ಶುಕ್ರವಾರ, ಮಾರ್ಚ್ 27, 2020

ಚೀನಾದ ಸುಯೋಗದೆಡೆಗೆ ಹೆಜ್ಜೆ

ಗತ್ತು ಬೆದರಿ ಹೋಗಿದೆ, ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ, ಬಡ ರಾಷ್ಟ್ರಗಳಾದಿಯಾಗಿ ಎಲ್ಲರೂ ಕದ ಕವುಚಿಕೊಂಡು ಮನೆಯೊಳಗೆ ಕೂತುಬಿಟ್ಟಿದ್ದಾರೆ. ಕಣ್ಣಿಗೆ ಕಾಣದ ಜೀವಿಯೊಂದು ಪ್ರಪಂಚದ ಮನುಷ್ಯರನ್ನೆಲ್ಲಾ ಇನ್ನಿಲ್ಲದಂತೆ ಭೀತಿಗೊಳಪಡಿಸಿದೆ. ಹಿಂದೆಂದೂ ಕಾಣದಂತಹ ಕರ್ಫ್ಯೂ ಪರಿಸ್ಥಿತಿಯನ್ನು ಪ್ರಪಂಚದ ಎಲ ದೇಶಗಳಲ್ಲಿಯೂ ಹೇರಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಗಳು ಪಾತಾಳದತ್ತ ಸಾಗಿವೆ, ಉತ್ಪಾದನಾ ರಂಗ ಬಾಗಿಲು ಜಡಿದುಕೊಂಡ ಪರಿಣಾಮ ಉತ್ಪಾದನೆ ಶೂನ್ಯ ತಲುಪಿದೆ. ಅದು ಹಾಗೆಯೇ ಮುಂದುವರೆದರೆ ಸಾಮಗ್ರಿಗಳಿಗೆ ಹಾಹಾಕಾರ ಉಂಟಾಗುವುದು ಆಶ್ಚರ್ಯವೇನಲ್ಲ. ಆಹಾರ ಬೆಳೆಗಳಿಗೆ ಕರ್ಫ್ಯೂವಿನಿಂದ ವಿನಾಯಿತಿ ಇದ್ದರೂ ರಸಗೊಬ್ಬರ ಮತ್ತಿತರ ಕೃಷಿ ಅಗತ್ಯ ವಸ್ತುಗಳು ಉತ್ಪಾದನೆ ನಿಲ್ಲಿಸಿರುವುದರಿಂದ ಕೃಷಿಯ ಮೇಲೆ ಹೊಡೆತ ಬೀಳದಿರದು. ದೇಶದೊಳಗೆ ಆರೋಗ್ಯ ಇಲಾಖೆ ಒಂದು ಹೊರತು ಪಡಿಸಿ ಇನ್ನಾವ ಇಲಾಖೆಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಿರುವುದು ಕಾಣಸಿಗುತ್ತಿಲ್ಲ. ನಮ್ಮ ಭಾರತದೊಳಗೆ ಪ್ಲೇಗು, ದಡಾರ ಬಂದಿದ್ದ ಸ್ವಾತಂತ್ರ್ಯ ಪೂರ್ವ ಕಾಲದ ಸಮಯವನ್ನು ಇದು ನೆನಪಿಸುವಂತಿದೆ. ಇಲ್ಲಿಗೆ ಸುಮಾರು ೧೦೨ ವರ್ಷಗಳ ಹಿಂದೆ ಬಾಂಬೆ ಜ್ವರ ಎನ್ನುವ ಮಾರಣಾಂತಿಕ ಪಿಡುಗೊಂದು ಮುಂಬಯಿನ ಬಂದರಿನ ಮೂಲಕ ಭಾರತಕ್ಕೆ ಕಾಲಿಟ್ಟಿತ್ತಂತೆ, ರೇವು ಪಟ್ಟಣದ ಅಧಿಕಾರಿಗಳು, ಪೊಲೀಸರು ಈ ರೋಗಕ್ಕೆ ಗುರಿಯಾಗಿ ಮೊದಮೊದಲು ಸತ್ತರಂತೆ. ತದನಂತರ ಅದೇ ರೋಗಕ್ಕೆ ತುತ್ತಾಗಿ ಭಾರತದಲ್ಲೇ ಲಕ್ಷಾಂತರ ಜನ ಸತ್ತರಂತೆ.

ಸ್ಪೇನ್ ದೇಶದಲ್ಲಿ ಹುಟ್ಟಿದ ಆ ವೈರಾಣು ಇಂಗ್ಲೀಷರ ಮುಖಾಂತರ ಕಡಲು ದಾಟಿ ಭಾರತಕ್ಕೆ ದಾಂಗುಡಿಯಿಟ್ಟರೂ, ಇಲ್ಲಿ ಬಹು ಬೇಗ ಹರಡಲು ಜಾಲ ಸುಸಜ್ಜಿತವಲ್ಲದೆ ಇರುವ ಮಿತಿಯಲ್ಲೇ ಹರಡಿ ಮರೆಯಾಯ್ತು. ಆಗ್ಗೆ ಬಂದು ಹೋಗುವ, ಜನಗಳನ್ನು ವೇಗವಾಗಿ ಸಾಗಿಸುವ ವಾಹನಗಳಿಲ್ಲದ ಪರಿಣಾಮ ಭಾರತದ ಆದ್ಯಂತ್ಯಕೆ ಸುಲಭವಾಗಿ ಹರಡಲು ಸಾಧ್ಯವಾಗಲಿಲ್ಲವೇನೋ. ಅದಾದ ಮೇಲೆ ಪ್ರಪಂಚವನ್ನು ಯಾವುದು ಈಗಿನಷ್ಟು ವಿಪರೀತಕ್ಕೆ ಕಾದಿರಲಿಕ್ಕಿಲ್ಲ. ಆಗಾಗ್ಗೆ ಭೇಟಿ ಕೊಟ್ಟು ಹೋದ ಸಾರ್ಸ್, ಹೆಚ್೧ಎನ್೧, ನಿಫಾ ವೈರಸ್ಸುಗಳು, ಹಂದಿ ಜ್ವರ, ಹಕ್ಕಿ ಜ್ವರ, ಮಂಗನ ಕಾಯಿಲೆಗಳೂ ಜಾಗತೀಕ ಮಟ್ಟದಲ್ಲಿ ಈಗಿನಷ್ಟು ಭಯ ಹುಟ್ಟಿಸಲು ಅಸಮರ್ಥವಾದವು. ಇವೆಲ್ಲವುಗಳ ತರುವಾಯು ಮನುಷ್ಯನ ಮಿತಿಯನ್ನು ಮನುಷ್ಯನಿಗೆ ಮತ್ತೊಮ್ಮೆ ತಿಳಿಸಲು ಭೂತಾಯಿ ಯೋಜನೆಯೊಂದನ್ನು ಕೈಗೊಂಡಂತೆ ಕರೋನ ವೈರಸ್ ಬಂದೆರಗಿದೆ.

