೆಗೆ ಬಂದು ಅಲ್ಲಿನ ಕೋಚಿಂಗ್ ಸೆಂಟರ್ ಒಂದರಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗೆ ತಯಾರಾಗಲು ನಿಂತು 2010ರಲ್ಲಿ ಆ ಪರೀಕ್ಷೆಗೆ ಹಾಜರಾದ. ಆದರೆ ಆ ಪ್ರಯತ್ನದಲ್ಲಿ ಅದೇಕೋ ಅವನಿಗೆ ಯಶಸ್ಸು ಸಿಗಲಿಲ್ಲ. ಪ್ರಿಲಿಮಿನರಿ ಪರೀಕ್ಷೆಯಲ್ಲೇ ನಿಗದಿತ ಅಂಕಗಳನ್ನು ಗಳಿಸದ ಕಾರಣ ಅವನ ಪ್ರಯತ್ನ ವಿಫಲವಾಗಿತ್ತು. ಆದರೂ ಸಾಧನೆಯ ಕಿಡಿಯನ್ನು ತಲೆಯಲ್ಲಿ ಅದಾಗಲೇ ಹೊತ್ತಿಸಿಕೊಂಡಿದ್ದ ರಾಮು ಅಷ್ಟಕ್ಕೇ ಸುಮ್ಮನಾಗಲಿಲ್ಲ, ಧೃತಿಗೆಡಲೂ ಇಲ್ಲ.
ಈ ಮಧ್ಯದಲ್ಲಿ ರಾಮು ತನ್ನೂರಿನ ಜನರೊಂದಿಗೆ ಚೆನ್ನಾಗಿ ಒಡನಾಡುತ್ತಾ ಇದ್ದ ಕಾರಣ ತನ್ನ ತಾಯಿಯನ್ನು 2010ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದ. ಅವರ ಚುನಾವಣಾ ಅಜೆಂಡಾ ಸರವಾಳವಾಗಿತ್ತಾದರೂ ಹಿಂದುಳಿದವರಿಗೆ, ಅಸಹಾಯಕರಿಗೆ ಸಹಾಯಕ್ಕೊದಗುವ ಅಂಶಗಳನ್ನು ಒಳಗೊಂಡಿದ್ದಾಗಿತ್ತು. ಏನಾದರೂ ಈಗಿನ ಚುನಾವಣೆಗಳು ಹೇಗೆ ನಡೆಯುತ್ತವೆ, ಅಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ಕೊಡಲಾಗುತ್ತದೆ ಎನ್ನುವುದನ್ನು ವಿಶೇಷವಾಗಿ ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ. ಇಲ್ಲೂ ಅದೇ ನಡೆದು ರಾಮುವಿನ ತಾಯಿಗೆ ಸೋಲಾಯಿತು. ಈ ಘಟನೆ ರಾಮುವಿಗೆ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತಾಯಿತು. ನನ್ನ ಸಾಹಸ ಇಲ್ಲಿಗೆ ನಿಲ್ಲಲಿಲ್ಲ ಎಂದು ತನ್ನೂರಿನ ಜನರ ಮುಂದೆಯೇ ಘೋಷಿಸಿದ ರಾಮು ಮತ್ತೆ ತಾನು ಈ ಊರಿಗೆ ಬರುವುದು ಒಬ್ಬ ಅಧಿಕಾರಿಯಾಗಿಯೇ ಎಂದು ಹೇಳಿ ಊರು ತೊರೆದು ಪುಣೆಗೆ ಬಂದು ಮುಂದಿನ ಯು ಪಿ ಎಸ್ ಸಿ ಪರೀಕ್ಷೆಗೆ ತಯಾರಿಗೆ ನಿಂತ.
