ಸೋಮವಾರ, ಫೆಬ್ರವರಿ 8, 2021

ತಥಾಕಥಿಕ ಅಮೇರಿಕಾ

ಹೊರದೇಶಗಳನ್ನು ಓಡಾಡಿ ಕಂಡವರು ನಮ್ಮ ದೇಶದಲ್ಲಿ ಬಹಳಷ್ಟು ಜನರೇನು ಇಲ್ಲ. ನಮ್ಮ ದೇಶದ ಅಷ್ಟೂ ಜನ ಸಂಖ್ಯೆಯಲ್ಲಿ ಶೇ.1 ರಷ್ಟು ಜನ ನಮ್ಮ ದೇಶದಿಂದ ಕಾಲ್ಕಿತ್ತು ಹೋಗಿ ಪರದೇಶಗಳನ್ನು ಕಂಡವರಿರುವುದೂ ಅನುಮಾನವೇ ಎನಿಸುತ್ತದೆ. ಆದರೂ ಅಸಂಖ್ಯ ಭಾರತೀಯರೆದುರಿಗೆ ಪರದೇಶದ ಪ್ರಸ್ತಾವವಾದರೆ ಅವರ ದೃಷ್ಟಿಗೆ ಮೊದಲು ನಿಲುಕುವುದೇ ಅಮೇರಿಕಾ. 

ಪೂರಾ ಅಮೇರಿಕಾ ಖಂಡಗಳು ಇಷ್ಟವಾಗದಿದ್ದರೂ ಅಮೇರಿಕಾ ಸಂಯುಕ್ತ ಸಂಸ್ಥಾನ ಎಲ್ಲರಿಗೂ ಉಚ್ಚ ಮಟ್ಟದ ಜೀವನಶೈಲಿಯನ್ನೀಯುವ ದೇಶ ಎಂಬಂತ ಕಲ್ಪನೆಯೂ ಭಾರತೀಯರು ಅನೇಕರಲ್ಲಿ ಇದೆ. ಅದಕ್ಕೆ ಕಾರಣ ಒಂದಲ್ಲ, ಹಲವಾರಿವೆ. ಅಮೇರಿಕಾದ ಡಾಲರು ಭಾರತದ ರೂಪಾಯಿಗಿಂತ ಯಾವಾಗಲೂ ಮುಂದೆ ಇರುವುದು ಒಂದಾದರೆ ಭಾಷೆಯ ವಿಚಾರದಲ್ಲಿ ಇನ್ನಿತರ ದೇಶಗಳಲ್ಲಿ ಉಂಟಾಗಬಹುದಾದ ತೊಂದರೆ ಅಲ್ಲಿ ತೀರಾ ಕನಿಷ್ಟವೆನ್ನಬಹುದು. ಇಂಗ್ಲಿಷಿನ ಮೇಲಿನ ಅಲ್ಪ ಸ್ವಲ್ಪ ಹಿಡಿತವಿದ್ದವರೂ ಅಮೆರಿಕೆಯಲ್ಲಿ ದಶಕಗಳನ್ನು ದೂಡಿರುವುದು ಆ ದೇಶ ಭಾಷೆಯ ವಿಚಾರದಲ್ಲಿ ತುಂಬಾ ಸಲೀಸು ಎನಿಸುವಂತೆ ಮಾಡುತ್ತದೆ. ಪ್ರಜಾಪ್ರಭುತ್ವ ತತ್ವದ ಅಡಿಯಲ್ಲಿ ನೋಡುವುದಾದರೆ ಭಾರತೀಯರಿಗೆ ಪರಮಾಪ್ತ ದೇಶ ಅಮೇರಿಕಾವೇ, ಆದರೆ ಅಮೇರಿಕೆಯ ಬಂಡವಾಳಶಾಹಿ ಧೋರಣೆ ಭಾರತದಲ್ಲಿ ನಡೆಯಲಾರದು ಎಂಬ ಅರಿವು ಅಮೇರಿಕಾ ಭಾರತಗಳೆರಡನ್ನೂ ಕಂಡವರಿಗೆ ಈಗಾಗಲೇ ಮನವರಿಕೆಯಾಗಿಯೂ ಇದೆ.