ಕರೋನ ವೈರಸ್ ಕಾರಣದಿಂದ ಮುಚ್ಚಿದ ದೆಹಲಿಯ ಇಂಡಿಯಾ ಗೇಟ್

ಚೀನಾ ದೇಶದ ವುಹಾನ್ ನಗರದಲ್ಲಿ ಸಮುದ್ರಾಹಾರ ಮಾರುವ ಮಾರುಕಟ್ಟೆಯಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡಿತು ಎಂದು ನಂಬಲಾಗಿರುವ ಈ ಮಹಾ ಮಾರಣಾಂತಿಕ ವೈರಸ್ ಬಗ್ಗೆ ಹಲವಾರು ಊಹೆಗಳು ಚಾಲ್ತಿಯಲ್ಲಿವೆ. ಅಮೇರಿಕಾವೂ ಸೇರಿ ಮೊದಲಾದ ಪ್ರಬಲ ರಾಷ್ಟ್ರಗಳು ಚೀನಾ ದೇಶವು ಕೈಗೊಂಡಿರುವ ಜೈವಿಕ ಯುದ್ಧವಿದೆಂದು ಆಪಾದನೆ ಮಾಡುತ್ತಿವೆ. ಆಪಾದನೆಯ ಮಗ್ಗುಲಲ್ಲೇ ಆ ದೇಶಗಳಲ್ಲಿ ಅಸಂಖ್ಯ ಜನಗಳು ಮಾರಣಾಂತಿಕ ವೈರಸ್ ಗೆ ತುತ್ತಾಗಿದ್ದಾರೆ, ಇನ್ನು ಹಲವರು ಇಹ ಲೋಕ ತ್ಯಜಿಸಿಯೂ ಬಿಟ್ಟಿದ್ದಾರೆ.

ಅಮೆರಿಕಾದ ಸೇನಾ ವಲಯದಲ್ಲಿ ಕೇಳಿಬರುತ್ತಿರುವ ಈ ವೈರಸ್ ಬಗೆಗಿನ ವಿಷಯವೇನೆಂದರೆ ಈಗಿನ ವರೆವಿಗೂ ಚೀನಾ ಸುಮಾರು ೧೫೦೦ ಬಗೆಯ ವೈರಸ್ ಗಳನ್ನು ವುಹಾನ್ ನ ವೈರಾಣು ಅಧ್ಯಯನ ಕೇಂದ್ರದಲ್ಲಿ ಪ್ರಯೋಗಾರ್ಥ ಸಂಗ್ರಹಿಸಿ ಇಟ್ಟಿದೆ.  ಆ ೧೫೦೦ ವೈರಸ್ ಗಳ ಪೈಕಿ ಕರೋನ ವೈರಸ್ ಕೊಡ ಒಂದಾಗಿದ್ದು, ಇತರ ರಾಷ್ಟ್ರಗಳ ಮೇಲೆ ಹಿಂಬಾಗಿಲ ಮೂಲಕ ಜೈವಿಕ ಯುದ್ಧ ಸಾರಲು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ವುಹಾನ್ ವೈರಾಣು ಅಧ್ಯಯನ ಕೇಂದ್ರ)ದಲ್ಲಿ ಸಂಗ್ರಹಿಸಿಡಲಾಗಿತ್ತು. ಪ್ರಯೋಗ ಮಾಡುತ್ತಿರುವ ಸಂದರ್ಭದಲ್ಲಿ ಉಂಟಾಗಿರುವ ಅಚಾನಕ್ ಎಡವಟ್ಟಿನಿಂದ ವೈರಾಣು ಸೋರಿಕೆಯಾಗಿ ಹೊರಜಗತ್ತಿಗೆ ಹರಿಯಿತು. ಅನ್ಯರ ಮೇಲೆ ಯುದ್ಧ ಸಾರಲು ಚೀನಾ ಇರಿಸಿಕೊಂಡಿದ್ದ ಆ ಪ್ರಬಲ ಜೈವಿಕಾಸ್ತ್ರ ಆಕಸ್ಮಿಕವಾಗಿ ತಮ್ಮ ಮೇಲೆಯೇ ತಿರುಮಂತ್ರವಾಯಿತು, ಇದಿಷ್ಟು.

ವೈರಾಣು ತನ್ನ ಕಬಂಧ ಬಾಹುಗಳನ್ನು ವುಹಾನ್ ನಾದ್ಯಂತ ಹರಡಲು ಶುರುವಿಟ್ಟುಕೊಂಡಾಗ ಚೀನಾ ಸರ್ಕಾರ ವೈರಸ್ ಹರಡುವಿಕೆ ತಡೆಗಟ್ಟಲು ವುಹಾನ್ ಪ್ರಾಂತ್ಯವನ್ನು ಪ್ರಪಂಚದಿಂದ ಅಕ್ಷರಶಃ ಬೇರ್ಪಡಿಸಿಬಿಟ್ಟಿತಂತೆ. ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕೊಳ್ಳಲು ಜನ ಮುಗಿಬಿದ್ದು ಕಿಲೋಮೀಟರ್ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದು ಮೊನ್ನೆ ಮೊನ್ನೆ ವರೆಗೂ ಚೀನಾದಿಂದ ಬಂದ ವಿಡಿಯೋಗಳಲ್ಲಿ ದಾಖಲಾಗಿತ್ತು.ಈ ದುರಂತದಲ್ಲಿ ಚೀನಾದಲ್ಲಿ ಕೋಟಿಗಟ್ಟಲೆ ಜನ ಅಸು ನೀಗಿರಬಹುದು, ಆದರೆ ಆ ದೇಶ ಹೊರಜಗತ್ತಿಗೆ ತಪ್ಪು ಲೆಕ್ಕಗಳನ್ನು ಕೊಡುತ್ತಿದೆ ಎಂದು ಅನೇಕ ದೇಶಗಳು ವಾದಿಸುತ್ತಿವೆ. ಅದಕ್ಕೆ ಪುಷ್ಟಿಯೆನ್ನುವಂತೆ ಇತ್ತೀಚಿಗೆ ತಾವು ಚೀನಾದ ಫೋನ್ ಕಾಲ್ ಗಳ ಮೇಲೆ ನಿಗಾ ಇರಿಸುವುದಾಗಿಯೂ, ೨೦೧೯ರ ಡಿಸೆಂಬರ್ ನಿಂದ ಈಚೆಗೆ ಬರೋಬ್ಬರಿ ೧ ಕೋಟಿ ಫೋನ್ ಗಳು ಚೀನಾದಲ್ಲಿ ಸ್ವಿಚ್ ಆಫ್ ಆಗಿರುವುದಾಗಿಯೂ ಅನೇಕ ದೇಶಗಳು ಹೇಳಿಕೊಳ್ಳುತ್ತಿವೆ. ಒಟ್ಟಿನಲ್ಲಿ ಚೀನಾದತ್ತ ಎಲ್ಲ ದೇಶಗಳ ದೃಷ್ಟಿ ನೆಟ್ಟಿದೆ. ಏಷ್ಯಾ ಖಂಡದಲ್ಲಿ ನಾಯಕತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಆ ದೇಶ ಹೀಗೆ ಮಾಡಿದ್ದರೂ ಮಾಡಿರಬಹುದೆಂಬ ಅನುಮಾನ ಹಲವು ದೇಶಗಳಿಗೆ ಬಲವಾಗಿ ಇದ್ದಂತಿದೆ. ಹಲವಾರು ಜನ ಅದಾಗಲೇ ವಿಶ್ವ ಸಂಸ್ಥೆ ಮಧ್ಯೆ ಪ್ರವೇಶಿಸಿ ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಳ್ಳುವಂತೆ ಒತ್ತಡ ಹೇರುತ್ತಲೂ ಇದ್ದಾರೆ.