ಇದಾದ ಮೇಲೆ ರಾಮು ತನ್ನ ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ರಾಜ್ಯ ಆಡಳಿತಾತ್ಮಕ ಸೇವೆಗಳ ಸಂಸ್ಥೆಯ ಪರೀಕ್ಷೆ ತೆಗೆದುಕೊಂಡು ಪಾಸು ಮಾಡಿದ. ಇದರಿಂದಾಗಿ ರಾಮುವಿಗೆ ಪುಣೆಯಲ್ಲಿ ಉಳಿಯಲು ಸರ್ಕಾರಿ ಹಾಸ್ಟೆಲ್ ಹಾಗು ತಿಂಗಳ ಖರ್ಚಿಗೆ ಸ್ಕಾಲರ್ಷಿಪ್ ಬರಲು ಅವಕಾಶವಾಗಿ ಚಿಂತೆಯ ಹೊರೆ ಸ್ವಲ್ಪ ಕರಗಿತು ಆದರೂ ಅವನ ಮನಸ್ಸು ಮಾತ್ರ ಗುರಿ ಸೇರಲು ತವಕಿಸುತ್ತಾ ಎಡೆಬಿಡದೆ ದುಡಿಯುತ್ತಲೇ ಇತ್ತು. ಬರುತ್ತಿದ್ದ ಸ್ಕಾಲರ್ಷಿಪ್ ಸಾಲದಿದ್ದ ಕಾರಣ ರಾಮು ಆಗಾಗ ಪೋಸ್ಟರ್ ಗಳನ್ನೂ ಹಚ್ಚುವ ಕೆಲಸ ಮಾಡುತ್ತಾ ತನ್ನ ಖರ್ಚನ್ನು ತಾನೇ ಸರಿದೂಗಿಸುತ್ತಿದ್ದ. ದಿನಗಳು ಕಳೆದು ವರ್ಷಗಳಾಗುವಷ್ಟರಲ್ಲಿ ರಾಮು 2011 ಸಾಲಿನ ಯು ಪಿ ಎಸ್ ಸಿ ಪರೀಕ್ಷೆ ಬರೆದಿದ್ದ. 2012 ರಲ್ಲಿ ಫಲಿತಾಂಶ ಪ್ರಕಟವಾಯಿತು. ಅದು ರಾಮುವಿನ ಜೀವನದ ಅತ್ಯಂತ ಮಹತ್ವದ ದಿನ. ತನ್ನೆಲ್ಲ ಕಷ್ಟಗಳಿಗೆ ರಾಮು ತರ್ಪಣ ಕೊಟ್ಟ ಮಹಾ ಸುದಿನ. ಅಂದು ರಾಮು ಇಡೀ ಭಾರತದಲ್ಲಿ 287 ನೇ ರ್ಯಾಂಕ್ ಪಡೆದು ಐ ಎ ಎಸ್ ಪರೀಕ್ಷೆಯಲ್ಲಿ ಪಾಸಾಗಿದ್ದ.
ಊರೂರಿಗೆ ಬಳೆಗಳನ್ನು ಹೊತ್ತು ತಿರುಗಿ ಮಾರಿ, ಜಿಲ್ಲಾ ಪರಿಷತ್ ಸ್ಕೂಲುಗಳಲ್ಲಿ ಓದುತ್ತ ಕಷ್ಟದ ದಿನ ದೂಡಿದ್ದ ಬಾರ್ಶಿಯ ಮಹಾಗಾವ್ ನ ಹುಡುಗ ತನ್ನ ಹೆಸರಿನ ಮುಂದೆ ಐ ಎ ಎಸ್ ಎಂದು ಪೇರಿಸಿಕೊಂಡಿದ್ದು ಆ ಊರಿಗೆ ಮಾತ್ರವಲ್ಲದೆ ಇಡೀ ಭಾರತದ ಯುವ ಜನತೆಗೆ ಮಾದರಿಯಾದ ಜೀವಂತ ದಂತ ಕಥೆಯಾಯಿತು. ಅಂತೂ ಮೇ 12, 2012 ರಂದು ತನ್ನ ಕಷ್ಟದ ಸುಧೀರ್ಘ ಪಯಣ ಮುಗಿಸಿದ್ದ ರಾಮು ತನ್ನೂರಿಗೆ ಹಿಂತಿರುಗಿ ಬಂದಿದ್ದ, ನೆನಪಿರಲಿ ಬಂದಿದ್ದು ರಾಮುವಾಗಿ ಅಲ್ಲ. ರಮೇಶ್ ಘೋರಕ್ ಘೋಲಪ್ (ಐ ಎ ಎಸ್) ಆಗಿ.
ಇದಾಗಿ ಎರಡೇ ತಿಂಗಳುಗಳಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ ಇನ್ನೊಂದು ದಾಖಲೆಯನ್ನು ರಾಮು ಬರೆದಿದ್ದ. 1800 ಅಂಕಗಳ ಪೈಕಿ 1244 ಅಂಕಗಳನ್ನು ಪಡೆದು ರಾಮು ಮಹರಾಷ್ಟ್ರದ ಇತಿಹಾಸದಲ್ಲಿಯೇ ಯಾರು ಮಾಡಿರದಿದ್ದ ಸಾಧನೆಗೆ ಸಾಕ್ಷಿಯಾಗಿದ್ದ.
