ಶುಕ್ರವಾರ, ಮಾರ್ಚ್ 27, 2020

ಚೀನಾದ ಸುಯೋಗದೆಡೆಗೆ ಹೆಜ್ಜೆ

ಗತ್ತು ಬೆದರಿ ಹೋಗಿದೆ, ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ, ಬಡ ರಾಷ್ಟ್ರಗಳಾದಿಯಾಗಿ ಎಲ್ಲರೂ ಕದ ಕವುಚಿಕೊಂಡು ಮನೆಯೊಳಗೆ ಕೂತುಬಿಟ್ಟಿದ್ದಾರೆ. ಕಣ್ಣಿಗೆ ಕಾಣದ ಜೀವಿಯೊಂದು ಪ್ರಪಂಚದ ಮನುಷ್ಯರನ್ನೆಲ್ಲಾ ಇನ್ನಿಲ್ಲದಂತೆ ಭೀತಿಗೊಳಪಡಿಸಿದೆ. ಹಿಂದೆಂದೂ ಕಾಣದಂತಹ ಕರ್ಫ್ಯೂ ಪರಿಸ್ಥಿತಿಯನ್ನು ಪ್ರಪಂಚದ ಎಲ ದೇಶಗಳಲ್ಲಿಯೂ ಹೇರಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಗಳು ಪಾತಾಳದತ್ತ ಸಾಗಿವೆ, ಉತ್ಪಾದನಾ ರಂಗ ಬಾಗಿಲು ಜಡಿದುಕೊಂಡ ಪರಿಣಾಮ ಉತ್ಪಾದನೆ ಶೂನ್ಯ ತಲುಪಿದೆ. ಅದು ಹಾಗೆಯೇ ಮುಂದುವರೆದರೆ ಸಾಮಗ್ರಿಗಳಿಗೆ ಹಾಹಾಕಾರ ಉಂಟಾಗುವುದು ಆಶ್ಚರ್ಯವೇನಲ್ಲ. ಆಹಾರ ಬೆಳೆಗಳಿಗೆ ಕರ್ಫ್ಯೂವಿನಿಂದ ವಿನಾಯಿತಿ ಇದ್ದರೂ ರಸಗೊಬ್ಬರ ಮತ್ತಿತರ ಕೃಷಿ ಅಗತ್ಯ ವಸ್ತುಗಳು ಉತ್ಪಾದನೆ ನಿಲ್ಲಿಸಿರುವುದರಿಂದ ಕೃಷಿಯ ಮೇಲೆ ಹೊಡೆತ ಬೀಳದಿರದು. ದೇಶದೊಳಗೆ ಆರೋಗ್ಯ ಇಲಾಖೆ ಒಂದು ಹೊರತು ಪಡಿಸಿ ಇನ್ನಾವ ಇಲಾಖೆಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಿರುವುದು ಕಾಣಸಿಗುತ್ತಿಲ್ಲ. ನಮ್ಮ ಭಾರತದೊಳಗೆ ಪ್ಲೇಗು, ದಡಾರ ಬಂದಿದ್ದ ಸ್ವಾತಂತ್ರ್ಯ ಪೂರ್ವ ಕಾಲದ ಸಮಯವನ್ನು ಇದು ನೆನಪಿಸುವಂತಿದೆ. ಇಲ್ಲಿಗೆ ಸುಮಾರು ೧೦೨ ವರ್ಷಗಳ ಹಿಂದೆ ಬಾಂಬೆ ಜ್ವರ ಎನ್ನುವ ಮಾರಣಾಂತಿಕ ಪಿಡುಗೊಂದು ಮುಂಬಯಿನ ಬಂದರಿನ ಮೂಲಕ ಭಾರತಕ್ಕೆ ಕಾಲಿಟ್ಟಿತ್ತಂತೆ, ರೇವು ಪಟ್ಟಣದ ಅಧಿಕಾರಿಗಳು, ಪೊಲೀಸರು ಈ ರೋಗಕ್ಕೆ ಗುರಿಯಾಗಿ ಮೊದಮೊದಲು ಸತ್ತರಂತೆ. ತದನಂತರ ಅದೇ ರೋಗಕ್ಕೆ ತುತ್ತಾಗಿ ಭಾರತದಲ್ಲೇ ಲಕ್ಷಾಂತರ ಜನ ಸತ್ತರಂತೆ.