ಅಲ್ಲಿಗೆ ಚೀನಾದ ರಾಜ ತಾಂತ್ರಿಕತೆ ಸಂಪೂರ್ಣವಾಗಿ ಮುಗ್ಗರಿಸುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿವೆ. ಇನ್ನೂ ಮುಂದುವರೆದು ಚೀನಾದ ಬಣದಲ್ಲಿ ಯಾವುದಾದರೂ ದೇಶಗಳು ಗುರುತಿಸಿಕೊಂಡವೆಂದರೆ ಅದರ ಅರ್ಥ ಆ ದೇಶಗಳಿಗೆ ಚೀನಾದಿಂದ ಯಾವುದೋ ತೆರನಾದ ಲಾಭ ಇದೆ ಎಂತಲೇ. ಲಾಭದ ಆಸೆ ತೋರಿಸಿ ಕೆಲವು ದೇಶಗಳನ್ನು ನುಂಗಿ ನೊಣವಿಕೊಂಡ ಇತಿಹಾಸ ಈಗಾಗಲೇ ಚೀನಾಕ್ಕೆ ಇದೆ. ಅದರ ಮೇಲೂ ಸಮಕಾಲೀನ ಪರಿಸ್ಥಿತಿಗಳನ್ನು ನಿಭಾಯಿಸಲು, ಜನರು ದಂಗೆ ಏಳದಂತೆ ತಡೆದು ದೇಶ ನಡೆಸಲು ಪಾಕಿಸ್ತಾನದಂತಹ ರಾಷ್ಟ್ರಗಳಿಗೆ ಚೀನಾದ ಒಡನಾಟ ಬಲವಂತವಾದರೂ ಬೇಕೇ ಬೇಕು. ಪರಿಸ್ಥಿತಿಯ ತೀಕ್ಷಣತೆಗೆ ಕಟ್ಟು ಬಿದ್ದು ದೇಶಗಳು ಚೀನಾದ ಒಡನಾಟಕ್ಕೆ ಒಗ್ಗಿಕೊಳ್ಳುತ್ತವೇ ಹೊರತು ನಿಜವಾದ ಸ್ನೇಹದಿಂದಲ್ಲ.ಎಲ್ಲ ದೇಶಗಳೂ ಈಗ ಚೀನಾವನ್ನು ಅನುಮಾನದ ಭೂತಗನ್ನಡಿ ಹಿಡಿದು ನೋಡುತ್ತಿವೆ. ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಹೊರಟಿದ್ದ ಚೀನಾಕ್ಕೆ ಕರೋನ ಮರ್ಮಾಘಾತ ನೀಡಿದೆ, ಅಷ್ಟೇ ಅಲ್ಲದೆ ಇಡೀ ಪ್ರಪಂಚದ ಆರ್ಥಿಕತೆಯನ್ನು ಹಿಡಿದು ಕೆಳಕ್ಕೆ ದೂಡಿದೆ.

ಚೀನಾ ತನ್ನ ಉದ್ಧಾರಕ್ಕಾಗಿ ತನಗೆ ಸಿಗುವ ಎಲ್ಲಾ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವುದು ಯಾರಿಗೂ ಅರ್ಥವಾಗದ ವಿಷಯವೇನಲ್ಲ. ಆದರೆ ಅದರ ನಿರ್ಧಾರದಿಂದ ಅಮಾಯಕರಿಗೆ ತೊಂದರೆಯಾಗದಂತಿರಲಿ, ನೋವಾಗದಂತಿರಲಿ. ಚೀನಾ ಸಸ್ಟೈನಬಲ್ ಡೆವಲಪ್ಮೆಂಟ್(ಸುಸ್ಥಿರ ಅಭಿವೃದ್ಧಿ) ಮಾರ್ಗದಲ್ಲಿ ಇದೆಯೆಂದು ಆ ದೇಶದ ವಕ್ತಾರರು ಮಾತ್ರ ಹೇಳಿಕೊಳ್ಳುವಂತಾಗದೆ ಅದು ನಿಜ ಸ್ಥಿತಿಯಲ್ಲಿಯೂ ಹಾಗೆ ಇರಲಿ. ಅನ್ಯ ದೇಶಗಳ ಮೇಲೆ ಹಿಡಿತ ಸಾಧಿಸುವ ಚೀನಾದ ಮನೋಧೋರಣೆ ಇನ್ನಾದರೂ ಕಡಿಮೆಯಾಗಲಿ. ಪ್ರಕೃತಿಗೆ ಇನ್ನಿಲ್ಲದಂತೆ ಅಪಚಾರವೆಸಗಿರುವ ಚೀನಾ ತನ್ನ ತಪ್ಪನ್ನು ಅರಿತುಕೊಂಡು ಒಳಿತಿನ ಕಡೆಗೆ ಹೆಜ್ಜೆಯಿಡಲಿ, ಸುಯೋಗದೆಡೆಗೆ ಹೆಜ್ಜೆಯಿರಿಸುವ ನಾಯಕತ್ವವವನ್ನು ಅದೇ ವಹಿಸಿಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ.