ರಮೇಶ್ ಘೋಲಪ್ ರನ್ನು ಇಂದು ಮಾತಿಗೆಳಸಿದರೆ ಹೇಳುತ್ತಾರೆ "ಇಂದು ನಾನು ಯಾವುದೇ ನ್ಯಾಯಬೆಲೆ ಅಂಗಡಿಯ ಬಗ್ಗೆ ಕಾಳ ಸಂತೆಯಲ್ಲಿ ಸರ್ಕಾರದ ದಿನಸಿ ಪದಾರ್ಥಗಳನ್ನು ಮಾರಿಕೊಳ್ಳುವ ಬಗ್ಗೆ ದೂರುಗಳು ಬಂದರೆ ಅಂದು ನನ್ನ ಕುಟುಂಬ ಸೀಮೆ ಎಣ್ಣೆಗಾಗಿ ಪರದಾಡುತ್ತಿದ್ದುದೇ ಕಣ್ಣ ಮುಂದೆ ಸುಳಿಯುತ್ತದೆ, ಇಂದು ನಾನು ಯಾವೊಬ್ಬ ವಿಧವೆಗೆ ಸಹಾಯ ಮಾಡಿದರೂ, ಅಂದು ನನ್ನ ತಾಯಿ ಸರ್ಕಾರಿ ಅಧಿಕಾರಿಗಳ ಬಳಿ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆಗಾಗಿ ಗೋಗರೆಯುತ್ತಿದ್ದು ಜ್ಞಾಪಕಕ್ಕೆ ಬರುತ್ತದೆ, ಇಂದು ನಾನು ಯಾವುದೇ ಸರ್ಕಾರಿ ಆಸ್ಪತ್ರೆಗೆ ಭೇಟಿಕೊಟ್ಟಾಗ, ಒಂದಿಲ್ಲೊಂದು ದಿನ ತನ್ನ ತಂದೆ ತೀವ್ರ ಅನಾರೋಗ್ಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದ ದೃಶ್ಯ ಕಣ್ಣ ಮುಂದೆ ಸುಳಿಯುತ್ತದೆ" ಎಂದು ಭಾವುಕರಾಗುತ್ತಾರೆ. ಆ ಭಾವುಕತೆಯ ಹಿಂದಿನ ನಿರ್ಭಾವುಕ ಮನಸ್ಸುಗಳು ಸೃಷ್ಟಿ ಮಾಡಿದ ಸನ್ನಿವೇಶಗಳು ಖೇದಕರ, ಅದರೊಳಗೆ ರಾಮುವಿನ ಕುಟುಂಬ ಬಿದ್ದು ನರಳಿದ ಹಾಗು ಅದನ್ನು ರಾಮು ಎದುರಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ಭಾರತದ ಯುವ ಜನತೆಗೆ ಮಾದರಿಯಾಗಿ ನಿಂತ ರಾಮುವಿಗೆ ಅವರೇ ಸಾಟಿ.ಇದೊಂದು ಬರಿಯ ಕಥಾನಕವಲ್ಲ, ಬದಲಾಗಿ ನಮ್ಮ ನಡುವೆಯೇ ಇದ್ದು ಬೆಳೆದ ಮುಗ್ದ ಹುಡುಗನೊಬ್ಬನ ಸಾಹಸಗಾಥೆ.
ಕೃಪೆ : Source (ರಮೇಶ್ ಘೋಲಪ್ ಕುರಿತ ಮೂಲ ಲೇಖನ ಐ ಎ ಎಸ್ ಸಾಧಕರ ಅತೀ ಸ್ಪೂರ್ತಿದಾಯಕವಾದ ಸಾಧನೆಯ ಕಥಾನಕಗಳೇನು? ಎನ್ನುವ 'ಕೋರಾ(quora.com)' ದಲ್ಲಿನ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಬಂದಿದ್ದು. )
ರಮೇಶ್ ಘೋಲಪ್ ಗೆ ಸಂಬಂಧಿಸಿದ ಇತರ ಮೂಲಗಳು
* ರಮೇಶ್ ಘೋಲಪ್ ಮರಾಠಿ ಭಾಷಣ ವಿಡಿಯೋ ತುಣುಕು.
* ಬಳೆ ಮಾರಾಟದಿಂದ ಹಿಡಿದು ಝಾರ್ಖಂಡ್ ನ ಜಂಟಿ ಕಾರ್ಯದರ್ಶಿವರೆಗೆ, ದಿ ಬೆಟರ್ ಇಂಡಿಯಾ ಲೇಖನ
* ಹಿಂದಿ ದೈನಿಕ 'ಪತ್ರಿಕಾ' ದಲ್ಲಿ ಪ್ರಕಟವಾದ ರಮೇಶ್ ಘೋಲಪ್ ನ ಸಾಹಸಗಾಥೆ.
ಶನಿವಾರ, ಮೇ 13, 2017
ಧರ್ಮ ದುರಸ್ತಿ
ಕುಲವೇನು ನಿನಗೆ
ಕಾರ್ಯವಾವುದು ನಿನಗೆ
ಕಪಟ ಭಟ್ಟಂಗಿಗಳ ಆಸರೆಯ
ತೆರೆ ಮರೆಯೊಳಗೆ ಮಲಗಿರುವೆಯಾ!?
ಬಾ ಇಲ್ಲಿ ಒಮ್ಮೆ ನೋಡು
ನಿನ್ನಹೆಸರೊಳಗೆ ನೆತ್ತರ ನದಿಯಿಹುದಿಲ್ಲಿ
ನಿನ್ನಕೃಪೆಯ ರುಂಡ ರಾಶಿಯಿಹುದಿಲ್ಲಿ
ನಿನಗಾಗಿ ನೆತ್ತರಬಸಿವ ಮಕ್ಕಳ ನೋವು ನಿನಗೆ ಆಹಾರವೇ ?
ಅವರ ಚೀತ್ಕಾರ ನರಳಾಟಗಳು ನಿನಗೆ ವೇದ ಘೋಷವೇ ?
ಅವರ ಶಾಪ ನಿನ್ನ ಪಾಲಿಗೆ ವರವೇ?
ಜಗದೊಳಗುದಿಸಿದ ನರ ಮಾತ್ರರು
ತಮ್ಮ ವಿನಯವಂತಿಕೆ ಸಂಸ್ಕಾರ ಸಂಸ್ಕೃತಿಗಳನ್ನೆಲ್ಲ
ಪೇರಿಸಿ ಕಟ್ಟು ಬಿಗಿದು
ಅದಕೆ ನಿನ್ನಹೆಸರಿನ್ನಿಟ್ಟು
ಗುಡಿ ಗುಂಡಾರಗಳೊಳಗೆ ಕೊಳೆ ಹಾಕಿ
ನಿರಂಕುಶ ಜಗದೊಳಗೆ
ಬೀದಿಗಿಳಿವ ಬಿಡಾಡಿಗಳಾಗಿ
ನಿನ್ನಹೆಸರೊಳಗೆ ನಿತ್ಯ ಸುಲಿಗೆಯುತ್ಸವ
ನಡೆಯುತಿಹುದಿಲ್ಲಿ,
ಮುರಿ ನಿನ್ನ ನಿದ್ರಾ ವ್ರತವ, ಬಾ ಇಲ್ಲಿ ಬೆರೆ ಇಲ್ಲಿ.
ನಿನ್ನಿಂದ ನಡೆದಿಹುದೇನು ನೀನೂ ಅವಗಾಹಿಸು
ಭಾನುವಾರ, ಮೇ 7, 2017
ಯಾರು ನಾವು?
ಇಲ್ಲದ ಬೆಂಕಿಯನ್ನು ಬೇಕೆಂದು
ನಿಂತು ಹೊತ್ತಿಸಿದವರು ನಾವು,
ಭೂಮಿ ತನ್ನಿಚ್ಛೆಗೆ ಬೆಂಕಿಯುಗುಳಿದರೆ
ದೂರಗಾಮಿಗಳು ನಾವು.
ಪ್ರಕೃತಿ ವ್ಯವಸ್ಥೆಯನ್ನೆಲ್ಲ
ಕೆಡಿಸಿದವರು ನಾವು,
ಅದನ್ನು ಸರಿಪಡಿಸಲು ಟೊಂಕ ಕಟ್ಟಿ
ನಿಂತವರು ನಾವೇ ನಾವು!!
ಈ ಭುವಿಯ ಮಕ್ಕಳು.
ಸೋಮವಾರ, ಮೇ 1, 2017
ಕಾರ್ಗಿಲ್ ಯುದ್ಧಕ್ಕೆ ದೇಣಿಗೆ
1999 ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಘಟನೆ ಘಟಿಸಿದ ವರ್ಷ. ಈ ದೇಶದ ಪ್ರಧಾನಿಯಾಗಿದ್ದ ವಾಜಪೇಯಿ ಶಾಂತಿ ಸೌಹಾರ್ದತೆಯನ್ನೇ ಮುಂದು ಮಾಡಿಕೊಂಡು ಭಾರತ-ಪಾಕಿಸ್ತಾನ ಬಸ್ ಸೇವೆಯನ್ನು 1999ರ ಫೆಬ್ರವರಿಯಲ್ಲಿ ಆರಂಭಿಸಿದ್ದರು. ಇದು ಉಭಯ ದೇಶಗಳಿಗೂ ಆನಂದದಾಯಕವಾಗಿರುವುದೇ ಆಗಿದ್ದು ಇದನ್ನು ಕಂಡು ಇನ್ನೆಷ್ಟು ದೇಶಗಳು ಹೊಟ್ಟೆ ಉರಿದುಕೊಂಡಿದ್ದವೋ ಗೊತ್ತಿಲ್ಲ. ಆದರೆ ಪಾಕಿಸ್ತಾನ-ಭಾರತಗಳು ಒಟ್ಟುಗೂಡಿದರೆ ದಕ್ಷಿಣ ಏಷ್ಯಾದ ದೇಶಗಳು ನಮ್ಮ ಬಳಿ ಯಾವುದಕ್ಕೂ ಕೈ ಒಡ್ಡುವ ಪ್ರಸಂಗ ಬರುವುದಿಲ್ಲವೆನ್ನುವುದು ಕೆಲವು ದೇಶಗಳಿಗೆ ಒಳಗೊಳಗೇ ಚುಚ್ಚಲಾರಂಭಿಸಿತ್ತು. ಯಾರ ಹೇಳಿಕೆಯ ಮಾತೋ? ಇಲ್ಲ ಪಾಕಿಸ್ತಾನ ತನ್ನ ಭವಿಷ್ಯದ ಬಗ್ಗೆ ತಪ್ಪುಗ್ರಹಿಕೆ ಮಾಡಿಕೊಂಡು ಯುದ್ಧಕ್ಕೆ ಸನ್ನದ್ಧವಾಯಿತೋ? ದೇವರೇ ಬಲ್ಲ.
