ಶನಿವಾರ, ಮೇ 25, 2019

ದಕ್ಷಿಣ-ಉತ್ತರಗಳ ಶೀತಲ ಸಮರ

ಪ್ರಪಂಚದಲ್ಲಿ ಮಾನವ ತನ್ನ ಹೆಜ್ಜೆಯೂರಿ ತನ್ನದೇ ಒಂದು ನಾಗರೀಕತೆ ಕಡೆದು ನಿಲ್ಲಿಸಿಕೊಳ್ಳುವಾಗ ಪ್ರಕೃತಿ ತಾನು ಸುಮ್ಮನೆ ಕುಳಿತಿರಲಿಲ್ಲ. ಸರ್ವವನ್ನು ಮಾನವನ ಕೈಗಿತ್ತು ತಾನು ಕೈಚೆಲ್ಲಿಯೂ ಇರಲಿಲ್ಲ. ಮಂಗನ ರೂಪದಲ್ಲಿದ್ದ ಸಸ್ತನಿ ಪ್ರಾಣಿಗಳ ವರ್ಗವೊಂದು ಅಪಾರ ಬುದ್ಧಿಮತ್ತತೆ ಮೆರೆದು ಉನ್ನತ ಸ್ಥರದತ್ತ ದಾಪುಗಾಲಿಡುತ್ತಿರುವಾಗಲೂ ಪ್ರಕೃತಿಯಲ್ಲಿ ವಿನಾಶಗಳು, ವಿಕೋಪಗಳು ಜರುಗುತ್ತಲೇ ಸಾಗಿದ್ದವು. ತನ್ನ ಜಾಗೃತಗೊಂಡ ಬುದ್ಧಿಯಿಂದ ನೋಡಿದ ಮಾನವನಿಗೆ ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವುದರ ಜೊತೆಗೆ ಪ್ರಕೃತಿ ರುದ್ರಾವತಾರ ತಾಳಿದಾಗ ತಪ್ಪಿಸಿಕೊಂಡು ಬದುಕುವುದೂ ಅಂದಿನ ಕಾಲಮಾನದ ಬಹುಮುಖ್ಯ ಅವಶ್ಯಕತೆಯೂ ಆಗಿಹೋಯಿತು. ವಿಕೋಪ, ವಿನಾಶಗಳಲ್ಲದ ಸಮಯದಲ್ಲಿಯೂ ತನ್ನ ಜೀವದ ಹಂಗಿಗಾಗಿ ಹೋರಾಡಿ ಉಳಿದುಕೊಳ್ಳುವ ವರಸೆಯೊಂದನ್ನು ಮನುಷ್ಯ ಹೊಸದಾಗಿ ಕಲಿತ ಎನ್ನುವುದಕ್ಕಿಂತ, ಪ್ರಕೃತಿಯೇ ಅದನ್ನು ಕಲಿಸಿರುವುದನ್ನು ಲಾಗಾಯ್ತಿನಿಂದಲೂ ಕಾಣುತ್ತಲೇ ಬರಬಹುದು.

ಅಂತಹವುಗಳಲ್ಲಿ ಮುಖ್ಯವಾದದ್ದು ವಲಸೆ ಹೋಗುವುದು ಮಾನವ ಕುಲ ಉಗಮವಾದಾಗಿನಿಂದ ನಡೆದಿರುವ ನಡೆಯುತ್ತಿರುವ ವಿದ್ಯಮಾನ. ನೀರಿದ್ದ ಕಡೆಗೆ ಅಥವಾ ವನ್ಯ ಜೀವಿಗಳಿಂದ ಸುರಕ್ಷಿತವಾಗಿರಬಹುದಾದ ಪ್ರದೇಶಗಳಿಗೆ ವಲಸೆಹೋಗುವುದು ಹಿಂದಿನಿಂದಲೂ ಬಂದಿರುವ ಪ್ರಕ್ರಿಯೆಯೇ. ತಂತ್ರಜ್ಞಾನ ಬೆಳೆದು ಮಾನವನ ದೇಹಕ್ಕೆ ಬಹಳಷ್ಟು ಕಷ್ಟವಿಲ್ಲದಂತಹ  ದಿನಗಳು ಈಗಾಗಲೇ ಅನುಭವಕ್ಕೆ ಬಂದಿವೆ. ನೀರು-ನಿಡಿ, ವನ್ಯಜೀವಿಗಳಿಗೆ ಬೆದರಿ ಕಾಲ್ಕೀಳುವ ಬದಲು ಅವಕ್ಕೆಲ್ಲ ಸೆಡ್ಡು ಹೊಡೆದು ಅಲ್ಲೇ ನೆಲೆ ನಿಲ್ಲುವ ಛಾತಿಯನ್ನು ಮನುಷ್ಯ ರೂಢಿಸಿಕೊಂಡಿದ್ದಾನೆ. ನೀರಿಲ್ಲದಿದ್ದರೆ ನೂರಾರು ಮೈಲುಗಳಿಂದ ಪಂಪು ಮಾಡಿ ನೀರನ್ನು ತರಬಲ್ಲ, ವನ್ಯಜೀವಿಗಳ ಭಯವಂತೂ ಕೇಳುವ ಗೋಜೇ ಬೇಡ, ಪಾಪ ಅವು ನಮ್ಮಿಂದ ಸುರಕ್ಷಿತವಾಗಿದ್ದರೆ ಸಾಕು ಅನ್ನುವ ಮಟ್ಟಕ್ಕೆ ತಲುಪಿ ಸರ್ಕಾರ ನಡೆಸುವ ಅಭಯಾರಣ್ಯಗಳಲ್ಲಿ, ಸಂರಕ್ಷಿತ ಕಾಡುಗಳಲ್ಲಿ ಗಪ್-ಚಿಪ್ ಆಗಿ ಹೋಗಿವೆ.

