ಭಾನುವಾರ, ಮೇ 7, 2017

ಯಾರು ನಾವು?


ನಂಬಿಕೆಗೆ ಹತ್ತು ಹಲವು 
ಹೆಸರ ಹೊಸೆದ ಕೀರ್ತಿ ನಮ್ಮದು, 
ಆ ನಂಬಿಕೆಗೆ ಅಪನಂಬಿಕಸ್ಥರಾಗಿ 
ದಿನ ದೂಡುತ್ತಿರುವರು ನಾವು. 

ಜ್ಞಾನ ವಿಜ್ಞಾನಕೆ 
ತಿರುವು ಕೊಟ್ಟ ಛಾತಿ ನಮ್ಮದು,
ಜ್ಞಾನ ವಿಜ್ಞಾನ ಪುಟಿದ 
ಮೂಲಕ್ಕೆ ಕತ್ತರಿಯಿತ್ತು ಬೀಗಿದವರು ನಾವು.  

ಸತ್ಯ ಮಗ್ಗುಲಾಗಿಸಿ 
ಅಹಂಕಾರದಿಂದ ಮೆರೆದ ಭ್ರಾಂತಿ ನಮ್ಮದು,
ಅಂತ್ಯದಲ್ಲಿ  ಸತ್ಯಕ್ಕೆ ಹೋರಾಡಿ 
ಮಡಿಯುವರು ನಾವು. 

ಇಹದ ಪರದ ದಾರಿ 
ಹುಡುಕ ಹೊರಟವರು ನಾವು, 
ಎದುರುಬಂದ ನೋವುಂಡ ಮನದ 
ದಾರಿಯಾರಿಯದೇಹೋದವರು ನಾವು. 

ಮುಕ್ತಿ ಮೋಕ್ಷಕೆಂದು 
ಬಲಿಯ ಕೊಟ್ಟು ಧರ್ಮ ಕಡೆದವರು ನಾವು, 
ಧರ್ಮ ಧರ್ಮಾಂತರದ ಸುಳಿಯೊಳಗೆ ಸಿಕ್ಕು
ಹಲುಬುವರು ನಾವು. 

ಇರುವ ಪ್ರಕೃತಿಯ 
ನುಂಗಿ ನೀರ್ಕುಡಿದವರು ನಾವು, 
ಪ್ರಕೃತಿಯ ಸಾವಿಗೆ ಹಗಲಿರುಳು 
ಮರುಗುವರು ನಾವು.

ಇರುವುದೆಲ್ಲವ ಕೆಡಿಸಿ 
ಖಜಾನೆಯೊಳಗೆ ಪೇರಿಸಿದವರು ನಾವು,
ಕೆಡುಕಿಗೆ ಕಾರಣಹುಡುಕಿ ಪೇರಿಸಿದ 
ಧನ ವ್ಯವಯಿಸುವರು ನಾವು. 

ಹರಿವ ನೀರಿಗೆ ಒಡ್ಡು
ಕಟ್ಟಿದವರು ನಾವು,
ಕುಡಿವ ನೀರ ಹಣ ಸುರಿದು
ಕೊಳ್ಳುವರು ನಾವು.

ಇಲ್ಲದ ಬೆಂಕಿಯನ್ನು ಬೇಕೆಂದು
ನಿಂತು ಹೊತ್ತಿಸಿದವರು ನಾವು,
ಭೂಮಿ ತನ್ನಿಚ್ಛೆಗೆ ಬೆಂಕಿಯುಗುಳಿದರೆ
ದೂರಗಾಮಿಗಳು ನಾವು.

ಪ್ರಕೃತಿ ವ್ಯವಸ್ಥೆಯನ್ನೆಲ್ಲ
ಕೆಡಿಸಿದವರು ನಾವು,
ಅದನ್ನು ಸರಿಪಡಿಸಲು ಟೊಂಕ ಕಟ್ಟಿ
ನಿಂತವರು ನಾವೇ ನಾವು!!
ಈ ಭುವಿಯ ಮಕ್ಕಳು.

1 ಕಾಮೆಂಟ್‌:

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...