ಅಮೇರಿಕಾ ಭಾರತಕ್ಕೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿರುವುದಕ್ಕೆ ಜಾಗತೀಕ, ಸಾಮರೀಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಅಮೇರಿಕಾ ತನ್ನ ಎದುರಾಳಿಯಾಗಿದ್ದ ಸೋವಿಯತ್ ರಷ್ಯಾ ಸಂಯುಕ್ತ ಸಂಸ್ಥಾನವನ್ನು ಯಶಸ್ವಿಯಾಗಿ ಛಿದ್ರ ಮಾಡಿದೆ, ಇನ್ನು ಅದಕ್ಕೆ ಭೌಗೋಳಿಕವಾಗಿ ಸೋವಿಯತ್ ರಷ್ಯಾಗೆ ಸಮೀಪವಾಗಿರುವ ಹಾಗು ಆರ್ಥಿಕವಾಗಿ ಸಬಲವಾಗಿಲ್ಲದ ಪಾಕಿಸ್ತಾನ, ಅಫ್ಘಾನಿಸ್ತಾನಗಳ ಅವಶ್ಯಕತೆ ಏನೇನು ಇಲ್ಲ. ಆದರೆ ಅದರ ಹೊಸ ಎದುರಾಳಿ ಚೀನಾವನ್ನು ಹಣಿಯಲು ಮೂರನೇ ರಾಷ್ಟ್ರವೊಂದರ ಅದರಲ್ಲೂ ಬಲಶಾಲಿಯಾದ ರಾಷ್ಟ್ರವೊಂದರ ಸಹಾಯ ಅಮೇರಿಕಾಗೆ ಬೇಕೇ ಬೇಕು. ಅದು ಚೀನಾ ಸುತ್ತಲಿನ ರಾಷ್ಟ್ರವೇ ಆಗಿರಬೇಕು, ಅಂದರೆ ಅದು ಜಪಾನ್, ರಷ್ಯಾ, ಭಾರತದ ಪೈಕಿ ಯಾವುದಾದರೂ ಒಂದು ರಾಷ್ಟ್ರವಾಗಿರಬೇಕು. ರಷ್ಯಾ-ಅಮೇರಿಕಾಗಳು ಕೂಡಿ ಚೀನಾವನ್ನು ಹಣಿಯುವುದು ಭಾರತದಲ್ಲಿ ಬಿಜೆಪಿ-ಕಾಂಗ್ರೆಸುಗಳು ಮೈತ್ರಿಮಾಡಿಕೊಂಡು ಕೇಂದ್ರದಲ್ಲಿ ಸರ್ಕಾರ ರಚಿಸಿದಷ್ಟೇ ಸತ್ಯ. ಇನ್ನು ಅಮೇರಿಕಾ ತಾನಾಗೇ ಮೇಲೆ ಬಿದ್ದು ಜಪಾನಿಗೆ ಹೋದರು ಟೋಕಿಯೋ ಅವರನ್ನೇನು ಬಿಗಿದಪ್ಪಿಕೊಳ್ಳುವುದಿಲ್ಲ, ಜಪಾನಿಗೆ ಅಮೇರಿಕಾ ಮಾಡಿದ ಗಾಯ ಇನ್ನು ಒಣಗಿಲ್ಲ, ಅವರು ಅದನ್ನು ಮರೆತೂ ಇಲ್ಲ. ಇನ್ನು ಅಮೇರಿಕಾಗೆ ಉಳಿದುಕೊಂಡಿದ್ದು ಭಾರತ ಮಾತ್ರ. ಆದ ಕಾರಣವೇ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗು ಡೆಮಾಕ್ರಟ್ ಪಕ್ಷದ ಜೋ ಬಿಡೆನ್ ಇಬ್ಬರೂ ಅಮೇರಿಕಾ ದೇಶದ ಆಂತರಿಕ ಆಡಳಿತ ವಿಚಾರಗಳಲ್ಲಿ ವಿರೋಧ ನೀತಿಗಳನ್ನು ಹೊಂದಿದ್ದಾಗ್ಯೂ ತಂತಮ್ಮ ಕಾಲಾವಧಿಗಳಲ್ಲಿ ಭಾರತಕ್ಕೆ ಸೇನಾ ವಿಚಾರದಲ್ಲಿ ಅಪಾರ ಸಹಾಯ ಒದಗಿಸುತ್ತಿರುವುದು.

