ಭಾನುವಾರ, ಅಕ್ಟೋಬರ್ 2, 2016

ಭಾರತವೇ ನನ್ನ ಕುಟುಂಬ

ಭಾರತದಲ್ಲಿ ಸ್ವಾತಂತ್ರ್ಯ ಪಡೆಯಲು ಚಳುವಳಿಗಳು, ಆಂದೋಲನಗಳು ಅತೀ ಹೆಚ್ಚಾಗಿ ನಡೆಯುತ್ತಿದ್ದ ಇಪ್ಪತ್ತನೇ ಶತಮಾನದ ಆರಂಭದಲ್ಲಿ ವ್ಯಕ್ತಿಯೊಬ್ಬರು ಉತ್ತರಭಾರತದಿಂದ ಹೊರಟು 'ಚರಕ ಸಂಘ'ಕ್ಕಾಗಿ ಭಾರತದ ಪ್ರತೀ ಗ್ರಾಮಗಳ್ಲಲೂ ಸಹಾಯ ಯಾಚಿಸುತ್ತ ಧನ ಸಂಗ್ರಹ ಮಾಡುತ್ತಾ ಸಾಗುತ್ತಿದ್ದರು. ಹೀಗಿರುವಾಗ ಗ್ರಾಮವೊಂದರಲ್ಲಿ ಹುಡುಗನೊಬ್ಬ ಆ ವ್ಯಕ್ತಿಯ ಭೇಟಿಗೆಂದು ಬಂದ. ಏನಾಶ್ಚರ್ಯ! ಜನರೆಲ್ಲಾ ಗುಂಪು ಗುಂಪಾಗಿ ನೋಡಲೆಂದು ಹೋಗುತ್ತಿದ್ದ ಆ ವ್ಯಕ್ತಿ ಉತ್ತಮವಾದ ಬಟ್ಟೆಗಳನ್ನೇನೂ ಧರಿಸಿರಲಿಲ್ಲ, ಸಾಧಾ ಬಟ್ಟೆ ಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದು ಬಿಟ್ಟರೆ ಇನ್ಯಾವ ಬಟ್ಟೆಯು ದೇಹದ ಮೇಲಿಲ್ಲ.ಭೇಟಿಯಾಗಲು ಬಂದಿದ್ದ ಹುಡುಗನಿಗೆ ಆಶ್ಚರ್ಯವಾಯಿತು. ಆ ಹುಡುಗನೋ ಧೈರ್ಯ ಮಾಡಿ ಒಂದು ಹೆಜ್ಜೆ ಮುಂದೆ ಹೋಗಿ ಕೇಳಿಯೇ ಬಿಟ್ಟ. 'ಇಷ್ಟೊಂದು ಜನ ಬಲವಿರುವ ನೀವು ತುಂಡು ಬಟ್ಟೆ ಮಾತ್ರ ಧರಿಸಿದ್ದೀರಲ್ಲ, ಉತ್ತಮವಾದ ಅಂಗಿಯನ್ನೇಕೆ ಧರಿಸಬಾರದು?'. ಅದಕ್ಕೆ ಆ ವ್ಯಕ್ತಿಯಿಂದ ಬಂದ ಉತ್ತರ 'ನಮ್ಮ ಮನೆಗೆಲ್ಲ ನಾನೇ ಹಿರಿಯ, ನನ್ನ ಅಣ್ಣ ತಮ್ಮಂದಿರು ಬಟ್ಟೆ ಇಲ್ಲದೆ ಒದ್ದಾಡುವಾಗ ನಾನು ಮೈತುಂಬ ಬಟ್ಟೆ ಧರಿಸುವುದು ತರವಲ್ಲ' ಎಂದು.

ಅದಕ್ಕೆ ಹುಡುಗ ಹೇಳುತ್ತಾನೆ 'ನನ್ನ ತಾಯಿಯು ಬಟ್ಟೆ ಹೊಲಿಯುವ ಕೆಲಸವನ್ನೇ ಮಾಡುತ್ತಾಳೆ, ಆದ್ದರಿಂದ ನಾನೇ ನಿಮ್ಮ ಅಣ್ಣ ತಮ್ಮಂದಿರಿಗೆ ಬಟ್ಟೆ ಹೋಲಿಸಿಕೊಡುತ್ತೇನೆ. ಹೇಳಿ ನಿಮಗೆಷ್ಟು ಅಂಗಿ ಬೇಕು?'. ಆ ವ್ಯಕ್ತಿ ಉತ್ತರಿಸುತ್ತಾರೆ 'ಬರೋಬ್ಬರಿ 40 ಕೋಟಿ'. ಹುಡುಗ ಆತಂಕಕ್ಕೊಳಗಾಗುತ್ತಾನೆ. 40 ಕೋಟಿ ಎಂದು ಉತ್ತರಿಸಿದ ಆ ವ್ಯಕ್ತಿ 'ಮಹಾತ್ಮ ಗಾಂಧಿ', 40 ಕೋಟಿ ಎಂದಿದ್ದು ಭಾರತದ ಸರ್ವ ಪ್ರಜೆಗಳನ್ನು ಕುರಿತು. ದೇಶವೇ ನನ್ನ ಮನೆ, ಇಲ್ಲಿನ ಸರ್ವರೂ ನನ್ನ ಕುಟುಂಬವೇ, ಈ ಮನೆಯ ಜವಾಬ್ದಾರಿ ನನ್ನ ಮೇಲೆ ಅಗಾಧವಾಗಿದೆ ನಾನು ಬದುಕುವುದೇ ನನ್ನ ಜನರಿಗಾಗಿ, ನನ್ನ ಜನರನ್ನು, ನನ್ನ ಮನೆಯನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಮತ್ತೊಬ್ಬರಿಗೆ ಹಾನಿ ಮಾಡಲಾರೆ ಎನ್ನುವಂತಹ ಆದರ್ಶಗಳನ್ನು ಬರೀ ಬಾಯಿಮಾತಲ್ಲಿ ಹೇಳಿ ಮುಗಿಸದೆ ಜೀವಮಾನ ಪರ್ಯಂತ ಹಾಗೇ ಬದುಕಿ ಸವೆಸಿದ ಮಹಾತ್ಮ ಜಿ ಯವರ ಹುಟ್ಟುಹಬ್ಬವಿಂದು.   ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜ್ಞಾಪಕಾರ್ಥ ವಿಶ್ವಸಂಸ್ಥೆ 'ವಿಶ್ವ ಅಹಿಂಸಾ'ದಿನವಾಗಿ ಗಾಂಧಿ ಜಯಂತಿಯನ್ನು ಆಚರಿಸುತ್ತಿದೆ. ಆ ಮೂಲಕ ವಿಶ್ವಕ್ಕೆ ಅಹಿಂಸೆ ಭಾರತದ ಹಿರಿಯ ಕೊಡುಗೆಯಾಗಿದೆ. ಸರ್ವರಿಗೂ ಗಾಂಧಿ ಜಯಂತಿಯ ಶುಭಾಶಯಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...