ಶನಿವಾರ, ಆಗಸ್ಟ್ 26, 2017

ನದಿಗಳಿಗಾಗಿ ಜಾಥಾ ಭಾರತದ ಈಗಿನ ಅವಶ್ಯಕತೆ

ಒಮ್ಮೆ ನೆನಪಿಸಿಕೊಳ್ಳಿ ಪ್ರಪಂಚದ ಮೊಟ್ಟಮೊದಲ ನಾಗರೀಕತೆ ಹರಪ್ಪ ನಾಗರೀಕತೆ ಇದ್ದಿದ್ದು ಸಿಂಧೂ ನದಿ ದಂಡೆಯಲ್ಲಿ. ಭಾರತದ ಅತ್ಯಂತ ಪುರಾತನ ನಗರಗಳೆಲ್ಲವೂ ಹುಟ್ಟಿದ್ದು, ಬೆಳೆದಿದ್ದು, ಲೋಕವಿಖ್ಯಾತವಾಗಿದ್ದು ನದಿ ಆಶ್ರಯದಲ್ಲಿಯೇ. ಯಾವುದೇ ದೇಶದ ಆರ್ಥಿಕತೆಗೆ ದೇಶಗಳ ನದಿಗಳು ಅಪಾರ ಕೊಡುಗೆಯಿತ್ತಿರುತ್ತವೆಆಧುನಿಕತೆಯಲ್ಲಿ ಮುನ್ನಡೆ ಸಾಧಿಸಿರುವ ಭಾರತದ ನಗರಗಳೂ ಕೂಡ ನದಿ ದಂಡೆಯಲ್ಲಿಯೇ ಇವೆ ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲವಷ್ಟೆ. ದೆಹಲಿ ಕಟ್ಟಿಸಿದ್ದು ಯಮುನಾ ನದಿ ದಂಡೆಯ ಮೇಲೆ, ಬೆಂಗಳೂರು ವೃಷಭಾವತಿ ನದಿ ದಂಡೆಯಲ್ಲಿ, ಚೆನ್ನೈ ನಗರ ಅಡ್ಯಾರ್ ನದಿ ದಂಡೆಯಲ್ಲಿ, ಮೀಠೀ ನದಿ ದಂಡೆಯಲ್ಲಿ ಮುಂಬೈ, ಹೂಗ್ಲಿ ನದಿ ದಂಡೆಯಲ್ಲಿ ಕೋಲ್ಕತ್ತಾ, ಮೂಸಿ ನದಿ ದಂಡೆಯಲ್ಲಿ ಹೈದರಾಬಾದ್, ಗಂಗಾ ನದಿ ದಂಡೆಯಲ್ಲಿ ಪಾಟ್ನಾ, ಸಬರಮತಿ ನದಿ ದಂಡೆಯಲ್ಲಿ ಅಹಮದಾಬಾದ್, ಗೋಮತಿ ನದಿ ದಂಡೆಯಲ್ಲಿ ಲಕ್ನೋ ಹೀಗೆ ಇನ್ನು ಯಾವ ಯಾವ ಊರು ನೀವು ತೆಗೆದುಕೊಂಡರೂ ಅವೆಲ್ಲ ಹುಟ್ಟಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಇವತ್ತಿನ ರೀತಿಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವುದು ನದಿ ದಂಡೆಯಲ್ಲಿಯೇ ಅನ್ನುವುದರಲ್ಲಿ ಎರಡು ಮಾತಿಲ್ಲ.

ಭೂಮಿ ಹುಟ್ಟಿ ಇಲ್ಲಿನ ಅನಿಲಗಳೆಲ್ಲವೂ ಸೇರಿ ನೈಸರ್ಗಿಕ ರಾಸಾಯನಿಕ ಕ್ರಿಯೆಗಳು ನಡೆದು ಅದರಿಂದ ಯಥೇಚ್ಛ ಪ್ರಮಾಣದಲ್ಲಿ ಮೋಡಗಳಾಗಿ ಭೂಮಿಯ ಮೇಲೆ ಕೋಟ್ಯಾಂತರ ವರ್ಷ ಮಳೆಯಾಗಿ ಸುರಿಯಿತು. ಸುರಿದ ಮಳೆ ನೀರೆಲ್ಲ ಹಳ್ಳಗಳ ಕಡೆಗೆ ಹರಿದು ಅಲ್ಲಿ ಸಮುದ್ರ ನಿರ್ಮಾಣವಾಯಿತು. ನೀರಿನ ಹರಿದ ದಾರಿ ಮಣ್ಣು ಕೊಚ್ಚಿ ಹೋಗಿ ಹಳ್ಳವಾಯಿತು, ಭೂಮಿಯ ಮೇಲೆ ಇನ್ನೆಂದು ಮಳೆಯಾದರೂ, ಅಥವಾ ಹಿಮ ಕರಗಿ ನೀರಾದರೂ ಅದು ಹರಿದು ಸಮುದ್ರ ಸೇರಲು ಅದೇ ದಾರಿ ರಾಜ ಮಾರ್ಗವಾಯಿತು. ಇವುಗಳನ್ನೇ ನದಿಗಳೆಂದು ಕರೆಯಲಾಯಿತು.