ಇನ್ನು ಆರ್ಥಿಕ ನೆಲೆಗಟ್ಟಿನಿನಿಂದ ನೋಡುವುದಾದರೆ ಅಮೇರಿಕಾ ಭಾರತಕ್ಕಿಂತ ಸುಮಾರು ಮೂರು ಪಟ್ಟು ದೊಡ್ಡ ದೇಶ ಆದರೂ ಅಲ್ಲಿನ ಜನ ಸಂಖ್ಯೆ 35 ಕೋಟಿ ಮಾತ್ರ, ಅಂದರೆ ಭಾರತಕ್ಕಿಂತ ನೂರು ಕೋಟಿ ಕಡಿಮೆ ಜನಸಂಖ್ಯೆಯನ್ನುಳ್ಳ ದೇಶ ಅದು. ಅಲ್ಲಿನ ಬೃಹತ್ ಆರ್ಥಿಕತೆಯನ್ನು ಸಂಭಾಳಿಸಲು ಅಷ್ಟು ಜನ ಸಂಖ್ಯೆ ಕಡಿಮೆಯೇ, ಅದಕ್ಕೆ ಬದಲಿಯಾಗಿ ತಂತ್ರಜ್ಞಾನದ ಮೊರೆ ಹೋಗಲಾದರೂ ಆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮಾನವ ಸಂಪನ್ಮೂಲ ಬೇಕೇ ಬೇಕಲ್ಲವೇ?. ಅದಕ್ಕಾಗಿ ಅಮೇರಿಕಾ ತನಗಿಂತ ಕಡಿಮೆ ಬೆಲೆಗೆ ದಕ್ಕುವ ಹಾಗು ತಾಂತ್ರಿಕವಾಗಿ ನಿಷ್ಣಾತರಿರುವ ಭಾರತವನ್ನು ಆಯ್ದುಕೊಂಡಿರುವುದು ಸೂಕ್ತವೂ, ಸಮಯಕ್ಕನುಗುಣವೂ ಆಗಿದೆ. ಈಗೀಗ ಪೂರ್ವ ದೇಶಗಳಾದ ಮಲೇಷಿಯಾ, ಇಂಡೋನೇಷ್ಯಾ, ವಿಯೆಟ್ನಾಂ ತರಹದ ದೇಶಗಳು ಭಾರತದ ನಡೆಯನ್ನೇ ಅನುಸರಿಸಿ ತಮ್ಮ ನೆಲದಲ್ಲಿ ತಾಂತ್ರಿಕ ಶಿಕ್ಷಣ ದೊರೆಯುವಂತೆ ಮಾಡಿ ಆ ಮೂಲಕ ಮಾನವ ಸಂಪನ್ಮೂಲವನ್ನು ಪಶ್ಚಿಮ ದೇಶಗಳೊಂದಿಗೆ ಹಂಚಿಕೊಂಡು ತಮ್ಮ ಆದಾಯ ವೃದ್ಧಿ ಮಾಡಿಕೊಳ್ಳುವ ಯೋಜನೆ ಹೂಡಿಕೊಂಡು ಅಮೇರಿಕಾದ ಕಂಪನಿಗಳನ್ನು ತಮ್ಮತ್ತ ಆಕರ್ಷಿಸಲು ಮೊದಲಾಗಿರುವುದೂ ವರ್ತಮಾನದ ವಿದ್ಯಮಾನ.