ಇಷ್ಟೆಲ್ಲಾ ಸಾಧಿಸಿ ಬೀಗುವ ಮನುಷ್ಯ ತಾನೇ ಹೆಣೆದುಕೊಂಡ ಬಲೆಗೆ ಬೀಳುವುದರಲ್ಲಿ ಎತ್ತಿದ ಕೈ ಅಲ್ಲವೇ. ಮನುಷ್ಯನ ಆಧುನಿಕ ಅವಶ್ಯಕತೆಗಳನ್ನು ಪೂರೈಸಲು, ಅಷ್ಟೇಕೆ ಸರ್ವೇ ಸಾಧಾರಾಣವಾಗಿ ಬದುಕು ಸಾಗಿಸಲು ಹಣವನ್ನು ಹುಟ್ಟುಹಾಕಿದ. ಅದೇ ಹಣವನ್ನು ಸಂಪಾದಿಸಲು ಆದಿಕಾಲದಂತೆ ಮತ್ತೆ ವಲಸೆಗೆ ಹಚ್ಚಿಕೊಳ್ಳುತ್ತಿರುವನೂ ಅವನೇ. ಹೊಸದನ್ನೇನೋ ಮಾಡಲುಹೋಗಿ ಮಗದೊಂದು ತೊಂದರೆಗೆ ಸಿಲುಕಿಕೊಳ್ಳುವ ಮನುಷ್ಯ ಸಾಬೀತುಪಡಿಸುತ್ತಿರುವುದೇನೆಂದರೆ ಪ್ರಕೃತಿಯ ಮುಂದೆ 'ನಾನಿನ್ನೂ ಕಲಿಯುತ್ತಿರುವ ಎಳೆಗರುವಷ್ಟೇ' ಎನ್ನುವುದರ ಹೊರತಾಗಿ ಮತ್ತೇನೂ ಅಲ್ಲ. ಇರಲಿ, ಹಣದ ಹಂಬಲಕ್ಕೆ ಬಿದ್ದ ಮನುಷ್ಯ ಮತ್ತೆ ಅದೇ ದಾರಿ ಹಿಡಿದ. ವಲಸೆ. ಆದರೆ ಜ್ಞಾಪಕವಿರಲಿ. ಈ ವಲಸೆಯ ಕಾಲಘಟ್ಟಕ್ಕೆ ಬರುವಷ್ಟರಲ್ಲಾಗಲೇ ಅವನು ತನ್ನನು ತಾನು ಸಂಸ್ಕೃತಿಯೊಂದಕ್ಕೆ, ಭಾಷೆಯೊಂದಕ್ಕೆ, ಸಂಪ್ರದಾಯವೊಂದಕ್ಕೆ ಬಿಗಿಯಾಗಿ ಕಟ್ಟಿಕೊಂಡಿದ್ದ. ಆತ ಆದಿಕಾಲದ ವಲಸೆಗಾರನಾಗಿ ಉಳಿದಿಲ್ಲ. ತನ್ನದೇ ಚೌಕಟ್ಟು ಇರುವ ಒಬ್ಬ ನಾಗರೀಕನಾಗಿ ಬೆಳೆದು ನಿಂತು ಹಣಕ್ಕಾಗಿ ಮತ್ತೆಲ್ಲಿಗೋ ವಲಸೆ ಹೊರಟಿದ್ದಾನೆ.

