ಬುಧವಾರ, ಜನವರಿ 6, 2021

ಪ್ರೇಮ ಪಲ್ಲಟ

ಐನ್ಸ್ಟೀನ್ ನಮ್ಮ ಪ್ರಪಂಚ ಕಂಡ ಅತಿ ದೊಡ್ಡ ವಿಜ್ಞಾನಿ. ಆತ ಶಕ್ತಿಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ ಕಟ್ಟ ಕಡೆಗೆ 'ಶಕ್ತಿಯನ್ನು ಸೃಷ್ಟಿಸುವುದಕ್ಕಾಗಲಿ, ನಾಶಪಡಿಸುವುದಕ್ಕಾಗಲಿ ಸಾಧ್ಯವಿಲ್ಲ' (ಎನರ್ಜಿ ಕ್ಯಾನ್ ನೈದರ್ ಬಿ ಕ್ರಿಯೇಟೆಡ್, ನಾರ್ ಡೆಸ್ಟ್ರಾಯೆಡ್ - Energy can neither be created nor destroyed) ಎಂದು ಉಧ್ಘರಿಸಿದ. ಅದು ವೈಜ್ಞಾನಿಕ ರಂಗದಲ್ಲಿ ಮಹಾ ಸತ್ಯವಾಗಿ ಗೋಚರಿಸಿತು, ಅಷ್ಟೇ ಅಲ್ಲ ಅದನ್ನು ಸುಳ್ಳೆಂದು ಸಾಬೀತುಮಾಡಲು ಯತ್ನಿಸಿದ  ಇನ್ನಿತರರ ಪ್ರಯೋಗಗಳು ಫಲ ಕೊಡಲಿಲ್ಲ. ಹೇಗೆ ಶಕ್ತಿಯನ್ನು ಉತ್ಪತ್ತಿ ಮಾಡಲಾಗಲಿ, ನಾಶ ಮಾಡುವುದಕ್ಕಾಗಲಿ ಸಾಧ್ಯವಿಲ್ಲವೋ ಥೇಟ್ ಹಾಗೆಯೇ ನಿಮ್ಮಲ್ಲಿ ಅಂತರ್ಗತವಾಗಿರುವ ಪ್ರೀತಿಯನ್ನು ನಾಶ ಮಾಡುವುದಕ್ಕಾಗಲಿ ಅಥವಾ ಮತ್ತಷ್ಟು ಹೆಚ್ಚು ಮಾಡುವುದಕ್ಕಾಗಲಿ ಸಾಧ್ಯವಿಲ್ಲ. ನಿಮ್ಮಲ್ಲಿ ಈಗಾಗಲೇ ಇರುವಷ್ಟೇ ಪ್ರೀತಿಯನ್ನು ನೀವು ನಿಮ್ಮ ಜೀವನದ ವಿವಿಧ ಕಾಲ ಘಟ್ಟಗಳಲ್ಲಿ ಬೇರೆ ಬೇರೆಯವರಿಗೆ ಹಂಚುತ್ತಾ ಸಾಗುತ್ತೀರಿ ಅಷ್ಟೇ. ಅರ್ಥಾತ್ ನಿಮ್ಮಲ್ಲಿರುವ ಪ್ರೇಮ ಪಲ್ಲಟಗೊಳ್ಳುತ್ತಾ ಸಾಗುತ್ತದೆಯೇ ಹೊರತು ಹೆಚ್ಚು-ಕಡಿಮೆಗಳಾಗುತ್ತಾ ಸಾಗಲಾರದು ಎನ್ನುವುದೇ ನನ್ನ ಬಲವಾದ ನಂಬುಗೆ.