ಅಮೇರಿಕಾ ರಾಜಕೀಯ ರಂಗದಲ್ಲಿ ಆ ದೇಶವನ್ನು 'ಹೊರಗಿನಿಂದ ಬಂದವರು ಕಟ್ಟಿದ್ದು' ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಅಮೇರಿಕಾ ದೇಶದ ವಲಸಿಗರ ಪಾಲು ಎಷ್ಟರ ಮಟ್ಟಿಗೆ ಇದೆ ಎಂದರೆ ಈವತ್ತು ಆ ದೇಶದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಲ್ಲಿರುವ ಇಬ್ಬರೂ ವಲಸಿಗರ ಮಕ್ಕಳೇ!. ಜೋ ಬಿಡೆನ್ ವಂಶಸ್ಥರು ಐರ್ಲೆಂಡ್ ಮೂಲದವರಾದರೆ, ಕಮಲಾ ಹ್ಯಾರಿಸ್ ಆಫ್ರಿಕಾ-ಭಾರತ ಮೂಲದವರು. ಡೆಮಾಕ್ರಟ್ ಪಕ್ಷ ವಲಸಿಗ ಕೇಂದ್ರೀತ ನೀತಿಗಳನ್ನಿಟ್ಟುಕೊಂಡೇ ಹಲವಾರು ಬಾರಿ ಗೆದ್ದು ಸರ್ಕಾರ ರಚಿಸಿರುವುದು ಇದಕ್ಕೆಲ್ಲಾ ಪುಷ್ಟಿ ಕೊಡುವಂತಹುದ್ದೇ. ವಲಸಿಗರಿಗೆ ಕೆಂಪು ಹಾಸು ಹಾಸಿ, ಅವರೇ 'ಈ ದೇಶದ ನಿರ್ಮಾಣಕಾರರೆಂದು' ಎಷ್ಟು ದೇಶಗಳು ಹೊಗಳುತ್ತವೆ ಹೇಳಿ?. ನಮ್ಮ ಭಾರತವೇ ಅಂತಹ ದೇಶವಲ್ಲ, ಬಾಂಗ್ಲಾ, ಮಯನ್ಮಾರ್ಗಳ ಅಕ್ರಮ ವಲಸೆ ನಮಗೆ ತಲೆನೋವಾಗಿ ಪರಿಣಮಿಸಿದ್ದು ನೆನಪಿದೆ ತಾನೇ!. ಈ ಕಾರಣಕ್ಕೆ ವಲಸಿಗರಿಗೆ ಅಮೇರಿಕಾ ಸ್ವರ್ಗದಂತೆ ಕಾಣಹತ್ತುತ್ತದೆ. ಭಾರತೀಯರಿಗೆ ಅಮೇರಿಕಾ ಏಷ್ಟೆಷ್ಟೇ ಸ್ವರ್ಗವಾಗಿ ಗೋಚರಿಸಿದರೂ ಅಲ್ಲಿನ ಮೌಲ್ಯಗಳು, ಅದರಲ್ಲೂ ಕೌಟುಂಬಿಕ ಮೌಲ್ಯಗಳು ತೀರಾ ದೂರವಾಗಿಯೇ ತೋರುತ್ತವೆ. ನಮ್ಮವರು ಆ ಕೌಟುಂಬಿಕ ಮೌಲ್ಯಗಳಿಗೆ ಒಗ್ಗಿಕೊಳ್ಳುವುದಿರಲಿ, ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. 

ಮದುವೆಯಾಗಿ ಮಕ್ಕಳನ್ನು ಹಡೆದ ಹೆಣ್ಣು ಗಂಡ ತನಗೊಪ್ಪದಿದ್ದಂತೆ ತೋರಿದರೆ ವಿಚ್ಚೇಧನ ಪಡೆದುಕೊಳ್ಳುತ್ತಾಳೆ. ಕೋರ್ಟಿನ ತೀರ್ಪಿನ ಮೇರೆಗೆ ಮಕ್ಕಳು ತಂದೆಯ ಬಳಿಯೋ, ತಾಯಿಯ ಬಳಿಯೋ ಬೆಳೆಯುತ್ತವೆ. ವಿಚ್ಛೇಧನಗೊಂಡ ತಂದೆ ತಾಯಿ ಇಬ್ಬರೂ ಮತ್ತೊಂದು ಮದುವೆ ಮಾಡಿಕೊಳ್ಳುತ್ತಾರೆ. ಮಲ-ತಾಯಿಯ ಬಗ್ಗೆ ಕೇಳಿರುವ ನಾವು ಅಲ್ಲಿ ಮಲ-ತಂದೆಯನ್ನೂ ನೋಡಬಹುದು. ಅದು ಸರ್ವೇ ಸಾಮಾನ್ಯವೂ ಹೌದು. ಬಿಸಿನೆಸ್ ನಲ್ಲಿ ಒಳ್ಳೆಯ ಬೆಳವಣಿಗೆ ಕಾಣಬೇಕೆಂದರೆ ಅಮೇರಿಕಾ ಮೂಲದ 'ರಿಚ್ ಡ್ಯಾಡ್ - ಪೂರ್ ಡ್ಯಾಡ್' ಪುಸ್ತಕವನ್ನೋದಿ ಎಂದು ಅನೇಕ ಮಿತ್ರರು ಆಗಾಗ ಹೇಳುವುದನ್ನು ಕೇಳಿದ್ದೇವೆ. ಆ ಪುಸ್ತಕದಲ್ಲಿರುವ ಸಾರ ಬೇರೆಯದೇನೋ, ಆದರೆ ಆ ಹೆಸರಿನಲ್ಲೇ ಬಡವ ತಂದೆ, ಸಿರಿವಂತ ತಂದೆ ಎಂಬ ಎರಡು ತಂದೆಯ ತತ್ವವನ್ನು ಹೇಳಲಾಗಿದೆ. ಭಾರತೀಯರಿಗೆ ಇಬ್ಬರು ತಂದೆಯರನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. 

