ಭಾನುವಾರ, ಮಾರ್ಚ್ 19, 2017

ಬೆಂಗಳೂರ ಬೆಳಗಲು ನಮ್ಮೂರು ಕತ್ತಲಿಗಿಳಿಯಿತು

ಮಗ್ಗುಲ ಬೆಂಗಳೂರು ಬೆಳಗಲು
ನಮ್ಮೂರು ದಿನಕ್ಕೆ ಮೂರೇ ಘಂಟೆ
ದೀಪ ಬೆಳಗಿಸಿತು
ನಮ್ಮ ಸರ್ಕಾರಗಳಿಗೆ, ಜನ ಸಾಮಾನ್ಯರಿಗೆ
ಬೆಂಗಳೂರೆಂದರೆ ಎಲ್ಲಿಲ್ಲದ
ಹೆಮ್ಮೆಯೋ ಹೆಮ್ಮೆ

ನಮ್ಮೂರಿಗೆ ಹರಿಯುವ ಕರೆಂಟು ತಡೆದು
ಬೆಂಗಳೂರಿಗೆ ತಿರುಗಿಸಿಬಿಟ್ಟರು
ನಮ್ಮೂರು ಕತ್ತಲೆಯೇ,
ಓದುವರು ಬುಡ್ಡಿ ದೀಪಗಳ ತಡಕಿದರು
ಹರಟುವರು ತಿಂಗಳ ಬೆಳಕನ್ನೇ
ನಂಬಿಕೊಂಡರು

ಅಡುಗೆಗೆ  ಒಲೆಯ ಉರಿಯೇ ಬೆಳಕ
ಬಸಿದು ಎರಚುತ್ತಿತ್ತು
ಹಳೆತಲೆ ಗಂಡಸರು ಹರಟುವಾಗ
ತಾವು ಸೇದುವ ಬೀಡಿ ಬೆಳಕಲ್ಲೇ
ಮುಖ ಕಂಡುಕೊಂಡರು
ಇನ್ನು ಏನೇನೋ ಕತ್ತಲ ಮಾಯೆ

ನಮ್ಮೂರು ಕೇರಿ ಕತ್ತಲಿಗೆಳೆಸಿಕೊಂಡು
ಬೆಂಗಳೂರು ಸಾಧಿಸಲೆಂದು
ಕರೆಂಟು ತ್ಯಾಗ ಮಾಡಿ ಕುಂತೆವು
ಆದರೆ ಬೆಂಗಳೂರಿನಲ್ಲಿ
ಮಧ್ಯ ರಾತ್ರಿ ಮೀರಿದರು ಯುವ ಜನತೆ
ಮಂದ ಬೆಳಕಿನಲ್ಲಿ ಮತ್ತಿಗೇರಿತು

ಮನೆಗೆಲಸಗಳನ್ನು ಮಾಡಿ ತಮ್ಮನ್ನು
ಸಲಹಲು ಕರೆಂಟಿನ ಆಯುಧಗಳ
ಸಮರ್ಪಣೆ ಮಾಡಿಕೊಂಡರು
ಕ್ರಿಕೆಟ್ಟು ಹುಚ್ಚಿನವರು ನಡುರಾತ್ರಿ ಮೀರಿ
ಬೆಳ್ಳಿ ಚುಕ್ಕಿ ಏರಿದರೂ ಟಿವಿಯೊಳಗೆ
ಸೇರಿಕೊಂಡು ಲೋಕ ಮರೆತರು

ಅರ್ಧಗಂಟೆ ಕರೆಂಟು ತಾನು ಗೈರು ಆದರೂ
ಇಲ್ಲದ ಶಾಪ ತೂರಿ ಬಿಟ್ಟರು
ಅದಿಲ್ಲದೆ ನಾವಿಲ್ಲ ಎನ್ನುವ ಸ್ಥಿತಿ ತಲುಪಿದರು
ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಷ್ಟೆಲ್ಲ
ಕರೆಂಟು ಬಳಸಿದರು, ಉಳಿಸುವ ಗೋಜಿಗೆ
ಹೋಗುವುದಿರಲಿ ಚಿಂತಿಸಲೂ ಇಲ್ಲ

ಇತ್ತ ನಮ್ಮೂರೊಳಗೆ ನಡು ರಾತ್ರಿ ಮೀರಿಸಿ
ಮೋಟಾರು ಓಡುವಷ್ಟು ಕರೆಂಟು ಬಂದರೆ
ಜೀವನದ ನೊಗ ಎಳೆದುಕೊಂಡವರು
ನೀರು ಕಟ್ಟಲೆಂದು ಗುದ್ದಲಿ ಹಿಡಿದು
ಹೊರಟರು,ಹೋದವರು ಬರುವರೆಂಬ
ಎಳ್ಳಷ್ಟೂ ನಂಬಿಕೆಯಿಲ್ಲದೆ

ಎಷ್ಟೋ ಜನ ನೀರು ಕಟ್ಟಲು ಹೋಗಿ
ಹಾವುಗಳಿಗೂ, ಮೃಗಗಳಿಗೂ
ಬಲಿಯಾಗಿ ಯಮಪುರಿ ಸೇರಿಕೊಂಡರು
ಇನ್ನೆಷ್ಟೋ ಜನ ನಿಸ್ತೇಜರಾಗಿ ಮನೆ ಸೇರಿಕೊಂಡು
ಇದ್ದೂ ಇಲ್ಲದವರಾದರು,ನಾವು ಕರೆಂಟು
ನಂಬಿದ್ದೇವೆ ಎಂದು ಹೇಳುವದಾರಿಗೆ ?

ನಗರಿಗರಿಗೆ ಇನ್ನಿಲ್ಲದ ಅನುಕೂಲ ಕೊಡುವ
ನೀವು ಇನ್ನಾರಿಗೆ ಅನಾನುಕೂಲವೆಂದು
ಬಲ್ಲಿರಾ?? ..ರಸಋಷಿ ನುಡಿದಂತೆ
ವೊಕ್ಕಲಿಗ ತಾನೊಕ್ಕದಿರೆ ಜಗವೆಲ್ಲ ಬಿಕ್ಕುವುದಿಲ್ಲವೇ
ಜಗಕ್ಕೆಲ್ಲ ಅನ್ನವಿಕ್ಕುವ ರೈತನ ಮನೆ
ಕತ್ತಲಿಗೆ ತಳ್ಳುವುದು ತರವೇ ?




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...