ಮಗುವೊಂದು ಜನಿಸಿದಾಗ ತನ್ನ ತಾಯಿಯ ಪ್ರೇಮದೊಳಗೆ ಸಿಲುಕಿಕೊಳ್ಳುತ್ತದೆ, ಅದು ಎಷ್ಟರ ಮಟ್ಟಿಗೆ ಎಂದರೆ ಜನಿಸಿದಂದಿನಿಂದ ಕೆಲವು ತಿಂಗಳುಗಳ ಕಾಲ ಆಕೆಯನ್ನು ಬಿಟ್ಟು ಕ್ಷಣಕಾಲವೂ ಇರಲಾರದಷ್ಟು, ಅಂದರೆ ತನ್ನ ಹೃದಯದಲ್ಲಿದ್ದ ಅಷ್ಟೂ ಪ್ರೀತಿಯನ್ನು ಅದು ತಾಯಿಯೊಡನೆ ಹಂಚಿಕೊಳ್ಳುತ್ತದೆ. ಕೆಲವು ತಿಂಗಳುಗಳುರುಳಿದ ತರುವಾಯೂ ತಂದೆಯನ್ನು, ತಾನು ದಿನ ನಿತ್ಯ ಕಾಣುವವರನ್ನು ಹಚ್ಚಿಕೊಳ್ಳುವ ಮಗು ತನ್ನಲ್ಲಿದ್ದ ಪ್ರೀತಿಯಷ್ಟರಲ್ಲೇ ಒಂದು ಪಾಲನ್ನು ಅವರಿಗೂ ಕೊಡುತ್ತಾ ಸಾಗುತ್ತದೆ, ಆಗ ತಾಯಿಯ ಮೇಲಿನ ಸೆಳೆತ ಕಡಿಮೆಯಾಗಿ ಇನ್ನಿತರೆಡೆಗೂ ಸೇರಿಕೊಳ್ಳುವುದನ್ನು ಕಲಿಯುತ್ತದೆ. ಅದೇ ಮಗು ಬೆಳೆದು ಶಾಲೆ ಸೇರಿಕೊಂಡಾಗ ಈಗಾಗಲೇ ತಾನು ಹಂಚಿದ್ದ ಪ್ರೀತಿಯಲ್ಲಿ ಒಂದೊಂದು ಪಾಲು ತೆಗೆದು ತನ್ನ ಗೆಳೆಯರ ಬಳಗಕ್ಕೂ ಹಂಚುತ್ತಾ ಸಾಗುತ್ತದೆ. ಮುಂದೆ ಪ್ರೀತಿ-ಪ್ರೇಮ, ಮದುವೆ, ಮಕ್ಕಳು ಎಲ್ಲರೊಂದಿಗೂ ಹಂಚಿಕೊಳ್ಳುವುದು ಅಷ್ಟೇ ಪ್ರೀತಿಯನ್ನೇ. ಅಂದರೆ ಒಂದು ಕಡೆ ಇರುವ ಪ್ರೀತಿಯನ್ನು ಕಿತ್ತು ಮತ್ತಿನ್ನೊಂದು ಕಡೆ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾ ಸಾಗುವುದು ನಮ್ಮ ಜೀವನದ ಒಂದು ರಿವಾಜು. 

ಮಕ್ಕಳಾದ ಮೇಲೆ ತಮ್ಮ ಮೇಲೆ ಪ್ರೀತಿ ಕಡಿಮೆ ಯಾಯಿತು ಎನ್ನುವ ಗಂಡ-ಹೆಂಡತಿಯರು, ಮದುವೆಯಾದ ಮೇಲೆ ಮಗನಿಗೆ ನಮ್ಮ ಮೇಲೆ ಪ್ರೀತಿ ಕಡಿಮೆಯಾಯಿತು ಎನ್ನುವ ತಂದೆ-ತಾಯಿಗಳನ್ನು ನಾವು ನೋಡುವಾಗ ನಾವು ಪರೋಕ್ಷವಾಗಿ ನೋಡುವುದು ಈ ಪ್ರೇಮ ಪಲ್ಲಟವನ್ನೇ. 

ಪ್ರೇಮ ಮಧುರ ನಿಜ, ಅಮರವೂ ನಿಜ. ಆದರೆ ಒಬ್ಬ ವ್ಯಕ್ತಿಯೊಂದಿಗೆ ಅಲ್ಲ. ಮದುವೆಯಾದ ಹೊಸದರಲ್ಲಿ ಅತ್ಯಂತ ಆಪ್ತತೆಯಿಂದ ಇರುವ ಗಂಡ ಹೆಂಡತಿಯರು ದಿನ ಕಳೆದಂತೆ ಸಾಮಾನ್ಯವಾಗಿರುವುದಿಲ್ಲವೇ?. ಪ್ರೀತಿಯೇನೋ ಅಮರ ಅದು ಒಬ್ಬ ವ್ಯಕ್ತಿಯ ಜೊತೆಗೆ ಮಾತ್ರವಲ್ಲ, ಬದಲಾಗಿ ವಸ್ತುತಃ ಪ್ರೀತಿ ಅಮರ ಎನ್ನುವ ಸತ್ಯ ನಮ್ಮಲ್ಲಿ ಅನೇಕರಿಗೆ ರುಚಿಸದಾಗದೇನೋ!.