ಸ್ವಾತಂತ್ರ್ಯ ದಕ್ಕಿದಂದಿನಿಂದ ಕಾಶ್ಮೀರ ಕಣಿವೆಗಳತ್ತಲೇ ಚಿತ್ತ ನೆಟ್ಟಿರುವ ಪಾಕಿಸ್ತಾನಕ್ಕೆ ಯುದ್ಧ ಮಾಡಲು ಅದ್ಯಾವ ಸುಸಮಯ ಅನ್ನುವ ಭಾವನೆ ಬಂದಿತೋ ಅಥವಾ ಸರಿಯಾಗಿ ಅಲ್ಲಿಗೆ ಒಂದು ವರ್ಷದ ಹಿಂದೆ ತಾನೇ ಸಿದ್ಧಪಡಿಸಿದೆ ಎಂದು ಹೇಳಿಕೊಂಡಿದ್ದ ಅಣು ಬಾಂಬ್ ಅನ್ನು ಪರೀಕ್ಷಾರ್ಥ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದ ಹೆಮ್ಮೆಯಲ್ಲಿ ಬೀಗುತ್ತಿದ್ದ ಕಾರಣವಿದ್ದರೂ ಇರಬಹುದು. ಭಾರತದೊಳಗೆ ಬಿರು ಬೇಸಿಗೆಯಿತ್ತು, ಅತ್ತ ಪಾಕಿಸ್ತಾನ ಅದೇ ವರ್ಷದ ಮೇ ಆರಂಭದಲ್ಲಿ ತನ್ನ ಸೈನಿಕರನ್ನು ಭಾರತದ ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿಸಿತ್ತು. ಕುತಂತ್ರಕ್ಕೆ ಪ್ರಖ್ಯಾತವಾಗಿರುವ ಪಾಕಿಸ್ತಾನ ಭಾರತ ದೇಶದೊಳಗೆ ವಾಮ ಮಾರ್ಗದ ಮೂಲಕ ಪ್ರಾಂತವೊಂದರ ಮೇಲೆ ಹಿಡಿತ ಸಾಧಿಸಲು ಶತಾಯ ಗತಾಯ ಪ್ರಯತ್ನ ನಡೆಸಿತ್ತು. ಯಥಾ ಪ್ರಕಾರ ತನ್ನ ಕಳ್ಳ ಮಾರ್ಗದ ಮೂಲಕವೇ ತನ್ನ ಸೈನಿಕರನ್ನು ನುಗ್ಗಿಸುತ್ತಿತ್ತು. ಅಪ್ಪಿ ತಪ್ಪಿ ಪಾಕ್ ಸೈನಿಕರು ಭಾರತದ ಗಡಿಯೊಳಗೆ ಗುಂಡಿಗೆ ಬಲಿಯಾದರೆ ಅವರು ನಮ್ಮ ಸೈನಿಕರಲ್ಲ, ನಮ್ಮ ಸೈನಿಕರಂತೆ ವೇಷ ಮರೆಸಿಕೊಂಡಿದ್ದ ಭಯೋತ್ಪಾದಕರು ಎನ್ನುವುದು ಇಂತಹವೆಲ್ಲ ಸ್ವಾತಂತ್ರ್ಯಾನಂತರ ಆ ರಾಷ್ಟ್ರಕ್ಕೆ ಮಾಮೂಲಿ ದಿನ ನಿತ್ಯದ ಕಾರ್ಯವಾಗಿದ್ದು ಇದೀಗ ಯಾರಿಗೂ ತಿಳಿಯದ ವಿಚಾರವಲ್ಲ.
