ಭಾನುವಾರ, ಆಗಸ್ಟ್ 16, 2020

ಅಲ್ಲೇ ಇದೆ ನಿನ್ನ ಗೆಲುವು

 ಇಲ್ಲೆಷ್ಟೋ ಜನಗಳಿಗೆ

ಉಣ್ಣಲಿಲ್ಲ,

ಮಗದೆಷ್ಟೋ ಜನಗಳಿಗೆ 

ಉಡಲಿಲ್ಲ,

ಇಲ್ಲೆಷ್ಟೆಷ್ಟೋ ಜನಗಳಿಗೆ 

ಎಲ್ಲರ ಸಮದಾರಿಗೆ ನಿಲ್ಲುವ 

ಸ್ಥೈರ್ಯವೇ ಇಲ್ಲ.


ಅದೆಂತಾಯ್ತೋ ತಾನೇ ತಾನಾಗಿ 

ಅರಸಿ ಬಂದಿದೆ ನಿನಗೀ ಭೋಗ.

ಬಿಡು ಚಿಂತೆಯ 

ಬಾಹ್ಯದ ಜಗದ ಜಾಗರವ,

ಅರಿ ನಿನ್ನ ಬಾಳ್ಬಲವ

ಅಲ್ಲೇ ಇದೆ ನಿನ್ನ ಗೆಲುವು.

-o-

ಶುಕ್ರವಾರ, ಆಗಸ್ಟ್ 14, 2020

ಸಾಮಾಜಿಕ ಜಾಲತಾಣಗಳು - ವರ್ಚುಯಲ್ ವರ್ಲ್ಡ್

ಮೊನ್ನೆ ಮೊನ್ನೆವರೆಗೂ ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ದಿನಕ್ಕೆ ಹತ್ತು ಸಲವಾದರೂ ಕಾಣಿಸಿಕೊಳ್ಳುತ್ತಿದ್ದ ನಾನು ಈ ಎಲ್ಲದರಿಂದಲೂ ಲಾಗ್ ಔಟ್ ಆಗಿ ಅವುಗಳ ಸಹವಾಸವೇ ಬೇಡವೆಂದು ದೂರ ಉಳಿದಿದ್ದೇನೆ. ನನ್ನ ಪ್ರಕಾರ ಇದೀಗ ಈ ತಾಣಗಳು ಬಳಕೆಯಾಗುತ್ತಿರುವುದು ಮಾಹಿತಿ ವಿನಿಮಯದ ಸೋಗಿನಲ್ಲಿ ತಮ್ಮ ಐಡಿಯಾಲಜಿಗಳನ್ನ ಅವರಿವರ ಮೇಲೆ ಹೇರುವುದಕ್ಕಾಗಿ. ಅಲ್ಲಿ ಎಲ್ಲ ತರಹದ ನಿಲುವುಗಳನ್ನು ವಿರೋಧಿಸುವ ಜನರಿದ್ದಾರೆ, ಯಾವುದೋ ವಿಚಾರ ತಮಗೆ ಗೊತ್ತಿಲ್ಲದಿದ್ದರೂ ಗೊತ್ತೆಂದು ತೋರ್ಪಡಿಸಿಕೊಳ್ಳುವರು, ಗೂಗಲ್ ಯೂನಿವರ್ಸಿಟಿಯಲ್ಲಿ ಕ್ಷಣ ಮಾತ್ರದಲ್ಲಿ ಪಾಂಡಿತ್ಯ ಸಂಪಾದನೆ ಮಾಡಿದವರು, ಗಾಳಿ ಬಂದೆಡೆಗೆ ತೂರಿಕೊಳ್ಳುವ ಸಿದ್ಧಾಂತಗಳೇ ಇಲ್ಲದವರು, ವಿಚಾರದ ಪೂರ್ವಾಪರ ತಿಳಿಯದೆ ಲೈಕ್ ಬಟನ್ ಕುಕ್ಕುವರು, ಸುಳ್ಳು ಸುದ್ದಿ ಹರಡುವರು, ಇನ್ನು ಎಂತೆಂತವರು ಬೇಕು ಹೇಳಿ?ಎಲ್ಲರೂ ಅಲ್ಲಿದ್ದಾರೆ!.  

