ಶನಿವಾರ, ಜುಲೈ 8, 2017

ನಮೋ ಇಸ್ರೇಲ್ ಭೇಟಿ - ಭಾರತದಲ್ಲಿ ಕುಡಿಯುವ ನೀರಿನ ಬವಣೆ ಹಿಂಗಬಹುದೇ?

ಮೊನ್ನೆ ಮೊನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ಕೊಟ್ಟಿದ್ದು ನಿಮಗೆಲ್ಲ ನೆನಪಿರಬೇಕಲ್ಲ?....ಹಾಗೆಯೇ ಕಳೆದ ವರ್ಷ ಕರ್ನಾಟಕ ಹಾಗು ತಮಿಳುನಾಡಿನಲ್ಲಿ ವಿಷಮ ಸ್ಥಿತಿಗೆ ಕಾರಣವಾಗಿದ್ದ ಕಾವೇರಿ ವಿವಾದವೂ ನಿಮಗೆಲ್ಲ ನೆನಪಿರಬೇಕಲ್ಲ. ಇರಲಿ. ಕಾವೇರಿ ವಿವಾದ ಭುಗಿಲೆದ್ದಾಗ ಕೆಲವರು ಕರ್ನಾಟಕದ ಪರ ಮಾತನಾಡಿದರೆ ಇನ್ನು ಕೆಲವರು ತಮಿಳುನಾಡಿನ ಪರ ಮಾತನಾಡಿದರು.ಯಾರ್ಯಾರಿಗೆ ಎಲ್ಲೆಲ್ಲಿ ಅನುಕೂಲವಾಗುತ್ತದೋ ಅವರವರು ಆ ರಾಜ್ಯದ ಪರ ಮಾತಾಡಿದರು, ಅದೆಲ್ಲ ಹಿಂದಿನಿಂದಲೂ ಹಾಗೆ ನಡೆದುಕೊಂಡು ಬಂದುಬಿಟ್ಟಿದೆ ಬಿಡಿ. ಆದರೆ ಎರಡೂ ರಾಜ್ಯಗಳಿಗೆ ಅನ್ಯಾಯವಾಗದಂತೆ ನೀರಿನ ತೊಂದರೆ ನೀಗಿಸುವಂತಹ ಮಾತನಾಡಿದ್ದು ಹಾಲಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ. ತಮಿಳುನಾಡಿನ ರೈತರಿಗೆ ನಿಜವಾಗಿಯೂ ಬೇಕಾಗಿರುವುದು ನೀರೋ ? ಅಥವಾ ಕಾವೇರಿ ನೀರೋ? ಎನ್ನುವ ಮೂಲಕ ನೀರಿನ ಮೂಲವಾಗಿ ಕಾವೇರಿ ನದಿಯೊಂದನ್ನೇ ನಂಬಿಕೊಂಡು ಕೂರುವ ಓಬೀರಾಯನ ಕಾಲವಿದಲ್ಲ , ಬದಲಾಗಿ ತಂತ್ರಜ್ಞಾನ ಬೆಳೆದಿದೆ ಹಾಗು ಕರ್ನಾಟಕ-ತಮಿಳುನಾಡುಗಳಿಗೆ ಯಥೇಚ್ಛ ಸಮುದ್ರ ನೀರು ಬಳಸಿಕೊಳ್ಳುವ ಅವಕಾಶವೂ ಇದೆ ಹೀಗಿರುವಾಗ ಸಮುದ್ರ ನೀರಿನ ಉಪ್ಪಿನಂಶ ತೆಗೆಯುವ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಕೃಷಿ ನೀರಿನ ಮೂಲಗಳನ್ನು ಕಂಡುಕೊಳ್ಳಬಾರದೇಕೆ ಎನ್ನುವ ವೈಜ್ಞಾನಿಕ ಪ್ರಶ್ನೆಯೆತ್ತಿದ್ದು ಸುಬ್ರಮಣಿಯನ್ ಸ್ವಾಮಿ ಮಾತ್ರ.