1974-75ರ ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ವಿಧಿಸಿದ್ದ ತುರ್ತು ಪರಿಸ್ಥಿತಿಗೆ ವಿರೋಧವೊಡ್ಡಿದವರಲ್ಲಿ ಪ್ರಮುಖರು ವಾಜಪೇಯಿ ಆದ ಕಾರಣ 99ರ ಕಾರ್ಗಿಲ್ ಯುದ್ಧ ಘೋಷಣೆಯಾದಾಗ ಯುದ್ಧ ಘೋಷಣೆಯೊಂದಿಗೆ ತುರ್ತು ಪರಿಸ್ಥಿತಿ ಘೋಷಿಸದೆ ಪಾಕಿಸ್ತಾನದ ಪೊಳ್ಳು ಬೆದರಿಕೆಗೆ ದೇಶದ ಕಾನೂನು ಸುವ್ಯವಸ್ಥೆಗೆ ಕೊಂಚವೂ ಕುಂದು ಉಂಟಾಗದಂತೆ ದೇಶ ಕಾಯುವುದರಲ್ಲಿ ಚಾಣಾಕ್ಷತನ ಮೆರೆದರು. ಸಾರ್ವಜನಿಕ ರಂಗದಲ್ಲಿಯೂ ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಯಿತು. ಜನ ತಾವೇ ಮುಂದೆ ನಿಂತು ಕಾರ್ಗಿಲ್ ಯುದ್ಧಕ್ಕೆ ದೇಣಿಗೆ ಸಂಗ್ರಹ ಮಾಡಿ ಕೊಟ್ಟರು. ಅದರಲ್ಲೂ ಹೇಳಬೇಕೆನಿಸುವ ಪ್ರಮುಖ ಸಂಸ್ಥೆ ಆರ್ ಎಸ್ ಎಸ್.
ನಾವೆಲ್ಲಾ ಆಗ ಸುಮಾರು ಮೂರನೇ ಕ್ಲಾಸು ಓದುತ್ತಿದ್ದ ಹುಡುಗರು. ಆಗಷ್ಟೇ ಶಾಲೆ ಶುರುವಾಗಿತ್ತು. ನಾನು ಅಧೀಕೃತವಾಗಿ ಆರ್ ಎಸ್ ಎಸ್ ಸೇರಿಲ್ಲವಾದರೂ ಪ್ರತೀ ದಿನ ಸಾಯಂಕಾಲ ನಡೆಯುತ್ತಿದ್ದ ಶಾಖೆಯಲ್ಲಿ ಹೇಳುವ ಕಥೆಗೆ ಆಸೆ ಪಟ್ಟು ಅಲ್ಲಿಗೆ ಹೋಗಿಬಿಡುತ್ತಿದ್ದೆ.ದೇಶಕ್ಕೆ ಬಲಿದಾನಗೈದವರ ಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆ, ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿ ನಡೆದ ಆಂದೋಲನಗಳ ಸಂಕ್ಷಿಪ್ತ ನೋಟವೇ ಮೊದಲಾಗಿ ಮತ್ತಿತರ ರಾಷ್ಟ್ರೀಯ ಐತಿಹಾಸಿಕ ವಿಚಾರಗಳನ್ನು ಸವಿಸ್ತಾರವಾಗಿ ಅಲ್ಲಿ ಬಿಚ್ಚಿಡುತ್ತಿದ್ದ ಕಾರಣ ಅಲ್ಲಿಗೆ ಹೋಗುವುದು ಒಂದು ಚಟವಾಯಿತು. ಇಂತಿಪ್ಪ 1999ರ ಒಂದು ದಿನ ಅಂದಿನ ಶಾಖೆಯಾನಂತರ ಅಲ್ಲಿನ ಸಂಘಟಕರು ಸೇರಿದ್ದ ಹುಡುಗರನ್ನೆಲ್ಲ ಕರೆದು ಕಥೆ ಹೇಳಲು ನಿಂತರು. ಇಂದಿನ ಕಥೆ ಏನಿರಬಹುದು ಅನ್ನುವ ಧಾವಂತದಲ್ಲಿ ನಮ್ಮ ಕಿವಿಯಾಳಿಗಳು ಅತ್ತಲೇ ಹೊರಳಿದಾಗ ಅಲ್ಲಿ ಕೇಳಿಸಿದ್ದು 'ಭಾರತದ ಮೇಲೆ ಯುದ್ಧ ಘೋಷಣೆಯಾಗಿದೆ' ಎನ್ನುವ ವಾಕ್ಯ!!. ಸರಿ ಮುಂದೇನು? ಅನ್ನುವ ಪ್ರಶ್ನೆ ನಮ್ಮೊಳಗೇ ಹುಟ್ಟುವ ಮೊದಲೇ ಪ್ರಧಾನಿ ವಾಜಪೇಯಿ ತುರ್ತುಪರಿಸ್ಥಿತಿ ಘೋಷಿಸಿಲ್ಲ, ಯುದ್ಧಕ್ಕೆ ಬೇಕಾದ ನಿಧಿಗೆ ದೇಶದ ಸಮಸ್ತರೂ ತಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವುದನ್ನು ಕೇಳಿ ಮುಂದಿನ ನಡೆ ನನ್ನ ಗ್ರಹಿಕೆ ಅಳತೆಯಿದ್ದಷ್ಟು ಗೋಚರವಾಯಿತಾದರೂ ನಾವೇ ನಮ್ಮ ಮನೆಗಳಿಗೆ ಬಂದು ಮನೆಯ ಮೂಲೆಯಲ್ಲಿದ್ದ ಹಳೆ ಡಬ್ಬಗಳನ್ನು ಮತ್ತಿತರ ಬಳಕೆಯಾಗದ ವಸ್ತುಗಳನ್ನು ಸೇರಿಸಿ ಹುಂಡಿಯಂತಹ ಡಬ್ಬಗಳನ್ನು ತಯಾರು ಮಾಡಿಕೊಂಡು ಮೂರು ಮೂರು ಜನ ಗುಂಪಿನಂತೆ ಆರ್ ಎಸ್ ಎಸ್ ವತಿಯಿಂದ ಯುದ್ಧಕ್ಕಾಗಿ ದೇಣಿಗೆ ಸಂಗ್ರಹ ಮಾಡಲು ನಿಂತೆವು.