2019ರ ಫೆಬ್ರವರಿ ತಿಂಗಳಲ್ಲಿ ಪುಲ್ವಾಮಾ ದಲ್ಲಿ ಭಾರತೀಯ ಯೋಧರ ಮೇಲೆ ದಾಳಿಯಾಗಿ ದೇಶದಾದ್ಯಂತ ಸಂಚಲನ ಸೃಷ್ಟಿಯಾಗಿದ್ದ ಸಂದರ್ಭ ಅದು. 370ನೆ ವಿಧಿಯನ್ನ ಕೈ ಬಿಟ್ಟು ಬಿಡಬೇಕೆಂಬ ದೊಡ್ಡ ಕೂಗು ದೇಶದಾದ್ಯಂತ ಎದ್ದು ಬಿಟ್ಟಿತ್ತು. ನನ್ನ ಟ್ವಿಟ್ಟರ್ ಸ್ವಘೋಷಿತ ಬುದ್ಧಿಜೀವಿ ಮಿತ್ರನೊಬ್ಬ ತಾನೂ ಅಲ್ಲಿ ದನಿಗೂಡಿಸಿದ. ವಿಧಿ 370ನ್ನ ರದ್ದು ಮಾಡಲು ಇದುವರೆಗೂ ಬಂದ ಸರ್ಕಾರಗಳು ವಿಫಲವಾಗಿರುವುದರ ಬಗ್ಗೆ ಸುಮಾರು ಒಂದು ತಿಂಗಳು ಸರಣಿ ಟ್ವೀಟುಗಳನ್ನ ಕುಟ್ಟಿದ ಅವನು. ಮುಂದೆ ಅದೇ ಆಗಸ್ಟ್ ನಲ್ಲಿ 370ನೆ ವಿಧಿ ಕೈಬಿಡಲು ಸರ್ಕಾರ ತೀರ್ಮಾನ ಮಾಡಿ ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕಾರಕ್ಕೆ ಕಳುಹಿಸಿಕೊಟ್ಟಾಗ ಮತ್ತೆ ಅದೇ ಮಿತ್ರ ಟ್ವಿಟ್ಟರ್ ನಲ್ಲಿ ಸರ್ಕಾರದ ಆ ನಿಲುವಿನ ವಿರುದ್ಧ ರೊಚ್ಚಿಗೆದ್ದ. ಅದು ಜಮ್ಮು ಕಾಶ್ಮೀರಕ್ಕೆ ಕೊಟ್ಟಿದ್ದ ಮಾತು ತಪ್ಪಿದಂತೆ ಅಂತಲೂ, ವಿಧಿ 370 ರದ್ದು ಮಾಡಿದ ಸರ್ಕಾರ ಇತರ ರಾಜ್ಯಗಳ ಹಕ್ಕುಗಳನ್ನೂ ಕಸಿದುಕೊಳ್ಳಲು ಹಿಂದೂ ಮುಂದು ನೋಡುವುದಿಲ್ಲವೆಂದು ಲೇಖನಗಳನ್ನ ಬರೆದು ಪ್ರಕಟಿಸಿದ. ಅದೇ ಫೆಬ್ರವರಿಯಲ್ಲಿ ಮಾಡಿದ್ದ ಸರಣಿ ಟ್ವೀಟುಗಳನ್ನು ಅಳಿಸಿಹಾಕಿಬಿಟ್ಟಿದ್ದ ಮಹಾಶಯ. 

ಮೇಲ್ನೋಟಕ್ಕೆ ಯಾವುದೋ ಒಂದು ಸರ್ಕಾರವನ್ನ ಟಾರ್ಗೆಟ್ ಮಾಡಿರುವ ಇಂತಹವರ ವರಾತ ಬಯಲಾಗುತ್ತದೆ. ಇವುಗಳ ಹಿಂದೆ ಅನೇಕ ರಾಜಕೀಯ ಕಾರಣಗಳು ಇರುತ್ತವೆ ಅನ್ನುವುದು ಈಗ ಗುಟ್ಟೇನಲ್ಲ.