-o-


ಭಾನುವಾರ, ಜನವರಿ 3, 2021

ವಿವೇಕ ವಾಣಿ

  • ಆಗಿ ಹೋದುದರ ಕುರಿತು ಚಿಂತಿಸಿ ಫಲವೂ, ಪ್ರಯೋಜನವೂ ಏನೂ ಇಲ್ಲ.
  • ನಮ್ಮ ಈವತ್ತಿನ ಪರಿಸ್ಥಿತಿಗೆ ನಾವು ಮಾತ್ರ ಕಾರಣರೇ ಹೊರತು ಮತ್ತಿನ್ನಾರು ಅಲ್ಲ.
  • ನಾವು ಸೇರಬೇಕಾದ ಗಮ್ಯ ನಮ್ಮ ತಾಕತ್ತಿನ ಮೇಲೆ ನಿರ್ಧರಿಸಿಕೊಳ್ಳಬೇಕೇ ಹೊರತು ಬೇರೆಯವರನ್ನು ನೋಡಿಕೊಂಡಲ್ಲ.
  • ನಿನ್ನನ್ನು ನೀನು ಹೋಲಿಸಿ ನೋಡಿಕೊಳ್ಳುವುದು ನೀನು ಭಗವಂತನಿಗೆ ಮಾಡಬಹುದಾದ ಅತೀ ದೊಡ್ಡ ಅವಮಾನ.
  • ಗೋಳಾಡುವುದಕ್ಕೆ ಕಾಲವಿದಲ್ಲ. ಆಗಬೇಕಾದ ಕಾರ್ಯವನ್ನು ಮಾಡಿ ಮುಗಿಸು, ಉನ್ನತಿಯೆಡೆಗೆ ನೋಡು.
  • ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಳ್ಳುವುದು ಉತ್ತಮ, ಆದರೆ ಅವುಗಳೆಡೆಗೆ ಕಾರ್ಯ ಸಾಧಿಸದಿದ್ದರೆ ಅದೇ ಮಾರಕ.
  • ಗುರಿ ಹಾಕಿಕೊಂಡು ಅದನ್ನು ಸಾಧಿಸದೇ ಒಮ್ಮೆ ಬಿಟ್ಟರೆ ಗುರಿ ಬಿಟ್ಟು ಬಿಡುವುದೇ ಚಟವಾಗಿ ಪರಿಣಮಿಸಿಬಿಡುತ್ತದೆ. 
  • ಸಕಲ ಜವಾಬ್ದಾರಿಯೆಲ್ಲ ನಿನ್ನ ಮೇಲೆಯೇ ಬಿದ್ದಿದೆಯೇನೋ ಎನ್ನುವಂತೆ ದುಡಿ. ಗೆಲುವು ನಿಶ್ಚಿತವಾಗಿ ನಿನ್ನದೇ.
  • ಜೀವನ ಭಗವಂತನ ಪ್ರಶ್ನೆ ಪತ್ರಿಕೆ, ಇಲ್ಲಿ ಒಬ್ಬೊಬ್ಬರಿಗೂ ಬೇರೆ ಬೇರೆ ಪ್ರಶ್ನೆಗಳಿರುವ ಪತ್ರಿಕೆ. ಪಕ್ಕದವನ ಉತ್ತರ ಕಾಪಿ ಹೊಡೆದರೆ ಗುರಿ ಮುಟ್ಟುವುದು ಅಸಾಧ್ಯ.
  • ಕಾರ್ಯಶ್ರದ್ಧೆ ಇದ್ದರೆ ನೀನು ಗುರಿಯನ್ನಲ್ಲ, ಗುರಿಯೇ ನಿನ್ನನ್ನು ಅನ್ವೇಷಿಸುತ್ತದೆ.
  • ಒಳ್ಳೆಯ ಆಲೋಚನೆ ಇರುವೆಡೆ ಸಕಾರ್ಯ ತನ್ನಿಂತಾನೇ ಜರುಗುತ್ತದೆ.
  • ಪ್ರಯತ್ನದಿಂದ ಏನಾದರೂ ಸಾಧನೆ ಸಾಧ್ಯ.

-o-

ಶುಕ್ರವಾರ, ಜನವರಿ 1, 2021

ಹೊಸವರ್ಷದ ಹೊಸ ಅನುಸಂಧಾನ

2020 ಜಗತ್ತನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿದೆ. ಸಕಲರಿಗೂ ಸರ್ವತ್ರ ಜೀವನ ಪಾಠವೊಂದನ್ನು ವರ್ಷಾರಂಭದಲ್ಲೇ ವಕ್ಕರಿಸಿದ ವ್ಯಾಧಿ ಕಲಿಸಿದೆ. ಅವೆಲ್ಲದರ ನಡುವೆ ಹೊಸ ಆಸೆಗಳನ್ನು, ಜೀವನ ವಿಧಾನವನ್ನು ಹೊತ್ತುಕೊಂಡು 2021 ಮನೆಯ ಬಾಗಿಲು ಬಡಿದಿದೆ. ನೀವು ಒಪ್ಪಿ ಬಿಡಿ ಕಾಲ ಉರುಳುತ್ತಿದೆ, ಅದರೊಟ್ಟಿಗೆ ನಾವು ಉರುಳುತ್ತಿದ್ದೇವೆ. 

ಹೊಸ ವರುಷದ ಹರ್ಷದಲಿ ಹೊಸ ಯೋಜನೆಗಳು ಸಾಕಾರಗೊಳ್ಳಲು ಮನದಂಗಳದಲ್ಲಿ ಬಂದು ಲಾಟು ಬಿದ್ದಿವೆ. ಹಳೆ ವರ್ಷದ ಹಲವು ಸೂತಕಗಳ ತೊಳೆದು ಹೊಸ ವರ್ಷದ ಮನೆ ಕೊಡವಿ ಆದರಿಸಿ ಹೊಸ ಧಿರಿಸ ತೊಟ್ಟು ಹರಸಿ ಅಪ್ಪಿಕೊಳ್ಳಬನ್ನಿ ಹೊಸ ವರ್ಷವನು.

ಹೊಸವರ್ಷದ ಹೊಸ ಅನುಸಂಧಾನಕೆ ಶುಭ ಹಾರೈಕೆಗಳು.


-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...