-o-

ಸೋಮವಾರ, ಮಾರ್ಚ್ 9, 2020

ನಾನಿನ್ನೂ ಮನಗಂಡಿಲ್ಲ

ಅಗೋ! ನೋಡಲ್ಲಿ.
ಹಿರಿದಾರಿಯೊಳಗೆ ಮೊರೆಯುವ
ಕಾರುಗಳ ಮಾಲೀಕ ನಾನಾಗಲಿಲ್ಲ,
ಪೂರ್ವ-ಪಶ್ಚಿಮ ಸಮುದ್ರಗಳ ದಾಟಿ
ನಾನೋಡಲಿಲ್ಲ,
ಉತ್ತರದ ಹಿಮಾಲಯವನು ದಾಟುವ
ಸುಯೋಗವದು ದೊರೆತೇ ಇಲ್ಲ.

ಇರುವ ದೇಶದೊಳಗೆ ಭಲಾರೆ
ಚಾಲಾಕಿ ನಾನಾಗಲಿಲ್ಲ.
ಅನ್ಯರಿಗೆ ಮೆತ್ತೆ ಹೂವಿನ ದಿಂಬಾಗಿ
ನಾ ಮಾಡುತ್ತಿರುವುದೇನೋ ಅರಿವಿಲ್ಲ,
ಮಾಡುವ ಕೃತಿಯೊಳಗೆ ಮನವಿಲ್ಲ,
ಮಾಡದ ಕೃತಿಗಳೆಡೆಗೆ ಬಿಡುವಿಲ್ಲ,
ನಾನೇನೋ ಇನ್ನು ಅರಿಯಲಾಗಿಲ್ಲ,
ಎಲ್ಲರ ಜೀವನವೂ ಹೀಗೆಯೇನೋ?
ನಾನಿನ್ನೂ ಮನಗಂಡಿಲ್ಲ.

-o-

ಶುಕ್ರವಾರ, ಮಾರ್ಚ್ 6, 2020

ಕನ್ನಡ ಗಂಗೆ

ಈಚೀಚೆಗೆ ಆಲೂರು ವೆಂಕಟರಾಯರ 'ಕರ್ನಾಟಕ ಗತ ವೈಭವ' ಪುಸ್ತಕವನ್ನೋದುತ್ತಿದ್ದೆ. ಈ ಮೊದಲೇ ಒಮ್ಮೆ ನಡು-ನಡುವಿನ ಪ್ರಕರಣಗಳನ್ನು ಓದಿಕೊಂಡಿದ್ದರಿಂದ್ದ ಆ ಪುಸ್ತಕವನ್ನು ಆಮೂಲಾಗ್ರವಾಗಿ ಅರ್ಥ ಮಾಡಿಕೊಂಡಿದ್ದೇನೆ ಅನ್ನುವ ಭಾವನೆ ಬಂದಿರಲಿಲ್ಲ. 'ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ' ಅನ್ನುವಂತೆ ನನಗೆ ಬೇಕಾದಷ್ಟನ್ನೇ ಓದಿಕೊಂಡು ಅದರೊಳಗೊಂದು ಅರ್ಥ ಗ್ರಹಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲೋ, ಸಮಾನ ಮನಸ್ಕರೊಂದಿಗೆ ಹರಟುವಾಗಲೋ ಹಂಚಿಕೊಳ್ಳುತ್ತಿದ್ದೆ. ಪುಸ್ತಕವೊಂದನ್ನು ಪ್ರತೀ ಬಾರಿ ಓದಿದಾಗಲೂ ಬೇರೆ ಬೇರೆ ಭಾವನೆಗಳನ್ನು ಗ್ರಹಿಸುತ್ತೇವೆ ಎನ್ನುವ ಮಾತು ನಿಜ, ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನದನ್ನು ಗ್ರಹಿಸಿಕೊಳ್ಳುತ್ತಾ ಹೋದೆ.

karnataka gatha vaibhava book ಗೆ ಚಿತ್ರಗಳ ಫಲಿತಾಂಶಗಳು
ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು

ಎಂದಿನಂತೆ ವೆಂಕಟರಾಯರು ಗಾಢ ನಿದ್ರೆಯಲ್ಲಿದ್ದ ಕನ್ನಡಿಗರನ್ನು ತಮ್ಮ ಲೇಖನಿಯಿಂದಲೇ ಚುಚ್ಚಿ ಚುಚ್ಚಿ ಎಬ್ಬಿಸುತ್ತಿದ್ದರು. ಕನ್ನಡಿಗರ ಅಭಿಮಾನ ಶೂನ್ಯತ್ವವನ್ನು ಎತ್ತಿ ತೋರಿಸುತ್ತಲೂ, ಕನ್ನಡಿಗರ ಐತಿಹಾಸಿಕ ಮಹತ್ತುಗಳನ್ನು ತೆರೆದಿಡುತ್ತಲೂ ಮುಂದೆ ಸಾಗುತ್ತಿದ್ದ ಬಗೆ ಸ್ವರಾಜ್ಯ ಚಳುವಳಿ ಉತ್ತುಂಗದಲ್ಲಿದ್ದ ಆ ಕಾಲಕ್ಕೂ, ಸ್ವಾಯತ್ತತೆ ಉತ್ತುಂಗದಲ್ಲಿರುವ ಈ ಕಾಲಕ್ಕೂ ಸರಿಯಾಗಿ  ಒಪ್ಪುವಂತಹುದೇ. ಆಗ್ಗೆ ನಮ್ಮ ಹಿಂದಿನ ಸಾಧನೆಗಳ ಬಗ್ಗೆ ನಮಗೆ ತಿಳಿಯಪಡಿಸಿ ನಮ್ಮ ಇತಿಹಾಸದ ಬಗ್ಗೆ ಹೆಮ್ಮೆ ಮೂಡಿಸಿ ನಮ್ಮ ತಲೆಮಾರನ್ನು ದೇಶದ ಸ್ವಾತಂತ್ರ್ಯಕ್ಕೆ ಅಣಿಗೊಳಿಸುವುದು ತುರ್ತಾದ ಕಾರ್ಯವಾದ್ದರಿಂದ ಹಾಗೂ ಆಗಿನ ಸಂಶೋಧನೆಗಳ ಮಿತಿಗಳನ್ನು ಅರಿತುಕೊಂಡು ವೆಂಕಟರಾಯರು ಅಂದು ಮಾಡಿದ ಪ್ರಯತ್ನ ಅಭಿನಂದನಾರ್ಹ, ಪುಸ್ತಕದ ಮೊದಲ ಮುದ್ರಣ ಹೊರಟು ಕೆಲವೇ ತಿಂಗಳುಗಳಲ್ಲಿ ಎರಡನೇ ಮುದ್ರಣಕ್ಕೆ ಅಣಿಗೊಂಡಿದ್ದು ಕನ್ನಡ ಓದುಗರು ಹೊಸದೇನನ್ನೋ ಗ್ರಹಿಸುತ್ತಿದ್ದಾರೆ ಅನ್ನುವುದಕ್ಕೆ ಕೈಗನ್ನಡಿ. ಇದೂ ಮುಂದುವರೆದು ಭಾಷಾವಾರು ಪ್ರಾಂತ ರಚನೆಯಲ್ಲಿ ಕರ್ನಾಟಕದ ನಾಲ್ಕೂ ದಿಕ್ಕುಗಳ ಗಡಿ ಗುರುತು ಮಾಡುವಲ್ಲಿ ಇದೇ 'ಕರ್ನಾಟಕ ಗತ ವೈಭವ' ಪುಸ್ತಕ ವಹಿಸಿದ ಪಾತ್ರ ಅಂತಿತಹುದಲ್ಲ. ಸ್ವರಾಜ್ಯ ಚಳುವಳಿಗೆ ಕನ್ನಡಿಗರನ್ನು ಅಣಿಗೊಳಿಸುವಾಗ ತಮಗೇ ಗೊತ್ತಿಲ್ಲದಂತೆ ಭವಿಷ್ಯದ ಕರ್ನಾಟಕ ರಾಜ್ಯಕ್ಕೆ ರೂಪು ರೇಷೆ ಬರೆದಿದ್ದ ಮಹತ್ಕೃತಿಯನ್ನು ಸಿದ್ಧಪಡಿಸಿದ್ದರು ವೆಂಕಟರಾಯರು.