ಅದರ ಜೊತೆಗೆ ಇನ್ನೊಂದು ಉದಾಹರಣೆ,  ಕರ್ನಾಟಕದಲ್ಲಿ ರಾಜಕೀಯವಾಗಿ ತುಂಬಾ ಸಕ್ರಿಯವಾಗಿರುವ ಜಿಲ್ಲೆಯೊಂದರ  ಯಾವುದೋ ಒಂದು ಊರಿನಿಂದ  ಬೆಂಗಳೂರಿಗೆ ಕೆಲಸ ಮಾಡಲು ಬಂದ ಬುದ್ಧಿಜೀವಿಯೊಬ್ಬ 23ರ ಹೊಸ್ತಿಲಲ್ಲಿದ್ದ. ಒಂದು ವರ್ಷ ಪರ್ಯಂತ ಪ್ರತೀ ಹತ್ತು ಹದಿನೈದು ನಿಮಿಷಗಳಿಗೊಂದು ಟ್ವೀಟ್ ಆತನಿಂದ ಬರುತ್ತಿತ್ತು. ಆತ ಬೆಂಗಳೂರಿಗೆ ಕೆಲಸಕ್ಕೂ ಬರುವ ಮೊದಲೇ ಭರ್ಜರಿ ಫೋನ್ ಒಂದನ್ನು ತನ್ನ ತಂದೆಯಿಂದ ಪಡೆದುಕೊಂಡು ಬಂದಿದ್ದ. ಟ್ವಿಟ್ಟರ್ ನಲ್ಲಿ ಆ ಪಾಟಿ ಬ್ಯುಸಿ ಆಗಿದ್ದ ಅವನು ಒಂದು ದಿನ ಇಲ್ಲಿ ಕೆಲಸ ಕಷ್ಟ ಅಂತ ಸಬೂಬು ಹೇಳಿ ಬೆಂಗಳೂರಿನಿಂದ ಕಾಲ್ಕಿತ್ತು ತನ್ನೂರಿಗೆ ಹೊರಟು ಹೋದ. ತನ್ನ ತಂದೆಯಿಂದಲೇ ಕೆಲಸಕ್ಕೆ ಬಾರದವನೆಂದು ಬೈಸಿಕೊಂಡರೂ ತಲೆ ಕೆಡಿಸಿಕೊಳ್ಳದ ಅವನು ಅನಂತರ  24 ಘಂಟೆಯೂ ಟ್ವಿಟರ್ ನಲ್ಲಿ ಬ್ಯುಸಿ ಆದ. ಗೂಗಲ್ ಯೂನಿವರ್ಸಿಟಿಯಿಂದ ಗಂಟೆ ಮುಗಿಯುವುದರೊಳಗಾಗಿ ಸ್ವಘೋಷಿತ ಅರ್ಥಶಾಸ್ತ್ರಜ್ಞನಾದ ಆತ ದೇಶದ ಆರ್ಥಿಕತೆ ಹಳ್ಳ ಹಿಡಿದು ಹೋದ ಬಗ್ಗೆ ಪುಂಖಾನುಪುಂಖವಾಗಿ ಟ್ವೀಟುಗಳನ್ನು ಬರೆದ. ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲದವರು ಸರ್ಕಾರ ನಡೆಸುತ್ತಿದ್ದಾರೆಂದು ಬೊಂಬಡಾ ಬಜಾಯಿಸಿದ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿಯವರನ್ನು ಏಕವಚನದಲ್ಲಿ ಸಂಭೋದಿಸಿ ಟ್ವೀಟುಗಳನ್ನು ಬರೆದ. ವ್ಯವಸ್ಥೆಯೊಂದನ್ನು ವಿರೋಧ ಮಾಡುವ ಹಕ್ಕು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಮಾನ್ಯ, ಆದರೆ ದೇಶದ ಬಹು ಸಂಖ್ಯಾತರು ಆರಿಸಿದ ಪ್ರಧಾನಿಯವರನ್ನು ಏಕವಚನದಲ್ಲಿ ಸಂಭೋದಿಸುವುದು ಆತ ಬೆಳೆದುಬಂದ ಹಿನ್ನೆಲೆಯನ್ನು, ಆಚಾರವನ್ನೇ ಎತ್ತಿ ತೋರಿಸುತ್ತದೆ. ತನ್ನ ಅರ್ಥ ವ್ಯವಸ್ಥೆಯನ್ನೇ ಸರಿದೂಗಿಸಲಾರದ ಮಹಾಶಯ ದೇಶದ ಅರ್ಥ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಂಡಿದ್ದ. ಎಷ್ಟೋ ದಿನಗಳಾದ ಮೇಲೆ ಅವರ ಊರಿನವನೇ ಒಬ್ಬ ಹುಡುಗ ಆತನ ವರ್ತನೆಗಳನ್ನೆಲ್ಲ ಟ್ವಿಟ್ಟರಿನಲ್ಲಿ ಜಗಜ್ಜಾಹೀರು ಮಾಡಿದ್ದ.