ಮೂರ್ನಾಲ್ಕು ವರ್ಷಗಳ ಹಿಂದೆ ಮಿತ್ರರೊಬ್ಬರು ಅಮೇರಿಕಾಗೆ ಹೋಗಿದ್ದರು. ಅಲ್ಲಿ ಅವರು ಉಳಿದಿದ್ದ ಹೋಟೆಲ್ ಗೂ ಕೆಲಸದ ಸ್ಥಳಕ್ಕೂ ಸುಮಾರು ನಲವತ್ತು ಕಿಲೋಮೀಟರ್ ಆಗುತ್ತಿತ್ತಂತೆ. ಹೋಗಿ ಬರುವಾಗ ಸ್ಥಳೀಯ ಸಹೋದ್ಯೋಗಿಯೊಡನೆ ಅವನದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ. ಒಂದು ದಿನ ಆತ ಹೇಳಿದನಂತೆ, ನಾನು ಈಗ ನನ್ನ ಮನೆಯಲ್ಲಿಲ್ಲ ನಾನಿರುವುದು ನನ್ನ ತಂದೆಯ ಮನೆಯಲ್ಲಿ. ನನ್ನ ಮನೆ ಇಲ್ಲಿಂದ ಎಂಬತ್ತೈದು ಕಿಮೀ ದೂರವಾಗುತ್ತದೆ ಎಂದನಂತೆ. ಭಾರತದಲ್ಲಿ ತಂದೆಯ ಮನೆಯಲ್ಲಿಯೇ ಉಳಿದು ನಮ್ಮ ಮನೆಯೆಂದು ಹೇಳಿಕೊಳ್ಳುತ್ತೇವಲ್ಲ, ಅಲ್ಲಿ ಹಾಗಿಲ್ಲ. ಹದಿನೆಂಟು ತುಂಬುವುದಕ್ಕೂ ಮೊದಲೇ ಕೆಲಸ, ಉದ್ಯೋಗ ಎಂದೆಲ್ಲಾ ತಿರುಗಿ ಮಕ್ಕಳು ಪೋಷಕರಿಂದ ದೂರ ಉಳಿದುಬಿಡಬೇಕು. ಆದ ಕಾರಣಕ್ಕೆ ಅಲ್ಲಿನ ಹುಡುಗಿಯರು ಭದ್ರತೆಯ ಕಾರಣಕ್ಕಾಗಿ ಹದಿನಾರು-ಹದಿನೇಳು ತುಂಬುವುದರಲ್ಲಿ ಬಾಯ್ ಫ್ರೆಂಡ್ ಹೊಂದುತ್ತಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಅವರಿಗೆ ಭದ್ರತೆ ಅವನು. ಅವರಿಬ್ಬರೂ ತಂತಮ್ಮ ಜೀವನವನ್ನು ಸಾಗಿಸಿಕೊಂಡು, ವಿದ್ಯಾಭ್ಯಾಸವನ್ನೂ ಮಾಡುವುದರೊಳಗೆ ಹೈರಾಣಾಗಿ ಹೋಗುತ್ತಾರೆ. ಆದರೆ ಅದರ ಜೊತೆ ಜೊತೆಗೆ ಅಪಾರ ಅನುಭವವೂ, ಜೀವನದ ಏಳು ಬೀಳುಗಳ ಅರಿವೂ ಅವರಿಗಾಗಿರುತ್ತದೆ. ತಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸುವ ನಡುವೆ ನಡುವೆಯೇ ತಮ್ಮ ಭವಿಷ್ಯ ನಿರ್ಮಾಣ, ಸಂಗಾತಿಯ ಆಯ್ಕೆ ಎಲ್ಲವೂ ಅವರದೇ ಹೆಗಲೇರುತ್ತದೆ. ಈ ಹಂತದಲ್ಲಿ ಎಡವಿ ಮುಗ್ಗರಿಸುವವರೂ ಅಪಾರವಾಗಿದ್ದಾರಂತೆ. ಆದ ಕಾರಣದಿಂದಲೇ ಅಮೇರಿಕಾದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಪದವಿ ವ್ಯಾಸಂಗದಲ್ಲಿ ಭಾರತೀಯರು, ಪಾಕಿಸ್ತಾನಿಗಳು, ಚೀನಿಯರೇ ಮೇಲುಗೈ ಸಾಧಿಸುತ್ತಾರಂತೆ. ಮಕ್ಕಳು ಓದಿ ಕೆಲಸಕ್ಕೆ ಸೇರಿ ಹಣ ಮಾಡುವುದನ್ನು ಕಲಿಯುವವರೆಗೂ ಅವರ ಬೆಂಗಾವಲು ಪೋಷಕರೇ ಎನ್ನುವ ಏಷಿಯನ್ ತತ್ವ ಅಮೇರಿಕಾದಲ್ಲಿ ಅಧ್ಯಯನ ಮಾಡುತ್ತಿರುವ ಏಷ್ಯನ್ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಅಲ್ಲಿನ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳ ಸಂಸ್ಕೃತಿ ನಮ್ಮ ದೇಶಕ್ಕೂ ಕಾಲಿಟ್ಟು ಈಗೀಗ ಚಿತ್ರಣ ಬದಲಾಗುತ್ತಿರುವುದನ್ನು ನಾವೆಲ್ಲಾ ಕಾಣುತ್ತಲೇ ಇದ್ದೇವೆ. 

ಭಾರತದಲ್ಲಿ ಐಟಿ ರಂಗ ಇನ್ನೂ ಅರಳದಿದ್ದ ಕಾಲದಲ್ಲಿ, ಬಹಳಷ್ಟು ಜನ ವಿದೇಶ ಸುತ್ತುವ ಖಯಾಲು ಹೊಂದದೇ ಇದ್ದ ಕಾಲದಲ್ಲೂ ಕನ್ನಡಿಗರಿಗೆ ಅಮೇರಿಕಾದ ದರ್ಶನ ಮಾಡಿಸಿದ್ದು ನಾಗತಿಹಳ್ಳಿ ಚಂದ್ರಶೇಖರರ 'ಅಮೇರಿಕಾ ಅಮೇರಿಕಾ' ಸಿನೆಮಾ. ಕೆಲಸದ ನಿಮಿತ್ತು ಅಮೇರಿಕಾ ದೇಶಕ್ಕೆ ಲಗ್ಗೆ ಇಡುವ ಭಾರತೀಯ ಹಳ್ಳಿಯ ಪ್ರತಿಭೆಯೊಂದು ಅಲ್ಲಿನ ವಿಲಾಸಕ್ಕೆ ಮಾರುಹೋಗಿ ನಿಂತರೂ, ಕುಂತರೂ ಭಾರತವನ್ನು ದೂಷಿಸುವ ಪರಿಪಾಠ ಬೆಳೆಸಿಕೊಳ್ಳುತ್ತಾನೆ. ಅಮೇರಿಕೆಯ ಮೇಲಿನ ಪ್ರೀತಿ ಆತನಲ್ಲಿ ತುಂಬಿ ಹರಿಯುತ್ತಿದ್ದ ಕಾಲದಲ್ಲಿಯೇ ಆತನಿಗೆ ವಕ್ಕರಿಸುವ ಆರ್ಥಿಕ ಮುಗ್ಗಟ್ಟುಗಳು, ಉದ್ಯೋಗನಷ್ಟ ವಿಪರೀತ ಎನ್ನುವಂತಹ ಕಾಲದಲ್ಲಿ ಬುದ್ಧಿ ಕಲಿಸುತ್ತವೆ. ಇದರ ನಡುವೆಯೇ ನಾಯಕಿ ಅಮೇರಿಕೆಯ ನಿಜ ಬಣ್ಣ ಅರಿತುಕೊಳ್ಳುತ್ತಾ ಸಾಗುತ್ತಾಳೆ. ಸಕಲ ಸಂಪತ್ತನ್ನು ಸಾಲವಾಗಿ ಕೊಟ್ಟು ಸಾಲದ ಕೂಪದಲ್ಲಿ ಬೀಳಿಸಿಕೊಳ್ಳುವ ಆ ದೇಶ ಆ ಸಾಲಕ್ಕಾಗಿ ಅನೇಕ ವರ್ಷಗಳ ಕಾಲ ತನ್ನ ನೆಲದಲ್ಲೇ ದುಡಿಯುವಂತೆ ಮಾಡಿಕೊಳ್ಳುತ್ತದೆ. ಸಾಲದಿಂದ ಸಂಪಾದಿಸಿದ ಐಭೋಗವನ್ನು ತಾನೇ ಸಂಪಾದಿಸಿದೆ ಎನ್ನುವ ಭ್ರಮೆಗೆ ಬೀಳುತ್ತಾರೆ ಅಲ್ಲಿನವರು. ಆದರೆ ಅದು ತನ್ನ ದಾಕ್ಷಿಣ್ಯದಲ್ಲಿಟ್ಟುಕೊಳ್ಳಲು ಆ ದೇಶವೇ ತಯಾರು ಮಾಡಿದ ವ್ಯವಸ್ಥಿತ ಜಾಲ ಎನ್ನುವುದು ಅವರ ಅರಿವಿಗೆ ಬರುವುದೇ ಇಲ್ಲ. ಇದು ಒಂದು ಕಡೆ ಸಿನೆಮಾ ಸಂಭಾಷಣೆಯೊಳಗೂ ಕಾಣಿಸಿಕೊಳ್ಳುತ್ತದೆ. ಅಮೇರಿಕಾದಲ್ಲಿ ಕೆಲ ಕಾಲ ಇದ್ದು ಅಲ್ಲಿನ ಭಾರತೀಯ ವಲಸಿಗರ ಬದುಕನ್ನು ಅಧ್ಯಯನ  ಮಾಡಿಯೇ ಕಥೆ ಬರೆದರಂತೆ ನಾಗತಿಹಳ್ಳಿ ಚಂದ್ರಶೇಖರರು. 

ಈಚೀಚಿಗೆ ನಾನು ಅಮೇರಿಕೆಯ ಒಂದು ವಿಮಾ ಕಂಪನಿಗೆ ಬೆಂಗಳೂರಿನಿಂದಲೇ ಕೆಲಸ ಮಾಡುತ್ತಿದ್ದೆ. ಆ ಕಂಪನಿಗೆ  ಬೇಕಾದ ಜಾಲ ತಾಣ ಅಭಿವೃದ್ಧಿಪಡಿಸುವ ತಂಡದಡಲ್ಲಿ ನಾನಿದ್ದೆ. ಆ ತಾಣ ಅಭಿವೃದ್ಧಿ ಪಡಿಸುವುದಕ್ಕೂ ಮುನ್ನ ಅದಕ್ಕೆ ಬೇಕಾದ ಸೈದ್ಧಾಂತಿಕ, ಪ್ರಾಯೋಗಿಕ ವಿಚಾರಗಳನ್ನೆಲ್ಲಾ ನಮಗೆ ತಿಳಿಯಪಡಿಸಲು ಅಲ್ಲಿನ ಉದ್ಯೋಗಿಯೊಬ್ಬರು ಬೆಂಗಳೂರಿಗೆ ಬಂದಿಳಿದರು. ಅವರೂ ಭಾರತೀಯ ಮೂಲದವರೇ. ನಮ್ಮ ಕಾರ್ಯ ಯೋಜನೆಗೆ ಬೇಕಾಗುವಷ್ಟು ಜ್ಞಾನವನ್ನೂ, ಅದು ನಿಜ ಜೀವನದಲ್ಲಿ ಕೆಲಸ ಮಾಡುವ ಬಗೆಯನ್ನೂ, ಗ್ರಾಹಕರು ಅದನ್ನು ಬಳಸಿಕೊಳ್ಳುವ ರೀತಿಯನ್ನೂ, ಸರ್ಕಾರ ಅದರ ಮೇಲೆ ಕಣ್ಗಾವಲು ಇರಿಸುವ ಯೋಜನೆಯನ್ನು ಎಲ್ಲವನ್ನು ಸವಿವರವಾಗಿ ತಿಳಿಸಿಕೊಟ್ಟರು. ಕೊನೆಯ ದಿನ ರಾತ್ರಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡ ಅವರು ನಮ್ಮನ್ನೆಲ್ಲ ಉತ್ತಮ ನಿರ್ವಹಣೆ ತೋರುವಂತೆ ಪ್ರೋತ್ಸಾಹಿಸುತ್ತಾ ಅಮೇರಿಕೆಯ ಕುರಿತು ಕೆಲ ಮಾತುಗಳನ್ನಾಡಿದರು. 