ವಲಸೆ ಹೋದವ, ಬರಿಗೈಯಲ್ಲಿ ವಲಸೆ ಹೋದರೂ ಬರಿ ತಲೆಯಲ್ಲಿ ಹೋಗಲಿಲ್ಲ. ತನ್ನ ಸುತ್ತಲ ಪರಿಸರ, ವಾತಾವರಣ ತನಗೆ ಧಾರೆಯೆರೆದಿದ್ದ ಎಲ್ಲವನ್ನು ಹೊತ್ತುಕೊಂಡು ಹೊರಟುಬಿಟ್ಟ.ತಾನು ಕಲಿತಿದ್ದ ಕೆಲವನ್ನು ಅಲ್ಲಿಯೂ ಪ್ರಯೋಗಿಸಲು ನೋಡಿದ. ಕೆಲವು ಕಡೆ ನಯವಾದ ಜನಾಂಗ ಹೊಸದೇನೇ ಬಂದರು ಬಿಗಿದಪ್ಪಿಕೊಂಡು ಕಲಿತುಬಿಟ್ಟರು. ಇನ್ನು ಹಲವೆಡೆ 'ಪರಕೀಯ' ಭಾವನೆಯಿಂದ ಕಂಡುಬಿಟ್ಟರು. ಮತ್ತೊಬ್ಬರದನ್ನು ಪರಮ ಶ್ರೇಷ್ಠವೆಂದು ಒಪ್ಪಿಕೊಂಡರೆ ಸ್ಥಳೀಯ ವಿಚಾರಗಳು ಮೌಲ್ಯಹೀನವಾಗಿಬಿಡುವುದಿಲ್ಲವೇ ಎಂಬ ವಾದ ಹಿಡಿದ ಕೆಲವರು ಹೋರಾಟದ ಹಾದಿ ಹಿಡಿದರು. ಜಾಗತೀಕರಣದ ಹೊಸ್ತಿಲಲ್ಲಿ ನಿಂತು ಬೀಗುತ್ತಿರುವ ಆಧುನಿಕ ವಿಶ್ವದ ಆಧುನಿಕ ತೊಳಲಾಟವಿದೇ. ಇತ್ತೀಚಿಗೆ ಇದು ತೀರಾ ಪ್ರಸ್ತುತವೆನಿಸದ್ದು ಭಾರತದಲ್ಲಿ ಉತ್ತರ - ದಕ್ಷಿಣವೆಂಬ ಕಲ್ಪನೆಗೆ ಉಗ್ರ ಅವತಾರ ಕೊಟ್ಟು ಒಬ್ಬರ ಮೇಲೊಬ್ಬರು ಕೆಸರು ಎರಚಾಡಿಕೊಂಡಾಗ.

ಅತೀವ ಜನರು ಒಂದು ಕಡೆಗೆ ವಲಸೆ ಹೋಗಿ ದೊಡ್ಡ ನಗರ ನಿರ್ಮಾಣವಾಗಿ ಅಲ್ಲಿನ ಪ್ರಾಂತೀಯ ಸಂಸ್ಕೃತಿ ದಮನವಾಗುತ್ತಿರುವುದು ಸುಳ್ಳಲ್ಲ. ಒಂದು ಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳುವುದು ಪ್ರಕೃತಿ ನಿಯಮ. ಅಂತೆಯೇ ಅಗಾಧ ಅಭಿವೃದ್ಧಿ ಬಯಸಿ ಐ ಟಿ ಕ್ಷೇತ್ರ ಬರ ಮಾಡಿಕೊಂಡ ನಾವು ಕಾಲದ ಹೊಡೆತಕ್ಕೆ ಸಿಕ್ಕು ಪಶ್ಚಿಮ ಸಂಸ್ಕೃತಿ ಅಪ್ಪಿಕೊಂಡಿದ್ದಷ್ಟೇ ಅಲ್ಲದೆ ನಮ್ಮ ಭಾಷೆ ಸಂಸ್ಕೃತಿಗಳ ವಿನಾಶಕ್ಕೆ ಆಗಾಗ ಮರುಗುತ್ತಲೇ ಇದ್ದೇವೆ. ಐ ಟಿ ಕ್ಷೇತ್ರ ಬಹುವಾಗಿ ಬೆಳೆದಿದ್ದು ಭಾರತದ ದಕ್ಷಿಣದಲ್ಲಿ. ಅಭಿವೃದ್ಧಿ, ಆಧುನಿಕತೆ ಹೆಸರಲ್ಲಿ ಐ ಟಿ ಕ್ಷೇತ್ರ ಬೆಳೆಸಿ ಇಂದಿಗೆ ದುಬಾರಿ ಆದಾಯ ದೇಶಕ್ಕೆ ತರುವ ವ್ಯವಹಾರವನ್ನಾಗಿಸಿದ್ದೇವೆ. ಆದಾಯವಿದ್ದ ಮೇಲೆ ಜನ ವಲಸೆ ಬರುವುದು ಸರ್ವೇ ಸಾಮಾನ್ಯ, ಅವರೊಂದಿಗೆ ಸಂಸ್ಕೃತಿ ಭಾಷೆ ವಿನಿಮಯ ಅವಶ್ಯಕ. ಅದರ ಮಗ್ಗುಲಲ್ಲೇ ಸ್ಥಳೀಯ ಸಂಸ್ಕೃತಿ ದಮನವಾಗದಂತೆ ಕಾಯುವುದು ಮೂಲ ಜನಾಂಗದ ಅತಿ ಮುಖ್ಯ ಧ್ಯೇಯವಾಗುತ್ತದೆ. ಒಂದೊಂದು ಪ್ರಾಂತಗಳಲ್ಲಿ ಈ ಧ್ಯೇಯಗಳಿಗೆ ಸರ್ಕಾರವೇ ರೂಪು ರೇಷೆ ಬರೆದಿರುವುದು ಸಂತೋಷದಾಯಕವಷ್ಟೇ.