ಸ್ಪೇನ್ ದೇಶದಲ್ಲಿ ಹುಟ್ಟಿದ ಆ ವೈರಾಣು ಇಂಗ್ಲೀಷರ ಮುಖಾಂತರ ಕಡಲು ದಾಟಿ ಭಾರತಕ್ಕೆ ದಾಂಗುಡಿಯಿಟ್ಟರೂ, ಇಲ್ಲಿ ಬಹು ಬೇಗ ಹರಡಲು ಜಾಲ ಸುಸಜ್ಜಿತವಲ್ಲದೆ ಇರುವ ಮಿತಿಯಲ್ಲೇ ಹರಡಿ ಮರೆಯಾಯ್ತು. ಆಗ್ಗೆ ಬಂದು ಹೋಗುವ, ಜನಗಳನ್ನು ವೇಗವಾಗಿ ಸಾಗಿಸುವ ವಾಹನಗಳಿಲ್ಲದ ಪರಿಣಾಮ ಭಾರತದ ಆದ್ಯಂತ್ಯಕೆ ಸುಲಭವಾಗಿ ಹರಡಲು ಸಾಧ್ಯವಾಗಲಿಲ್ಲವೇನೋ. ಅದಾದ ಮೇಲೆ ಪ್ರಪಂಚವನ್ನು ಯಾವುದು ಈಗಿನಷ್ಟು ವಿಪರೀತಕ್ಕೆ ಕಾದಿರಲಿಕ್ಕಿಲ್ಲ. ಆಗಾಗ್ಗೆ ಭೇಟಿ ಕೊಟ್ಟು ಹೋದ ಸಾರ್ಸ್, ಹೆಚ್೧ಎನ್೧, ನಿಫಾ ವೈರಸ್ಸುಗಳು, ಹಂದಿ ಜ್ವರ, ಹಕ್ಕಿ ಜ್ವರ, ಮಂಗನ ಕಾಯಿಲೆಗಳೂ ಜಾಗತೀಕ ಮಟ್ಟದಲ್ಲಿ ಈಗಿನಷ್ಟು ಭಯ ಹುಟ್ಟಿಸಲು ಅಸಮರ್ಥವಾದವು. ಇವೆಲ್ಲವುಗಳ ತರುವಾಯು ಮನುಷ್ಯನ ಮಿತಿಯನ್ನು ಮನುಷ್ಯನಿಗೆ ಮತ್ತೊಮ್ಮೆ ತಿಳಿಸಲು ಭೂತಾಯಿ ಯೋಜನೆಯೊಂದನ್ನು ಕೈಗೊಂಡಂತೆ ಕರೋನ ವೈರಸ್ ಬಂದೆರಗಿದೆ.