'ಅದೊಂದು ಶುದ್ಧ ಆಸೆಬುರುಕ ದೇಶ, ವಿಮೆ ಎನ್ನುವುದು ಆ ದೇಶದಲ್ಲಿ ದೊಡ್ಡ ದಂಧೆ. ಕಷ್ಟ ಪಟ್ಟು ದುಡಿಯುವ ಕಾರ್ಮಿಕ ವರ್ಗವನ್ನು ಹಿಂಡಿ ವಿಮೆಯ ಹಣ ಕಕ್ಕಿಸಲಾಗುತ್ತದೆ. ಅವುಗಳಿಂದಲೇ ವಿಮೆಯ ಕಂಪನಿಗಳು ಅಪಾರ ಹಣ ಸಂಪಾದನೆ ಮಾಡುತ್ತವೆ. ವಿಮೆಯೇ ಅಮೇರಿಕೆಯ ಅತಿ ದೊಡ್ಡ ಬಾಬತ್ತಿನ ವ್ಯವಹಾರ' ಎಂದರು. ಕಾರ್ಮಿಕರನ್ನು, ದುಡಿಯುವ ವರ್ಗದ ಜನರನ್ನು ಶೋಷಣೆ ಮಾಡಿದ ಆ ಹಣದಿಂದಲೇ ಭಾರತಕ್ಕೆ ಅಮೇರಿಕಾದ ಹೊರಗುತ್ತಿಗೆಯ ಕೆಲಸಗಳು ಹರಿದುಬರುತ್ತಿರುವುದು, ನಾವು ದುಡಿಯುತ್ತಿರುವುದು. ಅರ್ಥಾತ್ ನಾವು ಗಳಿಸಿದ್ದು ಅವರ ಶ್ರಮದ ಹಣವನ್ನು. ಒಬ್ಬರನ್ನು ತುಳಿದೋ, ಅಳಿದೋ ಮತ್ತೊಬ್ಬರು ಬದುಕಬೇಕು ಎನ್ನುವುದು ಅಲ್ಲಿಗೆ ಶತಸಿದ್ಧವಾಯ್ತಲ್ಲ!. ಬಂಡವಾಳಶಾಹಿ ಧೋರಣೆಯ ದೇಶಗಳಲ್ಲಿ, ಸಂಸ್ಥೆಗಳಲ್ಲಿ ಇತಿಹಾಸ ಪರ್ಯಂತ ನಡೆದಿರುವುದೇ ಹಾಗೆ.

ಇಷ್ಟಾದರೂ ಅಮೇರಿಕಾ ವಿಶ್ವದ ದೊಡ್ಡಣ್ಣನೆಂದು ಗುರುತಿಸಿಕೊಳ್ಳುತ್ತದೆ. ಭಾರತದ ಯುವಜನಾಂಗ ಅಮೆರಿಕಾದಲ್ಲೇನು ಹೊಸದಾಗಿ ಬಂದರೂ ತಾವು ಅದನ್ನು ಅನುಸರಿಸುತ್ತಾರೆ. ಅಲ್ಲಿ ಬದುಕುವುದು, ಬಾಳುವುದು, ಅಲ್ಲಿಗೆ ಹೋಗಿ ಬರುವುದೂ ಘನತೆಯ ವಿಚಾರವೆನ್ನುವುದು ಎಲ್ಲಾ ಭಾರತೀಯರಲ್ಲೂ ಬಲವಾಗಿ ಕುಳಿತಿರುವ ವಿಚಾರ. ಭಾರತ ಅಮೇರಿಕೆಯೊಂದಿಗೆ ಅಪ್ಯಾಯಮಾನವಾದಷ್ಟು ತನ್ನ ನೆರೆ ರಾಷ್ಟ್ರಗಳೊಂದಿಗೂ ಆದರೆ ತನ್ನ ಆರ್ಥಿಕ, ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಬದಲಾವಣೆಯ ಅಲೆಯೊಂದನ್ನು ಕಾಣುವುದು ನಿಶ್ಚಿತ. 

-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...