ಇತ್ತೀಚಿಗೆ ಸ್ನೇಹಿತರೊಬ್ಬರೊಂದಿಗೆ ಹರಟುತ್ತಾ ಇಂತಹುದೇ ಒಂದು ವಿಷಯ ಬಂತು. ಕರ್ನಾಟಕದ ಬಹು ಮುಖ್ಯವಾದ ವಿಷಯವೊಂದರ ಬಗ್ಗೆ ಟ್ವೀಟ್ ಮಾಡಿದ್ದರಂತೆ ಅವರು. ಒಂದೇ ದಿನದ ಅವಧಿಯಲ್ಲಿ 400ಕ್ಕೂ ಮೀರಿ ಶೇರ್ ಗಳನ್ನೂ 2300ಕ್ಕೂ ಮೀರಿ ಲೈಕ್ ಗಳನ್ನೂ ಪಡೆದುಕೊಂಡಿತಂತೆ ಆ ಟ್ವೀಟ್. ಯಾವತ್ತೂ ಅಷ್ಟೊಂದು ಪ್ರತಿಕ್ರಿಯೆ ಕಾಣದ ಆತ ಮರು ದಿನ ಅದಕ್ಕಾಗಿ ಬೆಂಗಳೂರಿನ ಯಾವುದೋ ಒಂದು ಕಡೆ ಸೇರಿ ಸಭೆ ನಡೆಸಿ ಏನಾದರೂ ನಿಲುವು ತೆಗೆದುಕೊಳ್ಳಲು ಮತ್ತೊಂದು ಟ್ವೀಟ್ ಮಾಡಿದನಂತೆ.ಅದನ್ನು ಅನುಸರಿಸಿ ಬಂದ ಜನರನ್ನು ಬಿಡಿ,  ಅದಕ್ಕೆ ಬಂದ ಲೈಕ್ ಗಳ ಸಂಖ್ಯೆ 2 ದಿನವಾದರೂ 30 ದಾಟಿರಲಿಲ್ಲವಂತೆ. ಲೈಕು ಬೇಕಾದರೆ ಒತ್ತುವ ಆದರೆ ನಿಜವಾದ ಕಾರ್ಯಕ್ಕೆ ತಲೆ  ಕೊಡದ ಸಾಮಾಜಿಕ ಜಾಲತಾಣಗಳು ವರ್ಚುಯಲ್ ವರ್ಲ್ಡ್ ಗಳಾಗಿ  ಬದಲಾಗುತ್ತಿರುವುದಕ್ಕೆ ಹಸಿ ಹಸಿ ಸಾಕ್ಷಿ ಇದು.