ಬರಿದಾಗಿ ಬತ್ತಿರುವ ಕಾವೇರಿ, ಮಹದೇಶ್ವರ ಬೆಟ್ಟದ ಹತ್ತಿರವಿರುವ ಕರ್ನಾಟಕ ತಮಿಳುನಾಡು ಗಡಿಯಲ್ಲಿನ ದೃಶ್ಯ

ಮನುಷ್ಯನ ಜೀವನಕ್ಕೆ ನೀರು ಅತೀ ಅವಶ್ಯಕವಾದ ಕಾರಣ ಮನುಷ್ಯನ ಬದುಕು ನದಿ ಸಾಮಿಪ್ಯದಲ್ಲೇ ಆರಂಭವಾಯಿತು. ದಿನಗಳು ಕಳೆದಂತೆ ಹಳ್ಳಿಗಳು ನಗರಗಳಾಗಿ ಮನುಷ್ಯನ ನಾಗರೀಕತೆಯು ಹೊಸ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಇವತ್ತಿನ ಮಟ್ಟಿಗೆ ಬಂದು ನಿಂತಿದೆ. ಆದರೆ ಮನುಷ್ಯ ತಾನು ಬೆಳೆಯುವ ಭರದಲ್ಲಿ ಕಡೆಗಣಿಸಿದ್ದು ಮಾತ್ರ ನದಿಗಳನ್ನು. ಭಾರತದ ಸಂಸ್ಕೃತಿಯಲ್ಲಂತೂ ನದಿಗಳಿಗೆ ವಿಶೇಷ ಸ್ಥಾನ, ಬೇರೆಲ್ಲೂ ನಡೆಯದ ನದಿಯ ಆರತಿ ನಡೆಯುವುದು ಭಾರತ ಉಪಖಂಡದಲ್ಲಿ ಮಾತ್ರ. ನದಿಗೆ ದೇವರ ಸ್ಥಾನ ಕೊಟ್ಟ ಕೆಲವೇ ಕೆಲವು ಸಂಸ್ಕೃತಿಗಳಲ್ಲಿ ಭಾರತದ ಸಂಸ್ಕೃತಿಗೆ ಅಗ್ರ ಸ್ಥಾನ. ಇಂತಿರುವ ಭಾರತದ ನದಿಗಳು ಇಂದು ಏನಾಗಿವೆ, ಏನಾಗುತ್ತಿವೆ ಎನ್ನುವ ಅರಿವು ಬರೀ ಸರ್ಕಾರಕ್ಕಿದ್ದರೆ ಸಾಲದು, ಜನ ಸಾಮಾನ್ಯರಲ್ಲೂ ವ್ಯಕ್ತವಾಗಬೇಕು ಎನ್ನುವ ಅಭಿಲಾಷೆಯಿಂದಲೇ 'ಈಶಾ' ಸಂಸ್ಥೆಯ ಸಂಸ್ಥಾಪಕ ಹಾಗು ದಾರ್ಶನಿಕ ಸದ್ಗುರು ಜಗ್ಗಿ ವಾಸುದೇವ್ 'ನದಿಗಳಿಗಾಗಿ ಜಾಥಾ(ರ್ಯಾಲಿ ಫಾರ್ ರಿವರ್ಸ್)' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕನ್ಯಾಕುಮಾರಿಯಿಂದ ಹಿಡಿದು ಹಿಮಾಚಲದ ವರೆವಿಗೂ ರ್ಯಾಲಿ ಹೊರಡಲಿದೆ. ಮಾರ್ಗದಲ್ಲಿನ ಹದಿನಾರೂ ರಾಜ್ಯಗಳು ರ್ಯಾಲಿಗೆ ಕೈಜೋಡಿಸಿದ್ದು ಅಸಂಖ್ಯಾತ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಹೊಸದೊಂದು ಯೋಜನೆ ಸಿದ್ಧಪಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಸಲುವಾಗಿ  ಜಾಥಾ ನಡೆಯುತ್ತಿದ್ದು ನೀರು ಬಳಸುವ ಸರ್ವರೂ ಜಾಥಾ ದಲ್ಲಿ ಪಾಲ್ಗೊಳ್ಳುವಂತೆ ಘೋಷಣೆ ಹೊರಡಿಸಲಾಗಿದೆ.