ಇಡೀ ದಕ್ಷಿಣ ಭಾರತದ ರಾಜ್ಯಗಳೆಲ್ಲ ಸೇರಿದರು 25ಕೋಟಿ ಸಂಖ್ಯೆಯ ಗಡಿ ದಾಟುವುದು ಅಸಾಧ್ಯವೆನ್ನುವ ಸ್ಥಿತಿಯಲ್ಲಿ ಹತ್ತಿರ ಹತ್ತಿರ 60ಕೋಟಿಯಷ್ಟಿರುವ ಭಾರತೀಯ ಹಿಂದಿ ಭಾಷಿಗರು ಉದ್ಯೋಗದ ಕಾರಣಕ್ಕಾಗಿ ದಕ್ಷಿಣಕ್ಕೆ ಕಾಲ್ಕಿತ್ತಿದ್ದು ತೀರಾ ಗೊತ್ತಿಲ್ಲದ ವಿಚಾರವೇನಲ್ಲ.ಸರ್ವಕಾಲೀನ ನದಿಗಳು ಭಾರತದ ಉತ್ತರದಲ್ಲಿದ್ದು ಸಮತಟ್ಟಾದ ಭೂಮಿಯನ್ನು ಹೊಂದಿರುವ ಕಾರಣವೂ ಮುಂದಾಗಿ ಉತ್ತರದಲ್ಲಿ ಅದರಲ್ಲೂ ಜನ ದಟ್ಟಣೆಯಿರುವ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶಗಳಲ್ಲಿ ಆಧುನಿಕ ಕಾಲಘಟ್ಟದಲ್ಲಿ ಅತಿ ಹೆಚ್ಚಿನ ಉದ್ಯೋಗ ಒದಗಿಸಬಹುದಾದ ಐಟಿ ಕ್ಷೇತ್ರ ಅಷ್ಟಾಗಿ ತಲೆಯೆತ್ತಲಿಲ್ಲ. ಈಗೀಗ ನೋಯ್ಡಾ,  ದೆಹಲಿಗಳಲ್ಲಿ ತಲೆಯೆತ್ತುತ್ತಿವೆಯಾದರೂ ಬೆಂಗಳೂರು-ಹೈದೆರಾಬಾದ್ ಗಳಲ್ಲಿ ಬೆಳೆದ ಐಟಿ ಮುಂದೆ ಅದು ಅಲ್ಪವಷ್ಟೇ.ದ್ರಾವಿಡ ಭಾಷಾವರ್ಗ ಪ್ರಬಲವಾಗಿರುವ ದಕ್ಷಿಣದಲ್ಲಿ ಹಿಂದಿ ಭಾಷಿಗರ ಜನಸಂಖ್ಯೆ ಬೆಳೆಯಲು ಇದೊಂದು ಅತ್ಯಂತ ಪ್ರಮುಖ ಕಾರಣ.

ದಕ್ಷಿಣಕ್ಕೆ ಭಾಷೆಯ ತೊಂದರೆಯೇಕೆ?.