ಕರೋನ ವೈರಸ್ ಕಾರಣದಿಂದ ಮುಚ್ಚಿದ ದೆಹಲಿಯ ಇಂಡಿಯಾ ಗೇಟ್

ಚೀನಾ ದೇಶದ ವುಹಾನ್ ನಗರದಲ್ಲಿ ಸಮುದ್ರಾಹಾರ ಮಾರುವ ಮಾರುಕಟ್ಟೆಯಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡಿತು ಎಂದು ನಂಬಲಾಗಿರುವ ಈ ಮಹಾ ಮಾರಣಾಂತಿಕ ವೈರಸ್ ಬಗ್ಗೆ ಹಲವಾರು ಊಹೆಗಳು ಚಾಲ್ತಿಯಲ್ಲಿವೆ. ಅಮೇರಿಕಾವೂ ಸೇರಿ ಮೊದಲಾದ ಪ್ರಬಲ ರಾಷ್ಟ್ರಗಳು ಚೀನಾ ದೇಶವು ಕೈಗೊಂಡಿರುವ ಜೈವಿಕ ಯುದ್ಧವಿದೆಂದು ಆಪಾದನೆ ಮಾಡುತ್ತಿವೆ. ಆಪಾದನೆಯ ಮಗ್ಗುಲಲ್ಲೇ ಆ ದೇಶಗಳಲ್ಲಿ ಅಸಂಖ್ಯ ಜನಗಳು ಮಾರಣಾಂತಿಕ ವೈರಸ್ ಗೆ ತುತ್ತಾಗಿದ್ದಾರೆ, ಇನ್ನು ಹಲವರು ಇಹ ಲೋಕ ತ್ಯಜಿಸಿಯೂ ಬಿಟ್ಟಿದ್ದಾರೆ.

ಅಮೆರಿಕಾದ ಸೇನಾ ವಲಯದಲ್ಲಿ ಕೇಳಿಬರುತ್ತಿರುವ ಈ ವೈರಸ್ ಬಗೆಗಿನ ವಿಷಯವೇನೆಂದರೆ ಈಗಿನ ವರೆವಿಗೂ ಚೀನಾ ಸುಮಾರು ೧೫೦೦ ಬಗೆಯ ವೈರಸ್ ಗಳನ್ನು ವುಹಾನ್ ನ ವೈರಾಣು ಅಧ್ಯಯನ ಕೇಂದ್ರದಲ್ಲಿ ಪ್ರಯೋಗಾರ್ಥ ಸಂಗ್ರಹಿಸಿ ಇಟ್ಟಿದೆ.  ಆ ೧೫೦೦ ವೈರಸ್ ಗಳ ಪೈಕಿ ಕರೋನ ವೈರಸ್ ಕೊಡ ಒಂದಾಗಿದ್ದು, ಇತರ ರಾಷ್ಟ್ರಗಳ ಮೇಲೆ ಹಿಂಬಾಗಿಲ ಮೂಲಕ ಜೈವಿಕ ಯುದ್ಧ ಸಾರಲು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ವುಹಾನ್ ವೈರಾಣು ಅಧ್ಯಯನ ಕೇಂದ್ರ)ದಲ್ಲಿ ಸಂಗ್ರಹಿಸಿಡಲಾಗಿತ್ತು. ಪ್ರಯೋಗ ಮಾಡುತ್ತಿರುವ ಸಂದರ್ಭದಲ್ಲಿ ಉಂಟಾಗಿರುವ ಅಚಾನಕ್ ಎಡವಟ್ಟಿನಿಂದ ವೈರಾಣು ಸೋರಿಕೆಯಾಗಿ ಹೊರಜಗತ್ತಿಗೆ ಹರಿಯಿತು. ಅನ್ಯರ ಮೇಲೆ ಯುದ್ಧ ಸಾರಲು ಚೀನಾ ಇರಿಸಿಕೊಂಡಿದ್ದ ಆ ಪ್ರಬಲ ಜೈವಿಕಾಸ್ತ್ರ ಆಕಸ್ಮಿಕವಾಗಿ ತಮ್ಮ ಮೇಲೆಯೇ ತಿರುಮಂತ್ರವಾಯಿತು, ಇದಿಷ್ಟು.