ನದಿಯ ಇಕ್ಕೆಲಗಳಲ್ಲಿ ಒಂದು ಕಿಲೋಮೀಟರ್ ವರೆವಿಗೂ ಕಾಡು ಬೆಳೆಸುವ ಮಾದರಿ ಪ್ರಾತ್ಯಕ್ಷಿಕೆ

ದೇಶ ಸುಭೀಕ್ಷವಾಗಿರಬೇಕಾದರೆ ನದಿಗಳು ಯಥೇಚ್ಛ ನೀರಿನೊಂದಿಗೆ ಹರಿಯುತ್ತಿರಬೇಕು ಎನ್ನುವುದು ಸತ್ಯ. ಭಾರತದಲ್ಲಿ ಜನಸಂಖ್ಯೆಗೇನು ತೊಂದರೆಯಿಲ್ಲವಾದ್ದರಿಂದ ನದಿಗಳು ತುಂಬಿ ಹರಿದಷ್ಟು ಕೃಷಿ ಉಚ್ಚ ಸ್ಥಾನದಲ್ಲಿರುವ ವೃತ್ತಿಯಾಗುತ್ತದೆ ಅಷ್ಟೇ ಅಲ್ಲದೆ ದೇಶದ ಅಗ್ರ ಪಾಲಿನ ಜನಕ್ಕೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಇದಕ್ಕಾಗಿ ದೇಶದೊಳಗೆ ಹೆಚ್ಚಿನ ಮಳೆಯ ಅವಶ್ಯಕತೆ ಇದೆ, ಮಳೆಗಾಗಿ ಕಾಡು ಬೆಳೆಸುವುದೊಂದೇ ಅನಿವಾರ್ಯ. ಹೀಗಾಗಿ ನದಿಯ ಎರಡೂ ದಂಡೆಗಳಲ್ಲಿ ಕಾಡುಗಳನ್ನು ಬೆಳೆಸುವಂತೆ ಸರ್ಕಾರಕ್ಕೆ ಆಗ್ರಹಿಸುವುದು ರ್ಯಾಲಿಯ ಉದ್ದೇಶ.ಒಂದು ಅಂದಾಜಿನ ಪ್ರಕಾರ ದೇಶದ ನದಿಗಳ ಪಾತ್ರದಲ್ಲಿರುವ ಶೇ.25 ರಷ್ಟು ಭೂಮಿಯ ಒಡೆತನವನ್ನು ಸರ್ಕಾರಗಳೇ ಹೊಂದಿವೆ, ಹೀಗಿರುವಾಗ ಕಾಡು ಬೆಳೆಸಲು ಅದು ಕಷ್ಟವಾಗಲಾರದು. ಇನ್ನುಳಿದ ಶೇ.75ರಷ್ಟು ಭೂಮಿ ಖಾಸಗಿ ಭೂಮಿಯಾಗಿದ್ದು ರೈತರಿಗೆ ಸೇರಿದ್ದಾಗಿದೆ. ಈ ಭೂಮಿಯನ್ನು ಭೂ ಸ್ವಾಧೀನ ಮುಂತಾದ ಪ್ರಕ್ರಿಯೆಗಳನ್ನು ಬಳಸಿ ರೈತರಿಂದ ಕಸಿದುಕೊಳ್ಳುವುದು ಸಾಧುವಾಗಿಲ್ಲ, ಆ ಕಾರಣದಿಂದ ನದಿಯ ಒಂದು ಕಿಲೋಮೀಟರು ಸುತ್ತಲ ಭೂಮಿಯಲ್ಲಿ ಹಣ್ಣುಗಳನ್ನು ಬೆಳೆಯುವ ಮರಗಳನ್ನು ಮಾತ್ರ ನೆಡುವಂತೆ ಅಂದರೆ ನದಿ ಸುತ್ತಲೂ ಬರೀ ನೆಡುತೋಪುಗಳಿರುವಂತೆ ಕೇಂದ್ರ ಸರ್ಕಾರ ಕಾಯ್ದೆ ತರುವಂತೆ ಒತ್ತಾಯಿಸುವುದು ಜಾಥಾದ ಉದ್ದೇಶ.ಹಣ್ಣು ನೀಡುವ ಸಸಿಗಳನ್ನು ನೆಟ್ಟು ನೆಡು ತೋಪು ಬೆಳೆಸುವುದರಿಂದ ರೈತರ ಆದಾಯ ಕೂಡ 2-3 ಪಟ್ಟು  ಹೆಚ್ಚಾಗಲಿದ್ದು ರೈತರು ನಷ್ಟದಿಂದ ತೊಳಲಾಡಬೇಕಿಲ್ಲ. ನೆರಳಿನಲ್ಲಿಯೂ ಬೆಳೆಯುವ ಕೆಲವು ವಿಶೇಷ ಬೆಳೆಗಳಿದ್ದು ಅವುಗಳನ್ನು ನೆಡು ತೋಪಿನ ಒಳಗೂ ಬೆಳೆಸುವ ಮೂಲಕ ರೈತರು ಮತ್ತಷ್ಟು ಆದಾಯವನ್ನು ಪಡೆಯಬಹುದು. 