ಬ್ರಿಟೀಷರ ಕಪಿ ಮುಷ್ಟಿಯಲ್ಲಿದ್ದ ಭರತ ಖಂಡಕ್ಕೆ ಸ್ವಾತಂತ್ರ್ಯ ಬರಲು ಎರಡು ಶತಮಾನಗಳೇ ಬೇಕಾದವು. ಅದರಲ್ಲೂ ಹೇಳಿಕೊಳ್ಳುವ ಹೋರಾಟಗಳು ಆರಂಭವಾಗಿದ್ದು 1857ರ ಸಿಪಾಯಿ ದಂಗೆಯ ನಂತರವೇ. ಸ್ವಾತಂತ್ರ್ಯ ಸಿಕ್ಕಿದರೆ ಸಾಕು ಎನ್ನುವಂತಹ ಪರಿಸ್ಥಿತಿಗೆ ತಲುಪಿದ್ದ ಅಂದಿನ ತಲೆಮಾರು ಸ್ವಾತಂತ್ರ್ಯಾನಂತರ ನಡೆಯಬಹುದಾದ ಆಡಳಿತೆಯ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ. ಭಾರತದಲ್ಲಿ ಆಗಿದ್ದ ಅತ್ಯಲ್ಪ ವಿದ್ಯಾವಂತರಿಗೆ ಆ ಬಗ್ಗೆ ಕೆಲವು ಸೂಕ್ಷ್ಮತೆಗಳು ಅರಿವಿದ್ದರೂ ಅವಿದ್ಯಾವಂತರಿಗೆ ತಲುಪಲು ಸಾಧ್ಯವೂ ಆಗಿರಲಿಲ್ಲ. ಆ ಕಾರಣಕ್ಕಾಗಿಯೇ ಭಾರತದ ಪ್ರಜಾತಂತ್ರ ವ್ಯವಸ್ಥೆ ಪಶ್ಚಿಮದ ಎರವಲು ಹಾಗು ಇಲ್ಲಿನ ಆಗಿನ ವಿದ್ಯಾವಂತರ ದೂರಾಲೋಚನೆ.ಭಾರತದ ಸರ್ವ ಜನರ ಅಭಿಪ್ರಾಯವೂ ಅದೇ ಆಗಿತ್ತು ಎನ್ನಲು ಸಾಧ್ಯವಿಲ್ಲ. ಅದು ಹಾಗಿರಲು ಸಾಧ್ಯವಿಲ್ಲವೆಂಬ ವಾದಕ್ಕೆ ಪುಷ್ಟಿ ನೀಡುವ ದಾಖಲೆಗಳೂ ಯಾವುವು ಇಲ್ಲ. ಅದಾಗಿ ಬ್ರಿಟಿಷರ ಹಿಡಿತದಿಂದ ಸಡಿಲಗೊಂಡು ಸ್ವಾತಂತ್ರ್ಯ ಪಡೆಯುವುದು ಖಾತ್ರಿಯಾದಾಗಲೇ ದೇಶದಲ್ಲಿ ಸ್ವಾತಂತ್ರ್ಯಾನಂತರ ವ್ಯವಸ್ಥೆಯೇನು? ಎನ್ನುವಂತಹ ಪ್ರಶ್ನೆಗಳು ಎದ್ದಿದ್ದು ಮತ್ತು ಅನೇಕರು ಅದಕ್ಕೆ ಉತ್ತರ ಕಂಡು ಹಿಡಿಯಲು ಟೊಂಕ ಕಟ್ಟಿ ನಿಂತಿದ್ದು. ಆಗ್ಗೆ ಪಶ್ಚಿಮದಲ್ಲಿ ನಡೆದಿದ್ದ ಫ್ರೆಂಚ್ ಕ್ರಾಂತಿ, ರಷ್ಯಾ ಕ್ರಾಂತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಹಾಗು ಕ್ರಾಂತಿಯ ಅನಂತರ ಆ ದೇಶಗಳಲ್ಲಿ ಆಡಳಿತ ವ್ಯವಸ್ಥೆ ಸುಲಭಗೊಂಡ ವಿಧಾನಗಳನ್ನು ಅರಿತಿದ್ದ ಆಗಿನ ಭಾರತೀಯ ವಿದ್ಯಾವಂತರು ಪ್ರಜಾತಂತ್ರ ವ್ಯವಸ್ಥೆಯನ್ನೇ ಅನುಮೋದಿಸಲು ಹೆಚ್ಚು ಸಮಯವೇನು ಹಿಡಿಯಲಿಲ್ಲ.ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ವಿಕೇಂದ್ರೀಕರಣದ ಪ್ರಶ್ನೆಗಳು ಹುಟ್ಟಿಕೊಂಡಾಗ ಅದಕ್ಕೆ ಉತ್ತರವಾಗಿ ಹೊಮ್ಮಿದ್ದೇ ರಾಜ್ಯವಾರು ಪ್ರಾಂತ ವಿಂಗಡಣೆ.

ಹಿಂದಿದ್ದ ಸಂಸ್ಥಾನಗಳಂತೆ ರಾಜ್ಯ ರಚನೆಯಾಗುವುದಾದರೆ ಹಿಂದಿನ ಅರಸರು ತಮ್ಮ ಶಕ್ತ್ಯಾನುಸಾರ ಯುದ್ಧಮಾಡಿ ಸಂಪಾದಿಸಿದ ಗೆದ್ದ ಭೌಗೋಳಿಕ ಪ್ರಾಂತಕ್ಕೆ ಬೆಲೆ ಕೊಟ್ಟಂತಾಗುತ್ತಿತ್ತು ಹಾಗು ಅಲ್ಲಿನ ಬಹು ಸಂಸ್ಕೃತಿ, ವೇಷ-ಭಾಷೆಗಳಲ್ಲಿ ಯಾವುದನ್ನು ಎತ್ತಿ ಹಿಡಿಯಬೇಕೆನ್ನುವ ಗೊಂದಲಗಳು ಉಂಟಾಗುತ್ತಿದ್ದುದು ವೇದ್ಯವಾಗುತ್ತಿತ್ತು. ಈ ವಿಚಾರಗಳ ಮೇಲೆ ಗಮನ ಹರಿಸಿದ್ದ ಆಗಿನ ಪ್ರಸಿದ್ಧ ಗಾಂಧೀವಾದಿ ಶ್ರೀ.ಪೊಟ್ಟಿ ಶ್ರೀರಾಮುಲು ತೆಲುಗು ಭಾಷಿಗರಿಗಾಗಿಯೇ ರಾಜ್ಯವೊಂದನ್ನು ವಿಂಗಡಿಸಬೇಕೆಂದು ಧರಣಿ ಕೂತರು. ತೆಲುಗು ಭಾಷಿಗರು ಗರಿಷ್ಟ ಪ್ರಮಾಣದಲ್ಲಿರುವ ಪ್ರದೇಶಗಳನ್ನೆಲ್ಲಾ ಸೇರಿಸಿ ಅಂದ್ರ ಪ್ರದೇಶ ನಿರ್ಮಾಣವಾಗಬೇಕು ಎನ್ನುವುದು ಅವರ ಧ್ಯೇಯ. ಅಲ್ಲಿಗೆ ಭಾಷಾವಾರು ಪ್ರಾಂತ್ಯ ರಚನೆಗೆ ಶಿಲಾನ್ಯಾಸವಾದಂತಾಯಿತು. ತಮಿಳುನಾಡಿನ ದ್ರಾವಿಡ ಚಳುವಳಿಗಳು ಭಾಷಾ ವಿವಿಧತೆಗೆ ಒತ್ತು ಕೊಟ್ಟು ದ್ರಾವಿಡ ಭಾಷೆಗೂ ಇನ್ನಿತರ ಭಾಷೆಗಳಿಗೂ ಇರುವ ದೂರವನ್ನು ಭೂತಗನ್ನಡಿ ಹಿಡಿದು ತೋರಿಸಿದ್ದೂ ಅದಕ್ಕೆ ಸೇರಿಕೊಂಡು ತಮಿಳುನಾಡಿನಲ್ಲಿ ತಮಿಳು ಭಾಷೆಯೇ ಸಾರ್ವಭೌಮ ಭಾಷೆ ಎಂಬ ಅಲಿಖಿತ, ಅನಧೀಕೃತ ನಿಯಮವೊಂದು ತಮಿಳುನಾಡಿನಲ್ಲಿ ಚಾಲ್ತಿಗೆ ಬಂತು. ಅದಕ್ಕೆ ರಾಜಕೀಯ ಬಲವೂ ಸೇರಿ ತಮಿಳು ಭಾಷೆಯ ರಕ್ಷಕರಂತೆ ಹಲವು ಮುಖಂಡರು ತಮಿಳು ಸಂಸ್ಕೃತಿ ಹಾಗು ಭಾಷೆಯ ಆಧಾರದ ಮೇಲೆ ಪಕ್ಷಗಳನ್ನು ಕಟ್ಟಿ ಬೆಳೆಸಿದರು.