ವೈರಾಣು ತನ್ನ ಕಬಂಧ ಬಾಹುಗಳನ್ನು ವುಹಾನ್ ನಾದ್ಯಂತ ಹರಡಲು ಶುರುವಿಟ್ಟುಕೊಂಡಾಗ ಚೀನಾ ಸರ್ಕಾರ ವೈರಸ್ ಹರಡುವಿಕೆ ತಡೆಗಟ್ಟಲು ವುಹಾನ್ ಪ್ರಾಂತ್ಯವನ್ನು ಪ್ರಪಂಚದಿಂದ ಅಕ್ಷರಶಃ ಬೇರ್ಪಡಿಸಿಬಿಟ್ಟಿತಂತೆ. ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕೊಳ್ಳಲು ಜನ ಮುಗಿಬಿದ್ದು ಕಿಲೋಮೀಟರ್ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದು ಮೊನ್ನೆ ಮೊನ್ನೆ ವರೆಗೂ ಚೀನಾದಿಂದ ಬಂದ ವಿಡಿಯೋಗಳಲ್ಲಿ ದಾಖಲಾಗಿತ್ತು.ಈ ದುರಂತದಲ್ಲಿ ಚೀನಾದಲ್ಲಿ ಕೋಟಿಗಟ್ಟಲೆ ಜನ ಅಸು ನೀಗಿರಬಹುದು, ಆದರೆ ಆ ದೇಶ ಹೊರಜಗತ್ತಿಗೆ ತಪ್ಪು ಲೆಕ್ಕಗಳನ್ನು ಕೊಡುತ್ತಿದೆ ಎಂದು ಅನೇಕ ದೇಶಗಳು ವಾದಿಸುತ್ತಿವೆ. ಅದಕ್ಕೆ ಪುಷ್ಟಿಯೆನ್ನುವಂತೆ ಇತ್ತೀಚಿಗೆ ತಾವು ಚೀನಾದ ಫೋನ್ ಕಾಲ್ ಗಳ ಮೇಲೆ ನಿಗಾ ಇರಿಸುವುದಾಗಿಯೂ, ೨೦೧೯ರ ಡಿಸೆಂಬರ್ ನಿಂದ ಈಚೆಗೆ ಬರೋಬ್ಬರಿ ೧ ಕೋಟಿ ಫೋನ್ ಗಳು ಚೀನಾದಲ್ಲಿ ಸ್ವಿಚ್ ಆಫ್ ಆಗಿರುವುದಾಗಿಯೂ ಅನೇಕ ದೇಶಗಳು ಹೇಳಿಕೊಳ್ಳುತ್ತಿವೆ. ಒಟ್ಟಿನಲ್ಲಿ ಚೀನಾದತ್ತ ಎಲ್ಲ ದೇಶಗಳ ದೃಷ್ಟಿ ನೆಟ್ಟಿದೆ. ಏಷ್ಯಾ ಖಂಡದಲ್ಲಿ ನಾಯಕತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಆ ದೇಶ ಹೀಗೆ ಮಾಡಿದ್ದರೂ ಮಾಡಿರಬಹುದೆಂಬ ಅನುಮಾನ ಹಲವು ದೇಶಗಳಿಗೆ ಬಲವಾಗಿ ಇದ್ದಂತಿದೆ. ಹಲವಾರು ಜನ ಅದಾಗಲೇ ವಿಶ್ವ ಸಂಸ್ಥೆ ಮಧ್ಯೆ ಪ್ರವೇಶಿಸಿ ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಳ್ಳುವಂತೆ ಒತ್ತಡ ಹೇರುತ್ತಲೂ ಇದ್ದಾರೆ.