ಆದರೂ ಹಿಂದೊಮ್ಮೆ ಗೋದಾವರೀ ನದಿಯನ್ನು ದಾಟಿ ವಿಂದ್ಯ ಪರ್ವತದಾಚೆಗೂ ಆಳ್ವಿಕೆ ನಡೆಸಿದ್ದ, ನೇಪಾಳ-ಮಯನ್ಮಾರ್ ದೇಶಗಳೊಂದಿಗೆ ಕೊಳು-ಕೊಡುಗೆ ವ್ಯವಹಾರಗಳನ್ನು ನಡೆಸಿದ್ದ, ಮಧ್ಯ ಏಷ್ಯಾ ದೇಶಗಳಿಗೆ ಶಿಲ್ಪಿಗಳನ್ನು ಕಳುಹಿಸಿದ್ದ ಧೀಮಂತ ಕನ್ನಡ ಜನಾಂಗ ಬರು ಬರುತ್ತಾ ತಮ್ಮ ಘನ ಇತಿಹಾಸ ಮರೆತು ಆಳಿಸಿಕೊಳ್ಳುವ, ಅನ್ಯರಿಂದಾಗುವ ಹಿಂಸೆಗೆ ಒಗ್ಗಿಕೊಳ್ಳುವ ಮನಸ್ಥಿತಿಗೆ ತಲುಪಿಕೊಳ್ಳಲು ಕಾರಣಗಳು ಅಸಂಖ್ಯವಿವೆ. ಆ ಕಾರಣಗಳ ಪಟ್ಟಿಯಲ್ಲಿ ಆಗಿನ ಸಮಾಜಿಕ ಕಟ್ಟು ಪಾಡುಗಳು, ಧಾರ್ಮಿಕ ಕಾರಣಗಳು ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ.

ಹನ್ನೆರಡನೇ ಶತಮಾನದವರೆವಿಗೂ ಜೈನರು ಕಟ್ಟಿ ಬೆಳೆಸಿದ ಭಾಷೆ ಕನ್ನಡ. ಇತ್ತೀಚಿಗೆ ಗೆಳೆಯನೊಬ್ಬ ನನ್ನ ಭಾಷಾ ಸಹಿಷ್ಣುತೆಯನ್ನು ಪರೀಕ್ಷಿಸುವ ಸಲುವಾಗಿ 'ಸಂಸ್ಕೃತಂ ದೈವ ಭಾಷಿತಂ' ಎಂದ. ನಾನು ನಸು ನಗುತ್ತಲೇ 'ಕನ್ನಡಂ ಜೈನ ಭಾಷಿತಂ' ಎಂದೆ. ಅದೇಕೆಂದು ಮತ್ತೆ ಚರ್ಚೆ ಆರಂಭವಾಯಿತು. ಹನ್ನೆರಡನೇ ಶತಮಾನದವರೆವಿಗೂ ಹಿಂದೂ ಧಾರ್ಮಿಕ, ವೈಚಾರಿಕ ವಿಚಾರಗಳು ಕನ್ನಡ ಜನರಿಗೆ ಕನ್ನಡದಲ್ಲಿ ತಲುಪುವ ವ್ಯವಸ್ಥೆ ತೀರಾ ಅಲ್ಪವಾಗಿದ್ದುದ್ದು ಇಂದಿಗೆ ಢಾಳಾಗಿ ಗೋಚರಿಸುತ್ತಿದೆ. ಕನ್ನಡದದ ಬಾಲ್ಯಾವಸ್ಥೆಯಲ್ಲಿ ಅದನ್ನು ಜೈನರು ಸಲಹಿದ ಬಗೆಯೇ ವಿಶಿಷ್ಟ.೬ - ೧೦ನೆ ಶತಮಾನದ ಸಮಯದಲ್ಲಿ ಬೌದ್ಧ, ಜೈನ ಧರ್ಮ ಭಾರತದಲ್ಲಿ ಏರುಗತಿಯಲ್ಲಿ ಸಾಗಿದ್ದ ಕಾಲ. ಹಿಂದೂವೆಂಬ ಧರ್ಮವಿಲ್ಲದೆ ಈಗಿನ ಹಿಂದೂಗಳು ಆಗ ಶೈವ, ವೈಷ್ಣವ ಮತ ವಹಿಸಿಕೊಂಡಿದ್ದು, ಬೌದ್ಧ-ಜೈನ ಧರ್ಮಗಳು ಆಗಿನ ಪ್ರಬಲ ಧರ್ಮಗಳ ಕೆಲ ಲೋಪ ದೋಷಗಳನ್ನು ಎತ್ತಿ ತೋರಿ ಅವರುಗಳನ್ನು ತನ್ನತ್ತ ಸೆಳೆದುಕೊಂಡ ಪರಿಣಾಮ ಸಾಹಿತ್ಯ, ಇತಿಹಾಸ ದಾಖಲು ಎಲ್ಲವೂ ಜೈನ-ಬೌದ್ಧ ಮತದ ಸುತ್ತ ಮುತ್ತಲೇ ನಡೆದು ಈಗ ಹಾಗೆ ಕಾಣಿಸುತ್ತಿದೆ ಎನ್ನುವುದು ಕೆಲವು ವಿದ್ವಾಂಸರ ಅಂಬೋಣ, ಇರಲಿ. ಧರ್ಮ-ವೈಚಾರಿಕತೆ-ಭಾಷೆಯ ತ್ರಿಕೋನ ಪೈಪೋಟಿಗೆ ನಾವು ದಾರಿಯಾಗುವುದು ಬೇಡವೇ ಬೇಡ.