ಅಲ್ಲಿಂದಾಚೆಗೆ ತಮಿಳುನಾಡಿನ ರಾಜಕೀಯ ತಮಿಳು ಪರ ಎಂದು ತೋರಿಸಿಕೊಳ್ಳಲಾದರೂ ಮತ್ತೊಂದು ಭಾಷೆಯನ್ನು ಹೇರಿಕೆಯಂತೆ ಬಿಂಬಿಸಬೇಕಾದ ಜರೂರತ್ತು ಇತ್ತು. ಅದಕ್ಕೆ ಆಗಷ್ಟೇ ಕೇಂದ್ರ ಹಿಂದಿಯ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ದಿಕ್ಕು ದೆಸೆ ತೋರಿಬಿಟ್ಟಿತು. ಕೇಂದ್ರದ ವ್ಯವಹಾರಗಳಲ್ಲಿ ಹಿಂದಿ ನಮಗೆ ಒಪ್ಪದ್ದೆಂದು ಹಾಗು ಬರೀ ಇಂಗ್ಲಿಷ್ನಲ್ಲಿ ಇದ್ದರೆ ಸಾಕೆಂದು ತನ್ನ ವಾದ ಮುಂದಿಟ್ಟಿದ್ದ ತಮಿಳುನಾಡು, ಈಚೀಚಿಗೆ ಎರಡು ಸಾವಿರ ಹೊಸ ನೋಟುಗಳು ಬಂದಾಗಲೂ ಅದರಲ್ಲಿ ಮುದ್ರಿತವಾಗಿದ್ದ ದೇವನಾಗರಿ ಲಿಪಿಯ ಸಂಖ್ಯೆಗಳನ್ನು ಕಂಡು ಕೆಂಡಾಮಂಡಲವಾಗಿ ಹೈ ಕೋರ್ಟ್ ನಲ್ಲಿ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದನ್ನು ಮರೆಯುವಂತಿಲ್ಲ.

ತಮಿಳುನಾಡಿನ ಭಾಷೆಯ ಮೇಲಿನ ಬದ್ಧತೆಯನ್ನು ಗಮನಿಸಿದ ಇನ್ನಿತರ ರಾಜ್ಯಗಳು ತಾವು ಮಾತೃಭಾಷೆಯ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾದವು. ಒಮ್ಮೊಮ್ಮೆ ಭಾಷೆಯ ವಿಚಾರದಲ್ಲಿ ತಮಿಳುನಾಡು ಇಡುವ ಬಲಪ್ರಯೋಗಾತ್ಮಕ ಹೆಜ್ಜೆಯನ್ನು ಇಡುವುದನ್ನೂ ಮರೆಯಲಿಲ್ಲ. ಭಾಷೆಯ ವಿಚಾರದಲ್ಲಿ ಅತೀವ ಸ್ವಾಭಿಮಾನ ತಳೆದು ರುದ್ರಾವತಾರ ತಳೆದ ಎಷ್ಟೋ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತಲೇ ಇರುತ್ತವೆ. ಕರ್ನಾಟಕ, ತಮಿಳುನಾಡು ಹಾಗು ಮಹಾರಾಷ್ಟ್ರಗಳಲ್ಲಿ ನಡೆದ ಇಂತಹ ಘಟನೆಗಳು ಬಹುಪಾಲು ಹಿಂದಿ ಭಾಷೆಯ ವಿರುದ್ಧವೇ ನಡೆದ ಪ್ರಸಂಗಗಳಾಗಿದ್ದು ಇನ್ನೊಂದು ಮುಖ್ಯವಾದ ವಿಚಾರ.