ಆ ವರ್ಚುಯಲ್ ವರ್ಲ್ಡ್ ನಲ್ಲಿ ಬಾರಿ ಬ್ಯುಸಿ ಆಗಿರುವವರಿಗೆ ನಿಜವಾದ ಪ್ರಪಂಚದ ವಸ್ತು ಸ್ಥಿತಿಯೂ ಗೊತ್ತಿರುವುದಿಲ್ಲ, ಅದನ್ನು ತಿಳಿದುಕೊಳ್ಳಲು ನಿಜವಾದ ಪ್ರಪಂಚಕ್ಕಿಳಿಯುವ ಕೆಲಸವನ್ನೂ ಅವರು ಮಾಡುವುದಿಲ್ಲ. ಹಣ ಬಲದಿಂದಾಗಿ ದೇಶ ಸುತ್ತಲು ಹೊರಡುವ ಅದೇ ಮಂದಿ ದೇಶದ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಫೇಸ್ ಬುಕ್ಕಿಗೆ ಫೋಟೋಗಳಿಗಾಗಿ ಫೋಸು ಕೊಡುತ್ತಾ ಸೆಲ್ಫಿ ತೆಗೆಯುವದರಲ್ಲಿ ನಿರತರಾಗಿರುತ್ತಾರೆ. ಅವರಿಗೆ ರಸಾಸ್ವಾದನೆಯಾಗಲಿ, ಸಮಸ್ಯೆಯಾಗಲಿ ನೇರವಾಗಿ ಅನುಭವಿಸಲು ಸಾಧ್ಯವಿಲ್ಲ, ವರ್ಚುಯಲ್ ವರ್ಲ್ಡ್ ಮುಖಾಂತರವೇ ಅನುಭವಿಸುತ್ತಾರೆ. 

ಬೇರೆ ಸಮಸ್ಯೆ,  ರಸಾನುಭೂತಿ ಬಗ್ಗೆ ಬಿಡಿ, ತಮ್ಮ ಜೀವನವನ್ನೇ ವೈಭವೀಕರಿಸಿ ಸಾಮಾಜಿಕ ತಾಣಗಳಲ್ಲಿ ಪ್ರದರ್ಶನಕ್ಕಿಡುವುದು ಆಧುನಿಕ ಜೀವನದ ಭಾಗವೇ ಆಗಿ ಹೋಗಿದೆ. ಎಷ್ಟೋ ಜನರ ಜೀವನವೇ ಕಿತ್ತು ಲಬ್ಬಂಡೆದ್ದು ಹೋಗಿರುತ್ತದೆ, ಆದರೆ ಅವರ ಫೇಸ್ ಬುಕ್ಕಿನ ಫೋಟೋಗಳು ಮಾತ್ರ ವಿಲಾಸಿ ಜೀವನ ನಡೆಸುವ ಆಗರ್ಭ ಶ್ರೀಮಂತರಂತೆ ತೋರುವುದು ಫ್ಯಾಷನ್ ಹುಚ್ಚು, ಧನಾತ್ಮಕ ಮನಸ್ಥಿತಿ ಎಂದುಕೊಂಡರೆ ನಾವೇ ಮೂರ್ಖರು. 

ಸಾಮಾಜಿಕ ಜಾಲತಾಣದಲ್ಲಿ ಕಾಣುವ ಎಲ್ಲರ ಜೀವನ ಕೇವಲ ಅವರ ಚೆಂದದ ತಳುಕಿನ ಭಾಗ ಮಾತ್ರ, ಮತ್ತೊಂದು ಭಾಗ ಪ್ರದರ್ಶನಕ್ಕೆ ಲಭ್ಯವಾಗುವುದಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಕಾಣುವ ಎಲ್ಲರ ಜೀವನ ಕೇವಲ ಅವರ ಚೆಂದದ ತಳುಕಿನ ಭಾಗ ಮಾತ್ರ, ಮತ್ತೊಂದು ಭಾಗ ಪ್ರದರ್ಶನಕ್ಕೆ ಲಭ್ಯವಾಗುವುದಿಲ್ಲ.