ನಮ್ಮ ರೈತರು ಬೆಳೆದ ಹಣ್ಣುಗಳಿಗೆ ಭಾರತದಲ್ಲಷ್ಟೇ ಅಲ್ಲದೆ ಅರಬ್ ದೇಶಗಳಲ್ಲೂ ಉತ್ತಮ ಬೆಲೆಯಿದೆ. ಹಣ್ಣುಗಳಲ್ಲದೆ ಮಸಾಲೆ ಪದಾರ್ಥಗಳನ್ನು ಬೆಳೆದರೆ ಅವುಗಳಿಗೆ ಅರಬ್ ದೇಶಗಳು, ಅಮೇರಿಕಾ ಹಾಗು ಯೂರೋಪ್ ದೇಶಗಳಲ್ಲಿ ಉತ್ತಮ ಬೆಲೆಯಿದ್ದು ದೇಶದ ರಫ್ತು ಉತ್ತಮವಾಗಲಿದ್ದು ದೇಶದ ಆದಾಯವೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ದೇಶದೊಳಗೆ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗಲು ಅವಕಾಶವಾದರೆ ಜನರು ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಅನುವಾಗಿ ಜನಗಳ ಸರಾಸರಿ ಅರೋಗ್ಯ ಅಂಶ ಉತ್ತಮವಾಗುತ್ತದೆ.ನಮ್ಮ ಸುತ್ತಲಿನ ಪ್ರಕೃತಿಯನ್ನು ಮತ್ತಷ್ಟು ಉತ್ತಮವಾಗಿಸುತ್ತಾ ಆರ್ಥಿಕತೆಗೂ ಕುಂದು ಉಂಟಾಗದಂತೆ ರಚನಾತ್ಮಕವಾಗಿ ಸಿದ್ಧಪಡಿಸಿರುವ ಈ ಯೋಜನೆ ನವ ಭಾರತದ ಅವಶ್ಯಕತೆಯಾಗಿದೆ. ದೇಶದ ಆರ್ಥಿಕತೆ, ಜನ ಸಂಖ್ಯೆ ಬೆಳೆದಂತೆಲ್ಲ ದೇಶದ ಹಳೆಬೇರುಗಳು ಕಿತ್ತು ಬರುತ್ತಿದ್ದರೆ ಆ ದೇಶ ಅಭಿವೃದ್ಧಿ ಪಥದಲ್ಲಿದೆ ಎಂದು ಯಾವ ಅಂಶಗಳಿಂದಲೂ ಹೇಳಲು ಸಾಧ್ಯವಿಲ್ಲ. ಆದ ಕಾರಣ ಸಾವಿರಾರು ವರ್ಷಗಳಿಂದ ಹರಿದು ನಮ್ಮಹಿರಿಯರಿಗೆಲ್ಲ ಜೀವನಾಡಿಯಾಗಿದ್ದ ನಮ್ಮ ನದಿಗಳನ್ನು ನಾವು ಒಂದೆರಡು ದಶಕಗಳಲ್ಲೇ ಇನ್ನಿಲ್ಲವಾಗಿಸುವುದು ನಾವು ಈ ದೇಶಕ್ಕೆ ಮಾಡುವ ಅತ್ತ್ಯುನ್ನತ ಅಪಕಾರ. ದೇಶದ ಉಳಿವಿಗಾಗಿ ಆರಂಭವಾಗಿರುವ ಈ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸುವುದು ಶ್ರದ್ಧಾ ಭಕ್ತಿಯಿಂದ ತಾಯಿ ಭಾರತಿಯನ್ನು ಆರಾಧಿಸುವುದಕ್ಕೆ ಸಮಾನ ಎನ್ನಲಡ್ಡಿಯಿಲ್ಲ.

ಅಭಿಯಾನವನ್ನು ನೀವೂ ಬೆಂಬಲಿಸಲು 80009 80009 ನಂಬರ್ ಗೆ ಮಿಸ್ ಕಾಲ್ ಕೊಡಿ. ಈ ಮೂಲಕ ಹೊಸ ನೆಡುತೋಪು ಯೋಜನೆಯನ್ನು ಕೇಂದ್ರಕ್ಕೆ ಆಗ್ರಹಿಸಲು ನೀವೂ ಕೈ ಜೋಡಿಸಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...