ಇತ್ತೀಚಿಗೆ ಐಟಿ ಕ್ಷೇತ್ರ ಬೆಳೆದ ಪರಿಣಾಮ ಉತ್ತರ ಭಾರತೀಯರ ಸಂಖ್ಯೆ ಬೆಂಗಳೂರು, ಚೆನ್ನೈಗಳಲ್ಲಿ ಸಾಕಷ್ಟಾಗಿದೆ. ಆ ಮೂಲಕ ಇಲ್ಲಿ ತೆರೆ ಕಾಣುವ ಹಿಂದಿ ಸಿನೆಮಾಗಳು ಭರ್ಜರಿ ಹಣ ಮಾಡುತ್ತಿವೆ. ಹಿಂದಿ ಸಂಗೀತ ರಸಸಂಜೆ, ಕಾಮಿಡಿ ಶೋಗಳಂತಹ ಕಾರ್ಯಕ್ರಮಗಳು ಹೆಚ್ಚು ಜನರನ್ನು ಸೆಳೆದು ದುಡ್ಡು ಮಾಡಿ ದೊಡ್ಡ ದೊಡ್ಡ ಸಂಖ್ಯೆಗಳನ್ನು ವೃತ್ತ ಪತ್ರಿಕೆಗಳಲ್ಲಿ ಪ್ರಕಟ ಮಾಡಿ ದಕ್ಷಿಣದಲ್ಲಿ ಹಿಂದಿ ಪ್ರಾಬಲ್ಯ ಅಮೋಘವಾಗುತ್ತಿದೆಯೆಂದು ಸಾಬೀತು ಪಡಿಸಲು ನೋಡುತ್ತಿರುವುದು ದಕ್ಷಿಣ ಭಾರತೀಯರಲ್ಲಿ ಭಾಷೆಯ ವಿಚಾರದಲ್ಲಿ ಅನುಮಾನ ಮೂಡಿಸುತ್ತಿದೆ. ಹಿಂದಿಯವರು ದಕ್ಷಿಣದ ಭಾಷೆಗಳನ್ನೇ ಕಲಿಯದೇ ಅಲ್ಲಿ ಆರಾಮವಾಗಿ ಬದುಕಬಹುದೆಂದು ಪ್ರಚಾರ ಪಡಿಸಲು ಕೆಲವು ಹಿಂದಿ ಶಕ್ತಿಗಳು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವುದು ದಕ್ಷಿಣದವರಿಗೆ ಇರಿಸು ಮುರಿಸು ತಂದಿರುವುದು ಸುಳ್ಳಲ್ಲ. ಯಾವುದೇ ಪ್ರದೇಶದ ಸಂಸ್ಕೃತಿ, ಭಾಷೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು ಎಂಬ ಅರಿವು ಅವರಲ್ಲೂ ಬಂದು ಇಲ್ಲಿನ ಜನರ ನಾಡಿ ಮಿಡಿತಕ್ಕೆ ತಕ್ಕಂತೆ ಬದುಕಿಬಿಟ್ಟರೆ ಅವರ ಜೀವನವೂ ನಮ್ಮ ಜೀವನವೂ ಸುಗಮವಾಗುವುದರಲ್ಲಿ ಸಂದೇಹವಿಲ್ಲ.


ಭಾಷೆಯನ್ನು ಹೇರಬಹುದೇ?.

ತಾವು ಹೇಳಿರುವುದು ನಡೆಯದಿದ್ದರೆ ಶಿರದ ಮೇಲೆ ಕತ್ತಿಯಿತ್ತು ಝಳಪಿಸುತ್ತಿದ್ದ ಅರಸರಿರುವ ಕಾಲದಲ್ಲೇ ಭಾಷೆಗಳು ನಿಂತಿವೆ, ಬೆಳೆದಿವೆ. ಇಂತಿರುವಾಗ ಸರ್ಕಾರವೊಂದು ಯಾವುದೋ ಭಾಷೆಯಲ್ಲಿ ಮಾರ್ಗಸೂಚಕ ಫಲಕಗಳನ್ನು, ಬ್ಯಾಂಕಿನ ಚಲನ್ನುಗಳನ್ನು ಮುದ್ರಿಸಿದರೆ ಅದು ಭಾಷೆಯ ಹೇರಿಕೆ ಹೇಗಾಗುತ್ತದೆ? ಭಾಷೆಯ ವಿಚಾರದಲ್ಲಿ ಆ ಭಾಷೆಯಾಡುವರ ಮನಸ್ಥಿಸ್ತಿ ಬದ್ಧವಾಗಿದ್ದರೆ ಹೇರಿಕೆಯೆನ್ನುವುದು ಮಿಥ್ಯವಷ್ಟೇ ಎನ್ನುವ ವಾದ ಕೆಲವರದಾದರೆ ದಕ್ಷಿಣದವರಿಗೆ ಅಗತ್ಯವೇ ಅಲ್ಲದ ಹಿಂದಿಯನ್ನು ಸರ್ಕಾರಿ ವ್ಯವಹಾರಗಳಲ್ಲಿ ತುರುಕಿರುವುದೇಕೆ? ಎಂದು ಪ್ರಶ್ನಿಸುವ ಮಂದಿಯೂ ಇದ್ದಾರೆ.