ಹನ್ನೊಂದನೇ ಶತಮಾನದ ಅಂತ್ಯ ಸನ್ನಿಹಿತವಾಗುವ ವಚನ ಸಾಹಿತ್ಯ ಕನ್ನಡ ಸಾಹಿತ್ಯದಿಂದ ಟಿಸಿಲೊಡೆದು ನಿಂತು, ಸಾಮಾನ್ಯರನ್ನು ಸಾಮಾನ್ಯ ಭಾಷೆಯಲ್ಲಿಯೇ ತಲುಪುವ ತವಕದಿಂದ ಮೊದಲಾಯ್ತು. ಮುಂದೆ ಕನ್ನಡ ಸಾಹಿತ್ಯದಲ್ಲಿ ವಚನಗಳದ್ದೇ ಕ್ರಾಂತಿಯುಂಟಾಯಿತೆಂದರೂ ತಪ್ಪಾಗಲಾರದು. ತದನಂತರದಲ್ಲಿ ಅಷ್ಟೇ ಪ್ರಮಾಣದ ಕೆಳದೂಡುವಿಕೆಯೂ ನಡೆಯಿತೆನ್ನಿ. ಅದಾದನಂತರ ಪರಕೀಯರ ಆಕ್ರಮಣ, ನಮ್ಮವರ ಮಾರಣ ಹೋಮ ಇಂತಹ ಘಟನಾವಳಿಗಳಿಗೆ ತೆರೆದುಕೊಂಡ ನಾವು ನಮ್ಮ ಹಿನ್ನೆಲೆಯನ್ನು ಗಮನಿಸುವುದಿರಲಿ ಆಗಿನ ತುತ್ತಿನ ಚೀಲ ತುಂಬಿಸಿಕೊಂಡರೆ ಸಾಕೆನ್ನುವ ಮಟ್ಟ ತಲುಪಿದ್ದು ಅತೀ ವಿಷಾದನೀಯ. ಅದರ ನಡು ನಡುವೆ ಅನೇಕ ಆಸ್ಥಾನಗಳು ಕನ್ನಡವನ್ನು ಇನ್ನಿಲ್ಲದಂತೆ ಪೋಷಿಸಿದರೂ ಆಗಿಂದಾಗ್ಗೆ ಭಾಷೆಗಳ ಕೆಸರೆರಚಾಟ ನಡೆದೇ ಇತ್ತು.

ಕನ್ನಡದ ಅವಗಣನೆ ಅಲ್ಲಿಗೆ ನಿಲ್ಲಲಿಲ್ಲ, ಒಳಗೊಳಗೇ ತಿರುಗಿ ಸೆಟೆದು ನಿಲ್ಲುತ್ತಲೇ ಸಾಗಿದ್ದು, ಅದನ್ನು ತಡೆದೂ ಈ ಭಾಷೆ ಬಿಗಿಯಾಗಿ ನಿಂತಿದ್ದು ಅನೂಹ್ಯ. ಅಷ್ಟೇ ಏಕೆ ಈಚೆಗಿನ ಹದಿನಾರನೇ ಶತಮಾನದ ಪುರಂದರ ದಾಸರು ಕರ್ನಾಟಕ ಸಂಗೀತ ಪರಂಪರೆಯನ್ನು ಕಟ್ಟಿ ಬೆಳೆಸುತ್ತಿದ್ದಾಗ ಅದನ್ನು 'ತಿರುಪೆಯವರ ಗೀತ ಮೇಳವೆಂದು' ಆಡಿಕೊಂಡು ನಿರ್ಲಕ್ಷಿಸಿದವರ್ಯಾರು?. ಕನ್ನಡದ ಪುರಂದರರು - ತೆಲುಗಿನ ಅನ್ನಮಾಚಾರ್ಯರು ಕರ್ನಾಟಕ ಸಂಗೀತಕ್ಕೆ ಕೊಟ್ಟ ಕೊಡುಗೆ ಅಂತಿತಹುದೇ?. ಅದೇ ಮುಂದುವರಿದು ೧೭-೧೮ ನೇ ಶತಮಾನಕ್ಕೆ ತಮಿಳುನಾಡಿನ ತ್ಯಾಗರಾಜರು ನೀಡಿದ ಅಮೋಘ ಯೋಗದಾನವನ್ನು ಮರೆಯುವುದೆಂತು?. ಕನ್ನಡ-ತೆಲುಗು ಭಕ್ತಿ -ಸಾಹಿತ್ಯ ಪರಂಪರೆಯಲ್ಲಿ ಪುರಂದರರು-ಅನ್ನಮಾಚಾರ್ಯ-ತ್ಯಾಗರಾಜರನ್ನು ಮರೆಯುವುದೆಂತು?. ಈ ತ್ರಿಮೂರ್ತಿಗಳು ಸಂಗೀತ-ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಮುಚ್ಚಿಡುವಷ್ಟು ಸುಲಭವೂ ಕ್ಲೇಶವೂ ಆಗಿಲ್ಲದ ಕಾರಣದಿಂದಲೇ ಅಲ್ಲವೇ ಅವು ಇಂದಿಗೂ ಜನಜನಿತವಾಗಿರುವುದು, ಇಷ್ಟು ದಿನ ಸವೆಸಿದರು ಕಾಂತಿಗುಂದದೆ ಹೊಳೆಯುತ್ತಿರುವುದು.