ಅಲ್ಲಿಯವರೆಗೂ ಕಾವೇರಿ ಸಮಸ್ಯೆಗೆ ಶಾಶ್ವವಾತ ಪರಿಹಾರವೆಂದರೆ ನದಿ ಜೋಡಣೆ ಮಾತ್ರ ಹಾಗು ಅದು ಅಧಿಕ ಖರ್ಚಿನ ವ್ಯವಹಾರವಾದ್ದರಿಂದ ಅದರ ಅನುಷ್ಠಾನ ಕಷ್ಟ ಸಾಧ್ಯವೆಂದೇ ನಂಬಿಕೊಂಡಿದ್ದ ಕಾವೇರಿ ಕೊಳ್ಳದ ಜನಗಳಿಗೆ ಹೊಸ ವಿಚಾರ ಹೊಳೆದಿದ್ದು ಆಗಲೇ. ಅಂದು ಆ ಸಭೆಯಲ್ಲಿ ಮಾತನಾಡುತ್ತ ಸುಬ್ರಮಣಿಯನ್ ಸ್ವಾಮಿ ಇಸ್ರೇಲ್ ನ ವಿಚಾರವನ್ನು ಪ್ರಸ್ತಾಪಿಸಿದ್ದರು. ದೇಶದೊಳಗೆ ಅತೀ ಕಡಿಮೆ ನದಿಗಳನ್ನು ಹೊಂದಿ ಹಾಗು ಅತೀ ಕಡಿಮೆ ಮಳೆಯಾಗುವ ಪ್ರದೇಶಗಳನ್ನು ಹೊಂದಿರುವ ಇಸ್ರೇಲ್ ನೀರಿಗಾಗಿ ಹಾಹಾಕಾರವೆಬ್ಬಿಸದೇ ಸಮುದ್ರದ ನೀರನ್ನೇ ಶುದ್ಧೀಕರಿಸಿ ಕೃಷಿ ಕಾರಣಕ್ಕೂ ಹಾಗು ಕುಡಿಯುವ ಅನುಕೂಲಕ್ಕಾಗಿಯೂ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದರು. ಅಂದು ನಾವೆಲ್ಲಾ ಅದನ್ನು ಕೇಳಿದ್ದೆವು ಆದರೆ ಮೊನ್ನೆ ಮೋದಿ- ಬೆಂಝಮೀನ್ ನೆತನ್ಯಾಹು ಭೇಟಿಯಲ್ಲಿ ಸಮುದ್ರ ತೀರವೊಂದಕ್ಕೆ ಭೇಟಿ ಕೊಟ್ಟ ಉಭಯ ನಾಯಕರು ಅಲ್ಲಿಯೇ ಇದ್ದ ನೀರು ಶುದ್ಧೀಕರಣ ಯಂತ್ರವೊಂದರ ಮೂಲಕ ಸಮುದ್ರ ನೀರನ್ನು ಶುದ್ಧೀಕರಿಸಿ ಅಲ್ಲಿಯೇ 'ಚೀರ್ಸ್' ಎಂದು ಕುಡಿಯುತ್ತಿದ್ದುದನ್ನು ಸರಿಸುಮಾರು ಭಾರತದ ಎಲ್ಲಾ ಮಾಧ್ಯಮಗಳು ವರದಿ ಮಾಡಿವೆ. ಇದಾದ ನಂತರ ಭಾರತ-ಇಸ್ರೇಲ್ ಒಡಗೂಡಿ ಭಾರತೀಯ ಸೇನೆ, ಕೃಷಿ, ನೀರಾವರಿ ಮುಂತಾದ ವಿಚಾರಗಳ ಬಗ್ಗೆ ಒಪ್ಪಂದ ಮಾಡಿಕೊಂಡವು. ಇದನ್ನು ಕಂಡು ನೀರಿನ ಸಮಸ್ಯೆಯೆದುರಿಸುತ್ತಿರುವ ಮಂದಿಗೆ ಬಹಳ ಖುಷಿಯಾಗಿರಲಿಕ್ಕೆ ಸಾಕು, ಅದರಲ್ಲೂ ದಕ್ಷಿಣ ಭಾರತದ ಹೈದ್ರಾಬಾದ್ ಕರ್ನಾಟಕ ಪ್ರಾಂತ, ಮುಂಬೈ ಕರ್ನಾಟಕ ಪ್ರಾಂತ, ಕಾವೇರಿ ಕೊಳ್ಳವಾದ ಕರ್ನಾಟಕ-ತಮಿಳುನಾಡಿನ ಹಲವಾರು ಜಿಲ್ಲೆಗಳು ಇಂತಹ ವ್ಯವಸ್ಥೆಯನ್ನು ತಮ್ಮಲ್ಲೂ ಅನುಷ್ಠಾನಗೊಳಿಸಿದರೆ ಹೇಗಿರುತ್ತದೆ ಎನ್ನುವ ಯೋಚನೆಗೆ ಹಾರಿರುವುದಕ್ಕೆ ಸಾಕು.