ಅಂದಿನ ನಮ್ಮ ಶಾಖೆಯ ಸಂಘಟಕರು ಹೇಳಿದ ಮಾತುಗಳು ನಾನು ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ಕೇಳಿದಾಗಲೂ ನನ್ನಲ್ಲಿ ಮತ್ತೆ ಮತ್ತೆ ಅನುರಣಿಸುತ್ತಲೇ ಇರುತ್ತವೆ. ಮಹಾನ ದೇಶ ಭಕ್ತರಾಗಿದ್ದ ನಮ್ಮ ಶಾಖಾ ಸಂಘಟಕ ಮಂಜುನಾಥ್(ಅವರ ಬಿಡುವಿನ ಸಮಯದಲ್ಲಿ ನಮ್ಮ ತರಗತಿಗಳಿಗೆ ಬಂದು ಸಂಸ್ಕೃತವನ್ನು ಹೇಳಿಕೊಡುತ್ತಿದ್ದವರು ಅವರೇ) ಅವರು ದೇಣಿಗೆ ಸಂಗ್ರಹಕ್ಕೆ ಹೊರಡುತ್ತಿರುವ ಹುಡುಗರಿಗೆ ನಿರ್ದೇಶನ ನೀಡುವಾಗ ಹೇಳಿದರು 'ಮತ್ತೊಬ್ಬರಿಂದ ದೇಣಿಗೆ ಸಂಗ್ರಹ ಮಾಡುವ ಮೊದಲು ನಿಮ್ಮ ಕೈಲಾದಷ್ಟು ಹಣ ನೀವು ನಿಮ್ಮ ಕೈಲೇ ಹಿಡಿರುವ ಹುಂಡಿಯೊಳಗೆ ಹಾಕಿಬಿಡಿ, ಅದು ನೇರವಾಗಿ ಯುದ್ಧದ ನಿಧಿಗೆ ತಲುಪುತ್ತದೆ' ಎಂದು. ಅಂದಿಗೆ ಏನೂ ಯೋಚನೆ ಮಾಡದೆ ನನ್ನಲ್ಲಿದ್ದ 3-4 ರೂಪಾಯಿಗಳನ್ನು ಹುಂಡಿಯೊಳಗೆ ಹಾಕಿ ಮಾಗಡಿ ಪೇಟೆಯ ಗಲ್ಲಿ ಬೀದಿಗಳಲ್ಲಿ ದೇಣಿಗೆ ಸಂಗ್ರಹ ಮಾಡಿ ಹಿಂತಿರುಗಿದ್ದೆ. ಅಂದಿಗೆ ನಾನೇನು ಮಾಡಿದೆ ಎನ್ನುವ ಅರಿವು ನನಗಿರಲಿಲ್ಲ, ತಿಳಿದುಕೊಳ್ಳುವ ವಯಸ್ಸು ಅದಲ್ಲವೇನೋ ನಾನರಿಯೆ.