ಒಂದು ಭಾಷೆಯನ್ನಾಡುವ ಜನರು ತಾವು ಘನಿಷ್ಠವಾಗಿ ಅವರದೇ ಮಾತೃ ಭಾಷೆ ಬಳಸುತ್ತಾ ಇತರ ಭಾಷೆಗಳನ್ನು ಎಲ್ಲ ರಂಗಗಳಲ್ಲಿಯೂ ಮಗ್ಗುಲಾಗಿಸಿಬಿಟ್ಟರೆ ಮುಗಿಯಿತು ಯಾರಿಗೂ ಯಾವ ಭಾಷೆಯೂ ಹೇರಿಕೆಯಾಗಲಾರದು.ಒಂದು ಭಾಷೆಯನ್ನು ಪ್ರಮುಖವಾಗಿಸುವ ಯಾವುದೇ ಸರ್ಕಾರದ ಅಥವಾ ಸರ್ಕಾರೇತರ ಶಕ್ತಿ ಅಲ್ಲಿಗೆ ಕುಗ್ಗಿ ಹೋಗಿ ಕ್ರಮೇಣ ಆ ಭಾಷೆ ಆ ಪ್ರಾಂತದಲ್ಲಿ ನಿಶ್ಯೇಷವಾಗಿಬಿಡುತ್ತದೆ.  ದಕ್ಷಿಣ ಭಾರತೀಯರು ಇದೀಗ ಪ್ರಬಲವಾಗಿ ಬೆಳೆದು ನಿಲ್ಲಬೇಕಿರುವುದು ಇದೇ ಮಾರ್ಗದಲ್ಲಿ. ಗರಿಷ್ಟ ಪ್ರಮಾಣದಲ್ಲಿ ತಮ್ಮ ಮಾತೃಭಾಷೆಯನ್ನು ಬಳಸುವುದು ಹಾಗು ತನ್ಮೂಲಕ ಆ ಭಾಷೆಯ ಬೆಳವಣಿಗೆಗೆ ಒತ್ತು ಕೊಡುವುದು. ದುರಂತವೆಂದರೆ ಇಂಗ್ಲೀಷ್ ಬಳಸಲು ಯಾವುದೇ ಸಂಕೋಚವಿಲ್ಲದೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿರುವ ದಕ್ಷಿಣ ಭಾರತೀಯರು ಹಿಂದಿಯನ್ನು ಹೇರಿಕೆಯ ವಸ್ತುವಾಗಿ ನೋಡುತ್ತಿರುವುದು. ಇಂಗ್ಲೀಷ್ ಭಾಷೆ ಔದ್ಯೋಗಿಕವಾಗಿ ಹಾಗು ಪ್ರಾಪಂಚಿಕ  ಜ್ಞಾನಕ್ಕಾಗಿ ಅತ್ಯವಶ್ಯಕ ಅದಕ್ಕಾಗಿ ಅದರ ವಿಚಾರದಲ್ಲಿ ತಗಾದೆ ಇಲ್ಲವೆಂದು ಕೆಲವರು ಹೇಳುವುದು ಕಂಡಾಗ ಅವರ ಚಳುವಳಿಗೆ ಅಥವಾ ವಿಚಾರ ಧಾರೆಗೆ ಬಲವಾದ ಅಡಿಪಾಯ ಇಲ್ಲದೆ ಗಾಳಿ ಬಂದ ಕಡೆ ತೂರಿಕೊಳ್ಳುವಂತೆ ಇರುವುದು ನಗು ತರಿಸುತ್ತದೆ.

ಹೀಗೆ ದಕ್ಷಿಣಕ್ಕೂ-ಉತ್ತರಕ್ಕೂ ಅಂಟಿದ ಶೀತಲ ಸಮರ ಭಾಷೆಯ ವಿಚಾರದ್ದಾಗಿದ್ದು ಇದೀಗಲೇ ಎಲ್ಲರು ಈ ವಿಚಾರದಲ್ಲಿ ಜಾಗೃತವಾಗಿ ಹೆಜ್ಜೆಯಿಡುವುದು ಅತ್ಯುತ್ತಮ. ಇಲ್ಲವಾದಲ್ಲಿ ಮುಂದೊಂದು ದಿನ ಈ ವಿಚಾರ ಭುಗಿಲೆದ್ದು ಮತ್ತಷ್ಟು ಅನಾಹುತಗಳಿಗೆ, ಅಂತರಗಳಿಗೆ ಕಾರಣವಾಗಿಬಿಡಬಹುದು!. ಹಾಗಾಗದಿರಲಿ ಎಂದು ಆಶಿಸುತ್ತಾ , ಎಲ್ಲಾ ಭಾಷೆಗಳನ್ನು ಗೌರವಿಸಿ ಹಾಗು ಮಾತೃ ಭಾಷೆಯನ್ನು ಪ್ರೀತಿಸಿ ಬೆಳೆಸಿ ಎಂದು ಹೇಳುತ್ತಾ. ಜೈ ಭಾರತ

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...