ಕೆಲವು ವರ್ಷಗಳ ಹಿಂದೆ ಭಾನುವಾರದ ದಿನಪತ್ರಿಕೆ ಅಂಕಣಗಳಲ್ಲಿ ಪೊಲೀಸ್ ಕಥಾನಕಗಳನ್ನು ಓದುವಾಗ ಒಂದು ನಿಜವಾಗಿ  ನಡೆದ ಘಟನೆ ಸಿಕ್ಕಿತ್ತು. ಕರ್ನಾಟಕದ ಉದ್ಯಮಿಯೊಬ್ಬರ ಮಗಳು ತನ್ನ ಪ್ರಿಯತಮನೊಡನೆ ಸೇರಿ ಬಚ್ಚಲಿನಲ್ಲಿ ಸ್ನಾನ ಮಾಡುತ್ತಿದ್ದ ತನ್ನ ತಂದೆಯನ್ನೇ ಉಸಿರುಗಟ್ಟಿಸಿ ಸಾಯಿಸಿಬಿಟ್ಟಿದ್ದಳಂತೆ. ಅದೇ ಹುಡುಗಿ ಆ ಘಟನೆಗೂ ವರ್ಷ ಮುಂಚೆ ಫೇಸ್ ಬುಕ್ಕಿನಲ್ಲಿ ಫಾದರ್ಸ್ ಡೇ ಶುಭ ಸಂದೇಶಗಳನ್ನ ಬರೆದುಕೊಂಡಿದ್ದಳಂತೆ. 

ಈ  ಸಾಮಾಜಿಕ ಜಾಲತಾಣಗಳನ್ನೇ ಮನಸ್ಸಿಗೆ ಹಚ್ಚಿಕೊಂಡು ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿ ನೋಡಿಕೊಳ್ಳುವರು, ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವರೂ ನಮ್ಮ ದೇಶದಲ್ಲಿ ಕಡಿಮೆಯೇನಿಲ್ಲ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು 'ಏನಕೇನ ಪ್ರಕಾರೇಣಾ.....' ಅನ್ನುವಂತೆ ರಾತ್ರೋ ರಾತ್ರಿ ಹೆಸರು ಮಾಡಿಬಿಡಲು ತುದಿಗಾಲಲ್ಲಿ ನಿಂತಿರುವವರೂ ಕಡಿಮೆಯೇನಿಲ್ಲ. ಇದಿಷ್ಟೇ ಅಲ್ಲದೆ ಆಗಾಗ ಕೋಮು ಗಲಭೆ ಸೃಷ್ಟಿಸುವ, ಶಾಂತಿ ಕದಡುವ,  ಬೆದರಿಕೆ ಹಾಕುವ, ಹೀಯಾಳಿಸುವ ಇನ್ನೂ ಮುಂತಾದ ಋಣಾತ್ಮಕ ಕಾರ್ಯಗಳಿಗೆ ನಮ್ಮ ದೇಶದಲ್ಲಿ ಈ ತಾಣಗಳು ಅನೇಕ ರೀತಿ ಸಹಕಾರಿಯಾಗಿ ಪರಿಣಮಿಸಿವೆ. ಒಳ್ಳೆಯ ಉದ್ದೇಶವೊಂದಕ್ಕೆ ಕಂಡು ಹಿಡಿದ ತಂತ್ರಜ್ಞಾನ ಬಳಕೆಯಾಗುತ್ತಿರುವುದು ಹೀಗೆ!!. ಇದು ನಮ್ಮ ದುರಾದೃಷ್ಟವಲ್ಲದೆ ಮತ್ತೇನು?.

ಅವಿದ್ಯಾವಂತರು ಈ ನಿಟ್ಟಿನಲ್ಲಿ ಎಡವಿದ್ದರೆ ತಡೆದುಕೊಳ್ಳಬಹುದಿತ್ತೇನೋ ಅಥವಾ ತಿದ್ದಿ ಹೇಳಬಹುದ್ದಿತ್ತೇನೋ, ಆದರೆ ವಿದ್ಯಾವಂತರೇ ಹೀಗೆ ಮಾಡಿಬಿಟ್ಟರೆ ಮಾಡುವುದೇನನ್ನು?. ಧರೆಯೆ ಹೊತ್ತಿ ಉರಿಯುವಾಗ ಓಡುವುದೆಲ್ಲಿಗೆ ಬದುಕಲಿಕ್ಕೆ??

-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...