ಒಂದು ಭಾಷೆಯ ಸಾಹಿತ್ಯ, ಇತಿಹಾಸ, ಅರ್ಥ ವ್ಯವಸ್ಥೆ ಇನ್ನಿತರ ಮಾನದಂಡಗಳು ಎಷ್ಟೇ ಇರಲಿ, ಆ ಭಾಷೆಯನ್ನಾಡುವ ಮಕ್ಕಳು ಅವರದ್ದೇ ಭಾಷೆಯನ್ನೂ ನಿರ್ಲಕ್ಷಿಸಿಬಿಟ್ಟರೆ ಅಥವಾ ಇನ್ನಿತರ ಭಾಷೆಗಳೆಡೆಗೆ ಹೊರಳಿಕೊಂಡು ಬಿಟ್ಟರೆ ಭಾಷೆ ಸತ್ತಂತೆಯೇ. ಕನ್ನಡಿಗರು ಇದೀಗ ಕಾರ್ಯೋನ್ಮುಖರಾಗಬೇಕಿರುವುದು ಈ ವಿಚಾರದ ವಿರುದ್ಧ ದಿಕ್ಕಿನಲ್ಲಿ. ಕನ್ನಡ ಭಾಷೆಯನ್ನೂ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಘನಿಷ್ಠವಾಗಿ ಬಳಸುತ್ತಾ ಸಾಗುವುದು. ಇದಕ್ಕಿಂತ ದೊಡ್ಡ ಹೋರಾಟ, ಚಳುವಳಿಯೇ ಇಲ್ಲವೆಂಬುದು ನನ್ನ ಭಾವನೆ. ಅದೊಂದು ರೀತಿ ಮಹಾ ಯಾಗದಂತೆ. ವೆಂಕಟರಾಯರು ಕರ್ನಾಟಕ ಗತ ವೈಭವದ ಮೂಲಕ ಆ ಮಹಾಯಾಗಕ್ಕೆ ವೇದಿಕೆ ಕಟ್ಟಿದ್ದಾರೆ, ಅದರೊಳಗೆ ಜ್ವಾಲೆ ಹೊತ್ತಿಸಿ ಯಾಗ ಫಲ ಪಡೆಯಬೇಕಾದವರು ನಾವು ನೀವು ಮಾತ್ರವೇ.

ಕನ್ನಡಿಗರು ಎಡವಿದ್ದು, ಎಡವುತ್ತಿರುವುದು ಎಲ್ಲಿ?

ಅತೀ ಮುಖ್ಯವಾಗಿ ಮೂರು ಕಾರಣಗಳಿಂದ ಕನ್ನಡಿಗರು ಕಳಾ ವಿಹೀನರಾಗಿದ್ದಾರೆ.

೧. ಯಾವುದೇ ಭಾಷೆ ಗಟ್ಟಿಯಾಗಿ ನಿಲ್ಲುವುದು ತಲೆಮಾರಿನಿಂದ ತಲೆಮಾರಿಗೆ ಅದು ಸಾಗಿದಾಗ ಮಾತ್ರವೇ. ಮಹತ್ಕೃತಿಗಳು, ಹೋರಾಟಗಳಷ್ಟೇ ಭಾಷೆಯನ್ನು ಬಿಗಿಯಾಗಿ ಹಿಡಿದು ನಿಲ್ಲಿಸಲು ಅಶಕ್ತವಷ್ಟೇ. ಮಹತ್ಕೃತಿಗಳ ರಚನೆಯಲ್ಲಿ , ಐತಿಹಾಸಿಕವಾಗಿ ಮಂಚೂಣಿಯಲ್ಲಿದ್ದ, ಮಧ್ಯ ಏಷ್ಯಾದ ಅದೆಷ್ಟೋ ಭಾಷೆಗಳು ಹೇಳ ಹೆಸರಿಲ್ಲದಂತೆ ನಿರ್ನಾಮವಾಗಿವೆ. ಕನ್ನಡಿಗರು, ಅದರಲ್ಲೂ ೨೧ನೇ ಶತಮಾನದ ಆದಿಭಾಗದ ಕನ್ನಡಿಗರು ತಮ್ಮ ತಲೆಮಾರಿನ ಬಹುತೇಕ ವಿಚಾರಗಳನ್ನು ತಮ್ಮ ಮಕ್ಕಳ ತಲೆಗೆ ದಾಟಿಸೇ ಇಲ್ಲ. ದಾಟಿಸುವ ವಿಚಾರದಲ್ಲಿ ದ್ವಂದ್ವ ಅವರನ್ನಿನ್ನು ಕಾಡುತ್ತಿರುವಂತಿದೆ. ಸದ್ಯಕ್ಕೆ ಇಂಗ್ಲೀಷು ಸರ್ವಾಂತರ್ಯಾಮಿಯಾಗಿದೆ, ಕನ್ನಡ ಮನೆಯಿಂದ ಕಲಿತದ್ದು ಎಂಬ ಕಾರಣಕ್ಕೆ ಕೆಲವರು ಕನ್ನಡವಾಡುತ್ತಿರುವುದು ಕುಚೋದ್ಯವಲ್ಲ. ಈಗಿನ ಕನ್ನಡ ಹೋರಾಟಗಾರರು ಹಿಂದಿಯ ವಿರುದ್ಧ ತಳೆದಷ್ಟು ಕಠಿಣ ನಿಲುವನ್ನು ಇಂಗ್ಲೀಷಿನ ವಿರುದ್ಧ ತಳೆಯಲು ನಿಸ್ಸಂದೇಹವಾಗಿ ಅಸಮರ್ಥರೇ. ಪ್ರಾಪಂಚಿಕವಾಗಿ ವಿಚಾರ ವಿನಿಮಯ ಮಾಡಲು, ಹೊರಗಿನದನ್ನು ಅರಿತುಕೊಳ್ಳಲು, ಔದ್ಯೋಗಿಕವಾಗಿ ಇಂಗ್ಲೀಷು ಬೇಕೇ ಬೇಕೇ ಎಂದರೂ, ಇಂಗ್ಲೀಷನ್ನು ತಮ್ಮ ಘನತೆ, ಪ್ರತಿಷ್ಠೆಯ  ಒಂದು ಅಂಗವಾಗಿ ಬಳಸುತ್ತಿರುವುದು ವಿಷಾದನೀಯ.