ಅಲ್ಲಿಗೆ ಚೀನಾದ ರಾಜ ತಾಂತ್ರಿಕತೆ ಸಂಪೂರ್ಣವಾಗಿ ಮುಗ್ಗರಿಸುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿವೆ. ಇನ್ನೂ ಮುಂದುವರೆದು ಚೀನಾದ ಬಣದಲ್ಲಿ ಯಾವುದಾದರೂ ದೇಶಗಳು ಗುರುತಿಸಿಕೊಂಡವೆಂದರೆ ಅದರ ಅರ್ಥ ಆ ದೇಶಗಳಿಗೆ ಚೀನಾದಿಂದ ಯಾವುದೋ ತೆರನಾದ ಲಾಭ ಇದೆ ಎಂತಲೇ. ಲಾಭದ ಆಸೆ ತೋರಿಸಿ ಕೆಲವು ದೇಶಗಳನ್ನು ನುಂಗಿ ನೊಣವಿಕೊಂಡ ಇತಿಹಾಸ ಈಗಾಗಲೇ ಚೀನಾಕ್ಕೆ ಇದೆ. ಅದರ ಮೇಲೂ ಸಮಕಾಲೀನ ಪರಿಸ್ಥಿತಿಗಳನ್ನು ನಿಭಾಯಿಸಲು, ಜನರು ದಂಗೆ ಏಳದಂತೆ ತಡೆದು ದೇಶ ನಡೆಸಲು ಪಾಕಿಸ್ತಾನದಂತಹ ರಾಷ್ಟ್ರಗಳಿಗೆ ಚೀನಾದ ಒಡನಾಟ ಬಲವಂತವಾದರೂ ಬೇಕೇ ಬೇಕು. ಪರಿಸ್ಥಿತಿಯ ತೀಕ್ಷಣತೆಗೆ ಕಟ್ಟು ಬಿದ್ದು ದೇಶಗಳು ಚೀನಾದ ಒಡನಾಟಕ್ಕೆ ಒಗ್ಗಿಕೊಳ್ಳುತ್ತವೇ ಹೊರತು ನಿಜವಾದ ಸ್ನೇಹದಿಂದಲ್ಲ.ಎಲ್ಲ ದೇಶಗಳೂ ಈಗ ಚೀನಾವನ್ನು ಅನುಮಾನದ ಭೂತಗನ್ನಡಿ ಹಿಡಿದು ನೋಡುತ್ತಿವೆ. ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಹೊರಟಿದ್ದ ಚೀನಾಕ್ಕೆ ಕರೋನ ಮರ್ಮಾಘಾತ ನೀಡಿದೆ, ಅಷ್ಟೇ ಅಲ್ಲದೆ ಇಡೀ ಪ್ರಪಂಚದ ಆರ್ಥಿಕತೆಯನ್ನು ಹಿಡಿದು ಕೆಳಕ್ಕೆ ದೂಡಿದೆ.

ಚೀನಾ ತನ್ನ ಉದ್ಧಾರಕ್ಕಾಗಿ ತನಗೆ ಸಿಗುವ ಎಲ್ಲಾ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವುದು ಯಾರಿಗೂ ಅರ್ಥವಾಗದ ವಿಷಯವೇನಲ್ಲ. ಆದರೆ ಅದರ ನಿರ್ಧಾರದಿಂದ ಅಮಾಯಕರಿಗೆ ತೊಂದರೆಯಾಗದಂತಿರಲಿ, ನೋವಾಗದಂತಿರಲಿ. ಚೀನಾ ಸಸ್ಟೈನಬಲ್ ಡೆವಲಪ್ಮೆಂಟ್(ಸುಸ್ಥಿರ ಅಭಿವೃದ್ಧಿ) ಮಾರ್ಗದಲ್ಲಿ ಇದೆಯೆಂದು ಆ ದೇಶದ ವಕ್ತಾರರು ಮಾತ್ರ ಹೇಳಿಕೊಳ್ಳುವಂತಾಗದೆ ಅದು ನಿಜ ಸ್ಥಿತಿಯಲ್ಲಿಯೂ ಹಾಗೆ ಇರಲಿ. ಅನ್ಯ ದೇಶಗಳ ಮೇಲೆ ಹಿಡಿತ ಸಾಧಿಸುವ ಚೀನಾದ ಮನೋಧೋರಣೆ ಇನ್ನಾದರೂ ಕಡಿಮೆಯಾಗಲಿ. ಪ್ರಕೃತಿಗೆ ಇನ್ನಿಲ್ಲದಂತೆ ಅಪಚಾರವೆಸಗಿರುವ ಚೀನಾ ತನ್ನ ತಪ್ಪನ್ನು ಅರಿತುಕೊಂಡು ಒಳಿತಿನ ಕಡೆಗೆ ಹೆಜ್ಜೆಯಿಡಲಿ, ಸುಯೋಗದೆಡೆಗೆ ಹೆಜ್ಜೆಯಿರಿಸುವ ನಾಯಕತ್ವವವನ್ನು ಅದೇ ವಹಿಸಿಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ.

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...