ಮೊನ್ನೆ ಚಕ್ರವರ್ತಿಯವರ ಭಾಷಣದ ವಿಡಿಯೋ ತುಣಿಕಿನಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ನಾಗರೀಕರ ಸಮಯ ಪ್ರಜ್ಞೆಯನ್ನು ಕೊಂಡಾಡುತ್ತಿದ್ದುದನ್ನು ಗಮನಿಸಿದೆ. ಮುಂಬೈ ನಗರದ ವೇಶ್ಯೆಯರ ಸಂಘಟನೆಯೊಂದು ನಿರ್ದಿಷ್ಟ ದಿನವೊಂದರ ವೇಶ್ಯಾವಾಟಿಕೆಯಿಂದ ಗಳಿಸಿದ ಹಣವನ್ನು ಕಾರ್ಗಿಲ್ ಯುದ್ಧಕ್ಕೆ ನೀಡಿದ್ದು, ಅದೇ ನಗರದಲ್ಲಿ ಸರ್ಕಾರಿ ಶಾಲೆಯ ಬಾಲಕಿಯೊಬ್ಬಳು ಲೋಕಲ್ ರೈಲುಗಳಲ್ಲಿ ಭಿಕ್ಷೆ ಬೇಡಿ ಸುಮಾರು ನೂರು ರೂಪಾಯಿಗಳನ್ನು ಸಂಪಾದಿಸಿ ಅವರ ತಂದೆಗೆ ಕೊಟ್ಟು ಯುದ್ಧ ನಿಧಿಗೆ ಹಣ ತಲುಪಿಸುವಂತೆ ಬೇಡಿಕೊಂಡಿದ್ದು ಇನ್ನು ಎಷ್ಟೆಷ್ಟೋ ಇಂತಹ ಉದಾಹರಣೆಗಳನ್ನು ಅವರು ತೆರೆದಿಡುತ್ತಾ ಹೋದಂತೆ ನನ್ನ ಮನಸ್ಸು ನಾನೇನು ಮಾಡಿದೆ? ಎನ್ನುವತ್ತ ಹೊರಳಿತು.ವಯಸ್ಸು ಚಿಕ್ಕದು, ಕೊಡುವ ಕೈಯಂತೂ ಇನ್ನು ಚಿಕ್ಕದು ಆದರೂ ನಾನು 3-4 ರೂಪಾಯಿ ಕೊಟ್ಟಿದ್ದೆ. ಅದರೊಳಗೆ ಸಾರ್ಥಕತೆ ಎದ್ದು ಕಾಣಿಸುತ್ತಿದೆ. ಇಂದು ಸಾವಿರಾರು ರೂಪಾಯಿಗಳನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಖರ್ಚು ಮಾಡಿ ಉಡಾಯಿಸಬಹುದು. ಆದರೆ ಅಂದು ನಾನು ಕೊಟ್ಟ ಮೂರು ರೂಪಾಯಿಗಳು ಇಂದು ಸಾಸಿರದಷ್ಟಾಗಿ ನನ್ನ ಕಣ್ಣಿಗೆ ಗೋಚರಿಸುತ್ತಿವೆ. ನಾನು ಎಷ್ಟು ಬಾರಿ ಎಲ್ಲೆಲ್ಲಿ ದುಡ್ಡು ಕೊಟ್ಟಿದ್ದೇನೋ ಅದೆಲ್ಲಕ್ಕಿಂತ ಹೆಚ್ಚು ಸಾರ್ಥಕತೆ ಹಾಗು ಅಪ್ಯಾಯಮಾನವಾಗಿರುವುದು ಕಾರ್ಗಿಲ್ ಯುದ್ಧಕ್ಕೆ ನಾ ಕೊಟ್ಟ ಸೂಕ್ಷಮಾತಿ ಸೂಕ್ಷ್ಮ ದೇಣಿಗೆಯಲ್ಲಿ.ನನ್ನಿಂದ ಈ ಸೂಕ್ಷ್ಮ ಸೇವೆಯಾಗಲು ಕಾರಣೀಭೂತವಾದ ಆರ್ ಎಸ್ ಎಸ್ ಗೆ ನಾನು ಎಂದೆಂದಿಗೂ ಅಭಾರಿ.
ಕೊನೆಯ ಬರಹ
ಯುಗರ್ಷಿ
ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...
-
ದೇಹವನ್ನು ದಂಡಿಸದೆ ಕಾಯವನು ಖಂಡಿಸದೆ ಉಂಡುಂಡು ತೇಗುವರೆಲ್ಲಾ ಕೈಲಾಸಕೆ ಪೋದೊಡೆ ಅದನೇನು ರಂಡೆಯಾಳುವಳೆ ಸರ್ವಜ್ಞ. ಮೇಲಿನ ಸರ್ವಜ್ಞ ಮೂರ್ತಿಯ ವಚನ ಬೊಟ್ಟು ಮಾಡುತ್...
-
ಚಿಕ್ಕ ಮಗು ಮಾತು ಮಾತಿಗೆ ಕೇಳುವ ಈ 'ಏಕೆ' ಯಲ್ಲಿಯೇ ತತ್ವಜ್ಞಾನದ ಎಲ್ಲ ತಥ್ಯವೂ ಅಡಕವಾಗಿದೆ. ಒಂದೇ ಹಗ್ಗದಿಂದ ಇಬ್ಬರೂ ನೇಣುಬಿಗಿದುಕೊಳ್ಳುವದಕ್ಕೆ ಮದುವೆ ...
-
ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...