7000 ಕಿಲೋಮೀಟರ್ ಗೂ ಮೀರಿ ಸಮುದ್ರ ತೀರ ಹೊಂದಿರುವ ಹಾಗು 130 ಕೋಟಿಗೂ ಅಧಿಕ ಜನ ಸಂಖ್ಯೆಯುಳ್ಳ ಭಾರತ ಸಮುದ್ರ ನೀರಿನ ಶುದ್ಧೀಕರಣದ  ಕಡೆ ಇದುವರೆಗೂ ಗಮನ ಕೊಡದಿರುವುದೇ ವಿಪರ್ಯಾಸ. ಭಾರತದ ಕೃಷಿ ಮಾನ್ಸೂನ್ ನೊಂದಿಗಿನ ಜೂಜಾಟ ಎನ್ನುವುದು ನಮಗೂ ನಿಮಗೂ ಗೊತ್ತಿರುವ ಸಮಾಚಾರವೇ. ಹಾಗೆಯೇ ಹಿಮಾಲಯದ ತಪ್ಪಲಿನ ನದಿಗಳನ್ನು ಹೊರತು ಪಡಿಸಿದರೆ ಭಾರತದ ಇನ್ನೆಲ್ಲ ನದಿಗಳೂ ಮಳೆಯಾಧಾರಿತ ಎನ್ನವುದು ತಿಳಿದಿರುವ ಸಂಗತಿಯೇ. ಜಾಗತಿಕ ಹಾಗು ವೈಜ್ಞಾನಿಕ ಕಾರಣಗಳಿಗಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿರುವುದು ಇದೀಗ ಗೌಪ್ಯ ವಿಚಾರವಲ್ಲ. ಹೀಗಿರುವಾಗ ಇಸ್ರೇಲ್ ನೀರಿನ ಶುದ್ಧೀಕರಣದಂತಹ ಹೊಸ ತಂತ್ರಜ್ಞಾನ ಬಳಸಿಕೊಂಡು ಭಾರತ ಹೊಸ ಭಾಷ್ಯ ಬರೆಯುವುದು ಅನಿವಾರ್ಯವಾಗಿದೆ. ಬರ ಪರಿಸ್ಥಿತಿ ನಿರ್ವಹಣೆಗೆಂದು ಪ್ರತೀ ಬರಗಾಲದಲ್ಲೂ ದೆಹಲಿ ಕದ ತಟ್ಟುವ ಕರ್ನಾಟಕ-ತಮಿಳುನಾಡಿನ ರಾಜಕಾರಣಿಗಳಿಗೆ ಈಗಲಾದರೂ ದೇವರು ಇಂತಹ ತಂತ್ರಜ್ಞಾನಗಳತ್ತ ಮನಸ್ಸು ಹರಿಸುವ ಶಕ್ತಿ ಕೊಡಲಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...