೨. ಕನ್ನಡಿಗರು ಇತಿಹಾಸ ಪ್ರಿಯರಲ್ಲ. ತಮ್ಮ ಘನವಾದ ಇತಿಹಾಸದ ಬಗ್ಗೆ ಎಷ್ಟೋ ಕನ್ನಡಿಗರಿಗೆ ಎಳ್ಳಷ್ಟೂ ಅರಿವಿಲ್ಲ. ಅಸಂಖ್ಯ ಕನ್ನಡಿಗರಿಗೆ ಕನ್ನಡ ನಾಡನ್ನಾಳಿದ ಒಬ್ಬ ರಾಜನ ಹೆಸರೂ ಗೊತ್ತಿಲ್ಲ. ಆಗ್ಗೊಮ್ಮೆ ಈಗೊಮ್ಮೆ ಶಾಲಾ ಪಠ್ಯಪುಸ್ತಕ ಪುನರ್ ರಚನಾ ಸಮಿತಿಗಳು  ಅವರುಗಳ ಕಾರ್ಯವನ್ನು ಕಾಲ ಕಾಲಕ್ಕೆ ನಡೆಯಿಸಿಕೊಡಿತ್ತಿದ್ದು ಸಂತೋಷವಷ್ಟೇ, ಆದರೆ ಈಗೀಗ ಅದು ರಾಜಕೀಯ ಮೇಲಾಟಕ್ಕೆ ಗುರಿಯಾಗಿರುವುದು ವಿಷದೀಕರಿಸದೆ ಬಿಡುವಂತಹುದಲ್ಲ. ಕನ್ನಡಿಗರು ತಮ್ಮ ಘನ ಹಿನ್ನೆಲೆಯ ಬಗ್ಗೆ ಅರಿವುಳ್ಳವರಾಗಬೇಕು, ನಮ್ಮ ಪೂರ್ವಜರು ಹಿಂದೆ ಬದುಕಿ ಬಾಳಿದ ಬಗ್ಗೆ ಅರಿವಿದ್ದರೆ ಮಾತ್ರವಲ್ಲವೆ ಈಗ ನಮಗೆ ಹೆಮ್ಮೆಯುಂಟಾಗುವುದು ಹಾಗು ನಾವು ಮಾಡಬೇಕಿರುವ ಕಾರ್ಯಗಳತ್ತ ಅಪಾರ ಜವಾಬ್ದಾರಿಯುಂಟಾಗುವುದು. ಇಲ್ಲದಿದ್ದರೆ ನಮ್ಮ  ಜನಾಂಗ ಜವಾಬ್ದಾರಿಯುತ ಜನಾಂಗವಾಗಿ ಬಾಳಲು ಸಾಧ್ಯವೇ?.

೩. ಮೂರನೆಯದು ಅಭಿಮಾನ ಶೂನ್ಯತ್ವ, ಆಳಿಸಿಕೊಳ್ಳುವ ಮನೋಧರ್ಮ. ಉತ್ತರದವರನ್ನು ದಕ್ಷಿಣಕ್ಕೆ ಬರದಂತೆ ಎದೆಯೊಡ್ಡಿ ತಡೆದ ಇಮ್ಮಡಿ ಪುಲಿಕೇಶಿ, ವೀರ ವನಿತೆ ಒನಕೆ ಓಬವ್ವ, ಕಿತ್ತೊರಿನ ಚೆನ್ನಮ್ಮ, ಕೆಳದಿಯ ಚೆನ್ನಮ್ಮ, ಕೃಷ್ಣದೇವರಾಯ, ರಾಮರಾಯ, ಸಂಗೊಳ್ಳಿಯ ರಾಯಣ್ಣ ಇಂತಹವರು ಬದುಕಿ ಬಾಳಿದ ಕನ್ನಡ ಕುಲದವರು ನಾವೆಂದು ಹೇಳಿಕೊಳ್ಳಲು ಹೆಮ್ಮೆಯಿರಬೇಕು, ಆದರೆ ಆ ಗಾಂಭೀರ್ಯಯುಕ್ತವಾದ ಹೆಮ್ಮೆಯನ್ನು ತೊರೆದು ಆಳಿಸಿಕೊಳ್ಳುವ, ಆಳುವ ವರ್ಗದವರಿಂದಲೇ ಸಕಲ ಬದಲಾವಣೆಗಳೂ ಸಾಧ್ಯವೆಂಬ ಮನೋಸ್ಥಿತಿಗೆ ತಲುಪಿದ್ದು ನಿಜವಾಗಿಯೂ ಕನ್ನಡಿಗರ ದೌರ್ಭಾಗ್ಯ. ಈ ಕಾರಣದಿಂದಲೇ ಕನ್ನಡಿಗರು ಆಗಾಗ್ಗೆ ನಿದ್ರೆಗೆ ಜಾರಿದಂತೆ ಭಾಸವಾಗುವುದು ಹಾಗೂ ಆಗಾಗ್ಗೆ ಅವರನ್ನು ಬಡಿದೇಳಿಸಲು ಆಲೂರರು, ರಾಜ್ ಕುಮಾರರು, ಕುವೆಂಪು ರಂತಹವರು ಮತ್ತೆ ಮತ್ತೆ ಕನ್ನಡದ ಕಪ್ಪು ಮಣ್ಣಿನ ಬಸಿರಲ್ಲಿ ಆಗಿ ಹೋದದ್ದು.

ಇವಿಷ್ಟೇ ಅಲ್ಲ, ಇನ್ನು ಕಾರಣಗಳು ಹಾಗು ಅವುಗಳಿಗೆ ವಿಮುಖವಾಗಿ ನಡೆಯಬೇಕಿರುವ ಮಾರ್ಗಗಳು ಕನ್ನಡಿಗರ ಮುಂದೆ ಹೇರಳವಾಗಿವೆ. ಅವುಗಳನ್ನು ಸೂಕ್ತ ಸಮಯದಲ್ಲಿ ಆರಿಸಿಕೊಂಡು ನಡೆಯುವದೊಂದೇ ಈಗ ಎಲ್ಲ ಕನ್ನಡಿಗರು ಮಾಡಬೇಕಾಗಿರುವ ಮಹತ್ತರ ಕಾರ್ಯ. ಸದ್ಯ ಕನ್ನಡ ತಾಯಿ ಭುವನೇಶ್ವರಿ ಆಗಾಗ್ಗೆ ತನ್ನ ಘನತೆಯನ್ನು ಹಾಡಿ ಹೊಗಳುವ ಸಂತಾನವನ್ನು ಪಡೆಯುತ್ತಲೇ ಇದ್ದಾಳೆ. ಅದು ನಿಲ್ಲದೆ ಅಕ್ಷಯವಾಗಿಹೋಗಲಿ ಎನ್ನುವುದೇ ನನ್ನ ಅಭಿಲಾಷೆ.

ಕನ್ನಡ ನಿಂತ ನೀರಾಗಬಾರದು, ಸಲೀಲವಾಗಿ ಹರಿಯುವ ಗಂಗೆಯಾಗಬೇಕು. ಆ ಕನ್ನಡ ಗಂಗೆಯನು ಕನ್ನಡದ ಮುಂದಿನ ಪೀಳಿಗೆ ತೀರ್ಥದಂತೆ ಭಾವಿಸಿ ಮೀಯಬೇಕು, ಪ್ರೋಕ್ಷಿಸಿಕೊಂಡು ಪವಿತ್ರರಾಗಬೇಕು ಹಾಗು ಸೇವಿಸಿ ಧನ್ಯರಾಗಬೇಕು. ಇದೇ ಈ ಲೇಖನದ ಆಶಯ.

-o-

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...